Tag: South Africa

  • IND vs SA :ಎರಡನೇ ಪಂದ್ಯದಲ್ಲಿ ಮುಗ್ಗರಿಸಿದ ಸೂರ್ಯ ಪಡೆ

    IND vs SA :ಎರಡನೇ ಪಂದ್ಯದಲ್ಲಿ ಮುಗ್ಗರಿಸಿದ ಸೂರ್ಯ ಪಡೆ

    ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡ ಕ್ಷಣದಿಂದಲೇ ನಿರೀಕ್ಷೆಗಳು ಗಗನಕ್ಕೆ ಏರಿದ್ದವು. ಆದರೆ ಮೈದಾನದಲ್ಲಿ ನಡೆದ ಚಿತ್ರ ಸಂಪೂರ್ಣ ವಿಭಿನ್ನ. ಕಟಕ್‌ನಲ್ಲಿ ಕಂಡ ಮುಖಭಂಗಕ್ಕೆ ದಕ್ಷಿಣ ಆಫ್ರಿಕಾ ತಂಡ ಇದೇ ಮೈದಾನದಲ್ಲಿ ದಿಟ್ಟ ತಿರುಗೇಟು ನೀಡಿ ಭಾರತವನ್ನು ಬರೋಬ್ಬರಿ 51 ರನ್‌ಗಳಿಂದ ಮಣಿಸಿ, ಸರಣಿಯನ್ನು 1-1ರಿಂದ ಸಮಬಲಕ್ಕೆ ತಂದಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ನಿಂತ ದಕ್ಷಿಣ ಆಫ್ರಿಕಾ, ಆರಂಭದಿಂದಲೇ ಭಾರತೀಯ ಬೌಲಿಂಗ್‌ ಮೇಲೆ ಮನ ಬಂದತೆ ದಾಳಿ ಶುರುಮಾಡಿತು. ವಿಶೇಷವಾಗಿ ಕ್ವಿಂಟನ್ ಡಿ ಕಾಕ್, ಭಾರತದ  ಬೌಲಿಂಗ್‌ನ ಪ್ರತಿ ತಪ್ಪನ್ನೂ  ಶಿಕ್ಷಿಸಿದರು. ರೀಝಾ ಹೆಂಡ್ರಿಕ್ಸ್ ಔಟಾದರೂ ಮಾರ್ಕಂ ಜೊತೆಗೂಡಿ ಡಿ ಕಾಕ್‌ ಸಿಡಿಲಬ್ಬರಕ್ಕೆ ವೇಗವೇ ಹೆಚ್ಚಿತು. 46 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ಸೇರಿ ಕೇವಲ 10 ರನ್‌ಗಳಿಂದ ಶತಕ ವಂಚಿತರಾದರು. ಭಾರತದ ಮೇಲೆ ಒತ್ತಡದ  ಕಟ್ಟಡ ಕಟ್ಟಿದ ಇನ್ನಿಂಗ್ಸ್ ಅದೇ.

    ಇನ್ನೊಂದು ಕಡೆ, ಅರ್ಶದೀಪ್ ಸಿಂಗ್ 11ನೇ ಓವರ್‌ನಲ್ಲಿ ಎಸೆದ 7 ವೈಡ್​ಗಳು ದಕ್ಷಿಣ ಆಫ್ರಿಕಾ ಮೊತ್ತಕ್ಕೆ ಇನ್ನಷ್ಟು ಬೂಸ್ಟರ್ ನೀಡಿದಂತಾಯಿತು. ಡೆತ್ ಓವರ್‌ಗಳಿಗೆ ಬಂದಾಗ ಪಿರೇರಾ (30 ರನ್), ಡೇವಿಡ್ ಮಿಲ್ಲರ್ (20 ರನ್) ವೇಗದ ಲಯ ತೋರಿದ ಪರಿಣಾಮ ತಂಡದ ಮೊತ್ತ 213/4ಕ್ಕೆ ಏರಿತು. ಭಾರತದ ಬೌಲಿಂಗ್‌ನಲ್ಲಿ ಅಕ್ಷರ್ ಮತ್ತು ವರುಣ್ ಮಾತ್ರ ಸ್ವಲ್ಪ ಹಿಡಿತ ತೋರಿದರು ಎನ್ನಬಹುದು.

