Blog

  • ವಿದ್ಯಾರ್ಥಿಗಳ ಮನೋಭಾವ ಅರಿತು ಶಿಕ್ಷಣ ನೀಡಬೇಕಾಗಿದೆ – ಶ್ರೀನಿವಾಸ

    ವಿದ್ಯಾರ್ಥಿಗಳ ಮನೋಭಾವ ಅರಿತು ಶಿಕ್ಷಣ ನೀಡಬೇಕಾಗಿದೆ – ಶ್ರೀನಿವಾಸ

    ಸತ್ಯಕಾಮ ವಾರ್ತೆ ಗುರುಮಠಕಲ್ :

    ವಿದ್ಯಾರ್ಥಿಗಳ ಭವಿಷ್ಯದ ಬದುಕನ್ನು ರೂಪಿಸುವ ಶಿಕ್ಷಕನ ಮೇಲೆ ಅತಿಹೆಚ್ಚು ಜವಾಬ್ದಾರಿ ಇದೆ. ಗುಣಾತ್ಮಕ ಶಿಕ್ಷಣ ನೀಡುವ ಜೊತೆಗೆ ವಿದ್ಯಾರ್ಥಿಗಳ ಮನೋಭಾವನೆಯನ್ನು ಅರಿತು ಅವರಿಗೆ ಶಿಕ್ಷಣ ನೀಡಬೇಕಿದೆ. ಶಿಕ್ಷಣದ ಆಳವನ್ನು ಅಭ್ಯಾಸ ಮಾಡಿ ವಿದ್ಯಾರ್ಥಿಗಳಿಗೆ ಬೋಧಿಸಬೇಕಿದೆ ಎಂದು ಪ್ರಾದೇಶಿಕ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಪಾಟೀಲ್ ಸೇಡಂ ಹೇಳಿದರು.

    ಪಟ್ಟಣದ ಖಾಸಮಠ ಆವರಣದಲ್ಲಿ ಲಾಯನ್ಸ್ ಕ್ಲಬ್ ಆಫ್ ಇಂಟರ್ನ್ಯಾಷನಲ್ ಗುರುಮಠಕಲ್ ಸೇವಾ ಸದನ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶನಿವಾರ ಗುರುವಂದನಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

    ಇದೇ ಸಂಧರ್ಭದಲ್ಲಿ ಗುರುಮಠಕಲ್ ಲಯನ್ಸ್ ಕ್ಲಬ್ ಸೇವಾ ಸಾಧನ ಅಧ್ಯಕ್ಷ ಸಂತೋಷ ಕುಮಾರ್ ನೀರೇಟಿ ಮಾತನಾಡಿ, ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಿದ್ದಾಗ ಮಾತ್ರ ಮಕ್ಕಳಿಗೆ ಪ್ರಾಚೀನ ಮತ್ತು ಪ್ರಸ್ತುತ ಸಮಾಜದ ಆಗುಹೋಗುಗಳ ಕುರಿತು ಭೋದನೆ ಮಾಡಬಹುದು, ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪಾಠಬೋಧನೆ ಮಾಡಿದರೆ ಮಾತ್ರ ನೀವು ಮಕ್ಕಳ ಗಮನ ಸೆಳೆಯಬಹುದು ಎಂದರು.

    ಕಾರ್ಯಕ್ರಮದಲ್ಲಿ ತಾಲೂಕಿನ ಸಮಾರು 300ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು ಹಾಜರಿದ್ದರು.

    ತಮ್ಮ ವೃತ್ತಿಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಪ್ರವೃತ್ತಿಯನ್ನಗಿಸಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಿರುವ ತಾಲೂಕಿನ ವಿವಿಧ ಕ್ಲಸ್ಟರ್ ನ 17 ಶಿಕ್ಷಕರನ್ನು ಆಯ್ಕೆ ಮಾಡಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಿದರು. ಶಶಿಕಾಂತ್ ಜನಾರ್ಧನ್ ನಿರೂಪಣೆ ಮಾಡಿದರು.

     

    ಈ ಸಂಧರ್ಭದಲ್ಲಿ ಅಖಂಡೇಶ್ವರ ಹಿರೇಮಠ, ಪ್ರಧಾನ ಕಾರ್ಯದರ್ಶಿ ನಾರಾಯಣ ರೆಡ್ಡಿ ಪೊಲೀಸ್ ಪಾಟೀಲ್, ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಭೀಮಪ್ಪ ಮನ್ನೆ, ಉಪಾಧ್ಯಕ್ಷರಾದ ಶ್ರೀನಿವಾಸ್ ಮಡಿವಾಳ,ಸಿಆರ್‌ಪಿ ಸಿದ್ದಲಿಂಗಪ್ಪ ನೆಲ್ಲೋಗಿ, ಬಾಲಪ್ಪ ಸಿರಿಗೆಮ್, ರಾಮಕೃಷ್ಣ, ಪ್ರಕಾಶ್, ವೀರಾಶಾಸ್ತ್ರಿ, ರವೀಂದ್ರ ಚೌಹಾಣ, ಬಾಲಪ್ಪ ಸಿರಿಗಂ, ಸಿದ್ದು ಕಂದಕುರ್,ರಾಜೇಂದ್ರ, ಆಂಜನೇಯ, ವಿಜಯಲಕ್ಷ್ಮಿ ನಿಲ್ಲೋಗಿ, ಗಾಯತ್ರಿ ನಾಯಕಿನ್ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

    apvc-iconPost Views: 195
  • ಸತ್ಯಕಾಮ ಪ್ರತಿಫಲ: “ಶಾಲಾ ಮೆಲ್ಚಾವಣಿಯ ದುರಸ್ಥಿ ಕಾರ್ಯಾರಂಭ”

    ಸತ್ಯಕಾಮ ಪ್ರತಿಫಲ: “ಶಾಲಾ ಮೆಲ್ಚಾವಣಿಯ ದುರಸ್ಥಿ ಕಾರ್ಯಾರಂಭ”

    ಸತ್ಯಕಾಮ ಪ್ರತಿಫಲ: ಎಲ್ಲರಿಗಿಂತ ಮೊದಲು ಸುದ್ದಿ ಪ್ರಕಟಿಸಿದ್ದೇ ನಾವು

     

    ಸತ್ಯಕಾಮ ವಾರ್ತೆ ಗುರುಮಠಕಲ್ :

    ತಾಲೂಕಿನ ಚಿಂತನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ವಿಜ್ಞಾನ ಪ್ರಯೋಗಾಲಯದ ಮೇಲ್ಚಾವಣಿಯ ಕುಸಿತದ ಬಗ್ಗೆ ಇತ್ತೀಚಿಗೆ ದಿ. 21 ಸೆಪ್ಟೆಂಬರ್ ರಂದು “ಶಾಲಾ ಕೊಠಡಿಯ ಮೇಲ್ಪಾವಣಿಯ ಸಿಮೆಂಟ್ ಕುಸಿತ; ತಪ್ಪಿದ ಭಾರಿ ಅನಾಹುತ” ಶೀರ್ಷಿಕೆ ಅಡಿಯಲ್ಲಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಲಾಗಿತ್ತು, ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಶಾಲಾ ಮೆಲ್ಚಾವಣಿಯ ದುರಸ್ಥಿ ಕಾರ್ಯ ಮಾಡುವಲ್ಲಿ ಮುಂದಾಗಿದ್ದಾರೆ.

    ಗುರುಮಠಕಲ್ : ತಾಲೂಕಿನ ಚಿಂತನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ವಿಜ್ಞಾನ ಪ್ರಯೋಗಾಲಯದ ಮೇಲ್ಚಾವಣಿಯ ದುರಸ್ಥಿಗೋಳಿಸುತ್ತಿರುವ ದೃಶ್ಯ.
    ಗುರುಮಠಕಲ್ : ತಾಲೂಕಿನ ಚಿಂತನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ವಿಜ್ಞಾನ ಪ್ರಯೋಗಾಲಯದ ಮೇಲ್ಚಾವಣಿಯ ದುರಸ್ಥಿಗೋಳಿಸುತ್ತಿರುವ ದೃಶ್ಯ.

     

    ತಾಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ನೂತನ ಕೋಠಡಿಗಳನ್ನು ಹಸ್ಥಾಂತರಿಸಿ ಒಂದು ವರ್ಷವು ಕಳೆಯುವ ಮುನ್ನ ಗುರುವಾರ ಜರುಗಿದ ಅನಾಹುತವನ್ನು ಬೆಳಕಿಗೆ ತಂದ ಕೂಡಲೇ ಶಾಲೆಗೆ ಭೇಟಿ ನೀಡಿ ಮೇಲ್ಚಾವಣಿಯನ್ನು ಸಂಪೂರ್ಣವಾಗಿ ತೆಗೆಸಿ ಮರು ಪ್ಲಾಸ್ಟರ್ ಮಾಡಿಸಲು ಮುಂದಾಗಿರುವುದು ಗ್ರಾಮಸ್ಥರಲ್ಲಿ, ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳಲ್ಲಿ ಸಂತಸ ತಂದಿದೆ ಹಾಗೂ ಮುಂದಿನ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡುವಂತೆ ತಾಕೀತು ಮಾಡಿದರು.

     

    ಕಳೆದ ೨೦೨೨-೨೩ ನೇ ಸಾಲಿನ ಕೆ.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿ ನಿರ್ಮಿತಿ ಕೇಂದ್ರದವರಿಂದ ನಿರ್ಮಿಸಲಾದ ನಾಲ್ಕು ಕೋಠಡಿಗಳನ್ನು ನ. ೦೨ ರಂದು ಶಾಲೆಗೆ ಹಸ್ಥಾಂತರಿಸಲಾಗಿತ್ತು.

