Blog

  • ಬೆಂಗ್ಳೂರಲ್ಲಿ ತೀವ್ರ ಚಳಿ ಅಲರ್ಟ್: ಶೀತಗಾಳಿಯ ಹೊಡೆತಕ್ಕೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳು

    ಬೆಂಗ್ಳೂರಲ್ಲಿ ತೀವ್ರ ಚಳಿ ಅಲರ್ಟ್: ಶೀತಗಾಳಿಯ ಹೊಡೆತಕ್ಕೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳು

    ಬೆಂಗಳೂರು ನಗರದಲ್ಲಿ ಕಳೆದ ಕೆಲ ದಿನಗಳಿಂದ ಚಳಿಗಾಲ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಂಡಿದ್ದು, ಶೀತಗಾಳಿಯ ಎಫೆಕ್ಟ್ ಜನಜೀವನದ ಮೇಲೆ ಸ್ಪಷ್ಟವಾಗಿ ಪರಿಣಾಮ ಬೀರುತ್ತಿದೆ. ದಿನದಿಂದ ದಿನಕ್ಕೆ ಕುಸಿಯುತ್ತಿರುವ ತಾಪಮಾನವು ಕೇವಲ ಹವಾಮಾನ ಬದಲಾವಣೆಗೂ ಸೀಮಿತವಾಗದೇ, ನಾಗರಿಕರ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆ ಹೊಂದಿರುವವರು ಈ ಚಳಿಗೆ ಹೆಚ್ಚು ತುತ್ತಾಗುತ್ತಿದ್ದಾರೆ.

    ನಗರದಲ್ಲಿ ಕಳೆದ ಎರಡ್ಮೂರು ವಾರಗಳಿಂದ ಕನಿಷ್ಠ ತಾಪಮಾನ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಕೆಲ ಪ್ರದೇಶಗಳಲ್ಲಿ 14 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೂ ತಲುಪಿದೆ. ಈ ತೀವ್ರ ಚಳಿಯಿಂದಾಗಿ ಜನರು ಬೆಳಿಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬರುವುದಕ್ಕೂ ಹಿಂಜರಿಯುತ್ತಿದ್ದಾರೆ. ಶೀತಗಾಳಿಯ ಪರಿಣಾಮವಾಗಿ ಶೀತ, ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದರ ಪರಿಣಾಮವಾಗಿ ಆಸ್ಪತ್ರೆಗಳ ಮೇಲಿನ ಒತ್ತಡವೂ ಹೆಚ್ಚಾಗಿದೆ.

    ನಗರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಶೀತ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಕ್ಕಳು, ವಯಸ್ಕರು ಹಾಗೂ ವೃದ್ಧರು ಶೀತ, ಕೆಮ್ಮು, ಉಸಿರಾಟದ ತೊಂದರೆಗಳೊಂದಿಗೆ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ವಿಶೇಷವಾಗಿ ಮಕ್ಕಳಲ್ಲಿ ಆರೋಗ್ಯ ಏರುಪೇರು ಕಂಡುಬರುತ್ತಿದ್ದು, ವೈದ್ಯರು ಹೆಚ್ಚಿನ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಮಕ್ಕಳ ವಿಭಾಗದಲ್ಲಿ ಹಾಸಿಗೆಗಳ ಭರ್ತಿ ಪ್ರಮಾಣವೂ ಹೆಚ್ಚಾಗಿದೆ.

    ಸಾಮಾನ್ಯವಾಗಿ ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು ಸಮಸ್ಯೆಗಳು ಕಂಡುಬರುವುದು ಸಹಜವಾದರೂ, ಈ ಬಾರಿ ಚಳಿ ಹೆಚ್ಚಿರುವುದರಿಂದ ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ. ಕೆಲವರು ತಪಾಸಣೆ ಪಡೆದು ಔಷಧಿ ತೆಗೆದುಕೊಂಡು ಮನೆಗೆ ವಾಪಸ್ ಆಗುತ್ತಿದ್ದರೆ, ಇನ್ನೂ ಕೆಲವರಿಗೆ ಆರೋಗ್ಯದ ತೀವ್ರತೆ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

    ಹವಾಮಾನ ಇಲಾಖೆ ಸೂಚನೆಯಂತೆ ಈ ತಿಂಗಳ ಅಂತ್ಯದ ವೇಳೆಗೆ ಇನ್ನೂ ಹೆಚ್ಚಿನ ಚಳಿ ಬೀಳುವ ಸಾಧ್ಯತೆ ಇದ್ದು, ತಾಪಮಾನ ದಾಖಲೆ ಮಟ್ಟದಲ್ಲಿ ಕುಸಿಯುವ ಅಂದಾಜು ಇದೆ. ಹೀಗಾಗಿ ನಾಗರಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಬೆಚ್ಚನೆಯ ಉಡುಪುಗಳನ್ನು ಧರಿಸುವುದು, ತಂಪಾದ ಗಾಳಿಯಿಂದ ದೂರವಿರುವುದು, ಮಕ್ಕಳ ಹಾಗೂ ವೃದ್ಧರ ಆರೋಗ್ಯದ ಮೇಲೆ ವಿಶೇಷ ಗಮನ ಹರಿಸುವುದು ಅಗತ್ಯ. ಚಳಿಗಾಲದ ಈ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿದರೆ ಮಾತ್ರ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಲು ಸಾಧ್ಯ.

    apvc-iconPost Views: 10
  • ಮಲ್ಲಿಕಾರ್ಜುನ ಖರ್ಗೆಗೆ ಭಾರತ ರತ್ನ ನೀಡಬೇಕೆಂದು ಒತ್ತಾಯ

    ಮಲ್ಲಿಕಾರ್ಜುನ ಖರ್ಗೆಗೆ ಭಾರತ ರತ್ನ ನೀಡಬೇಕೆಂದು ಒತ್ತಾಯ

    ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಾತ್ಮಕ ಹಕ್ಕುಗಳ ವಿಚಾರ ಮತ್ತೆ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ. ಈ ಹಿನ್ನೆಲೆಯಲ್ಲಿ, ದೀರ್ಘಕಾಲದ ಸಾರ್ವಜನಿಕ ಸೇವೆ, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳ ಪರ ನಿಸ್ವಾರ್ಥ ಹೋರಾಟ ಹಾಗೂ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಷ್ಟ್ರ ರಾಜಕಾರಣದ ಪ್ರಮುಖ ಮುಖ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಬೇಕೆಂಬ ಒತ್ತಾಯ ಮತ್ತೊಮ್ಮೆ ಕೇಳಿಬಂದಿದೆ.

    ವಿಧಾನ ಪರಿಷತ್‌ನಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಮಲ್ಲಿಕಾರ್ಜುನ ಖರ್ಗೆ ಅವರ ಸೇವೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಪಾರವಾಗಿದೆ ಎಂದು ಅಭಿಪ್ರಾಯಪಟ್ಟರು. ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಸಂವಿಧಾನಕ್ಕೆ ಸೇರಿಸಲಾದ ಅನುಚ್ಛೇದ 371(ಜೆ) ಅವಿರೋಧವಾಗಿ ಅಂಗೀಕಾರವಾದುದನ್ನು ಸ್ಮರಿಸಿ, ಇದು ಖರ್ಗೆ ಅವರ ರಾಜಕೀಯ ದೃಷ್ಟಿ ಮತ್ತು ಬದ್ಧತೆಯ ಮಹತ್ವದ ಉದಾಹರಣೆಯಾಗಿದೆ ಎಂದರು.

