Blog

  • ಅಧಿಕಾರಿಗಳ ವಾಹನಗಳೂ ಕಪ್ಪು ಗ್ಲಾಸ್‌ಮಯ

    ಅಧಿಕಾರಿಗಳ ವಾಹನಗಳೂ ಕಪ್ಪು ಗ್ಲಾಸ್‌ಮಯ


    *ಕಣ್ಮುಚ್ಚಿ ಕುಳಿತ ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳು*

    *ಸುಪ್ರೀಂಕೋರ್ಟ್ ಆದೇಶಕ್ಕೂ ಇಲ್ಲಿಲ್ಲ ಕವಡೆ ಕಾಸಿನ ಕಿಮ್ಮತ್ತು*

    *ವರದಿ:ಕುದಾನ್ ಸಾಬ್*
    *ಸತ್ಯಕಾಮ ವಾರ್ತೆ ಯಾದಗಿರಿ :*
    ವಾಹನಗಳಿಗೆ ಕೂಲಿಂಗ್ ಪೇಪರ್ ಹಾಕಿಕೊಂಡು ಖಾಸಗಿ ವಾಹನಗಳು ತಿರುಗಾಡುವುದು ಅಂತಹ ದೊಡ್ಡ ವಿಷಯವೇನಲ್ಲವೆಂದರೂ ಸಹ ಅದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯೇ ಆಗಿದೆ.ಆದರೆ ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಯ ಅನೇಕ ವಾಹನಗಳೇ ಸುಪ್ರಿಂ ಆದೇಶ ಧಿಕ್ಕರಿಸಿ ಕಪ್ಪು ಬಣ್ಣದ ಪೇಪರ್ ಹಾಕಿಕೊಂಡು ರಾಜಾರೋಷವಾಗಿ ತಿರುಗುತ್ತಿರುವುದು ಸೋಜಿಗ ಮೂಡಿಸಿದೆ.

    ಹೌದು ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘಿಸುವ ಮೂಲಕ ಅಂಧಾ ದರ್ಬಾರ್ ನಡೆಸುತ್ತಿರುವುದಕ್ಕೆ ಹತ್ತು ಹಲವು ಉದಾಹರಣೆಗಳು ನಿತ್ಯ ಕಂಡು ಸಿಗುತ್ತವೆ ಇವುಗಳ ಪೈಕಿ ಕಪ್ಪು ಪರದೆ ಅಳವಡಿಸಿಕೊಂಡು ತಿರುಗುವ ವಾಹನಗಳು ಅದರಲ್ಲೂ ಸರ್ಕಾರಿ ವಾಹನಗಳ ತಿರುಗುವುದು ಜಿಲ್ಲೆಯಲ್ಲಿ ಸರ್ವೇ ಸಾಮಾನ್ಯವಾಗಿರುವುದು ತಾಜಾ ಉದಾಹರಣೆ ಇಲ್ಲಿದೆ ನೋಡಿ,

    ಕಾನೂನು ಕಾಪಾಡಬೇಕಾದ ಅಧಿಕಾರಿಗಳು ತಮ್ಮ ಸರ್ಕಾರಿ ಕಾರಿಗೆ ಕಪ್ಪು ಪರದೆ (ಕೂಲಿಂಗ್ ಪೇಪರ್) ಹಾಕಿಕೊಂಡಿರುವ ಪ್ರಕರಣಗಳು ಪತ್ರಿಕೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿದವು.

    ಜಿಲ್ಲೆಯಲ್ಲಿ ಕೆಲ ಸರ್ಕಾರಿ ಅಧಿಕಾರಿಗಳು ತಾವು ಬಳಸುವ ಇಲಾಖೆ ಕಾರುಗಳಿಗೆ ಇಂತಹ ಕಪ್ಪು ಪರದೆ ಟಿಂಟೆಡ್ ಗ್ಲಾಸ್ ಅಳವಡಿಸಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

    ಸುಪ್ರಿಂ ಆದೇಶ ಮತ್ತು ಸರ್ಕಾರದ ಸುತ್ತೋಲೆಗಳ ನಿಯಮದ ಪ್ರಕಾರ ಕಾರಿನ ವಿಂಡೋಗೆ ಟಿಂಟೆಡ್ ಗ್ಲಾಸ್ ಹಾಕುವಂತಿಲ್ಲ. ಟಿಂಟೆಡ್ ಗ್ಲಾಸ್‌ಅನ್ನು ಹಾಕಿಕೊಂಡು ತಿರುಗಾಡುವುದು ನಿಯಮಕ್ಕೆ ವಿರುದ್ಧವಾದುದು. ಆದಾಗ್ಯೂ ಕೆಲ ಸರ್ಕಾರಿ ಕಾರುಗಳಿಗೆ ಈ ರೀತಿಯ ಗ್ಲಾಸ್ ಬಳಕೆ ಆಗುತ್ತಿದೆ.

    ಶೇ. 70 ರಷ್ಟು ಪಾರದರ್ಶಕವಾಗಿರಬೇಕು ಎಂಬ ನಿಯಮವನ್ನು ಅಧಿಕಾರಿಗಳ ಕಾರುಗಳೇ ಸ್ಪಷ್ಟವಾಗಿ ಉಲ್ಲಂಘನೆ ಮಾಡಿ ತಿರುಗುತ್ತಿದ್ದರೂ ಕ್ಯಾರೆ ಎನ್ನುವವರಿಲ್ಲ. ಕೆಎ 33 ಎಂ 3090 ನಂಬರಿನ ವಾಹನ ಹಾಗೂ ಅರಣ್ಯ ಇಲಾಖೆಯ ಕೆಎ 04 ಜಿ 1879 ವಾಹನಗಳು ಕಾನೂನು ನಿಯಮಗಳನ್ನು ಉಲ್ಲಂಘಿಸಿದ್ದು ಪತ್ರಿಕೆ ಕ್ಯಾಮೆರಾ ಕಣ್ಣಿಗೆ ಕಂಡುಬಂತು.

    ಈ ಇಲಾಖೆಗಳ ಅಧಿಕಾರಿಗಳೇ ಸ್ವತಃ ಕಾರುಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿರುವುದನ್ನು ನೋಡಿ ನಾಗರಿಕರು “ಏನು ಮಾಡೊಕ್ಕಾಗೊದಿಲ್ಲ” ಎಂದುಕೊಳ್ಳುತ್ತಾ ಮುಂದಕ್ಕೆ ಹೋಗುತ್ತಿರುವುದು ಕಂಡುಬಂತು.

    ಸಾಮಾನ್ಯ ಜನರು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ದಂಡ ಹಾಕುವ ಆರ್‌ಟಿಒ ಅಧಿಕಾರಿಗಳು, ಮತ್ತು ಪೋಲಿಸ್ ಇಲಾಖೆಯ ಸಿಬ್ಬಂದಿಗಳು, ಸುಪ್ರೀಂ ಆದೇಶ ಉಲ್ಲಂಘನೆ ಮಾಡಿ ಕೂಲಿಂಗ್ ಟಿಂಟ್ ಅಳವಡಿಸಿರುವ ಕಾರು ಬಳಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ ಸುಪ್ರಿಂ ಕೋರ್ಟ್ ಆದೇಶವೂ ಈ ಅಧಿಕಾರಿಗಳಿಗೂ ಗೊತ್ತಿಲ್ಲವೋ ಅಥವಾ ಏನು ಮಾಡಿದರೂ ನಡೆಯುತ್ತದೆ ಎಂಬ ಅಸಡ್ಡೆಯೋ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

    apvc-iconPost Views: 0
  • ರೈತರ ಬದುಕಿಗೆ ಕೊಳ್ಳಿಯಿಟ್ಟ ಸರ್ಕಾರ | 22ನೇ ದಿನಕ್ಕೆ ಮುಂದುವರೆದ ಧರಣಿ: ರೈತ ಹನುಮಂತ ತಂದೆ ಮಾನಪ್ಪ ಪೂಜಾರಿ ಮದ್ರಿಕಿ ವಿಷ ಸೇವಿಸಲು ಪ್ರಯತ್ನ