    —————————————

    ಪತ್ರಿಕೆಯಲ್ಲಿ ವರದಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ ಮೆಲ್ಚಾವಣಿಯ ಸಂಪೂರ್ಣವಾಗಿ ತೆಗೆಸಿ ಮರು ಪ್ಲಾಸ್ಟರಿಂಗ್ ಮಾಡಿಸಿಕೊಟ್ಟಿದ್ದೇವೆ.

    ಅಬ್ದುಲ್ ನಭಿ, ಯೋಜನಾ ಅಭಿಯಂತರರು ನಿರ್ಮಿತಿ ಕೇಂದ್ರ.

    ———————–

    ಮೆಲ್ಚಾವಣಿಯ ಪ್ಲಾಸ್ಟರ್ ಅವೈಜ್ಞಾನಿಕವಾಗಿ ಮಾಡಿದ್ದು ಅವಶ್ಯಕತೆಗಿಂತಲು ಹೆಚ್ಚಾಗಿ ಸಿಮೆಂಟ್ ಹಾಕಲಾಗಿದೆ. ಇಂದು ಗಂಗಾವತಿಯ ಅಂಗನವಾಡಿಯಲ್ಲಿಯೂ ಇದೇ ರೀತಿ ಘಟನೆ ಜರುಗಿದ್ದು ಅಧಿಕಾರಿಗಳು ಶಾಲೆಗಳಿಗೆ ಹಸ್ತಂತರಿಸುವ ಮುನ್ನ ಗುಣಮಟ್ಟತೆ ಕಾಯ್ದಕೊಳ್ಳಬೇಕು ಇಲ್ಲವಾದಲ್ಲಿ ಉಗ್ರಹೋರಾಟ ಮಾಡಬೇಕಾಗಿತ್ತದೆ-

    ನಾಗೇಶ ಗದ್ದಗಿ, ಗುರುಮಠಕಲ್ ತಾಲೂಕ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಗುರುಮಠಕಲ್.

    apvc-iconPost Views: 213
  • ನಾಳೆ ಅರಕೇರಾ.ಕೆ ಗ್ರಾಮಕ್ಕೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭೇಟಿ.

    ನಾಳೆ ಅರಕೇರಾ.ಕೆ ಗ್ರಾಮಕ್ಕೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭೇಟಿ.

    ಸತ್ಯಕಾಮ ವಾರ್ತೆ ಯಾದಗಿರಿ:

    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಶ್ರೀ ಎಸ್. ಮಧು ಬಂಗಾರಪ್ಪ ಅವರು ಬುಧವಾರ ಸೆಪ್ಟೆಂಬರ್ 25 ರಂದು ಬೆಳಿಗ್ಗೆ 11-30 ಗಂಟೆಗೆ ಯಾದಗಿರಿ ತಾಲೂಕಿನ ಅರಕೇರಾ .ಕೆ ಗ್ರಾಮ ದಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಇವರ ಸಹಭಾಗಿತ್ವದಲ್ಲಿ 2024-25 ನೇ ಸಾಲಿನಲ್ಲಿ ರಾಜ್ಯದ ಎಲ್ಲ ಸರ್ಕಾರಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿ ಗಳಿಗೆ ವಾರದಲ್ಲಿ 6 ದಿನಗಳ ಪೂರಕ ಪೌಷ್ಠಿಕ ಆಹಾರ ವಿತರಿಸುವ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡುವರು.

    ಅಂದು ಮಧ್ಯಾಹ್ನ 2-30ಗಂಟೆಗೆ ಯಾದಗಿರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಲಬುರ್ಗಿ ವಿಭಾಗ ಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸಂಜೆ 6-30 ಗಂಟೆಗೆ ಕಲಬುರ್ಗಿ ಗೆ ಪ್ರಯಾಣ ಬೆಳೆಸುವರು.

    apvc-iconPost Views: 41
  • ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಗ್ ಶಾಕ್

    ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಗ್ ಶಾಕ್

    ಬೆಂಗಳೂರು: ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಗ್ ಶಾಕ್ ಎದುರಾಗಿದೆ. ಮುಡಾ ಸೈಟು ಅಕ್ರಮ ಹಂಚಿಕೆ ಪ್ರಕರಣವನ್ನು ತನಿಖೆ ನಡೆಸಲು ಗೌರ್ನರ್ ನೀಡಿದ್ದ ಅನುಮತಿ ಪ್ರಕ್ರಿಯೆಗೆ ಹೈಕೋರ್ಟ್ ಅಸ್ತು ಎಂದಿದೆ. ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಗೊಳಿಸಿರುವ ನ್ಯಾಯಮೂರ್ತಿ ನಾಗ ಪ್ರಸನ್ನ ನೇತೃತ್ವದ ಪೀಠ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದೆ.

    ಗೌರ್ನರ್ ಆದೇಶವನ್ನು ಹೈಕೋರ್ಟ್ ಪೀಠ ಎತ್ತಿ ಹಿಡಿದಿದ್ದು ದೂರುದಾರರಾದ ಸ್ನೇಹ ಮಯಿ ಕೃಷ್ಣ, ಪ್ರದೀಪ್ ಹಾಗೂ ಟಿ.ಜೆ ಅಬ್ರಹಾಂ ಅವರ ವಾದಕ್ಕೆ ಮನ್ನಣೆ ಸಿಕ್ಕಿದೆ. ಮೂಡ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ಫಲಾನುಭವಿ ಆಗಿದೆ ಹಾಗಾಗಿ ಈ ಪ್ರಕರಣದ ತನಿಖೆ ನಡೆಸುವುದು ಸೂಕ್ತ ಎಂದು ಪೀಠ ಅಭಿಪ್ರಾಯ ಪಟ್ಟಿದೆ. ಹೈ ಕೋರ್ಟ್ನ ಈ ತೀರ್ಪನ್ನು ವಿಭಾಗಿಯ ಪೀಠದಲ್ಲಿ ಪ್ರಶ್ನೆ ಮಾಡುವುದಾಗಿ ಮತ್ತು ಪ್ರಶ್ನಿಸುವದಾಗಿ ಸಿದ್ದರಾಮಯ್ಯ ಪರ ವಕೀಲರು ಹೇಳಿದ್ದಾರೆ.

    ಮುಡಾ ಅಸ್ತ್ರ ಮುಂದಿಟ್ಟು ಸಿದ್ಧರಾಮಯ್ಯ ಅವರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿದ್ದವು ಆದರೆ ಹೈಕಮಾಂಡ್ ಸಿದ್ದರಾಮಯ್ಯ ಅವರ ಪರ ನಿಂತಿತ್ತು. ಇದೀಗ ಮತ್ತೆ ಪಕ್ಷಗಳ ಬಾಯಲ್ಲಿ ಸಿಎಂ ರಾಜೀನಾಮೆ ಕೊಟ್ಟು ಕೇಳಿ ಬಂದರು ಆಶ್ಚರ್ಯವಿಲ್ಲ.

    apvc-iconPost Views: 108
  • ಸಿಂಧೂ ನಾಗರಿಕತೆ ಪರಿಚಯದ ಶತಮಾನೋತ್ಸವ ಸಂಭ್ರಮ!

    ಸಿಂಧೂ ನಾಗರಿಕತೆ ಪರಿಚಯದ ಶತಮಾನೋತ್ಸವ ಸಂಭ್ರಮ!

    ಸಿಂಧೂ ನಾಗರಿಕತೆ, ಮೆಸಪೊಟಮಿಯಾ ಮತ್ತು ಈಜಿಪ್ಟ್‌ ನಾಗರಿಕತೆಗಳನ್ನು ಪ್ರಪಂಚದ ಮೂರು ಆರಂಭಿಕ ನಾಗರಿಕತೆಗಳೆಂದು ಗುರುತಿಸಲಾಗಿದೆ. ಅದರಲ್ಲಿಯೂ ಮುಖ್ಯವಾಗಿ ಸಿಂಧೂ ನಾಗರಿಕತೆಯು ಬಹು ವಿಸ್ತಾರವಾದದ್ದು. ಸಿಂಧೂ ನಾಗರಿಕತೆ ಅಥವಾ ಸಿಂಧೂ ಕಣಿವೆ ನಾಗರಿಕತೆ ಅಥವಾ ಹರಪ್ಪನ್ ನಾಗರಿಕತೆ ಎಂದೂ ಕರೆಯಲ್ಪಡುವ ಇದು, ಭಾರತದ ಅತ್ಯಂತ ಪ್ರಾಚೀನ ನಗರ ಸಂಸ್ಕೃತಿಯಾಗಿದೆ. ಅಮೆರಿಕದ ಖ್ಯಾತ ಇತಿಹಾಸಕಾರ ಮತ್ತು ತತ್ವಜ್ಞಾನಿ ವಿಲಿಯಂ ಜೇಮ್ಸ್‌ ಡ್ಯೂರಾಂಟ್‌ ಅವರ ಪ್ರಕಾರ, ಈಜಿಪ್ಟ್‌ ನಾಗರಿಕತೆಗಿಂತಲೂ ಸಿಂಧೂ ನಾಗರಿಕತೆ ಹಳೆಯದು! ಈ ನಾಗರಿಕತೆಯ ಪ್ರದೇಶವು ಸಿಂಧೂ ನದಿಯ ಉದ್ದಕ್ಕೂ ಈಶಾನ್ಯ ಅಫ್ಘಾನಿಸ್ತಾನದಿಂದ ಪಾಕಿಸ್ತಾನ ಮತ್ತು ವಾಯುವ್ಯ ಭಾರತದವೆಗೂ ವಿಸ್ತರಿಸಿದೆ. ಈ ಕಾರಣಕ್ಕಾಗಿಯೇ ಸಿಂಧೂ ನದಿಯನ್ನು ʻಭಾರತದ ನಾಗರಿಕತೆಯ ತೊಟ್ಟಿಲುʼ ಎಂದು ಕರೆಯಲಾಗುತ್ತದೆ. ಈ ನಾಗರಿಕತೆಯು ಮುಖ್ಯವಾಗಿ ಹರಪ್ಪಾ ಮತ್ತು ಮೊಹೆಂಜೊದಾರೊ ಎಂಬ ಎರಡು ಬೃಹತ್‌ ನಗರಗಳನ್ನು ಹೊಂದಿತ್ತು. ಇವು ಕ್ರಿಸ್ತಪೂರ್ವ 2600ರಲ್ಲಿ ಪಾಕಿಸ್ತಾನದ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲಿ ಸಿಂಧೂ ನದಿ ಕಣಿವೆಯ ಉದ್ದಕ್ಕೂ ಕಂಡುಬಂದವು. 19ನೇ ಮತ್ತು 20ನೇ ಶತಮಾನಗಳಲ್ಲಿ ಜರುಗಿದ ಸಂಶೋಧನೆ ಮತ್ತು ಉತ್ಖನನವು ಈ ನಮ್ಮ ಪ್ರಾಚೀನ ಸಂಸ್ಕೃತಿಯ ಬಗ್ಗೆ ಪ್ರಮುಖ ಪುರಾತತ್ತ್ವದ ಮಾಹಿತಿಯನ್ನು ಸಂಪೂರ್ಣವಾಗಿ ಒದಗಿಸಿದವು.