    ಸಚಿವರಾಗಿದ್ದ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಆಡಳಿತಾತ್ಮಕ ಕಾರ್ಯಕ್ಷಮತೆ ಹಾಗೂ ಸಾಮಾಜಿಕ ಬದ್ಧತೆಯೊಂದಿಗೆ ಕೆಲಸ ಮಾಡಿದ್ದಾರೆ. ದೀನ-ದಲಿತರು, ಹಿಂದುಳಿದ ವರ್ಗಗಳ ಪರ ನಿಂತು ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಕಲಬುರಗಿಯಲ್ಲಿ ಇಎಸ್‌ಐ ಆಸ್ಪತ್ರೆ ಸ್ಥಾಪನೆಯ ಮೂಲಕ ಕಾರ್ಮಿಕ ವರ್ಗಕ್ಕೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಿದುದು, ಉತ್ತರ ಕರ್ನಾಟಕದ ರೈಲು ಸಂಪರ್ಕವಿಲ್ಲದ ಪ್ರದೇಶಗಳಿಗೆ ರೈಲು ಮಾರ್ಗಗಳನ್ನು ಕಲ್ಪಿಸುವುದು ಅವರ ಅಭಿವೃದ್ಧಿ ದೃಷ್ಟಿಕೋನದ ಸ್ಪಷ್ಟ ಉದಾಹರಣೆಗಳಾಗಿವೆ.

    ಗಾಂಧೀಜಿ, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಅಲಂಕರಿಸಿದ್ದ ಹುದ್ದೆಯನ್ನು ಇಂದು ಮಲ್ಲಿಕಾರ್ಜುನ ಖರ್ಗೆ ಅವರು ಭರಿಸಿಕೊಂಡಿರುವುದು ಅವರ ದೀರ್ಘಕಾಲದ ರಾಜಕೀಯ ಹೋರಾಟ ಮತ್ತು ನೈತಿಕತೆಯ ಗೌರವವಾಗಿದೆ ಎಂದು ತಿಪ್ಪಣ್ಣಪ್ಪ ಕಮಕನೂರು ಹೇಳಿದರು. ಉತ್ತರ ಕರ್ನಾಟಕದ ಜನಜೀವನದಲ್ಲಿ ಶಾಶ್ವತ ಬದಲಾವಣೆ ತರುವ ನಿಟ್ಟಿನಲ್ಲಿ ಖರ್ಗೆ ಅವರು ಸಲ್ಲಿಸಿರುವ ಸೇವೆಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಬೇಕು. ಹೀಗಾಗಿ ಅವರ ಅಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಅವರು ಸರ್ಕಾರವನ್ನು ಮನವಿ ಮಾಡಿದರು.

    apvc-iconPost Views: 10
  • ಚಳಿಗಾಲದಲ್ಲಿ ಶುಂಠಿ: ಪ್ರತಿದಿನದ ಸಣ್ಣ ಅಭ್ಯಾಸ, ದೊಡ್ಡ ಆರೋಗ್ಯ ರಕ್ಷಣೆ

    ಚಳಿಗಾಲದಲ್ಲಿ ಶುಂಠಿ: ಪ್ರತಿದಿನದ ಸಣ್ಣ ಅಭ್ಯಾಸ, ದೊಡ್ಡ ಆರೋಗ್ಯ ರಕ್ಷಣೆ

    ಚಳಿಗಾಲ ಬಂದಾಗ ಮಾನವನ ದೇಹದಲ್ಲಿ ಹಲವು ಸಣ್ಣ ಪುಟ್ಟ ತೊಂದರೆಗಳು ಕಾಣಿಸಿಕೊಳ್ಳುವುದು ಸಹಜ. ಶೀತ, ಜ್ವರ, ಕೆಮ್ಮು, ಗಂಟಲು ನೋವು, ತಲೆನೋವು, ಕೈಕಾಲುಗಳು ಚಳಿಯಿಂದ ಕಟ್ಟಿ ಹೋಗುವುದು ಇವೆಲ್ಲವೂ ಈ ಚಳಿಯ ಋತುವಿನ ಸಾಮಾನ್ಯ ಸಂಗತಿಗಳು. ಹೀಗಿರುವಾಗ ದೇಹಕ್ಕೆ ಒಳಗಿನಿಂದ ಬಲ ಕೊಡುವಂತಹ ಆಹಾರಗಳ ಮೇಲೆ ಹೆಚ್ಚು ಗಮನವನ್ನು ಹರಿಸಬೇಕಾಗುತ್ತದೆ. ಇವುಗಳಲ್ಲಿ ಪ್ರಮುಖವಾಗಿ ಹೆಸರು ಕೇಳಿಸಿಕೊಳ್ಳುವುದು ಶುಂಠಿ. ಚಳಿಗಾಲದಲ್ಲಿ ಪ್ರತಿದಿನ ಸ್ವಲ್ಪ ಪ್ರಮಾಣದ ಶುಂಠಿ ಸೇವಿಸುವುದು ಆರೋಗ್ಯಕ್ಕೆ ವಿಶೇಷವಾದ ರಕ್ಷಣೆಯನ್ನು ಕೊಡುತ್ತದೆ ಎಂದು ಹೇಳಬಹುದು.

    ಶುಂಠಿಯ ಮೊದಲ ಪ್ರಯೋಜನವೆಂದರೆ ಇದು ದೇಹವನ್ನು ಬೆಚ್ಚಗೆ ಇಡುತ್ತದೆ. ಹೊರಗಿನ ತಾಪಮಾನ ಕಡಿಮೆಯಾಗುತ್ತಿದ್ದಂತೆ ರಕ್ತ ಸಂಚಾರ ನಿಧಾನಗೊಳ್ಳುತ್ತದೆ. ಇದು ಕೈ ಕಾಲುಗಳು ಚಳಿ ಹಿಡಿಯುವ ಪ್ರಮುಖ ಕಾರಣಕ್ಕೆ ಶುಂಠಿಯು ನೈಸರ್ಗಿಕ ಉಷ್ಣಸ್ವಭಾವ ದೇಹದ ಒಳಗಿನ ತಂಪನ್ನು ಕಡಿಮೆ ಮಾಡಿ ರಕ್ತದ ಹರಿವನ್ನು ಸುಧಾರಿಸುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಶುಂಠಿ ಚಹಾ ಅಥವಾ ಶುಂಠಿ ಕಷಾಯ ಕುಡಿಯುವ ಅಭ್ಯಾಸ ಬಹಳ ಉಪಯುಕ್ತ.

    ಶುಂಠಿಯ ಮತ್ತೊಂದು ಮಹತ್ವದ ಗುಣವೆಂದರೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ವೈರಲ್ ಸೋಂಕುಗಳು ವೇಗವಾಗಿ ವ್ಯಾಪಿಸುವ ಸಮಯ. ದೇಹದ ರೋಗನಿರೋಧಕ ವ್ಯವಸ್ಥೆ ಬಲವಾಗಿರದಿದ್ದರೆ ಜ್ವರ, ಶೀತ, ಕೆಮ್ಮು ಮತ್ತೆ ಮತ್ತೆ ಬರುತ್ತವೆ. ಶುಂಠಿಯಲ್ಲಿರುವ ಉತ್ಕರ್ಷಣ ವಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಕ ಗುಣಗಳು ದೇಹವನ್ನು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ದಿನವೂ ಸ್ವಲ್ಪ ಪ್ರಮಾಣದಲ್ಲಿ ಶುಂಠಿ ಸೇವಿಸಿದರೆ ದೇಹದ ಒಳಗಿನ ರಕ್ಷಣೆ ಸ್ವಾಭಾವಿಕವಾಗಿ ಬಲಪಡಿಸುತ್ತದೆ.

    ಚಳಿಗಾಲದಲ್ಲಿ ಹಲವರಿಗೆ ಕೀಲು ನೋವು ಮತ್ತು ಸ್ನಾಯು ಸೆಳೆತ ಹೆಚ್ಚಾಗುತ್ತದೆ. ತಂಪಿನ ಪರಿಣಾಮವಾಗಿ ದೇಹದ ಮೂಳೆ ಸ್ನಾಯುಗಳ ಚಟುವಟಿಕೆ ನಿಧಾನಗೊಳ್ಳುವುದೇ ಇದಕ್ಕೆ ಕಾರಣ. ಶುಂಠಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ಈ ರೀತಿಯ ನೋವುಗಳನ್ನು ಕಡಿಮೆ ಮಾಡುತ್ತವೆ. ಅತಿ ತೊಂದರೆ ಇಲ್ಲದ ಹಂತದಲ್ಲಿ ಶುಂಠಿ ನಿಯಮಿತವಾಗಿ ಸೇವಿಸಿದರೆ ದೀರ್ಘಕಾಲದ ನೋವಿಗೂ ಪರಿಹಾರ ದೊರೆಯುತ್ತದೆ.