    ರೈತರ ಬದುಕಿಗೆ ಕೊಳ್ಳಿಯಿಟ್ಟ ಸರ್ಕಾರ | 22ನೇ ದಿನಕ್ಕೆ ಮುಂದುವರೆದ ಧರಣಿ: ರೈತ ಹನುಮಂತ ತಂದೆ ಮಾನಪ್ಪ ಪೂಜಾರಿ ಮದ್ರಿಕಿ ವಿಷ ಸೇವಿಸಲು ಪ್ರಯತ್ನ

    *ಕೆಬಿಜೆಎನ್‌ಎಲ್ ಕಚೇರಿ ಮುಂದೆ ನೀರಿಗಾಗಿ ಪ್ರತಿಭಟನೆ*

    ರೈತರೊಂದಿಗೆ ಮಾತನಾಡದೆ ಹೊರಟು ಹೋದ ಜಿಲ್ಲಾಧಿಕಾರಿ

    *ಜಿಲ್ಲಾಧಿಕಾರಿ ನಡೆಗೆ ಆಕ್ರೋಶಗೊಂಡ ರೈತರು ತಹಶೀಲ್ದಾರ್‌ಗೆ ಘೇರಾವ:*

    *ರೈತರ ಕಣ್ಣೀರು, ನಿಟ್ಟುಸಿರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ: ಸತ್ಯಂಪೇಟೆ*

    *ಸತ್ಯಕಾಮ ವಾರ್ತೆ ಶಹಾಪುರ:*
    ರೈತರು ಬೆಳೆದ ಕೋಟ್ಯಾಂತರ ರೂಪಾಯಿ ಮೌಲ್ಯದ ಮೆಣಸಿನಕಾಯಿ ಬೆಳೆ ದಿನಗಳೆದಂತೆ ಕಮರುತಿದ್ದು, ಈ ಕುರಿತು ರೈತ ಸಂಘದ ಹೋರಾಟ 22ನೇ ದಿನಕ್ಕೆ ಕಾಲಿಟ್ಟರು ಸರ್ಕಾರ ಹೋರಾಟವನ್ನು ಹಗುರವಾಗಿ ತೆಗೆದುಕೊಂಡಿದ್ದು, ರೈತರ ಸಹನೆ ಕಟ್ಟೆಯೊಡೆದು ಹೋಗಿದ್ದು ಶುಕ್ರವಾರ ರೈತರು ಮಾಡು ಇಲ್ಲವೇ ಮಡಿ ಎನ್ನುವ ಸ್ಥಿತಿಗೆ ಮುಟ್ಟಿತ್ತು. ಆಳುವ ಸರ್ಕಾರ ನಮ್ಮ ಪಾಲಿಗೆ ಸತ್ತು ಹೋಗಿದೆ, ಬೆಳೆಗೆ ನೀರು ಬಿಡಿ ಎಂದರು ಮುಖ್ಯಮಂತ್ರಿಯಿಂದ ತಹಶೀಲ್ದಾರರವರೆಗೆ ಹಾರಿಕೆ ಉತ್ತರಗಳು ಬರುತ್ತಿವೆ, ರೈತರ ಕಣ್ಣೀರು, ನಿಟ್ಟುಸಿರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲವೆಂದು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

    ಸಮೀಪದ ಭೀಮರಾಯನಗುಡಿ ಕೆಬಿಜೆಎನ್‌ಎಲ್ ಆಡಳಿತ ಕಚೇರಿ ಎದುರು ಶುಕ್ರವಾರ ಬೆಳಗ್ಗೆ ಪ್ರಾರಂಭವಾದ ಹೋರಾಟದಲ್ಲಿ ಜಿಲ್ಲಾಧಿಕಾರಿಗಳು ಪಾಲ್ಗೊಂಡು, ಸರ್ಕಾರದ ನಿರ್ಧಾರ ತಿಳಿಸುವ ಬಗ್ಗೆ ಕಾಯುವಂತೆ ತಿಳಿಸಿ, ರೈತರನ್ನು ಕೂಡಿಸಿ ತಾವು ಹೇಳದ ಕೇಳದೆ ಹೊರಟು ಹೋದದ್ದು, ಇದೆಂಥ ನ್ಯಾಯ? ರೈತರ ನೋವು ಹತಾಶೆ, ಸಂಕಟ ಅರ್ಥವಾಗದಿರುವುದು ಎಂತಹ ವಿಪರ್ಯಾಸ? ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲೇ ಹನುಮಂತ ತಂದೆ ಮಾನಪ್ಪ ಪೂಜಾರಿ ಮದ್ರಿಕಿ ವಿಷ ಸೇವಿಸಲು ಪ್ರಯತ್ನಿಸಿದ್ದು ಕ್ಷಣದಲ್ಲಿ ದುರಂತ ತಪ್ಪಿದೆ, ಇಷ್ಟಾದರೂ ಸರಕಾರ ರೈತರ ಸ್ಥಿತಿಯ ಗಂಭೀರ ಅರಿತುಕೊಳ್ಳುತ್ತಿಲ್ಲವೆಂದು ಆರೋಪಿಸಿದರು.

    ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರು ಮುಖ್ಯಮಂತ್ರಿಗಳಿಗೆ ಮಾತನಾಡಿದ್ದು, ನೀರಾವರಿ ಎಮ್.ಡಿ ಅವರಿಂದ ಸಲಹೆ ಪಡೆದಿದ್ದು, ನೀರಾವರಿ ಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬ ಭರವಸೆಯು ರೈತರ ಪ್ರತಿಭಟನೆಯ ಕಾವು ಸ್ವಲ್ಪ ತಣ್ಣಗಾಗಿತ್ತು.

    ಆದರೆ ಸಂಜೆಯಾಗುತ್ತಲೇ ಎಲ್ಲಾ ಅಧಿಕಾರಿಗಳು ಉತ್ತರ ನೀಡದೆ ಹೋಗಿದ್ದು, ರೈತರ ಸಹನೆ ಕೆಣಕಿದ್ದು, ತಹಶೀಲ್ದಾರರಲ್ಲಿ ಘೇರಾವು ಹಾಕಿ ಪ್ರತಿಭಟಿಸಿದರು, ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೋಲಿಸರ ಮನವರಿಕೆಯಿಂದ ಸ್ವಲ್ಪಮಟ್ಟಿಗೆ ಶಾಂತವಾಯಿತು.

    *ಸರ್ಕಾರದ ಹಠ ಸರಿಯಲ್ಲ:* 22 ದಿನಗಳಿಂದ ಪ್ರತಿಭಟನೆ ನಡೆದರೂ ಸರ್ಕಾರದ ಮೊಂಡತನ ರೈತರ ಬದುಕಿಗೆ ಸಂಕಟ ತಂದಿದೆ, ಲಕ್ಷಾಂತರ ರೂ ಮೆಣಸಿನಕಾಯಿ ಬೆಳೆ ಹಾಳಾಗುತ್ತಿದ್ದು, ರೈತರನ್ನು ರೊಚ್ಚಿಗೇಳಿಸುತ್ತಿದೆ, ಇನ್ನಾದರೂ ಸಕಾರಾತ್ಮಕ ನಿಲುವು ತೆಗೆದುಕೊಂಡು ರೈತರ ನೆರವಿಗೆ ಸರ್ಕಾರ ಬರಬೇಕಾಗಿದೆ.