    ಕ್ರಿಸ್ತ ಶಕ 1856ರಲ್ಲಿ ಬ್ರಿಟಿಷರು ಸಿಂಧ್‌ನಲ್ಲಿ ರೈಲ್ವೇ ಮಾರ್ಗ ಹಾಕಲು ಒಂದು ದಿಬ್ಬವನ್ನು ಅಗೆದರು. ಆಗ ಭೂಮಿಯಲ್ಲಿ ಸುಟ್ಟ ಇಟ್ಟಿಗೆಗಳು ಕಾಣಲು ಸಿಕ್ಕವು. 1861ರಲ್ಲಿ ಪುರಾತತ್ವ ಇಲಾಖೆಯನ್ನು ಅಲೆಕ್ಸಾಂಡರ್‌ ಕನ್ನಿಂಗ್‌ಹ್ಯಾಮ್‌ ಅವರು ಸ್ಥಾಪಿಸಿ, 1862ರಲ್ಲಿ ಸುಟ್ಟ ಇಟ್ಟಿಗೆಗಳ ಜೊತೆಗೆ ಮುದ್ರೆಗಳನ್ನೂ ಪತ್ತೆ ಮಾಡಿದರು. ಇವರನ್ನು ಭಾರತದ ಪುರಾತತ್ವ ಶಾಸ್ತ್ರದ ಪಿತಾಮಹ ಎಂದು ಕರೆಯಲಾಗುತ್ತದೆ. ನಂತರ 1902ರಲ್ಲಿ ಎಎಸ್‌ಐ ನಿರ್ದೇಶಕನಾಗಿ ಸರ್‌ ಜಾನ್‌ ಹಬರ್ಟ್ ಮಾರ್ಷಲ್‌ರನ್ನು ನೇಮಿಸಲಾಯಿತು. ಇವರ ಸಂಶೋಧನೆ ಮತ್ತು ಉತ್ಖನನ ಪ್ರಯತ್ನಗಳಿಂದ 1922ರ ಸಮಯಕ್ಕೆ ಸಿಂಧೂ ನಾಗರಿಕತೆ ಬೆಳಕಿಗೆ ಬಂದಿತು. ಈ ಕುರಿತಾದ ಮೊದಲ ಚಿತ್ರವನ್ನು ಸರ್‌ ಜಾನ್‌ ಮಾರ್ಷಲ್‌ ಅವರು 1924ರ ಸೆಪ್ಟೆಂಬರ್‌ 20ರಂದು ʻಇಲಸ್ಟ್ರೇಟೆಡ್‌ ಲಂಡನ್‌ ನ್ಯೂಸ್‌ʼ ಎಂಬ ಪತ್ರಿಕೆಯಲ್ಲಿ ಪ್ರಕಟಿಸಿ, ನಮ್ಮ ನಾಗರಿಕತೆಯನ್ನು ಅಧಿಕೃತವಾಗಿ ಜಗತ್ತಿಗೆ ಪರಿಚಯಿಸಿದರು. ಈ ಪ್ರಕಟಣೆಗೆ ಭರ್ತಿ ಈಗ 100 ವರ್ಷ!

    1921ರಲ್ಲಿ ದಯಾರಾಮ್‌ ಸಹಾನಿ ಹರಪ್ಪ ನಗರವನ್ನು; 1922ರಲ್ಲಿ ಆರ್‌ ಡಿ ಬ್ಯಾನರ್ಜಿ ಅವರು ಮೊಹೆಂಜೊದಾರೊ ನಗರವನ್ನು ಪತ್ತೆ ಮಾಡಿದರು. ತದನಂತರ ಹರಪ್ಪನ್ ನಾಗರಿಕತೆಯ ವಿವಿಧ ಹಂತಗಳಲ್ಲಿ ವಿವಿಧ ಪ್ರದೇಶಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಯಿತು:

    • ಅವಧಿ – ಕ್ರಿ.ಪೂ 7000 – ಕ್ರಿ.ಪೂ 5500: ಈ ನವಶಿಲಾಯುಗದ ಅವಧಿಯನ್ನು ಮೆಹರ್‌ಗಢ್‌ನಂತಹ ತಾಣಗಳು ಅತ್ಯುತ್ತಮವಾಗಿ ಉದಾಹರಿಸುತ್ತವೆ. ಇದು ಕೃಷಿ ಅಭಿವೃದ್ಧಿ; ಸಸ್ಯ ಮತ್ತು ಪ್ರಾಣಿಗಳ ಪಳಗಿಸುವಿಕೆ; ಉಪಕರಣಗಳು ಮತ್ತು ಪಿಂಗಾಣಿಗಳ ಉತ್ಪಾದನೆಯ ಪುರಾವೆಗಳನ್ನು ತೋರಿಸುತ್ತದೆ.
    • ಅವಧಿ – ಕ್ರಿ.ಪೂ 5500 – ಕ್ರಿ.ಪೂ 2800: ಈಜಿಪ್ಟ್, ಮೆಸಪೊಟಮಿಯಾ ಮತ್ತು ಚೀನಾದೊಂದಿಗೆ ವ್ಯವಹರಿಸುತ್ತಿದ್ದ ಸಮಯವಿದು. ಸಣ್ಣ ಹಳ್ಳಿಗಳಲ್ಲಿ ವಾಸಿಸುವ ಜನರಿಂದ ಬಂದರುಗಳು, ಹಡಗುಕಟ್ಟೆಗಳು ಮತ್ತು ಗೋದಾಮುಗಳನ್ನು ಜಲಮಾರ್ಗಗಳನ್ನು ನಿರ್ಮಿಸಲಾಯಿತು.
    • ಅವಧಿ – ಕ್ರಿ.ಪೂ 2800 – ಕ್ರಿ.ಪೂ 1900: ಈ ಸಮಯದಲ್ಲಿ ಮಹಾನಗರಗಳ ನಿರ್ಮಾಣ ಮತ್ತು ವ್ಯಾಪಕವಾದ ನಗರೀಕರಣವಾಯಿತು. ಹರಪ್ಪಾ ಮತ್ತು ಮೊಹೆಂಜೊದಾರೋ ಎರಡೂ ನಗರಗಳು ಪ್ರವರ್ಧಮಾನಕ್ಕೆ ಬಂದವು.
    • ಅವಧಿ – ಕ್ರಿ.ಪೂ 1900 – ಕ್ರಿ.ಪೂ 1500: ಈ ಸಮಯವು ಈ ನಾಗರಿಕತೆಯ ಅವನತಿಯನ್ನು ಸೂಚಿಸುತ್ತದೆ. ಹವಾಮಾನ ಬದಲಾವಣೆಯು ಪ್ರವಾಹ, ಬರ ಮತ್ತು ಕ್ಷಾಮದಿಂದಾಗಿ ಈ ನಾಗರಿಕತೆ ನಶಿಸಿತು ಎಂದು ಕೆಲ ಅಧ್ಯಯನಗಳು ಹೇಳುತ್ತವೆ.
    • ಅವಧಿ – ಕ್ರಿ.ಪೂ 1500 – ಕ್ರಿ.ಪೂ 600: ಈ ಸಮಯದಲ್ಲಿ ಜನರು ನಗರಗಳನ್ನು ತೊರೆದರು. ಕ್ರಿ.ಪೂ 530ರಲ್ಲಿ ಎರಡನೇ ಸೈರಸ್ ಭಾರತವನ್ನು ಆಕ್ರಮಿಸುವ ಹೊತ್ತಿಗೆ ಈ ನಾಗರಿಕತೆಯು ಸಂಪೂರ್ಣವಾಗಿ ಕುಸಿದಿತ್ತು ಎಂದು ಅಧ್ಯಯನಗಳು ಹೇಳುತ್ತವೆ.