    ಈ ಋತುವಿನಲ್ಲಿ ಗಂಟಲು ನೋವು ಮತ್ತು ಲೋಳೆಯು ಹೆಚ್ಚಾಗುವುದು ಸಾಮಾನ್ಯ. ಶುಂಠಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ಗಂಟಲೆಲ್ಲೋ ಉಂಟಾಗುವ ರಂಧ್ರ ಮತ್ತು ನೋವನ್ನು ಶಮನಗೊಳಿಸುತ್ತವೆ. ಬೆಚ್ಚಗಿನ ನೀರಿಗೆ ತುಂಡು ಶುಂಠಿ ಸೇರಿಸಿ ಕುಡಿದರೂ ಅಥವಾ ಜೇನುತುಪ್ಪದೊಂದಿಗೆ ಸೇವಿಸಿದರೂ ಗಂಟಲು ತಣಿಯುತ್ತದೆ. ಇದರಿಂದ ಕೆಮ್ಮು ಕೂಡ ನಿಧಾನವಾಗಿ ಕಡಿಮೆಯಾಗುತ್ತದೆ.

    ಒಟ್ಟಾರೆ ನೋಡಿದರೆ ಚಳಿಗಾಲದ ಆರೋಗ್ಯಕ್ಕೆ ಶುಂಠಿ ಸಣ್ಣದಾಗಿದ್ದರೂ ಬಹಳ ಪರಿಣಾಮಕಾರಿ ಸಹಜ ಔಷಧ. ಇದು ದೇಹವನ್ನು ಬೆಚ್ಚಗಿಡುತ್ತದೆ, ಸೋಂಕುಗಳಿಂದ ರಕ್ಷಿಸುತ್ತದೆ, ಗಂಟಲು ತೊಂದರೆಗಳನ್ನು ಕಡಿಮೆ ಮಾಡುತ್ತದೆ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಶಕ್ತಿಯನ್ನು ಕಾಪಾಡುತ್ತದೆ. ದಿನನಿತ್ಯದ ಆಹಾರದಲ್ಲಿ ಸ್ವಲ್ಪ ಮಟ್ಟಿಗೆ ಶುಂಠಿಯನ್ನು ಸೇರಿಸಿಕೊಂಡರೆ ಚಳಿಗಾಲದ ಅನೇಕ ಸಮಸ್ಯೆಗಳನ್ನು ಸುಲಭವಾಗಿ ದೂರವಿಡಬಹುದು.

    apvc-iconPost Views: 13
  • ಜನವರಿ 23ಕ್ಕೆ ಉಗ್ರಂ ಮಂಜು–ಸಾಯಿ ಸಂಧ್ಯಾ ಸರಳ ಮದುವೆ

    ಜನವರಿ 23ಕ್ಕೆ ಉಗ್ರಂ ಮಂಜು–ಸಾಯಿ ಸಂಧ್ಯಾ ಸರಳ ಮದುವೆ

    ಬಿಗ್ ಬಾಸ್ ಕನ್ನಡ 11’ ಮೂಲಕ ಸಾಕಷ್ಟು ಗಮನ ಸೆಳೆದ ಉಗ್ರಂ ಮಂಜು ಅವರ ಜೀವನದ ಹೊಸ ಅಧ್ಯಾಯಕ್ಕೆ ದಿನಾಂಕ ಫಿಕ್ಸ್ ಆಗಿದೆ. ಇತ್ತೀಚೆಗೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಉಗ್ರಂ ಮಂಜು ಹಾಗೂ ಸಾಯಿ ಸಂಧ್ಯಾ ಇದೀಗ ಸರಳ ವಿವಾಹಕ್ಕೆ ಸಿದ್ಧರಾಗಿದ್ದಾರೆ. ಆಡಂಬರ ಇಲ್ಲದ, ಮನೆಯವರ ಆಶೀರ್ವಾದದೊಂದಿಗೆ ನಡೆಯುವ ಮದುವೆಯೇ ಇವರ ನಿರ್ಧಾರ.

    ಉಗ್ರಂ ಮಂಜು ಮತ್ತು ಸಾಯಿ ಸಂಧ್ಯಾ ಅವರದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮೊದಲು ಪರಿಚಯ, ನಂತರ ಪ್ರೀತಿ, ಆಮೇಲೆ ಕುಟುಂಬದವರೊಂದಿಗೆ ಚರ್ಚೆ ಮಾಡಿ ಒಪ್ಪಿಗೆ ಪಡೆದು ಮದುವೆಯ ಹಂತಕ್ಕೆ ಬಂದಿದ್ದಾರೆ. ಪ್ರಪೋಸ್ ಮಾಡಿದ್ದು ನಾನೇ ಎಂದು ಹೇಳಿಕೊಂಡಿರುವ ಉಗ್ರಂ ಮಂಜು, ‘ನೇರವಾಗಿ ಮದುವೆ ಬಗ್ಗೆ ಮಾತನಾಡಿದೆ. ಎರಡು ಮೂರು ತಿಂಗಳಲ್ಲೇ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡೆವು’ ಎಂದು ತಮ್ಮ ಪ್ರೀತಿಯ ಕಥೆಯನ್ನು ಹಂಚಿಕೊಂಡಿದ್ದಾರೆ.

    ಮದುವೆ ಯಾವಾಗ, ಎಲ್ಲಿ ಅನ್ನೋ ಪ್ರಶ್ನೆಗೆ ಉಗ್ರಂ ಮಂಜು ತಾವೇ ಸ್ಪಷ್ಟ ಉತ್ತರ ನೀಡಿದ್ದಾರೆ. ಜನವರಿ 23ರಂದು ಹಂಸಗಿರಿ ಹೊಸೂರಿನ ಮನೆ ದೇವರಾದ ತಿಮ್ಮರಾಯಸ್ವಾಮಿ ಸನ್ನಿಧಿಯಲ್ಲಿ ಇವರ ವಿವಾಹ ನಡೆಯಲಿದೆ. ಗುರುವಿನ ಸಲಹೆ ಹಾಗೂ ತಮ್ಮ ಆಸೆಯಂತೆ ದೇವಾಲಯದಲ್ಲೇ ಮದುವೆಯಾಗಲು ನಿರ್ಧರಿಸಿದ್ದು, ಕುಟುಂಬದವರು ಮತ್ತು ಕೆಲ ಆಪ್ತರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನಡೆಯಲಿದೆ.

    ಆಡಂಬರ, ಅತಿಯಾದ ಖರ್ಚು ನಮಗೆ ಇಷ್ಟವಿಲ್ಲ ಎನ್ನುವ ಉಗ್ರಂ ಮಂಜು, ಮದುವೆಗಾಗಿ ದೊಡ್ಡ ಮಟ್ಟದಲ್ಲಿ ಹಣ ಖರ್ಚು ಮಾಡಿ ನಂತರ ಅದರ ಒತ್ತಡ ಹೊರುವುದಕ್ಕಿಂತ ಶಾಂತವಾಗಿ ದೇವರ ಆಶೀರ್ವಾದದೊಂದಿಗೆ ಹೊಸ ಜೀವನ ಆರಂಭಿಸುವುದೇ ನಮ್ಮ ಯೋಚನೆ ಎಂದು ಹೇಳಿದ್ದಾರೆ. ಇದೇ ಅಭಿಪ್ರಾಯವನ್ನು ಸಾಯಿ ಸಂಧ್ಯಾ ಕೂಡ ಹಂಚಿಕೊಂಡಿದ್ದಾರೆ.

