Tag: Muddebihal

  • ಇಂದು ರೈತ ಹಸಿರು ಸೇನೆಯಿಂದ “ಬೆಳಗಾವಿ ಚಲೋ”

    ಇಂದು ರೈತ ಹಸಿರು ಸೇನೆಯಿಂದ “ಬೆಳಗಾವಿ ಚಲೋ”

    ಮುದ್ದೇಬಿಹಾಳ; ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ಹಾಗೂ ನಾಗರಬೆಟ್ಟ ಏತ ನೀರಾವರಿ ಪೂರ್ಣಗೊಳಿಸಲು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಮುದ್ದೇಬಿಹಾಳ ಘಟಕ ಬೆಳಗಾವಿ ಚಲೋ ಇಂದು(ಮಂಗಳವಾರ) ಹಮ್ಮಿಕೊಳ್ಳಲಾಗಿದೆ.

    ಮಂತ್ರಿಮಂಡಲದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.60ಮೀ. ದಿಂದ 524.256 ಮೀ ವರೆಗೆ ಹೆಚ್ಚಿಸುವ ಕಾಮಗಾರಿಗೆ ಕೂಡಲೆ ಟೆಂಡರ ಕರೆಯಬೇಕು. ಕೇಂದ್ರ ಸರಕಾರ ಕೂಡಲೇ ಆದೇಶ ಹೊರಡಿಸಿ ಹೆಚ್ಚುವರಿಯಾಗಿ ದೊರೆಯುವ 170 ಟಿ.ಎಮ್.ಸಿ. ನೀರನ್ನು ಯು.ಕೆ.ಪಿ. 3ನೇ ಹಂತಕ್ಕೆ ಬಳಸಿಕೊಳ್ಳಲು ಅಧಿಸೂಚಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು “ರಾಷ್ಟ್ರೀಯ ಯೋಜನೆ” ಎಂದು ಘೋಷಣೆಮಾಡಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಹಸಿರು ಸೇನೆ ರೈತ ಸಂಘದ ತಾಲೂಕು ಅಧ್ಯಕ್ಷ ಬಸನಗೌಡ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ 2015ರಲ್ಲಿ ಮುಖ್ಯಮಂತ್ರಿಗಳು 1ಲಕ್ಷ ಕೋಟಿ ರೂ. ಅನುದಾನ ನೀಡಲು ಮಾತು ಕೊಟ್ಟಿದ್ದು, 1ಲಕ್ಷಕೋಟಿ ರೂ. ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಆಲಮಟ್ಟಿ ಜಲಾಶಯದ ಅಡಿಯಲ್ಲಿ ಬರುವ 9 ಏತ ನೀರಾವರಿ ಯೋಜನೆಗಳನ್ನು ಕೂಡಲೇ ಟೆಂಡರ್ ಕರೆದು ಪೂರ್ಣಗೊಳಿಸಬೇಕು. ಜಲಾನಯನ ಪ್ರದೇಶದಲ್ಲಿ ಆರ್ಥಿಕ ಬೆಳೆಗಳನ್ನು ಬೆಳೆಯಲು ಸರಕಾರ ಆದೇಶ ಮಾಡಬೇಕು ಎಂದು ರೈತ ಸಂಘದ ಬೇಡಿಕೆಯಲ್ಲಿ ಹೇಳಲಾಗಿದೆ.

