Blog

  • ಜೈಪುರದಲ್ಲಿ ಕುಡಿದ ಟ್ರಕ್ ಚಾಲಕನ ಅಬ್ಬರಕ್ಕೆ 19 ಮಂದಿ ಬಲಿ!

    ಜೈಪುರದಲ್ಲಿ ಕುಡಿದ ಟ್ರಕ್ ಚಾಲಕನ ಅಬ್ಬರಕ್ಕೆ 19 ಮಂದಿ ಬಲಿ!

    ಜೈಪುರ : ರಾಜಸ್ಥಾನದ ಹೃದಯಭಾಗವಾದ ಜೈಪುರದಲ್ಲಿ ಸೋಮವಾರ ರಾತ್ರಿ ನಡೆದ ಘಟನೆಯೊಂದು ನೂರಾರು ಕಣ್ಣೀರನ್ನು ತರಿಸಿದೆ. ಮದ್ಯದ ಮತ್ತಿನಲ್ಲಿ ನಿಯಂತ್ರಣ ಕಳೆದುಕೊಂಡ ಡಂಪರ್ ಟ್ರಕ್ ಚಾಲಕನೊಬ್ಬ, ಬರೋಬ್ಬರಿ ಐದು ಕಿಲೋಮೀಟರ್ ದೂರವರೆಗೆ ಅಬ್ಬರಿಸಿದ ಪರಿಣಾಮ, 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಂದು ಕಡೆ ಐವತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಜೀವ–ಮರಣ ಹೋರಾಟ ನಡೆಸುತ್ತಿದ್ದಾರೆ.

    ಲೋಹಮಂಡಿ ರಸ್ತೆಯೆಂಬ ಜೈಪುರದ ಬ್ಯುಸಿ ಮಾರ್ಗದಲ್ಲಿ ಈ ಭೀಕರ ಸರಣಿ ಅಪಘಾತ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಟ್ರಕ್ ಚಾಲಕ ಕುಡಿದ ಮತ್ತಿನಲ್ಲಿ ಅಡ್ಡಾಡಿದ್ದಿ ಬಂದಿದ್ದ. ಒಂದು ವಾಹನಕ್ಕೆ ಡಿಕ್ಕಿ ಹೊಡೆದು ನಿಲ್ಲುವ ಬದಲು, ನೇರವಾಗಿ ಇನ್ನೊಂದು ಗಾಡಿಗೆ ಅಪ್ಪಳಿಸುತ್ತಾ ಮುಂದುವರಿದ. ಕೆಲವೇ ಕ್ಷಣಗಳಲ್ಲಿ ರಸ್ತೆ ನರಮೇಧಕ್ಕೆ ಕಣವಾಗಿತ್ತು, ಕಾರುಗಳ ಅವಶೇಷಗಳು, ಬೈಕ್‌ಗಳ ತುಂಡುಗಳು, ಚೂರುಚೂರು ಗಾಜುಗಳು, ರಕ್ತದ ಗುರುತುಗಳು ಎಲ್ಲೆಡೆ ಅಳಲು ಮತ್ತು ಆಕ್ರಂದನದ ವಾತಾವರಣ ಸೃಷ್ಟಿಯಾಯಿತು.

    ಆಘಾತಕಾರಿ ದೃಶ್ಯವನ್ನು ಕಂಡ ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಕೆಲವು ನಿಮಿಷಗಳಲ್ಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕಾಗಮಿಸಿ, ನಜ್ಜುಗುಜ್ಜಾದ ವಾಹನಗಳಡಿ ಸಿಲುಕಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಿ ಅನೇಕರ ಜೀವ ಉಳಿಯಲಿಲ್ಲ. “ಆ ಟ್ರಕ್ ನಿಲ್ಲುತ್ತಿಲ್ಲವೆಂದು ಎಲ್ಲರೂ ಕಿರುಚುತ್ತಿದ್ದೆವು. ಆದರೆ ಚಾಲಕನಿಗೆ ಬುದ್ಧಿಯೇ ಇರಲಿಲ್ಲ” ಎಂದು ಒಬ್ಬ ಪ್ರತ್ಯಕ್ಷದರ್ಶಿ ಕಣ್ಣೀರು ತಡೆದುಕೊಂಡು ಹೇಳಿದ್ದಾನೆ.

    ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿದ್ದು, ಅವನು ತೀವ್ರ ಮದ್ಯಪಾನ ಮಾಡಿದ್ದನೆಂಬುದು ದೃಢಪಟ್ಟಿದೆ. ವೈದ್ಯಕೀಯ ವರದಿ ಕೂಡ ಅದನ್ನೇ ದೃಢಪಡಿಸುತ್ತಿದೆ. ಈ ಘಟನೆಯ ನಂತರ ಜೈಪುರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, “ಕುಡಿದ ಚಾಲಕರಿಗೆ ಕಟ್ಟುನಿಟ್ಟಿನ ಶಿಕ್ಷೆ ಕೊಡಬೇಕು” ಎಂಬ ಬೇಡಿಕೆ ಕೇಳಿ ಬಂದಿದೆ.

    ಈ ದುರ್ಘಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ. “ಜೈಪುರದಲ್ಲಿ ಸಂಭವಿಸಿದ ಈ ದುರಂತದಿಂದ ನನಗೆ ತೀವ್ರ ನೋವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪ, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ” ಎಂದು ತಿಳಿಸಿದ್ದಾರೆ. ಜೊತೆಗೆ ಪ್ರಧಾನಿ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಮತ್ತು ಗಾಯಾಳುಗಳಿಗೆ ₹50,000 ಪರಿಹಾರವನ್ನು ಘೋಷಿಸಲಾಗಿದೆ.

    ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಸಹ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿ, ಅಧಿಕಾರಿಗಳಿಗೆ ಸಂತ್ರಸ್ತರಿಗೆ ತಕ್ಷಣದ ನೆರವು ನೀಡಲು ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಬಲಪಡಿಸಲು ಸೂಚನೆ ನೀಡಿದ್ದಾರೆ.

    apvc-iconPost Views: 20
  • Karnataka Examinations Authority Recruitment: ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಅವಕಾಶ!

    Karnataka Examinations Authority Recruitment: ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಅವಕಾಶ!

    ಕರ್ನಾಟಕದಲ್ಲಿ ಸರ್ಕಾರಿ ನೌಕರಿಯ ಕನಸು ಕಾಣುವ ಸಾವಿರಾರು ಯುವಕರಿಗೆ ಇದೀಗ ಸಂತೋಷದ ಸುದ್ದಿ. ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿವಿಧ ಮಹತ್ವದ ಇಲಾಖೆಗಳಲ್ಲಿನ ಹುದ್ದೆಗಳನ್ನು ತುಂಬಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದೊಡ್ಡ ಮಟ್ಟದ ನೇಮಕಾತಿ ಪ್ರಕಟಣೆ ಹೊರಡಿಸಿದೆ. ದೀರ್ಘಕಾಲದ ನಂತರ ಒಂದೇ ಸಮಯದಲ್ಲಿ ವಿಭಿನ್ನ ಇಲಾಖೆಗಳಲ್ಲಿ 700 ಕ್ಕೂ ಅಧಿಕ ಹುದ್ದೆಗಳು ತೆರೆಯಲ್ಪಟ್ಟಿದ್ದು, ಅರ್ಹ ಅಭ್ಯರ್ಥಿಗಳಿಗೆ ಇದು ಚಿನ್ನದ ಅವಕಾಶ ಎಂದರೂ ತಪ್ಪಾಗಲಾರದು.

    ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಉದ್ಯೋಗಗಳು ಸೇಕ್ಯುರಿಟಿ, ನಿಲ್ಲುವ ವೇತನ, ಬಡ್ತಿ ಸೌಲಭ್ಯಗಳು ಮತ್ತು ಸಮಾಜದಲ್ಲಿ ಗೌರವ ಎಂದು ಯುವಕರು ಹೆಚ್ಚು ಬಯಸುತ್ತಾರೆ. ಇದರ ನಡುವೆಯೇ KEA ನೀಡಿರುವ ಈ Mass Recruitment ಅನೇಕ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಭವಿಷ್ಯ ಕಟ್ಟಿಕೊಳ್ಳುವ ವೇದಿಕೆ. ರಾಜ್ಯದಾದ್ಯಂತ ವಿವಿಧ ಸಂಸ್ಥೆಗಳಲ್ಲಿ ಎಫ್ಡಿಎ, ಎಸ್‌ಡಿಎ, ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಎಂಜಿನಿಯರ್, ಅಕೌಂಟೆಂಟ್ ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈಗ ಪ್ರಕಟಿಸಿರುವ ಹುದ್ದೆಗಳ ವಿವರ, ಅರ್ಹತೆ, ವೇತನ, ವಯೋಮಿತಿ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೀಗಿದೆ:

    KEA ನೇಮಕಾತಿ 2025 — ಸಂಪೂರ್ಣ ಮಾಹಿತಿ

    ಸಂಸ್ಥೆಯ ಹೆಸರು

    • ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)

    ಒಟ್ಟು ಖಾಲಿ ಹುದ್ದೆಗಳು: 

    • 708

    ಉದ್ಯೋಗ ಸ್ಥಳ: 

