Blog

  • ಕೆಲಸದ ನಂತರ ಸಂಪರ್ಕ ಕಡಿತಗೊಳಿಸುವ ಹಕ್ಕು ಮಂಡನೆ!

    ಕೆಲಸದ ನಂತರ ಸಂಪರ್ಕ ಕಡಿತಗೊಳಿಸುವ ಹಕ್ಕು ಮಂಡನೆ!

    ಆಧುನಿಕ ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮತ್ತು ವೈಯಕ್ತಿಕ ಜೀವನದ ಗಡಿಗಳು ನಿಧಾನವಾಗಿ ಬಗೆಹರಿಯುತ್ತಿವೆ. ಡಿಜಿಟಲ್ ತಂತ್ರಜ್ಞಾನಗಳ ಬಳಕೆ ಹೆಚ್ಚಾಗುತ್ತಿದ್ದಂತೆ, ಉದ್ಯೋಗಿಗಳು ಅಧಿಕೃತ ಕೆಲಸದ ಅವಧಿ ಮುಗಿದರೂ ಕೆಲಸಕ್ಕೆ ಸಂಬಂಧಿಸಿದ ಕರೆಗಳು, ಇಮೇಲ್‌ಗಳು ಹಾಗೂ ಆನ್‌ಲೈನ್‌ ಸಭೆಗಳ ಮೂಲಕ ನಿರಂತರವಾಗಿ ಸಂಪರ್ಕದಲ್ಲಿರಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಉದ್ಯೋಗಿಗಳ ಆರೋಗ್ಯ, ಕುಟುಂಬ-ಸಮಾಜ ಜೀವನ ಹಾಗೂ ಮಾನಸಿಕ ಸಮತೋಲನಕ್ಕೆ ಹಾನಿಯಾಗುತ್ತಿರುವುದು ಹಲವು ಅಧ್ಯಯನಗಳಿಂದ ದೃಢವಾಗಿದೆ.

    ಈ ಹಿನ್ನೆಲೆಯಲ್ಲಿ, ಕೆಲಸದ ಸಮಯದ ಹೊರಗೆ ಉದ್ಯೋಗಿಗಳಿಗೆ ಸಂಪರ್ಕ ಕಡಿತಗೊಳಿಸುವ ಹಕ್ಕು(Right to Disconnect) ನೀಡುವ ಉದ್ದೇಶದಿಂದ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಸಂಸತ್ತಿನಲ್ಲಿ ಒಂದು ಮಹತ್ವದ ಖಾಸಗಿ ಮಸೂದೆ (Private Bill) ಮಂಡಿಸಿದ್ದಾರೆ.

    ಮಸೂದೆಯ ಮುಖ್ಯ ಅಂಶಗಳು:

    ಅಧಿಕೃತ ಕೆಲಸದ ಅವಧಿ ಮುಗಿದ ನಂತರ ಹಾಗೂ ರಜೆಗಳ ವೇಳೆ ಕಂಪನಿ ಕರೆಗಳು ಮತ್ತು ಇಮೇಲ್‌ಗಳಿಗೆ ಪ್ರತಿಕ್ರಿಯಿಸದಿರುವ ಹಕ್ಕು ಉದ್ಯೋಗಿಗಳಿಗೆ ದೊರೆಯಬೇಕು.

    ಉದ್ಯೋಗಿಗಳ ಅಭ್ಯುದಯ, ಕೆಲಸದ ಒತ್ತಡ ನಿಯಂತ್ರಣ ಹಾಗೂ ಆರೈಕೆಗೆ ನೌಕರರ ಕಲ್ಯಾಣ ಪ್ರಾಧಿಕಾರ (Employee Welfare Authority) ರಚನೆ.

    ಕೆಲಸದ ಅನುಕೂಲತೆ ಮತ್ತು ಮಾನಸಿಕ ಆರೋಗ್ಯವನ್ನು ರಕ್ಷಿಸುವ ಪ್ರಾಥಮಿಕ ಗುರಿ.

    ಖಾಸಗಿ ಮಸೂದೆ ಎಂದರೇನು?:

    ಸಚಿವರಲ್ಲದ ಸಂಸತ್ ಸದಸ್ಯರು ಮಂಡಿಸುವ ಮಸೂದೆಗೆ ಖಾಸಗಿ ಮಸೂದೆ ಎಂದು ಕರೆಯಲಾಗುತ್ತದೆ.

    • ಇವು ಸರ್ಕಾರಿ ಮಸೂದೆಗಳಿಗಿಂತ ಭಿನ್ನವಾಗಿದ್ದು,
    • ಸರ್ಕಾರದಿಂದ ನೇರವಾಗಿ ಪ್ರಸ್ತಾಪವಾಗುವುದಿಲ್ಲ.

    ಸಾಮಾನ್ಯವಾಗಿ ನಿರ್ದಿಷ್ಟ ಸಮಸ್ಯೆ, ಗುಂಪು ಅಥವಾ ಪ್ರದೇಶಕ್ಕೆ ಸಂಬಂಧಿತ ಕಾನೂನು ಬದಲಾವಣೆ ಅಥವಾ ಹೊಸ ಕಾನೂನು ಪ್ರಸ್ತಾಪವಾಗಿರುತ್ತದೆ.

    ಇದನ್ನು ಅಂಗೀಕರಿಸುವ ವಿಧಾನವು ಸರ್ಕಾರಿ ಮಸೂದೆಗಳ ಹಾಗೆಯೇ ಕಠಿಣ ಮತ್ತು ದೀರ್ಘ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ.

    ಮಾನ್ಯತೆ ದೊರೆಯುವ ಸಾಧ್ಯತೆ?:

    ಭಾರತೀಯ ಸಂಸತ್ತಿನ ಅನುಭವ ಹೇಳುವು ಪ್ರಕಾರ, ಬಹುಪಾಲು ಖಾಸಗಿ ಮಸೂದೆಗಳು ಚರ್ಚೆಯ ಮಟ್ಟದಲ್ಲೇ ನಿಲ್ಲುತ್ತವೆ. ಸರ್ಕಾರ ತನ್ನ ಅಭಿಪ್ರಾಯವನ್ನು ನೀಡಿದ ನಂತರ

    ಸದಸ್ಯರು ಸ್ವಯಂ ಮಸೂದೆಯನ್ನು ಹಿಂತೆಗೆದುಕೊಳ್ಳುವ ಸಂದರ್ಭಗಳು ಸಾಮಾನ್ಯ. ಆದ್ದರಿಂದ, ಈ ಮಸೂದೆಯೂ ಅಂಗೀಕರಿಸಿಕೊಳ್ಳುವ ಅವಕಾಶ ಬಹಳ ಕಡಿಮೆ ಎಂಬುದು ತಜ್ಞರ ಅಂದಾಜು.

    apvc-iconPost Views: 2
  • ಲಕ್ಷಾಂತರ ರೂ ಮೌಲ್ಯದ ಆಭರಣ ದೋಚಿದ ಕಳ್ಳರು

    ಲಕ್ಷಾಂತರ ರೂ ಮೌಲ್ಯದ ಆಭರಣ ದೋಚಿದ ಕಳ್ಳರು

    ಸುರಪುರ: ಪಟ್ಟಣದ ನಗರಸಭೆಯ ಕಿರಿಯ ಅಭಿಯಂತರ ಮಹೇಶ್ ಮಾಳಗಿ ಅವರ ಬೊಂಬಾಯಿ ಬಸಣ್ಣ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿರುವ ಮನೆಯಲ್ಲಿ ಮಂಗಳವಾರ ರಾತ್ರಿ ನಡೆದಿರುವ ಕಳ್ಳತನದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಕುಟುಂಬದವರು ಮನೆಯಿಂದ ಹೊರಗಿದ್ದ ಸಂದರ್ಭ ಮನೆಯ ಬೀಗ ಮುರಿದು ಚಿನ್ನ–ಬೆಳ್ಳಿ ಆಭರಣಗಳು ಹಾಗೂ ನಗದು ಸೇರಿದಂತೆ ಸುಮಾರು ₹46.11 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

    ಮಂಗಳವಾರ ಸಂಜೆ 7.30ರಿಂದ ರಾತ್ರಿ 10.30ರ ನಡುವೆ ಸುರಪುರದ ದೀವಳಗುಡ್ಡದಲ್ಲಿ ಸಹೋದರನ ಪತ್ನಿಯ ಮನೆಯಲ್ಲಿ ದೇವರ ಕಾರ್ಯಕ್ಕೆ ಕುಟುಂಬದವರು ತೆರಳಿದ್ದರು. ಈ ವೇಳೆ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕಳ್ಳರು ಬೀಗ ಮುರಿದು ಒಳನುಗ್ಗಿದ್ದಾರೆ.

    ಮನೆಯಲ್ಲಿ ಇತ್ತಿದ್ದ 642 ಗ್ರಾಂ ಬಂಗಾರದ ಆಭರಣಗಳು (ಮೌಲ್ಯ ₹44.94 ಲಕ್ಷ), 1295 ಗ್ರಾಂ ಬೆಳ್ಳಿಯ ಆಭರಣಗಳು (₹77,700) ಮತ್ತು ₹40,000 ನಗದು ಸೇರಿ ಒಟ್ಟು ₹46,11,700 ಮೌಲ್ಯದ ವಸ್ತುಗಳು ಕಳುವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

    ಕಾರ್ಯಕ್ರಮ ಮುಗಿಸಿ ಮನೆಗೆ ಬಂದು ಬೀಗ ಮುರಿದಿರುವುದು ಕಂಡ ಕುಟುಂಬದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಸುರಪುರ ಠಾಣೆಗೆ ಅಧಿಕೃತ ದೂರು ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾದಗಿರಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್, ಸುರಪುರ ಉಪವಿಭಾಗದ ಪ್ರಭಾರಿ ಡಿವೈಎಸ್ಪಿ ನಾಗರಾಜ, ಪಿಐ ಉಮೇಶ್ ನಾಯಕ್, ಪಿಎಸ್ಐ ಕೃಷ್ಣಾ ಸುಬೇದಾರ, ಸಿದ್ದಣ್ಣ ಯಡ್ರಾಮಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಇದುವರೆಗೆ ಕಳ್ಳರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    apvc-iconPost Views: 128
  • ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್! ಪ್ರಯಾಣದ ವೇಳೆ ಫೋನ್‌ ಮೂಲಕ ಅಪಾಯಕಾರಿ ಪ್ರದೇಶಗಳ ಬಗ್ಗೆ ಎಚ್ಚರಿಕೆ!

    ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್! ಪ್ರಯಾಣದ ವೇಳೆ ಫೋನ್‌ ಮೂಲಕ ಅಪಾಯಕಾರಿ ಪ್ರದೇಶಗಳ ಬಗ್ಗೆ ಎಚ್ಚರಿಕೆ!

    ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಜಿಯೋ ಬಳಕೆದಾರರಿಗೆ ಈಗ ಪ್ರಯಾಣ ಇನ್ನಷ್ಟು ಸುರಕ್ಷಿತವಾಗಲಿದೆ. ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳನ್ನು ಕಡಿಮೆ ಮಾಡಲು ರಿಲಯನ್ಸ್‌ ಜಿಯೋ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಜೋಡಿಸಿ ಹೊಸ ಎಚ್ಚರಿಕೆ ವ್ಯವಸ್ಥೆಯನ್ನು ಆರಂಭಿಸಲು ಮುಂದಾಗಿವೆ. ದೇಶದಾದ್ಯಂತ 4G ಮತ್ತು 5G ನೆಟ್‌ವರ್ಕ್ ಬಳಸುವ ಜಿಯೋ ಗ್ರಾಹಕರಿಗೆ, ತಮ್ಮ ವಾಹನವು ಅಪಾಯಕಾರಿ ಪ್ರದೇಶವನ್ನು ಸಮೀಪಿಸಿದ ಕ್ಷಣದಲ್ಲೇ ನೇರವಾಗಿ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ತಲುಪುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ.

    ಈ ಹೊಸ ವ್ಯವಸ್ಥೆಯ ಮುಖ್ಯ ಉದ್ದೇಶ ಒಂದೇ ಹೆದ್ದಾರಿಯಲ್ಲಿ ಪ್ರಯಾಣಿಸುವ ಜನರು ಅಪಾಯದ ಪ್ರದೇಶಕ್ಕೆ ತಲುಪುವ ಮುಂಚಿತವಾಗಿಯೇ ಮಾಹಿತಿ ಪಡೆದು ಎಚ್ಚರಿಕೆಯಿಂದ ಸಾಗಲು ಅವಕಾಶ ಒದಗಿಸುವುದು. ಹೆದ್ದಾರಿಯ ಕೆಲವೆಡೆ ದಟ್ಟ ಮಂಜು ಆವರಿಸಿರಬಹುದು, ಕೆಲವೆಡೆ ಜಾನುವಾರುಗಳು ರಸ್ತೆ ದಾಟುವುದು ಸಾಮಾನ್ಯ, ಕೆಲವು ಭಾಗಗಳಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿರುತ್ತವೆ, ಮತ್ತೆ ಕೆಲವೊಂದು ಮಾರ್ಗಗಳಲ್ಲಿ ಧಿಡೀರ್‌ ತಿರುವುಗಳು ಮತ್ತು ಡೈವರ್ಶನ್‌ಗಳು ಚಾಲಕರನ್ನು ಗೊಂದಲಕ್ಕೊಳಪಡಿಸುತ್ತವೆ. ಇಂತಹ ಎಲ್ಲ ಸಂದರ್ಭಗಳಲ್ಲಿಯೂ, ಜಿಯೋ ಟವರ್‌ಗಳ ಮೂಲಕ ನೇರವಾಗಿ ಆ ಪ್ರದೇಶದ ಮಾಹಿತಿ ಗ್ರಾಹಕರ ಫೋನ್‌ಗೆ ತಲುಪಲಿದೆ.

    ಈ ಎಚ್ಚರಿಕೆಗಳು ಎಸ್‌ಎಂಎಸ್‌, ವಾಟ್ಸಾಪ್‌ ಸಂದೇಶ ಮತ್ತು ಹೈ ಪ್ರಿಯಾರಿಟಿ ವಾಯ್ಸ್ ಕಾಲ್‌ಗಳ ರೂಪದಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗುತ್ತದೆ. ವಿಶೇಷವೆಂದರೆ, ನೆಟ್‌ವರ್ಕ್‌ ಸಮಸ್ಯೆಯಿರುವ ಪ್ರದೇಶಗಳಲ್ಲಿದ್ದರೂ ಈ ಅಲರ್ಟ್‌ಗಳು ತಲುಪುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ ಎನ್ನುವುದು ಗಮನಾರ್ಹ ಸಂಗತಿ. ರಸ್ತೆ ಸಾರಿಗೆ ಸಚಿವಾಲಯದ ಪ್ರಕಾರ, ಈ ವ್ಯವಸ್ಥೆಗೆ ಹೊಸ ಹಾರ್ಡ್‌ವೇರ್‌ ನಿರ್ಮಾಣದ ಅಗತ್ಯವಿಲ್ಲ; ಜಿಯೋ ಈಗಾಗಲೇ ಹೊಂದಿರುವ ಟೆಲಿಕಾಂ ಟವರ್‌ಗಳ ನೆಟ್‌ವರ್ಕ್‌ನನ್ನೇ ಬಳಸಲಾಗುತ್ತಿದೆ. ಜೊತೆಗೆ ‘ರಾಜಮಾರ್ಗಯಾತ್ರಾ’ ಆಪ್ ಮತ್ತು 1033 ತುರ್ತು ಸಹಾಯವಾಣಿ ಸಂಖ್ಯೆಯೊಂದಿಗೆ ಕೂಡ ಈ ಅಲರ್ಟ್‌ಗಳನ್ನು ಹಂತ ಹಂತವಾಗಿ ನೀಡಲಾಗುತ್ತದೆ.

    ತೊಂದರೆಗಳು ಹೆಚ್ಚು ಇರುವ ಹೆದ್ದಾರಿ ಸೆಕ್ಷನ್‌ಗಳಲ್ಲಿ ಸಂಚರಿಸುವ ಎಲ್ಲ ಜಿಯೋ ಬಳಕೆದಾರರಿಗೆ ಸ್ವಯಂಚಾಲಿತವಾಗಿ ಈ ಎಚ್ಚರಿಕೆಗಳು ತಲುಪುತ್ತವೆ. ದೇಶದಲ್ಲಿ 50 ಕೋಟಿಗೂ ಹೆಚ್ಚು ಜನರು ಜಿಯೋ ಬಳಕೆ ಮಾಡುತ್ತಿರುವುದರಿಂದ, ಈ ವ್ಯವಸ್ಥೆ ವ್ಯಾಪಕ ಮಟ್ಟದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯಕವಾಗಲಿದೆ. ಮೊದಲ ಹಂತದಲ್ಲಿ ಆಯ್ದ ಹೆದ್ದಾರಿಗಳಲ್ಲಿ ಪೈಲಟ್‌ ಪ್ರಾಜೆಕ್ಟ್‌ ರೂಪದಲ್ಲಿ ಆರಂಭಿಸಿ, ನಂತರ ಪೂರ್ಣ ದೇಶಕ್ಕೆ ವಿಸ್ತರಿಸುವ ಯೋಜನೆ ಸಚಿವಾಲಯದ ಬಳಿ ಇದೆ ಎಂದು ತಿಳಿದುಬಂದಿದೆ.

    ದೆಶದ ಹೆದ್ದಾರಿಗಳನ್ನು ಸುರಕ್ಷಿತಗೊಳಿಸಲು ಟೆಲಿಕಾಂ ತಂತ್ರಜ್ಞಾನವನ್ನು ಈ ರೀತಿ ಉಪಯೋಗಿಸುವುದು ಹೊಸ ಪ್ರಯತ್ನ ಎನ್ನಬಹುದು. ಚಾಲಕರಿಗೆ ನೇರವಾಗಿ ಎಚ್ಚರಿಕೆ ನೀಡುವ ಈ ಕ್ರಮ, ದೂರ ಪ್ರಯಾಣ ಮಾಡುವವರಿಗೆ ಒಂದು ರಕ್ಷಣಾ ಕವಚದಂತೆ ಕೆಲಸ ಮಾಡಲಿದೆ. ಜಿಯೋ–NHAI ಒಟ್ಟಿಗೆ ಹೆದ್ದಾರಿ ಸುರಕ್ಷತೆಯನ್ನು ಹೊಸ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಜ್ಜಾಗಿವೆ ಎನ್ನಬಹುದು

    apvc-iconPost Views: 7
  • ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್ಸ್ಟಾಲ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

    ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್ಸ್ಟಾಲ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

    ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ದೈಹಿಕ-ಸಾಮಾಜಿಕ ಬದುಕಿನ ಅವಿಭಾಜ್ಯ ಅಂಗವಾಗಿ ಪರಿಣಮಿಸಿವೆ. ಸಂವಹನ, ಆರ್ಥಿಕ ವಹಿವಾಟು, ವೈಯಕ್ತಿಕ ಮಾಹಿತಿ ಸಂಗ್ರಹಣೆ ಇವೆಲ್ಲವೂ ಸ್ಮಾರ್ಟ್‌ಫೋನ್ ಅವಲಂಬನೆಯ ಮೇಲೇ ನಿಂತಿದೆ. ಇದರಿಂದ ಸೈಬರ್ ಅಪರಾಧಗಳು, ಸಿಮ್ ಕಾರ್ಡ್ ದುರುಪಯೋಗ ಮತ್ತು ಡಿಜಿಟಲ್ ಟ್ರ್ಯಾಕಿಂಗ್‌ಗಳಂತಹ ಭದ್ರತಾ ಸವಾಲುಗಳು ವೇಗವಾಗಿ ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲೇ ನಾಗರಿಕರ ಸುರಕ್ಷತೆ ಮತ್ತು ಮೊಬೈಲ್ ಜಾಲದ ಪಾರದರ್ಶಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಸಂಚಾರ್ ಸಾಥಿ’ ಆ್ಯಪ್ ಅನ್ನು ಪರಿಚಯಿಸಿತ್ತು.