    ಕೃಷ್ಣಾ ಮೇಲ್ದಂಡೆ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಕಛೇರಿಯು ಆಲಮಟ್ಟಿಯಲ್ಲಿ ನೆಪ ಮಾತ್ರಕ್ಕೆ ಇದ್ದು, ಕೂಡಲೇ ಬೆಂಗಳೂರಿನಲ್ಲಿರುವ ವ್ಯವಸ್ಥಾಪಕ ನಿರ್ದೆಶಕರ ಕಛೇರಿಯನ್ನು ರದ್ದುಗೊಳಿಸಿ ಆಲಮಟ್ಟಿಯಲ್ಲೇ ಮುಂದುವರೆಸಬೇಕು. ಕಳೆದ ವರ್ಷದ ಮತ್ತು ಈ ವರ್ಷದ ನೀರಾವರಿ ಸಲಹಾ ಸಮೀತಿ ಸಭೆಗಳನ್ನು ಬೆಂಗಳೂರಿನಲ್ಲಿ ನಡೆಸಲಾಗಿದೆ. ಇದು ರೈತ ವಿರೋಧಿ ನೀತಿ, ಮುಂಬರುವ ಎಲ್ಲ ನೀರಾವರಿ ಸಲಹಾ ಸಮಿತಿ ಸಭೆಗಳನ್ನು ಆಲಮಟ್ಟಿಯಲ್ಲಿ ಜರುಗಿಸಬೇಕು. ಸಭೆಗೆ ಕಡ್ಡಾಯವಾಗಿ 5 ಜನ ರೈತ ಮುಂಖಡರನ್ನು ಪಕ್ಷಾತೀತವಾಗಿ ಆಹ್ವಾನ ನೀಡಬೇಕು.

    ಇನ್ನು ನಾಗರಬೆಟ್ಟ ಏತ ನೀರಾವರಿ ಯೋಜನೆಯ ಕಾಮಗಾರಿ ಪೂರ್ಣಗೊಂಡು 8 ವರ್ಷ ಕಳೆದಿದೆ. ಪಂಪಸೆಟ್ ಪ್ರಾರಂಭ ಸ್ಥಿತಿಯಲ್ಲಿದೆ. ಸುಮಾರು 5 ವರ್ಷದಿಂದ ತಿಂಗಳಿಗೆ 24 ಲಕ್ಷ ರೂ. ಗಳನ್ನು ಕೆ.ಇ.ಬಿ.ಗೆ ಸರಕಾರ ಕನಿಷ್ಠ ಹಣ ತುಂಬುತ್ತಿದೆ. ಆದರೆ 5 ವರ್ಷದಿಂದ ಕಾಲುವೆ ಕಾಮಗಾರಿ ಪೂರ್ಣಗೊಂಡಿಲ್ಲ, ರೈತರ ಹೊಲಗಳಿಗೆ ಸುಮಾರ 5 ವರ್ಷದಿಂದ ನೀರು ಹರಿದಿಲ್ಲ. ಕಾಮಗಾರಿ ವಿಳಂಬ ವಾಗಿದ್ದಕ್ಕೆ ಸಂಬಂದಪಟ್ಟ ಅಧಿಕಾರಿಗಳಮೇಲೆ ಕ್ರಮ ಜರುಗಿಸಬೇಕು, ಹಾಗೂ ಕೂಡಲೆ ರೈತರ ಹೊಲಗಳಿಗೆ ಹೊಲಗಾಲುವೆಗಳೆಗೆ ಶೀಘ್ರ ಟೆಂಡರ ಕರೆದು ನೀರು ಹರಿಸಬೇಕು. ಈ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ಹರಿಸಬೇಕು ಎಂದು ಈ ಬೆಳಗಾವಿ ಚಲೋದಲ್ಲಿ ಧ್ವನಿ ಮೊಳಗಲಿದೆ ಎಂದು ಮುದ್ದೇಬಿಹಾಳ ಹಸಿರು ಸೇನೆ ರೈತ ಸಂಘ ಹೇಳಿದೆ.

  • ಮುದ್ದೇಬಿಹಾಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ

    ಮುದ್ದೇಬಿಹಾಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ. ಆರ್ . ಗವಾಯಿ ಮೇಲೆ ಶೂ ಎಸೆದ ಪ್ರಕರಣ ಹಾಗೂ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಮುದ್ದೇಬಿಹಾಳ ಬಂದ್ ಗೆ ಬೆಳಗ್ಗೆ ಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಮುದ್ದೇಬಿಹಾಳ ಬಸ್ ನಿಲ್ದಾಣ
    ಮುದ್ದೇಬಿಹಾಳ ಬಸ್ ನಿಲ್ದಾಣ

