Tag: Narendra Modi

  • ನ. 28ರಂದು ಪ್ರಧಾನಿ ಮೋದಿ ಉಡುಪಿಗೆ ಭೇಟಿ ಮತ್ತು ಶ್ರೀಕೃಷ್ಣನ ದರ್ಶನ

    ನ. 28ರಂದು ಪ್ರಧಾನಿ ಮೋದಿ ಉಡುಪಿಗೆ ಭೇಟಿ ಮತ್ತು ಶ್ರೀಕೃಷ್ಣನ ದರ್ಶನ

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 28ರಂದು ಉಡುಪಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ ವೇಳೆಗೆ ಅವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದು, ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.

    ಗೀತಾ ಜಯಂತಿಯ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಆಯೋಜಿಸಲಾದ “ಲಕ್ಷ ಕಂಠ ಗೀತಾ ಪಾರಾಯಣ ಬೃಹತ್ ಗೀತೋತ್ಸವ” ಎಂಬ ಮಹಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮೋದಿಯವರು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಮತ್ತು ವಿದ್ಯಾರ್ಥಿಗಳು ಗೀತೆಯ ಶ್ಲೋಕಗಳನ್ನು ಸಮೂಹವಾಗಿ ಪಠಿಸಲಿದ್ದಾರೆ.

    ಪ್ರಧಾನಮಂತ್ರಿಯವರ ಈ ಭೇಟಿಯ ಹಿನ್ನೆಲೆ ಉಡುಪಿಯ ಶ್ರೀಕೃಷ್ಣ ಮಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಕಠಿಣಗೊಳಿಸಲಾಗಿದೆ. ಪೊಲೀಸ್ ಇಲಾಖೆ ಮತ್ತು ಕೇಂದ್ರ ಭದ್ರತಾ ಪಡೆಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು, ವಿಶೇಷ ಸುರಕ್ಷತಾ ಕ್ರಮಗಳನ್ನು ಕೈಗೊಂಡಿವೆ.

    ಮಠದ ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಅವರು ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ಉಡುಪಿಗೆ ಆಗಮಿಸಲಿದ್ದಾರೆ. ದೇವರ ದರ್ಶನದ ನಂತರ ಅವರು ಪ್ರಸಾದ ಸ್ವೀಕರಿಸಿ, ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಹಲವು ಧಾರ್ಮಿಕ ಮತ್ತು ಸಾಮಾಜಿಕ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.

    ಈ ಭೇಟಿ ಪ್ರಧಾನಿಯಾಗಿದ್ದ ಬಳಿಕ ಮೋದಿಯವರ ಮೊದಲ ಉಡುಪಿ ಪ್ರವಾಸವಾಗಿದ್ದು, ಇದರಿಂದ ಶ್ರೀಕೃಷ್ಣ ಮಠದಲ್ಲಿ ವಿಶೇಷ ಚೈತನ್ಯ ಮೂಡಿದೆ. 2013ರಲ್ಲಿ ಅವರು ಗುಜರಾತ್ ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದಾಗ ಪುತ್ತಿಗೆ ಪರ್ಯಾಯದ ಸಂದರ್ಭದಲ್ಲಿ ಮಠಕ್ಕೆ ಭೇಟಿ ನೀಡಿದ್ದರು. ಈಗ ಸುಮಾರು ಒಂದು ದಶಕದ ಬಳಿಕ ಅವರು ಮತ್ತೆ ಶ್ರೀಕೃಷ್ಣನ ನಾಡಿಗೆ ಕಾಲಿಡಲಿದ್ದಾರೆ.

    ವಿಶ್ವ ಗೀತಾ ಪರ್ಯಾಯದ ಅಂಗವಾಗಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೈಗೊಂಡಿದ್ದ “ಕೋಟಿ ಗೀತಾ ಲೇಖನ ಯಜ್ಞ” ಮತ್ತು ಗೀತಾ ಪ್ರಚಾರ ಕಾರ್ಯವನ್ನು ಪ್ರಧಾನಿ ಮೋದಿ ಮೆಚ್ಚಿಕೊಂಡು, ಮೊದಲು ಅಭಿನಂದನಾ ಪತ್ರ ಕಳಿಸಿದ್ದರು. ಇದೀಗ ಅವರು ಸ್ವತಃ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮಠದ ಪರಂಪರೆಯ ಗೌರವವನ್ನು ಮತ್ತಷ್ಟು ಹೆಚ್ಚಿಸುವಂತಾಗಿದೆ.