    • ಕರ್ನಾಟಕದಾದ್ಯಂತ

    ಹುದ್ದೆಗಳ ಹೆಸರು: 

    • ಎಫ್‌ಡಿಎ (FDA)
    • ಎಸ್‌ಡಿಎ (SDA)
    • ಅಸಿಸ್ಟೆಂಟ್ ಮ್ಯಾನೇಜರ್
    • ಜೂನಿಯರ್ ಎಂಜಿನಿಯರ್
    • ಅಕೌಂಟೆಂಟ್

    ವೇತನ ಶ್ರೇಣಿ:

    • ₹21,400 – ₹83,900

    ಹುದ್ದೆಗಳು ಇರುವ ವಿಭಾಗಗಳು:

    ಈ ನೇಮಕಾತಿ ಕೆಳಗಿನ ಸಂಸ್ಥೆಗಳಿಗೆ ಸಂಬಂಧಿತವಾಗಿರುತ್ತದೆ, 

    • KSDL
    • RG UHS
    • KKRCTC
    • NWKRTC
    • ಕೃಷಿ ಉತ್ಪನ್ನ ಇಲಾಖೆ
    • ತಾಂತ್ರಿಕ ತರಬೇತಿ ಇಲಾಖೆ
    • ಶಾಲಾ ಶಿಕ್ಷಣ ಇಲಾಖೆ
    • ಪದವಿ ಪೂರ್ವ ಶಿಕ್ಷಣ ಇಲಾಖೆ
    • ಹಾಗೂ ಇತರೆ ಸಂಸ್ಥೆಗಳು

    ವಿದ್ಯಾರ್ಹತೆ: 

    • B.Com
    • B.E
    • B.Tech
    • (ಹುದ್ದೆಯ ಪ್ರಕಾರ ಅರ್ಹತೆ ಬದಲಾಗಬಹುದು)

    ವಯೋಮಿತಿ: 

    • ಸಾಮಾನ್ಯ ಅಭ್ಯರ್ಥಿಗಳು: 18 ರಿಂದ 38 ವರ್ಷ

    ವಯೋಮಿತಿ ಸಡಿಲಿಕೆ: 

    • 2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷ
    • SC/ST ಅಭ್ಯರ್ಥಿಗಳಿಗೆ: 5 ವರ್ಷ

    ಅರ್ಜಿ ಶುಲ್ಕ: 

    • 2A, 2B, 3A, 3B ಅಭ್ಯರ್ಥಿಗಳಿಗೆ: ₹750
    • SC/ST ಹಾಗೂ ಮಾಜಿ ಯೋಧರಿಗೆ: ₹250

    ನೇಮಕಾತಿ ವಿಧಾನ: 

    • ಲಿಖಿತ ಪರೀಕ್ಷೆ
    • ದಾಖಲಾತಿ ಪರಿಶೀಲನೆ
    • ಸಂದರ್ಶನ

    ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 

    • ನವೆಂಬರ್ 15

    ಅಧಿಕೃತ ವೆಬ್‌ಸೈಟ್

    ಅರ್ಜಿ ಸಲ್ಲಿಕೆ ಮತ್ತು ಸಂಪೂರ್ಣ ಅಧಿಸೂಚನೆಗಾಗಿ ಭೇಟಿ ನೀಡಿ: https://cetonline.karnataka.gov.in

    ಇದು ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಅತ್ಯಂತ ಮಹತ್ವದ ಅವಕಾಶ. ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಅಧಿಸೂಚನೆಯನ್ನು ವಿಸ್ತೃತವಾಗಿ ಓದಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ.

    apvc-iconPost Views: 34
  • ಸಕ್ಕರೆ ಹೆಚ್ಚಾದಾಗ ದೇಹ ನೀಡುವ ಎಚ್ಚರಿಕೆ ಲಕ್ಷಣಗಳು

    ಸಕ್ಕರೆ ಹೆಚ್ಚಾದಾಗ ದೇಹ ನೀಡುವ ಎಚ್ಚರಿಕೆ ಲಕ್ಷಣಗಳು

    ಇತ್ತೀಚಿನ ದಿನಗಳಲ್ಲಿ, ಫಾಸ್ಟ್‌ಫುಡ್, ಪ್ಯಾಕೇಜ್ಡ್ ಪದಾರ್ಥಗಳು ಮತ್ತು ಸಿಹಿತಿಂಡಿಗಳ ಸೇವನೆ ಹೆಚ್ಚುತ್ತಿರುವುದರಿಂದ ಜನರಲ್ಲಿ ಸಕ್ಕರೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿವೆ. ವೈದ್ಯಕೀಯ ತಜ್ಞರ ಪ್ರಕಾರ, ಭಾರತೀಯರ ದಿನನಿತ್ಯದ ಆಹಾರದಲ್ಲಿ ಲುಕಾಯಿತ ಸಕ್ಕರೆಯ ಪ್ರಮಾಣ (Hidden Sugar) ನಿರೀಕ್ಷೆಗಿಂತಲೂ ಹೆಚ್ಚಾಗಿದೆ. ಕೇವಲ ಚಹಾ-ಕಾಫಿಯಲ್ಲಿ ಹಾಕುವ ಸಕ್ಕರೆಯಷ್ಟೇ ಅಲ್ಲ, ನಾವು ತಿನ್ನುವ ಜ್ಯೂಸ್, ಬಿಸ್ಕತ್, ಬ್ರೆಡ್, ಸಾಸ್, ರೆಡಿ-ಟು-ಈಟ್ ಪದಾರ್ಥಗಳಲ್ಲಿ ಇರುವ ಸಕ್ಕರೆ ನಮ್ಮ ದೇಹಕ್ಕೆ ನೇರವಾಗಿ ಹಾನಿ ಮಾಡುತ್ತದೆ.

    ಹೆಚ್ಚುವರಿ ಸಕ್ಕರೆಯ ಸೇವನೆ ಯಕೃತ್‌ (Liver) ಮೇಲಿನ ಒತ್ತಡವನ್ನೇ ಹೆಚ್ಚು ಮಾಡದೇ, ಕೊಲೆಸ್ಟ್ರಾಲ್‌, ರಕ್ತದೊತ್ತಡ, ತೂಕ ಹೆಚ್ಚಳ, ಹಾರ್ಮೋನ್ ಅಸಮತೋಲನ ಸೇರಿದಂತೆ ಹಲವಾರು ಗಂಭೀರ ಸಮಸ್ಯೆಗಳ ಮೂಲವಾಗುತ್ತದೆ. ಮುಖ್ಯವಾಗಿ, ಸಕ್ಕರೆ ಅತಿಯಾಗಿ ಸೇವಿಸುವವರು ತಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ಸಣ್ಣ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವುದರಿಂದ, ಮುಂದೆ ಮಧುಮೇಹದ ಅಪಾಯದತ್ತ ತಳ್ಳಿಕೊಳ್ಳುತ್ತಾರೆ. ಹಾಗಾದರೆ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚುತ್ತಿರುವುದನ್ನು ಹೇಗೆ ಗುರುತಿಸಬಹುದು? ಯಾವ ಲಕ್ಷಣಗಳು ಎಚ್ಚರಿಕೆಯ ಗಂಟೆ ಹೊಡೆಯುತ್ತವೆ? ಮತ್ತು ಸಿಹಿ ಅಂಶವನ್ನು ಸಂಪೂರ್ಣವಾಗಿ ತ್ಯಜಿಸಬೇಕೇ…? ಎಂಬ ಬಗ್ಗೆ ನೋಡೋಣ ಬನ್ನಿ.

    ಹಸಿವು ಕಡಿಮೆಯಾಗುವುದು:

    • ಸಕ್ಕರೆಯ ಅತಿಯಾದ ಸೇವನೆ ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಏರಿಸುತ್ತದೆ. ಇದರ ಪರಿಣಾಮ,
    • ಮುಖದಲ್ಲಿ ಮೊಡವೆಗಳು ಮೂಡುವುದು
    • ಹಸಿವು ಕಡಿಮೆಯಾಗುವುದು
    • ಜೀರ್ಣಕ್ರಿಯೆ ಅಸ್ತವ್ಯಸ್ತವಾಗುವುದು

    ದೆಹದಲ್ಲಿ ಕ್ಯಾಲೊರಿಗಳು ಒಂದೇ ತಟ್ಟಿನಲ್ಲಿ ಜಮೆಯಾಗುವುದರಿಂದ ಹೊಟ್ಟೆಗೆ ಸರಿಯಾದ ಹಸಿವೆ ಕಾಣದು. ದಿನದಿಂದ ದಿನಕ್ಕೆ ಹಸಿವು ಕಡಿಮೆಯಾಗುತ್ತಿದ್ದರೆ, ಇದು ನೀವು ಸಿಹಿತಿಂಡಿಗಳನ್ನು ಮಿತಿಗಿಂತ ಹೆಚ್ಚು ಸೇವಿಸುತ್ತಿದ್ದೀರಿ ಎಂಬ ಸೂಚನೆ. ಅದೇ ರೀತಿ ಯಾವುದೇ ಕಾರಣವಿಲ್ಲದೆ ತೂಕ ಏರಿಕೆ ಕಂಡುಬಂದರೂ ಅದು ಹೆಚ್ಚುವರಿ ಸಕ್ಕರೆಯ ಪರಿಣಾಮವಾಗಿರಬಹುದು.