    ಬೃಹತ್ ಗುರಿಯನ್ನು ಬೆನ್ನತ್ತಲು ಬಂದ ಭಾರತದಿಂದ ಎಲ್ಲರೂ ನಿರೀಕ್ಷಿಸಿದ್ದ ಚೇಸಿಂಗ್ ಕಲರವ ಕಾಣಿಸಲಿಲ್ಲ. ಟಾಸ್ ಗೆದ್ದು ಚೇಸಿಂಗ್ ಆಯ್ದುಕೊಂಡ ಭಾರತಕೆ ಇದೇ ನಿರ್ಧಾರ ಕೇಡು ತಂದಂತೆ, ಆರಂಭದಲ್ಲೇ ವಿಕೆಟ್ ಕುಸಿತಗಳ ಸರಪಳಿ ಶುರುವಾಯಿತು. ಅದರಲ್ಲಿ ತಿಲಕ್ ವರ್ಮಾ ಒಬ್ಬರೇ ಹೋರಾಟ ನೆಡೆಸಿದರೂ ಫಲಕಾರಿ ಯಾಗಲಿಲ್ಲ. 34 ಎಸೆತಗಳಲ್ಲಿ 62 ರನ್‌ಗಳ ಧೈರ್ಯದ ಇನ್ನಿಂಗ್ಸ್ (2 ಬೌಂಡರಿ, 5 ಸಿಕ್ಸರ್) ಭಾರತದ ಬೆನ್ನೆಲುಬಾಗಿ ನಿಂತರೂ, ಮಧ್ಯಮ ಕ್ರಮಾಂಕದಿಂದ ಬೆಂಬಲ ಸಿಗದೇ ಹೋದುದು ಭಾರತಕ್ಕೆ ಗಂಭೀರ ಹೊಡೆತವಾಗಿತ್ತು.

    ದಕ್ಷಿಣ ಆಫ್ರಿಕಾ ಬೌಲಿಂಗ್‌ನಲ್ಲಿ ಬಾರ್ಟಮನ್ ಭಾರತೀಯ ಬ್ಯಾಟಿಂಗ್‌ಗೆ ನಿಜವಾದ ಕಂಟಕವಾದರು. 4 ವಿಕೆಟ್‌ಗಳನ್ನು ಕಿತ್ತು ಭಾರತವನ್ನು ಸಂಪೂರ್ಣ ಒತ್ತಡಕ್ಕೆ ತಳ್ಳಿದರು.ಲುಂಗಿ ಎನ್ ಗಿಡಿ ಮತ್ತು ಯಾನ್ಸನ್ ಅವರ ಸೂಕ್ತ ಬೌಲಿಂಗ್ ಕೂಡ ಭಾರತವನ್ನು ಮತ್ತಷ್ಟು ಸಿಕ್ಕಿಹಾಕಿತು.

    ಕೊನೆಗೆ, ಟೀಂ ಇಂಡಿಯಾ 19.1 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಗಿ, ಕಟಕ್‌ನಲ್ಲಿ ಕಂಡ ಗೆಲುವಿನ ಜಾಲವನ್ನು ಚಂಡೀಗಢದಲ್ಲಿ ಹಿಡಿಯಲು ವಿಫಲವಾಯಿತು. ದಕ್ಷಿಣ ಆಫ್ರಿಕಾ 51 ರನ್‌ಗಳ ಭರ್ಜರಿ ಜಯ ಸಾಧಿಸಿತು.

  • IND vs SA T20: ಕಟಕ್ ಪಂದ್ಯಕ್ಕೆ ತಂಡ ಸಿದ್ಧ  ಭಾರತ ತಂಡದ 11ರ ಬಳಗ ಹೇಗಿರಲಿದೆ?