    ಹೌದು.. ಮುದ್ದೇಬಿಹಾಳ ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ನೂರಕ್ಕೆ ನೂರರಷ್ಟು ಬಂದ್ ಮಾಡಲಾಗಿದೆ. ಬಸವೇಶ್ವರ ವೃತ್ತದಲ್ಲಿ ಕೂಲಿ ಕಾರ್ಮಿಕರು ತಮ್ಮ ದೈನಿಂದಿನ ಕೆಲಸಕ್ಕಾಗಿ ಬಂದಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ಜನದಟ್ಟಣೆ ಕಂಡು ಬಂದರೆ, ಶಾಲೆ-ಕಾಲೇಜು ಎಂದಿನಂತೆ ಆರಂಭ ಗೊಂಡಿದ್ದರಿಂದ ವಿದ್ಯಾರ್ಥಿಗಳು ಪರದಾಡಬೇಕಾದ ಸನ್ನಿವೇಶಗಳು ಎದುರಾದವು.

    ಅಂಬೇಡ್ಕರ್ ವೃತ್ತ
    ಅಂಬೇಡ್ಕರ್ ವೃತ್ತ

    ಸರಕಾರಿ, ಖಾಸಗಿ ಶಾಲೆ, ಕಾಲೇಜುಗಳು ಕೆಲವೊತ್ತು ತೆಗೆದು ಮುಚ್ಚಿದರೆ. ಪೆಟ್ರೋಲ್ ಬಂಕ್ , ಔಷಧ ಅಂಗಡಿ, ಆಸ್ಪತ್ರೆ, ಬ್ಯಾಂಕ್ ವ್ಯವಹಾರ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆ ಸ್ಥಗಿತಗೊಂಡಿತ್ತು. ಸಾರಿಗೆ ಬಸ್ ಗಳು ರಸ್ತೆಗೆ ಇಳಿಯಲಿಲ್ಲ. ಹೋರಾಟ ಕೇಂದ್ರ ಸ್ಥಳವಾದ ಬಸವೇಶ್ವರ ಸರ್ಕಲ್ ಬಳಿ ಪ್ರತಿಭಟನಾಕಾರರು ಜಮಾಯಿಸಿದ ಬಳಿಕ ಪ್ರತಿಭಟನೆ ಕಾವು ಜೋರಾಯಿತು.

    ಕಿತ್ತೂರ ರಾಣಿ ಚೆನ್ನಮ್ಮ ವೃತ್ತ
    ಕಿತ್ತೂರ ರಾಣಿ ಚೆನ್ನಮ್ಮ ವೃತ್ತ
    ಇಂದಿರಾ ಸರ್ಕಲ್
    ಇಂದಿರಾ ಸರ್ಕಲ್

    ಇಂದಿರಾ ಸರ್ಕಲ್, ಅಂಬೇಡ್ಕರ್ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚೆನ್ನಮ್ಮ ವೃತ್ತ, ದ್ಯಾಮವ್ವಣ ಕಟ್ಟೆ, ಬಜಾರ ರಸ್ತೆ ಯಲ್ಲಿ ಯಾವುದೇ ಅಂಗಡಿಗಳನ್ನು ತೆಗೆಯದೇ ಮುದ್ದೇಬಿಹಾಳ ಬಂದ್ ಗೆ ಬೆಂಬಲವನ್ನು ಭಾಗಶಃ ಸೂಚಿಸಿದವು.