    ಮೆಗ್ನೀಸಿಯಮ್ ಮಟ್ಟ ಕುಸಿತ:

    ಬಿಳಿ ಸಕ್ಕರೆ ದೇಹದಲ್ಲಿ ಸೈಟೊಕಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಕಿರಿಕಿರಿ, ಖಿನ್ನತೆ, ಆಯಾಸಕ್ಕೆ ಕಾರಣವಾಗುತ್ತದೆ.

    ಅತಿಯಾದ ಸಕ್ಕರೆ ಸೇವನೆ, ಮೆಗ್ನೀಸಿಯಮ್ ಅನ್ನು ಕಡಿಮೆ ಮಾಡುತ್ತದೆ. ದೇಹದ ನಿದ್ರಾ ಚಕ್ರವನ್ನು ಅಸ್ತವ್ಯಸ್ತಗೊಳಿಸುತ್ತದೆ. ನಿದ್ರೆ ಕೆಡುತ್ತಿದೆ, ಮಧ್ಯರಾತ್ರಿ ಎಚ್ಚರವಾಗುತ್ತಿದೆ, ದೇಹ ಸದಾ ಬಲಹೀನವಾಗುತ್ತಿದೆ ಎಂದರೆ ಸಕ್ಕರೆಯ ಸೇವನೆ ಹೆಚ್ಚಾಗಿದೆ ಎನ್ನಬಹುದು.

    ಚರ್ಮ ಸಮಸ್ಯೆಗಳು:

    • ಅತಿಯಾದ ಸಕ್ಕರೆ ಸೇವನೆಯು,
    • ಮುಖದಲ್ಲಿ ಮೊಡವೆ (Acne)
    • ಚರ್ಮದಲ್ಲಿ ಒಣತನ
    • ತುರಿಕೆ

    ಹಾರ್ಮೋನಲ್ ಚೇಂಜಸ್ ಇವುಗಳನ್ನು ಉಂಟುಮಾಡಬಹುದು. ಈ ಲಕ್ಷಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡರೆ, ತಕ್ಷಣ ಸಿಹಿಯನ್ನೂ ಪ್ಯಾಕೇಜ್ಡ್ ಜಂಕ್ ಫುಡ್‌ನನ್ನೂ ಕಡಿಮೆ ಮಾಡುವುದು ಒಳಿತು.

    ಸಿಹಿ ಅಂಶವನ್ನು ಸಂಪೂರ್ಣ ತ್ಯಜಿಸಬೇಕೇ?

    ಇಲ್ಲ! ದೇಹಕ್ಕೆ ಸ್ವಲ್ಪ ಸಿಹಿಯ ಅಗತ್ಯವಿದೆ. ಆದರೆ ಬಿಳಿ ಸಕ್ಕರೆಯ ಬದಲು ನೈಸರ್ಗಿಕ ಸಕ್ಕರೆಯನ್ನು ಆಯ್ಕೆ ಮಾಡಬೇಕು ಉದಾಹರಣೆಗೆ,

    ಹಣ್ಣುಗಳು (Natural Fructose)

    • ಹಾಲು, ಮೊಸರು (Lactose)
    • ಜೇನು (Honey – ಮಿತ ಪ್ರಮಾಣದಲ್ಲಿ)
    • ಬೆಲ್ಲ (Jaggery – ಮಿತ ಪ್ರಮಾಣದಲ್ಲಿ)

    ಇವು ದೇಹಕ್ಕೆ ಅಗತ್ಯ ಇರುವ ನೈಸರ್ಗಿಕ ಸಕ್ಕರೆಯನ್ನು ನೀಡುತ್ತವೆ, ಹಾನಿ ಮಾಡೋದಿಲ್ಲ.

    ಗಮನಿಸಿ: 

    • ದಿನಕ್ಕೆ 25 ಗ್ರಾಂಕ್ಕಿಂತ ಹೆಚ್ಚು ಬಿಳಿ ಸಕ್ಕರೆ ಸೇವನೆ ಬೇಡ.
    • ಪ್ಯಾಕೇಜಡ್ ಫುಡ್ ಲೇಬಲ್ಸ್ ಓದಿ.
    • ನೀರು ಹೆಚ್ಚು ಕುಡಿಯಿರಿ.
    • ವ್ಯಾಯಾಮಕ್ಕೆ ಆದ್ಯತೆ ನೀಡಿ.
    apvc-iconPost Views: 10
  • ತೆಂಗಿನಕಾಯಿ ಚಿಪ್ಪಿಗೂ ಹೆಚ್ಚಿದ ಬೇಡಿಕೆ!

    ತೆಂಗಿನಕಾಯಿ ಚಿಪ್ಪಿಗೂ ಹೆಚ್ಚಿದ ಬೇಡಿಕೆ!

    ಹಿಂದೆ ಮನೆಯ ಅಡುಗೆಮನೆ ಬದಿಯಲ್ಲೇ ಕಸದ ಬುಟ್ಟಿಗೆ ಸೇರುತ್ತಿದ್ದ ತೆಂಗಿನಕಾಯಿ ಚಿಪ್ಪು ಇಂದು ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡು ರೈತರಿಂದ ಮನೆಮಹಿಳೆಯರವರೆಗೂ ಎಲ್ಲರಿಗೂ ಹೆಚ್ಚುವರಿ ಆದಾಯ ತರಿಸುತ್ತಿರುವ ಸುದ್ದಿ ಇದೀಗ ಗ್ರಾಮೀಣ ಭಾಗದಲ್ಲಿ ದೊಡ್ಡ ಗೆ ಗ್ರಾಸವಾಗಿದೆ. ಭಾರತದಲ್ಲಿ ತೆಂಗಿನಕಾಯಿ ಕಲ್ಪವೃಕ್ಷ ಎಂದು ಕರೆಯಲ್ಪಡುವುದಕ್ಕೆ ಕಾರಣ, ಅದರ ಪ್ರತಿಯೊಂದು ಭಾಗವೂ ಮಾನವನಿಗೆ ಒಳ್ಳೆಯದು ಆಗುವುದು. ಎಳನೀರು, ಕೊಬ್ಬರಿ, ತೊಳೆ, ಗರಿ, ಎಣ್ಣೆ ಹೀಗೆ ಮರದ ಎಲ್ಲ ಭಾಗಗಳು ಬಳಕೆಯಲ್ಲಿ ಇವೆ. ಆದರೆ ಜಾಗತಿಕ ಮಾರುಕಟ್ಟೆಯ ಅವಶ್ಯಕತೆ, ವಿದೇಶಗಳಲ್ಲಿ ಇದ್ದಿಲಿಗೆ ಏರಿದ ಡಿಮ್ಯಾಂಡ್ ಹಾಗೂ ಸ್ಥಳೀಯ ಮಟ್ಟದಲ್ಲಿ ತೆಂಗು ಉತ್ಪಾದನೆಯಲ್ಲಿ ಕಂಡುಬಂದ ಬದಲಾವಣೆ ಈ ತ್ಯಾಜ್ಯವನ್ನು ಇಂದು ಆರ್ಥಿಕ ನೇರವಾಗಿ ಪರಿಣಮಿಸಿದೆ.

    ಚಿಪ್ಪಿನ ಬೆಲೆ ಗಗನಕ್ಕೇರಿಕೆ, ಮನೆ ಬಾಗಿಲಿಗೇ ವ್ಯಾಪಾರಿಗಳು:

    ಇತ್ತೀಚೆಗೆ ತೆಂಗಿನ ಚಿಪ್ಪಿನ ಬೆಲೆ ಅಚ್ಚರಿಯ ಮಟ್ಟಿಗೆ ಏರಿಕೆಯಾಗಿದೆ. ವ್ಯಾಪಾರಿಗಳು ಸ್ವತಃ ಮನೆಯ ಬಾಗಿಲಿಗೇ ಬಂದು ಚಿಪ್ಪುಗಳನ್ನು ಸಂಗ್ರಹಿಸಿ, ಒಂದು ಕೆಜಿಗೆ 20–22 ರೂ. ಒಂದು ಚಿಪ್ಪಿಗೆ 1 ರೂಪಾಯಿ, ಕೊಟ್ಟು ಖರೀದಿಸುತ್ತಿದ್ದಾರೆ. ಇದರಿಂದ ಹಳ್ಳಿಗಳಲ್ಲಿನ ಮಹಿಳೆಯರಿಗೆ ಹೊಸ ಆದಾಯದ ಮೂಲ ರೂಪುಗೊಂಡಿದೆ. ಹಿಂದಿನಂತೆ ಚಿಪ್ಪುಗಳನ್ನು ಉರಿಯಾಗಿ ಬಳಸದೆ, ಜನರಿಂದ ಸಂಗ್ರಹಿಸಿ ಮಾರಾಟ ಮಾಡುವುದು ಈಗ ಸಾಮಾನ್ಯವಾಗಿದೆ.