    ಪ್ರಧಾನಮಂತ್ರಿಯವರ ಆಗಮನಕ್ಕೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತ, ಮಠದ ಅಧಿಕಾರಿಗಳು ಮತ್ತು ಭಕ್ತವೃಂದ ಈಗಾಗಲೇ ಸಜ್ಜಾಗಿದ್ದು, ಉಡುಪಿಯು ಧಾರ್ಮಿಕ ಉತ್ಸವದ ನೋಟ ಪಡೆದುಕೊಂಡಿದೆ. ಭದ್ರತಾ ಕ್ರಮಗಳು, ಸಂಚಾರ ನಿಯಂತ್ರಣ ಮತ್ತು ಅತಿಥಿಗಳ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡಲು ಅಧಿಕಾರಿಗಳು ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ.

    ನವೆಂಬರ್ 28ರ ಈ ಭೇಟಿಯು ಕೇವಲ ರಾಜಕೀಯ ಅಥವಾ ಅಧಿಕೃತ ಪ್ರಯಾಣವಲ್ಲ, ಆತ್ಮೀಯ ಮತ್ತು ಧಾರ್ಮಿಕ ಭಾವನೆಯನ್ನು ಹೊತ್ತಿರುವ ವಿಶೇಷ ದಿನವಾಗಲಿದೆ ಎಂದು ಮಠದ ವೃತ್ತಪತ್ರಿಕೆಗಳು ತಿಳಿಸಿವೆ.

  • ಕೋಟ್ಯಂತರ ಭಕ್ತರ ಕನಸಾಗಿರುವ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣ

    ಕೋಟ್ಯಂತರ ಭಕ್ತರ ಕನಸಾಗಿರುವ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣ

    ಶತಮಾನಗಳಿಂದ ಕೋಟ್ಯಂತರ ಭಕ್ತರ ಕನಸಾಗಿದ್ದ ಅಯೋಧ್ಯೆಯ ಶ್ರೀರಾಮ ಮಂದಿರ ಇದೀಗ ಸಂಪೂರ್ಣ ರೂಪ ಪಡೆದುಕೊಂಡಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಟಿಸಿದ ಅಧಿಕೃತ ಮಾಹಿತಿಯ ಪ್ರಕಾರ, ಮುಖ್ಯ ಮಂದಿರ ಸೇರಿದಂತೆ ಆರು ಉಪಮಂದಿರಗಳ ನಿರ್ಮಾಣ ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಿಳಿಸಿದೆ.

    ಟ್ರಸ್ಟ್ ತನ್ನ ಎಕ್ಸ್ ಖಾತೆಯ ಮೂಲಕ ಪ್ರಕಟಣೆ ನೀಡಿದ್ದು, “ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಂಡಿದೆ ಎಂದು ಪ್ರಭು ಶ್ರೀರಾಮನ ಭಕ್ತರಿಗೆ ತಿಳಿಸಲು ನಮಗೆ ಅಪಾರ ಸಂತೋಷವಾಗುತ್ತಿದೆ” ಎಂದು ಹೇಳಿದೆ. ಭಗವಾನ್ ಶ್ರೀರಾಮನ ಮುಖ್ಯ ಮಂದಿರದ ಜೊತೆಗೆ ಮಹಾದೇವ, ಗಣೇಶ, ಹನುಮಾನ್, ಸೂರ್ಯದೇವ, ಮಾ ಭಗವತಿ, ಮಾ ಅನ್ನಪೂರ್ಣ ಮತ್ತು ಶೇಷಾವತಾರ ಮಂದಿರಗಳಿಗೂ ಕಲಶ ಹಾಗೂ ಧ್ವಜಾರೋಹಣ ಕಾರ್ಯಗಳು ಯಶಸ್ವಿಯಾಗಿ ಮುಗಿದಿವೆ.