     

    ಸಿಂಧೂ ನಾಗರಿಕತೆಯ ನಗರ ವ್ಯವಸ್ಥೆ:

    ಸಿಂಧೂ ಕಣಿವೆ ನಾಗರಿಕತೆಯು ಸುಸಜ್ಜಿತ ನಗರ, ಸಂಘಟಿತ ಮೂಲಸೌಕರ್ಯ, ವಾಸ್ತುಶಿಲ್ಪ ಮತ್ತು ಆಡಳಿತ ವ್ಯವಸ್ಥೆಗಳನ್ನು ಒಳಗೊಂಡಿತ್ತು. ಕ್ರಿ.ಪೂ 2600ರ ಹೊತ್ತಿಗೆ, ಸಣ್ಣ ಹರಪ್ಪನ್ ಸಮುದಾಯಗಳು ದೊಡ್ಡ ನಗರ ಕೇಂದ್ರಗಳಾಗಿ ಮಾರ್ಪಟ್ಟವು. ಈ ನಗರಗಳಲ್ಲಿ ಹರಪ್ಪಾ, ಗನೇರಿವಾಲಾ, ಮೊಹೆಂಜೊದಾರೋ, ಧೋಲವೀರಾ, ಕಾಲಿಬಂಗನ್, ರಾಖಿಗರ್ಹಿ, ರೂಪಾರ್ ಮತ್ತು ಲೋಥಲ್ ಸೇರಿವೆ. ಒಟ್ಟಾರೆಯಾಗಿ, ಸಿಂಧೂ ನದಿ ಮತ್ತು ಅದರ ಉಪನದಿಗಳ ಸಾಮಾನ್ಯ ಪ್ರದೇಶದಲ್ಲಿ 1,052 ಕ್ಕೂ ಹೆಚ್ಚು ನಗರಗಳು ಕಂಡುಬಂದಿವೆ. ಸಿಂಧೂ ಕಣಿವೆ ನಾಗರಿಕತೆಯ ಜನಸಂಖ್ಯೆಯು ಐದು ದಶಲಕ್ಷದಷ್ಟು ಇರಬಹುದು ಎಂದು ಅಧ್ಯಯನಗಳಿಂದ ಅಂದಾಜಿಸಲಾಗಿದೆ. ಸುಸಜ್ಜಿತವಾದ ತ್ಯಾಜ್ಯನೀರಿನ ಒಳಚರಂಡಿ ವ್ಯವಸ್ಥೆ, ಕಸ ಸಂಗ್ರಹ ವ್ಯವಸ್ಥೆಗಳು ಮತ್ತು ಸ್ನಾನಗೃಹಗಳು ಸಹ ಇದ್ದವು. ನಗರ ಯೋಜನೆಯ ಗುಣಮಟ್ಟವು ನೈರ್ಮಲ್ಯ ಮತ್ತು ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಸಮರ್ಥ ಪುರಸಭೆಯಂತಹ ಸರ್ಕಾರಗಳನ್ನು ಹೊಂದಿದ್ದವು ಎಂದರೆ ಆಶ್ಚರ್ಯ ಎನಿಸದೇ ಇರಲಾರದು! ಇತಿಹಾಸಕಾರ ಕೆ ಎ ನೀಲಕಂಠಶಾಸ್ತ್ರಿಗಳು, ʻಸಿಂಧೂ ನಾಗರಿಕತೆಯ ಜನರ ನಗರ ಯೋಜನೆಯ ನಿರ್ದಿಷ್ಟತೆ ಮತ್ತು ಏಕರೂಪತೆಗಳ ಜೊತೆಗೆ ನೈರ್ಮಲ್ಯೀಕರಣ ವ್ಯವಸ್ಥೆಗಳು ಮೆಚ್ಚುಗೆಗೆ ಅರ್ಹವಾಗಿವೆʼ ಎಂದು ಬರೆದಿದ್ದಾರೆ.

     

    ಸಮಾಜ ಮತ್ತು ರಾಜಕೀಯ ವ್ಯವಸ್ಥೆ

    ಪುರಾತತ್ತ್ವ ಶಾಸ್ತ್ರದ ದಾಖಲೆಗಳ ಪ್ರಕಾರ, ಹರಪ್ಪ ಕಾಲದ ಸಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ಕುರಿತು ಸ್ಪಷ್ಟ ಚಿತ್ರಣವಿಲ್ಲ. ಇತಿಹಾಸಕಾರ ಡಾ. ಎ ಡಿ ಪುಸಾಲ್ಕರ್‌ ಅವರ ಪ್ರಕಾರ, ನಾಲ್ಕು ಸಾಮಾಜಿಕ ವರ್ಗಗಳಿದ್ದವು. ಅವುಗಳೆಂದರೆ, ಪುರೋಹಿತ ವರ್ಗ, ಕ್ಷತ್ರಿಯ ವರ್ಗ, ವ್ಯಾಪಾರಿಗಳು ಮತ್ತು ಕೂಲಿ ಕಾರ್ಮಿಕರು. ಹರಪ್ಪನ್ ಆಡಳಿತ ಅಥವಾ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದಂತೆ ಮೂರು ಪ್ರಮುಖ ಸಿದ್ಧಾಂತಗಳು ಅಭಿವೃದ್ಧಿಗೊಂಡಿವೆ. ಮೊದಲನೆಯದು, ನಾಗರಿಕತೆಯ ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಏಕೈಕ ರಾಜ್ಯವಿತ್ತು, ಕಲಾಕೃತಿಗಳಲ್ಲಿನ ಹೋಲಿಕೆ, ಯೋಜಿತ ವಸಾಹತುಗಳ ಪುರಾವೆಗಳು, ಇಟ್ಟಿಗೆ ಗಾತ್ರದ ಪ್ರಮಾಣಿತ ಅನುಪಾತವಿತ್ತು ಎಂದು ಈ ಸಿದ್ಧಾಂತ ಹೇಳುತ್ತದೆ. ಎರಡನೆಯ ಸಿದ್ಧಾಂತವು, ಒಬ್ಬನೇ ಆಡಳಿತಗಾರ ಇರಲಿಲ್ಲ ಎಂದು ಪ್ರತಿಪಾದಿಸುತ್ತದೆ. ಅಂತಿಮ ಸಿದ್ಧಾಂತವು ಸಿಂಧೂ ಕಣಿವೆ ನಾಗರಿಕತೆಗೆ ಆಡಳಿತಗಾರರಿರಲಿಲ್ಲ ಎಂದು ಹೇಳುತ್ತದೆ.

     

    ತಂತ್ರಜ್ಞಾನ

    ಹರಪ್ಪನ್ನರು ಏಕರೂಪದ ತೂಕ ಮತ್ತು ಅಳತೆಗಳ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದವರಲ್ಲಿ ಮೊದಲಿಗರು. ಆಧುನಿಕ ಭಾರತದ ಗುಜರಾತ್ ರಾಜ್ಯದಲ್ಲಿರುವ ಪ್ರಮುಖ ಸಿಂಧೂ ಕಣಿವೆಯ ನಗರವಾದ ಲೋಥಾಲ್‌ನಲ್ಲಿ ಕಂಡುಬರುವ ದಂತದ ಪ್ರಮಾಣದಲ್ಲಿ ಸರಿಸುಮಾರು 1.6 ಮಿಮೀ ಗುರುತಿಸಲಾಗಿದೆ. ಇದು ಕಂಚಿನ ಯುಗದ ಪ್ರಮಾಣದಲ್ಲಿ ದಾಖಲಾದ ಚಿಕ್ಕ ವಿಭಾಗವಾಗಿದೆ. ಸುಧಾರಿತ ಮಾಪನ ವ್ಯವಸ್ಥೆಯ ಇನ್ನೊಂದು ಸೂಚನೆಯೆಂದರೆ, ಸಿಂಧೂ ನಗರಗಳನ್ನು ನಿರ್ಮಿಸಲು ಬಳಸಿದ ಇಟ್ಟಿಗೆಗಳು ಗಾತ್ರದಲ್ಲಿ ಏಕರೂಪವಾಗಿದ್ದವು! ಹರಪ್ಪನ್ನರು ನೌಕಾನೆಲೆಗಳು, ಧಾನ್ಯಗಳು, ಗೋದಾಮುಗಳು, ಇಟ್ಟಿಗೆ ಮತ್ತು ರಕ್ಷಣಾತ್ಮಕ ಗೋಡೆಗಳೊಂದಿಗೆ ಸುಧಾರಿತ ವಾಸ್ತುಶಿಲ್ಪವನ್ನು ಹೊಂದಿದ್ದರು. ಹರಪ್ಪನ್ನರು ಸೀಲ್ ಕೆತ್ತನೆಯಲ್ಲಿ ಪ್ರವೀಣರಾಗಿದ್ದರು ಎಂದು ಭಾವಿಸಲಾಗಿದೆ. ಸೀಲ್‌ನ ಕೆಳಭಾಗದ ಮುಖಕ್ಕೆ ಮಾದರಿಗಳನ್ನು ಅಂಟಿಸಿ, ವ್ಯಾಪಾರ ಸರಕುಗಳ ಮೇಲೆ ಜೇಡಿಮಣ್ಣನ್ನು ಮುದ್ರೆ ಮಾಡಲು ವಿಶಿಷ್ಟವಾದ ಮುದ್ರೆಗಳನ್ನು ಬಳಸಿದರು. ಸೀಲುಗಳು ಸಿಂಧೂ ಕಣಿವೆಯ ನಗರಗಳಲ್ಲಿ ಸಾಮಾನ್ಯವಾಗಿ ಕಂಡುಹಿಡಿದ ಕಲಾಕೃತಿಗಳಲ್ಲಿ ಒಂದಾಗಿದೆ, ಆನೆಗಳು, ಹುಲಿಗಳು ಮತ್ತು ನೀರಿನ ಎಮ್ಮೆಗಳಂತಹ ಪ್ರಾಣಿಗಳ ಆಕೃತಿಗಳಿಂದ ಅಲಂಕರಿಸಲಾಗಿದೆ. ಹರಪ್ಪನ್ನರು ಲೋಹಶಾಸ್ತ್ರದಲ್ಲಿ ಹೊಸ ತಂತ್ರಗಳನ್ನು ಅಭಿವೃದ್ಧಿಪಡಿಸಿದರು. ತಾಮ್ರ, ಕಂಚು, ಸೀಸ ಮತ್ತು ತವರದೊಂದಿಗೆ ಕೆಲಸ ಮಾಡುವ ವೈಜ್ಞಾನಿಕ ಮತ್ತು ಅರೆ-ಅಮೂಲ್ಯ ರತ್ನದ ಕಾರ್ನೆಲಿಯನ್ ಉತ್ಪನ್ನಗಳನ್ನು ಬಳಸಿಕೊಂಡು ಸಂಕೀರ್ಣವಾದ ಕರಕುಶಲಗಳನ್ನು ಪ್ರದರ್ಶಿಸುತ್ತಿದ್ದರು ಎಂದು ತಿಳಿದು ಬಂದಿದೆ.

