Blog

  • ಬಿಹಾರ ಚುನಾವಣೆಗೆ ಹಣ ಕಲೆಕ್ಷನ್‌ ಮಾಡಿರೋದು ಬಿಜೆಪಿ : ಸಿದ್ದರಾಮಯ್ಯ ತಿರುಗೇಟು

    ಬಿಹಾರ ಚುನಾವಣೆಗೆ ಹಣ ಕಲೆಕ್ಷನ್‌ ಮಾಡಿರೋದು ಬಿಜೆಪಿ : ಸಿದ್ದರಾಮಯ್ಯ ತಿರುಗೇಟು

    ಬಿಹಾರ ವಿಧಾನಸಭೆ ಚುನಾವಣೆ (Bihar Election 2025) ಸಮೀಪಿಸುತ್ತಿರುವಂತೆ, ರಾಜಕೀಯ ವಾತಾವರಣ ದಿನೇದಿನೇ ಚುರುಕಾಗುತ್ತಿದೆ. ಚುನಾವಣಾ ಚಟುವಟಿಕೆಗಳು ತೀವ್ರಗೊಂಡಿರುವ ಈ ವೇಳೆಯಲ್ಲಿ ಕರ್ನಾಟಕ ಮತ್ತು ಬಿಹಾರ ರಾಜಕೀಯದ ನಡುವೆ ಹೊಸ ವಾಗ್ವಾದ ಉಂಟಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಆರೋಪ–ಪ್ರತ್ಯಾರೋಪಗಳು ಜೋರಾಗಿವೆ. ಈ ಪೈಕಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ತಿರುಗೇಟು ನೀಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಪುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, “ಬಿಹಾರ ಚುನಾವಣೆಗೆ ಹಣ ಕಲೆಕ್ಷನ್‌ ಮಾಡಿರೋದು ನಾವು ಅಲ್ಲ, ಬಿಜೆಪಿ. ಅವರು ಮಾಡುವ ಕೆಲಸವನ್ನು ನಮ್ಮ ಮೇಲೆ ಹಾಕ್ತಿದ್ದಾರೆ,” ಎಂದು ಕಟುವಾಗಿ ಪ್ರತಿಕ್ರಿಯಿಸಿದರು. ಬಿಜೆಪಿ ನಾಯಕರು ಕರ್ನಾಟಕವನ್ನು ‘ಎಟಿಎಂ ರಾಜ್ಯದಂತೆ ಬಳಸಲಾಗುತ್ತಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

    ಇನ್ನು, ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧ (RSS Activities Ban) ಕುರಿತ ವಿವಾದಕ್ಕೂ ಅವರು ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಹೊರಡಿಸಿದ ಸುತ್ತೋಲೆ ಹೊಸದೇನಲ್ಲ. ಇದೇ ರೀತಿಯ ಸುತ್ತೋಲೆ 2013ರಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶಿಕ್ಷಣ ಇಲಾಖೆಯ ಮೂಲಕ ಹೊರಡಿಸಿದ್ದರು, ಅದೇ ಸುತ್ತೋಲೆ ಈಗಲೂ ಅನ್ವಯವಾಗುತ್ತದೆ ಎಂದು ತಿಳಿಸಿದರು.

    ಯಾವ ಸಂಸ್ಥೆ ಚಟುವಟಿಕೆ ನಡೆಸಬೇಕು ಎಂಬುದು ಸರ್ಕಾರದ ಪರಿಗಣನೆಗೆ ಒಳಪಟ್ಟ ವಿಷಯ. ಪರ್ಮಿಷನ್ ಬೇಕು ಎಂದರೆ ಅದು ಕಡ್ಡಾಯವಲ್ಲ. ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದಲೇ ಅನುಮತಿ ನೀಡಲಾಗುತ್ತದೆ,” ಎಂದು ಹೇಳಿದರು.

    ಈ ಹೇಳಿಕೆಗಳ ಮೂಲಕ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಬಿಹಾರ ಚುನಾವಣೆಗೂ ಮುನ್ನ ರಾಜಕೀಯ ಕೆಸರೆರರಾಚಾಟಕ್ಕೆ ಪುಷ್ಟಿ ತುಂಬಿದ್ದಾರೆ.

    apvc-iconPost Views: 25
  • Deepavali Special: ಬೆಂಗಳೂರಿನಿಂದ ವಿಶಾಖಪಟ್ಟಣಂಗೆ ವಿಶೇಷ ರೈಲು ಸೇವೆ ಆರಂಭ

    Deepavali Special: ಬೆಂಗಳೂರಿನಿಂದ ವಿಶಾಖಪಟ್ಟಣಂಗೆ ವಿಶೇಷ ರೈಲು ಸೇವೆ ಆರಂಭ

    ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದಾದ್ಯಂತ ಲಕ್ಷಾಂತರ ಮಂದಿ ತಮ್ಮ ಊರುಗಳಿಗೆ ಪ್ರಯಾಣಿಸುತ್ತಾರೆ. ಈ ಸಮಯದಲ್ಲಿ ರೈಲು ನಿಲ್ದಾಣಗಳಲ್ಲಿ ಉಂಟಾಗುವ ಅಪಾರ ದಟ್ಟಣೆ ಹಾಗೂ ಟಿಕೆಟ್‌ಗಳ ಕೊರತೆಯಿಂದ ಪ್ರಯಾಣಿಕರಿಗೆ ಅನೇಕ ಬಾರಿ ತೊಂದರೆ ಎದುರಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತಗ್ಗಿಸಲು ಮತ್ತು ಸೌಲಭ್ಯ ಒದಗಿಸಲು ನೈಋತ್ಯ ರೈಲ್ವೆ ಇಲಾಖೆ ಪ್ರಮುಖ ಕ್ರಮ ಕೈಗೊಂಡಿದೆ.

    ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ (SMVT Bengaluru) ಆಂಧ್ರ ಪ್ರದೇಶದ ವಿಶಾಖಪಟ್ಟಣಂ (Visakhapatnam) ಕಡೆಗೆ ವಿಶೇಷ ರೈಲು ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ದೀಪಾವಳಿ ಪ್ರಯುಕ್ತ ಈ ರೈಲು ಪ್ರಯಾಣಿಕರಿಗೆ ಅನುಕೂಲಕರ ಹಾಗೂ ವೇಗದ ಪ್ರಯಾಣದ ಅವಕಾಶ ನೀಡಲಿದೆ.

    ವಿಶೇಷ ರೈಲು ವೇಳಾಪಟ್ಟಿ ಮತ್ತು ನಿಲ್ದಾಣ ವಿವರಗಳು ಹೀಗಿದೆ:

    ಪ್ರಯಾಣ ಆರಂಭ ದಿನಾಂಕ: ಅಕ್ಟೋಬರ್ 22, 2025

    ಹೊರಡುವ ಸಮಯ: ಮಧ್ಯಾಹ್ನ 3:50ಕ್ಕೆ

    ಹೊರಡುವ ನಿಲ್ದಾಣ: SMVT ಬೆಂಗಳೂರು

    ರೈಲು ಸಂಖ್ಯೆ: 08544 (ವಿಶೇಷ ರೈಲು)

    ಗಮ್ಯಸ್ಥಾನ: ವಿಶಾಖಪಟ್ಟಣಂ

    ವಿಶಾಖಪಟ್ಟಣಂ ತಲುಪುವ ಸಮಯ: ಅಕ್ಟೋಬರ್ 23, ಮಧ್ಯಾಹ್ನ 1:30ಕ್ಕೆ

    ಈ ರೈಲು ತನ್ನ ಪ್ರಯಾಣದ ವೇಳೆ ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಜೋಲಾರ್‌ಪೇಟೆ, ಕಾಟ್ಪಾಡಿ, ರೇಣಿಗುಂಟ, ಗೂಡೂರು, ನೆಲ್ಲೂರು, ಗುಡಿವಾಡ, ಕೈಕಲೂರು, ಆಕಿವಿಡು, ಭೀಮಾವರಂ, ತನುಕು, ನಿಡದವೋಲು, ರಾಜಮಂಡ್ರಿ, ಸಾಮಲಕೋಟ, ಎಲಮಂಚಿಲಿ ಹಾಗೂ ದುವ್ವಾಡ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ.

    ಪ್ರಯಾಣಿಕರಿಗೆ ಸೂಚನೆಗಳು:

    ಈ ವಿಶೇಷ ರೈಲಿಗೆ ಆನ್‌ಲೈನ್ ಹಾಗೂ ಕೌಂಟರ್ ಟಿಕೆಟ್‌ಗಳ ಮೂಲಕ ಮುಂಗಡ ಬುಕಿಂಗ್‌ ಈಗಾಗಲೇ ಆರಂಭಗೊಂಡಿದೆ.