    ಆದರೆ, ಇತ್ತೀಚೆಗೆ ಈ ಆ್ಯಪ್‌ನ್ನು ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಪೂರ್ವ-ಸ್ಥಾಪನೆ (Pre-Install) ಮಾಡುವುದು ಕಡ್ಡಾಯ ಎಂದು ಸರ್ಕಾರದ ಆದೇಶ ಬಂದಿತ್ತು. ಇದರಿಂದ ರಾಜಕೀಯ ವಲಯದಿಂದ, ವಿಶೇಷವಾಗಿ ವಿರೋಧ ಪಕ್ಷಗಳಿಂದ, ತೀವ್ರ ಪ್ರಶ್ನೆಗಳು ಮತ್ತು ಟೀಕೆಗಳು ಕೇಳಿಬಂದವು. ಮಾಹಿತಿ ಸ್ವಾತಂತ್ರ್ಯ, ನಾಗರಿಕರ ಗೌಪ್ಯತೆ, ಮತ್ತು ಸರ್ಕಾರದ ನಿಗಾವಹಿಸುವ ನೀತಿ ಬಗ್ಗೆ ಸಂಶಯ ವ್ಯಕ್ತವಾಗಿತ್ತು.

    ಈ ಹಿನ್ನೆಲೆಯಲ್ಲಿ ದೂರ ಸಂಪರ್ಕ ಇಲಾಖೆ (DoT) ಮಹತ್ವದ ಸ್ಪಷ್ಟನೆ ನೀಡಿದ್ದು, ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್ಸ್ಟಾಲ್ ಈಗ ಕಡ್ಡಾಯವಲ್ಲ ಎಂದು ಘೋಷಿಸಿದೆ.

    ಸರ್ಕಾರದ ಅಭಿಪ್ರಾಯ ಏನು?

    ಸೈಬರ್ ಭದ್ರತೆ ಎಲ್ಲರಿಗೂ ಲಭ್ಯವಾಗಬೇಕೆಂಬ ಉದ್ದೇಶದಿಂದಲೇ ಮೊದಲಿಗೆ ಕಡ್ಡಾಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು DoT ಹೇಳಿದೆ. ಈ ಆ್ಯಪ್‌ನ ಮೂಲಕ,

    • ನಕಲಿ ಸಿಮ್ ಕಾರ್ಡ್‌ಗಳ ವಿರುದ್ಧ ಕ್ರಮ
    • ಮೊಬೈಲ್ ಕಳೆದುಹೋದರೆ ಹೊರತೆಗೆದುಕೊಳ್ಳುವ ವ್ಯವಸ್ಥೆ
    • ಸೈಬರ್ ಮೋಸಗಳನ್ನು ತಡೆಗಟ್ಟುವ ಮಾಹಿತಿ
    • ಇಂತಹ ಸೇವೆಗಳು ನಾಗರಿಕರಿಗೆ ಲಭ್ಯವಾಗುತ್ತವೆ.

    ಆ್ಯಪ್ ಸಂಪೂರ್ಣ ಸುರಕ್ಷಿತವಾಗಿದೆ. ನಾಗರಿಕರನ್ನು ಸೈಬರ್ ದುಷ್ಟ ಶಕ್ತಿಗಳಿಂದ ಕಾಪಾಡುವ ಉದ್ದೇಶವಿದೆ ಎಂದು ಇಲಾಖೆ ತಿಳಿಸಿದೆ. ಸಮಾಜದ ವಿವಿಧ ವಲಯಗಳಲ್ಲಿ ಆ್ಯಪ್‌ ಸ್ವೀಕಾರ ಹೆಚ್ಚುತ್ತಿರುವುದನ್ನು ಗಮನಿಸಿ, ಸ್ಮಾರ್ಟ್‌ಫೋನ್ ತಯಾರಕರಿಗೆ ಪೂರ್ವ-ಸ್ಥಾಪನೆ ಕಡ್ಡಾಯದಿಂದ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ.

    ವಿರೋಧ ಪಕ್ಷಗಳ ಆಕ್ಷೇಪಣೆ ಏನು?

    ವಿಪಕ್ಷಗಳು ಆ್ಯಪ್ ಮೂಲಕ ಜನರ ವೈಯಕ್ತಿಕ ಮಾಹಿತಿ ಸಂಗ್ರಹಣೆ, ದೈನಂದಿನ ಚಟುವಟಿಕೆಗಳ ಮೇಲಿನ ನಿಗಾ, ಸರ್ಕಾರದ ಗೂಢಚರ್ಯೆಗೆ ಅವಕಾಶ ಇತ್ಯಾದಿ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದವು. ಈ ಒತ್ತಡದ ನಡುವೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

    ಸಂಚಾರ್ ಸಾಥಿ ಆ್ಯಪ್ ಬಳಕೆಯು ಸಂಪೂರ್ಣವಾಗಿ ಸ್ವಯಂಸೇವಾ (voluntary) ಆಗಿದ್ದು, ನಾಗರಿಕರು ತಮ್ಮ ಅಗತ್ಯ ಮತ್ತು ವಿಶ್ವಾಸ ಆಧಾರದಲ್ಲಿ ಡೌನ್‌ಲೋಡ್ ಮಾಡಿ ಬಳಸಿಕೊಳ್ಳಬಹುದು. ಡಿಜಿಟಲ್ ಭದ್ರತೆ ಹೆಚ್ಚಿಸುವ ಪ್ರಯತ್ನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ನಡುವಿನ ಸಮತೋಲನ ಕಾಯ್ದುಕೊಳ್ಳುವ ದಿಕ್ಕಿನಲ್ಲಿ ಈ ನಿರ್ಧಾರ ಪ್ರಮುಖ ಎನ್ನಲಾಗುತ್ತಿದೆ.

    apvc-iconPost Views: 17
  • ಆರ್‌ಎಸ್‌ಎಸ್ ವಿರೋಧಿಸಿ, ಪ್ರಿಯಾಂಕ್ ಖರ್ಗೆ ಬೆಂಬಲಕ್ಕೆ ನ.25ರಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

    ಆರ್‌ಎಸ್‌ಎಸ್ ವಿರೋಧಿಸಿ, ಪ್ರಿಯಾಂಕ್ ಖರ್ಗೆ ಬೆಂಬಲಕ್ಕೆ ನ.25ರಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

    ಯಾದಗಿರಿ: ಸಂವಿಧಾನ ವಿರೋಧಿ ಹಾಗೂ ಕಾನೂನುಬಾಹಿರ ನಡೆ ನಡೆಸುತ್ತಿರುವ ಆರ್‌ಎಸ್‌ಎಸ್ ವಿರುದ್ಧ, ಮತ್ತು “ರಾಷ್ಟ್ರಗೀತೆಯನ್ನು ಬ್ರಿಟಿಷ್ ಅಧಿಕಾರಿಗೆ ಸ್ವಾಗತಿಸಲು ಬರೆಯಲಾಗಿದೆ” ಎಂಬ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆಯನ್ನು ಖಂಡಿಸಿ, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಬಲವಾಗಿ ನ.25ರಂದು ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ತಿಳಿಸಿದ್ದಾರೆ.

    ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಂದೇ ದಿನ ಈ ಪ್ರತಿಭಟನೆ ನಡೆಯಲಿದ್ದು, ಯಾದಗಿರಿಯಲ್ಲೂ ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಸಂವಿಧಾನ ಪ್ರತಿಗಳು, ಅಂಬೇಡ್ಕರ್ ಭಾವಚಿತ್ರ, ನೀಲಿ ಧ್ವಜಗಳು, ತಮಟೆಗಳೊಂದಿಗೆ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು. ನಂತರ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗುವುದು ಎಂದರು.

    ಅಧಿಕೃತ ನೋಂದಣಿ ಇಲ್ಲದಿದ್ದರೂ ಶತಮಾನೋತ್ಸವ ಆಚರಿಸುತ್ತಿರುವ ಆರ್‌ಎಸ್‌ಎಸ್ ಮನುವಾದಿ ಚಿಂತನೆ ಹರಡುತ್ತಿದ್ದು, ಬಿಜೆಪಿಯ ಮುಖವಾಣಿ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಆರ್‌ಎಸ್‌ಎಸ್ ವಿರುದ್ಧ ಪ್ರಶ್ನೆ ಎತ್ತಿದ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬವನ್ನು ಅವಮಾನಿಸುವ ಕ್ರಮ ನಾಚಿಕೆಗೆಡು ಎಂದು ಖಂಡಿಸಿದರು.

    ನಂತರ ಮಾತನಾಡಿದ ಶಿವಲಿಂಗ ಹಸನಾಪುರ, ಸಂವಿಧಾನ–ಪ್ರಜಾಪ್ರಭುತ್ವದ ಮೌಲ್ಯಗಳನ್ನು ದುರ್ಬಲಗೊಳಿಸುವ ಶಕ್ತಿಗಳು ಸಕ್ರಿಯವಾಗಿವೆ. ಸಿಜೆಐ ಬಿ.ಆರ್. ಗವಾಯಿ ಹಾಗೂ ಅಂಬೇಡ್ಕರ್ ವಿರುದ್ಧ ನಡೆಯುತ್ತಿರುವ ಅವಹೇಳನ ಪ್ರಜಾಪ್ರಭುತ್ವಕ್ಕೆ ಅಪಾಯದ ಸೂಚನೆ ಎಂದು ಹೇಳಿದರು.