    ಗ್ರಾಮದೇವತೆ(ದ್ಯಾಮವನ) ಕಟ್ಟೆ
    ಗ್ರಾಮದೇವತೆ(ದ್ಯಾಮವನ) ಕಟ್ಟೆ

    ಕರೆ ಸ್ವೀಕರಿಸದ ತಹಶಿಲ್ದಾರ ಕೀರ್ತಿ ಚಾಲಕ್

    ಇನ್ನು ಮುದ್ದೇಬಿಹಾಳ ಬಂದ್ ಗೆ ಬಗ್ಗೆ ತಹಶಿಲ್ದಾರರನ್ನು ಸಂಪರ್ಕಿಸಿದರೆ ಕರೆ ಸ್ವೀಕರಿಸದೇ ಶಾಲಾ-ಕಾಲೇಜುಗಳ ರಜೆ ಬಗ್ಗೆ ಪ್ರತಿಕ್ರಿಯೆ ನೀಡದೆ ಕೈ ತೊಳೆದುಕೊಂಡರು. ಶಾಲೆಗಳು ಆರಂಭ ಬಗ್ಗೆ ಬಿಇಒ ಬಿ ಎಸ್ ಸಾವಳಗಿ ಅವರಿಗೆ ಸಂಪರ್ಕಿಸಿದಾಗ ಶಾಲೆಗಳನ್ನು ರಜೆ ನೀಡಲು ನಮಗೆ ಯಾವುದೇ ಅನುಮತಿ ಇರುವುದಿಲ್ಲ. ಹೀಗಾಗಿ ತಾಲೂಕಿಗೆ ತಹಶಿಲ್ದಾರರೇ ಅಂತಿಮ ನಿರ್ಧಾರ ಕೈಗೊಳ್ಳುವರು. ಶಾಲಾ ರಜೆ ನೀಡಲು ಅವರೇ ಜವಬ್ದಾರರು. ಈಗಾಗಲೇ ಮುದ್ದೇಬಿಹಾಳ ಬಂದ್ ಬಗ್ಗೆ ಶಿಕ್ಷಣ ಇಲಾಖೆಯಿಂದ ತಹಶಿಲ್ದಾರರಿಗೆ ಪತ್ರ ಬರೆದು ಈ ಬಗ್ಗೆ ಮಾಹಿತಿ ನೀಡಲಾಗಿದೆ. ತಹಶಿಲ್ದಾರರಿಂದ ಶಾಲಾ ಬಂದ್ ಬಗ್ಗೆ ನಮಗೆ ಯಾವುದೇ ಪ್ರತಿಕ್ರಿಯೇ ಬಂದಿಲ್ಲ. ಹೀಗಾಗಿ ಶಾಲೆಗಳನ್ನು ರಜೆ ಘೋಷಣೆ ಮಾಡಿಲ್ಲ ಎಂದರು.

  • ಸಚಿವ ಸ್ಥಾನಕ್ಕೆ ನೀವು ಲಾಭಿ ಮಾಡಿ ನನ್ನ ತಕರಾರಿಲ್ಲ; ಶಾಸಕ ಸಿ.ಎಸ್ ನಾಡಗೌಡ

    ಸಚಿವ ಸ್ಥಾನಕ್ಕೆ ನೀವು ಲಾಭಿ ಮಾಡಿ ನನ್ನ ತಕರಾರಿಲ್ಲ; ಶಾಸಕ ಸಿ.ಎಸ್ ನಾಡಗೌಡ

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರು ಸಿ.ಎಸ್ ನಾಡಗೌಡ ಅವರಿಗೆ ಬರುವ ಪುನರ್ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕೇಳಬಾರದು ಎಂದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಹಿಗಾಗಿ ನಾಡಗೌಡರಿಗೆ ಈಗ ಸಚಿವ ಸ್ಥಾನ ಕೇಳುವ ಹಕ್ಕಿಲ್ಲ ಎಂಬ ಇಂಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಹೇಳಿಕೆಗೆ ತೀಕ್ಷ್ಣವಾಗಿ ಶಾಸಕ ಸಿ.ಎಸ್ ನಾಡಗೌಡ ಅವರು ತಿರುಗೇಟು ನೀಡಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯಶವಂತರಾಯಗೌಡ ಪಾಟೀಲ, ಶಿವಾನಂದ ಪಾಟೀಲ್, ಎಂ.ಬಿ ಪಾಟೀಲ್ ಅವರಿಗಾಗಲಿ ಎಲ್ಲಿಯೂ ನಾನು ಸಚಿವ ಸ್ಥಾನ ನೀಡಬೇಡಿ, ನೀಡಬೇಕು ಎಂಬ ಲಾಭಿ ಮಾಡಿಲ್ಲ. ಜಿಲ್ಲೆಯಲ್ಲಿ 1981 ರಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿದ್ದೇನೆ. ಜಿಲ್ಲೆಯಲ್ಲಿ ಹಿರಿಯ ಶಾಸಕ ಹೀಗಾಗಿ ನನ್ನ ಮೀಸಲಾತಿಯಲ್ಲಿ ಸಚಿವ ಸ್ಥಾನ ಕೇಳುತ್ತಿದ್ದೆನೆ. ನೀವು ಸಹ ಹೈಕಮಾಂಡ್ ಮಟ್ಟದಲ್ಲಿ ಲಾಭಿ ನಡೆಸಿ ಇದಕ್ಕೆ ನನ್ನದು ಯಾವುದೇ ತಕರಾರಿಲ್ಲ ಎಂದರು.