    ಈ ಸಂದರ್ಭದಲ್ಲಿ ರೈತ ಮುಖಂಡರಾದ ಶರಣು ಮಂದ್ರವಾಡ, ನಾಗರತ್ನ ಪಾಟೀಲ್, ಮಲ್ಲಣ್ಣ ಪರಿವಾಣ, ಮಹೇಶ ಸುಬೇದಾರ ಸೇರಿದಂತೆ ನೂರಾರು ರೈತರು ಇದ್ದರು.

    apvc-iconPost Views: 0
  • ಸರಕಾರದ ಆದೇಶಕ್ಕಿಲ್ಲಿಲ್ಲ ಕವಡೆ ಕಿಮ್ಮತ್ತು

    ಸರಕಾರದ ಆದೇಶಕ್ಕಿಲ್ಲಿಲ್ಲ ಕವಡೆ ಕಿಮ್ಮತ್ತು

    ಗುರುತಿನ ಚೀಟಿ ಧರಿಸಿ ಕರ್ತವ್ಯ ನಿರ್ವಹಿಸಲು ಅಧಿಕಾರಿ/ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯ

    ವರದಿ:ಕುದಾನ್ ಸಾಬ್
    ಯಾದಗಿರಿ: ಜಿಲ್ಲೆಯ ವಡಗೇರ ತಾಲ್ಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಯಾವೊಬ್ಬ ಸಿಬ್ಬಂದಿಯೂ ಕಚೇರಿಯ ಕರ್ತವ್ಯಯವಧಿಯಲ್ಲಿ ಸಿಬ್ಬಂದಿಯ ಗುರುತಿನ ಚೀಟಿ ಧರಿಸದೇ ಸರ್ಕಾರದ ಆದೇಶ ಉಲ್ಲಂಘನೆ ಮಾಡುತ್ತಿರುವುದು ನಡೆಯುತ್ತಿದೆ.

    ಈ ಕುರಿತು ಪತ್ರಿಕೆ ರಿಯಾಲಿಟಿ ಚೆಕ್ ಮಾಡಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ಐಡಿ ಕಾರ್ಡ್ ಬಗ್ಗೆ ಸಿಬ್ಬಂದಿಯವರಿಗೆ ಕೇಳಿದರೆ, ಟ್ಯಾಗ್ ಇಲ್ಲಾ, ಐಡಿ ಕಾರ್ಡ್ ಕೊಟ್ಟಿಲ್ಲ ಎಂಬ ಸಬೂಬುಗಳ ಕಥೆ ಕಟ್ಟುತ್ತಾರೆ ಹೊರತು ಅದನ್ನು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಐಡಿ ಕಾರ್ಡ್ ತೆಗೆದುಕೊಳ್ಳುವ ಕನಿಷ್ಠ ಸೌಜನ್ಯವು ಇವರಿಗಿಲ್ಲ,

    ಮೊದಲೇ ಹೊಸ ತಾಲ್ಲೂಕು ಆಗಿದ್ದು, ಅಲ್ಲದೇ ತೀರ ಹಿಂದುಳಿದ ಭಾಗವಾಗಿರುವುದರಿಂದ ಯಾವುದೇ ಜಿಲ್ಲಾ ಇಲ್ಲವೇ ರಾಜ್ಯಮಟ್ಟದ ಅಧಿಕಾರಿಗಳು ಇಲ್ಲವೇ ಪ್ರಮುಖರು ಬರುವ ಸಾಧ್ಯತೆಯೂ ಇಲ್ಲದಿರುವುದರಿಂದ ಸಿಬ್ಬಂದಿಗೆ ಕಾನೂನು ಪಾಲನೆ ಮಾಡಬೇಕು ಎಂಬುದರ ಬಗ್ಗೆ ಎಳ್ಳಷ್ಟು ಚಿಂತೆ ಇಲ್ಲದಿರುವುದು ಕಂಡುಬಂತು.

    ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು 16.03.2021 ರಂದು ಈ ಕುರಿತು ಸ್ಪಷ್ಟ ಆದೇಶ (ಸಂಖ್ಯೆ: ಸಿ.ಆ.ಸು.ಇ 12 ಕತವ 2021) ಹೊರಿಡಿಸಿದ್ದು, ಇಲಾಖೆ ನೌಕರರು ಅಧಿಕಾರಿಗಳು ತಮ್ಮ ತಮ್ಮ ಹೆಸರಿನ ಹುದ್ದೆಯ ಗುರುತಿನ ಚೀಟಿ ಕಡ್ಡಾಯವಾಗಿ ಧರಿಸಬೇಕೆಂಬ ಸುತ್ತೋಲೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಟ್ಟಿದ್ದು ಇರುತ್ತದೆ. ಇದರ ಪ್ರಕಾರ ಎಲ್ಲ ಸರ್ಕಾರಿ ನೌಕರರು, ನಿಗಮಗಳ ನೌಕರರುಗಳಿಗೆ ಇದು ಅನ್ವಯವಾಗುತ್ತದೆ.

    ಆದರೆ ವಡಗೇರಾ ತಾಲ್ಲೂಕಿನಲ್ಲಿ ಇದರ ಪಾಲನೆ ಮಾತ್ರ ಆಗುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ಕುರಿತು ತಹಸೀಲ್ದಾರ ಶ್ರೀನಿವಾಸ ಚಾಪಲ್ ರನ್ನು ವಿಚಾರಿಸಿದರೆ ಈ ಬಗ್ಗೆ ಐಡಿ ಕಾರ್ಡ್ ಹಾಕಿಕೊಂಡು ಕುಳಿತುಕೊಳ್ಳಬೇಕೆಂದು ಏನಾದರು ಇದೆಯಾ, ಆ ರೀತಿ ನಿಯಮವೇನು ಇಲ್ಲಾ ಎಂದು ಪತ್ರಿಕೆಗೆ ನಿರ್ಲಕ್ಷ್ಯದಿಂದ ಪ್ರತಿಕ್ರಿಯಿಸಿದರು.

    ಹೀಗಾಗಿ ತಾಲ್ಲೂಕಿನಲ್ಲಿ ಮುಖ್ಯಸ್ಥರೇ ಹೀಗೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದರೆ ಇನ್ನು ಸಿಬ್ಬಂದಿಯವರ ಕಥೆ ಹೇಗಿರಬೇಡ? ಇದನ್ನಂತೂ ಹೇಳಲು ಬಾರದು, ಗ್ರಾಮೀಣ ಪ್ರದೇಶದಲ್ಲಿ ಒಂದು ಜನಪದರ ಗಾದೆ ಚಾಲ್ತಿಯಲ್ಲಿದೆ ಅದೇನೆಂದರೆ ಶಾಲೆಲಿ ಮಾಸ್ತರ ನಿಂತು ಸೂಸೂ ಮಾಡಿದರೆ ಮಕ್ಕಳು ಓಡಾಡಿ ಮಾಡಿದರು ಎಂಬ ಮಾತಿದೆ.

    ಹೀಗೆಯೇ ಜಿಲ್ಲೆಯಲ್ಲಿಯೂ ಸಹ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇದ್ದು, ಪ್ರಮುಖ ಸ್ಥಾನದಲ್ಲಿರುವ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಜ್ಞಾನ ಇಲ್ಲದಿದ್ದರೆ ಸಿಬ್ಬಂದಿಯವರಂತೂ ಇನ್ನು ಅಧ್ವಾನವಾಗಿ ವರ್ತಿಸುವುದು ಸರ್ವೆ ಸಾಮಾನ್ಯ. ಎಷ್ಟೋ ಕಚೇರಿಯಲ್ಲಿ ಸರ್ಕಾರದ ಸುತ್ತೋಲೆ ಸೂಚನೆ ಆದೇಶಗಳು ಇರಲಿ ಹೈಕೋರ್ಟ್ ಸುಪ್ರಿಂ ಕೋರ್ಟ್ ಆದೇಶಗಳನ್ನೇ ಪಾಲಿಸದೇ ಜಾಣ ಕುರುಡು ಇಲ್ಲವೇ ಮೈಗಳ್ಳ ಕುರುಡು ಇಲ್ಲವೇ ಅಸಡ್ಡೆ ಕುರುಡು/ಕಿವುಡು ಅನುಸರಿಸುತ್ತಿರುವುದರಿಂದ ಶ್ರೀಸಾಮಾನ್ಯರಿಂದ ಹಿಡಿದು ಜಿಲ್ಲೆ ರಾಜ್ಯದ ಏಳ್ಗೆಯೂ ಕನಸೇ? ಎಂಬ ಪ್ರಶ್ನೆ ಉದ್ಭವಿಸುತ್ತಿದೆ ಎಂಬುದಂತೂ ಸುಳ್ಳಲ್ಲ.

    apvc-iconPost Views: 5
  • *ತಿಂಥಣಿ ಮೌನೇಶ್ವರ ದೇವಸ್ಥಾನದ ಬಳಿ ಹುಲಿ ಚರ್ಮ ಪತ್ತೆ*

    *ತಿಂಥಣಿ ಮೌನೇಶ್ವರ ದೇವಸ್ಥಾನದ ಬಳಿ ಹುಲಿ ಚರ್ಮ ಪತ್ತೆ*

    *ಸತ್ಯಕಾಮ ವಾರ್ತೆ ಸುರಪುರ:*
    ತಾಲೂಕಿನ ತಿಂಥಣಿ ಗ್ರಾಮದಲ್ಲಿನ ಜಗದ್ಗುರು ಮೌನೇಶ್ವರ ದೇವಸ್ಥಾನದ ಬಳಿಯಲ್ಲಿನ ಈಶ್ವರ ದೇವಸ್ಥಾನದ ಮುಂಭಾಗದಲ್ಲಿನ ಪಾನ್ ಡಬ್ಬಿಯ ಮೇಲೆ ಹುಲಿ ಚರ್ಮ ಪತ್ತೆಯಾಗಿದ್ದು,ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ.

