Tag: Congress

  • ರಾಜಕೀಯ ವಲಯದಲ್ಲಿ ಮತ್ತೆ ಕಿಚ್ಚು ಹಚ್ಚಿದ ಯತೀಂದ್ರ ಹೇಳಿಕೆ

    ರಾಜಕೀಯ ವಲಯದಲ್ಲಿ ಮತ್ತೆ ಕಿಚ್ಚು ಹಚ್ಚಿದ ಯತೀಂದ್ರ ಹೇಳಿಕೆ

    ಕರ್ನಾಟಕ ರಾಜಕೀಯದ ವಾತಾವರಣ ಕಳೆದ ಕೆಲವು ವಾರಗಳಿಂದ ನಾಯಕತ್ವ ಬದಲಾವಣೆಯ ಚರ್ಚೆಯಿಂದ ಗದ್ದಲಗೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ನಡುವಿನ ಅಧಿಕಾರ ಹಸ್ತಾಂತರದ ಪ್ರಶ್ನೆ ಹಲವು ಬಾರಿ ಸುದ್ದಿಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದರೂ, ಎರಡೂ ನಾಯಕರು ಈ ವಿಚಾರವನ್ನು ತಣ್ಣಗಾಗಿಸುವ ಪ್ರಯತ್ನ ನಡೆಸಿದ್ದರು. ಹೈಕಮಾಂಡ್‌ನಿಂದಲೂ ಸ್ಪಷ್ಟ ಸೂಚನೆಗಳು ಬಂದ ನಂತರ ಗಾಸಿಪ್‌ಗಳಿಗೆ ಕಡಿವಾಣಬಿದ್ದಂತೆ ಕಂಡಿತ್ತು. ಆದರೆ ಇದೀಗ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

    ನಾಯಕತ್ವ ಬದಲಾವಣೆ ಇಲ್ಲ ಹೈಕಮಾಂಡ್‌ ಹೇಳಿಕೆ ಸ್ಪಷ್ಟ: ಯತೀಂದ್ರ

    ಮಾಧ್ಯಮಗಳೊಂದಿಗೆ ಮಾತನಾಡಿದ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಹೈಕಮಾಂಡ್‌ ಕೂಡಾ ಅದನ್ನು ಸ್ಪಷ್ಟಪಡಿಸಿದೆ. ನನ್ನ ತಂದೆಯೇ 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಹೇಳಿದ್ದಾರೆ.

    ಸಿಎಂ ಸಿದ್ದರಾಮಯ್ಯ ಸ್ವತಃ ಪಕ್ಷದ ಒಳಗಿನ ನಾಯಕರಿಗೆ ಹೈಕಮಾಂಡ್‌ ಹೇಳುವವರೆಗೆ ನಾನೇ ಸಿಎಂ ಎಂದು ಸೂಚನೆ ನೀಡಿದ್ದರೂ, ಈ ವಿಷಯದ ಮೇಲೆ ಮಾತನಾಡಬಾರದು ಎಂಬ ನಿರ್ದೇಶನ ನೀಡಲಾಗಿತ್ತು. ಆದರೆ ಪುತ್ರ ಯತೀಂದ್ರ ಅವರ ನೇರ ಹೇಳಿಕೆ ಮತ್ತೆ ರಾಜಕೀಯ ಚರ್ಚೆಗೆ ಹೊಸ ಆಯಾಮ ತಂದಿದೆ.

    ಬ್ರೇಕ್‌ಫಾಸ್ಟ್‌ ರಾಜಕೀಯ ಸಿಎಂ ಡಿಕೆಶಿ ಭೇಟಿ ಬಳಿಕ ಶಾಂತಿ ಕಂಡ ರಾಜಕೀಯ:

    ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ನಡುವೆ ಎರಡು ಬಾರಿ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆದಿತ್ತು. ಈ ಭೇಟಿಯ ಬಳಿಕ ಇಬ್ಬರೂ ನಾಯಕರೂ ಒಂದೇ ವೇದಿಕೆಯಲ್ಲಿ ಬಂದು, ಸರ್ಕಾರ ಸ್ಥಿರವಾಗಿದೆ, ಹೈಕಮಾಂಡ್‌ ಹೇಳಿಕೆಯ ಮೇರೆಗೆ ಎಲ್ಲವೂ ನಡೆಯುತ್ತದೆ ಎಂದು ತಿಳಿಸಿದ್ದರು. ಆದರೆ ಈಗ ಯತೀಂದ್ರ ಅವರ ಹೊಸ ಹೇಳಿಕೆ ಮತ್ತೆ ಕೋಲಾಹಲಕ್ಕೆ ಕಾರಣವಾಗಿದ್ದು, ಕುರ್ಚಿ ಕಿತ್ತಾಟ ವಿಚಾರವನ್ನು ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ತಳ್ಳಿದೆ.

  • ‘ಶಕ್ತಿ’ ಯೋಜನೆ:NWKRTCಗೆ  ಹೊರಲಾರದ ಭಾರ!

    ‘ಶಕ್ತಿ’ ಯೋಜನೆ:NWKRTCಗೆ  ಹೊರಲಾರದ ಭಾರ!

    ಉಚಿತ ಪ್ರಯಾಣವನ್ನು ಮಹಿಳೆಯರಿಗೆ ನೀಡುವ ‘ಶಕ್ತಿ’ ಯೋಜನೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದರೂ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮಾತ್ರ ಈ ಯೋಜನೆ ಭಾರವಾಗಿಬಿಟ್ಟಿದೆ. ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರ ಬಸ್ ಪ್ರಯಾಣದ ಸಂಖ್ಯೆ ಹೆಚ್ಚಾದರೂ, ಅದರ ವೆಚ್ಚವನ್ನು ಸರ್ಕಾರದಿಂದ ತೆಗೆಯುವ ಕೆಲಸ ನಿರೀಕ್ಷಿತ ವೇಗದಲ್ಲಿ ನಡೆಯದ ಕಾರಣ NWKRTC ಈಗ ಗಂಭೀರ ಆರ್ಥಿಕ ಒತ್ತಡಕ್ಕೆ ಸಿಲುಕಿದೆ.

    ಸರ್ಕಾರವು ಶಕ್ತಿ ಯೋಜನೆಯಡಿ ಬಸ್‌ಗಳಲ್ಲಿ ಪ್ರಯಾಣಿಸಿದ ಮಹಿಳೆಯರ ಟಿಕೆಟ್ ಮೊತ್ತವನ್ನು ನಿಗಮಕ್ಕೆ ಮರುಪಾವತಿ ಮಾಡಬೇಕಿದೆ. ನಿಗಮಗಳು ಪ್ರತಿಮಾಸವೂ ಈ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸುತ್ತಿವೆ. ಆದರೆ ಸರ್ಕಾರದಿಂದ ಬರುವ ಹಣ ವಾರಂವಾರ ತಡವಾಗುತ್ತಿದ್ದು, ಮುಖ್ಯವಾಗಿ ಪೂರ್ಣ ಪ್ರಮಾಣದಲ್ಲಿ ಬರದೇ ಇರುವುದು ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಪ್ರತೀ ತಿಂಗಳು ಸುಮಾರು 130 ಕೋಟಿ ರೂಪಾಯಿ ಮರುಪಾವತಿ ಪಡೆಯಬೇಕಾದ NWKRTCಗೆ ಸರ್ಕಾರದಿಂದ ಸಿಗುತ್ತಿರುವುದು 100 ರಿಂದ 110 ಕೋಟಿ ರೂಪಾಯಿಗಳಷ್ಟೇ. ಉಳಿದ ಹಣ ಹಂತ ಹಂತವಾಗಿ ಜಮೆಯಾಗುತ್ತಾ ಬಂದಿದ್ದು, ಈಗ ಬಾಕಿಯ ಮೊತ್ತ ಬರೋಬ್ಬರಿ 940 ಕೋಟಿಗೆ ಏರಿದೆ.