    ವಿದೇಶಕ್ಕೆ ರಫ್ತಾಗುತ್ತಿರುವ ಚಿಪ್ಪಿನ ಇದ್ದಿಲು:

    ಕೊನೆಯ ಕೆಲವು ವರ್ಷಗಳಿಂದ ತೆಂಗಿನ ಚಿಪ್ಪಿನಿಂದ ತಯಾರಾಗುವ ಇದ್ದಿಲು (charcoal briquettes) ವಿದೇಶಗಳಲ್ಲಿ ಭಾರೀ ಬೇಡಿಕೆ ಪಡೆದಿದೆ.

    ಬಾರಿ ಪ್ರಮಾಣದಲ್ಲಿ ರಫ್ತು ಆಗುತ್ತಿರುವುದು ಚಿಪ್ಪಿನ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದ್ದು, ರಫ್ತುಗಾರರು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಕಚ್ಚಾ ಸಾಮಗ್ರಿ ಬೇಕಾಗಿರುವುದರಿಂದ ಸ್ಥಳೀಯ ಮಟ್ಟದಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.

    ಎಳನೀರು ಬೇಡಿಕೆ, ಚಿಪ್ಪಿನ ಕೊರತೆ:

    ರೈತರು ಈಗ ಕೊಬ್ಬರಿ ಮಾರಾಟಕ್ಕಿಂತ ಎಳನೀರಿಗೆ ಹೆಚ್ಚು ಒಲವು ತೋರುತ್ತಿರುವುದು ಮಾರುಕಟ್ಟೆಯಲ್ಲಿ ಬಲಿತ ತೆಂಗಿನಕಾಯಿಗಳ ಲಭ್ಯತೆಯನ್ನು ಕಡಿಮೆ ಮಾಡಿದೆ. ಇಂತಹ ಪರಿಸ್ಥಿತಿ ಚಿಪ್ಪಿನ ಮೌಲ್ಯವನ್ನು ಇನ್ನಷ್ಟು ಏರಿಸಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

    ಗ್ರಾಮೀಣ ಮಹಿಳೆಯರಿಗೆ ಹೊಸ ಆದಾಯದ ದಾರಿಗಳು:

    ಹಿಂದೆ ಉರಿಯಾಗಿ ಅಥವಾ ಮಣ್ಣಿನಲ್ಲಿ ಹೂತುಬಿಡುತ್ತಿದ್ದ ಚಿಪ್ಪುಗಳು ಈಗ ನೇರ ಹಣ ತರುತ್ತಿರುವುದರಿಂದ ಹಲವಾರು ಮನೆಗಳು ಇದನ್ನು ಪಾರ್ಶ್ವ ಉದ್ಯಮವಾಗಿ ತೆಗೆದುಕೊಂಡಿವೆ.

    ಟ್ರ್ಯಾಕ್ಟರ್‌ಗಳಲ್ಲಿ ಸಂಗ್ರಹಿಸಿದ ಚಿಪ್ಪುಗಳನ್ನು ತಿಪಟೂರು, ಅರಸೀಕೆರೆ ಮುಂತಾದ ಪ್ರಮುಖ ತೆಂಗು ಮಾರುಕಟ್ಟೆಗಳಿಗೆ ಕಳುಹಿಸಲಾಗುತ್ತಿದೆ.

    ಕಲ್ಪವೃಕ್ಷಕ್ಕೆ ಮತ್ತೊಂದು ಗರಿ:

    ತೆಂಗು ಮರದ ಪ್ರತಿಯೊಂದು ಭಾಗವೂ ಮನುಷ್ಯನಿಗೆ ಉಪಯುಕ್ತ. ಈಗ ಚಿಪ್ಪು ಕೂಡಾ ಆ ಜಾತಿಗೆ ಸೇರಿದೆ. ಎಣ್ಣೆ, ಎಳನೀರು, ಗರಿ, ತೊಳೆ, ಮಟ್ಟೆ ಈಗ ಚಿಪ್ಪಿನ ಇದ್ದಿಲು ಎಲ್ಲವೂ ವ್ಯಾಪಾರ ರಂಗದಲ್ಲಿ ಮೌಲ್ಯ ಪಡೆದಿವೆ. ಇದರಿಂದ ತೆಂಗಿನಕಾಯಿ ಕಲ್ಪವೃಕ್ಷ ಎಂಬ ಹೆಸರಿನ ಮಹತ್ವ ಇನ್ನಷ್ಟು ಹೆಚ್ಚಿಸಿದೆ.

    ಒಟ್ಟಾರೆಯಾಗಿ, ಒಮ್ಮೆಗೆ ತ್ಯಾಜ್ಯವೆಂದು ಪರಿಗಣಿಸಲ್ಪಟ್ಟ ತೆಂಗಿನಕಾಯಿ ಚಿಪ್ಪು ಇಂದು ತನ್ನದೇ ಆದ ಮಾರುಕಟ್ಟೆ, ಮೌಲ್ಯ ಮತ್ತು ಬೇಡಿಕೆಯನ್ನು ಪಡೆದುಕೊಂಡಿದೆ. ರೈತರಿಗೆ, ಮಹಿಳೆಯರಿಗೆ ಹಾಗೂ ಗ್ರಾಮೀಣ ಉದ್ಯಮಗಳಿಗೆ ಹೊಸ ಚೈತನ್ಯ ಮತ್ತು ಹೆಚ್ಚುವರಿ ಆದಾಯ ನೀಡುತ್ತಿದೆ.

    apvc-iconPost Views: 23
  • ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಜಯ 

    ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಜಯ 

    ಮೆಲ್ಬರ್ನ್‌ನಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದ ಭಾರತ ತಂಡ ಹೋಬರ್ಟ್‌ನಲ್ಲಿ ಅದ್ಭುತ ತಿರುಗೇಟು ನೀಡಿದೆ. ಐದು ಪಂದ್ಯಗಳ ಟಿ20 ಐ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿ ಸರಣಿಯನ್ನು 1-1 ಸಮಬಲಕ್ಕೆ ತಂದಿದೆ. ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಆಸ್ಟ್ರೇಲಿಯಾದ ಬಲಿಷ್ಠ ಬ್ಯಾಟಿಂಗ್ ಶಕ್ತಿಯನ್ನು 186 ರನ್‌ಗಳೊಳಗೆ ಕಟ್ಟಿಹಾಕುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಯಿತು.

    ಹರ್ಷಿತ್ ರಾಣಾ ಅವರ ಬದಲಿಗೆ ತಂಡದಲ್ಲಿ ಅವಕಾಶ ಪಡೆದುಕೊಂಡ ಅರ್ಶದೀಪ್ ಸಿಂಗ್ ತಮ್ಮ ಆಯ್ಕೆಯೇ ಶತಪಾಲು ಲೇಸೆಂದು ಸಾಬೀತುಪಡಿಸಿದರು. ಆರಂಭದಲ್ಲೇ  ವೇಗ ಮತ್ತು  ಸ್ವಿಂಗ್‌ನಿಂದ ಆಸ್ಟ್ರೇಲಿಯಾ ಟಾಪ್ ಆರ್ಡರ್‌ನ್ನು ಪೆವಿಲಿಯನ್ ಸೇರುವಂತೆ ಮಾಡಿದರು. ತಮ್ಮ 4 ಓವರ್‌ಗಳಲ್ಲಿ ಕೇವಲ 27 ರನ್ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಟಿಂ ಡೇವಿಡ್ (38 ಎಸೆತಗಳಲ್ಲಿ 74) ಹಾಗೂ ಮಾರ್ಕಸ್ ಸ್ಟೋಯ್ನಿಸ್ (42 ರನ್) ಮಾತ್ರ ಆಸ್ಟ್ರೇಲಿಯಾ ಪರ ಬ್ಯಾಟ್ ಬೀಸಿದರು ಇತರರು ಯಾವುದೇ ಪ್ರಭಾವ ಬೀರಲಿಲ್ಲ. ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು.

    187 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಸ್ಫೋಟಕ ಆರಂಭ ನೀಡಿದರು. ಕೇವಲ 16 ಎಸೆತಗಳಲ್ಲಿ 25 ರನ್ (2 ಬೌಂಡರಿ, 2 ಸಿಕ್ಸರ್) ಬಾರಿಸಿದ ಅವರು ಆಸ್ಟ್ರೇಲಿಯಾ ತಂಡದ ಬೌಲಿಂಗ್‌ನ್ನು ಮೊದಲ ಕ್ಷಣದಿಂದಲೇ ಒತ್ತಡಕ್ಕೆ ಸಿಲುಕಿಸಿದರು. ಆದರೆ ನೇಥನ್ ಎಲ್ಲಿಸ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಕಡೆಗೆ ಸೇರಿದರು. ಆ ಬಳಿಕ ಶುಭಮನ್ ಗಿಲ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಪವರ್ ಪ್ಲೇನಲ್ಲಿ ಸ್ಕೋರ್‌ಬೋರ್ಡ್‌ನಲ್ಲಿ ಮೊತ್ತವನ್ನು ಹೆಚ್ಚಿಸಿದರು. ಸೂರ್ಯಕುಮಾರ್ ಕೇವಲ 11 ಎಸೆತಗಳಲ್ಲಿ 24 ರನ್ ಗಳಿಸಿ ತಂಡಕ್ಕೆ ಹಿನ್ನಡೆ ಆಗದಂತೆ ನೋಡಿಕೊಂಡರು.