    ಶನಿವಾರ ರಾತ್ರಿ ಈಶ್ವರ ದೇವಸ್ಥಾನದ ಬಳಿಯಲ್ಲಿನ ಪಾನ್ ಡಬ್ಬಾದ ಮೇಲೆ ಪ್ಲಾಸ್ಟಿಕ್ ಇರುವುದನ್ನು ನೋಡಿದ ಸ್ಥಳಿಯರು ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿಯನ್ನು ನೀಡಿದ್ದಾರೆ,ನಂತರ ತಡರಾತ್ರಿ 1 ಗಂಟೆಯ ವೇಳೆಗೆ ಸುರಪುರ ಠಾಣೆಯ ಪಿಎಸ್‌ಐ ಕೃಷ್ಣಾ ಸುಬೇದಾರ ಮತ್ತು ತಂಡ ಆಗಮಿಸಿ ನೋಡಿದಾಗ, ಪ್ಲಾಸ್ಟಿಕ್‌ನಲ್ಲಿ ಹುಲಿ ಚರ್ಮ ಇರುವುದು ಗೊತ್ತಾಗಿದೆ.ನಂತರ ಅದನ್ನು ಠಾಣೆಗೆ ತರಲಾಗಿದೆ.ನಂತರ ರವಿವಾರ ಮುಂಜಾನೆ ತಿಂಥಣಿ ಗ್ರಾಮದಲ್ಲಿ ಹುಲಿ ಚರ್ಮ ದೊರೆತ ಸ್ಥಳಕ್ಕೆ ತೆರಳಿ ಪಂಚನಾಮೆ ಮಾಡಲಾಗಿದೆ.

    ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹುಲಿ ಚರ್ಮವನ್ನು ಒಪ್ಪಿಸಲಾಗಿದೆ.ಈ ಸಂದರ್ಭದಲ್ಲಿ ಭಾಗವಹಿಸಿದ್ದ ತಿಂಥಣಿ ಗ್ರಾಮ ಪಂಚಾಯತಿ ಸದಸ್ಯ ಬೈರಣ್ಣ ಅಂಬಿಗೇರ ಮಾತನಾಡಿ, ಈಶ್ವರ ದೇವಸ್ಥಾನದಲ್ಲಿ ಸಂಗಯ್ಯ ಎನ್ನುವಂತೆ ಸಾಧು ಒಬ್ಬರು ಇರುತ್ತಿದ್ದರು,ಅವರು ಇತ್ತೀಚೆಗೆ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದಾರೆ,ಅವರ ಕೊಠಡಿಯ ಬೀಗವನ್ನು ತೆಗೆಯಲಾಗಿದೆ, ಈ ಹುಲಿ ಚರ್ಮ ಅವರ ಕೊಠಡಿಯಲ್ಲೆ ಇರುವುದಾಗಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ.

    ಅಲ್ಲದೆ ದಲಿತ ಸೇನೆ ತಾಲೂಕು ಅಧ್ಯಕ್ಷ ಮರಿಲಿಂಗಪ್ಪ ಗುಡಿಮನಿ ಹುಣಸಿಹೊಳೆ ಮಾತನಾಡಿ, ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ತನಿಖೆ ಮಾಡಿ ಹುಲಿ ಚರ್ಮ ಯಾರಿಗೆ ಸೇರಿದ್ದು,ಇದು ಎಲ್ಲಿಂದ ಬಂತು ಮತ್ತು ಇದರ ಹಿಂದೆ ಯಾರಿದ್ದಾರೆ ಎನ್ನುವುದು ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    1)
    ಹುಲಿ ಚರ್ಮದಂತೆ ಕಾಣಿಸುತ್ತದೆ ಆದರೆ ಇದು ಅಸಲಿಯೋ ನಕಲಿಯೋ ಎನ್ನುವುದು ಪ್ರಯೋಗಾಲಯದಿಂದ ತಿಳಿದು ಬರಲಿದೆ,ಇದು ಎಲ್ಲಿಂದ ಬಂತು ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡಬೇಕಿದೆ-

    *ಕೃಷ್ಣಾ ಸುಬೇದಾರ, ಪಿಎಸ್‌ಐ*
    ——————–

    2)
    ಹುಲಿಯ ಚರ್ಮ ಈಶ್ವರ ದೇವಸ್ಥಾನದಲ್ಲಿದ್ದ ಸಂಗಯ್ಯ ಎನ್ನುವ ಸಾಧುವಿಗೆ ಸೇರಿದ್ದು ಎನ್ನುವ ಅನುಮಾನವಿದೆ ಸರಿಯಾದ ತನಿಖೆ ನಡೆಸಿ ಆರೋಪಿಗಳ ಪತ್ತೆ ಮಾಡಿ ಕಠಿಣ ಶಿಕ್ಷೆ ನೀಡಬೇಕು

    *ಬೈರಣ್ಣ ಅಂಬಿಗೇರ,*
    *ಗ್ರಾ.ಪಂ ಸದಸ್ಯ ತಿಂಥಣಿ*
    —————–

    3)
    ರಾಷ್ಟ್ರ ಪ್ರಾಣಿ ಹುಲಿಯ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಹುಲಿಯನ್ನು ಕೊಂದಿರುವುದು ಮಹಾ ಅಪರಾಧವಾಗಿದ್ದು, ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ನಮ್ಮ ಸಂಘಟನೆ ಹೋರಾಟ ನಡೆಸಲಿದೆ

    *ಮರಿಲಿಂಗಪ್ಪ ಗುಡಿಮನಿ*
    *ದಲಿತ ಸೇನೆ ತಾ.ಅಧ್ಯಕ್ಷ*

    apvc-iconPost Views: 12
  • ಪ್ರಧಾನ ಮಂತ್ರಿ ಜನೌಷದಿ ಕೇಂದ್ರಕ್ಕೆ ಬೀಗ

    ಪ್ರಧಾನ ಮಂತ್ರಿ ಜನೌಷದಿ ಕೇಂದ್ರಕ್ಕೆ ಬೀಗ

    *ಸತ್ಯಕಾಮ ವಾರ್ತೆ ಶಹಾಪುರ*
    *ವರದಿ:ಕುದಾನ್ ಸಾಬ್*
    ಶಹಾಪುರ : ನಗರದ ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷದಿ ಕೇಂದ್ರಕ್ಕೆ ಬೆಳ್ಳಗೆ 10ಗಂಟೆಯಾದರು ಬೀಗ ಹಾಕಿರುವುದು ಕಂಡು ಬಂದಿದೆ,

    ಬೆಳ್ಳಗೆ 9 ಗಂಟೆಗೆ ತೆರಯಬೇಕಾದ ಈ ಜನೌಷಧ ಕೇಂದ್ರ ಬೆಳ್ಳಗೆ 10ಗಂಟೆಯಾದರು ತೆರೆದಿಲ್ಲಾ, ಇದ್ದರಿಂದ್ದಾಗಿ ಔಷದಿ ಪಡೆಯಲು ಬಂದಿದ್ದ ರೋಗಿಗಳು ಸಂಕಷ್ಟ ಅನುಭವಿಸಿದರು.