    ಪ್ರಿಯಾಂಕ್ ಖರ್ಗೆ ಅವರು ಕೇವಲ ಸಂವಿಧಾನದ ಚೌಕಟ್ಟಿನಲ್ಲಿ ನಡೆದುಕೊಳ್ಳಲು ಹೇಳಿದ್ದಕ್ಕಾಗಿ ಕೆಲ ದುಷ್ಟಶಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದು, ಜೀವ ಬೆದರಿಕೆ ಹಾಕುತ್ತಿರುವುದನ್ನು ಅವರು ಖಂಡಿಸಿದರು. ದಲಿತ ನಾಯಕರ ಮೇಲೆ ನಡೆಯುತ್ತಿರುವ ದಾಳಿ ಖಂಡನೀಯ ಇದರ ವಿರುದ್ಧ ಸಂಘಟಿತ ಹೋರಾಟ ಅಗತ್ಯ  ಎಂದು ಹೇಳಿದರು.

    ಹೀಗಾಗಿ  ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಅಂಬೇಡ್ಕರ್‌ ತತ್ವಗಳನ್ನು ನಂಬಿದ ಪ್ರತಿಯೊಬ್ಬರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ  ಕರೆ ನೀಡಿದರು.

    ಸುದ್ದಿಗೋಷ್ಠಿಯಲ್ಲಿ ಚಂದಪ್ಪ ಮುನೆಪ್ಪನೋರ, ಮರೆಪ್ಪ ಕ್ರಾಂತಿ, ಭೀಮಣ್ಣ ಹುಣಸಗಿ, ತಿಪ್ಪಣ್ಣ ಶೆಳ್ಳಗಿ, ಶರಭಣ್ಣ ದೊರನಳ್ಳಿ, ತಾಯಪ್ಪ ಭಂಡಾರಿ, ಭೀಮಾಶಂಕರ ಗುಂಡಳ್ಳಿ, ರಂಗಸ್ವಾಮಿ ಕೊಂಕಲ್, ದೊಡ್ಡಪ್ಪ ಕಾಡಂಗೇರಾ, ರಮೇಶ್ ಭಾಚಿಮಟ್ಟಿ, ಚಂದ್ರು ಬಲಶೆಟ್ಟಿಹಾಳ, ಎಂ. ಪಟೇಲ್, ಬಲಭೀಮ ಬೇವಿನಹಳ್ಳಿ, ಚನ್ನಪ್ಪ ದೇವಾಪುರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    apvc-iconPost Views: 45
  • ಆರೋಗ್ಯಕರ ಜೀವನಶೈಲಿಯಿಂದ ಮಧುಮೇಹ ತಡೆಗಟ್ಟುವುದು ಹೇಗೆ?

    ಆರೋಗ್ಯಕರ ಜೀವನಶೈಲಿಯಿಂದ ಮಧುಮೇಹ ತಡೆಗಟ್ಟುವುದು ಹೇಗೆ?

    ಇಂದಿನ ವೇಗದ ಜೀವನಶೈಲಿ, ಒತ್ತಡ, ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳ ನಡುವೆ ಮಧುಮೇಹ (Diabetes) ಎಂಬ ಕಾಯಿಲೆ ನಮ್ಮ ದೇಶದಲ್ಲಿ ಭಯಾನಕ ಮಟ್ಟದಲ್ಲಿ ಹೆಚ್ಚುತ್ತಿದೆ. ಹಿಂದೆ ಈ ಕಾಯಿಲೆ ಹೆಚ್ಚಾಗಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತಾದರೂ, ಈಗ ಯುವಕರು ಮತ್ತು ಮಧ್ಯವಯಸ್ಕರೂ ಇದರ ಬಲಿಯಾಗುತ್ತಿದ್ದಾರೆ.

    ಮಧುಮೇಹವನ್ನು ತಜ್ಞರು ಮೌನಹಂತಕ (Silent Killer) ಎಂದು ಕರೆಯುತ್ತಾರೆ, ಏಕೆಂದರೆ ಇದು ನಿಧಾನವಾಗಿ ದೇಹದೊಳಗೆ ಹಲವಾರು ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮೊದಲ ಹಂತಗಳಲ್ಲಿ ಅದರ ಲಕ್ಷಣಗಳು ಬಹುಮಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ. ಹಾಗಾದರೆ ಯಾವ ವಯಸ್ಸಿನಲ್ಲಿ ಮಧುಮೇಹದ ಅಪಾಯ ಹೆಚ್ಚಾಗುತ್ತದೆ? ಯಾವ ವಯಸ್ಸಿನಲ್ಲಿ ಜನರು ದುರ್ಬಲರಾಗುತ್ತಾರೆ? ಮತ್ತು ಈ ಕಾಯಿಲೆಯನ್ನು ತಡೆಗಟ್ಟಲು ಏನು ಮಾಡಬಹುದು? ನೋಡೋಣ.

    ಯಾವ ವಯಸ್ಸಿನಲ್ಲಿ ಮಧುಮೇಹ ಹೆಚ್ಚು ಕಾಣಿಸುತ್ತದೆ?

    ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನ ಅಧ್ಯಯನದ ಪ್ರಕಾರ, ಮಧುಮೇಹವು ಸಾಮಾನ್ಯವಾಗಿ 40 ರಿಂದ 45 ವರ್ಷ ವಯಸ್ಸಿನ ಮಧ್ಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದು “ಮಧ್ಯವಯಸ್ಕ” ಜನರಲ್ಲಿ ಆರಂಭವಾಗಿ ವೃದ್ಧಾಪ್ಯದಲ್ಲಿ ಗಂಭೀರ ಸಮಸ್ಯೆಯಾಗಿ ಬೆಳೆಯುತ್ತದೆ.
    ಆದರೆ ಇಂದಿನ ಕಾಲದಲ್ಲಿ ಪರಿಸ್ಥಿತಿ ಬದಲಾಗಿದೆ. ತಜ್ಞರ ಎಚ್ಚರಿಕೆಯ ಪ್ರಕಾರ 20 ರಿಂದ 30 ವರ್ಷ ವಯಸ್ಸಿನ ಯುವಕರಲ್ಲಿಯೂ ಮಧುಮೇಹದ ಪ್ರಮಾಣ ವೇಗವಾಗಿ ಹೆಚ್ಚುತ್ತಿದೆ.

    ಇದಕ್ಕೆ ಪ್ರಮುಖ ಕಾರಣಗಳು:
    ಕಳಪೆ ಆಹಾರ ಪದ್ಧತಿ (ಜಂಕ್ ಫುಡ್, ಸಿಹಿ ಪಾನೀಯಗಳು)
    ದೈಹಿಕ ಚಟುವಟಿಕೆಯ ಕೊರತೆ
    ಒತ್ತಡ
    ಅತಿಯಾಗಿ ಕುಳಿತಿರುವ ಜೀವನಶೈಲಿ

    ವಯಸ್ಸು ಮತ್ತು ಮಧುಮೇಹದ ಸಂಬಂಧ:
    ವಯಸ್ಸಾದಂತೆ ದೇಹದ ಇನ್ಸುಲಿನ್ ಉತ್ಪಾದನೆ ನಿಧಾನಗತಿಯಾಗುತ್ತದೆ. ಇನ್ಸುಲಿನ್‌ ಪ್ರತಿರೋಧ (Insulin Resistance) ಹೆಚ್ಚಾಗುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ದೇಹಕ್ಕೆ ಕಷ್ಟವಾಗುತ್ತದೆ.
    45 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಪ್ರಿಡಿಯಾಬಿಟಿಸ್ (Prediabetes) ಮತ್ತು ಟೈಪ್ 2 ಮಧುಮೇಹ ಹೆಚ್ಚಾಗಿ ಕಂಡುಬರುತ್ತದೆ. ವಯಸ್ಸಾದವರಲ್ಲಿ ಕಡಿಮೆ ದೈಹಿಕ ಚಟುವಟಿಕೆ, ದುರ್ಬಲ ಸ್ನಾಯುಗಳು, ಹಾಗೂ ಜೀರ್ಣಕ್ರಿಯೆಯ ನಿಧಾನಗತಿ. ಇವೆಲ್ಲವೂ ಸಕ್ಕರೆ ಚಯಾಪಚಯ ಕ್ರಿಯೆಯನ್ನು ಹಾನಿಗೊಳಿಸುತ್ತದೆ.

    ಯಾಕೆ 40 ನಂತರ ಅಪಾಯ ಹೆಚ್ಚಾಗುತ್ತದೆ?:
    ತಜ್ಞರ ಪ್ರಕಾರ, 40 ವರ್ಷ ನಂತರ ದೇಹದ ಮೆಟಾಬಾಲಿಸಂ ನಿಧಾನಗತಿಯಾಗುತ್ತದೆ.
    ತೂಕ ಹೆಚ್ಚಾಗುವುದು (ಬೊಜ್ಜು)
    ಹಾರ್ಮೋನಲ್ ಬದಲಾವಣೆಗಳು
    ಒತ್ತಡ ಮತ್ತು ನಿದ್ರೆ ಕೊರತೆ
    ಇವುಗಳೆಲ್ಲಾ ಮಧುಮೇಹಕ್ಕೆ ಪೂರಕವಾದ ಪರಿಸ್ಥಿತಿಯನ್ನು ನಿರ್ಮಿಸುತ್ತವೆ.
    ಯಾರಾದರೂ ಕುಟುಂಬದಲ್ಲಿ ಮಧುಮೇಹ ಇತಿಹಾಸ ಇದ್ದರೆ (Parents ಅಥವಾ Grandparents), ಅವರಿಗೆ ಮಧುಮೇಹ ಬರುವ ಅಪಾಯ ಇನ್ನೂ ಹೆಚ್ಚು.

    ಚಿಕ್ಕ ವಯಸ್ಸಿನಲ್ಲೇ ಮಧುಮೇಹಕ್ಕೆ ಕಾರಣಗಳು:

    ಇಂದಿನ ಪೀಳಿಗೆಯಲ್ಲಿ ಮಧುಮೇಹ ಕಡಿಮೆ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿದೆ. ಪ್ರಮುಖ ಕಾರಣಗಳು,
    ಫಾಸ್ಟ್ ಫುಡ್ ಸೇವನೆ
    ಮಲಗುವ ಸಮಯದ ಅಸಮಂಜಸತೆ
    ಮೊಬೈಲ್/ಲ್ಯಾಪ್‌ಟಾಪ್‌ನಲ್ಲಿ ಹೆಚ್ಚು ಸಮಯ
    ವ್ಯಾಯಾಮದ ಕೊರತೆ
    ನಿರಂತರ ಒತ್ತಡ ಮತ್ತು ನಿದ್ರಾಹೀನತೆ
    ಈ ಎಲ್ಲವು ದೇಹದ ಇನ್ಸುಲಿನ್ ಕಾರ್ಯವನ್ನು ಹಾನಿಗೊಳಿಸುತ್ತವೆ.