    ದೀಪಾವಳಿ ಸಮಯದಲ್ಲಿ ಹೆಚ್ಚುವರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರು ಶೀಘ್ರದಲ್ಲೇ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

    ರೈಲು ಸಮಯದಲ್ಲಿ ಯಾವುದೇ ಬದಲಾವಣೆ ಅಥವಾ ಹೆಚ್ಚುವರಿ ರೈಲುಗಳ ಕುರಿತು ಮಾಹಿತಿ ಪಡೆಯಲು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ ಅಥವಾ ರೈಲು ವಿಚಾರ ಕೇಂದ್ರವನ್ನು ಸಂಪರ್ಕಿಸಬಹುದು.

    ಆದ್ದರಿಂದ, ದೀಪಾವಳಿ ಹಬ್ಬದ ಸಂಭ್ರಮವನ್ನು ತಮ್ಮ ಊರಿನಲ್ಲಿ ಕುಟುಂಬದೊಂದಿಗೆ ಆಚರಿಸಲು ಬಯಸುವವರಿಗೆ ಈ ವಿಶೇಷ ರೈಲು ಪ್ರಯಾಣವನ್ನು ಇನ್ನಷ್ಟು ಸುಗಮ ಮತ್ತು ಆರಾಮದಾಯಕವಾಗಿಸುತ್ತದೆ. ಬೆಂಗಳೂರಿನಿಂದ ವಿಶಾಖಪಟ್ಟಣಂವರೆಗೆ ನೇರ ಸಂಪರ್ಕ ಒದಗಿಸುವ ಈ ರೈಲು ಸೇವೆ ಸಾವಿರಾರು ಪ್ರಯಾಣಿಕರಿಗೆ ಬಹುಮೌಲ್ಯವಾದ ಸೌಲಭ್ಯವಾಗಲಿದೆ.

    apvc-iconPost Views: 10
  • ಕರ್ನಾಟಕದಲ್ಲಿ ಮಳೆ ಅಬ್ಬರ ! ಶಿವಮೊಗ್ಗ, ತುಮಕೂರು, ದಾವಣಗೆರೆಗೆ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

    ಕರ್ನಾಟಕದಲ್ಲಿ ಮಳೆ ಅಬ್ಬರ ! ಶಿವಮೊಗ್ಗ, ತುಮಕೂರು, ದಾವಣಗೆರೆಗೆ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

    1. ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಕಡಿಮೆಯಾದ ಮಳೆ ಮತ್ತೆ ತನ್ನ ಅಬ್ಬರ ತೋರಿಸಲು ಸಿದ್ಧವಾಗಿದೆ. ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದೆ. ಮುಂದಿನ ವಾರದಿಂದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಈ ಹಿನ್ನೆಲೆಯಲ್ಲಿ ಇಂದು (ಅಕ್ಟೋಬರ್ 20) ಶಿವಮೊಗ್ಗ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ. ಬೆಳಗಿನ ವೇಳೆಯಿಂದಲೇ ಮೋಡ ಆವರಿಸಿಕೊಂಡು ಮಳೆ ಆರಂಭವಾಗಿದ್ದು, ಕೆಲವೆಡೆ ಗುಡುಗು, ಮಿಂಚು ಮತ್ತು ಬಿರುಗಾಳಿಯ ಸಹಿತ ಮಳೆ ಸುರಿಯುತ್ತಿದೆ.

    ಹವಾಮಾನ ಇಲಾಖೆಯ ಪ್ರಕಾರ, ಅಕ್ಟೋಬರ್ 23ರಿಂದ 26ರವರೆಗೆ ಮಳೆ ಹೆಚ್ಚಾಗುವ ನಿರೀಕ್ಷೆ ಇದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಗಳಲ್ಲಿ ದಿನಪೂರ್ತಿ ಮಳೆ ಸುರಿಯಬಹುದು. ಇದೇ ವೇಳೆ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಮಲೆನಾಡು ಪ್ರದೇಶಗಳಲ್ಲಿಯೂ ಭಾರೀ ಮಳೆ ಬೀಳುವ ಸಾಧ್ಯತೆ ಇದೆ.

    ಅಕ್ಟೋಬರ್ 24ರಂದು ಉಡುಪಿ, ದಕ್ಷಿಣ ಕನ್ನಡ, ಕೊಡಗು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೂ ಸಹ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಧ್ಯಮ ಮಟ್ಟದ ಮಳೆಯಾಗುವ ಮುನ್ಸೂಚನೆ ಇದೆ. ಕೆಲವು ಪ್ರದೇಶಗಳಲ್ಲಿ ಬಿರುಗಾಳಿ ಹಾಗೂ ಗುಡುಗು ಮಿಂಚು ಸಹ ಆಗಬಹುದು.

    ಕರಾವಳಿ ಭಾಗಗಳಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸಹ ಸಲಹೆ ನೀಡಲಾಗಿದೆ, ಏಕೆಂದರೆ ಸಮುದ್ರದ ಗಾಳಿ 40 ರಿಂದ 50 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ.

    ಹವಾಮಾನ ಇಲಾಖೆ ಸಾರ್ವಜನಿಕರಿಗೆ, ವಿಶೇಷವಾಗಿ ರೈತರಿಗೆ ಎಚ್ಚರಿಕೆ ನೀಡಿದೆ ಹೊಲಗಳಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು, ಮತ್ತು ವಿದ್ಯುತ್ ಕಂಬಗಳು, ಮರಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಿ ಎಂದು ಎಚ್ಚರಿಕೆ ನೀಡಿದೆ.

    apvc-iconPost Views: 10
  • ಕಾಂತಾರ ವಿಲನ್ ಪಾತ್ರದ ಬಳಿಕ ಬಿಗ್ ಬಾಸ್ ನಲ್ಲಿ ದೂಳೆಬ್ಬಿಸಲು ಬಂದ ಮ್ಯೂಟೆಂಟ್ ರಘು!

    ಕಾಂತಾರ ವಿಲನ್ ಪಾತ್ರದ ಬಳಿಕ ಬಿಗ್ ಬಾಸ್ ನಲ್ಲಿ ದೂಳೆಬ್ಬಿಸಲು ಬಂದ ಮ್ಯೂಟೆಂಟ್ ರಘು!

    ‘ಬಿಗ್ ಬಾಸ್ ಕನ್ನಡ ಸೀಸನ್ 12’ ಇದೀಗ ಮತ್ತಷ್ಟು ರೋಚಕ ಹಂತಕ್ಕೆ ತಲುಪಿದೆ ಎನ್ನಬಹುದು. ಪ್ರೇಕ್ಷಕರು ಕಾಯುತ್ತಿದ್ದ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿ, ಕಾಂತಾರ: ಚಾಪ್ಟರ್ 1 ಸಿನಿಮಾದ ವಿಲನ್ ಮ್ಯೂಟೆಂಟ್ ರಘು ಈಗ ದೊಡ್ಮನೆಗೆ ಕಾಲಿಟ್ಟಿದ್ದಾರೆ. ರಾಘವೇಂದ್ರ ಹೊಂಡದಕೇರಿ ಎಂಬ ನಿಜನಾಮ ಹೊಂದಿರುವ ರಘು, ಸಿನಿಮಾ, ಫಿಟ್‌ನೆಸ್ ಮತ್ತು ಆನಿಮೇಷನ್ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ಈಗ ಅವರು ಬಿಗ್ ಬಾಸ್ ಮನೆಯೊಳಗೆ ಹೊಸ ಎನರ್ಜಿ ತರಲು ಬಂದಿದ್ದಾರೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.

    ಮ್ಯೂಟೆಂಟ್ ರಘು ಮೊದಲ ಬಾರಿಗೆ “ರಾಣ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಖಳನಾಯಕನಾಗಿ ಪ್ರವೇಶಿಸಿದರು. ನಂತರ “ಕ್ರಾಂತಿ”, “ಗರಡಿ”, “ಕಾಟೇರ” ಮುಂತಾದ ಚಿತ್ರಗಳಲ್ಲಿ ಬಲಿಷ್ಠ ವಿಲನ್ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದರು. ಅವರ ಅಭಿನಯದ ತೀವ್ರತೆ, ಶರೀರದ ಬಲ, ಮತ್ತು ಸ್ಟೈಲ್‌ ಅವರು ಬೇರೆ ನಟರಿಂದ ವಿಭಿನ್ನವಾಗಿದ್ದಾರೆ ಎಂಬುದನ್ನು ತೋರಿಸಿತು. ಇತ್ತೀಚೆಗೆ ಅವರು ಅಭಿನಯಿಸಿದ “ಕಾಂತಾರ: ಚಾಪ್ಟರ್ 1” ಚಿತ್ರದಲ್ಲಿನ ಪಾತ್ರವು ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದೆ.