     

    ಕಲೆ

    ಸಿಂಧೂ ಕಣಿವೆಯ ಉತ್ಖನನ ಸ್ಥಳಗಳು ಶಿಲ್ಪಗಳು, ಮುದ್ರೆಗಳು, ಕುಂಬಾರಿಕೆ, ಚಿನ್ನದ ಆಭರಣಗಳು, ಟೆರಾಕೋಟಾ, ಕಂಚು ಮತ್ತು ಸ್ಟೀಟೈಟ್‌ನಲ್ಲಿನ ಅಂಗರಚನಾಶಾಸ್ತ್ರದ ವಿವರವಾದ ಪ್ರತಿಮೆಗಳನ್ನು ಒಳಗೊಂಡಂತೆ ಸಂಸ್ಕೃತಿಯ ಕಲೆಯ ಹಲವಾರು ವಿಭಿನ್ನ ಉದಾಹರಣೆಗಳನ್ನು ಅಧ್ಯಯನಗಳು ಬಹಿರಂಗಪಡಿಸಿವೆ. ಚಿನ್ನ, ಟೆರಾಕೋಟಾ ಮತ್ತು ಕಲ್ಲಿನ ಪ್ರತಿಮೆಗಳಲ್ಲಿ, “ಪ್ರೀಸ್ಟ್-ಕಿಂಗ್”ನ ಆಕೃತಿ, ಕೇವಲ 11 ಸೆಂ.ಮೀ. ಎತ್ತರದ “ಡ್ಯಾನ್ಸಿಂಗ್ ಗರ್ಲ್” ಎಂದು ಕರೆಯಲ್ಪಡುವ ಕಂಚಿನ ಮತ್ತೊಂದು ಪ್ರತಿಮೆ ಮತ್ತು ಕೆಲವು ನೃತ್ಯ ರೂಪಕಗಳ ಉಪಸ್ಥಿತಿಯನ್ನು ಸೂಚಿಸುವ ಭಂಗಿಯಲ್ಲಿ ಸ್ತ್ರೀ ಆಕೃತಿಯನ್ನು ತಯಾರಿಸಿರುವುದು ಕಂಡುಬಂದಿದೆ. ಶಿವನ ರುದ್ರತಾಂಡವ ಮೂರ್ತಿಯೊಂದು ದೊರೆತಿದ್ದು ಅದನ್ನು ನಟರಾಜ ಎಂದು ಗುರುತಿಸಲಾಗಿದೆ. ಈ ಪ್ರತಿಮೆಗಳ ಜೊತೆಗೆ, ಸಿಂಧೂ ನದಿ ಕಣಿವೆಯ ಜನರು ನೆಕ್ಲೇಸ್ಗಳು, ಬಳೆಗಳು ಮತ್ತು ಇತರ ಆಭರಣಗಳನ್ನು ತಯಾರಿಸಿದ್ದರು ಎಂದು ಅಧ್ಯಯನಗಳು ಹೇಳಿವೆ.

     

    ಲಿಪಿ

    ಹರಪ್ಪನ್ನರು ಸಂಕೇತಗಳನ್ನು ಒಳಗೊಂಡಿರುವ ಸಿಂಧೂ ಲಿಪಿಯನ್ನು ಬಳಸಿದ್ದಾರೆಂದು ನಂಬಲಾಗಿದೆ. ಕ್ರಿ.ಪೂ 3300-3200 ಸಮಯದಲ್ಲಿನ, ಕಾರ್ಬನ್-ಡೇಟ್ ಮಾಡಲಾದ ಹರಪ್ಪಾದಲ್ಲಿ ಜೇಡಿಮಣ್ಣು ಮತ್ತು ಕಲ್ಲಿನ ಫಲಕಗಳ ಮೇಲೆ ಲಿಖಿತ ಪಠ್ಯಗಳ ಸಂಗ್ರಹವನ್ನು ಕಂಡುಹಿಡಿಯಲಾಯಿತು. ಇದು ತ್ರಿಶೂಲ-ಆಕಾರದ, ಸಸ್ಯದಂತಹ ಗುರುತುಗಳನ್ನು ಒಳಗೊಂಡಿದೆ. ಈ ಸಿಂಧೂ ಲಿಪಿಯು ಸಿಂಧೂ ನದಿ ಕಣಿವೆಯ ನಾಗರಿಕತೆಯಲ್ಲಿ ಸ್ವತಂತ್ರವಾಗಿ ಅಭಿವೃದ್ಧಿ ಹೊಂದಿತು. ಸೀಲುಗಳು, ಸೆರಾಮಿಕ್ ಮಡಕೆಗಳು ಮತ್ತು ಹನ್ನೆರಡು ಇತರ ವಸ್ತುಗಳ ಮೇಲೆ 600 ವಿಭಿನ್ನ ಸಿಂಧೂ ಚಿಹ್ನೆಗಳು ಕಂಡುಬಂದಿವೆ. ವಿಶಿಷ್ಟವಾದ ಸಿಂಧೂ ಶಾಸನಗಳು ನಾಲ್ಕು ಅಥವಾ ಐದು ಅಕ್ಷರಗಳಿಗಿಂತ ಹೆಚ್ಚು ಉದ್ದವಿರುವುದಿಲ್ಲ, ಅವುಗಳಲ್ಲಿ ಹೆಚ್ಚಿನವು ತುಂಬಾ ಚಿಕ್ಕದಾಗಿವೆ. 1 ಇಂಚು (ಅಥವಾ 2.54 ಸೆಂ.) ಚೌಕಕ್ಕಿಂತ ಕಡಿಮೆ ಇರುವ ಒಂದೇ ಮೇಲ್ಮೈಯಲ್ಲಿ ಉದ್ದವಾದ 17 ಚಿಹ್ನೆಗಳಿವೆ. ಶಾಸನಗಳನ್ನು ಪ್ರಾಥಮಿಕವಾಗಿ ಬಲದಿಂದ ಎಡಕ್ಕೆ ಬರೆಯಲಾಗಿದೆ ಎಂದು ಭಾವಿಸಲಾಗಿದೆ, ಆದರೆ ಈ ಲಿಪಿಯು ಸಂಪೂರ್ಣ ಭಾಷೆಯನ್ನು ರೂಪಿಸುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ. ಇತರ ಬರವಣಿಗೆಯ ವ್ಯವಸ್ಥೆಗಳೊಂದಿಗೆ ಹೋಲಿಕೆಯಾಗಿ ಬಳಸಲು *”ರೊಸೆಟ್ಟಾ ಸ್ಟೋನ್”* ಇಲ್ಲದೆ, ಚಿಹ್ನೆಗಳು ಭಾಷಾಶಾಸ್ತ್ರಜ್ಞರು ಮತ್ತು ಪುರಾತತ್ತ್ವ ಶಾಸ್ತ್ರಜ್ಞರಿಗೆ ವಿವರಿಸಲಾಗದಂತೆ ಉಳಿದಿವೆ. ಇತಿಹಾಸಕಾರ ಡಾ. ಎಸ್‌ ಆರ್‌ ರಾವ್‌ ಅವರು ಮುದ್ರೆಗಳ ಮೇಲಿನ 62 ವರ್ಣಗಳನ್ನು ಗುರುತಿಸಿದ್ದಾರೆ. ಒಂದು ಮುದ್ರೆ ಗರಿಷ್ಠ 26 ಚಿತ್ರಗಳನ್ನು ಒಳಗೊಂಡಿದೆ. ಬೆಂಗಳೂರಿನ ಭಾಷಾತಜ್ಞರಾದ ಡಾ. ಬಿ ವಿ ಸುಬ್ಬರಾಯಪ್ಪನವರು ಸಿಂಧೂ ಲಿಪಿ ಅಂಕ ಸೂಚಕವೇ ಹೊರತು ಭಾಷಾ ಸೂಚಕವಲ್ಲ ಎಂದು ಹೇಳಿದ್ದಾರೆ. ಅದನ್ನು ಚಿತ್ರಲಿಪಿ ಎಂದೂ ಸಹ ಭಾವಿಸಲಾಗುತ್ತದೆ.