    ಉಗ್ರಂ ಮಂಜು ಅವರ ಭಾವಿ ಪತ್ನಿ ಸಾಯಿ ಸಂಧ್ಯಾ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಟ್ರಾನ್ಸ್‌ಪ್ಲಾಂಟ್ ಕೋ-ಆರ್ಡಿನೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಇದೀಗ ಮದುವೆಗೆ ಸಜ್ಜಾಗಿದೆ. ಜನವರಿ 23ರಂದು ಮನೆ ದೇವರ ಸನ್ನಿಧಿಯಲ್ಲಿ ನಡೆಯಲಿರುವ ಈ ಸರಳ ವಿವಾಹಕ್ಕೆ ಅಭಿಮಾನಿಗಳಿಂದ ಈಗಾಗಲೇ ಶುಭಾಶಯಗಳ ಸುರಿಮಳೆ ಆರಂಭವಾಗಿದೆ.

    apvc-iconPost Views: 27
  • ಪವರ್ ಶೇರಿಂಗ್ ಗೊಂದಲದ ಮಧ್ಯೆ ಅಹಿಂದ ಕಾರ್ಡ್‌

    ಪವರ್ ಶೇರಿಂಗ್ ಗೊಂದಲದ ಮಧ್ಯೆ ಅಹಿಂದ ಕಾರ್ಡ್‌

    ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಒಳಾಂಗಣ ಪವರ್ ಶೇರಿಂಗ್ ಗೊಂದಲ ದಿನದಿಂದ ದಿನಕ್ಕೆ ತೀವ್ರವಾಗುತ್ತಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಂದ್ರಬಿಂದು ಮಾಡಿಕೊಂಡು ಮತ್ತೊಮ್ಮೆ ಅಹಿಂದ ರಾಜಕೀಯ ಸಕ್ರಿಯವಾಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ. ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಒಟ್ಟುಗೂಡಿಸಿದ ಅಹಿಂದ ಚಳವಳಿ ಮೂಲಕ ಸಿದ್ದರಾಮಯ್ಯ ತಮ್ಮ ರಾಜಕೀಯ ಬಲವನ್ನು ಮತ್ತೆ ಒತ್ತಿ ಹೇಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

    ಈ ಹಿನ್ನಲೆಯಲ್ಲಿ, ಸಿಎಂ ಸಿದ್ದರಾಮಯ್ಯ ಆಪ್ತ ವಲಯವು ಬೆಂಗಳೂರಿನಲ್ಲಿ ಭಾರೀ ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ಪಕ್ಷದ ಒಳಗಿನ ನಾಯಕತ್ವದ ಚರ್ಚೆ, ಮುಂದಿನ ರಾಜಕೀಯ ದಿಕ್ಕು ಹಾಗೂ ಸಿಎಂ ಸ್ಥಾನಕ್ಕೆ ಸಂಬಂಧಿಸಿದ ಊಹಾಪೋಹಗಳ ನಡುವೆ ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

    ಜನವರಿ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲೇ ಹಿಂದುಳಿದ ವರ್ಗಗಳ ಒಕ್ಕೂಟದ ನೇತೃತ್ವದಲ್ಲಿ ಅಹಿಂದ ಸಮಾವೇಶ ಆಯೋಜಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಸಮಾವೇಶದ ಮುಖ್ಯ ಅಜೆಂಡಾವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ಅಹಿಂದ ರತ್ನ’ ಎಂಬ ಗೌರವಪೂರ್ಣ ಘೋಷಣೆ ಮಾಡುವ ಸಿದ್ಧತೆ ನಡೆದಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

    ಈ ಅಹಿಂದ ಸಮಾವೇಶಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಮ್ಮತಿ ನೀಡುತ್ತದೆಯೇ? ಅಥವಾ ಹಾಸನ ಸಮಾವೇಶದಂತೆ ಈ ಬಾರಿ ಕೂಡ ಪಕ್ಷದ ಕೇಂದ್ರ ನಾಯಕತ್ವವೇ ವೇದಿಕೆಯ ಅಸ್ತ್ರವಾಗಿ ಬಳಸಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

    ಪಕ್ಷದ ಹೈಕಮಾಂಡ್ ಸೂಚನೆಗಳನ್ನು ಮೀರಿ ಪ್ರತ್ಯೇಕ ಅಹಿಂದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವರೇ? ಅಥವಾ ಹೈಕಮಾಂಡ್ ಜೊತೆ ಸಮನ್ವಯ ಸಾಧಿಸಿ ಈ ಶಕ್ತಿ ಪ್ರದರ್ಶನ ನಡೆಯಲಿದೆಯೇ ಎಂಬುದನ್ನು ಕಾದು ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಒಟ್ಟಿನಲ್ಲಿ, ಅಹಿಂದ ಶಕ್ತಿ ಪ್ರದರ್ಶನ ಕಾಂಗ್ರೆಸ್ ಒಳರಾಜಕೀಯದಲ್ಲಿ ಯಾವ ರೀತಿಯ ತಿರುವು ತರುತ್ತದೆ ಎಂಬುದು ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದ ಪ್ರಮುಖ ಚರ್ಚೆಯ ವಿಷಯವಾಗಲಿದೆ.

    apvc-iconPost Views: 11
  • ಸದನದಲ್ಲೇ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ!

    ಸದನದಲ್ಲೇ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ!

    ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಗೃಹಲಕ್ಷ್ಮಿ ಯೋಜನೆ ಮತ್ತೆ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಇನ್ನೂ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹಾಕಿದವು. ವಿಶೇಷವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸದನದಲ್ಲಿ ತೀಕ್ಷ್ಣ ವಾಗ್ದಾಳಿ ನಡೆಯಿತು.

    ವಿರೋಧ ಪಕ್ಷದ ನಾಯಕರು “ಫೆಬ್ರವರಿ–ಮಾರ್ಚ್ ಹಣ ಏನಾಯಿತು?” ಎಂದು ಪ್ರಶ್ನೆಗಳ ಸುರಿಮಳೆಗೈದಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟ ಉತ್ತರ ನೀಡದೇ ತತ್ತರಿಸಿದಂತಾಯಿತು. ಈ ಸಂದರ್ಭ ಸದನದಲ್ಲಿ ಗದ್ದಲ ಹೆಚ್ಚಾಗುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಸಚಿವೆಯ ಪರವಾಗಿ ಮಾತನಾಡಿದರು. ಮೈಕ್ ಹಿಡಿದು ಉತ್ತರಿಸಿದ ಸಿಎಂ, ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾವುದೇ ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು.

    ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, ಹಣ ಬಿಡುಗಡೆಯ ಪ್ರಕ್ರಿಯೆಯಲ್ಲಿ ತಾತ್ಕಾಲಿಕ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ ಎಂದು ತಿಳಿಸಿದರು. ಆದರೆ ಫಲಾನುಭವಿಗಳ ಹಣ ನಿಲ್ಲುವುದಿಲ್ಲ, ಬಾಕಿ ಇರುವ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಇದನ್ನೇ ಸದನದಲ್ಲಿದ್ದ ಅನೇಕ ಸದಸ್ಯರು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಕ್ಕ “ಗುಡ್‌ನ್ಯೂಸ್” ಎಂದು ಬಣ್ಣಿಸಿದರು.

    ಈ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಟೀಕೆಗೆ ಸಿಎಂ ತೀಕ್ಷ್ಣ ತಿರುಗೇಟು ನೀಡಿದರು. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಗೃಹಲಕ್ಷ್ಮಿ ಯೋಜನೆ ಸರ್ಕಾರದ ಪ್ರಮುಖ ಸಾಮಾಜಿಕ ಯೋಜನೆಗಳಲ್ಲೊಂದು ಎಂದು ಸ್ಪಷ್ಟವಾಗಿ ಹೇಳಿದರು.