    ಯಶವಂತರಾಯಗೌಡ ಅವರನ್ನು ನನ್ನ ಸ್ವಂತ ಸಹೋದರ ರೀತಿ ಇಷ್ಟು ದಿನ ಕಂಡಿದ್ದೆ, ಈಗಲೂ ಸಹ ಅದೇ ಭಾವನೆವಿದೆ. ಅದೇ ಆತ್ಮೀಯತೆವಿದೆ. ಯಾವ ದೃಷ್ಟಿಯಿಂದ ಈ ರೀತಿ ಇಂಡಿ ಶಾಸಕರು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಪಕ್ಷಕ್ಕೆ ಇಟ್ಟಿರುವ ನಿಷ್ಠೆ, ಪಕ್ಷಕ್ಕೆ ಸಲ್ಲಿಸಿದ ಸೇವೆ ಹಿನ್ನಲೆಯಲ್ಲಿ ಪಕ್ಷ ನನ್ನನ್ನು ಗುರುತಿಸಬೇಕೆಂದು ಬೇಡಿಕೆ ಇಟ್ಟಿದ್ದೇನೆ. ಯಾವುದೇ ವ್ಯಕ್ತಿಗಾಗಲಿ ಸಚಿವ ಸ್ಥಾನ ನೀಡಬೇಡಿ, ನೀಡಬೇಕು ಎಂಬ ಹೇಳಿಕೆ ಹೈಕಮಾಂಡ್ ಮಟ್ಟದಲ್ಲಿ ಆಗಲಿ ಮಾಧ್ಯಮಗಳಲ್ಲಿಯಾಗಲಿ ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದು ಶಾಸಕ ಸಿ.ಎಸ್ ನಾಡಗೌಡ ಸ್ಪಷ್ಟಪಡಿಸಿದರು.

    ಯಶವಂತರಾಯಗೌಡ ಅವರು ಸಚಿವ ಸ್ಥಾನಕ್ಕಾಗಿ ನಿಮ್ಮ ಪ್ರಯತ್ನ ನೀವು ಮಾಡಿ, ಇದಕ್ಕೆ ಅಡ್ಡಿ ಮಾಡಲ್ಲ. ಜಯಗಳಿಸಿದ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಒಗ್ಗೂಡಿ ಹೈಕಮಾಂಡ್ ಹತ್ತಿರ ಹೋಗೋಣ, ಯಾವ ವ್ಯಕ್ತಿಯನ್ನಾಗಲಿ ಸಚಿವ ಸ್ಥಾನ ನೀಡಿ ಎಂದೇಳಿ ಬರೋಣ, ಆಗ ಹೈಕಮಾಂಡ್ ಮಾಡಿದ ಮಂತ್ರಿ ಸ್ಥಾನಗಳಿಗೆ ನನ್ನ ಸಹಮತವಿದೆ.