     

    ಧರ್ಮ

    ಹರಪ್ಪನ್ ಧರ್ಮವು ಊಹಾಪೋಹದ ವಿಷಯವಾಗಿ ಉಳಿದಿದೆ. ಹರಪ್ಪನ್ನರು ಫಲವತ್ತತೆಯನ್ನು ಸಂಕೇತಿಸುವ ಮಾತೃ ದೇವತೆಯನ್ನು ಪೂಜಿಸುತ್ತಾರೆ ಎಂದು ವ್ಯಾಪಕವಾಗಿ ಸೂಚಿಸಲಾಗಿದೆ. ಡಾ. ಜಾನ್‌ ಹಬರ್ಟ್‌ ಮಾರ್ಷಲ್‌ರ ಪ್ರಕಾರ, ʻಸಿಂಧೂ ನಾಗರಿಕತೆಯ ಸಂಸ್ಕೃತಿಯು ಹಿಂದೂ ಧರ್ಮದ ತವರುಮನೆಯಾಗಿತ್ತುʼ. ಕೆಲವು ಸಿಂಧೂ ಕಣಿವೆಯ ಮುದ್ರೆಗಳು ಸ್ವಸ್ತಿಕ ಚಿಹ್ನೆಯನ್ನು ತೋರಿಸುತ್ತವೆ, ಇದನ್ನು ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮ ಸೇರಿದಂತೆ ನಂತರದ ಭಾರತೀಯ ಧರ್ಮಗಳು ಅಳವಡಿಸಿಕೊಂಡಿವೆ. ಸೇರಿಸಲಾಗಿದೆ. ಅನೇಕ ಸಿಂಧೂ ಕಣಿವೆಯ ಮುದ್ರೆಗಳು ಪ್ರಾಣಿಗಳ ರೂಪಗಳನ್ನು ಒಳಗೊಂಡಿವೆ, ಕೆಲವು ಅವುಗಳನ್ನು ಮೆರವಣಿಗೆಗಳಲ್ಲಿ ಒಯ್ಯುವುದನ್ನು ಚಿತ್ರಿಸುತ್ತದೆ. ಮೊಹೆಂಜೊದಾರೊದ ಒಂದು ಮುದ್ರೆಯು ಅರ್ಧ ಮಾನವ, ಅರ್ಧ ಎಮ್ಮೆ ದೈತ್ಯಾಕಾರದ ಹುಲಿಯ ಮೇಲೆ ದಾಳಿ ಮಾಡುವುದನ್ನು ತೋರಿಸುತ್ತದೆ.

     

    ವಿದೇಶಿ ವ್ಯಾಪಾರ

    ಹರಪ್ಪನ್ ನಾಗರಿಕತೆಯು ಇಂದು ದಕ್ಷಿಣ ಏಷ್ಯಾದಾದ್ಯಂತ ಕಂಡುಬರುವಂತೆ ಹೋಲುವ ಎತ್ತಿನ ಬಂಡಿಗಳ ರೂಪದಲ್ಲಿ ಚಕ್ರಗಳ ಸಾರಿಗೆಯನ್ನು ಬಳಸಿರಬಹುದು ಎಂದು ಊಹಿಸಲಾಗಿದೆ. ಈ ನಾಗರಿಕತೆಯ ಜನರು ದೋಣಿಗಳು ಮತ್ತು ವಾಟರ್‌ಕ್ರಾಫ್ಟ್‌ಗಳನ್ನು ನಿರ್ಮಿಸಿದ್ದರೆಂದು ತೋರುತ್ತದೆ. ಏಕೆಂದರೆ ದೊಡ್ಡದಾಗಿ ತೋಡಿದ ಕಾಲುವೆಯ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಿಂದ ರುಜುವಾತಾಗಿದ್ದು, ಕರಾವಳಿ ನಗರವಾದ ಲೋಥಾಲ್‌ನಲ್ಲಿ ಡಾಕಿಂಗ್ ಸೌಲಭ್ಯ ಇತ್ತೆಂದು ಪರಿಗಣಿಸಲಾಗಿದೆ. ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಖನಿಜಗಳು, ಭಾರತದ ಇತರ ಭಾಗಗಳಿಂದ ಸೀಸ ಮತ್ತು ತಾಮ್ರ, ಚೀನಾದಿಂದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವುದರ ಮೇಲೆ ವ್ಯಾಪಾರ ಕೇಂದ್ರೀಕೃತವಾಗಿತ್ತು. ಇತರ ವ್ಯಾಪಾರ ಸರಕುಗಳಲ್ಲಿ ಟೆರಾಕೋಟಾ ಮಡಕೆಗಳು, ಚಿನ್ನ, ಬೆಳ್ಳಿ, ಲೋಹಗಳು, ಮಣಿಗಳು, ಉಪಕರಣಗಳನ್ನು ತಯಾರಿಸಲು ಫ್ಲಿಂಟ್‌ಗಳು, ಸೀಶೆಲ್‌ಗಳು, ಮುತ್ತು-ರತ್ನಗಳು ಸೇರಿವೆ. ಹರಪ್ಪನ್ ಮತ್ತು ಮೆಸಪೊಟಮಿಯನ್ ನಾಗರಿಕತೆಗಳ ನಡುವೆ ವ್ಯಾಪಕವಾದ ಕಡಲ ವ್ಯಾಪಾರ ಜಾಲವು ಕಾರ್ಯನಿರ್ವಹಿಸುತ್ತಿತ್ತು. ಆಧುನಿಕ ಇರಾಕ್, ಕುವೈತ್ ಮತ್ತು ಸಿರಿಯಾದ ಭಾಗಗಳನ್ನು ಒಳಗೊಂಡಿರುವ ಮೆಸಪೊಟಮಿಯನ್ ಪ್ರದೇಶಗಳಲ್ಲಿನ ಪುರಾತತ್ತ್ವ ಶಾಸ್ತ್ರದ ಸ್ಥಳಗಳಲ್ಲಿ ಹರಪ್ಪನ್ ಮುದ್ರೆಗಳು ಮತ್ತು ಆಭರಣಗಳು ಕಂಡುಬಂದಿವೆ. ಅರೇಬಿಯನ್ ಸಮುದ್ರ, ಕೆಂಪು ಸಮುದ್ರ ಮತ್ತು ಪರ್ಷಿಯನ್ ಗಲ್ಫ್‌ನಂತಹ ಜಲರಾಶಿಗಳ ಮೇಲೆ ದೀರ್ಘ ದೂರದ ಸಮುದ್ರ ವ್ಯಾಪಾರವು ವಾಟರ್‌ಕ್ರಾಫ್ಟ್‌ಗಳ ಅಭಿವೃದ್ಧಿಯೊಂದಿಗೆ ಕಾರ್ಯಸಾಧ್ಯವಾಗಬಹುದು. ಈ ಬಗೆಯ ವಾಟರ್‌ಕ್ರಾಫ್ಟ್‌ ಆಗ ಇರಬಹುದೇನೋ?!

     

    ಸಿಂಧೂ ಕಣಿವೆ ನಾಗರಿಕತೆಯ ಅಂತ್ಯ

    ಸಿಂಧೂ ಕಣಿವೆ ನಾಗರಿಕತೆಯು ಹವಾಮಾನ ಬದಲಾವಣೆ ಮತ್ತು ವಲಸೆಯ ಕಾರಣದಿಂದ ಕ್ರಿ.ಪೂ 1800ರಲ್ಲಿ ಕುಸಿಯಿತು ಎಂದು ನಂಬಲಾಗಿದೆ. ಈ ನಾಗರಿಕತೆಯ ಕಣ್ಮರೆಯ ಕುರಿತು ಹಲವಾರು ಸಿದ್ಧಾಂತಗಳಿವೆ. ಅವುಗಳೆಂದರೆ,

     

    ಆರ್ಯನ್ ಆಕ್ರಮಣ ಸಿದ್ಧಾಂತ (ಕ್ರಿ. ಪೂ 1800-1500)

    1944ರಿಂದ 1948ರವರೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಮಹಾನಿರ್ದೇಶಕರಾಗಿದ್ದ ಮಾರ್ಟಿಮರ್ ವೀಲರ್ ಅವರ ಪ್ರಕಾರ, ʻಇಂಡೋ-ಯುರೋಪಿಯನ್ ಬುಡಕಟ್ಟಿನ ಅಲೆಮಾರಿಯಾಗಿದ್ದ ಆರ್ಯನ್ನರು, ಸಿಂಧೂ ನದಿ ಕಣಿವೆಯನ್ನು ವಶಪಡಿಸಿಕೊಂಡರು. ಮೊಹೆಂಜೊದಾರೋ ಪುರಾತತ್ತ್ವ ಶಾಸ್ತ್ರದ ಉನ್ನತ ಮಟ್ಟದಲ್ಲಿ ಕಂಡುಬರುವ ಅನೇಕ ಸಮಾಧಿ ಮಾಡದ ಶವಗಳು ಯುದ್ಧದ ಬಲಿಪಶುಗಳಾಗಿವೆʼ ಎಂದು ಪ್ರತಿಪಾದಿಸಿದರು. ಶಾಂತಿಯುತ ಹರಪ್ಪನ್ ಜನರ ವಿರುದ್ಧ ಕುದುರೆಗಳು ಮತ್ತು ಹೆಚ್ಚು ಸುಧಾರಿತ ಆಯುಧಗಳನ್ನು ಬಳಸಿ, ಆರ್ಯರು ಅವರನ್ನು ಸುಲಭವಾಗಿ ಸೋಲಿಸಬಹುದೆಂದು ಅವರು ನೀಡಿದ ಸಿದ್ಧಾಂತದಲ್ಲಿ ಹೇಳಿದ್ದಾರೆ. ವೀಲರ್ ಅವರ ನಂತರ, ಇತರ ವಿದ್ವಾಂಸರು ಅಸ್ಥಿಪಂಜರಗಳು ಆಕ್ರಮಣದ ಹತ್ಯಾಕಾಂಡಗಳ ಬಲಿಪಶುಗಳಲ್ಲ ಎಂದು ಹೇಳಿದರು. ಆದರೆ, ಅನೇಕ ವಿದ್ವಾಂಸರು ಇಂದಿಗೂ ಇಂಡೋ-ಆರ್ಯನ್ ವಲಸೆ ಸಿದ್ಧಾಂತದಲ್ಲಿ ನಂಬಿಕೆಗೆ ಇಡುತ್ತಾರೆ.