    ಒಟ್ಟಾರೆ, ಬೆಳಗಾವಿ ಅಧಿವೇಶನದಲ್ಲಿ ಗೃಹಲಕ್ಷ್ಮಿ ಯೋಜನೆ ಕುರಿತಾಗಿ ಭಾರೀ ಚರ್ಚೆ ನಡೆದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಭರವಸೆ ಮಹಿಳಾ ಫಲಾನುಭವಿಗಳಲ್ಲಿ ನಿರಾಳತೆ ಮೂಡಿಸಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಶೀಘ್ರದಲ್ಲೇ ಖಾತೆ ಸೇರಲಿದೆ ಎಂಬ ಮಾತು ಇದೀಗ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹೊಸ ನಿರೀಕ್ಷೆ ತಂದಿದೆ.

    apvc-iconPost Views: 0
  • ಹೊಸ ಆರು ತಾಲೂಕುಗಳು ಸೇರ್ಪಡೆ ; ರೂಪುಗೊಳ್ಳಲಿದೆ ‘ಹೊಸ ಬೆಂಗಳೂರು’

    ಹೊಸ ಆರು ತಾಲೂಕುಗಳು ಸೇರ್ಪಡೆ ; ರೂಪುಗೊಳ್ಳಲಿದೆ ‘ಹೊಸ ಬೆಂಗಳೂರು’

    ಬೆಂಗಳೂರು ಸುತ್ತಮುತ್ತಲಿನ ಆರು ಪ್ರಮುಖ ತಾಲೂಕುಗಳನ್ನು ಸೇರಿಸಿಕೊಂಡು ಹೊಸ ಬೆಂಗಳೂರನ್ನು ರೂಪಿಸುವ ಮಹತ್ವದ ನಿರ್ಧಾರವನ್ನು ಡಿಸಿಎಂ ಡಿಕೆ ಶಿವಕುಮಾರ್ ಪ್ರಕಟಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಭಾಗದ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ರಾಮನಗರ ಹಾಗೂ ಮಾಗಡಿ ತಾಲೂಕಿನ ಬಿಡದಿ ಪ್ರದೇಶಗಳು ಮುಂದಿನ ದಿನಗಳಲ್ಲಿ ಬೆಂಗಳೂರಿನ ಭಾಗವಾಗಲಿವೆ ಎಂಬುದು ಈ ಘೋಷಣೆಯ ಮುಖ್ಯ ಅಂಶವಾಗಿದೆ.

    ಶನಿವಾರ ದೇವನಹಳ್ಳಿಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ (ಬಯಪ್ಪ) ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಬೆಂಗಳೂರು ಅಭಿವೃದ್ಧಿಯನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯುವ ಉದ್ದೇಶ ಸರ್ಕಾರಕ್ಕಿದೆ ಎಂದು ಸ್ಪಷ್ಟಪಡಿಸಿದರು. ಈಗಿರುವ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡುವ ಜೊತೆಗೆ, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ವಿಸ್ತಾರವಾದ ಹೊಸ ಬೆಂಗಳೂರು ನಿರ್ಮಿಸುವ ದೃಷ್ಟಿಕೋಣವನ್ನು ಸರ್ಕಾರ ಹೊಂದಿದೆ ಎಂದರು.

    ಬೆಂಗಳೂರು ನಗರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದರಿಂದ ಈ ಭಾಗಗಳ ಆಸ್ತಿ ಮೌಲ್ಯ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ ಇರುವ ಆಸ್ತಿಯನ್ನು ಕಾಪಾಡಿಕೊಳ್ಳುವುದು ಜನರ ಕರ್ತವ್ಯವಾಗಿದ್ದು, ಸರ್ಕಾರ ಆಸ್ತಿ ಮೌಲ್ಯಕ್ಕೆ ಗೌರವ ತರುವ ಕೆಲಸ ಮಾಡಲಿದೆ ಎಂದು ಅವರು ಹೇಳಿದರು. ಬೆಂಗಳೂರು ಗ್ರಾಮಾಂತರ ಪ್ರದೇಶದ ಜನಪ್ರತಿನಿಧಿಗಳ ಬೇಡಿಕೆಯ ಹಿನ್ನೆಲೆಯಲ್ಲಿ ‘ಬೆಂಗಳೂರು ಉತ್ತರ’ ಎಂಬ ಹೊಸ ಗುರುತನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಭಾಗಗಳು ನಗರಾಭಿವೃದ್ಧಿಯ ಪ್ರಮುಖ ಕೇಂದ್ರಗಳಾಗಲಿವೆ ಎಂದು ತಿಳಿಸಿದರು.

    ನಂದಗುಡಿ, ಸೋಲೂರು ಮತ್ತು ಬಿಡದಿ ಭಾಗದ ರೈತರಿಗೆ ಅವರ ಜಮೀನಿಗೆ ಉತ್ತಮ ಬೆಲೆ ಸಿಗುವಂತೆ ಯೋಜಿತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಎಲ್ಲರೂ ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಿದರೆ ಮಾತ್ರ ವಿಶ್ವದ ಗಮನ ಸೆಳೆಯುವ ಹೊಸ ಬೆಂಗಳೂರು ನಿರ್ಮಾಣ ಸಾಧ್ಯ ಎಂದು ಡಿಕೆ ಶಿವಕುಮಾರ್ ಹೇಳಿದರು.

    ಈ ಕಾರ್ಯಕ್ರಮದಲ್ಲಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಎಂಎಲ್‌ಸಿ ಎಸ್. ರವಿ ಹಾಗೂ ಬಯಪ್ಪ ಅಧ್ಯಕ್ಷ ಶಾಂತಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಹೊಸ ಬೆಂಗಳೂರು ಕನಸಿನೊಂದಿಗೆ ರಾಜ್ಯ ರಾಜಧಾನಿಯ ವಿಸ್ತರಣೆ ಈಗ ಅಧಿಕೃತವಾಗಿ ಹೊಸ ಹಾದಿ ಹಿಡಿದಂತಾಗಿದೆ.

    apvc-iconPost Views: 1
  • ಬೆಂಗಳೂರು ಮೆಟ್ರೋಗೆ ದೇಶದ ಮೊದಲ ‘ಮೇಡ್‌ಇನ್‌ಇಂಡಿಯಾ’ ಚಾಲಕರಹಿತ ರೈಲು

    ಬೆಂಗಳೂರು ಮೆಟ್ರೋಗೆ ದೇಶದ ಮೊದಲ ‘ಮೇಡ್‌ಇನ್‌ಇಂಡಿಯಾ’ ಚಾಲಕರಹಿತ ರೈಲು

    ಬೆಂಗಳೂರು ಮೆಟ್ರೋಗೆ ಹೊಸ ಯುಗವನ್ನೇ ತೆರೆದಂತೆ, ಮೊದಲ “ಮೇಡ್‌ ಇನ್ ಇಂಡಿಯಾ” ಚಾಲಕರಹಿತ ಮೆಟ್ರೋ ರೈಲು ಬಳಕೆಗೆ ಸಿದ್ಧವಾಗಿದೆ. ಬಿಇಎಂಎಲ್ ತಯಾರಿಸಿರುವ ಈ ಫ್ಯೂಚರಿಸ್ಟಿಕ್ ಟ್ರೈನ್ ನೇರವಾಗಿ ಪಿಂಕ್‌ ಲೈನ್‌ಗಾಗಿ ರೂಪುಗೊಳ್ಳುತ್ತಿದ್ದು, 2027ರ ಮೇ ನಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯಲು ಸಜ್ಜಾಗಲಿದೆ. ಭಾರತದ ನೆಲದಲ್ಲೇ ನಿರ್ಮಾಣವಾದ ಮೊದಲ ಸಂಪೂರ್ಣ ಚಾಲಕರಹಿತ ಮೆಟ್ರೋ ಅನ್ನೋ ವಿಶೇಷತೆ ಇದಕ್ಕೆ ಮತ್ತಷ್ಟು ಮೌಲ್ಯ ನೀಡಿದೆ.