    ಈ ದೊಡ್ಡ ಬಾಕಿಯ ಪರಿಣಾಮ ನಿಗಮದ ದೈನಂದಿನ ಚಟುವಟಿಕೆಗಳ ಮೇಲೂ ನೇರವಾಗಿ ಬಿದ್ದಿದೆ. ಸಿಬ್ಬಂದಿಯ ಪಿಎಫ್ ಕಂತುಗಳನ್ನು ಪಾವತಿಸಲು ನಿಗಮ ಬಾಧ್ಯವಾಗಿದ್ದು, ಅದಕ್ಕೂ ಸಾಲದ ಮೊರೆ ಹೋಗಬೇಕಾಯಿತು. 646 ಕೋಟಿ ರೂಪಾಯಿ ಸಾಲ ಮಾಡಿ ಸಿಬ್ಬಂದಿಯ ಪಿಎಫ್ ಕರಾರುಗಳನ್ನು ಪೂರೈಸಿದ್ದರೂ, ಇನ್ನೂ ನಿವೃತ್ತ ನೌಕರರಿಗೆ ಕೊಡಬೇಕಾಗಿರುವ ಸುಮಾರು 45 ಕೋಟಿ ರೂಪಾಯಿ ಗ್ರಾಚ್ಯುಟಿ ಮೊತ್ತ ಬಾಕಿಯೇ ಉಳಿದಿದೆ. ವೇತನಗಳ ಪಾವತಿಗೂ ಸರ್ಕಾರದಿಂದ ಬರುವ ಹಣವೇ ಬಳಸಬೇಕಾದ ಪರಿಸ್ಥಿತಿ ಬಂದಿರುವುದರಿಂದ, ಅಭಿವೃದ್ಧಿ ಕಾರ್ಯಗಳು ಅಡ್ಡಿಯಿಲ್ಲದೆ ಸಾಗಲು ನಿಗಮದ ಬಳಿ ಹಣವೇ ಉಳಿದಿಲ್ಲ.

    ಇದೇ ಸಂದರ್ಭದಲ್ಲಿ ಬಸ್‌ಗಳ ನಿರ್ವಹಣೆ, ಹೊಸ ವಾಹನಗಳ ಖರೀದಿ, ಮೂಲಭೂತ ಸೌಲಭ್ಯಗಳ ಸುಧಾರಣೆ ಎಲ್ಲವೂ ಹಣದ ಕೊರತೆಯಿಂದ ಸ್ಥಗಿತಗೊಂಡಿವೆ. ಉಚಿತ ಪ್ರಯಾಣದ ಫಲಾನುಭವಿಗಳು ದಿನಕ್ಕೊಂದು ಹೊಸ ದಾಖಲೆ ಬರೆಯುತ್ತಿದ್ದರೂ, ಆ ಹೊಣೆಯನ್ನು ಹೊರುವ ನಿಗಮಗಳು ಮೂಲಭೂತ ಆರ್ಥಿಕ ನೆರವಿಗಾಗಿ ಸರ್ಕಾರದ ಬಾಗಿಲಲ್ಲಿ ಕಾಯಬೇಕಾದ ಪರಿಸ್ಥಿತಿ ಮೂಡಿದೆ.

    ಶಕ್ತಿ ಯೋಜನೆಯಿಂದ ಮಹಿಳೆಯರ ಸಂಚಾರ ಸುಲಭವಾಗಿರುವುದು ರಾಜ್ಯಕ್ಕೆ ಶ್ಲಾಘನೀಯ ವಿಷಯವಾದರೂ, ಅದರ ಹೊಣೆಗಾರಿಕೆಯನ್ನು ನಿಭಾಯಿಸುವ ನಿಗಮಗಳು ಆರ್ಥಿಕವಾಗಿ ಬಲಿಯಾಗಬೇಕಾದರೆ ಮರುಪಾವತಿ ವ್ಯವಸ್ಥೆಯಲ್ಲಿ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕಾದ ಅಗತ್ಯ ಸ್ಪಷ್ಟವಾಗಿದೆ.