    ಮಧುಮೇಹವನ್ನು ತಡೆಗಟ್ಟಲು ಏನು ಮಾಡಬೇಕು?

    ತಜ್ಞರ ಸಲಹೆ ಪ್ರಕಾರ ಮಧುಮೇಹವನ್ನು ಜೀವನಶೈಲಿ ಬದಲಾವಣೆಗಳ ಮೂಲಕವೇ ತಡೆಗಟ್ಟಬಹುದು.
    ಆಹಾರ: ಹಸಿರು ತರಕಾರಿಗಳು, ಹಣ್ಣುಗಳು, ಸಂಪೂರ್ಣ ಧಾನ್ಯಗಳು ಮತ್ತು ಪ್ರೋಟೀನ್‌ಗಳನ್ನು ಒಳಗೊಂಡ ಆಹಾರ ಸೇವನೆ.
    ವ್ಯಾಯಾಮ: ಪ್ರತಿದಿನ ಕನಿಷ್ಠ 30 ನಿಮಿಷ ಚುರುಕಾದ ನಡೆ, ಯೋಗ ಅಥವಾ ಸೈಕ್ಲಿಂಗ್‌ ಮಾಡಿ.
    ತೂಕ ನಿಯಂತ್ರಣ: BMI ಸರಿಯಾದ ಮಟ್ಟದಲ್ಲಿ ಇರಲಿ.
    ನಿದ್ರೆ: ದಿನಕ್ಕೆ ಕನಿಷ್ಠ 7 ಗಂಟೆಗಳ ನಿದ್ರೆ.
    ಒತ್ತಡ ನಿಯಂತ್ರಣ: ಧ್ಯಾನ, ಪ್ರಾಣಾಯಾಮ, ಅಥವಾ ಹವ್ಯಾಸಗಳಿಂದ ಮನಸ್ಸು ಶಾಂತವಾಗಿಡಿ.
    ಪರೀಕ್ಷೆ: 35 ವರ್ಷವಾದ ನಂತರ ವರ್ಷಕ್ಕೊಮ್ಮೆ ರಕ್ತದ ಸಕ್ಕರೆ ಪರೀಕ್ಷೆ ಮಾಡಿಸಿಕೊಳ್ಳಿ.

    ವಯಸ್ಸಾದಂತೆ ಮಧುಮೇಹದ ಅಪಾಯ ಸಹಜವಾಗಿ ಹೆಚ್ಚಾದರೂ, ಇಂದಿನ ಯುವಜನರ ಜೀವನಶೈಲಿಯೇ ಅದನ್ನು ಮುಂಚಿತವಾಗಿ ಎಳೆಯುತ್ತಿದೆ. ಆದ್ದರಿಂದ, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ಈ ಮೌನಹಂತಕ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಡಲು ಸಾಧ್ಯ.

    apvc-iconPost Views: 26
  • ಟಿಟಿಇ ಬಹಿರಂಗಪಡಿಸಿದ ಲೋವರ್ ಬರ್ತ್ ಸಿಗುವ ಸುಲಭ ಮಾರ್ಗ!

    ಟಿಟಿಇ ಬಹಿರಂಗಪಡಿಸಿದ ಲೋವರ್ ಬರ್ತ್ ಸಿಗುವ ಸುಲಭ ಮಾರ್ಗ!

    ಭಾರತೀಯ ರೈಲ್ವೆ ಎಂದರೆ ಕೋಟಿ ಕೋಟಿ ಜನರ ದಿನನಿತ್ಯದ ಪ್ರಯಾಣದ ನಂಬಿಕೆಯ ಮಾರ್ಗ. ಆದರೆ ಹಿರಿಯ ನಾಗರಿಕರಿಗೆ (Senior Citizens) ಈ ಪ್ರಯಾಣ ಕೆಲವೊಮ್ಮೆ ತುಂಬಾ ಕಷ್ಟಕರವಾಗುತ್ತದೆ. ದೂರದ ಪ್ರಯಾಣದಲ್ಲಿ ಅವರಿಗೆ ಮೇಲಿನ (Upper) ಅಥವಾ ಮಧ್ಯಮ (Middle) ಬರ್ತ್ ಸಿಕ್ಕರೆ, ಅದು ನಿಜಕ್ಕೂ ಸವಾಲಾಗುತ್ತದೆ. ಪದೇ ಪದೇ ಮೇಲಕ್ಕೆ ಹತ್ತುವುದು, ಇಳಿಯುವುದು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯೂ ಆಗಬಹುದು. ವಿಶೇಷವಾಗಿ ವಯೋವೃದ್ಧ ಮಹಿಳೆಯರು ಅಥವಾ ಆರೋಗ್ಯ ಸಮಸ್ಯೆ ಇರುವವರು ಇದರಿಂದ ತೊಂದರೆ ಅನುಭವಿಸುತ್ತಾರೆ.

    ಈಗ ಇಂತಹ ಹಿರಿಯ ನಾಗರಿಕರಿಗೆ ಒಂದು ಉಪಯುಕ್ತ ಮಾಹಿತಿಯನ್ನು ರೈಲ್ವೆಯ ಟಿಟಿಇ (TTE) ಒಬ್ಬರು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಟಿಟಿಇ ನೀಡಿದ ಸಲಹೆ ಅನೇಕ ಹಿರಿಯ ನಾಗರಿಕರಿಗೆ ಪ್ರಯಾಣದ ಅನುಭವವನ್ನು ಸುಲಭಗೊಳಿಸಬಹುದು ಎನ್ನುವುದು ಖಚಿತ.

    ಇತ್ತೀಚೆಗೆ ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ರೆಕಾರ್ಡ್ ಮಾಡಲಾದ ಒಂದು ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ವೀಡಿಯೊದಲ್ಲಿ ಟಿಟಿಇ ಒಬ್ಬರು ಪ್ರಯಾಣಿಕರ ಗುಂಪನ್ನು ಉದ್ದೇಶಿಸಿ ಮಾತನಾಡುತ್ತಾರೆ. ಅವರ ಮುಂದೆ ನಾಲ್ವರು ಹಿರಿಯ ನಾಗರಿಕರು ಇದ್ದರು. ಈ ನಾಲ್ವರು ಹಿರಿಯ ಪ್ರಯಾಣಿಕರಿಗೆ ಲೋವರ್ ಬರ್ತ್ ಬದಲು ಮಧ್ಯಮ ಮತ್ತು ಮೇಲಿನ ಬರ್ತ್‌ಗಳು ಸಿಕ್ಕಿದ್ದರಿಂದ ಅವರು ಅಸಮಾಧಾನ ವ್ಯಕ್ತಪಡಿಸಿದರು.

    ಅದಕ್ಕೆ ಟಿಟಿಇ ಸ್ಪಷ್ಟನೆ ನೀಡುತ್ತಾ ಹೇಳಿದರು, ನೀವು ನಾಲ್ವರು ಒಟ್ಟಿಗೆ ಟಿಕೆಟ್ ಬುಕ್ ಮಾಡಿದರೆ, ಸಿಸ್ಟಮ್‌ ಸ್ವಯಂಚಾಲಿತವಾಗಿ ಲೋವರ್ ಬರ್ತ್ ನೀಡುವುದಿಲ್ಲ. ಬದಲಿಗೆ ಮಧ್ಯಮ ಅಥವಾ ಮೇಲಿನ ಬರ್ತ್‌ಗಳನ್ನು ನೀಡುತ್ತದೆ. ಆದರೆ ನೀವು ಇಬ್ಬರಿಬ್ಬರು ಒಟ್ಟಿಗೆ ಟಿಕೆಟ್ ಬುಕ್ ಮಾಡಿದರೆ, ಸಿಸ್ಟಮ್‌ ಹಿರಿಯ ನಾಗರಿಕರನ್ನು ಪ್ರಾಥಮ್ಯದಲ್ಲಿ ಪರಿಗಣಿಸಿ ಲೋವರ್ ಬರ್ತ್ ನೀಡುವ ಸಾಧ್ಯತೆ ಹೆಚ್ಚು.

    ಅಂದರೆ, ಮೂವರು ಅಥವಾ ನಾಲ್ವರು ಹಿರಿಯ ನಾಗರಿಕರು ಒಂದೇ ಟಿಕೆಟ್‌ನಲ್ಲಿ ಪ್ರಯಾಣ ಬುಕ್ ಮಾಡಿದರೆ, ಅವರಿಗೆ ಕೆಳ ಬರ್ತ್‌ ಸಿಗುವ ಅವಕಾಶ ಕಡಿಮೆ. ಹೀಗಾಗಿ, ಇಬ್ಬರಿಬ್ಬರು ಒಟ್ಟಿಗೆ ಬೇರೆ ಬೇರೆ ಟಿಕೆಟ್ ಬುಕ್ ಮಾಡಿದರೆ, ಪ್ರತಿ ಜೋಡಿ ಪ್ರಯಾಣಿಕರು ಕೆಳ ಬರ್ತ್ ಪ್ರಯೋಜನವನ್ನು ಪಡೆಯಬಹುದು ಎಂಬುದೇ ಈ ಹ್ಯಾಕ್‌ನ ಸಾರಾಂಶ.

