Tag: Latest news

  • ಲೋಕದಾಲತ್ 2478 ಪ್ರಕರಣಗಳ ಇತ್ಯರ್ಥ

    ಲೋಕದಾಲತ್ 2478 ಪ್ರಕರಣಗಳ ಇತ್ಯರ್ಥ

    ಸತ್ಯಕಾಮ ವಾರ್ತೆ ಸುರಪುರ:
    ಇಲ್ಲಿಯ ನ್ಯಾಯಾಲಯದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ ನೇತೃತ್ವದಲ್ಲಿ ನಡೆದ ಲೋಕದಾಲತ್ ನಲ್ಲಿ ಬ್ಯಾಂಕ್ ವ್ಯಾಜ್ಯಗಳು ಸೇರಿ 2478 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.

    ಲೋಕ ಅದಾಲತ್‌ನಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮರುಳಸಿದ್ಧ ಆರಾಧ್ಯ ಅವರು ಪ್ರಕರಣ ಒಂದರ ಇತ್ಯರ್ಥದ ಸಂದರ್ಭದಲ್ಲಿ ಭಾಗವಹಿಸಿದ್ದರು.ಅಲ್ಲದೆ ಜಿಲ್ಲಾ ಎರಡನೇ ಹೆಚ್ಚವರಿ ನ್ಯಾಯಾಲಯದ ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿ,ಸುರಪುರ ಸೀನಿಯರ್ ಸಿವಿಲ್ ನ್ಯಾಯಾಧೀಶರಾದ ಫಕಿರವ್ವ ಕೆಳಗೇರಿ,ದಿವಾಣಿ ನ್ಯಾಯಾಧೀಶರಾದ ಬಸವರಾಜ ಅವರು ಭಾಗವಹಿಸಿದ್ದರು.

    ಲೋಕ ಅದಾಲತ್‌ನಲ್ಲಿ ಒಟ್ಟು 4229 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.ಅವುಗಳಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ 7 ಪ್ರಕರಣಗಳು ತೆಗೆದುಕೊಂಡು 4 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಇವುಗಳಲ್ಲಿ 1 ಲಕ್ಷ 50 ಸಾವಿರ ಪರಿಹಾರವನ್ನು ಕೊಡಿಸಲಾಗಿದೆ.ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 1444 ಪ್ರಕರಣಗಳು ತೆಗೆದುಕೊಂಡು 675 ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. 18 ಲಕ್ಷ 46 ಸಾವಿರ 725 ರೂಪಾಯಿಗಳ ಪರಿಹಾರ ಕೊಡಿಸಲಾಗಿದೆ.ಸಿವಿಲ್ ನ್ಯಾಯಾಲಯದಲ್ಲಿ 1437 ಪ್ರಕರಣಗಳನ್ನು ತೆಗೆದುಕೊಂಡು 928 ಪ್ರಕರಣಗಳನ್ನು ಇತ್ಯರ್ಥಗೊಳಿಸಿ,3 ಲಕ್ಷ 11 ಸಾವಿರ 824 ರೂಪಾಯಿಗಳ ಪರಿಹಾರ ಕೊಡಿಸಲಾಗಿದೆ.ಹೆಚ್ಚುವರಿ ನ್ಯಾಯಾಲಯದಲ್ಲಿ 1341 ಪ್ರಕರಣಗಳು ಕೈಗೆತ್ತಿಕೊಳ್ಳಲಾಗಿತ್ತು, ಇವುಗಳಲ್ಲಿ 865 ಪ್ರಕರಣಗಳು ಇತ್ಯರ್ಥಗೊಳಿಸಿ 7 ಲಕ್ಷ 72 ಸಾವಿರ 550 ರೂಪಾಯಿಗಳ ಪರಿಹಾರ ಕೊಡಿಸಲಾಗಿದೆ.ಅಲ್ಲದೆ ಬ್ಯಾಂಕ್ ವ್ಯವಹಾರದ 6 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 19 ಲಕ್ಷ 96 ಸಾವಿರ ರೂಪಾಯಿಗಳ ತುಂಬಿಸಲಾಗಿದೆ.

    ಒಟ್ಟು 4229 ಪ್ರಕರಣಗಳಲ್ಲಿ 2472 ಪ್ರಕರಣಗಳು ಇತ್ಯರ್ಥಗೊಂಡು 2769275 ರೂಪಾಯಿಗಳ ಪರಿಹಾರವನ್ನು ಕೊಡಿಸಲಾಗಿದೆ.ಅಲ್ಲದೆ 6 ಬ್ಯಾಂಕ್ ವ್ಯವಹಾರದ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.

    ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮರುಳಸಿದ್ಧ ಆರಾಧ್ಯ ಅವರು,ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿಯವರು,ಹಿರಿಯ ಸಿವಿಲ್ ನ್ಯಾಯಾಧೀಶರಾದ ಫಕೀರವ್ವ ಕೆಳಗೇರಿಯವರು,ದಿವಾಣಿ ನ್ಯಾಯಾಧೀಶರಾದ ಬಸವರಾಜ ಅವರು ಉಪಸ್ಥಿತರಿದ್ದರು. ವಕೀಲರಾದ ಹಿರಿಯ ನ್ಯಾಯವಾದಿ ನಿಂಗಣ್ಣ ಚಿಂಚೋಡಿ,ವಿನೋದ ಜೇವರ್ಗಿ,ಎಮ್.ಎಸ್.ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.