    ಚಿತ್ರರಂಗದ ಹೊರತಾಗಿಯೂ ರಘು ಅವರ ಪ್ರತಿಭೆ ವಿಶಾಲವಾಗಿದೆ. ಅವರು ಹಾಲಿವುಡ್‌ನ ಪ್ರಸಿದ್ಧ ಆನಿಮೇಟೆಡ್ ಚಿತ್ರಗಳಾದ ಮಡಗಾಸ್ಕರ್, ಪೆಂಗ್ವಿನ್ಸ್, ಮತ್ತು ಹೌ ಟು ಟ್ರೇನ್ ಯುವರ್ ಡ್ರಾಗನ್ ಸಿನಿಮಾಗಳಲ್ಲಿ ಆನಿಮೇಷನ್ ಕಲಾವಿದರಾಗಿ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆ ಅವರಲ್ಲಿರುವ ಕ್ರೀಯಾಶೀಲತೆ ಮತ್ತು ಅಂತರಾಷ್ಟ್ರೀಯ ಮಟ್ಟದ ಅನುಭವವನ್ನು ತೋರಿಸುತ್ತದೆ.

    ರಾಘವೇಂದ್ರ ಹೊಂಡದಕೇರಿ ಅವರು ಕೇವಲ ಕಲಾವಿದರಲ್ಲ, ಬಲಿಷ್ಠ ಕ್ರೀಡಾಪಟು ಕೂಡ ಹೌದು. ಅವರು ಬಾಡಿಬಿಲ್ಡಿಂಗ್, ಪವರ್ ಲಿಫ್ಟಿಂಗ್ ಮತ್ತು ಸ್ಟ್ರಾಂಗ್ ಮ್ಯಾನ್ ಸ್ಪರ್ಧೆಗಳಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರ ಪರಿಶ್ರಮ ಮತ್ತು ಶಿಸ್ತು ಅವರಿಗೆ ‘ಕ್ರೀಡಾರತ್ನ’ ಪ್ರಶಸ್ತಿಯನ್ನೂ ಕೂಡ ತಂದುಕೊಟ್ಟಿದೆ.

    ಟಿವಿ ಪ್ರೇಕ್ಷಕರು ರಘುವನ್ನು ಮೊದಲ ಬಾರಿಗೆ “ಕ್ವಾಟ್ಲೆ ಕಿಚನ್” ರಿಯಾಲಿಟಿ ಶೋ ಮೂಲಕ ಗುರುತಿಸಿದರು. ಅಲ್ಲಿ ಅವರು ತಮ್ಮ ಆತ್ಮವಿಶ್ವಾಸ ಮತ್ತು ನೈಜ ವ್ಯಕ್ತಿತ್ವದಿಂದ ವಿಜೇತರಾದರು. ಈಗ ಅದೇ ವಾಹಿನಿಯ “ಬಿಗ್ ಬಾಸ್ ಕನ್ನಡ ಸೀಸನ್ 12”ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅವರ ಎಂಟ್ರಿಯಿಂದ ಮನೆಗೆ ಹೊಸ ಸ್ಪರ್ಧಾತ್ಮಕ ವಾತಾವರಣ ಬರುತ್ತದೆ ಎನ್ನುವುದು ಖಚಿತ.

    ಕಳೆದ ಸೀಸನ್‌ನಲ್ಲಿ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ಹನುಮಂತ ಲಮಾಣಿ ಟೈಟಲ್ ಗೆದ್ದಿದ್ದರು. ಆ ಇತಿಹಾಸವನ್ನು ಈ ಬಾರಿ ಮ್ಯೂಟೆಂಟ್ ರಘು ಮರುಕಳಿಸುವರಾ ಎಂಬ ಕುತೂಹಲ ಈಗ ಎಲ್ಲರಲ್ಲಿದೆ. ರಘು ಅವರ ಬಲಿಷ್ಠ ವ್ಯಕ್ತಿತ್ವ, ನೇರ ನಿಲುವು ಮತ್ತು ಮನ ಗೆಲ್ಲುವ ಶೈಲಿ ಈ ಸೀಸನ್‌ನ ಕಥೆಯನ್ನು ಬದಲಾಯಿಸಬಹುದು ಎನ್ನುವ ನಿರೀಕ್ಷೆ ಹೆಚ್ಚಾಗಿದೆ.

    ಒಟ್ಟಾರೆ, ಮ್ಯೂಟೆಂಟ್ ರಘು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಬಂದು ಹೊಸ ಉತ್ಸಾಹ ತಂದಿದ್ದಾರೆ. ಅವರು ಖಳನಾಯಕನಾಗಿ ಬೆಳೆದರೂ, ಈಗ ಪ್ರೇಕ್ಷಕರ ಹೃದಯ ಗೆಲ್ಲುವ ಹೀರೋ ಆಗಲು ಸಜ್ಜಾಗಿದ್ದಾರೆ. ಧೂಳೆಬ್ಬಿಸುವ ಆಟ ಈಗಷ್ಟೇ ಆರಂಭವಾಗಿದೆ!

    apvc-iconPost Views: 10
  • ಮಕ್ಕಳ ಭವಿಷ್ಯಕ್ಕಾಗಿ ಸ್ಮಾರ್ಟ್ ಹೂಡಿಕೆ: NPS ವಾತ್ಸಲ್ಯ ಯೋಜನೆಯ ಸಂಪೂರ್ಣ ಮಾಹಿತಿ

    ಮಕ್ಕಳ ಭವಿಷ್ಯಕ್ಕಾಗಿ ಸ್ಮಾರ್ಟ್ ಹೂಡಿಕೆ: NPS ವಾತ್ಸಲ್ಯ ಯೋಜನೆಯ ಸಂಪೂರ್ಣ ಮಾಹಿತಿ

    ಇಂದಿನ ವೇಗವಾಗಿ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಮಕ್ಕಳ ಭವಿಷ್ಯವನ್ನು ಭದ್ರಗೊಳಿಸುವುದು ಪ್ರತಿಯೊಬ್ಬ ಪೋಷಕರ ಮೊದಲ ಆದ್ಯತೆಯಾಗಿದೆ. ಶಿಕ್ಷಣ ವೆಚ್ಚದ ಏರಿಕೆ, ಆರೋಗ್ಯ ಸೇವೆಗಳ ಖರ್ಚು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಅನಿಶ್ಚಿತ ಪರಿಸ್ಥಿತಿಗಳು ಬುದ್ಧಿವಂತ ಹೂಡಿಕೆ ಆರಂಭಿಸುವ ಅಗತ್ಯವನ್ನು ಹೆಚ್ಚಿಸಿವೆ. ಕೇವಲ ಉಳಿತಾಯಕ್ಕಿಂತ ಹೆಚ್ಚು ಲಾಭ ನೀಡುವ, ದೀರ್ಘಾವಧಿಯ ಆರ್ಥಿಕ ರಕ್ಷಣೆಯನ್ನು ಒದಗಿಸುವ ಯೋಜನೆಗಳತ್ತ ಹೆಚ್ಚು ಪೋಷಕರು ಮುಖಮಾಡುತ್ತಿದ್ದಾರೆ.

    ಇಂತಹ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಮಕ್ಕಳ ಆರ್ಥಿಕ ಭವಿಷ್ಯವನ್ನು ದೃಢಪಡಿಸಲು NPS ವಾತ್ಸಲ್ಯ (NPS Vatsalya) ಎನ್ನುವ ವಿಶಿಷ್ಟ ಯೋಜನೆಯನ್ನು ಆರಂಭಿಸಿದೆ. ಇದು ಅಪ್ರಾಪ್ತ ವಯಸ್ಕರಿಗಾಗಿ ವಿನ್ಯಾಸಗೊಳಿಸಲಾದ ನಿವೃತ್ತಿ ಉದ್ದೇಶದ ಹೂಡಿಕೆ ಯೋಜನೆಯಾಗಿದ್ದು, ಸಣ್ಣ ಪ್ರಮಾಣದ ಹಣವನ್ನು ವರ್ಷಗಳ ಕಾಲ ಹೂಡಿಕೆ ಮಾಡುವ ಮೂಲಕ ದೊಡ್ಡ ಮೊತ್ತವನ್ನು ಸಂಗ್ರಹಿಸುವ ಅವಕಾಶವನ್ನು ನೀಡುತ್ತದೆ.

    ಯೋಜನೆಯ ಉದ್ದೇಶವೇನು?

    NPS ವಾತ್ಸಲ್ಯ ಯೋಜನೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ರೂಪಿತವಾಗಿದೆ. ಈ ಖಾತೆಯನ್ನು ಪೋಷಕರು ಅಥವಾ ಕಾನೂನುಪರ ಪೋಷಕರು ತೆರೆಯಬಹುದು ಮತ್ತು ನಿರ್ವಹಿಸಬಹುದು. ಮಗುವಿನ ವಯಸ್ಸು 18 ವರ್ಷ ತಲುಪಿದಾಗ, ಈ ಖಾತೆ ಸ್ವಯಂಚಾಲಿತವಾಗಿ ಸಾಮಾನ್ಯ National Pension System (NPS) ಖಾತೆಯಾಗಿ ಪರಿವರ್ತನೆಯಾಗುತ್ತದೆ. ನಂತರ ನಿವೃತ್ತಿ ವಯಸ್ಸಿನವರೆಗೆ ಈ ಹೂಡಿಕೆ ಮುಂದುವರಿಯುತ್ತದೆ ಮತ್ತು ಬಡ್ಡಿ ಹಾಗೂ ಹೂಡಿಕೆ ಲಾಭಗಳು ಶೇಖರವಾಗುತ್ತವೆ.