    ಮಧ್ಯ ಕ್ರಮಾಂಕದಲ್ಲಿ ತಿಲಕ್ ವರ್ಮಾ (26 ಎಸೆತಗಳಲ್ಲಿ 29) ಮತ್ತು ಅಕ್ಷರ್ ಪಟೇಲ್ (12 ಎಸೆತಗಳಲ್ಲಿ 17) ಇಬ್ಬರೂ ಕೂಡ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಭಾರತ ತಂಡ ಮಧ್ಯದ ಹಂತದಲ್ಲಿ ಸ್ವಲ್ಪ ಸಂಕಷ್ಟಕ್ಕೆ ಸಿಲುಕಿದರೂ, ಆ ವೇಳೆ ವಾಶಿಂಗ್ಟನ್ ಸುಂದರ್ ತಂಡದ ನಂಬಿಗಸ್ತರಾಗಿ ಆಟವಡಿದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸುಂದರ್ ತಮ್ಮ ಸಮತೋಲನ ಮತ್ತು ಶಾಂತ ಬ್ಯಾಟಿಂಗ್‌ನಿಂದ ಪಂದ್ಯದ ಗತಿ ಸಂಪೂರ್ಣವಾಗಿ ಭಾರತ ಪರ ತಿರುಗಿಸಿದರು. ಅವರಿಗೆ ಜಿತೇಶ್ ಶರ್ಮಾ ತಕ್ಕ ಬೆಂಬಲ ನೀಡಿದರು. ಈ ಜೋಡಿ ಆಸ್ಟ್ರೇಲಿಯಾದ ಗೆಲುವಿನಾಸೆಗೆ ತಣ್ಣೀರೆರಚಿ 9 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ತಲುಪಿಸಿತು.

    ಆಸ್ಟ್ರೇಲಿಯಾದ ಬೌಲರ್‌ಗಳಲ್ಲಿ ಎಲ್ಲಿಸ್ ಮತ್ತು ಸ್ಟೋಯ್ನಿಸ್ ತಲಾ ಎರಡು ವಿಕೆಟ್ ಪಡೆದರೂ, ಭಾರತದ ದೃಢ ಮನೋಭಾವದ ಮುಂದೆ ಅವರು ಅಸಹಾಯಕರಾದರು. ಪಂದ್ಯದಲ್ಲಿನ ಅತೀ ಪ್ರಮುಖ ಪಾತ್ರ ವಹಿಸಿದ ಅರ್ಶದೀಪ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

     

    ಈ ಜಯದೊಂದಿಗೆ ಹೋಬರ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಅಪರೂಪದ ಸಾಧನೆ ಭಾರತ ಮಾಡಿದೆ. ಹೋಬರ್ಟ್ ಕ್ರೀಡಾಂಗಣದಲ್ಲಿ ಕಳೆದ ಐದು ಪಂದ್ಯಗಳಲ್ಲೂ ಗೆಲುವು ಕಂಡಿದ್ದ ಆಸ್ಟ್ರೇಲಿಯಾ ಈ ಬಾರಿ ಸೋಲಿನ ರುಚಿ ಕಂಡಿದೆ.

    apvc-iconPost Views: 7
  • ನಿಯಮ ಮೀರಿ ಕಟ್ಟಿದ ಕಟ್ಟಡಗಳಿಗೆ ದೊಡ್ಡ ರಿಲೀಫ್

    ನಿಯಮ ಮೀರಿ ಕಟ್ಟಿದ ಕಟ್ಟಡಗಳಿಗೆ ದೊಡ್ಡ ರಿಲೀಫ್

    ರಾಜ್ಯದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ನಿಯಮ ಉಲ್ಲಂಘನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹೆಚ್ಚಿನ ನಾಗರಿಕರು ಪರವಾನಗಿ ಪಡೆದು ಕಟ್ಟಡ ನಿರ್ಮಾಣ ಮಾಡಿದರೂ, ಸ್ಥಳ ಅಭಾವ, ಹೆಚ್ಚುವರಿ ಜಾಗದ ಅವಶ್ಯಕತೆ ಅಥವಾ ತಾಂತ್ರಿಕ ಕಾರಣಗಳಿಂದಾಗಿ ನಿಗದಿತ ಮಾನದಂಡಗಳು ಪಾಲನೆಯಾಗದೆ ಹೋಗಿರುವ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತವೆ. ಈ ಹಿನ್ನೆಲೆಯಲ್ಲಿ ಅನಧಿಕೃತ ಅಥವಾ ನಿಯಮ ಮೀರಿ ನಿರ್ಮಿಸಲಾದ ಕಟ್ಟಡಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಡವಿರುವುದರ ಜೊತೆಗೆ, ಜನರಿಗೆ ತೊಂದರೆ ಆಗದ ರೀತಿಯಲ್ಲಿ ಪರಿಹಾರ ಕೊಡಬೇಕೆಂಬ ಅಭಿಪ್ರಾಯವೂ ಸರ್ಕಾರದ ಮುಂದೆ ಇತ್ತು.

    ಈ ಎರಡನ್ನೂ ಪರಿಗಣಿಸಿದ ರಾಜ್ಯ ಸರ್ಕಾರ ಈಗ ಮಹತ್ವದ ನಿರ್ಧಾರ ಕೈಗೊಂಡಿದೆ. ನಿಗದಿತ ಮಿತಿಯ ಒಳಗಿರುವ ಉಲ್ಲಂಘನೆಗಳಿಗೆ ದಂಡ ಪಾವತಿಸಿ ಪರಿಷ್ಕೃತ ನಕ್ಷೆ (Revised Plan) ಪಡೆಯಲು ಅವಕಾಶ ನೀಡುವುದು ಸರ್ಕಾರದ ಹೊಸ ಆದೇಶದ ಮುಖ್ಯ ಅಂಶವಾಗಿದೆ. ಇದರಿಂದ ಸಾವಿರಾರು ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳಿಗೆ ಕಾನೂನುಬದ್ಧ ಸ್ಥಾನ ಲಭಿಸುವ ಸಾಧ್ಯತೆ ಇದೆ.

    ಸರ್ಕಾರದ ಹೊಸ ಆದೇಶದ ಮುಖ್ಯ ಅಂಶಗಳು:

    • ಉಲ್ಲಂಘನೆ 15%ರ ಮಿತಿಯೊಳಗೆ ಇದ್ದರೆ ಮಾತ್ರ ಈ ವಿನಾಯಿತಿ ಅನ್ವಯ.
    • ಸೆಟ್‌ಬ್ಯಾಕ್ ಮತ್ತು ಕಾರ್ ಪಾರ್ಕಿಂಗ್ ಉಲ್ಲಂಘನೆಗಳಿಗೆ ದಂಡ ವಿಧಿಸಿ ಮಾನ್ಯತೆ ನೀಡಲಾಗುತ್ತದೆ.
    • ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ ಪಾರ್ಕಿಂಗ್ ಉಲ್ಲಂಘನೆಗೆ 5,000 ರೂ. ದಂಡ ಅನಿವಾರ್ಯ.
    • ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆ ಎಲ್ಲವೂ ಈ ಆದೇಶದ ವ್ಯಾಪ್ತಿಗೆ ಬರುತ್ತವೆ.

    ದಂಡದ ಪ್ರಮಾಣ (Local Body-wise)

    ಪಟ್ಟಣ ಪಂಚಾಯಿತಿ ವ್ಯಾಪ್ತಿ: 

    • ವಸತಿ/ಕೈಗಾರಿಕಾ ಕಟ್ಟಡ: ಪ್ರತಿ ಚ.ಮೀಗೆ 1,000 ರೂ.
    • ವಾಣಿಜ್ಯ ಕಟ್ಟಡ: ಪ್ರತಿ ಚ.ಮೀಗೆ 1,500 ರೂ.

    ಪುರಸಭೆ ವ್ಯಾಪ್ತಿ: 

    • ವಸತಿ/ಕೈಗಾರಿಕಾ ಕಟ್ಟಡ: ಪ್ರತಿ ಚ.ಮೀಗೆ 1,200 ರೂ.
    • ವಾಣಿಜ್ಯ ಕಟ್ಟಡ: ಪ್ರತಿ ಚ.ಮೀಗೆ 1,800 ರೂ.

    ನಗರಪಾಲಿಕೆ ವ್ಯಾಪ್ತಿ:

    • ವಸತಿ/ಕೈಗಾರಿಕಾ ಕಟ್ಟಡ: ಪ್ರತಿ ಚ.ಮೀಗೆ 1,500 ರೂ.
    • ವಾಣಿಜ್ಯ ಕಟ್ಟಡ: ಪ್ರತಿ ಚ.ಮೀಗೆ 2,250 ರೂ.

    ಮಹಾನಗರ ಪಾಲಿಕೆ ವ್ಯಾಪ್ತಿ: 

    • ವಸತಿ/ಕೈಗಾರಿಕಾ ಕಟ್ಟಡ: ಪ್ರತಿ ಚ.ಮೀಗೆ 2,000 ರೂ.
    • ವಾಣಿಜ್ಯ ಕಟ್ಟಡ: ಪ್ರತಿ ಚ.ಮೀಗೆ 3,000 ರೂ.