     

    ದಿ ಕ್ಲೈಮೇಟ್ ಚೇಂಜ್ ಥಿಯರಿ (ವಾಯುಗುಣ ಬದಲಾವಣೆ ಸಿದ್ಧಾಂತ) (ಕ್ರಿ.ಪೂ 1800-1500)

    ಅನೇಕ ವಿದ್ವಾಂಸರು ಹವಾಮಾನ ಬದಲಾವಣೆಯಿಂದ ಸಿಂಧೂ ನಾಗರಿಕತೆ ಅವನತಿ ಕಂಡಿತು ಎಂದು ಹೇಳುತ್ತಾರೆ. ಕೆಲವು ತಜ್ಞರು ಕ್ರಿ. ಪೂ 1900ರಲ್ಲಿ ಪ್ರಾರಂಭವಾದ ಸರಸ್ವತಿ ನದಿಯ ಒಣಗುವಿಕೆಯು ಹವಾಮಾನ ಬದಲಾವಣೆಗೆ ಮುಖ್ಯ ಕಾರಣವೆಂದು ನಂಬುತ್ತಾರೆ. ಆದರೆ ಇತರರು ಈ ಪ್ರದೇಶವನ್ನು ದೊಡ್ಡ ಪ್ರವಾಹದಿಂದ ನಿರ್ನಾಮವಾಯಿತು ಎಂದು ವಿವರಿಸುತ್ತಾರೆ. ಅಸ್ಥಿಪಂಜರದ ಪುರಾವೆಗಳು ಮಲೇರಿಯಾದಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ ಎಂದು ಸೂಚಿಸಿವೆ. ಹರಪ್ಪಾ ಹವಾಮಾನದಲ್ಲಿನ ಮತ್ತೊಂದು ವಿನಾಶಕಾರಿ ಬದಲಾವಣೆಯು ಪೂರ್ವಕ್ಕೆ ಚಲಿಸುವ ಮಾನ್ಸೂನ್ ಅಥವಾ ಭಾರೀ ಮಳೆಯನ್ನು ತರುವ ಗಾಳಿಯಾಗಿರಬಹುದು. ಮಾನ್ಸೂನ್‌ಗಳು ಸಸ್ಯವರ್ಗ ಮತ್ತು ಕೃಷಿಯನ್ನು ಬೆಂಬಲಿಸುತ್ತದೆಯೇ ಅಥವಾ ನಾಶಪಡಿಸುತ್ತದೆಯೇ ಎಂಬುದರ ಆಧಾರದ ಮೇಲೆ ಹವಾಮಾನಕ್ಕೆ ಸಹಾಯಕ ಮತ್ತು ಹಾನಿಕಾರಕವಾಗಿದೆ. ಸಿಂಧೂ ನದಿ ಕಣಿವೆಗೆ ಬಂದ ಮಾನ್ಸೂನ್‌ಗಳು ಕೃಷಿ ಹೆಚ್ಚುವರಿಗಳ ಬೆಳವಣಿಗೆಗೆ ನೆರವಾದವು, ಇದು ಹರಪ್ಪದಂತಹ ನಗರಗಳ ಅಭಿವೃದ್ಧಿಗೆ ಬೆಂಬಲ ನೀಡಿತು. ಜನಸಂಖ್ಯೆಯು ನೀರಾವರಿಗಿಂತ ಹೆಚ್ಚಾಗಿ ಕಾಲೋಚಿತ ಮಾನ್ಸೂನ್‌ಗಳ ಮೇಲೆ ಅವಲಂಬಿತವಾಗಿದೆ ಮತ್ತು ಮಾನ್ಸೂನ್‌ಗಳು ಪೂರ್ವಕ್ಕೆ ಸ್ಥಳಾಂತರಗೊಂಡಂತೆ, ನೀರಿನ ಪೂರೈಕೆಯು ಬತ್ತಿ ಹೋಗುತ್ತಿತ್ತು ಎಂಬ ಅಂಶವೂ ಕಾರಣವಾಗಿರಬಹುದು.

    apvc-iconPost Views: 27
  • ನೇರ ನುಡಿ ಧೀರ ನಡೆಯ ರಾಜಕಾರಣಿ ಮುದ್ನಾಳ

    ನೇರ ನುಡಿ ಧೀರ ನಡೆಯ ರಾಜಕಾರಣಿ ಮುದ್ನಾಳ

    ಸತ್ಯಕಾಮ ವಾರ್ತೆ ಯಾದಗಿರಿ:

    ಮಾಜಿ ಶಾಸಕರು ಹಾಗೂ ಜನಪ್ರೀಯ ನಾಯಕರಾದ ದಿವಂಗತ ವೆಂಕಟರೆಡ್ಡಿ ಗೌಡ ಮುದ್ನಾಳ ಅವರು ಕೇವಲ ಒಬ್ಬ ವ್ಯಕ್ತಿಯಾಗಿ ಇರದೇ ಪ್ರಬಲ ಶಕ್ತಿ ಆಗಿದ್ದರು ಎಂದು ತಾಲೂಕು ವೀರಶೈವ ಸಮಾಜದ ನಗರ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ ಹೇಳಿದರು.

    ನಗರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಮುದ್ನಾಳ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ದಿ ವೆಂಕಟರೆಡ್ಡಿ ಗೌಡ ಮುದ್ನಾಳ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜಿಗಾಗಿ ಮತ್ತು ಜಿಲ್ಲಾ ಕೇಂದ್ರವಾಗಲು ಅವರು ಮಾಡಿದ ಹೋರಾಟ ಮರೆಯಲಾಗದು ಅವರ ರಾಜಕೀಯ ಸಾಮಾಜಿಕ ಶೈಕ್ಷಣಿಕ ಸಾಹಿತಿಕ ಧಾರ್ಮಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಗಾದವಾದದು ಎಂದರು.

    ಹಿರಿಯರಾದ ಸಿ ಎಮ್ ಪಟ್ಟೆದಾರ ಮಾತನಾಡಿ ನೇರ ನುಡಿ ಧೀರ ನಡೆ ಅವರ ಸರಳ ವ್ಯಕ್ತಿತ್ವ ಎಲ್ಲರ ಮನಸ್ಸಿನಲ್ಲಿ ಅಚ್ಚಳೆಯದೆ ಉಳಿದಿದೆ ಯಾದಗಿರಿ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿ ಜಾತ್ಯತೀತ ವ್ಯಕ್ತಿಯಾಗಿ ಬಾಳಿ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದರು.

    ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಧ್ಯಾಕ್ಷರಾದ ಬಸವರಾಜ ಮೋಟ್ನಳ್ಳಿ. ಕಸಾಪ ಗೌರವ ಕಾರ್ಯದರ್ಶಿಯಾದ ಡಾ. ಭೀಮರಾಯ ಲಿಂಗೇರಿ. ಡಾ. ಎಸ್ ಎಸ್ ನಾಯಕ ಮಾತನಾಡಿ ನುಡಿ ನಮನ ಸಲ್ಲಿಸಿದರು.

    ಈ ಕಾರ್ಯಕ್ರಮದಲ್ಲಿ ಸೋಮಶೇಖರ್ ಮಣ್ಣೂರ. ಆರ್ ಮಾಹದೇವಪ್ಪ ಗೌಡ ಅಬ್ಬೆತುಮಕೂರ. ಚನ್ನಪ್ಪ ಸಾಹುಕಾರ ಠಾಣಗುಂದಿ. ಚಂದ್ರಶೇಖರ ಅರಳಿ. ಮಹೇಶ ಹಿರೇಮಠ. ವೆಂಕಟೇಶ ಕಲಕಂಬ. ಮಹೇಶ್ ಪಾಟೀಲ. ಸುಬಾಶರೆಡ್ಡಿ. ನೀಲಕಂಠ ಶಿಲವಂತ. ಡಾ. ರವಿಂದ್ರ ಹೊಸಮನಿ. ವಿಶ್ವನಾಥ ಕಾಜಗಾರ. ರಾಮಚಂದ್ರ ದಿಲ್ಲಿಕರ್. ಬಸವಂತ್ರಾಯಗೌಡ ಮಾಲಿ ಪಾಟೀಲ. ದೇವಿಂದ್ರರೆಡ್ಡಿ ಯಡ್ಡಳ್ಳಿ. ನಾಗೇಂದ್ರ ಜಾಜಿ. ಶರಣು ಇಡ್ಲೂರ. ಮಲ್ಲು ಹಳಕಟ್ಟಿ. ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಮುದ್ನಾಳ ಅಭಿಮಾನಿಗಳು ಪಾಲ್ಗೊಂಡರು.

    apvc-iconPost Views: 36
  • ಕಾಡಂಗೇರಾ(ಬಿ) ವಿದ್ಯಾರ್ಥಿನಿ ತನುಶ್ರೀ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

    ಕಾಡಂಗೇರಾ(ಬಿ) ವಿದ್ಯಾರ್ಥಿನಿ ತನುಶ್ರೀ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

    ಸತ್ಯಕಾಮ ವಾರ್ತೆ ವಡಗೇರಾ:

    ಶಹಾಪೂರ ತಾಲೂಕು ಕ್ರೀಡಾಂಗಣದಲ್ಲಿ ಈಚೆಗೆ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕಾಡಂಗೇರಾ)ಬಿ) ಗ್ರಾಮದ ಇಂದಿರಾಗಾಂಧಿ ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ತನುಶ್ರೀ ತಂದೆ ಕಾಂತಿಲಾಲ್ 100 ಮೀಟರ್ ಓಟದ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ.