    ಲೋಕ ಅದಾಲತ್‌ನಲ್ಲಿ ಪತಿ ಪತ್ನಿ ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪ್ರಕರಣವೊಂದರಲ್ಲಿ ಪತ್ನಿಯೇ ಪತಿಗೆ ಒಂದಾಗಿ ಜೀವನ ಸಾಗಿಸುವ ಕುರಿತು ನ್ಯಾಯಾಧೀಶರ ಮುಂದೆ ಪತಿಗೆ ಮನವೊಲಿಸಿ ವಿಚ್ಛೇದನವನ್ನು ಕೈಬಿಟ್ಟು ನ್ಯಾಯಾಲಯದಲ್ಲಿ ಒಂದಾಗಿ ಹಾರ ಬದಲಾಯಿಸಿಕೊಂಡು ಎಲ್ಲ ನ್ಯಾಯಾಧೀಶರು ಹಾಗೂ ವಕೀಲರಿಗೆ ಸಿಹಿ ಹಂಚಿ ಒಂದಾಗಿ ನಡೆದ ಘಟನೆ ನಡೆಯಿತು.

  • ಕೇಂದ್ರದ ನಿಲುವಿಗೆ ನಿವೃತ್ತ ನೌಕರರ ಸಂಘದಿಂದ ಪ್ರತಿಭಟನೆ ವಿರೋಧ

    ಕೇಂದ್ರದ ನಿಲುವಿಗೆ ನಿವೃತ್ತ ನೌಕರರ ಸಂಘದಿಂದ ಪ್ರತಿಭಟನೆ ವಿರೋಧ

    ಸತ್ಯಕಾಮ ವಾರ್ತೆ ಹುಣಸಗಿ:
    ಪಟ್ಟಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರದಾರರ ಸಂಘದಿಂದ ಕೇಂದ್ರ ಸರಕಾರವು ನಿವೃತ್ತ ನೌಕರದಾರರ ಪಿಂಚಣಿಯ ಕುರಿತ ನಿಲುವನ್ನು ವಿರೋಧಿಸಿ, ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

    ಸಂಘದ ತಾಲೂಕು ಅಧ್ಯಕ್ಷ ನಾಗಪ್ಪ ಹಡಿಕ್ಯಾಳ ಹಾಗೂ ಪದಾಧಿಕಾರಿ ಆರ್.ಎಲ್ ಸುಣಗಾರ ಮಾತನಾಡಿ, ಕೇಂದ್ರ ಸರಕಾರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಆರ್ಥಿಕ ಬಿಲ್‌ನ್ನು ಮಂಡಿಸುವ ವೇಳೆ ೮ನೇ ವೇತನ ಆಯೋಗದ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ಮೇಲೆ ದಿ.೧-೪-೨೦೨೬ ರ ನಂತರ ನಿವೃತ್ತಿಯಾಗುವವರಿಗೆ ಮಾತ್ರ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಲಾಗುವುದು.

    ಆದರೆ ೧-೪-೨೦೨೬ರ ಪೂರ್ವದಲ್ಲಿ ನಿವೃತ್ತಿಯಾದವರಿಗೆ ಪರಿಷ್ಕರಿಸುವುದು ಕಷ್ಟಕರ ಎಂದು ಹೇಳಿರುವ ಮಾತಿನ ವಿಚಾರವು ದೇಶದ ಎಲ್ಲ ರಾಜ್ಯಗಳ ನಿವೃತ್ತ ನೌಕರರಿಗೆ ಸಂಕಷ್ಟ ತಂದೊಡ್ಡಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.

    ಒಂದು ವೇಳೆ ಈ ಮಾತಿನಂತೆ ಕೇಂದ್ರ ಸರಕಾರವು ನಿರ್ಣಯ ಅಂಗೀಕರಿಸಿದಲ್ಲಿ ನಿವೃತ್ತ ನೌಕರದಾರರಿಗೆ ತುಂಬ ತೊಂದರೆಯಾಗಲಿದೆ. ವೃದ್ದಾಪ್ಯದಲ್ಲಿರುವ ಇವರಿಗೆ ಈ ಸರಕಾರದ ನಿಲುವು ವಿವಿಧ ರೀತಿಯ ಸಂಕಷ್ಟ ತರಲಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ ಅವರು ಸರಕಾರವು ಕೂಡಲೆ ಈ ವಿಚಾರವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

    ನಂತರ ದೇಶದ ಪ್ರಧಾನಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ಹುಣಸಗಿಯ ತಹಶೀಲ್ದಾರರ ಮುಖಾಂತರ ಸಲ್ಲಿಸಲಾಯಿತು.

    ಇದಕ್ಕೂ ಮುಂಚೆ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರರ ಕಚೇರಿಯವರೆಗೂ ನಿವೃತ್ತನೌಕರರು ಮೌನವಾಗಿ ಮೆರವಣಿಗೆ ನಡೆಸಿದರು.

    ಈ ಸಂದರ್ಭ ನಿವೃತ್ತ ನೌಕರದಾರರ ಸಂಘದ ಧನೇಶನಾಯಕ ರಾಠೋಡ್, ಬಸಣ್ಣ ಗೊಡ್ರಿ, ಶಿವಪ್ಪ ಅಂಗಡಿ, ಚಂದ್ರಶೇಖರಗೌಡ ಪೊಲೀಸ್ ಪಾಟೀಲ್, ಶಾಂತಗೌಡ ಪಾಟೀಲ್, ಜಗದೀಶ ಶಹಪುರ, ಪ್ರಾಣೇಶ ಕುಲಕರ್ಣಿ, ಹುಸೇನಸಾಬ್, ಬಸಣ್ಣ ಚಿಂಚೋಳಿ, ಈಶ್ವರ ಬಡಿಗೇರ, ಬಿ.ಎಸ್. ಗೂಡಲಮನಿ ಸೇರಿದಂತೆ ಇತರರಿದ್ದರು.