    ದುಬಾರಿ ಬೆಲೆತೆತ್ತು ಖರೀದಿಸಲು ಸಂಕಷ್ಟ ಎದುರಿಸುತ್ತಿದ್ದ ಬಡ ಜನರಿಗೆ ಅಗ್ಗದ ಬೆಲೆಯಲ್ಲಿ ಮಾತ್ರೆ-ಔಷಧಗಳು ದೊರೆಯಲೆಂದು ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರಗಳನ್ನು ತೆರೆದಿದೆ.

    apvc-iconPost Views: 1
  • ಶಹಾಪುರ ನಗರದಾದ್ಯಂತ ಜೀವ ಬಲಿಗೆ ಕಾದಿವೆ ತೆರದ ವಿದ್ಯುತ್ ಕಂಬ, ಟಿಸಿಗಳು

    ಶಹಾಪುರ ನಗರದಾದ್ಯಂತ ಜೀವ ಬಲಿಗೆ ಕಾದಿವೆ ತೆರದ ವಿದ್ಯುತ್ ಕಂಬ, ಟಿಸಿಗಳು

    *ವರದಿ:ಕುದಾನ್ ಸಾಬ್*
    *ಸತ್ಯಕಾಮ ವಾರ್ತೆ ಯಾದಗಿರಿ:*
    ನಗರ, ಗ್ರಾಮ ಮನೆ ಬೆಳಗಬೇಕಾದ ಜೆಸ್ಕಾಂ ವಿದ್ಯುತ್ ಶಕ್ತಿ ಪೂರೈಸುವ ಕಂಬಗಳು, ಟಿಸಿಗಳು ಜೀವ ತೆಗೆಯುವ ರಕ್ಕಸ ಶಕ್ತಿಯಾಗಿ ಬಾಯಿ ತೆರೆದು ನಿಂತಿರುವ ಅಪಾಯಕಾರಿ ಜಿಲ್ಲೆಯ ಶಹಾಪುರ ನಗರದ ತುಂಬ ಎಲ್ಲೆಂದರಲ್ಲಿ ಕಣ್ಣಿಗೆ ರಾಚುತ್ತಿವೆ.

    ವಿಶೇಷವೆಂದರೆ ಜಿಲ್ಲಾ ಉಸ್ತುವಾರಿ ಸಚಿವರ ಮತಕ್ಷೇತ್ರವಾದ ಶಹಾಪೂರ ತಾಲೂಕಿನಲ್ಲಿ ಮತ್ತು ವಿಶೇಷವಾಗಿ ಶಹಾಪುರ ನಗರದಲ್ಲಿ ವಿದ್ಯುತ್ ಕಂಬಗಳು, ವಿದ್ಯುತ್ ಪರಿವರ್ತಕಗಳ ಕಂಬಗಳು ಅಳವಡಿಸಿರುವ ರೀತಿ ಸ್ಥಿತಿ ನೋಡಿದರೆ ಇವು ವಿದ್ಯುತ್ ಶಕ್ತಿ ನೀಡುವ ಕಂಬಗಳೋ ಅಥವಾ ಶಕ್ತಿ ಕಿತ್ತು ಸಾವು ದಯಪಾಲಿಸುವ ಯಮಕಂಭಗಳೋ ಎಂಬ ಅನುಮಾನ ಬರದೇ ಇರದು.

    ವಿದ್ಯುಚ್ಛಕ್ತಿಯು ನಮ್ಮ ಜೀವನದ ಅತ್ಯಂತ ಅವಿಭಾಜ್ಯ ಅಂಗವಾಗಿದೆ, ವಿದ್ಯುತ್ ಮೇಲೆಯೇ ಇಂದು ಸಂಪೂರ್ಣವಾಗಿ ಅವಲಂಬಿಸಿದ್ದೆವೆ.ಪ್ರತಿದಿನ ಸಾವಿರಾರು ಕಾರ್ಯಗಳಿಗೆ ನಮಗೆ ಇದು ಬೇಕಾಗುತ್ತದೆ. ಆದರೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ವಿದ್ಯುತ್ ಅತ್ಯಂತ ಅಪಾಯಕಾರಿ ಎಂಬುದಕ್ಕೆ ಇತ್ತೀಚಿಗೆ ಬೆಂಗಳೂರಿನ ಕಾಡು ಗೋಡಿಯಲ್ಲಿ ಸಂಭವಿಸಿದ ತಾಯಿ-ಮಗು ದುರಂತ ಸಾವು ಜ್ವಲಂತ ಸಾಕ್ಷಿ. ಅಂತಹ ಘಟನೆಗಳು ಶಹಾಪುರದಲ್ಲೂ ಸಂಭವಿಸುವ ಸಾಧ್ಯತೆಯ ಪ್ರಮಾಣ ಅತಿ ಗರಿಷ್ಟ ಮಟ್ಟದಲ್ಲಿದೆ.

    ಹೌದು ಶಹಾಪುರದಲ್ಲಿ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿ ನಿಮಗೆ ಅಪಾಯಕಾರಿ ಸ್ಥಿತಿಯಲ್ಲಿ ತೀರ ರಸ್ತೆಗೆ ಹೊಂದಿಕೊಂಡು ಇರುವ ವಿದ್ಯುತ್ ಕಂಬಗಳು, ಟಿಸಿಗಳ ಕಂಬಗಳು ಕೈಗೆಟುಕುವ ಅಂತರದಲ್ಲಿ ತಂತಿಗಳನ್ನು ಜೋತು ಬೀಳಿಸಿಕೊಂಡು ಬಲಿಗೆ ಬಾಯಿ ತೆರೆದು ನಿಂತ ರಕ್ಕಸನ ನೋಡಿದಂತಾಗುತ್ತದೆ.

    ಉದಾಹರಣೆಗೆ ನಗರದ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಇಂತಹ ಅಪಾಯಕಾರಿ ವಿದ್ಯುತ್ ಕಂಬದ ಕೆಳಗೆ ವ್ಯಾಪಾರ ಮಾಡುತ್ತಿದ್ದಾರೆ ಒಂದು ವೇಳೆ ಅಚಾನಕ್ಕಾಗಿ ಅಲ್ಲಿನ ವಿದ್ಯುತ್ ಕಂಬದಲ್ಲಿನ ಕೇಬಲ್ ಅವರ ಮೇಲೆ ಬಿದ್ದರೆ ಅಲ್ಲೊಂದು ಬೆಂಗಳೂರಿನ ತಾಯಿ ಮಗುವಿನ ಘಟನೆ ನಡೆಯುವ ಸಾಧ್ಯತೆ ಪ್ರಮಾಣ ಮಾತ್ರ ಶೇ. 90ಕ್ಕೂ ಹೆಚ್ಚು ಎಂದು ಹೇಳಬೇಕು.

    ಅತ್ತ ನಗರಸಭೆ ಎದುರು ಇರುವ ಆಟೋ ಸ್ಟ್ಯಾಂಡ್ ನ ಬಳಿ ಕೂಡ ವಿದ್ಯುತ್ ಕಂಬಕ್ಕೆ ಯಾವುದೇ ಸುರಕ್ಷತೆ ಇಲ್ಲ, ಅಲ್ಲದೆ ಲಕ್ಷ್ಮಿನಗರ, ಕನ್ಯಕೂಳೂರ ಅಗಸಿ ಸೇರಿದಂತೆ ಪ್ರಮುಖ ಕಡೆ ವಿದ್ಯುತ್ ಕಂಬಕ್ಕೆ ತಂತಿಬೆಲಿ ಕೂಡ ಹಾಕಿಲ್ಲ,