    ಇನ್ನು ಸಿ.ಎಸ್‌. ನಾಡಗೌಡರು ಈಗಾಗಲೇ ಎರಡು ಬಾರಿ ಸಚಿವರಾಗಿದ್ದಾರೆ. ಅಲ್ಲದೇ ಈಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿದ್ದಾರೆ. ಈಗ ಸಚಿವ ಸ್ಥಾನ ಕೇಳುವುದರಲ್ಲಿ ಅರ್ಥವಿಲ್ಲ ಎಂಬ ಹೇಳಿಕೆಗೆ ಸಿಟ್ಟಾದ ಸಿ.ಎಸ್ ನಾಡಗೌಡರು ಆಗ ಸಚಿವ ಸ್ಥಾನಕ್ಕಾಗಿ ನಾನು ಅರ್ಜಿ ಹಾಕಿದವನಲ್ಲ. ಬಯಸಿದವನಲ್ಲ. ತಾನಾಗಿಯೇ ಒಮ್ಮೆ ಮಂತ್ರಿ ಸ್ಥಾನ ಒಲಿದು ಬಂದಿತ್ತು. ಈಗ ಸೋಪ್ ಮತ್ತು ಡಿಟರ್ಜಂಟ್ ನಿಗಮ ಅಧ್ಯಕ್ಷ ಸ್ಥಾನವನ್ನು ಬಿಡಬೇಕೆಂದು ಯಶವಂತರಾಯಗೌಡ ಅವರು ಆಗ್ರಹಿಸಿದರೆ ನಾಳೆಯೇ ಆ ಸ್ಥಾನದ ಪದತ್ಯಾಗ ಮಾಡುತ್ತೇನೆ. ಈ ಸ್ಥಾನವನ್ನು ನೀವು ಅಲಂಕರಿಸಬಹುದು. ನೀವು ಮಂತ್ರಿಯಾದರು ನನಗೆ ಸಂತೋಷ. ಈ ರೀತಿಯ ಬಾಲಿಷ ಹೇಳಿಕೆಯನ್ನು ನೀಡಿ ನಿಮ್ಮ ಘನತೆಯನ್ನು ಕಳೆದುಕೊಳ್ಳಬೇಡಿ ಎಂದು ನಾಡಗೌಡರು ಕಿವಿಮಾತ ಹೇಳಿದರು.

    ಈ ಹಿಂದೆ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಯಶವಂತರಾಯಗೌಡ ಅವರಿಗೆ ಬೆಂಬಲವಾಗಿ ನಿಂತವರು ಯಾರು ಎಂಬುದನ್ನು ಒಮ್ಮೆ ಸ್ಮರಿಸಿಕೊಳ್ಳಬೇಕು. ರಾಜಕೀಯದಲ್ಲಿ ಬದ್ಧತೆ ರಾಜಕಾರಣಿ ಸಿಗುವುದು ಈಗ ಅಪರೂಪ. ಸಚಿವ ಸ್ಥಾನಕ್ಕೆ ಸಿಗುವ ಎಲ್ಲಾ ಸೌಕರ್ಯಗಳನ್ನು ಸಣ್ಣವನಿರುವಾಗಲೇ ನಾನು ಅನುಭವಿಸಿದ್ದೇನೆ. ಈಗ ಸಚಿವ ಸ್ಥಾನ ಸಿಕ್ಕರೆ ಮತಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು ಎಂಬ ದೃಷ್ಟಿಯಲ್ಲಿ ಹೈಕಮಾಂಡ್ ಹತ್ತಿರ ಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದೇನೆ ಹೊರತು ಎಸಿ ಕಾರಿಗಲ್ಲ. ಬರುವ ಪುನರ್ ಸಚಿವ ಸಂಪುಟದಲ್ಲಿ ಹೈಕಮಾಂಡ್ ನನ್ನನ್ನು ಪರಿಗಣಿಸಿ ಮಂತ್ರಿ ಸ್ಥಾನ ನೀಡುತ್ತಾರೆ ಎಂಬ ಭರವಸೆವಿದೆ ಎಂದು ಶಾಸಕ ಸಿ.ಎಸ್ ನಾಡಗೌಡ ವ್ಯಕ್ತಪಡಿಸಿದರು.