    ಈ ಹೊಸ ಆದೇಶದಿಂದ ನಿಯಮ ಮೀರಿ ನಿರ್ಮಿಸಲಾದ ಅನೇಕ ಕಟ್ಟಡಗಳಿಗೆ ಕಾನೂನುಬದ್ಧ ಸ್ಥಾನ ದೊರೆತು, ಜನರಿಗೆ ದೀರ್ಘಕಾಲದ ಸಮಸ್ಯೆಗೆ ಪರಿಹಾರ ದೊರಕಲಿದೆ. ಅದರೊಂದಿಗೆ ಕಟ್ಟಡ ನಿರ್ಮಾಣದಲ್ಲಿ ನಿಯಮ ಪಾಲನೆಯ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಿಸುವುದಕ್ಕೂ ಇದು ನೆರವಾಗಲಿದೆ.

    apvc-iconPost Views: 11
  • “ಕ್ಯಾಮೆರಾದಲ್ಲಿ ಸೆರೆ ಹಿಡಿದು ನಿಮ್ಮ ಮನೆ ಮುಂದೆ ಕಸ ತಂದು ಹಾಕ್ತೀನಿ” : ಡಿಕೆಶಿ ಕಠಿಣ ಎಚ್ಚರಿಕೆ

    “ಕ್ಯಾಮೆರಾದಲ್ಲಿ ಸೆರೆ ಹಿಡಿದು ನಿಮ್ಮ ಮನೆ ಮುಂದೆ ಕಸ ತಂದು ಹಾಕ್ತೀನಿ” : ಡಿಕೆಶಿ ಕಠಿಣ ಎಚ್ಚರಿಕೆ

    ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಠಿಣ ಎಚ್ಚರಿಕೆ ನೀಡಿದ್ದಾರೆ. “ರಸ್ತೆ, ಬೀದಿ ಎಲ್ಲ ಕಡೆ ಕ್ಯಾಮೆರಾ ಹಾಕ್ತಿದ್ದೇವೆ. ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದ್ರೆ, ಆ ದೃಶ್ಯ ನೋಡಿ ಅವರ ಮನೆ ಮುಂದೆ ಕಸ ತಂದು ಹಾಕ್ತೀನಿ!” ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಸದ ಬಗ್ಗೆ ನಿರಂತರ ಟೀಕೆ ಮಾಡುತ್ತಿರುವ ನಾಗರಿಕರು ಮತ್ತು ಮಾಧ್ಯಮಗಳನ್ನು ಗುರಿಯಾಗಿಸಿ ಮಾತನಾಡಿದರು. “ಈ ಸಮಸ್ಯೆ ಬೆಂಗಳೂರು ಮಾತ್ರದಲ್ಲ, ಇನ್ನೂ ಅನೇಕ ನಗರಗಳಲ್ಲಿ ಇದೆ. ಆದ್ರೆ ಮಾಧ್ಯಮಗಳು ಇಲ್ಲಿ ಮಾತ್ರ ಹೆಚ್ಚು ತೋರಿಸ್ತಾರೆ. ಈಗ ಇದಕ್ಕೆ ಸ್ಪಷ್ಟ ಪರಿಹಾರ ಕೊಡ್ತಿದ್ದೀವಿ ನಗರಪಾಲಿಕೆಯಿಂದ ಹೊಸ ಕ್ಯಾಮೆರಾ ಜಾಲ ಹಾಕಲಾಗುತ್ತದೆ. ಯಾರೂ ಸಹ ರಸ್ತೆ, ಬಸ್ ನಿಲ್ದಾಣ ಅಥವಾ ಸಾರ್ವಜನಿಕ ಸ್ಥಳಗಳಿಗೆ ಕಸ ಹಾಕಬಾರದು” ಎಂದು ಹೇಳಿದರು.

    ಅವರು ಮುಂಬೈಗೆ ಭೇಟಿ ನೀಡಿದ ಸಂದರ್ಭದ ಘಟನೆ ಒಂದನ್ನು ಹಂಚಿಕೊಂಡು, “ಅಲ್ಲೂ ಕೆಲವರು ರಸ್ತೆಗೆ ಕಸ ಹಾಕಿದ್ದರು, ನಾವು ಹಿಂಬಾಲಿಸಿ ಅವರ ಮನೆ ಮುಂದೆಯೇ ಕಸ ಬಿಟ್ಟು ಬಂದಿದ್ದೇವೆ” ಎಂದು ಉದಾಹರಣೆ ನೀಡಿದ್ದಾರೆ. “ಕಸವನ್ನು ವಾಹನಗಳಲ್ಲಿ ಹಾಕಿ ಬೇರೆಡೆ ಬಿಸಾಡುವ ಏಜೆಂಟರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದರು.

    ಡಿಕೆಶಿ ನಾಗರಿಕರಿಗೆ ಕರೆ ನೀಡಿ, “ಪ್ರತಿ ಮನೆಯಲ್ಲೂ ಕಸದ ಡಬ್ಬಿ ಇಡಿ. ನಮ್ಮ ವಾಹನ ಮನೆ ಮನೆಗೆ ಬರುತ್ತದೆ, ಕಸವನ್ನು ಅದಕ್ಕೆ ನೀಡಿ. ಚಿತ್ರ ತೆಗೆದು ಟೀಕೆ ಮಾಡುವುದಕ್ಕಿಂತ ಸ್ವಚ್ಛತೆಗೆ ಸಹಕರಿಸಿ” ಎಂದು ಮನವಿ ಮಾಡಿದರು.

    ಕಾಂಟ್ರ್ಯಾಕ್ಟರ್‌ ಮಾದರಿ ನಿರ್ವಹಣೆ ನಗರದ ಮುಖ್ಯರಸ್ತೆಗಳು ಮತ್ತು ಪ್ರಮುಖ ಪ್ರದೇಶಗಳಲ್ಲಿ ಕಸದ ನಿರ್ವಹಣೆ ಕಾಂಟ್ರ್ಯಾಕ್ಟರ್‌ಗಳಿಗೆ ಹಸ್ತಾಂತರಿಸುವ ಆಲೋಚನೆಯೂ ನಡೆಯುತ್ತಿದೆ ಎಂದು ಅವರು ಹೇಳಿದ್ದಾರರೆ. ಸ್ವಚ್ಛ ನಗರ ನಿರ್ಮಾಣಕ್ಕಾಗಿ ಕಠಿಣ ಕ್ರಮ ಕೈಗೆತ್ತಿಕೊಳ್ಳಲಿರುವುದಾಗಿ ಡಿಕೆಶಿ ಹೇಳಿದ್ದು, “ನಿಯಮ ಉಲ್ಲಂಘನೆ ಮಾಡಿದರೆ ಯಾರನ್ನೂ ಬಿಡಲ್ಲ” ಎಂದು ಎಚ್ಚರಿಕೆ ನೀಡಿದರು.

    apvc-iconPost Views: 15
  • Jio–Google Offer:Gemini Pro AI Plan ಉಚಿತ!

    Jio–Google Offer:Gemini Pro AI Plan ಉಚಿತ!

    ಇತ್ತೀಚಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (AI) ಜಗತ್ತಿನ ಪ್ರತಿಯೊಂದು ಕ್ಷೇತ್ರಕ್ಕೂ ಪ್ರವೇಶಿಸಿ ಕ್ರಾಂತಿಯನ್ನೇ ತಂದಿದೆ. ಸ್ಮಾರ್ಟ್‌ಫೋನ್‌ ಬಳಕೆ, ಶಿಕ್ಷಣ, ಮನರಂಜನೆ, ವ್ಯವಹಾರ, ಸಂಶೋಧನೆ ಯಾವ ಕ್ಷೇತ್ರವನ್ನೇ ನೋಡಿದರೂ ಎಐನ ಪ್ರಭಾವ ಅಚ್ಚರಿಯಂತೆ ಹೆಚ್ಚುತ್ತಿದೆ. ಭಾರತದಲ್ಲಿ 5G ಇಂಟರ್ನೆಟ್ ವ್ಯಾಪಕವಾಗುತ್ತಿರುವುದರಿಂದ, ಹೊಸ ತಲೆಮಾರಿನ ಯುವಕರು ತಂತ್ರಜ್ಞಾನವನ್ನು ಮತ್ತಷ್ಟು ಆಳವಾಗಿ ಬಳಸುವ ಅವಕಾಶವನ್ನು ಹುಡುಕುತ್ತಿದ್ದಾರೆ. ಇಂತಹ ಸಮಯದಲ್ಲಿ, ಭಾರತದ ಅತ್ಯಂತ ದೊಡ್ಡ ಡಿಜಿಟಲ್ ದೈತ್ಯಗಳಲ್ಲಿ ಒಂದಾದ ರಿಲಯನ್ಸ್ Jio, ದೇಶದ ಯುವಕರಿಗಾಗಿ ತಂತ್ರಜ್ಞಾನ ಲೋಕದಲ್ಲಿ ತಿರುಗುಬಾಣದಂತಹ ಹೊಸ ಯೋಜನೆಯನ್ನು ಘೋಷಿಸಿದೆ.