    ಯಾರೆಲ್ಲಾ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?

    18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಭಾರತೀಯ ಮಕ್ಕಳು.

    ಅನಿವಾಸಿ ಭಾರತೀಯರು (NRI).

    ಸಾಗರೋತ್ತರ ಭಾರತೀಯರು (OCI).

    ಪೋಷಕರು ಅಥವಾ ಕಾನೂನುಪರ ಪೋಷಕರು ಅಪ್ರಾಪ್ತ ವಯಸ್ಕರ ಪರವಾಗಿ ಖಾತೆ ತೆರೆಯಬಹುದು.

    ಮಗುವೇ ಈ ಖಾತೆಯ ಏಕೈಕ ಲಾಭದಾರನಾಗಿರುತ್ತಾನೆ.

    ಹೂಡಿಕೆ, ಲಾಭದ ವಿವರಗಳು:

    ಕನಿಷ್ಠ ಹೂಡಿಕೆ: ವರ್ಷಕ್ಕೆ ₹1,000

    ಗರಿಷ್ಠ ಮಿತಿ: ಯಾವುದೇ ಮಿತಿ ಇಲ್ಲ

    ಬಡ್ಡಿದರ: ಸರಾಸರಿ 9.5% ರಿಂದ 10% ವರೆಗೆ ವರ್ಷಕ್ಕೆ

    ತಿಂಗಳಿಗೆ ಕೇವಲ ₹834 (ಅಂದರೆ ವರ್ಷಕ್ಕೆ ₹10,000) ಹೂಡಿಕೆ ಮಾಡಿದರೆ, 18 ವರ್ಷಗಳಲ್ಲಿ ಒಟ್ಟು ಹೂಡಿಕೆ ₹1.8 ಲಕ್ಷವಾಗುತ್ತದೆ. ಸರಾಸರಿ 10% ಬಡ್ಡಿದರ ಲಭಿಸಿದರೆ, ಈ ಮೊತ್ತವು ಸುಮಾರು ₹5 ಲಕ್ಷಕ್ಕೆ ಏರಬಹುದು. ನಂತರ ಇದು ನಿವೃತ್ತಿ ವಯಸ್ಸಿನವರೆಗೆ ಬೆಳೆಯುತ್ತಾ ಸಾಗುತ್ತದೆ.

    ಅರ್ಜಿ ಸಲ್ಲಿಸುವ ವಿಧಾನ,

    ಆನ್‌ಲೈನ್ ವಿಧಾನ:

    eNPS ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ.

    ‘NPS ವಾತ್ಸಲ್ಯ (ಅಪ್ರಾಪ್ತ ವಯಸ್ಕರು)’ ವಿಭಾಗದಲ್ಲಿ “ನೋಂದಾಯಿಸಿ” ಆಯ್ಕೆಮಾಡಿ.

    ಪೋಷಕರ PAN, DOB, ಮೊಬೈಲ್ ಹಾಗೂ ಇಮೇಲ್ ನಮೂದಿಸಿ, OTP ಮೂಲಕ ದೃಢೀಕರಿಸಿ.

    ಮಗುವಿನ ಹಾಗೂ ಪೋಷಕರ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.

    ಕನಿಷ್ಠ ₹1,000 ಮೊತ್ತ ಹೂಡಿಕೆ ಮಾಡಿ.

    eSign ಅಥವಾ ಡ್ಯುಯಲ್ OTP ಮೂಲಕ ಖಾತೆ ದೃಢೀಕರಿಸಿ.

    PRAN (Permanent Retirement Account Number) ಸೃಷ್ಟಿಯಾಗುತ್ತದೆ ಮತ್ತು ಖಾತೆ ತೆರೆಯಲ್ಪಡುತ್ತದೆ.

    ಆಫ್‌ಲೈನ್ ವಿಧಾನ:

    ಅಂಚೆ ಕಚೇರಿಗಳು

    ಪ್ರಮುಖ ಬ್ಯಾಂಕುಗಳು

    ಪಿಂಚಣಿ ನಿಧಿ ಕಚೇರಿಗಳು

    POP (Points of Presence) ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.

    ಯೋಜನೆಯ ಪ್ರಮುಖ ಪ್ರಯೋಜನಗಳು ಏನು?

    ದೀರ್ಘಾವಧಿಯ ಹೂಡಿಕೆಯ ಮೂಲಕ ಮಕ್ಕಳಿಗೆ ಆರ್ಥಿಕ ಭದ್ರತೆ.

    ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆ ವಿನಾಯಿತಿ ಸೌಲಭ್ಯ.

    ಸರ್ಕಾರದ PFRDA ನಿಯಂತ್ರಣದ ಅಡಿಯಲ್ಲಿ ಭದ್ರತೆ.

    18 ವರ್ಷಗಳ ನಂತರ ಸ್ವಯಂಚಾಲಿತವಾಗಿ ಸಾಮಾನ್ಯ NPS ಖಾತೆಗೆ ಪರಿವರ್ತನೆ.

    ಸರ್ಕಾರದಿಂದ ಮಾನ್ಯತೆ ಪಡೆದ ಸುರಕ್ಷಿತ ಯೋಜನೆ.

    ಉಳಿತಾಯದ ಜೊತೆಗೆ ನಿವೃತ್ತಿ ಪಿಂಚಣಿ ಲಾಭ.

    ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿ ಸುಲಭ ಅರ್ಜಿ ಪ್ರಕ್ರಿಯೆ.

    ಮಕ್ಕಳ ಭವಿಷ್ಯವನ್ನು ಆರ್ಥಿಕವಾಗಿ ದೃಢಪಡಿಸಲು ಬಯಸುವ ಪೋಷಕರಿಗೆ NPS ವಾತ್ಸಲ್ಯ ಯೋಜನೆ ಅತ್ಯಂತ ಪರಿಣಾಮಕಾರಿ ಆಯ್ಕೆ. ಸಣ್ಣ ಪ್ರಮಾಣದ ಹೂಡಿಕೆಯಿಂದ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತವನ್ನು ಸಂಗ್ರಹಿಸುವುದರ ಜೊತೆಗೆ ನಿವೃತ್ತಿ ವಯಸ್ಸಿನವರೆಗೆ ಲಾಭ ಪಡೆಯುವ ಅವಕಾಶವಿದೆ. ಇದು ಉಳಿತಾಯ ಮತ್ತು ಹೂಡಿಕೆಯ ಸ್ಮಾರ್ಟ್ ಸಂಯೋಜನೆಯಾಗಿದ್ದು, ನಿಮ್ಮ ಮಕ್ಕಳ ಭವಿಷ್ಯಕ್ಕೆ ಬಲವಾದ ಆರ್ಥಿಕ ನೆಲೆಯನ್ನು ಕಲ್ಪಿಸುತ್ತದೆ.

    apvc-iconPost Views: 19
  • ಮಿಚೆಲ್ ಮಾರ್ಶ್ ಸಿಡಿಲಾಟದಿಂದ ಆಸ್ಟ್ರೇಲಿಯಾಕ್ಕೆ 7 ವಿಕೆಟ್‌ಗಳ ಜಯ

    ಮಿಚೆಲ್ ಮಾರ್ಶ್ ಸಿಡಿಲಾಟದಿಂದ ಆಸ್ಟ್ರೇಲಿಯಾಕ್ಕೆ 7 ವಿಕೆಟ್‌ಗಳ ಜಯ

    ಪರ್ಥ್‌ನ ವಾಕಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ದುರ್ಬಲ ಬ್ಯಾಟಿಂಗ್ ಪ್ರದರ್ಶನ ತೋರಿದ ಪರಿಣಾಮ ಆಸ್ಟ್ರೇಲಿಯಾ ತಂಡವು 7 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿದೆ. ಈ ಮಳೆಯ ಅಡಚಣೆಯಿಂದ 26 ಓವರ್‌ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಭಾರತ ಕೇವಲ 136 ರನ್‌ಗಳಿಗೆಯೇ ಸಿಮಿತವಾಯಿತು.

    ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು, ವೇಗ ಮತ್ತು ಬೌನ್ಸ್‌ನ ಪಿಚ್‌ನಲ್ಲಿ ಭಾರತೀಯ ಬ್ಯಾಟರ್‌ಗಳು ಸಂಕಷ್ಟ ಅನುಭವಿಸಿದರು. ನಾಯಕ ಶುಭಮನ್ ಗಿಲ್ (12), ರೋಹಿತ್ ಶರ್ಮಾ (8), ವಿರಾಟ್ ಕೊಹ್ಲಿ (0), ಹಾಗೂ ಶ್ರೇಯಸ್ ಅಯ್ಯರ್ (6) ಇವರೆಲ್ಲರೂ ಕೂಡ ಮೈದಾನಕ್ಕೆ ಇಳಿದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್. ರಾಹುಲ್ (32) ಮತ್ತು ಅಕ್ಷರ್ ಪಟೇಲ್ (28) ಇವರು ಮಾತ್ರ ಸ್ವಲ್ಪ ಹೋರಾಟ ನೀಡಿದರೂ ತಂಡ ದೊಡ್ಡ ಮೊತ್ತ ಕಲೆ ಹಾಕಲು ವಿಫಲವಾಯಿತು.

    ಆಸ್ಟ್ರೇಲಿಯಾ ಪರ ವೇಗದ ಬೌಲರ್‌ಗಳು ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಯಶಸ್ವಿಯಾದರು. ಮಿಚೆಲ್ ಸ್ಟಾರ್ಕ್, ಹೇಜಲ್‌ವುಡ್ ಮತ್ತು ಅಬ್ಬಾಟ್ ತೀವ್ರ ಆಕ್ರಮಣ ನಡೆಸಿದರು.

    ಭಾರತ ನೀಡಿದ 137 ರನ್‌ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಕೇವಲ 21.1 ಓವರ್‌ಗಳಲ್ಲಿ ಗುರಿ ತಲುಪಿ ಜಯಭೇರಿ ಬಾರಿಸಿತು. ಆರಂಭದಲ್ಲಿ ಟ್ರಾವಿಸ್ ಹೆಡ್ (8) ಮತ್ತು ಮ್ಯಾಥ್ಯೂ ಶಾರ್ಟ್ (10) ರನ್ ಕಲೆ ಹಾಕಿ ಪೆವಿಲಿಯನ್ ಸೇರಿದರೂ ನಾಯಕ ಮಿಚೆಲ್ ಮಾರ್ಶ್ ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೆಲುವಿನ ದಡವನ್ನು ತಲುಪಿಸಿದರು. ಅವರು 51 ಎಸೆತಗಳಲ್ಲಿ 46 ಅಜೇಯ ರನ್‌ಗಳನ್ನು ಬಾರಿಸಿದರು. ಜೊತೆಗೆ ಜೋಶ್ ಫಿಲಿಪ್ (37) ಮತ್ತು ಮ್ಯಾಟ್ ರೆನ್ಶಾ (21) ರನ್ ಗಳಿಸಿ ಗೆಲವು ಸುಲಭಗೊಳಿಸಿದರು.

    ಭಾರತ ಪರ ಅರ್ಶದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ವಾಶಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು.

    ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕದ ಮೊದಲ ಏಕದಿನದಲ್ಲಿ ಭಾರತಕ್ಕೆ ಈ ಸೋಲು ದೊಡ್ಡ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿತು. ಅಗ್ರ ಬ್ಯಾಟರ್‌ಗಳ ವೈಫಲ್ಯ ಹಾಗೂ ಮಳೆ ಅಡಚಣೆ ಭಾರತಕ್ಕೆ ಮುಳುವಾಗಿ ಪರಿಣಮಿಸಿತು.

    apvc-iconPost Views: 27
  • 53 ವರ್ಷಗಳ ಕಲಾಜೀವನಕ್ಕೆ ರಾಷ್ಟ್ರದ ಗೌರವ.! ಕನ್ನಡದ ಅಗ್ರ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ

    53 ವರ್ಷಗಳ ಕಲಾಜೀವನಕ್ಕೆ ರಾಷ್ಟ್ರದ ಗೌರವ.! ಕನ್ನಡದ ಅಗ್ರ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ

    ಕನ್ನಡ ಚಿತ್ರರಂಗದ ಅಗ್ರಗಣ್ಯ ನಟ, ರಾಜಕಾರಣಿ ಹಾಗೂ ಸಂವೇದನಾಶೀಲ ಕಲಾವಿದರಾದ ಅನಂತ್ ನಾಗ್ ಅವರಿಗೆ ಈ ವರ್ಷ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದು, ಕನ್ನಡಿಗರಲ್ಲಿ ಹೆಮ್ಮೆಯ ಸಂಭ್ರಮ ಮೂಡಿಸಿದೆ. ಸುಮಾರು ಐದು ದಶಕಗಳಷ್ಟು ದೀರ್ಘ ಮತ್ತು ವೈವಿಧ್ಯಮಯ ಕಲಾಜೀವನದಲ್ಲಿ ಅನಂತ್ ನಾಗ್ ಅವರು ನಟನೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಮಾಡಿದವರು. ಶಿಸ್ತಿನ ಅಭಿನಯ, ಸಾಂಸ್ಕೃತಿಕ ನಂಟು ಹಾಗೂ ಸಾಮಾಜಿಕ ಬದ್ಧತೆಯ ಮೂಲಕ ಅವರು ಕೇವಲ ಚಲನಚಿತ್ರ ರಂಗದಲ್ಲಷ್ಟೇ ಅಲ್ಲ, ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿಯೂ ವಿಶಿಷ್ಟ ಗುರುತು ಮೂಡಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ, ಪದ್ಮ ಪ್ರಶಸ್ತಿ ಪಡೆದ ನಟರಿಗೆ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಅನಂತ್ ನಾಗ್ ಮಾತನಾಡಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು. ಇದು ನನ್ನ ಪ್ರಶಸ್ತಿ ಅಲ್ಲ, ಕನ್ನಡ ಚಿತ್ರರಂಗದ್ದು ಎಂದು ಅವರು ವಿನಯದಿಂದ ಹೇಳಿದ್ದಾರೆ.

    ಜಗ್ಗೇಶ್ ಮಾತು ನೆನಪಿಸಿಕೊಂಡ ಅನಂತ್ ನಾಗ್:

    ಇದೇ ಸಂದರ್ಭದಲ್ಲಿ ಅನಂತ್ ನಾಗ್, ಹಿರಿಯ ನಟ ಮತ್ತು ಸಂಸದ ಜಗ್ಗೇಶ್ ಅವರ ಮಾತುಗಳನ್ನು ನೆನಪಿಸಿಕೊಂಡು, ಅರ್ಹರಿಗೆ ಪ್ರಶಸ್ತಿ ಕೊಡಬೇಕು ಅಂತ ಮಾಡಿದ್ದೇ ಪ್ರಧಾನಿ ನರೇಂದ್ರ ಮೋದಿ ಅವ್ರು ಎಂದು ಅವರು ಹೇಳಿದ್ದನ್ನು ಸ್ಮರಿಸಿದರು. ಈ ಪ್ರಶಸ್ತಿಯ ಹಿಂದಿನ ಉದ್ದೇಶವೇ ಕನ್ನಡ ಚಿತ್ರರಂಗದ ಸೇವೆಗೆ ಸಿಕ್ಕ ಗೌರವವೆಂದು ಅವರು ತಿಳಿಸಿದ್ದಾರೆ.

    ರಾಜಕೀಯ ನೆನಪು ಹಂಚಿಕೊಂಡ ಅನಂತ್ ನಾಗ್: 

    ತಮ್ಮ ರಾಜಕೀಯ ಹಾದಿಯನ್ನು ಸ್ಮರಿಸಿದ ಅವರು, ನಾನು ಮೊದಲ ಸಲ ಅಸೆಂಬ್ಲಿಗೆ ಹೋದಾಗ ಮಂತ್ರಿಯಾಗಿದ್ದೆ. ಆಗ ಡಿ.ಕೆ.ಶಿವಕುಮಾರ್ ಅವರನ್ನು ನೋಡಿ ‘ಇಷ್ಟು ಸ್ಮಾರ್ಟ್ ವ್ಯಕ್ತಿ ರಾಜಕೀಯದಲ್ಲಿ ಏನು ಮಾಡ್ತಿದ್ದಾರೆ?’ ಅನ್ನಿಸಿತು. ಆಗಿನಿಂದಲೂ ಡಿಕೆಶಿ ಇಂಡಸ್ಟ್ರಿಗೆ ಬರ್ಬೇಕಿತ್ತು ಅನ್ನಿಸಿತು” ಎಂದು ನಗುತ್ತಾ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.