    IND vs SA T20: ಕಟಕ್ ಪಂದ್ಯಕ್ಕೆ ತಂಡ ಸಿದ್ಧ ಭಾರತ ತಂಡದ 11ರ ಬಳಗ ಹೇಗಿರಲಿದೆ?

    ಭಾರತ–ದಕ್ಷಿಣ ಆಫ್ರಿಕಾ ಟಿ20 ಸರಣಿ ಆರಂಭಕ್ಕೆ ಗಂಟೆಗಳು ಮಾತ್ರ ಬಾಕಿ. ಕಟಕ್‌ನ ಕ್ರೀಡಾಂಗಣದಲ್ಲಿ ಇಂದು ನೆಡೆಯಲಿದೆ. ಐದು ಪಂದ್ಯಗಳ ಈ ಸರಣಿಯ ಮೊದಲ ಹಣಾಹಣಿಗೆ ಯಾವ 11 ಮಂದಿ ಮೈದಾನಕ್ಕಿಳಿಯಲಿದ್ದಾರೆ ಎಂಬುದು ಈಗಲೇ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಚರ್ಚೆಯಾಗಿದೆ. ಕಾರಣ ಟೀಂ ಇಂಡಿಯಾ ಶಿಬಿರದಲ್ಲಿ ಅನೇಕರು ಫಾರ್ಮ್ನಲ್ಲಿರುವುದು.

    ಮೊದಲನೆಯದಾಗಿ, ಆರಂಭಿಕ ಜೋಡಿಯೇ ಈಗ ಕುತೂಹಲ. ಕುತ್ತಿಗೆ ನೋವಿನಿಂದ ಹೊರ ಬಂದಿರುವ ಉಪನಾಯಕ ಶುಭ್‌ಮನ್ ಗಿಲ್ ಮತ್ತೆ ತಂಡಕ್ಕೆ ಸೇರಿದ ಸುದ್ದಿ ಶಿಬಿರಕ್ಕೆ ಹೊಸ ಚೈತನ್ಯ ತಂದಿದೆ. ಗಿಲ್ ಜೊತೆಗೆ ಅಭಿಷೇಕ್ ಶರ್ಮಾ ಇನಿಂಗ್ಸ್‌‌ಗೆ ಸ್ಫೋಟಕ ಆರಂಭ ಕೊಡುವ ಸಾಧ್ಯತೆ ಬಲವಾಗಿದೆ. ಇವರಿಬ್ಬರ ಆಟದ ಶೈಲಿ ಕಟಕ್ ಪಿಚ್‌ಗೆ ಚೆನ್ನಾಗಿ ಹೊಂದಿಕೊಳ್ಳಬಹುದು ಎಂಬ ನಿರೀಕ್ಷೆಯೂ ಇದೆ.

    ಮೂರನೇ ಕ್ರಮಾಂಕಕ್ಕೆ ಬಂದರೆ, ನಾಯಕ ಸೂರ್ಯಕುಮಾರ್ ಯಾದವ್ ಆಗಮಿಸುತ್ತಾರೆ. ಅಬ್ಬರದ ಸ್ಟ್ರೈಕ್‌ರೇಟ್ ಮೂಲಕ ತೀವ್ರ ಒತ್ತಡದಲ್ಲೂ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯ ಅವರಿಗೆ ಇದೆ. ಅವರ ನಂತರ ತಿಲಕ್ ವರ್ಮಾ ನಡೆಯುವ ವೇಗ ಬದಲಾಯಿಸುವ ಗುಣವಿರುವ ಯುವ ಮುಖ. ಮಧ್ಯ ಕ್ರಮಾಂಕದ ಹೊಣೆಗಾರಿಕೆಯ ಬಹುತೇಕ ಭಾಗ ಇವರಿಬ್ಬರ ಮೇಲೆ ಇರುತ್ತದೆ.