  • ಡಿಕೆಶಿ ಸಿಎಂ ಆಗಿಯೇ ಬಿಡ್ತಾರಾ: ಕೆ.ಎನ್. ರಾಜಣ್ಣ ಪ್ರಶ್ನೆ

    ಡಿಕೆಶಿ ಸಿಎಂ ಆಗಿಯೇ ಬಿಡ್ತಾರಾ: ಕೆ.ಎನ್. ರಾಜಣ್ಣ ಪ್ರಶ್ನೆ

    ಕರ್ನಾಟಕ ರಾಜಕೀಯದಲ್ಲಿ ಸಚಿವ ಸ್ಥಾನ ಹಂಚಿಕೆ, ನಾಯಕತ್ವದ ಅಸಮಾಧಾನ, ಮತ್ತು ಭವಿಷ್ಯದ ರಾಜಕೀಯ ಕುರಿತು ಚರ್ಚೆಗಳು ಮರುಕಳಿಸುತ್ತಿರುವ ಸಮಯದಲ್ಲಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮ ಸ್ಪಷ್ಟವಾದ ಅಭಿಪ್ರಾಯವನ್ನು ತಿಳಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ತಮ್ಮನ್ನು ಒಳಪಡಿಸುವ ವಿಚಾರದ ಬಗ್ಗೆ ರಾಜಣ್ಣ ಅವರು ನೀಡಿರುವ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

    ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಬೆಂಬಲಿಗ ಶಾಸಕರು ಪುನಃ ಸಚಿವ ಸ್ಥಾನ ಕೊಡಬೇಕೆಂದು ಒತ್ತಾಯಿಸುತ್ತಿರುವ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ಮಂತ್ರಿಯಾಗಿರಲು ಇಷ್ಟಪಡುವುದಿಲ್ಲ. ಬೇರೆಯವರಿಗೆ ಅವಕಾಶ ಮಾಡಿಕೊಡಲಿ ಎಂದು ನೇರವಾಗಿ ತಿಳಿಸಿದ್ದಾರೆ.

    ಅಲ್ಲದೆ, ರಾಜಣ್ಣ ಅವರು ಈ ಹೇಳಿಕೆಯಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಹೇಳಿದ್ದು, ಡಿಕೆ ಶಿವಕುಮಾರ್ ಅವರ ಮುಂದಿನ ರಾಜಕೀಯ ದಾರಿಗೆ ಸಂಬಂಧಿಸಿದಂತೆ ಪ್ರಶ್ನೆ ಎತ್ತಿ ಅವರೇನು ಸಿಎಂ ಆಗಿಯೇ ಬಿಡುತ್ತಾರೆ ಅಂದುಕೊಂಡಿದ್ದೀರಾ? ಎಂದು ತಿರುಗೇಟು ನೀಡಿದರು.

    ನಾನು ಯಾವತ್ತೂ ಅಧಿಕಾರದ ಹಿಂದೆ ಹೋದವನಲ್ಲ. ನನಗೆ ಮತ್ತೇ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸುತ್ತಿರುವ ಎಲ್ಲ ಬೆಂಬಲಿಗರು, ಸ್ನೇಹಿತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು. ರಾಜಣ್ಣ ಅವರ ಈ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯದಲ್ಲಿ ಉಂಟಾಗುತ್ತಿರುವ ಅಸಮಾಧಾನದ ಧ್ವನಿಯನ್ನು ಮತ್ತಷ್ಟು ಒತ್ತಿ ಹೇಳಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಪಕ್ಷದ ಹಿರಿಯ ನಾಯಕರಿಂದ ಯಾವ ರೀತಿಯ ಪ್ರತಿಕ್ರಿಯೆ ಬರಲಿದೆ ಎಂಬುದರ ಕುರಿತ ಕುತೂಹಲ ಹೆಚ್ಚಿಸಿದೆ.