    53 ವರ್ಷಗಳ ಸಿನಿ ಜರ್ನಿಯ ಮೆಲುಕು: 

    ತಮ್ಮ 53 ವರ್ಷಗಳ ಸಿನಿಮಾ ಬದುಕಿನ ಬಗ್ಗೆ ಮಾತನಾಡಿದ ಅವರು, ನಿರ್ದೇಶಕರು, ನಿರ್ಮಾಪಕರು, ಸಾಹಿತ್ಯಕಾರರು ಮತ್ತು ಸಂಭಾಷಣೆ ಬರಹಗಾರರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ನಾನು ಒಂದೇ ಒಂದು ಹಾಡಿನಲ್ಲೂ ಡಾನ್ಸ್ ಮಾಡಿಲ್ಲ. ಎಕ್ಸೆಪ್ಶನ್ ಕೊಟ್ಟಿದ್ದೆ ಅಷ್ಟೇ. ಡಾನ್ಸ್, ಫೈಟ್ ಏನೂ ಮಾಡಿಲ್ಲ. ಆದರೆ ಕನ್ನಡಿಗರು ನನ್ನನ್ನು ಕ್ಷಮಿಸಿದ್ದಾರೆ. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ, ಅದನ್ನೇ ಅವರು ಒಪ್ಪಿಕೊಂಡಿದ್ದಾರೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

    ಇನ್ನು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಇದು ಪವಿತ್ರವಾದ ಸಂಭ್ರಮ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಡೆಯುತ್ತಿರುವ ಪವಿತ್ರ ಕೆಲಸ ಇದು. ನಾನು 35 ವರ್ಷಗಳ ಹಿಂದೆ ಡೈರೆಕ್ಟರ್ ಆಗಿದ್ದೆ. ಎಲೆಕ್ಷನ್‌ಗೂ ಮೊದಲು ಡೈರೆಕ್ಟರ್ ಆಗಿದ್ದೆ. ಅನಂತ್ ನಾಗ್‌ ಅವರಿಗೆ ಸನ್ಮಾನ ಎಂದಿದ್ದಕ್ಕಾಗಿ ಮಾತ್ರ ನಾನು ಇಲ್ಲಿ ಬಂದಿದ್ದೇನೆ ಎಂದರು. ಇನ್ನು, ಎಲ್ಲಿ ಮನಸ್ಸು ಇದೆಯೋ ಅಲ್ಲಿ ಮಾರ್ಗ ಇದೆ. ಭಕ್ತಿ ಇದ್ದರೆ ಭಗವಂತ ಇದ್ದಾನೆ. ನೀವು ಬಣ್ಣ ಹಾಕಿಕೊಂಡು ನಾಟಕ ಮಾಡ್ತಿದ್ದೀರಾ, ನಾವು ಬಣ್ಣ ಹಾಕದೆ ನಾಟಕ ಮಾಡ್ತಿದ್ದೀವಿ. ಕಳೆದ ಕೆಲವು ವರ್ಷಗಳಿಂದ ಸ್ಯಾಂಡಲ್‌ವುಡ್ ಬಾಲಿವುಡ್‌ನನ್ನೇ ಟೇಕ್‌ಓವರ್ ಮಾಡಿದೆ ಎಂದು ಶ್ಲಾಘಿಸಿದರು.

    ಅನಂತ್ ನಾಗ್ ಅವರಿಗೆ ದೊರೆತಿರುವ ಪದ್ಮಭೂಷಣ ಪ್ರಶಸ್ತಿ, ಅವರ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಅದು ಕನ್ನಡ ಚಿತ್ರರಂಗದ ಪರಂಪರೆ, ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಿಕ್ಕ ರಾಷ್ಟ್ರ ಮಟ್ಟದ ಮಾನ್ಯತೆ.

    apvc-iconPost Views: 8
  • Railway Recruitment 2025: ಪರೀಕ್ಷೆಯಿಲ್ಲದೆ ನೇರ ಆಯ್ಕೆ ಉದ್ಯೋಗ ಪಡೆಯಲು ಸುವರ್ಣಾವಕಾಶ.! 

    Railway Recruitment 2025: ಪರೀಕ್ಷೆಯಿಲ್ಲದೆ ನೇರ ಆಯ್ಕೆ ಉದ್ಯೋಗ ಪಡೆಯಲು ಸುವರ್ಣಾವಕಾಶ.! 

    ಭಾರತೀಯ ರೈಲ್ವೆ ಯಾವಾಗಲೂ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಕನಸಿನ ಉದ್ಯೋಗ ಕೇಂದ್ರವಾಗಿದೆ. ಸರ್ಕಾರಿ ಉದ್ಯೋಗದಲ್ಲಿ ಸ್ಥಿರತೆ, ಆಕರ್ಷಕ ಸೌಲಭ್ಯಗಳು ಹಾಗೂ ದೇಶದಾದ್ಯಂತ ಕೆಲಸ ಮಾಡುವ ಅವಕಾಶಗಳಿರುವುದರಿಂದ ರೈಲ್ವೆ ಇಲಾಖೆಯ ನೇಮಕಾತಿ ಪ್ರಕಟಣೆಗಳು ಸದಾ ಜನರ ಗಮನ ಸೆಳೆಯುತ್ತವೆ. ಈಗ ಇದೇ ರೀತಿಯ ಒಂದು ಸುವರ್ಣಾವಕಾಶವನ್ನು ಈಶಾನ್ಯ ರೈಲ್ವೆ (North Eastern Railway – NER) ಪ್ರಕಟಿಸಿದೆ.

    ದೇಶದಾದ್ಯಂತ ವಿವಿಧ ಘಟಕಗಳಲ್ಲಿ ಖಾಲಿ ಇರುವ ಒಟ್ಟು 1104 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಗೊಂಡಿದೆ. ವಿಶೇಷವೆಂದರೆ, ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಶೈಕ್ಷಣಿಕ ಅರ್ಹತೆಗಳ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
    ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು 2025ರ ನವೆಂಬರ್ 15ರ ಒಳಗಾಗಿ ಆನ್‌ಲೈನ್ ಮೂಲಕ ಸಲ್ಲಿಸಬೇಕು. ಸರ್ಕಾರೀ ನೌಕರಿಯಾಗಲು ಬಯಸುವ ಯುವಕರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.

    ಹುದ್ದೆಗಳ ವಿಭಾಗವಾರು ವಿವರ ಹೀಗಿದೆ:
    ಮೆಕ್ಯಾನಿಕಲ್ ವರ್ಕ್‌ಶಾಪ್ – 390 ಹುದ್ದೆಗಳು
    ಸಿಗ್ನಲ್ ವರ್ಕ್‌ಶಾಪ್ – 63 ಹುದ್ದೆಗಳು
    ಬಿಡ್ಡಿ ವರ್ಕ್‌ಶಾಪ್ – 35 ಹುದ್ದೆಗಳು
    ಮೆಕ್ಯಾನಿಕಲ್ ವರ್ಕ್‌ಶಾಪ್ (ಇತರೆ) – 142 ಹುದ್ದೆಗಳು
    ಡೀಸೆಲ್ ಶೆಡ್ – 60 ಹುದ್ದೆಗಳು
    ಕ್ಯಾರೇಜ್ ಮತ್ತು ವ್ಯಾಗನ್ – 64 ಹುದ್ದೆಗಳು
    ಕ್ಯಾರೇಜ್ ಮತ್ತು ವ್ಯಾಗನ್ / ಲಕ್ಷ್ಮೀ – 149 ಹುದ್ದೆಗಳು
    ಡೀಸೆಲ್ ಶೆಡ್ / ಗೊಂಡಾ – 88 ಹುದ್ದೆಗಳು
    ಕ್ಯಾರೇಜ್ ಮತ್ತು ವ್ಯಾಗನ್ ವಾರಣಾಸಿ – 73 ಹುದ್ದೆಗಳು
    ವಾರಣಾಸಿಯ TRD ವಿಭಾಗ – 40 ಹುದ್ದೆಗಳು

    ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತಾ ಮಾನದಂಡಗಳು ಹೀಗಿವೆ:
    ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ 10ನೇ ತರಗತಿ ಮತ್ತು ಐಟಿಐ (ITI) ಉತ್ತೀರ್ಣರಾಗಿರಬೇಕು.
    ವಯೋಮಿತಿ: 2025ರ ಅಕ್ಟೋಬರ್ 16ರಂತೆ ಅಭ್ಯರ್ಥಿಗಳ ವಯಸ್ಸು 15 ರಿಂದ 24 ವರ್ಷಗಳೊಳಗಾಗಿ ಇರಬೇಕು.
    ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ – 5 ವರ್ಷಗಳ ಸಡಿಲಿಕೆ
    ಒಬಿಸಿ ಅಭ್ಯರ್ಥಿಗಳಿಗೆ – 3 ವರ್ಷಗಳ ಸಡಿಲಿಕೆ
    ಪಿಎಚ್ ಅಭ್ಯರ್ಥಿಗಳಿಗೆ – 10 ವರ್ಷಗಳ ಸಡಿಲಿಕೆ

    ಅರ್ಜಿ ಶುಲ್ಕದ ವಿವರ ಹೀಗಿದೆ:
    ಸಾಮಾನ್ಯ ಅಭ್ಯರ್ಥಿಗಳು – ₹100
    ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

    ಆಯ್ಕೆ ಪ್ರಕ್ರಿಯೆ ಯಾವ ರೀತಿಯಿರುತ್ತದೆ: 
    ಈ ನೇಮಕಾತಿ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯುತ್ತದೆ. ಆಯ್ಕೆಯಾದವರಿಗೆ ರೈಲ್ವೆಯ ನಿಯಮಾವಳಿಯಂತೆ ಸ್ಟೈಪೆಂಡ್ (ಪ್ರಶಿಕ್ಷಣ ವೇತನ) ನೀಡಲಾಗುತ್ತದೆ.