    ಪ್ರಥಮ ಸ್ಥಾನ ವಿಜೇತ ವಿದ್ಯಾರ್ಥಿನಿ ಕು.ತನುಶ್ರೀ ಅವರು ಶಾಲೆಗೆ ಕೀರ್ತಿ ತಂದಿದ್ದಕ್ಕೆ ವಿದ್ಯಾರ್ಥಿನಿಯನ್ನು ಹಾಗೂ ಕ್ರೀಡಾಪಟುಗಳಿಗೆ ಶಾಲೆಯ ಪ್ರಾಂಶುಪಾಲ ನಾಗರೆಡ್ಡಿ, ದೈಹಿಕ ಶಿಕ್ಷಣ ಶಿಕ್ಷಕ ರಾಜು ರಾಠೋಡ್ ಹಾಗೂ ಶಾಲೆಯ ಎಲ್ಲ ಸಿಬ್ಬಂದಿಗಳು ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಮಟ್ಟ ಹಾಗೂ ವಿಭಾಗ ಮಟ್ಟದಲ್ಲಿಯೂ ವಿಜೇತರಾಗಲಿ ಎಂದು ಹಾರೈಸಿದ್ದಾರೆ.

    apvc-iconPost Views: 35
  • ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಶಹಾಪೂರ ತಾಲೂಕು ಪ್ರವೇಶ ಮಾಡದಂತೆ ನಿರ್ಬಂಧ

    ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಶಹಾಪೂರ ತಾಲೂಕು ಪ್ರವೇಶ ಮಾಡದಂತೆ ನಿರ್ಬಂಧ

    ಸತ್ಯಕಾಮ ವಾರ್ತೆ ಯಾದಗಿರಿ :

    ಇಂದಿನಿಂದ ಎರಡು ದಿನಗಳ(ಸೆ.22)ವರೆಗೆ ಸಿದ್ದಲಿಂಗಯ್ಯ ತಂದೆ ಶರಣಯ್ಯ ಗದ್ದುಗೆ ಹಿರೇಮಠ ಸಾ.ಆಂದೋಲ ತಾ.ಜೇವರ್ಗಿ ಹಿಂದೂಪರ ಭಾಷಣಕಾರ ರವರನ್ನು ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲೂಕಿನಾದ್ಯಂತ ಪ್ರವೇಶ ಮಾಡದಂತೆ ನಿರ್ಬಂಧ ಆದೇಶವನ್ನು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಹೊರಡಿಸಿದ್ದಾರೆ.

    2024ರ ಸೆಪ್ಟೆಂಬರ್ 20 ರಂದು ರಾತ್ರಿ 12 ಗಂಟೆಯಿAದ 2024ರ ಸೆಪ್ಟೆಂಬರ್ 22ರ ಮಧ್ಯಾಹ್ನ 2 ಗಂಟೆಯ ವರೆಗೆ ಶ್ರೀ ಸಿದ್ದಲಿಂಗಯ್ಯ ತಂದೆ ಶರಣಯ್ಯ ಗದ್ದುಗೆ ಹಿರೇಮಠ ಸಾ.ಆಂದೋಲ ತಾ.ಜೇವರ್ಗಿ ಇವರಿಗೆ ಶಹಾಪೂರ ತಾಲ್ಲೂಕು ಪ್ರವೇಶ ಮಾಡದಂತೆ ಸಿ.ಆರ್.ಪಿ.ಸಿ ಕಾಯ್ದೆ ಸೆಕ್ಷನ್ 133, 143, 144ಎ ರನ್ವಯ ನಿರ್ಬಂಧ ಜಾರಿಗೊಳಿಸಿ ಆದೇಶಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    apvc-iconPost Views: 345
  • ಮೋಟನಳ್ಳಿ ವಸತಿ ನಿಲಯದ ವರದಿ ಬಳಿಕ ಮಕ್ಕಳ ಆಯೋಗ ಭೇಟಿ 

    ಮೋಟನಳ್ಳಿ ವಸತಿ ನಿಲಯದ ವರದಿ ಬಳಿಕ ಮಕ್ಕಳ ಆಯೋಗ ಭೇಟಿ 

    ಸತ್ಯಕಾಮ ವಾರ್ತೆ ಯಾದಗಿರಿ:

    ಮೋಟನಳ್ಳಿ ವಸತಿ ಶಾಲೆಯ ಸಮಸ್ಯೆಗಳ ಬಗ್ಗೆ ಸತ್ಯಕಾಮದಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಜಿಲ್ಲಾ ಮಕ್ಕಳ ರಕ್ಷಣಾ ಆಯೋಗದ ಅಧಿಕಾರಿ ಪ್ರೇಮ್ ಮೂರ್ತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

    ಸೆ.17(ಸೋಮವಾರ) ರಂದು “ಮೋಟನಳ್ಳಿ ವಸತಿ ಶಾಲೆಯ ಲ್ಲಿ ಸಾಲು ಸಾಲು ಸಮಸ್ಯೆಗಳು” ಕಣ್ಣಿದ್ದೂ ಕುರುಡರಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಎಂಬ ಶೀರ್ಷಿಕೆಯಡಿ ಸತ್ಯಕಾಮ ಪ್ರಾದೇಶಿಕ ದಿನಪತ್ರಿಕೆ ಸುದ್ದಿಯನ್ನು ಪ್ರಕಟಿಸಿತ್ತು, ಇದರ ಆಧಾರದ ಮೇಲೆ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಅಲ್ಲಿನ ವಿದ್ಯಾರ್ಥಿಗಳ ಸಮುಖದಲ್ಲಿ ವಸತಿ ನಿಲಯದ ಅವ್ಯವಸ್ಥೆಯ ಬಗ್ಗೆ ತಿಳಿದುಕೊಂಡರು.

    ಈ ವೇಳೆ ವಿದ್ಯಾರ್ಥಿಗಳು ಪ್ರಮುಖವಾಗಿ ಶುದ್ಧ ಕುಡಿಯುವ ನೀರು, ಪ್ರತೀ ತಿಂಗಳು ವಿದ್ಯಾರ್ಥಿಗಳಿಗೆ ಬರುವ ಕಿಟ್ ಸಿಗುತ್ತಿಲ್ಲ, ಬಯಲು ಶೌಚಯಲವೇ ಗತಿಯ ಬಗ್ಗೆ ಬಂದಂತಹ ಅಧಿಕಾರಿಗಳಿಗೆ ತಮ್ಮ ವಸತಿ ನಿಲಯದ ಸಮಸ್ಯೆಗಳ ಬಗ್ಗೆ ವಿವರಿಸಿದರು.

    ಈ ಸಂದರ್ಭದಲ್ಲಿ ಆಪ್ತ ಸಮಾಲೋಚನಾ ಆಧಿಕಾರಿ ದೇವಪ್ಪ, ಪ್ರಿನ್ಸಿಪಾಲ್ ಸಿದ್ದಪ್ಪ, ವಾರ್ಡನ್ ಆದಯ್ಯ ಹಿರೇಮಠ್, ಶಿಕ್ಷಕ ಮೌನೇಶ್ ಮೊಟನಹಳ್ಳಿ, ಸುನೀಲ್ ಕುಮಾರ್ ಸೇರಿದಂತೆ ಇತರರು ಇದ್ದರು.

     

    apvc-iconPost Views: 13
  • ನಾರದಗಡ್ಡೆ ಮಠದ ಆಸ್ತಿ ನಿರ್ವಹಣೆ ಕುರಿತ ಪ್ರಕರಣಕ್ಕೆ ಅಭಿಪ್ರಾಯ ಪಡೆಯಲು ಸೆ.22 ರಂದು ಸಭೆ

    ನಾರದಗಡ್ಡೆ ಮಠದ ಆಸ್ತಿ ನಿರ್ವಹಣೆ ಕುರಿತ ಪ್ರಕರಣಕ್ಕೆ ಅಭಿಪ್ರಾಯ ಪಡೆಯಲು ಸೆ.22 ರಂದು ಸಭೆ

    ಭಕ್ತಾದಿಗಳು, ಸಾರ್ವಜನಿಕರು ಹಾಜರಾಗಲು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಮನವ

    ಸತ್ಯಕಾಮ ವಾರ್ತೆ ಯಾದಗಿರಿ:

    ಗೌರವಾನ್ವಿತ ಉಚ್ಚ ನ್ಯಾಯಲಯದ ನಿರ್ದೇಶನದಂತೆ ರಾಯಚೂರು ಜಿಲ್ಲೆಯ ನಾರದಗಡ್ಡೆ ಮಠದ ಆಸ್ತಿ ನಿರ್ವಹಣೆ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಪಡೆಯಲು ಸೆಪ್ಟೆಂಬರ್ 22 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಏರ್ಪಡಿಸಿದ್ದು, ಆ ಗ್ರಾಮದ ಭಕ್ತಾದಿಗಳು, ಸಾರ್ವಜನಿಕರು ಹಾಜರಾಗಲು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಮನವಿ ಮಾಡಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಪೀಠದ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಪಿಟಿಷನ್ ಸಂಖ್ಯೆ 202656/2014 ಕ್ಕೆ ಸಂಬಂಧಿಸಿದಂತೆ ನಾರದಗಡ್ಡೆ ಮಠದ ಆಸ್ತಿ ನಿರ್ವಹಣೆ ಕುರಿತು ಯಾದಗಿರಿ ಜಿಲ್ಲಾಧಿಕಾರಿಯ ಕಚೇರಿಯ ಸಭಾಂಗಣದಲ್ಲಿ ಸಭೆ ಜರುಗಿಸಿ ಅಲ್ಲಿನ ಗ್ರಾಮದ, ಭಕ್ತಾದಿಗಳ ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ಪಡೆದು ವರದಿಯನ್ನು ಸಲ್ಲಿಸುವಂತೆ ಸೂಚಿಸಿರುತ್ತಾರೆ.

    ಸದರಿ ಮಠದ ಆಸ್ತಿ ನಿರ್ವಹಣೆಯ ಬಗ್ಗೆ ಅಭಿಪ್ರಾಯ ಪಡೆಯಲು ಸೆಪ್ಟೆಂಬರ್ 22 ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಅವಶ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು, ಮಠದ ಪೀಠಾಧಿಪತಿಗಳು, ಭಕ್ತಾದಿಗಳು ಹಾಗೂ ಸಾರ್ವಜನಿಕರು ತಮ್ಮ ಗುರುತಿನ ಚೀಟಿಯೊಂದಿಗೆ ಹಾಜರಾಗಲು ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    apvc-iconPost Views: 22