  • ಗ್ಯಾರಂಟಿ ಯೋಜನೆಗಳಿಂದ ಬೇರೆ ಅನುದಾನಗಳಿಗೆ ಅಡ್ಡಿಯಾಗುತ್ತಿದೆ- ಜಮೀರ್ ಅಹ್ಮದ್

    ಗ್ಯಾರಂಟಿ ಯೋಜನೆಗಳಿಂದ ಬೇರೆ ಅನುದಾನಗಳಿಗೆ ಅಡ್ಡಿಯಾಗುತ್ತಿದೆ- ಜಮೀರ್ ಅಹ್ಮದ್

    ಸತ್ಯಕಾಮ ವಾರ್ತೆ ವಿಜಯನಗರ:

    ವಿಜಯನಗರದ ಕೂಡ್ಲಿಗಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಸಾರಿಗೆ ಸಚಿವ ಜಮೀರ್ ಅಹಮದ್ ಖಾನ್ ಮಾಡಿದ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗುತ್ತಿದೆ. ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ಜನರಿಗೆ ನೇರ ಲಾಭವಾಗುತ್ತಿದ್ದರೂ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಕಷ್ಟವಾಗುತ್ತಿದೆ ಎಂಬ ಮಾತುಗಳನ್ನು ಈಗ ಸಚಿವರೇ ಬಾಯ್ಬಿಟ್ಟಿದ್ದಾರೆ.

    ಸಭೆಯಲ್ಲಿ ಮಾತನಾಡಿದ ಜಮೀರ್‌ ಅಹಮದ್‌ ಖಾನ್ ಅವರು, ಪ್ರತಿ ವರ್ಷ ಗ್ಯಾರಂಟಿ ಯೋಜನೆಗಳಿಗೆ ಸುಮಾರು ₹55 ಸಾವಿರ ಕೋಟಿಯಿಂದ ₹60 ಸಾವಿರ ಕೋಟಿವರೆಗೆ ಅನುದಾನ ಬೇಕಾಗುತ್ತದೆ ಎಂದರು. ಈ ಮಹತ್ತರ ಮೊತ್ತವನ್ನು ಪೂರೈಸುವಲ್ಲಿ ಸರ್ಕಾರಕ್ಕೆ ಬರುವ ಒತ್ತಡವೇ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ತೊಂದರೆ ಉಂಟುಮಾಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

    ಇದೇ ಸಂದರ್ಭದಲ್ಲಿ, ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸರನ್ನು ಹೊಗಳಿದ ಸಚಿವರು, “ನಮ್ಮ ಶಾಸಕರು ತಮ್ಮ ಕ್ಷೇತ್ರದ ಜನರಿಗಾಗಿ ಯಾವ ಮಟ್ಟಕ್ಕೂ ಹೋಗ್ತಾರೆ. ಅನುದಾನಕ್ಕಾಗಿ ಕಾಲಿಗೆ ಬಿದ್ದು ಕೇಳ್ತಾರೆ. ಅಣ್ಣ, ನಮ್ಮ ಕ್ಷೇತ್ರದ ಸಮಸ್ಯೆ ಪರಿಹರಿಸ್ಬೇಕು ಅಂತ ಮನವಿ ಮಾಡ್ತಾರೆ” ಎಂದು ಹೇಳಿದರು. ಆದರೆ ಇದೇ ಮಾತಿನ ಮಧ್ಯೆ ಗ್ಯಾರಂಟಿ ಯೋಜನೆಗಳಿಂದ ಅನುದಾನ ತಡೆಯಾಗುತ್ತಿದೆ ಎಂಬ ಅಂಶವನ್ನೂ ಅವರು ಅನಿವಾರ್ಯವಾಗಿ ಒಪ್ಪಿಕೊಂಡರು.