    ಮುಖ್ಯ ದಿನಾಂಕ:  ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 15 ನವೆಂಬರ್ 2025 ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಇರುವವರು ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಅಧಿಕೃತ ವೆಬ್‌ಸೈಟ್ ಮೂಲಕ ಸಮಯಕ್ಕೆ ಮುನ್ನ ಅರ್ಜಿ ಸಲ್ಲಿಸಿ, ಯಾವುದೇ ಪರೀಕ್ಷೆ ಇಲ್ಲದೆ ಸರ್ಕಾರೀ ಉದ್ಯೋಗದತ್ತ ಮೊದಲ ಹೆಜ್ಜೆ ಇಡಿ.

    apvc-iconPost Views: 35
  • ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಪ್ರಾರಂಭ | ತಿದ್ದುಪಡಿ ದಿನಾಂಕ ವಿಸ್ತರಣೆ – ಬೇಗ ಅರ್ಜಿ ಸಲ್ಲಿಸಿ

    ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಪ್ರಾರಂಭ | ತಿದ್ದುಪಡಿ ದಿನಾಂಕ ವಿಸ್ತರಣೆ – ಬೇಗ ಅರ್ಜಿ ಸಲ್ಲಿಸಿ

    ಕರ್ನಾಟಕ ಸರ್ಕಾರದ ಆಹಾರ ಭದ್ರತಾ ಯೋಜನೆಯಡಿ ರೇಷನ್ ಕಾರ್ಡ್ ಬಡ ಕುಟುಂಬಗಳಿಗೆ ಅತ್ಯಂತ ಅಗತ್ಯವಾದಂತಹ ಸೌಲಭ್ಯವಾಗಿದೆ. ಸರ್ಕಾರದ ಸಬ್ಸಿಡಿ ಯೋಜನೆಯಡಿ ಅಕ್ಕಿ, ಗೋಧಿ, ಕೆರೋಸಿನ್ ಮೊದಲಾದ ವಸ್ತುಗಳು ಕಡಿಮೆ ದರದಲ್ಲಿ ದೊರೆಯುತ್ತವೆ. ಕಳೆದ ಕೆಲವು ವರ್ಷಗಳಿಂದ ಹೊಸ ಕಾರ್ಡ್ ವಿತರಣೆಯಲ್ಲಿ ವಿಳಂಬವಾಗಿದ್ದರೂ, ಈಗ ಸರ್ಕಾರ ಮತ್ತೆ ಪ್ರಕ್ರಿಯೆ ಆರಂಭಿಸಿದೆ.

    ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಕೋಲಾರದಲ್ಲಿ ಘೋಷಿಸಿದಂತೆಯೇ, ನವೆಂಬರ್ 2025ರಿಂದ ಹೊಸ ಬಿಪಿಎಲ್ ರೇಷನ್ ಕಾರ್ಡ್‌ಗಳ ವಿತರಣೆ ಪ್ರಾರಂಭವಾಗಲಿದೆ. ಕಳೆದ ಎರಡು ವರ್ಷಗಳಿಂದ ಸುಳ್ಳು ದಾಖಲೆಗಳ ಆಧಾರದ ಮೇಲೆ ಪಡೆದ ಕಾರ್ಡ್‌ಗಳನ್ನು ಗುರುತಿಸಿ ರದ್ದುಗೊಳಿಸುವ ಪರಿಶೀಲನೆ ನಡೆಯುತ್ತಿತ್ತು. ಈಗ ಆ ಕೆಲಸ ಪೂರ್ಣಗೊಳ್ಳುತ್ತಿರುವುದರಿಂದ ನಿಜವಾದ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳು ಲಭ್ಯವಾಗಲಿವೆ ಎನ್ನಬಹುದು.

    ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಕೆ ಅಕ್ಟೋಬರ್ 4ರಿಂದ ಅಕ್ಟೋಬರ್ 31, 2025ರವರೆಗೆ ನಡೆಯಲಿದೆ. ಅರ್ಜಿಗಳನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಎರಡೂ ರೀತಿಯಲ್ಲಿ ಸಲ್ಲಿಸಬಹುದು. ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಫಾರ್ಮ್ ತುಂಬಿ ದಾಖಲೆಗಳೊಂದಿಗೆ ಸಲ್ಲಿಸಬಹುದು. ಆನ್‌ಲೈನ್ ವಿಧಾನವನ್ನು ಆಯ್ಕೆ ಮಾಡುವವರು ಆಹಾರ ಇಲಾಖೆಯ ಅಧಿಕೃತ ಪೋರ್ಟಲ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

    ಈ ಶ್ರಮ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಮಾರ್ಚ್ 31, 2026ರವರೆಗೆ ಆದ್ಯತೆಯ BPL ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಅವಕಾಶವಿದೆ. ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರು ಹೆಸರು, ವಿಳಾಸ ಅಥವಾ ಸದಸ್ಯರ ತಿದ್ದುಪಡಿ ಮಾಡಲು ಇದೇ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು.

    ಅರ್ಜಿಗೆ ಅಗತ್ಯ ದಾಖಲೆಗಳು: ಆಧಾರ್ ಕಾರ್ಡ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಜನನ ಪ್ರಮಾಣ ಪತ್ರ (ಮಕ್ಕಳಿಗೆ), ಮತ್ತು ಹಳೆಯ ರೇಷನ್ ಕಾರ್ಡ್ ಪ್ರತಿ (ತಿದ್ದುಪಡಿ ಅರ್ಜಿಗೆ) ನೀಡಬೇಕು.

    ರೇಷನ್ ಕಾರ್ಡ್‌ನಿಂದ ಸಬ್ಸಿಡಿ ದರದಲ್ಲಿ ಧಾನ್ಯಗಳು ಹಾಗೂ ಅಗತ್ಯ ವಸ್ತುಗಳು ದೊರೆಯುವುದರಿಂದ ಆರ್ಥಿಕ ಉಳಿತಾಯ ಸಾಧ್ಯವಾಗಿದೆ. ಆದ್ದರಿಂದ ಸರ್ಕಾರದ ಪಾರದರ್ಶಕ ಪರಿಶೀಲನೆಯಿಂದ ನಿಜವಾದ ಫಲಾನುಭವಿಗಳಿಗೆ ಲಾಭ ತಲುಪಲಿದೆ.

    ಅರ್ಜಿಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 31, 2025. ತಿದ್ದುಪಡಿಗೆ ಮಾರ್ಚ್ 31, 2026 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್ ನಂಬರ್: 1800-425-0093 ಅಥವಾ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು.

    apvc-iconPost Views: 324
  • ಕಡಿಮೆ ಹೂಡಿಕೆ, ಹೆಚ್ಚಿನ ಲಾಭ: ಮನೆಯಲ್ಲೇ ಪ್ರಾರಂಭಿಸಬಹುದಾದ 5 ಸುಲಭ ವ್ಯವಹಾರಗಳು

    ಕಡಿಮೆ ಹೂಡಿಕೆ, ಹೆಚ್ಚಿನ ಲಾಭ: ಮನೆಯಲ್ಲೇ ಪ್ರಾರಂಭಿಸಬಹುದಾದ 5 ಸುಲಭ ವ್ಯವಹಾರಗಳು

    ಇಂದಿನ ಯುವಕರು ಹೆಚ್ಚಿನ ಆದಾಯಕ್ಕಾಗಿ ದೊಡ್ಡ ನಗರಗಳಿಗೆ ಹಾರಿಹೋಗುತ್ತಿದ್ದಾರೆ. ಬೆಂಗಳೂರು, ಮುಂಬೈ ಅಥವಾ ದೆಹಲಿಯಂತಹ ನಗರಗಳಲ್ಲಿ ಲಕ್ಷಗಟ್ಟಲೆ ಸಂಬಳದ ಆಸೆಯಿಂದ ಜನರು ತಮ್ಮ ಊರನ್ನೇ ಬಿಟ್ಟು ಹೊಸ ಜೀವನ ಆರಂಭಿಸುತ್ತಿದ್ದಾರೆ. ಆದರೆ ಮನೆಯಲ್ಲೇ ಕುಳಿತು ಸರಿಯಾದ ಯೋಜನೆಯೊಂದಿಗೆ ವ್ಯವಹಾರ ಪ್ರಾರಂಭಿಸಿದರೆ, ಕಡಿಮೆ ಹೂಡಿಕೆಯಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಹಾಗಾದರೆ, ಮನೆಮಂದಿ ಸುಲಭವಾಗಿ ಪ್ರಾರಂಭಿಸಬಹುದಾದ ಐದು ಲಾಭದಾಯಕ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳೋಣ. ಈ ವ್ಯವಹಾರಗಳ ಮೂಲಕ ನೀವು ಊರಿನಲ್ಲೇ ಇದ್ದುಕೊಂಡು ಹಣ ಸಂಪಾದನೆ ಮಾಡಬಹುದು.