    ಕೇಬಲ್ ಗೊಂಚಲು:
    ವಿದ್ಯುತ್ ಕಂಬಗಳಲ್ಲಿ ಇತರ ಕೇಬಲ್‌ಗಳು ರಾಶಿ ಇವೆ. ಬಹುತೇಕ ಕಂಬಗಳಲ್ಲಿ ವಿದ್ಯುತ್ ತಂತಿಗಳ ನಡುವೆಯೇ ನೆಟ್‌ವರ್ಕ್ ಇನ್ನಿತರ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಹಲವು ಕಂಬಗಳಲ್ಲಿ ಕೇಬಲ್ ಸುರಳಿ ಸುತ್ತಿ ಕೈಗೆಟಕುವಂತೆ ಕಟ್ಟಲಾಗಿದೆ. ಅನೇಕ ಕಡೆಗಳಲ್ಲಿ ಕೇಬಲ್ ತುಂಡಾಗಿ ಫುಟ್‌ಪಾತ್ ಹಾಗೂ ರಸ್ತೆಯಲ್ಲಿ ಬಿದ್ದಿವೆ. ವಿದ್ಯುತ್ ತಂತಿಗೆ ಸ್ಕಿನ್ ಆಗಿರುವ ಕೇಬಲ್ ತಾಕಿದರೆ ವಿದ್ಯುತ್ ಪ್ರವಹಿಸುವ ಸಾಧ್ಯತೆ ಇರುತ್ತದೆ. ಯಾವುದೋ ಕೇಬಲ್ ಎಂದು ತುಳಿದವರ ಪ್ರಾಣಕ್ಕೆ ಯರವಾಗುವುದು ಶತಸಿದ್ಧ.

    ಈ ರೀತಿಯ ಕೇಬಲ್‌ಗಳನ್ನು ಅಪಾಯಕಾರಿ ಕಂಬಗಳನ್ನು ತೆರವುಗೊಳಿಸಲು ಇಲ್ಲವೇ ಸೂಕ್ತ ಪ್ರತಿಬಂಧಕೋಪಾಯ ಕೈಗೊಳ್ಳಬೇಕಾದ ಇಲಾಖೆ ಕುಂಭಕರ್ಣ ನಿದ್ದೆಗೆ ಜಾರಿದೆ.

    ಇನ್ನು ಹಲವಾರು ಕಡೆ ಫುಟ್‌ಪಾತ್‌ನಲ್ಲೇ ಬೃಹತ್ ಗಾತ್ರದ ವಿದ್ಯುತ್ ಉಪಕರಣ ಅಳವಡಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಅವುಗಳ ಸುತ್ತ ತಂತಿ ಬೇಲಿ ಮಾದರಿಯನ್ನು ಅಳವಡಿಸಿಲ್ಲ. ಟ್ರಾನ್ಸ್ಫಾರ್ಮ್ರಗಳು ಕೆಲವೆಡೆ ಕೈಗೆಟುಕುವಷು ತಳಮಟ್ಟದಲ್ಲಿವೆ. ಇವುಗಳಿಂದಲೂ ಅಪಾಯ ಸಂಭವಿಸುವ ಸಾಧ್ಯತೆ ತೀರ ಹೆಚ್ಚು.

    ವಿದ್ಯುತ್ ಸುರಕ್ಷತೆಯ ಅಗತ್ಯತೆ ಅನಿವಾರ್ಯತೆಯನ್ನ ಅಧಿಕಾರಿಗಳು ಮನಗಾಣಬೇಕಿದೆ. ಆದರೆ ಅವರಿಗೆ ಬಡಿದೆಬ್ಬಿಸಲು ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ದರ್ಶನಾಪೂರ ಅವರ ಸ್ವಮತಕ್ಷೇತ್ರದ ವಾಸ್ತವದ ಕಡೆ ಗಮನಹರಿಸಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕಿದೆ ಇಲ್ಲದಿದ್ದಲ್ಲಿ ಮುಂದೆ ಸಂಭವಿಸುವ ಅನಾಹುತಗಳಿಗೆ ಎಲ್ಲರೂ ಹೊಣೆಗಾರರಾಗಬೇಕಾಗುತ್ತದೆ ಎಂಬುದು ಪತ್ರಿಕೆ ಕಳಕಳಿಯಾಗಿದೆ. ಯಾವ ಕ್ರಮ ಕೈಗೊಳ್ಳುವೋರು ಕಾದು ನೋಡಬೇಕಿದೆ.

    apvc-iconPost Views: 1
  • ಪತ್ರಕರ್ತರ ಮೇಲೆ ಮಾರಣಾಂತಿಕ ಹಲ್ಲೆ

    ಕಲಬುರಗಿ: ಕಲ್ಯಾಣ ಕಹಳೆ ಪತ್ರಿಕೆಯ ಸಂಪಾದಕರಾದ ಶರಣ ಗೌಡ ಪಾಟೀಲ್ ಪಾಳಾ ಇವರು ಇಂದು ಮದ್ಯಾನ ಸೇಡಂ ರೋಡ್ ಎರ್ ಪೋರ್ಟ ಹತ್ತಿರ ತಮ್ಮ ಗೆಳೆಯನ ಕಾರಲ್ಲಿ ಕೊಂಕನಹಳ್ಳಿಗೆ ಹೋಗುವಾಗ ಕೆಲ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿ ಆಗಿದ್ದಾರೆ.
    ಪೋಲಿಸರಿಗೆ ಈಗಾಗಲೆ ದೂರು ನೀಡಿದ್ದು ಶರಣ ಗೌಡ ಇವರು ಕಲಬುರಗಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    apvc-iconPost Views: 9
  • ಅಗಲಿದ ಹಿರಿಯ ಪತ್ರಕರ್ತ ಪಿ.ಎಂ.ಮಣ್ಣೂರ ಸೆರಿ ಐವರು ಚೇತನಗಳಿಗೆ ಕೆಯುಡಬ್ಲ್ಯೂಜೆ ನುಡಿ ನಮನ

    ಅಗಲಿದ ಹಿರಿಯ ಪತ್ರಕರ್ತ ಪಿ.ಎಂ.ಮಣ್ಣೂರ ಸೆರಿ ಐವರು ಚೇತನಗಳಿಗೆ ಕೆಯುಡಬ್ಲ್ಯೂಜೆ ನುಡಿ ನಮನ

    ಬೆಂಗಳೂರು: ಸುದ್ದಿ ಮನೆಯಲ್ಲಿ ಸುದೀರ್ಘ ಅವಧಿಗೆ ಪತ್ರಕರ್ತರಾಗಿ ಸೇವೆ ಸಲ್ಲಿಸಿ ಅಗಲಿದ ಸಿ.ಆರ್.ಕೃಷ್ಣರಾವ್, ಕೆ.ಎಸ್.ಸಚ್ಚಿದಾನಂದ ಮೂರ್ತಿ, ಜಿ.ಎನ್.ರಂಗನಾಥ ರಾವ್, ಪಿ.ಎಂ.ಮಣ್ಣೂರ, ಕೆ.ಪ್ರಹ್ಲಾದರಾವ್ , ಗುಡಿಬಂಡೆ ನರಸಿಂಹಮೂರ್ತಿ, ಟಿ.ಎಸ್.ರಾಜಾರಾವ್ ಅವರುಗಳಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ನುಡಿ ನಮನ ಸಲ್ಲಿಸಿ, ಅವರೆಲ್ಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

    ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ಚೇತನಗಳ ಸ್ಮರಣಾರ್ಥ ಎರಡು ನಿಮಿಷ ಮೌನ ಪ್ರಾರ್ಥನೆ ನಡೆಸಲಾಯಿತು.

    ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ನುಡಿನಮನ ಕಾರ್ಯಕ್ರಮಕ್ಕೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಅಗಲಿದ ಹಿರಿಯ ಪತ್ರಕರ್ತರರುಗಳು ಕೆಯುಡಬ್ಲ್ಯೂಜೆ ಜೊತೆಗೆ ಹೊಂದಿದ್ದ ಒಡನಾಟ ಮೆಲುಕು ಹಾಕಿದರು.