    ಇದು 6 ಬೋಗಿಗಳ ಮೃದುವಾದ, ಶಬ್ದರಹಿತ ಮತ್ತು ರೈಲು. ರೈಲಿನ ಬಾಡಿ ಸ್ಟೇನ್‌ಲೆಸ್ ಸ್ಟೀಲ್‌ನಿಂದ ತಯಾರಾಗಿದ್ದು ಗಟ್ಟಿತನ, ದೀರ್ಘಾವಧಿ ಮತ್ತು ಸುರಕ್ಷತೆ ಎಂಬ ಮೂರು ಗುಣಗಳನ್ನು ಒಂದೇ ವೇಳೆ ಒದಗಿಸುತ್ತದೆ. ಒಳಗೆ ವಿಶಾಲ ಗ್ಯಾಂಗ್‌ವೇ, USB ಚಾರ್ಜರ್‌, ಆರಾಮದಾಯಕ ಆಸನಗಳು ಎಲ್ಲವೂ ಪ್ರಯಾಣಿಕರು ಸುಲಭವಾಗಿ ಸಂಚರಿಸೋಕೆ ಅನುಕೂಲವಾಗುವಂತೆ ವಿನ್ಯಾಸಗೊಂಡಿವೆ. 2026ರ ಮಧ್ಯಭಾಗದಲ್ಲೇ ಕಾಳೇನ ಅಗ್ರಹಾರ ತಾವರೆಕೆರೆ 7.5 ಕಿಮೀ ಮಾರ್ಗದಲ್ಲಿ ಟ್ರಯಲ್‌ ರನ್ ಆರಂಭವಾಗಲಿದ್ದು, ನಂತರ ಹಂತ ಹಂತವಾಗಿ ಸಂಪೂರ್ಣ ಪಿಂಕ್ ಲೈನ್ ತೆರೆಯಲಾಗುತ್ತದೆ.

    ಈ ರೈಲಿನ ಪ್ರಮುಖ ‘ಹೈಲೈಟ್’ ಎಂದರೆ GoA4 ತಂತ್ರಜ್ಞಾನ ಚಾಲಕರಿಲ್ಲದ ಸಂಪೂರ್ಣ ಆಟೋಮೇಟೆಡ್‌ ಮೆಟ್ರೋ ವ್ಯವಸ್ಥೆ. ರೈಲು ಎಲ್ಲಿ ಹೋದರೂ, ಎಷ್ಟು ವೇಗದಲ್ಲಿ ಓಡಿದರೂ, ಯಾವ ಸ್ಟೇಷನ್‌ನಲ್ಲಿ ನಿಲ್ಲಬೇಕಾದರೂ… ಎಲ್ಲವನ್ನೂ ದೂರದಲ್ಲಿರುವ ಕಂಟ್ರೋಲ್ ರೂಮ್‌ ನಿರ್ವಹಿಸುತ್ತದೆ. ರೈಲು ಚಲಿಸುವುದು, ಬ್ರೇಕ್ ಹಾಕುವುದು, ಬಾಗಿಲು ತೆರೆದು ಮುಚ್ಚುವುದು ಈ ಎಲ್ಲ ಪ್ರಕ್ರಿಯೆಗಳೂ ಸಿಸ್ಟಮ್‌ನಲ್ಲೇ ಪ್ರೋಗ್ರಾಮಿಂಗ್ ಆಗಿರುತ್ತವೆ. ‘CBTC’ ಎಂಬ ಅತ್ಯಾಧುನಿಕ ಕಮ್ಯುನಿಕೇಶನ್‌ ಆಧಾರಿತ ತಂತ್ರಜ್ಞಾನ ರೈಲಿನ ನಿಖರ ಸ್ಥಳದ ಮಾಹಿತಿಯನ್ನು ಕ್ಷಣಕ್ಷಣಕ್ಕೂ ಟ್ರ್ಯಾಕ್ ಮಾಡುತ್ತಾ, ಸಂಪೂರ್ಣ ವ್ಯವಸ್ಥೆಯನ್ನು ಸುರಕ್ಷಿತವಾಗಿ ನಡೆಸುತ್ತದೆ.

    ಸುರಕ್ಷತೆಯ ವಿಷಯಕ್ಕೆ ಬಂದರೆ, ಚಾಲಕರಿಲ್ಲದ ರೈಲು ಎಂದೇನೂ ಭಯಪಡುವ ಅಗತ್ಯವಿಲ್ಲ. ಈ ಹೊಸ ಮೆಟ್ರೋ ಒಳಗೆ ಮತ್ತು ಹೊರಗೆ ಅನೇಕ ಸೆನ್ಸರ್‌ಗಳು ಕೆಲಸ ಮಾಡುತ್ತವೆ. ಹಳಿಯ ಮೇಲೆ ಯಾವುದಾದರೂ ಅಡೆತಡೆ ಕಂಡರೂ, ಬೆಂಕಿ ಅಥವಾ ತಾಂತ್ರಿಕ ವ್ಯತ್ಯಯ ಎದುರಾದರೂ, ಸಿಸ್ಟಮ್ ತಕ್ಷಣ ಸ್ಪಂದಿಸಿ ರೈಲನ್ನು ನಿಲ್ಲಿಸುವ ವ್ಯವಸ್ಥೆ ಇದೆ. ಪ್ರಯಾಣಿಕರು ತುರ್ತು ಸಂದರ್ಭಗಳಲ್ಲಿ ಕಂಟ್ರೋಲ್‌ ರೂಂ ಜೊತೆ ನೇರವಾಗಿ ಮಾತನಾಡಲು ಪ್ಯಾಸೆಂಜರ್‌ ಅಲಾರ್ಮ್ ಸಾಧನವನ್ನು ಕೂಡ ನೀಡಲಾಗಿದೆ. ಜೊತೆಗೆ ರೈಲು ಸಂಪೂರ್ಣವಾಗಿ ಸಿಸಿಟಿವಿ ನಿಗಾವಿಡಿಯಲ್ಲಿ ಇರುತ್ತದೆ. ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ಗಳು ಮತ್ತು ರೈಲಿನ ಬಾಗಿಲುಗಳ ಸಿಂಕ್ರೊನೈಜೇಶನ್‌ ಅಪಘಾತಗಳನ್ನು ಮುಂಚೆಯೇ ತಡೆಯುತ್ತದೆ.

    ಬಿಇಎಂಎಲ್ ನಿರ್ಮಿಸಿರುವ ಈ ಟ್ರೈನ್‌ ಕೇವಲ ತಾಂತ್ರಿಕ ಸಾಧನೆ ಮಾತ್ರವಲ್ಲ, ಇದು ಭಾರತದಲ್ಲಿ ಮೆಟ್ರೋ ತಂತ್ರಜ್ಞಾನ ಸ್ವಾವಲಂಬನ್ಯದ ಹೆಜ್ಜೆಗುರುತು. ದೆಹಲಿಯ ಕೆಲವು ಮಾರ್ಗಗಳಲ್ಲಿ ಆಗಲೇ ಡ್ರೈವರ್‌ಲೆಸ್‌ ಮೆಟ್ರೋ ಓಡುತ್ತಿದರೂ, ದೇಶೀಯವಾಗಿ ನಿರ್ಮಿತ ಪೂರ್ಣ ಚಾಲಕರಹಿತ ರೈಲನ್ನು ಮೊದಲಬಾರಿಗೆ ಬೆಂಗಳೂರು ಸ್ವಾಗತಿಸಲಿದೆ. ಮೆಟ್ರೋ ಸೇವೆಯ ವೇಗ, ಸುರಕ್ಷತೆ, ಮತ್ತು ಪ್ರಯಾಣದ ಅನುಭವವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ಈ ರೈಲು, ನಗರದ ಭವಿಷ್ಯದ ಸಾರಿಗೆ ವ್ಯವಸ್ಥೆಯ ನಕಲಿ ಬದಲಾವಣೆಯ ಸಂಕೇತವಾಗಿಯೇ ಕಾಣುತ್ತಿದೆ.

    apvc-iconPost Views: 0
  • ₹11,718 ಕೋಟಿ ಬಜೆಟ್ — 2027ರಲ್ಲಿ ಭಾರತದ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿ

    ₹11,718 ಕೋಟಿ ಬಜೆಟ್ — 2027ರಲ್ಲಿ ಭಾರತದ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿ

    ಭಾರತದ ಆಡಳಿತ, ಯೋಜನಾ ರೂಪಣೆ ಮತ್ತು ಸಾಮಾಜಿಕ–ಆರ್ಥಿಕ ನೀತಿಗಳ ಆಧಾರಸ್ತಂಭವೆಂದೇ ಪರಿಗಣಿಸಲ್ಪಡುವ ಜನಗಣತಿ ಇದೀಗ ದೊಡ್ಡ ರೂಪಾಂತರಕ್ಕೆ ಸಜ್ಜಾಗಿದೆ. 150 ವರ್ಷಗಳ ಇತಿಹಾಸ ಹೊಂದಿರುವ ಭಾರತದ ಜನಗಣತಿ ಪ್ರಕ್ರಿಯೆ ಮೊದಲ ಬಾರಿಗೆ ಪೂರ್ಣಡಿಜಿಟಲ್ ಪದ್ದತಿಯಲ್ಲಿ ನಡೆಯಲಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರವು ₹11,718 ಕೋಟಿ ರೂಪಾಯಿ ಅನುದಾನವನ್ನು ಅನುಮೋದಿಸಿದೆ. ಕೋವಿಡ್‌ ನಂತರ ಅನೇಕ ವಿಳಂಬಗಳನ್ನು ಎದುರಿಸಿದ್ದ ರಾಷ್ಟ್ರೀಯ ಗಣತಿ ಪ್ರಕ್ರಿಯೆ ಇದೀಗ 2027ರಲ್ಲಿ ಪೂರ್ಣಗೊಳ್ಳಲಿದೆ.

    ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ದೇಶದ ಜನಸಂಖ್ಯೆ, ವಸತಿ ವ್ಯವಸ್ಥೆ ಮತ್ತು ಸಾಮಾಜಿಕ–ಆರ್ಥಿಕ ಸ್ಥಿತಿಯ ನಿಖರ ಚಿತ್ರಣ ನೀಡುವ ಈ ಸೆನ್ಸಸ್‌ ಭಾರತದಲ್ಲಿ ನೀತಿ–ಯೋಜನೆಗಳಿಗೆ ಮೂಲದಾಖಲೆಯಂತಿದೆ.

    ಎರಡು ಹಂತಗಳ ಡಿಜಿಟಲ್ ಜನಗಣತಿ:

    ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದಂತೆ, ಜನಗಣತಿ 2026–27 ರ ಅವಧಿಯಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ. ಈ ಬಾರಿ ಕಾಗದ–ಪೆನ್ ಪದ್ಧತಿಯ ಬದಲು ಸಂಪೂರ್ಣ ಡಿಜಿಟಲ್ ಆಧಾರಿತ ವ್ಯವಸ್ಥೆ ಅಳವಡಿಕೆಯಾಗುತ್ತಿದೆ.

    ಹಂತ I: ಮನೆ ಪಟ್ಟಿ ಮತ್ತು ವಸತಿ ಜನಗಣತಿ

    ಅವಧಿ: ಏಪ್ರಿಲ್–ಸೆಪ್ಟೆಂಬರ್ 2026

    ಪ್ರತಿಯೊಂದು ರಾಜ್ಯ/ಯುಟಿಗಳ ಅನುಕೂಲಕ್ಕೆ ಅನುಗುಣವಾಗಿ 30 ದಿನಗಳ ಅವಧಿಯಲ್ಲಿ ಕಾರ್ಯ.

    ದೇಶದ ಮನೆಗಳ ಸಂಖ್ಯೆ, ವಸತಿಯ ಗುಣಮಟ್ಟ, ಮೂಲಭೂತ ಸೌಲಭ್ಯಗಳ ಲಭ್ಯತೆ ಸೇರಿದಂತೆ ಪ್ರಮುಖ ಮಾಹಿತಿ ಸಂಗ್ರಹ.

    ಹಂತ II: ಜನಸಂಖ್ಯಾ ಗಣತಿ (Population Enumeration – PE)

    ಅವಧಿ: ಫೆಬ್ರವರಿ 2027

    ಆದರೆ ಹಿಮದಿಂದ ಆವೃತ ಪ್ರದೇಶಗಳಾದ ಜಮ್ಮು–ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿ PE ಸೆಪ್ಟೆಂಬರ್ 2026ರಲ್ಲಿ ನಡೆಯಲಿದೆ.

    ಮೊದಲ ಡಿಜಿಟಲ್ ಸೆನ್ಸಸ್ ರಿಯಲ್-ಟೈಮ್ ಮೇಲ್ವಿಚಾರಣೆ:

    ಈ ಬಾರಿ ಸಂಪೂರ್ಣ ಪ್ರಕ್ರಿಯೆ:

    ಹೊಸ Census Management and Monitoring System (CMMS) ಪೋರ್ಟಲ್ ಮೂಲಕ, ರಿಯಲ್–ಟೈಮ್ ಟ್ರ್ಯಾಕಿಂಗ್, ಉತ್ತಮ ದತ್ತಾಂಶ ಭದ್ರತಾ ವ್ಯವಸ್ಥೆ, ಕಡಿಮೆ ಮಾನವ ದೋಷಗಳು, ವೇಗವಾದ ಡೇಟಾ ಸಂಸ್ಕರಣೆ ಮತ್ತು ವರದಿ ಸಾದ್ಯವಾಗಲಿದೆ. ಈಗಾಗಲೇ ಮಾಹಿತಿ ಸುರಕ್ಷತೆ, ಡೇಟಾ ಸಂಗ್ರಹಣೆ ಮತ್ತು ಡೇಟಾ ವರ್ಗಾವಣೆ ಪ್ರಕ್ರಿಯೆ ಡಿಜಿಟಲ್ ವಿನ್ಯಾಸ ಸಿದ್ಧವಾಗಿದೆ ಎಂದು ಸಚಿವರು ತಿಳಿಸಿದರು.

    2021ರ ಜನಗಣತಿ ಮುಂದೂಡಿಕೆ ಈಗ 2027ಕ್ಕೆ:

    ಭಾರತದ ಕೊನೆಯ ಜನಗಣತಿ 2011ರಲ್ಲಿ ನಡೆದಿತ್ತು. 2021ರಲ್ಲಿ ನಡೆಯಬೇಕಿದ್ದ ಸೆನ್ಸಸ್‌ ಕೋವಿಡ್‌ ಮಹಾಮಾರಿಯಿಂದ ಮುಂದೂಡಲ್ಪಟ್ಟಿತ್ತು. ಕಳೆದ ದಶಕದಲ್ಲಿ ಜನಸಂಖ್ಯೆ, ವಲಸೆ, ನಗರೀಕರಣ ಹಾಗೂ ಸಾಮಾಜಿಕ ಬದಲಾವಣೆಗಳಲ್ಲಿ ಸಂಭವಿಸಿದ ದೊಡ್ಡ ಬದಲಾವಣೆಗಳನ್ನು ಗಮನಿಸಿದರೆ 2027ರ ಜನಗಣತಿ ಅತ್ಯಂತ ಮಹತ್ವದ್ದಾಗಿದೆ.

    ಅಧಿಕಾರಿಗಳ ನೇಮಕಾತಿ ಜನವರಿ 15ರ ಗಡುವು:

    ಜನಗಣತಿ ನಡೆಸಲು ಅಗತ್ಯವಿರುವ ಅಧಿಕಾರಿಗಳ ಮತ್ತು ಸಿಬ್ಬಂದಿಯ ನಿಯೋಜನೆ ಜನವರಿ 15, 2026ರೊಳಗೆ ಪೂರ್ಣಗೊಳಿಸಲು ಭಾರತೀಯ ನೋಂದಣಿಯ ಮಹಾನಿರ್ದೇಶನಾಲಯ (RGI) ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಮನೆ-ಮನೆಗೆ ತೆರಳಿ ಮಾಹಿತಿಯನ್ನು ದಾಖಲಿಸುವ ಈ ಅಧಿಕಾರಿಗಳೇ ಗಣತಿಯ ಮುಖ್ಯ ಅಸ್ತ್ರವಾಗಲಿದ್ದಾರೆ.