    1. ಸಾವಯವ ತರಕಾರಿ ಕೃಷಿ:

    ಜನರು ರಾಸಾಯನಿಕ ಮುಕ್ತ, ಆರೋಗ್ಯಕರ ತರಕಾರಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಟೊಮೇಟೋ, ಬೀನ್ಸ್, ಬೆಳ್ಳುಳ್ಳಿ, ಕ್ಯಾರೆಟ್ ಮುಂತಾದ ನೈಸರ್ಗಿಕ ತರಕಾರಿಗಳನ್ನು ಮನೆಯ ಹತ್ತಿರ ಜಮೀನಿನಲ್ಲಿ ಬೆಳಸಿ, ಹತ್ತಿರದ ನಗರ ಮಾರುಕಟ್ಟೆಗೆ ಮಾರಾಟ ಮಾಡಬಹುದು. ಕಡಿಮೆ ವೆಚ್ಚ, ಉತ್ತಮ ಲಾಭ ಮತ್ತು ಆರೋಗ್ಯಕ್ಕೂ ಉಪಯುಕ್ತವಾದ ವ್ಯವಹಾರ ಇದಾಗಿದೆ.

    ಸಲಹೆ:
    ಹವಾಮಾನ ಮತ್ತು ಮಣ್ಣಿನ ಗುಣಮಟ್ಟಕ್ಕೆ ತಕ್ಕ ತರಕಾರಿಗಳನ್ನು ಆಯ್ಕೆಮಾಡಿ.
    ತಾಜಾ ಉತ್ಪನ್ನ ಮಾರಾಟ ಮಾಡುವುದರಿಂದ ಗ್ರಾಹಕರ ನಂಬಿಕೆ ಹೆಚ್ಚುತ್ತದೆ.

    2. ಡೈರಿ ವ್ಯವಹಾರ:

    ಸ್ವಲ್ಪ ಜಮೀನಿದ್ದರೆ ಹಸು ಅಥವಾ ಎಮ್ಮೆ ಸಾಕಿ ಹಾಲಿನ ಉತ್ಪನ್ನಗಳ ವ್ಯವಹಾರ ಆರಂಭಿಸಬಹುದು. ಪ್ರಾರಂಭದಲ್ಲಿ 2–3 ಹಸುಗಳನ್ನು ಸಾಕಿ ಹಾಲು, ಮೊಸರು, ತುಪ್ಪ ಮತ್ತು ಪನ್ನೀರ್ ತಯಾರಿಸಿ ಮಾರಾಟ ಮಾಡಬಹುದು. ನಂತರ ಹಸುಗಳ ಸಂಖ್ಯೆಯನ್ನು ಹೆಚ್ಚಿಸಿ, ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಬಹುದು. ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಹಾಲಿನ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ.

    ಸಲಹೆ:
    ಹಾಲಿನ ಗುಣಮಟ್ಟವನ್ನು ಕಾಪಾಡಿ.
    ಸ್ಥಳೀಯ ಹೋಟೆಲ್‌ಗಳು, ಕ್ಯಾಂಟೀನು, ಅಂಗಡಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಮಾರಾಟ ಮಾಡಿ.

    3. ಹೂವಿನ ಕೃಷಿ:

    ಹಬ್ಬ, ಮದುವೆ ಮತ್ತು ವಿವಿಧ ಕಾರ್ಯಕ್ರಮಗಳಿಗೆ ಹೂ ಯಾವಾಗಲೂ ಅತ್ಯಗತ್ಯ. ಮನೆಯ ಹತ್ತಿರ ಚೆಂಡು ಹೂ, ಗುಲಾಬಿ, ಮಲ್ಲಿಗೆ ಮುಂತಾದ ಹೂಗಳನ್ನು ಕಡಿಮೆ ಹೂಡಿಕೆಯಲ್ಲಿ ಬೆಳಸಿ ಮಾರಾಟ ಮಾಡಬಹುದು. ಒಂದು ಎಕರೆ ಭೂಮಿಯಲ್ಲಿ ಪ್ರತಿ ಸೀಸನ್ 50,000 ರೂ.ರಿಂದ 1 ಲಕ್ಷ ರೂ.ವರೆಗೆ ಲಾಭ ಸಾಧ್ಯ.

    ಸಲಹೆ:
    ಹೂ ಬೆಳೆಯುವ ಮೊದಲು ಮಾರುಕಟ್ಟೆಯ ಬೇಡಿಕೆಯನ್ನು ಗಮನಿಸಿ.
    ಹೂ ಪ್ಯಾಕೇಜಿಂಗ್ ಆಕರ್ಷಕವಾಗಿರಲಿ, ಹಬ್ಬಗಳ ಸಮಯದಲ್ಲಿ ಹೆಚ್ಚು ಮಾರಾಟ ಸಾಧ್ಯ.

    4. ಕೋಳಿ ಸಾಕಾಣಿಕೆ:

    ಕೋಳಿ ಸಾಕಾಣಿಕೆ ಕಡಿಮೆ ಹೂಡಿಕೆಯಲ್ಲಿಯೇ ಪ್ರಾರಂಭಿಸಬಹುದಾದ ಅತ್ಯುತ್ತಮ ವ್ಯವಹಾರವಾಗಿದೆ. 20–25 ಕೋಳಿಗಳಿಂದ ಆರಂಭಿಸಿ, ಮೊಟ್ಟೆ ಮತ್ತು ಕೋಳಿ ಮಾಂಸವನ್ನು ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡಬಹುದು. ಸರಿಯಾದ ನಿರ್ವಹಣೆಯಿಂದ ಪ್ರತಿ ತಿಂಗಳು ಕನಿಷ್ಠ 20,000 ರೂ.ವರೆಗೆ ಸಂಪಾದನೆ ಸಾಧ್ಯ. ಸರ್ಕಾರದಿಂದ ಕೆಲ ಸಾಲಗಳು ಮತ್ತು ಸಬ್ಸಿಡಿ ಯೋಜನೆಗಳೂ ಇದಕ್ಕೆ ಸಹಾಯ ಮಾಡುತ್ತವೆ.

    ಸಲಹೆ:
    ಕೊಳಿಗಳ ಆರೋಗ್ಯ, ಆಹಾರ ಮತ್ತು ಸ್ವಚ್ಛತೆಯನ್ನು ಗಮನಿಸಿ.
    ಸ್ಥಳೀಯ ಅಂಗಡಿಗಳು ಮತ್ತು ಹೋಟೆಲ್‌ಗಳಿಗೆ ನೇರವಾಗಿ ಮಾರಾಟ ವ್ಯವಸ್ಥೆ ಮಾಡಿ.

    5. ಜೇನುತುಪ್ಪ ಉತ್ಪಾದನೆ:

    ಗ್ರಾಮೀಣ ಪ್ರದೇಶಗಳಲ್ಲಿ ಜೇನುತುಪ್ಪದ ವ್ಯವಹಾರ ಬಹಳ ಲಾಭದಾಯಕ. ಮನೆಯಲ್ಲೇ ಕೆಲವು ಜೇನು ಪೆಟ್ಟಿಗೆಯಿಂದ ಪ್ರಾರಂಭಿಸಿ ನೈಸರ್ಗಿಕ ಜೇನು ಉತ್ಪಾದಿಸಬಹುದು. ನಗರಗಳಲ್ಲಿ ನೈಸರ್ಗಿಕ ಜೇನುಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ, ಸರಿಯಾದ ಮಾರಾಟ ಯೋಜನೆಯೊಂದಿಗೆ ಉತ್ತಮ ಆದಾಯ ಪಡೆಯಬಹುದು.

    ಸಲಹೆ:
    ಪ್ರಾಥಮಿಕ ತರಬೇತಿ ಪಡೆದು, ಜೇನು ಪೆಟ್ಟಿಗೆ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಿ.

    ಈ ಐದು ವ್ಯವಹಾರಗಳು ಮನೆಮಂದಿ ಸೇರಿ, ಕಡಿಮೆ ಹೂಡಿಕೆ ಮತ್ತು ಹೆಚ್ಚಿನ ಲಾಭದಾಯಕತೆಯೊಂದಿಗೆ ಪ್ರಾರಂಭಿಸಬಹುದಾದ ಉತ್ತಮ ಆಯ್ಕೆಗಳು ಇವಾಗಿವೆ. ಈ ವ್ಯವಹಾರಗಳನ್ನು ಶುರುಮಾಡಲು ಬಹಳ ಮುಖ್ಯವಾಗಿ ಪರಿಶ್ರಮ, ಗುಣಮಟ್ಟ, ಹಾಗೂ ಸರಿಯಾದ ಮಾರ್ಕೆಟಿಂಗ್ ವ್ಯವಸ್ಥೆ ಮುಖ್ಯ.

    apvc-iconPost Views: 6