    ಆಲ್‌ರೌಂಡ್ ವಿಭಾಗದಲ್ಲಿ ದೊಡ್ಡ ಹೆಸರು ಹಾರ್ದಿಕ್ ಪಾಂಡ್ಯ. ಗಾಯದಿಂದ ಚೇತರಿಸಿಕೊಂಡು ಮರಳುತ್ತಿರುವ ಹಾರ್ದಿಕ್, ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸಮತೋಲನ ತರುತ್ತಾರೆ. ಇವರೊಂದಿಗೆ ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಕೂಡ ಇದ್ದಾರೆ. ಅಕ್ಷರ್‌ರ ಸ್ಪಿನ್, ದುಬೆರ ಶಕ್ತಿಶಾಲಿ ಹಿಟಿಂಗ್ಇವೆರಡೂ ತಂಡಕ್ಕೆ ಉಪಯೋಗ.

    ವಿಕೆಟ್ ಕೀಪರ್ ಸ್ಥಾನ ಮಾತ್ರ ಇನ್ನೂ ಸಂಪೂರ್ಣ ಸ್ಪಷ್ಟವಾಗಿಲ್ಲ. ಜಿತೇಶ್ ಶರ್ಮಾ ಇತ್ತೀಚಿನ ಪಂದ್ಯಗಳಲ್ಲಿ ಅವಕಾಶ ಬಳಸಿಕೊಂಡಿದ್ದರೆ, ಅನುಭವದ ಮೈಲಿಗಲ್ಲು ಹೊಂದಿರುವ ಸಂಜು ಸ್ಯಾಮ್ಸನ್ ಕೂಡ ಬಾಗಿಲಲ್ಲೇ ನಿಂತಿದ್ದಾರೆ. ನಿರ್ಧಾರ ಯಾವತ್ತಕ್ಕೆ ಬದಲಾಗುತ್ತದೆ ಎಂಬ ಕುತೂಹಲವಿದೆ. ಆದರೆ ತಂಡದ ಒಳಗಿನ ಚಲನವಲನ ನೋಡಿದರೆ, ಜಿತೇಶ್‌ಗೆ ಸ್ವಲ್ಪ ಹೆಚ್ಚು ಬಲವಿದೆ.

    ಬೌಲಿಂಗ್ ಹೆಗ್ಗಳಿಕೆಗೆ ಬಂದರೆ ಬುಮ್ರಾ ಇದ್ದಂತೆಯೇ ಭದ್ರತೆ. ಅರ್ಷದೀಪ್ ಸಿಂಗ್ ಆರಂಭದ ಓವರ್‌ಗಳಲ್ಲಿ ಸ್ವಿಂಗ್‌ನಿಂದ ಸವಾಲು ಹಾಕಬಹುದು. ಮೂರನೇ ಪ್ರಮುಖ ಬೌಲರ್ ವರುಣ್ ಚಕ್ರವರ್ತಿ ರಂಗಿನ ವೈವಿಧ್ಯಮಯ ಸ್ಪಿನ್‌ಗಳು ಟಿ20 ಕ್ರಿಕೆಟ್‌ಗೆ ನೀಡುವ ರಹಸ್ಯ ಅಸ್ತ್ರ. ಜೊತೆಗೂಡಿ ಅಕ್ಷರ್ ಹಾಗೂ ಹಾರ್ದಿಕ್ ಸಹಾಯಕ ಬೌಲರ್‌ಗಳಾಗಿ ತಮ್ಮ ಪಾತ್ರ ನಿಭಾಯಿಸುತ್ತಾರೆ.

    ಕಟಕ್‌ನ ಮೊದಲ ಟಿ20ಗಾಗಿ ಭಾರತದ ಸಂಭಾವ್ಯ 11 ಹೀಗಿದೆ:

    ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

    ಸರಣಿ ಆರಂಭವಾಗುವುದಕ್ಕೂ ಮುನ್ನವೇ ಉತ್ಸಾಹ ಶ್ರೇಷ್ಟ ಮಟ್ಟಕ್ಕೆ ತಲುಪಿದೆ. ಭಾರತದ ಈ ಹೊಸ ಸಂಯೋಜನೆ ಮೈದಾನದಲ್ಲಿ ಎಷ್ಟು ಫಲ ನೀಡುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.