    ಕೃತಕ ಬುದ್ಧಿಮತ್ತೆಯನ್ನು ಸಾಮಾನ್ಯ ಜನರ ಕೈಗೆ ತಲುಪಿಸುವ ಗುರಿಯೊಂದಿಗೆ, ರಿಲಯನ್ಸ್ ಮತ್ತು ಗೂಗಲ್ ಜೊತೆಯಾಗಿದ್ದು, 18 ತಿಂಗಳ ಕಾಲ 35,100 ರೂಪಾಯಿ ಮೌಲ್ಯದ Google Gemini Pro AI Plan ಅನ್ನು ಜಿಯೋ ಗ್ರಾಹಕರಿಗೆ ಉಚಿತವಾಗಿ ನೀಡುವ ಮಹತ್ವದ ನಿರ್ಧಾರ ಪ್ರಕಟಿಸಲಾಗಿದೆ. ಇದೊಂದು ದೇಶದ ಯುವಕರಿಗೆ ಸಿಗಬಹುದಾದ ಅತ್ಯಂತ ದೊಡ್ಡ ಡಿಜಿಟಲ್ ಗಿಫ್ಟ್ ಎಂದು ಹೇಳಬಹುದು.

    ಭಾರೀ ಪಾಲುದಾರಿಕೆ, ರಿಲಯನ್ಸ್ + ಗೂಗಲ್:

    ಅಕ್ಟೋಬರ್ 30ರಂದು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಗೂಗಲ್ ದೊಡ್ಡ ಮಟ್ಟದ ಎಐ ಸಹಕಾರವನ್ನು ಘೋಷಿಸುತ್ತಾ, ಭಾರತದಲ್ಲಿ ಎಐ ಅಳವಡಿಕೆಯನ್ನು ವೇಗಗೊಳಿಸುವ ಗುರಿ ಹೊಂದಿವೆ. ಈ ಪಾಲುದಾರಿಕೆಯ ಮೂಲಕ Jio 5G ಬಳಕೆದಾರರಿಗೆ ಗೂಗಲ್‌ನ ಜೆಮಿನಿ ಪ್ರೊ ಸೇವೆಗಳನ್ನು ಉಚಿತ ಮಾಡಲು ನಿರ್ಧರಿಸಲಾಗಿದೆ.

    ಯಾರು ಈ ಆಫರ್ ಪಡೆಯಬಹುದು?:

    ಪ್ರಾರಂಭದಲ್ಲಿ 18 ರಿಂದ 25 ವರ್ಷದೊಳಗಿನ ಜಿಯೋ ಗ್ರಾಹಕರು.

    ನಂತರ ಎಲ್ಲಾ ಜಿಯೋ ಬಳಕೆದಾರರಿಗೆ ಹಂತ ಹಂತವಾಗಿ ವಿಸ್ತರಣೆ.

    5G ಅನ್ಲಿಮಿಟೆಡ್ ಪ್ಲಾನ್ ಹೊಂದಿರುವವರಿಗೆ ಮಾತ್ರ ಈ ಸದುಪಯೋಗ.

    18 ತಿಂಗಳು ಉಚಿತ, ಏನು ಸಿಗಲಿದೆ?:

    ಈ ಆಫರ್ ಮೌಲ್ಯ ಸುಮಾರು ₹35,100, ಮತ್ತು ಇದರಲ್ಲಿ ಒಳಗೊಂಡಿರುವವು,

    Google Gemini 2.5 Pro ಪ್ರವೇಶ.

    ಎಐ ಮೂಲಕ ಸಂಭ್ರಮದ ಮಟ್ಟದ ಚಿತ್ರಗಳು, ವಿಡಿಯೋಗಳು, ಕಂಟೆಂಟ್ ಕ್ರಿಯೇಷನ್, ಸಂಶೋಧನೆ, ಅಪ್ಲಿಕೇಶನ್ ಅಭಿವೃದ್ಧಿ.

    Nano, Banana, Vio 3.1 AI ಮಾದರಿಗಳಿಗೆ ಪ್ರವೇಶ.

    ಇವುಗಳ ಮೂಲಕ ಬಳಕೆದಾರರು ಹೆಚ್ಚು ನಿಖರವಾದ, ಸ್ಮಾರ್ಟ್ ಮತ್ತು ಸೃಜನಶೀಲ ಫಲಿತಾಂಶಗಳನ್ನು ಪಡೆಯಬಹುದು.

    Notebook LM – Advance Research Tools.

    ವಿದ್ಯಾರ್ಥಿಗಳು, ಸಂಶೋಧಕರು, ಸ್ಟಾರ್ಟ್‌ಅಪ್‌ಗಳಿಗೆ ಹೈ-ಎಂಡ್ ಎಐ ನೋಟ್‌ಬುಕ್ ವ್ಯವಸ್ಥೆ.

    2TB Google Cloud Storage

    ಭಾರೀ ಫೈಲ್‌ಗಳು, ಡೇಟಾ, ಫೋಟೋ ವೀಡಿಯೊಗಳಿಗೆ ಸಾಕಷ್ಟು ಸಂಗ್ರಹಣೆ.

    ಎಐ ಮೂಲಕ 145 ಕೋಟಿಯವರಿಗೂ ಸೇವೆ, Mukesh Ambani:

    ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿರುವಂತೆ,  ಭಾರತದ 145 ಕೋಟಿ ಜನರಿಗೆ ಎಐ ಸೇವೆಗಳನ್ನು ತಲುಪಿಸುವುದು ನಮ್ಮ ಗುರಿ. ಗೂಗಲ್‌ನೊಂದಿಗೆ ಕೈಜೋಡಿಸುವ ಮೂಲಕ, ಭಾರತ ಎಐ ಮೂಲಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಲಿದೆ.

    ಗೂಗಲ್ ಸಿಇಒ ಸುಂದರ್ ಪಿಚೈ ಮಾತನಾಡಿ, ರಿಲಯನ್ಸ್ ಜೊತೆಗಿನ ಈ ಹೊಸ ಎಐ ಸಹಯೋಗವು ಭಾರತದ ಡಿಜಿಟಲ್ ಭವಿಷ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ಜಿಯೋ ಬಳಕೆದಾರರಿಗೆ ಗೂಗಲ್‌ನ ಅತ್ಯಾಧುನಿಕ ಎಐ ಪರಿಕರಗಳನ್ನು ತಲುಪಿಸುವುದು ದೊಡ್ಡ ಹೆಜ್ಜೆ.

    ಭಾರತ ಎಐ ಕೇಂದ್ರವಾಗುವ ದಿಕ್ಕಿನಲ್ಲಿ ದೊಡ್ಡ ಹೆಜ್ಜೆ:

    ಭಾರತೀಯ ಕಂಪನಿಗಳಿಗೆ Tensor Processing Units (TPUs) ಪ್ರವೇಶ, ದೊಡ್ಡ ಎಐ ಮಾದರಿಗಳನ್ನು ರಚಿಸುವ ಮೂಲಸೌಕರ್ಯ, Gemini Enterprise ಬಳಕೆಯನ್ನು ಭಾರತೀಯ ವ್ಯವಹಾರಗಳಿಗೆ ವಿಸ್ತರಿಸುವ ಗುರಿಯಾಗಿದೆ.

    ರಿಲಯನ್ಸ್ ಇಂಟೆಲಿಜೆನ್ಸ್ ಈಗ Google Cloud Strategic Partner, ಆದ್ದರಿಂದ ಭಾರತದಲ್ಲಿ ಎಐ ಅಳವಡಿಕೆ ವೇಗವಾಗಿ ಹೆಚ್ಚಲಿದೆ.

    apvc-iconPost Views: 11
  • ಗ್ಯಾರಂಟಿ ಯೋಜನೆಗಳಿಂದ ಬೇರೆ ಅನುದಾನಗಳಿಗೆ ಅಡ್ಡಿಯಾಗುತ್ತಿದೆ- ಜಮೀರ್ ಅಹ್ಮದ್

    ಗ್ಯಾರಂಟಿ ಯೋಜನೆಗಳಿಂದ ಬೇರೆ ಅನುದಾನಗಳಿಗೆ ಅಡ್ಡಿಯಾಗುತ್ತಿದೆ- ಜಮೀರ್ ಅಹ್ಮದ್

    ಸತ್ಯಕಾಮ ವಾರ್ತೆ ವಿಜಯನಗರ:

    ವಿಜಯನಗರದ ಕೂಡ್ಲಿಗಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಸಾರಿಗೆ ಸಚಿವ ಜಮೀರ್ ಅಹಮದ್ ಖಾನ್ ಮಾಡಿದ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗುತ್ತಿದೆ. ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ಜನರಿಗೆ ನೇರ ಲಾಭವಾಗುತ್ತಿದ್ದರೂ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಕಷ್ಟವಾಗುತ್ತಿದೆ ಎಂಬ ಮಾತುಗಳನ್ನು ಈಗ ಸಚಿವರೇ ಬಾಯ್ಬಿಟ್ಟಿದ್ದಾರೆ.