    ಜಿನ್ನಾರ್ ಪತ್ರಿಕೋದ್ಯಮದಲ್ಲಿ
    ಶಿಸ್ತಿನ ಸಿಪಾಯಿ: ಬಿ.ಕೆ ರವಿ

    ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥ್ ರಾವ್ ಅವರ ಬಗ್ಗೆ ಮಾತಾಡಿದ ಕೊಪ್ಪಳ ವಿ.ವಿ ಕುಲಪತಿ ಪ್ರೊ.ಬಿ.ಕೆ.ರವಿ, ಕನ್ನಡ ಭಾಷಾ ಬೆಳವಣಿಗೆಯಲ್ಲಿ ಜಿ.ಎನ್.ರಂಗನಾಥ್ ರಾವ್ ಅವರ ಕೊಡುಗೆ ಅನನ್ಯ. ಪ್ರಜಾವಾಣಿ ಪತ್ರಿಕೆಯಲ್ಲಿ ಸಾಹಿತ್ಯ ಸಾಪ್ತಾಹಿಕವನ್ನು ಅವರು ವಿಭಿನ್ನವಾಗಿ ರೂಪಿಸಿದರಲ್ಲದೆ, ಪತ್ರಿಕೋದ್ಯಮದಲ್ಲಿ ಅವರು ಶಿಸ್ತಿನ ಸಿಪಾಯಿಯಾಗಿಯೂ ಜನಪ್ರಿಯರಾದರು ಎಂದು ತಮಗೆ ಮಾರ್ಗದರ್ಶನ ನೀಡಿದ ನೆನಪನ್ನು ಮೆಲುಕು ಹಾಕಿದರು. ಅಗಲಿದ ಹಿರಿಯರ ನೆನಪಿನಲ್ಲಿ ಕೆಯುಡಬ್ಲ್ಯೂಜೆ ಕಾರ್ಯಕ್ರಮ ರೂಪಿಸಿ ಮಾದರಿ ಹೆಜ್ಜೆ ಇಟ್ಟಿದೆ ಎಂದು ಶ್ಲಾಘಿಸಿದರು. ಸಚ್ಚಿದಾನಂದಮೂರ್ತಿ ಅವರು ದೆಹಲಿಯಲ್ಲಿ ಮೂರು ದಶಕಗಳ ಕಾಲ ಪತ್ರಕರ್ತನಾಗಿ ಉತ್ತಮ ಸೇವೆ ಸಲ್ಲಿಸಿದರು ಎಂದರು.

    ಸಚ್ಚಿ ಅವರ ಪ್ರತಿಭೆ ಅನನ್ಯ:
    ಎಚ್. ಬಿ. ದಿನೇಶ್:

    ದೆಹಲಿ ಪತ್ರಿಕೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿದ್ದ ಸಚ್ಚಿದಾನಂದ ಮೂರ್ತಿ ಸದಾ ಸ್ನೇಹಪರರಾಗಿದ್ದರು. ರಾಜ್ಯದ ಅಭಿವೃದ್ಧಿ ಯೋಜನೆಗೆ ದೆಹಲಿಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದರು ಎಂದು ವಾರ್ತಾ ಇಲಾಖೆಯ ನಿವೃತ್ತ ಹಿರಿಯ ಜಂಟಿ ನಿರ್ದೇಶಕ ಎಚ್.ಬಿ. ದಿನೇಶ್ ಹೇಳಿದರು.

    ಸಿ.ಆರ್.ಕೆ. ಚಳುವಳಿಗಳ ನೇತಾರ: ಸಿದ್ಧನಗೌಡ ಪಾಟೀಲ್

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕಾರ್ಯದರ್ಶಿ ಹುದ್ದೆ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಸಿ.ಆರ್.ಕೃಷ್ಣರಾವ್ ಅವರು ಚಳುವಳಿಗಳ ನೇತಾರ ಆಗಿದ್ದರು ಎಂದು ನವಕರ್ನಾಟಕ ಪಬ್ಲಿಕೇಶನ್ಸ್ ನ “ಹೊಸತು” ಮಾಸಿಕದ ಸಂಪಾದಕ ಸಿದ್ಧನಗೌಡ ಪಾಟೀಲ್ ಅಭಿಪ್ರಾಯಪಟ್ಟರು. ಸಿ.ಆರ್.ಕೆ. ರಾವ್ ಅವರು ಪತ್ರಕರ್ತರ ಮತ್ತು ಪತ್ರಿಕಾ ಸಂಸ್ಥೆಗಳ‌ ಕೊಂಡಿಯಾಗಿ ಪ್ರಧಾನ ಪಾತ್ರ ವಹಿಸಿಕೊಂಡಿದ್ದರು ಎಂದೂ ಗುಣಗಾನ ಮಾಡಿದರು.

    ಮಣೂರ ಅವರ ಪತ್ರಿಕಾ ರಂಗದ ಸೇವೆ ಅನನ್ಯ: ಬಿ.ವಿ.ಮಲ್ಲಿಕಾರ್ಜುನಯ್ಯ

    ಹಿರಿಯ ಪತ್ರಕರ್ತರಾಗಿದ್ದ ಪಿ.ಎಂ.ಮಣೂರ ಅವರು ಬಹಳಷ್ಟು ಪತ್ರಕರ್ತರನ್ನು ಬೆಳೆಸುವ ಮೂಲಕ, ಪತ್ರಿಕೋದ್ಯಮದಲ್ಲಿ ಅಜಾತಶತ್ರುವಾಗಿದ್ದರು ಎಂದು ಐ.ಎಫ್.ಡಬ್ಲ್ಯೂ.ಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಹೇಳಿದರು.
    ವಿವಿಧ ವಿಷಯಗಳಲ್ಲಿ ಪ್ರಭುತ್ವ ಹೊಂದಿದ್ದ ಮಣೂರರವರ ಪತ್ರಿಕಾ ಸೇವೆ ನಿಜಕ್ಕೂ ಸ್ಮರಣೀಯ ಎಂದರು.

    ಕೆ.ಪ್ರಹ್ಲಾದರಾವ್ ಉತ್ತಮ ಸಂಘಟಕರಾಗಿದ್ದರು: ಪಿ.ಶೇಷಚಂದ್ರಿಕಾ
    ಕೋಲಾರವು ಹಿರಿಯ ಪತ್ರಕರ್ತರಾಗಿದ್ದ ಕೆ.ಪ್ರಹ್ಲಾದರಾವ್ ಅವರ ಕರ್ಮಭೂಮಿ ಆಗಿದ್ದರೂ, ಜಿಲ್ಲಾ ಮಟ್ಟದ ಪತ್ರಕರ್ತರ ಕಷ್ಟಗಳನ್ನು ಪರಿಹರಿಸುವಲ್ಲಿ ಅವರು ಸರ್ಕಾರ ಅಧಿಕಾರಿಗಳ ಬಳಿಗೆ ಹೋಗುವ ಮೂಲಕ ಉತ್ತಮ ಸಂಘಟಕರೂ ಆಗಿದ್ದರು ಎಂದು ಹಿರಿಯ ಪತ್ರಕರ್ತ ಪಿ.ಶೇಷಚಂದ್ರಿಕಾ ನುಡಿದರು.

    ಹಿರಿಯ ಪತ್ರಕರ್ತರಾದ ಈಶ್ವರ ದೈ ತೋಟ ಅವರು ಮಾತನಾಡಿ, ತಾವು ಬೆಂಗಳೂರುಬಂದ ಸಂದರ್ಭದಲ್ಲಿ ಇವರೆಲ್ಲರ ಜೊತೆಗೆ ಹೊಂದಿದ್ದ ಒಡನಾಟ ಮೆಲುಕು ಹಾಕಿದರು.
    ಹಿರಿಯ ಪತ್ರಕರ್ತರಾದ ಕಂ.ಕ.ಮೂರ್ತಿ, ಧಾರವಾಡ ಕರ್ನಾಟಕ ವಿವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೊ.ಜೆ.ಎಂ.ಚಂದುನವರ, ಸಾಗ್ಗರೆ ರಾಮಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಗಲಿದ ಚೇತನಗಳ ಗುಣಗಾನ ಮಾಡಿದರು.

    ವಿತರಕರಿಬ್ಬರ ಸಾವಿಗೆ ಸಂತಾಪ:
    ಾಪಘಾತದಲ್ಲಿ ಮೃತಪಟ್ಟ ಪತ್ರಿಕಾ ವಿತರಕರಾದ ಕುಮಾರ್ ಮತ್ತು ಮನೋಜ್ ಅವರಿಗೆ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು. ಅವರುಗಳ ಬಗ್ಗೆ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿದರು.