    ಬೃಹತ್ ಬಜೆಟ್, ಡಿಜಿಟಲ್ ತಂತ್ರಜ್ಞಾನ ಮತ್ತು ಸ್ಪಷ್ಟ ಹಂತಬದ್ಧ ಯೋಜನೆಯೊಂದಿಗೆ ನಡೆಯಲಿರುವ 2027ರ ಜನಗಣತಿ ಭಾರತಕ್ಕೆ ಹೊಸ ಯುಗದ ದಾರಿ.

    apvc-iconPost Views: 0
  • IND vs SA :ಎರಡನೇ ಪಂದ್ಯದಲ್ಲಿ ಮುಗ್ಗರಿಸಿದ ಸೂರ್ಯ ಪಡೆ

    IND vs SA :ಎರಡನೇ ಪಂದ್ಯದಲ್ಲಿ ಮುಗ್ಗರಿಸಿದ ಸೂರ್ಯ ಪಡೆ

    ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡ ಕ್ಷಣದಿಂದಲೇ ನಿರೀಕ್ಷೆಗಳು ಗಗನಕ್ಕೆ ಏರಿದ್ದವು. ಆದರೆ ಮೈದಾನದಲ್ಲಿ ನಡೆದ ಚಿತ್ರ ಸಂಪೂರ್ಣ ವಿಭಿನ್ನ. ಕಟಕ್‌ನಲ್ಲಿ ಕಂಡ ಮುಖಭಂಗಕ್ಕೆ ದಕ್ಷಿಣ ಆಫ್ರಿಕಾ ತಂಡ ಇದೇ ಮೈದಾನದಲ್ಲಿ ದಿಟ್ಟ ತಿರುಗೇಟು ನೀಡಿ ಭಾರತವನ್ನು ಬರೋಬ್ಬರಿ 51 ರನ್‌ಗಳಿಂದ ಮಣಿಸಿ, ಸರಣಿಯನ್ನು 1-1ರಿಂದ ಸಮಬಲಕ್ಕೆ ತಂದಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ನಿಂತ ದಕ್ಷಿಣ ಆಫ್ರಿಕಾ, ಆರಂಭದಿಂದಲೇ ಭಾರತೀಯ ಬೌಲಿಂಗ್‌ ಮೇಲೆ ಮನ ಬಂದತೆ ದಾಳಿ ಶುರುಮಾಡಿತು. ವಿಶೇಷವಾಗಿ ಕ್ವಿಂಟನ್ ಡಿ ಕಾಕ್, ಭಾರತದ  ಬೌಲಿಂಗ್‌ನ ಪ್ರತಿ ತಪ್ಪನ್ನೂ  ಶಿಕ್ಷಿಸಿದರು. ರೀಝಾ ಹೆಂಡ್ರಿಕ್ಸ್ ಔಟಾದರೂ ಮಾರ್ಕಂ ಜೊತೆಗೂಡಿ ಡಿ ಕಾಕ್‌ ಸಿಡಿಲಬ್ಬರಕ್ಕೆ ವೇಗವೇ ಹೆಚ್ಚಿತು. 46 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ಸೇರಿ ಕೇವಲ 10 ರನ್‌ಗಳಿಂದ ಶತಕ ವಂಚಿತರಾದರು. ಭಾರತದ ಮೇಲೆ ಒತ್ತಡದ  ಕಟ್ಟಡ ಕಟ್ಟಿದ ಇನ್ನಿಂಗ್ಸ್ ಅದೇ.

    ಇನ್ನೊಂದು ಕಡೆ, ಅರ್ಶದೀಪ್ ಸಿಂಗ್ 11ನೇ ಓವರ್‌ನಲ್ಲಿ ಎಸೆದ 7 ವೈಡ್​ಗಳು ದಕ್ಷಿಣ ಆಫ್ರಿಕಾ ಮೊತ್ತಕ್ಕೆ ಇನ್ನಷ್ಟು ಬೂಸ್ಟರ್ ನೀಡಿದಂತಾಯಿತು. ಡೆತ್ ಓವರ್‌ಗಳಿಗೆ ಬಂದಾಗ ಪಿರೇರಾ (30 ರನ್), ಡೇವಿಡ್ ಮಿಲ್ಲರ್ (20 ರನ್) ವೇಗದ ಲಯ ತೋರಿದ ಪರಿಣಾಮ ತಂಡದ ಮೊತ್ತ 213/4ಕ್ಕೆ ಏರಿತು. ಭಾರತದ ಬೌಲಿಂಗ್‌ನಲ್ಲಿ ಅಕ್ಷರ್ ಮತ್ತು ವರುಣ್ ಮಾತ್ರ ಸ್ವಲ್ಪ ಹಿಡಿತ ತೋರಿದರು ಎನ್ನಬಹುದು.

    ಬೃಹತ್ ಗುರಿಯನ್ನು ಬೆನ್ನತ್ತಲು ಬಂದ ಭಾರತದಿಂದ ಎಲ್ಲರೂ ನಿರೀಕ್ಷಿಸಿದ್ದ ಚೇಸಿಂಗ್ ಕಲರವ ಕಾಣಿಸಲಿಲ್ಲ. ಟಾಸ್ ಗೆದ್ದು ಚೇಸಿಂಗ್ ಆಯ್ದುಕೊಂಡ ಭಾರತಕೆ ಇದೇ ನಿರ್ಧಾರ ಕೇಡು ತಂದಂತೆ, ಆರಂಭದಲ್ಲೇ ವಿಕೆಟ್ ಕುಸಿತಗಳ ಸರಪಳಿ ಶುರುವಾಯಿತು. ಅದರಲ್ಲಿ ತಿಲಕ್ ವರ್ಮಾ ಒಬ್ಬರೇ ಹೋರಾಟ ನೆಡೆಸಿದರೂ ಫಲಕಾರಿ ಯಾಗಲಿಲ್ಲ. 34 ಎಸೆತಗಳಲ್ಲಿ 62 ರನ್‌ಗಳ ಧೈರ್ಯದ ಇನ್ನಿಂಗ್ಸ್ (2 ಬೌಂಡರಿ, 5 ಸಿಕ್ಸರ್) ಭಾರತದ ಬೆನ್ನೆಲುಬಾಗಿ ನಿಂತರೂ, ಮಧ್ಯಮ ಕ್ರಮಾಂಕದಿಂದ ಬೆಂಬಲ ಸಿಗದೇ ಹೋದುದು ಭಾರತಕ್ಕೆ ಗಂಭೀರ ಹೊಡೆತವಾಗಿತ್ತು.

    ದಕ್ಷಿಣ ಆಫ್ರಿಕಾ ಬೌಲಿಂಗ್‌ನಲ್ಲಿ ಬಾರ್ಟಮನ್ ಭಾರತೀಯ ಬ್ಯಾಟಿಂಗ್‌ಗೆ ನಿಜವಾದ ಕಂಟಕವಾದರು. 4 ವಿಕೆಟ್‌ಗಳನ್ನು ಕಿತ್ತು ಭಾರತವನ್ನು ಸಂಪೂರ್ಣ ಒತ್ತಡಕ್ಕೆ ತಳ್ಳಿದರು.ಲುಂಗಿ ಎನ್ ಗಿಡಿ ಮತ್ತು ಯಾನ್ಸನ್ ಅವರ ಸೂಕ್ತ ಬೌಲಿಂಗ್ ಕೂಡ ಭಾರತವನ್ನು ಮತ್ತಷ್ಟು ಸಿಕ್ಕಿಹಾಕಿತು.

    ಕೊನೆಗೆ, ಟೀಂ ಇಂಡಿಯಾ 19.1 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಗಿ, ಕಟಕ್‌ನಲ್ಲಿ ಕಂಡ ಗೆಲುವಿನ ಜಾಲವನ್ನು ಚಂಡೀಗಢದಲ್ಲಿ ಹಿಡಿಯಲು ವಿಫಲವಾಯಿತು. ದಕ್ಷಿಣ ಆಫ್ರಿಕಾ 51 ರನ್‌ಗಳ ಭರ್ಜರಿ ಜಯ ಸಾಧಿಸಿತು.

    apvc-iconPost Views: 0