    ಈ ಉಪಯುಕ್ತ ಸಲಹೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ X (ಹಳೆಯ Twitter) ನಲ್ಲಿ ಹಿರಿಯ ನಾಗರಿಕರಿಗೆ ಅತ್ಯಂತ ಉಪಯುಕ್ತ ರೈಲು ಟಿಕೆಟ್ ಬುಕಿಂಗ್ ಹ್ಯಾಕ್ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಜನರು ಟಿಟಿಇ ಅವರ ಧೀರ ಮತ್ತು ಸಹಾನುಭೂತಿ ತುಂಬಿದ ವಿವರಣೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಕೆಲವರು ಅವರನ್ನು ಪ್ರಶಂಸಿಸುತ್ತಾ ಇಂತಹ ಅಧಿಕಾರಿಗಳು ರೈಲ್ವೆಗೆ ಗೌರವ ತಂದಿದ್ದಾರೆ ಎಂದಿದ್ದಾರೆ.

    ಆದರೆ ಎಲ್ಲರೂ ಇದನ್ನು ಶೇ.100 ಪರ್ಫೆಕ್ಟ್ ಪರಿಹಾರ ಎಂದು ಒಪ್ಪಿಕೊಂಡಿಲ್ಲ. ಕೆಲ ಪ್ರಯಾಣಿಕರು, ಒಂದು ಕುಟುಂಬದಲ್ಲಿ 5-6 ಜನರು ಒಟ್ಟಿಗೆ ಪ್ರಯಾಣಿಸುವಾಗ ಈ ಹ್ಯಾಕ್ ಅನುಸರಿಸಿದರೆ ಎಲ್ಲರಿಗೂ ಒಂದೇ ಬೋಗಿಯಲ್ಲಿ ಆಸನ ಸಿಗದೆ, ವಿಭಜನೆ ಆಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಸಂದರ್ಭಗಳಲ್ಲಿ, ಹಿರಿಯ ನಾಗರಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ತಂತ್ರಾಂಶದಲ್ಲಿ ಸಣ್ಣ ಬದಲಾವಣೆ ಮಾಡಬೇಕು ಎಂದು ಬಳಕೆದಾರರು ಸಲಹೆ ನೀಡಿದ್ದಾರೆ.

    ಈ ವೀಡಿಯೊ ರೈಲು ಪ್ರಯಾಣಿಕರಲ್ಲಿ ಹೊಸ ಚರ್ಚೆ ಹುಟ್ಟುಹಾಕಿದ್ದು, ಅನೇಕ ಹಿರಿಯರು ಈಗ ತಮ್ಮ ಮುಂದಿನ ಪ್ರಯಾಣಕ್ಕೆ ಈ ವಿಧಾನವನ್ನು ಪ್ರಯೋಗಿಸಬೇಕೆಂದು ಯೋಚಿಸುತ್ತಿದ್ದಾರೆ.

    ಮುಖ್ಯ ಸಲಹೆ:
    ಹಿರಿಯ ನಾಗರಿಕರು ರೈಲು ಟಿಕೆಟ್ ಬುಕ್ ಮಾಡುವಾಗ,
    ಇಬ್ಬರಿಬ್ಬರು ಒಟ್ಟಿಗೆ ಟಿಕೆಟ್ ಬುಕ್ ಮಾಡುವುದು ಲೋವರ್ ಬರ್ತ್ ಸಿಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

    Lower Berth/Sr. Citizen ಆಯ್ಕೆಯನ್ನು ಟಿಕೆಟ್‌ ಬುಕ್ ಮಾಡುವಾಗ ಖಚಿತವಾಗಿ ಟಿಕ್‌ಮಾರ್ಕ್ ಮಾಡಬೇಕು.
    ಪ್ರಯಾಣದ ದಿನ, ಟಿಟಿಇಗೆ ತಿಳಿಸಿದರೆ ಅವರಿಗೆ ಕೆಳ ಬರ್ತ್ ಸಿಗುವ ಪ್ರಾಮುಖ್ಯತೆ ನೀಡಲಾಗುತ್ತದೆ

    apvc-iconPost Views: 72
  • ಸುಪ್ರೀಂಕೋರ್ಟ್ ತೀರ್ಪಿಗೆ ಸವಾಲು: ಸಾವಿರಾರು ಶಿಕ್ಷಕರ ಭವಿಷ್ಯ ರಕ್ಷಿಸಲು ಸರ್ಕಾರದ ದೊಡ್ಡ ಹೆಜ್ಜೆ

    ಸುಪ್ರೀಂಕೋರ್ಟ್ ತೀರ್ಪಿಗೆ ಸವಾಲು: ಸಾವಿರಾರು ಶಿಕ್ಷಕರ ಭವಿಷ್ಯ ರಕ್ಷಿಸಲು ಸರ್ಕಾರದ ದೊಡ್ಡ ಹೆಜ್ಜೆ

    ರಾಜ್ಯದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಕಳೆದ ಕೆಲವು ವಾರಗಳಿಂದ ಭಾರೀ ಚರ್ಚೆಗೆ ಕಾರಣವಾಗಿತ್ತು. ಸಾವಿರಾರು ಶಿಕ್ಷಕರ ಭವಿಷ್ಯಕ್ಕೆ ನೇರವಾಗಿ ಸಂಬಂಧ ಹೊಂದಿರುವ ಈ ತೀರ್ಪು, ಶಿಕ್ಷಣ ವಲಯದಲ್ಲೇ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು. ವಿಶೇಷವಾಗಿ, ಹಲವು ವರ್ಷಗಳಿಂದ ಸೇವೆ ನಿರತವಾಗಿರುವ ಶಿಕ್ಷಕರಿಗೆ ಈ ನಿಯಮವನ್ನು ಪೂರ್ವಾನ್ವಯವಾಗಿ (retrospective) ಜಾರಿ ಮಾಡಲು ಯತ್ನಿಸುವುದು ನ್ಯಾಯೋಚಿತವಾಗಿಲ್ಲ ಎಂಬ ಅಭಿಪ್ರಾಯಗಳು ರಾಜ್ಯದಾದ್ಯಂತ ಕೇಳಿಬರುತ್ತಿದ್ದವು.

    ಈ ನಡುವೆ, ಶಿಕ್ಷಕರು ಬಹಳ ನಿರೀಕ್ಷಿಸುತ್ತಿದ್ದ ಮಹತ್ವದ ಬೆಳವಣಿಗೆ ಇದೀಗ ನಡೆದಿದ್ದು ಕರ್ನಾಟಕ ಸರ್ಕಾರವೇ ಶಿಕ್ಷಕರ ಪರ ನಿಂತು ಸುಪ್ರೀಂಕೋರ್ಟ್ ತೀರ್ಪಿನ ಮರುಪರಿಶೀಲನೆಗಾಗಿ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ. ಇದರಿಂದ ಸೇವಾ ನಿರತ ಶಿಕ್ಷಕರಿಗೆ ದೊಡ್ಡ ಮಟ್ಟದ ಭದ್ರತೆ ಒದಗಿಸುವ ದಾರಿಯು ತೆರೆಯಲಾಗಿದೆ.

    ಸರ್ಕಾರದಿಂದ ಶಿಕ್ಷಕರಿಗೆ ಸಿಹಿ ಸುದ್ದಿ:

    ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು ಈ ಕುರಿತು ಮಾಹಿತಿ ನೀಡಿದ್ದು, ಮುಖ್ಯಮಂತ್ರಿಗಳು ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಎಚ್‌.ಕೆ. ಪಾಟೀಲ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಂಘ ಧನ್ಯವಾದಗಳನ್ನು ತಿಳಿಸಿದೆ.

    ಸಂಘದ ಪ್ರಕಾರ, 04-09-2025 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಪ್ರಕಾರ, ರಾಜ್ಯ ಸರ್ಕಾರವು ಟಿಇಟಿ ಕಡ್ಡಾಯಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮರುಪರಿಶೀಲನೆ ಅರ್ಜಿ (Review Petition) ಸಲ್ಲಿಸಲು ಕಾನೂನು ಇಲಾಖೆಯಿಂದ ಅಧಿಕೃತ ಅನುಮೋದನೆ ಪಡೆದಿದೆ.

    ಇದು ಶಿಕ್ಷಕರ ಹಿತಾಸಕ್ತಿಯನ್ನು ಕಾಪಾಡುವ ಐತಿಹಾಸಿಕ ತೀರ್ಮಾನ ಎಂದು ಸಂಘ ಹೇಳಿದೆ.

    ಸರ್ಕಾರದ ಕಾನೂನು ಹೋರಾಟ:

    • ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ ಎಚ್ ಎಸ್ ಮತ್ತು ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಪ್ರಕಟಣೆಯಲ್ಲಿ ತಿಳಿಸಿದಂತೆ,
    • ಸುಪ್ರೀಂಕೋರ್ಟ್ ಟಿಇಟಿ ಕಡ್ಡಾಯ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರವೇ ಮರುಪರಿಶೀಲನೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.
    • ಈ ಕುರಿತು ಕಾನೂನು ಇಲಾಖೆಯಿಂದ ಅನುಮೋದನೆ ಪಡೆದು ಕಡತವನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದೆ.
    • ಪೂರ್ವಾನ್ವಯವಾಗಿ ಟಿಇಟಿಯನ್ನು ಜಾರಿಗೊಳಿಸುವುದು ಸಂವಿಧಾನಬದ್ಧವಾಗಿ ಸರಿಯಲ್ಲ ಎಂಬ ಅಭಿಪ್ರಾಯ ಸ್ವೀಕರಿಸಲಾಗಿದೆ.

    ಶಿಕ್ಷಕರ ಚಿಂತನೆ ಮತ್ತು ರಾಜ್ಯದ ವಾಸ್ತವ ಸ್ಥಿತಿ:

    ರಾಜ್ಯದಲ್ಲಿ ಈಗಾಗಲೇ 1.68 ಲಕ್ಷ ಶಿಕ್ಷಕರ ಮೇಲೆ ಈ ತೀರ್ಪಿನ ಪರಿಣಾಮ ಬೀರುವ ಸಾಧ್ಯತೆ ಬಗ್ಗೆ ದೊಡ್ಡ ಚರ್ಚೆಯಿತ್ತು.