     

    ಇದಷ್ಟೇ ಅಲ್ಲದೆ, ಋಷಿ ವಾಲ್ಮೀಕಿ, ಋಷಿ ವಶಿಷ್ಠ, ಋಷಿ ವಿಶ್ವಾಮಿತ್ರ, ಋಷಿ ಅಗಸ್ತ್ಯ, ನಿಷಾದರಾಜ, ಶಬರಿ ಮತ್ತು ದೇವಿ ಅಹಲ್ಯಾ ಅವರಿಗೆ ಸಮರ್ಪಿತವಾದ ಏಳು ಮಂಟಪಗಳೂ ಕೂಡ ನಿರ್ಮಾಣಗೊಂಡಿವೆ. ಭಕ್ತಕವಿ ತುಳಸಿದಾಸರ ಸ್ಮರಣಾರ್ಥ ನಿರ್ಮಿಸಲಾದ ಸಂತ ತುಳಸಿದಾಸ ಮಂದಿರವೂ ಅದ್ಧೂರಿಯಾಗಿ ಸಿದ್ಧವಾಗಿದೆ. ಅಲ್ಲದೆ ರಾಮಾಯಣದ ಅಮರ ಪಾತ್ರಗಳಾದ ಜಟಾಯು ಮತ್ತು ಅಳಿಲಿನ ಪ್ರತಿಮೆಗಳನ್ನು ಅಲಂಕರಿಸಲಾಗಿದ್ದು, ಸ್ಥಳದ ಆಧ್ಯಾತ್ಮಿಕ ಭಾವನೆಗೆ ಮತ್ತಷ್ಟು ತೇಜಸ್ಸು ನೀಡಿದೆ.

    ಭಕ್ತರ ಸೌಲಭ್ಯಕ್ಕಾಗಿ ಟ್ರಸ್ಟ್ ಅನೇಕ ವ್ಯವಸ್ಥೆಗಳನ್ನು ಪೂರ್ಣಗೊಳಿಸಿದೆ. ರಸ್ತೆ ನಿರ್ಮಾಣ, ಕಲ್ಲಿನ ನೆಲಹಾಸು ಹಾಗೂ ಸುಸಜ್ಜಿತ ಸೌಕರ್ಯಗಳನ್ನು ಎಲ್ & ಟಿ ಕಂಪನಿ ನಿರ್ವಹಿಸುತ್ತಿದೆ. ಮಂದಿರದ ಸುತ್ತಮುತ್ತ ಹಸಿರುಮಯ ವಾತಾವರಣ ನಿರ್ಮಿಸಲು 10 ಎಕರೆ ವಿಸ್ತೀರ್ಣದ “ಪಂಚವಟಿ”ಯ ಅಭಿವೃದ್ಧಿ ಕಾರ್ಯವೂ ವೇಗವಾಗಿ ಸಾಗುತ್ತಿದೆ. ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರು ವನವಾಸದ ಸಮಯದಲ್ಲಿ ನೆಲೆಸಿದ್ದ ಪವಿತ್ರ ಸ್ಥಳದ ಸ್ಮರಣಾರ್ಥ ಈ ಪಂಚವಟಿ ಅಭಿವೃದ್ಧಿಗೊಳಿಸಲಾಗಿದೆ.

    ಇನ್ನು 3.5 ಕಿಲೋಮೀಟರ್ ಉದ್ದದ ತಡೆಗೋಡೆ, ಟ್ರಸ್ಟ್ ಕಚೇರಿ, ಅತಿಥಿಗೃಹ ಮತ್ತು ಸಭಾಂಗಣಗಳ ನಿರ್ಮಾಣ ಕಾರ್ಯ ಮಾತ್ರ ಇನ್ನೂ ಮುಂದುವರಿದಿದೆ.

    ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಆಗಮಿಸಿ, ಶ್ರೀರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಮಹತ್ವದ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ವರ್ಗಗಳಿಂದ ಸುಮಾರು 6,000 ರಿಂದ 8,000 ಮಂದಿ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಪ್ರಧಾನಿಯವರು ಮಂದಿರದ ಮೊದಲ ಮಹಡಿಯಲ್ಲಿ ನಿರ್ಮಿಸಲಾದ ರಾಮ ಪರಿವಾರದಲ್ಲಿ ಆರತಿ ನೆರವೇರಿಸಿ ದೇವಾಲಯದ ಧ್ವಜಾರೋಹಣ ಮಾಡುವರು ಎಂದು ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.