    ಕಾರ್ಯಕ್ರಮದಲ್ಲಿ ಕೆ.ಯೂ.ಡಬ್ಲ್ಯೂ.ಜೆ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೋಮಶೇಖರ ಗಾಂಧಿ, ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಉಪಾಧ್ಯಕ್ಷ ಕೆ.ಎಂ.ಜಿಕ್ರಿಯಾ, ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ್ ಸೇರಿದಂತೆ ಸಂಘದ ಹಲವಾರು ಸದಸ್ಯರು ನುಡಿನಮನ ಕಾರ್ಯಕ್ರಮದಲ್ಲಿ ಹಾಜರಿದ್ದರು .

    ಕಾರ್ಯಕ್ರಮದ ಕೊನೆಯಲ್ಲಿ ರಾಜ್ಯ ಸಂಘದ ಖಜಾಂಚಿ ವಾಸುದೇವ ಹೊಳ್ಳ ಅವರು ವಂದನಾರ್ಪಣೆ ಮಾಡಿದರು.

    apvc-iconPost Views: 0
  • ಕನ್ನಡ ರಾಜ್ಯೋತ್ಸವದ ಮೆರೆವಣಿಗೆ ವೇಳೆ ತಪ್ಪಿದ ಭಾರಿ ಅನಾಹುತ | ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು

    ಕನ್ನಡ ರಾಜ್ಯೋತ್ಸವದ ಮೆರೆವಣಿಗೆ ವೇಳೆ ತಪ್ಪಿದ ಭಾರಿ ಅನಾಹುತ | ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು

    ವಡಗೇರಾ:68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಲವು ಸಂಘಟನೆ ಹಾಗೂ ಖಾಸಗಿ ಶಾಲೆಗಳ ವತಿಯಿಂದ ವಡಗೇರಾ ಪಟ್ಟಣ್ಣದಲ್ಲಿ ಮೆರವಣಿಗೆ ನಡೆಸಲಾಯಿತು, ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷದಿಂದಾಗಿ ಕೂದಲೆಳೆ ಅಂತರದಲ್ಲಿ ಶಾಲೆ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ನಡೆಯಲಿದ್ದ ಘೋರ ದುರಂತವೊಂದು ತಪ್ಪಿದಂತಾಗಿದೆ.

    ಪಟ್ಟಣ್ಣದಲ್ಲಿ ಮೆರವಣಿಗೆ ಮುಗಿಸಿಕೊಂಡು ಕಾರ್ಯಕ್ರಮದತ್ತ ತೆರಳುತ್ತಿದ್ದ ವೇಳೆ ಪಟ್ಟಣ್ಣದ ವಾಲ್ಮೀಕಿ ವೃತ್ತದ ಬಳಿ ಇದ್ದ ವಿದ್ಯುತ್ ಕಂಬದ ವಿದ್ಯುತ್ ತಂತಿ ಹರಿದು ಟ್ರ್ಯಾಕ್ಟರ್ ಟ್ರಾಲಿಯಲ್ಲಿದ ಭುವನೇಶ್ವರಿ ತಾಯಿ ಭಾವಚಿತ್ರದ ಕಟ್ಟಿಗೆಯ ಮೇಲೆ ಬಿದ್ದಿದ್ದೆ, ಈ ವೇಳೆ ಟ್ರ್ಯಾಕ್ಟರ್ ನಲ್ಲಿದ್ದ ನಾಲ್ಕೈದು ವಿದ್ಯಾರ್ಥಿಗಳು ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದು, ತಕ್ಷಣ ಸ್ಥಳೀಯರು ವಿದ್ಯಾರ್ಥಿಗಳನ್ನು ಕೆಳಕ್ಕಿಳಿಸಿ ರಕ್ಷಿಸುವ ಮೂಲಕ ಕೆಇಬಿಯವರಿಗೆ ಕರೆ ಮಾಡಿ ವಿದ್ಯುತ್ ಕಂಬದ ಪವರ್ ತೆಗೆಯುವಂತೆ ತಿಳಿಸಿದ್ದಾರೆ.

    ಒಂದು ವೇಳೆ ಆ ವಿದ್ಯುತ್ ತಂತಿ ವಿದ್ಯಾರ್ಥಿಗಳ ಮೇಲೆ ಬಿದ್ದು, ವಿದ್ಯಾರ್ಥಿಗಳ ಜೀವಕ್ಕೆ ಅಪಾಯವಾಗಿದ್ದರೆ ಇದಕ್ಕೆಲ್ಲಾ ಯಾರು ಹೊಣೆಯಾಗುತ್ತಿದ್ದರು? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು,

    ಟ್ರ್ಯಾಕ್ಟರ್ ನಲ್ಲಿದ್ದ ಮಕ್ಕಳು ಸ್ವಾಮಿ ವಿವೇಕಾನಂದ ಶಾಲೆ ವಿದ್ಯಾರ್ಥಿಗಳು ಎಂದು ಹೇಳಲಾಗುತ್ತಿದ್ದೂ, ಟ್ರ್ಯಾಕ್ಟರ್ ಚಾಲಕ ವಿದ್ಯುತ್ ಕಂಬದ ತಂತಿಗಳು ಮೇಲೆ ಇರುವುದನ್ನು ಗಮನಿಸದೆ ಚಾಲನೆ ಮಾಡಿರುವುದರಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

    apvc-iconPost Views: 0
  • ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕರಿಗೆ ಪೊಲೀಸರಿಂದ ಹಿಗ್ಗಾಮುಗ್ಗ ಥಳಿತ| ಪ್ರಯಾಣಿಕರ ಆಕ್ರೋಶ

    ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕರಿಗೆ ಪೊಲೀಸರಿಂದ ಹಿಗ್ಗಾಮುಗ್ಗ ಥಳಿತ| ಪ್ರಯಾಣಿಕರ ಆಕ್ರೋಶ

    ಯಾದಗಿರಿ: ನಗರದ ರೈಲ್ವೆ ನಿಲ್ದಾಣದಲ್ಲಿ ಮದ್ಯ ಸೇವಿಸಿ ಮಲಗಿದ್ದ ಪ್ರಯಾಣಿಕರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

    ರೈಲ್ವೆ ನಿಲ್ದಾಣದಲ್ಲಿ ಕುಡಿದು ಮಲಗಿದ್ರೆ ಬೇರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಮೊದಲಿಗೆ ರೈಲ್ವೆ ಪೋಲಿಸರು ಬುದ್ದಿ ಮಾತು ಹೇಳಿದ್ದಾರೆ, ಆದರೂ ಪೊಲೀಸರ ಮಾತು ಕೇಳದೇ ಅಲ್ಲೇ ಮಲಗಿದ್ದ ಪ್ರಯಾಣಿಕರನ್ನು ಕಂಡು ಸಿಟ್ಟಿಗೆದ್ದ ಆರ್‌ಪಿಎಫ್ ಪೊಲೀಸರು ಕುಡಿದು ಮಲಗಿದ್ದ ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ಕಚೇರಿಯ ಕೊಠಡಿಯಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ,

    ಇದರಿಂದ ರೊಚಿಗೆದ್ದ ಪ್ರಯಾಣಿಕರು ಆರ್‌ಪಿಎಫ್ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದಲ್ಲದೆ ಪರಿಸ್ಥಿತಿ ತಿಳಿಗೊಳಿಸಲು ಹೋದ ಇನ್ನೊಬ್ಬ ಆರ್‌ಪಿಎಫ್ ಪೊಲೀಸ್ ಪೇದೆಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ರೋಮ್ ನಲ್ಲಿ ಕೊಡಿ ಹಾಕಿ ಹೊಡೆಯಲು ಕಾರಣವೇನು? ಕಾಲಿಗೆ ಬಿದ್ದರೂ ಬಿಡಲಿಲ್ಲ, ಅಂತಹ ತಪ್ಪು ನಾವೇನು ಮಾಡಿದ್ದೇವೆಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

    apvc-iconPost Views: 0