    ನೂರಾರು ಶಿಕ್ಷಕರು ವರ್ಷಗಳ ಸೇವಾ ಅನುಭವದ ನಂತರ ಪದೋನ್ನತಿ ಪಡೆಯುವ ಹಂತದಲ್ಲಿದ್ದರು. ಇವರಿಗೆ ಈಗ ಮತ್ತೊಮ್ಮೆ ಟಿಇಟಿ ಕಡ್ಡಾಯ ಮಾಡುವುದು ಅನ್ಯಾಯಕರ ಎಂಬ ಅಭಿಪ್ರಾಯದೊಂದಿಗೆ, ಸೇವಾ ನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯ ವಿಸ್ತರಿಸುವುದು ಸರಿಯಲ್ಲ. ಈಗಾಗಲೇ ತರಬೇತಿ ಪಡೆದು, ನೇಮಕಾತಿಯ ಸಮಯದಲ್ಲಿ ಅರ್ಹತೆ ಪಡೆದಿದ್ದಾರೆ. ರಾಜ್ಯದಲ್ಲಿ ಶಿಕ್ಷಕರ ಕೊರತೆ ಇನ್ನೂ ಮುಂದುವರಿದಿದೆ ಎಂಬ ಪ್ರಮುಖ ಅಂಶಗಳನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು.

    ರಾಜಕೀಯ ಮತ್ತು ಆಡಳಿತಾತ್ಮಕ ಬೆಂಬಲ:

    ಸಂಘ ಸ್ಪಷ್ಟವಾಗಿ ಹೇಳಿರುವಂತೆ, ರಾಜ್ಯದ ಸಮಸ್ತ ಶಿಕ್ಷಕರ ಹಿತಾಸಕ್ತಿಯನ್ನು ಪರಿಗಣಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಎಚ್‌.ಕೆ. ಪಾಟೀಲ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಇವರ ಸಂಯುಕ್ತ ಪ್ರಯತ್ನದಿಂದಲೇ ಈ ಮರುಪರಿಶೀಲನೆ ಅರ್ಜಿಗೆ ದಾರಿ ಮಾಡಿಕೊಡಲಾಗಿದೆ.

    ಸುಪ್ರೀಂ ಕೋರ್ಟ್ ತೀರ್ಪಿನಿಂದ ಆತಂಕಗೊಂಡಿದ್ದ ಶಿಕ್ಷಕರಿಗೆ ಈಗ ಸರ್ಕಾರವೇ ಧೈರ್ಯ ತುಂಬುವ ನಿರ್ಧಾರ ಕೈಗೊಂಡಿದೆ. ಮರುಪರಿಶೀಲನೆ ಅರ್ಜಿ ಸಲ್ಲಿಸುವುದು, ರಾಜ್ಯದಲ್ಲಿ ಸಾವಿರಾರು ಶಿಕ್ಷಕರ ಉದ್ಯೋಗ ಮತ್ತು ಪದೋನ್ನತಿ ಭವಿಷ್ಯವನ್ನು ರಕ್ಷಿಸಬಹುದಾದ ಮಹತ್ವದ ಹೆಜ್ಜೆಯಾಗಬಹುದು. ಮುಂದಿನ ಹಂತದಲ್ಲಿ ಸುಪ್ರೀಂಕೋರ್ಟ್ ಈ ಅರ್ಜಿಯ ಮೇಲೆ ನೀಡುವ ತೀರ್ಮಾನವೇ ಶಿಕ್ಷಕರ ಭವಿಷ್ಯವನ್ನು ನಿರ್ಧರಿಸಲಿದೆ.

    apvc-iconPost Views: 101
  • ಭೂಮಿ ಖರೀದಿ ವೇಳೆ ನೀವು ನೋಡಬೇಕಾದ 6 ಮುಖ್ಯ ಡಾಕ್ಯುಮೆಂಟ್ಸ್

    ಭೂಮಿ ಖರೀದಿ ವೇಳೆ ನೀವು ನೋಡಬೇಕಾದ 6 ಮುಖ್ಯ ಡಾಕ್ಯುಮೆಂಟ್ಸ್

    ಇಂದಿನ ವೇಗವಾಗಿ ವಿಸ್ತರಿಸುತ್ತಿರುವ ನಗರೀಕರಣ, ಬಂಡವಾಳ ಹೂಡಿಕೆಯ ಹೆಚ್ಚಳ ಹಾಗೂ ಆಸ್ತಿ ಮೌಲ್ಯದ ಏರಿಳಿತಗಳ ನಡುವೆ, ಭೂಮಿ ಖರೀದಿ ಬಹುತೇಕ ಜನರಿಗೆ ಪ್ರಮುಖ ಮತ್ತು ದೀರ್ಘಾವಧಿಯ ನಿರ್ಧಾರವಾಗಿದೆ. ಒಂದು ತಪ್ಪು ಮಾಹಿತಿ, ಒಂದು ತಪ್ಪು ದಾಖಲೆ ಅಥವಾ ಪರಿಶೀಲನೆಯ ಕೊರತೆ ಇವು ನಿಮ್ಮ ಜೀವನದ ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ನಕಲಿ ದಾಖಲೆಗಳು, ಡಬಲ್ ಸೇಲ್, ವಿವಾದಾತ್ಮಕ ಜಾಗಗಳ ಮಾರಾಟದ ಘಟನೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಭೂಮಿ ಖರೀದಿಸುವಾಗ ಕಾನೂನುಬದ್ಧ ದಾಖಲೆಯನ್ನು ಶೇಕಡಾ 100 ಸರಿಯಾಗಿ ಪರೀಕ್ಷಿಸುವುದು ಅತ್ಯಂತ ಅವಶ್ಯಕವಾಗಿದೆ.

    ಭೂಮಿ ಖರೀದಿಸುವುದು ಕೇವಲ ಹಣಕಾಸಿನ ಹೂಡಿಕೆ ಅಲ್ಲ, ಇದು ಕಾನೂನು, ಹಕ್ಕು, ಮಾಲೀಕತ್ವ ಮತ್ತು ಭವಿಷ್ಯದ ಸುರಕ್ಷತೆಗೆ ಸಂಬಂಧಿಸಿದ ಸೂಕ್ಷ್ಮ ಪ್ರಕ್ರಿಯೆ. ಆದ್ದರಿಂದ, ಯಾವುದೇ ಭೂಮಿ/ಆಸ್ತಿಯನ್ನು ಖರೀದಿಸುವ ಮುನ್ನ, ಕೆಳಗಿನ 6 ಕಡ್ಡಾಯ ದಾಖಲೆಗಳನ್ನು ನೋಡದೇ ಒಂದು ಹೆಜ್ಜೆಯನ್ನೂ ಮುಂದಿಡಬಾರದು.

    ಹಕ್ಕುಪತ್ರ (Title Deed):

    ಭೂಮಿಯನ್ನು ಯಾರು ಹೊಂದಿದ್ದಾರೆ? ಅವರಿಗೆ ಮಾಲೀಕತ್ವ ಹೇಗೆ ಬಂದಿತು? ಇವುಗಳ ಸ್ಪಷ್ಟ ಉತ್ತರ ಹಕ್ಕುಪತ್ರದಲ್ಲಿ ಲಭ್ಯ. ಇದು ಆಸ್ತಿಯ ನಿಜವಾದ ಮಾಲೀಕರನ್ನು ಕಾನೂನಾತ್ಮಕವಾಗಿ ದೃಢಪಡಿಸುತ್ತದೆ. ಭೂಮಿ ಆನುವಂಶಿಕವಾಗಿ ಬಂದಿದೆಯೇ? ಖರೀದಿಯಿಂದ ಬಂದಿದೆಯೇ? ಮಾಲೀಕತ್ವದ ಸರಣಿ ಸರಿ ಇದೆಯೇ? ಈ ಎಲ್ಲ ಮಾಹಿತಿಯನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ.

    ಸಾಲ ಕ್ಲಿಯರೆನ್ಸ್ ಪ್ರಮಾಣಪತ್ರ (Loan Clearance Certificate):

    ನೀವು ಖರೀದಿಸಲು ಹೊರಟಿರುವ ಭೂಮಿಯ ಮೇಲೆ ಯಾವುದೇ ಸಾಲ ಅಥವಾ ಬಾಧ್ಯತೆ ಇದ್ದರೆ, ನಿಮಗೆ ಭಾರೀ ತೊಂದರೆಯಾಗಬಹುದು.

    ಬ್ಯಾಂಕ್‌ಗಳಿಗೆ ಬಾಕಿ ಇರುವ ಸಾಲದ ಆಧಾರದ ಮೇಲೆ ಆಸ್ತಿ ಜಪ್ತಿ ಮಾಡುವ ಅಧಿಕಾರ ಇದೆ. ಆದ್ದರಿಂದ, ಆಸ್ತಿಯ ಮೇಲೆ ಯಾವುದೇ ಸಾಲವಿಲ್ಲ, ಎಲ್ಲಾ ಹಣಕಾಸು ಬಾಧ್ಯತೆಗಳು ಪೂರ್ಣಗೊಂಡಿವೆ ಎಂಬುದನ್ನು ದೃಢಪಡಿಸುವ ಸಾಲ ಕ್ಲಿಯರೆನ್ಸ್ ಕಡ್ಡಾಯ.

    ಎನ್‌ಒಸಿ (No Objection Certificate):

    ಆಸ್ತಿ ವಿವಾದಾತ್ಮಕವಾಗಿಲ್ಲ ಮತ್ತು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಆಕ್ಷೇಪಣೆ ಇಲ್ಲವೆಂದು ತೋರಿಸಲು NOC ಅತ್ಯಂತ ಮುಖ್ಯ. ಕುಟುಂಬದ ಸದಸ್ಯರು, ಸ್ಥಳೀಯ ಪ್ರಾಧಿಕಾರಗಳು, ಬ್ಯಾಂಕ್, ಸಹ ಮಾಲೀಕರು ಯಾರಿಗೂ ಆಕ್ಷೇಪಣೆ ಇಲ್ಲವೆಂಬ ಪ್ರಮಾಣಪತ್ರವಿಲ್ಲದೆ ಆಸ್ತಿ ಖರೀದಿಸಬಾರದು.