    ಸಭೆಯಲ್ಲಿ ಮಾತನಾಡಿದ ಜಮೀರ್‌ ಅಹಮದ್‌ ಖಾನ್ ಅವರು, ಪ್ರತಿ ವರ್ಷ ಗ್ಯಾರಂಟಿ ಯೋಜನೆಗಳಿಗೆ ಸುಮಾರು ₹55 ಸಾವಿರ ಕೋಟಿಯಿಂದ ₹60 ಸಾವಿರ ಕೋಟಿವರೆಗೆ ಅನುದಾನ ಬೇಕಾಗುತ್ತದೆ ಎಂದರು. ಈ ಮಹತ್ತರ ಮೊತ್ತವನ್ನು ಪೂರೈಸುವಲ್ಲಿ ಸರ್ಕಾರಕ್ಕೆ ಬರುವ ಒತ್ತಡವೇ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ತೊಂದರೆ ಉಂಟುಮಾಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

    ಇದೇ ಸಂದರ್ಭದಲ್ಲಿ, ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸರನ್ನು ಹೊಗಳಿದ ಸಚಿವರು, “ನಮ್ಮ ಶಾಸಕರು ತಮ್ಮ ಕ್ಷೇತ್ರದ ಜನರಿಗಾಗಿ ಯಾವ ಮಟ್ಟಕ್ಕೂ ಹೋಗ್ತಾರೆ. ಅನುದಾನಕ್ಕಾಗಿ ಕಾಲಿಗೆ ಬಿದ್ದು ಕೇಳ್ತಾರೆ. ಅಣ್ಣ, ನಮ್ಮ ಕ್ಷೇತ್ರದ ಸಮಸ್ಯೆ ಪರಿಹರಿಸ್ಬೇಕು ಅಂತ ಮನವಿ ಮಾಡ್ತಾರೆ” ಎಂದು ಹೇಳಿದರು. ಆದರೆ ಇದೇ ಮಾತಿನ ಮಧ್ಯೆ ಗ್ಯಾರಂಟಿ ಯೋಜನೆಗಳಿಂದ ಅನುದಾನ ತಡೆಯಾಗುತ್ತಿದೆ ಎಂಬ ಅಂಶವನ್ನೂ ಅವರು ಅನಿವಾರ್ಯವಾಗಿ ಒಪ್ಪಿಕೊಂಡರು.

    ಸಚಿವರ ಈ ಹೇಳಿಕೆ, ವಿಪಕ್ಷಗಳು ಹಲವು ದಿನಗಳಿಂದ ಮಾಡುತ್ತಿದ್ದ “ಗ್ಯಾರಂಟಿ ಯೋಜನೆಗಳ ಭಾರದಿಂದ ರಾಜ್ಯದ ಖಜಾನೆ ಬತ್ತಿದೆ, ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ” ಎಂಬ ಆರೋಪಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಪಟುತೆ ಕುರಿತು ನಡೆಯುತ್ತಿದ್ದ ವಾದ ವಿವಾದಕ್ಕೆ ಇದೀಗ ಸರ್ಕಾರದ ಮಂತ್ರಿಯೇ ಬಲಪಡೆಯುವಂತಹ ಹೇಳಿಕೆ ಕೊಟ್ಟಿರುವುದು ವಿಶೇಷ.

    ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಜನಸಾಮಾನ್ಯರಲ್ಲಿ ಯೋಜನೆಗಳು ಜನಪ್ರಿಯವಾದರೂ, ಆಡಳಿತಾತ್ಮಕವಾಗಿ ಹಾಗೂ ಹಣಕಾಸು ನಿರ್ವಹಣೆಯ ದೃಷ್ಟಿಯಿಂದ ಹೊಸ ಸವಾಲುಗಳು ಎದುರಾದಂತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗಳು ರಾಜ್ಯದ ಅಭಿವೃದ್ಧಿ ಗತಿಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಅನ್ನುವುದನ್ನು ಕಾದು ನೋಡಬೇಕಿದೆ.

    apvc-iconPost Views: 43
  • ದರ್ಶನ್–ಪವಿತ್ರಾ: ಹತ್ತು ವರ್ಷ ಹಳೆಯ ಫೋಟೋ ಮತ್ತೆ ಸಂಚಲನ

    ದರ್ಶನ್–ಪವಿತ್ರಾ: ಹತ್ತು ವರ್ಷ ಹಳೆಯ ಫೋಟೋ ಮತ್ತೆ ಸಂಚಲನ

    ಸ್ಯಾಂಡಲ್‍ವುಡ್‌ ಚರ್ಚೆಯಲ್ಲಿ ಮತ್ತೆ ದರ್ಶನ್ ಮತ್ತು ಪವಿತ್ರಾ ಗೌಡರ ಹೆಸರು ಕೇಳಿಬರುತ್ತಿದೆ. ಇಬ್ಬರೂ ಒಟ್ಟಿಗೆ ಜೀವನ ನಡೆಸಿದ್ದರು ಎಂಬ ಮಾತು ಹಲವಾರು ಬಾರಿ ಕೇಳಿಬಂದಿದ್ದರೂ, “ಇವರು ಮದುವೆಯಾಗಿದ್ದಾರೆ” ಎಂಬ ವಿಷಯಕ್ಕೆ ಎಂದಿಗೂ ಅಧಿಕೃತ ದೃಢೀಕರಣ ಬಂದಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈಗ ತೆರೆದುಕೊಂಡಿರುವ ಹಳೆ ಫೋಟೋಗಳು, ಚರ್ಚೆಗೆ ಮತ್ತಷ್ಟು ಆಹಾರ ನೀಡಿದ್ದಾರೆ.

    ಇತ್ತೀಚೆಗಷ್ಟೇ ವೈರಲ್ ಆದ ರೀಲ್ ವಿಡಿಯೋದಲ್ಲಿ ದರ್ಶನ್ ಮತ್ತು ಪವಿತ್ರಾ ಮದುವೆಯ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಫೋಟೋದಲ್ಲಿ ಪವಿತ್ರಾ ಅವರ ಕತ್ತಿನಲ್ಲಿರುವ ಅರಿಶಿಣದ ದಾರ, ದರ್ಶನ್ ಅವರ ಉಡುಗೆ ಹಾಗೂ ಇಬ್ಬರ ಭಾವಭಂಗಿ, ಅಭಿಮಾನಿಗಳಲ್ಲಿ “ಇದು ಅವರ ಮದುವೆಯ ಫೋಟೋವೇ?” ಎಂಬ ಪ್ರಶ್ನೆಯನ್ನು ಹುಟ್ಟಿಸಿದೆ. ಸುಮಾರು ಹತ್ತು ವರ್ಷಗಳ ಹಿಂದೆ ತೆಗೆಯಲ್ಪಟ್ಟಿದೆ ಎನ್ನಲಾಗಿರುವ ಈ ಫೋಟೋಗಳು ಈಗ ಮತ್ತೆ ವೈರಲ್ ಆಗುತ್ತಿದ್ದು, ಅನೇಕ ವಾದ ಪ್ರತಿವಾದಗಳಿಗೆ ಕಾರಣವಾಗಿವೆ.

    ಆ ಸಮಯದಲ್ಲೇ ದರ್ಶನ್ ಅವರಿಗೆ ಅಪಘಾತವಾಗಿ ಕೈಗೆ ಗಾಯವಾಗಿದ್ದ ಸಂದರ್ಭದಲ್ಲಿ, ಪವಿತ್ರಾ ಅವರು ಅವರಿಗೆ ಊಟ ಮಾಡಿಸುತ್ತಿರುವ ಕ್ಷಣಗಳೂ ಫೋಟೋಗಳಲ್ಲಿ ಕಾಣಿಸುತ್ತಿವೆ. ಈ ಅನೌಪಚಾರಿಕ ದೃಶ್ಯಗಳು ಇಬ್ಬರ ನಡುವಿನ ಆತ್ಮೀಯತೆಯನ್ನು ಮತ್ತೊಮ್ಮೆ ನೆನಪಿಗೆ ತರುತ್ತಿವೆ.

    ಆದರೆ, ಗಮನಿಸಬೇಕಾದ ಸಂಗತಿ ಏನೆಂದರೆ ಈವರೆಗೆ ಇವರು ಮದುವೆಯಾಗಿರುವುದಕ್ಕೆ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ಈ ಹಳೆಯ ಫೋಟೋಗಳ ಮೇಲಿನ ಚರ್ಚೆ ಹೆಚ್ಚುತ್ತಿದ್ದಂತೆಯೇ, ಅಭಿಮಾನಿಗಳಲ್ಲಿ ಕುತೂಹಲ ತಾರಕ್ಕೇರಿದೆ.

    ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು “ಇದು ನಿಜವಾದ ಮದುವೆಯೇ? ಇಲ್ಲಾ ಫೋಟೋಶೂಟ್‌ನಾ?” ಎಂದು ಅಚ್ಚರಿಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ

    ಫೋಟೋಗಳು ವೈರಲ್ ಆದರೂ, ನಿಜ ಏನು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟತೆ ಸಿಗಬೇಕಿದೆ. ಇಷ್ಟರಲ್ಲೇ, ದರ್ಶನ್ ಪವಿತ್ರಾ ಜೋಡಿ ಕುರಿತು ಊಹಾಪೋಹಗಳು ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದು ಆಗಿವೆ.

    apvc-iconPost Views: 31