    ಮಾರಾಟ ಪತ್ರ (Sale Deed):

    • ಇದು ಆಸ್ತಿ/ಭೂಮಿಯ ಕಾನೂನುಬದ್ಧ ಮಾಲೀಕತ್ವ ನಿಮಗೆ ವರ್ಗಾಯಿಸಿದ ಅಧಿಕೃತ ದಾಖಲೆ.
    • ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿ.
    • ಸ್ಟಾಂಪ್ ಶುಲ್ಕ ಪಾವತಿಸಿ.
    • ನೋಂದಾಯಿತ ಮಾರಾಟ ಪತ್ರವಿಲ್ಲದೆ ಯಾವುದೇ ಭೂಮಿ ಕಾನೂನಾತ್ಮಕವಾಗಿ ನಿಮ್ಮದಾಗುವುದಿಲ್ಲ.

    ಎಲ್ಲಾ ವೈಯಕ್ತಿಕ ದಾಖಲೆಗಳ ಫೋಟೋಕಾಪಿಗಳು:

    ಭೂಮಿ ನೋಂದಣಿಗೆ ನೀವು ಕೆಳಗಿನ ದಾಖಲೆಗಳ ಫೋಟೋಕಾಪಿಯನ್ನು ಸಲ್ಲಿಸಬೇಕು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ವಿವರಗಳು, ಆದಾಯ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ) ಇವುಗಳಿಲ್ಲದೆ ನೋಂದಣಿ ಪ್ರಕ್ರಿಯೆ ಪೂರ್ಣವಾಗುವುದಿಲ್ಲ.

    ಜಮಾಬಂದಿ / RTC ರಸೀದಿ (Land Revenue Receipt):

    ಗ್ರಾಮ ಪಂಚಾಯಿತಿ, ತಹಸೀಲ್ದಾರ್ ಕಚೇರಿ ಅಥವಾ ಮುನ್ಸಿಪಾಲಿಟಿ ಹೊಂದಿರುವ ಭೂಮಿಯ ಭೂಮಿಸಂಕೇತ ಮತ್ತು ಮಾಲೀಕತ್ವದ ದಾಖಲೆ ಇದು.

    RTC/ಜಮಾಬಂದಿಯಲ್ಲಿ, ಭೂಮಿಯ ಮಾಲೀಕರು ಯಾರು? ಭೂಮಿಯ ಬಳಕೆ ಏನು? ಯಾವುದೇ ಭೂ ತೆರಿಗೆ ಬಾಕಿಯಿದೆಯೇ? ಸ್ಪಷ್ಟವಾಗಿ ತಿಳಿದುಬರುತ್ತದೆ. ಭೂಮಿಯ ನಿಜವಾದ ಕಾನೂನು ದಾಖಲೆ ಇದು.

    ತೆರಿಗೆ ರಸೀದಿ / ನಗದು ಸಂಖ್ಯೆ ರಸೀದಿ :

    ಭೂಮಿಯನ್ನು ನೋಂದಾಯಿಸಿದ ನಂತರ ನಿಮಗೆ ದೊರೆಯುವ ರಸೀದಿ ಇದು. ಭೂಮಿಯ ಮೌಲ್ಯ, ತೆರಿಗೆ ಪಾವತಿ ವಿವರಗಳು, ಸಾಲವಿಲ್ಲ ಎಂಬ ಪುರಾವೆ ಈ ರಸೀದಿ ಭೂಮಿಯ ಮೇಲೆ ಭವಿಷ್ಯದಲ್ಲಿ ಯಾವುದೇ ವಿವಾದ ಬಾರದಂತೆ ರಕ್ಷಣೆ ನೀಡುತ್ತದೆ.

    ಭೂಮಿ ಎಂದರೆ ಲಾಭದಾಯಕ ಆಸ್ತಿ, ಆದರೆ ತಪ್ಪಾದ ದಾಖಲೆಗಳು ನಿಮ್ಮ ಜೀವನದ ದೊಡ್ಡ ಸಮಸ್ಯೆಯಾಗಬಹುದು. ಆದ್ದರಿಂದ, ದಾಖಲೆಗಳನ್ನು ವಕೀಲರಿಂದ ಪರಿಶೀಲಿಸಿಕೊಳ್ಳಿ. ಯಾವ ದಾಖಲೆಗಳಲ್ಲಾದರೂ ಅನುಮಾನ ಕಂಡರೆ ಖರೀದಿಸಬೇಡಿ. ಕಾನೂನು ಬದ್ಧತೆಗಳನ್ನು ಪೂರೈಸಿದಾಗ ಮಾತ್ರ ಹಣ ಪಾವತಿಸಿ ಸುರಕ್ಷಿತ ಹೂಡಿಕೆ, ಸುರಕ್ಷಿತ ಭವಿಷ್ಯ.

    apvc-iconPost Views: 32
  • ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲಿನ ನಡುವೆ ಭೀಕರ ಅಪಘಾತ!

    ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲಿನ ನಡುವೆ ಭೀಕರ ಅಪಘಾತ!

    ಬಿಲಾಸ್‌ಪುರ್ (ಛತ್ತೀಸ್‌ಗಢ): ಮಂಗಳವಾರ ಸಂಜೆ ಛತ್ತೀಸ್‌ಗಢದ ಬಿಲಾಸ್‌ಪುರ್ ಜಿಲ್ಲೆಯ ಲಾಲ್‌ಖದಾನ್ ಬಳಿ ರೈಲು ಮಾರ್ಗದಲ್ಲಿ ನಡುಗುವಂತ ಘಟನೆ ನಡೆಯಿತು. ಪ್ಯಾಸೆಂಜರ್ ರೈಲು ಹಾಗೂ ಗೂಡ್ಸ್ ರೈಲುಗಳು ಪರಸ್ಪರ ಮುಖಾಮುಖಿಯಾಗಿ ಢಿಕ್ಕಿ ಹೊಡೆದ ಪರಿಣಾಮ, ಕ್ಷಣಾರ್ಧದಲ್ಲಿ ಅನೇಕ ಬೋಗಿಗಳು ಹಳಿ ತಪ್ಪಿ ಪರಸ್ಪರದ ಮೇಲೆ ಏರಿವೆ. ಈ ಭೀಕರ ಅಪಘಾತದಲ್ಲಿ ಹಲವರು ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಘಟನೆಯ ನಂತರ ತಕ್ಷಣವೇ ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಕತ್ತಲಿನ ನಡುವೆಯೇ ಗಾಯಾಳುಗಳನ್ನು ಹೊರತೆಗೆದು ಸಮೀಪದ ಆಸ್ಪತ್ರೆಗಳಿಗೆ ಸಾಗಿಸುವ ಕಾರ್ಯ ನಡೆದಿದೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

    ಡಿಕ್ಕಿಯ ತೀವ್ರತೆ ಅಷ್ಟು ಭಯಾನಕವಾಗಿತ್ತು ಎಂದು ಪ್ರತ್ಯಕ್ಷ ಸಾಕ್ಷಿಗಳು ಹೇಳಿದ್ದಾರೆ, ಬೋಗಿಗಳ ಲೋಹದ ಚೂರುಗಳು ದೂರದೂರಿಗೆ ಹಾರಿಹೋಗಿದ್ದವು. ಅಲ್ಲದೆ ಡಿಕ್ಕಿಯಿಂದ ಓವರ್‌ಹೆಡ್ ತಂತಿಗಳು ಕಳಚಿಕೊಂಡಿದ್ದು, ಸಿಗ್ನಲ್ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿ ಬಿಲಾಸ್‌ಪುರ್ ಮಾರ್ಗದ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅನೇಕ ರೈಲುಗಳು ತಡೆದಿಡಲ್ಪಟ್ಟಿದ್ದು, ಕೆಲವು ಬೇರೆ ಮಾರ್ಗಗಳಿಗೆ ತಿರುಗಿಸಲಾಗುತ್ತಿದೆ.

    ಘಟನೆಯ ನಂತರ ರೈಲ್ವೆ ಇಲಾಖೆ ತುರ್ತು ತನಿಖೆಗೆ ಆದೇಶ ನೀಡಿದ್ದು, ಅಪಘಾತದ ನಿಖರ ಕಾರಣ ತಿಳಿಯುವ ಕಾರ್ಯ ಪ್ರಾರಂಭವಾಗಿದೆ. ಮೊದಲ ಹಂತದ ಮಾಹಿತಿಯ ಪ್ರಕಾರ ಸಿಗ್ನಲ್ ದೋಷ ಅಪಘಾತಕ್ಕೆ ಕಾರಣವಾಗಿರುವ ಸಾಧ್ಯತೆಗಳಿರಬಹುದು ಎಂದು ಪರಿಗಣಿಸಿದ್ದಾರೆ.

    ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಜನತೆ ಕೋಪೋದ್ರಿಕ್ತರಾಗಿದ್ದು, “ಪ್ರತಿ ಕೆಲವು ತಿಂಗಳುಗಳಿಗೊಮ್ಮೆ ಈ ರೀತಿಯ ಘಟನೆಗಳು ನಡೆಯುತ್ತಿವೆ, ರೈಲ್ವೆ ಇಲಾಖೆ ನಿಜವಾಗಿಯೂ ಎಚ್ಚರದಲ್ಲಿದೆಯೇ?” ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ.

    ಇದೇ ವೇಳೆ ಅಧಿಕಾರಿಗಳು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸುವ ಕಾರ್ಯ ಕೈಗೊಂಡಿದ್ದು, ಸಹಾಯವಾಣಿ ಸಂಖ್ಯೆಗಳ ಮೂಲಕ ಮಾಹಿತಿಯನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ. ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರಿಯಲಿದ್ದು, ಸಾವಿನ ನಿಖರ ಸಂಖ್ಯೆ ಹಾಗೂ ಹಾನಿಯ ಪ್ರಮಾಣವನ್ನು ಬೆಳಗ್ಗಿನ ವೇಳೆಗೆ ಬಹಿರಂಗಪಡಿಸುವ ಸಾಧ್ಯತೆ ಇದೆ.

    apvc-iconPost Views: 67