    ಸಚಿವರ ಈ ಹೇಳಿಕೆ, ವಿಪಕ್ಷಗಳು ಹಲವು ದಿನಗಳಿಂದ ಮಾಡುತ್ತಿದ್ದ “ಗ್ಯಾರಂಟಿ ಯೋಜನೆಗಳ ಭಾರದಿಂದ ರಾಜ್ಯದ ಖಜಾನೆ ಬತ್ತಿದೆ, ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ” ಎಂಬ ಆರೋಪಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಪಟುತೆ ಕುರಿತು ನಡೆಯುತ್ತಿದ್ದ ವಾದ ವಿವಾದಕ್ಕೆ ಇದೀಗ ಸರ್ಕಾರದ ಮಂತ್ರಿಯೇ ಬಲಪಡೆಯುವಂತಹ ಹೇಳಿಕೆ ಕೊಟ್ಟಿರುವುದು ವಿಶೇಷ.

    ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಜನಸಾಮಾನ್ಯರಲ್ಲಿ ಯೋಜನೆಗಳು ಜನಪ್ರಿಯವಾದರೂ, ಆಡಳಿತಾತ್ಮಕವಾಗಿ ಹಾಗೂ ಹಣಕಾಸು ನಿರ್ವಹಣೆಯ ದೃಷ್ಟಿಯಿಂದ ಹೊಸ ಸವಾಲುಗಳು ಎದುರಾದಂತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗಳು ರಾಜ್ಯದ ಅಭಿವೃದ್ಧಿ ಗತಿಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಅನ್ನುವುದನ್ನು ಕಾದು ನೋಡಬೇಕಿದೆ.

  • ರಕ್ತದಾನ ಮಾಡಿ ಜೀವ ಉಳಿಸಿ : ಪಂಪನಗೌಡ ಕರೆ

    ರಕ್ತದಾನ ಮಾಡಿ ಜೀವ ಉಳಿಸಿ : ಪಂಪನಗೌಡ ಕರೆ

    ಸತ್ಯಕಾಮ ವಾರ್ತೆ ಯಾದಗಿರಿ:

    ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬೇಕೆಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಪಂಪನಗೌಡ ಚನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.

    ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸೋಮವಾರ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಜನುಮ ದಿನವನ್ನು ಆಚರಿಸಿ, ರಕ್ತದಾನ ಶಿಬಿರಕ್ಕೆ‌ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ರಕ್ತಹಿನತೆಯಿಂದ ಬಳಲುವವರ ಸಂಖ್ಯೆ ಅಧಿಕವಾಗಿದೆ. ಅನಾರೋಗ್ಯದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೂ ರಕ್ತದ ಕೊರತೆ ಇದ್ದು, ಈ ಮೂಲಕ ರಕ್ತದಾನ ಶಿಬಿರ ಆಯೋಜಿಸಿ ಅನುಕೂಲ ಮಾಡಿಕೊಡಲಾಗುವುದೆಂದರು.
    ರಕ್ತ ನೀಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗಿ ಮನುಷ್ಯನಿಗೆ ಹೊಸ ಚೈತನ್ಯ ಬರುತ್ತದೆ. ಹೀಗಾಗಿ ರಕ್ತ ನೀಡಲು ಹಿಂಜರಿಕೆ ಮಾಡಬಾರದೆಂದು ಪಂಪನಗೌಡ ಹೇಳಿದರು.

    ಈ‌ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ ಬಸ್ಸುಗೌಡ ಬಿಳ್ಹಾರ್, ಮಲ್ಲಣ್ಣ ದಾಸನಕೇರಿ, ಅನೀಲ್ ಹೆಡಗಿಮದ್ರಿ, ಮರೆಪ್ಪ ಬಿಳ್ಹಾರ್, ಮಲ್ಲಿಕಾರ್ಜುನ ಈಟೆ,ಸುರೇಶ ಮಡ್ಡಿ, ತಿಮ್ಮಣ್ಣ ನಾಯಕ, ಸಾಬಣ್ಣ ಬಾಡಿಯಾಳ್,ಮಲ್ಲಯ್ಯ ಕಸಬಿ, ಬಸವರಾಜ ಬುಡಯಿ,ಗುರುನಾಥ ರೆಡ್ಡಿ,ಬಾಪು ಗೌಡ ಮಾಚನೂರ್, ಮೈನುದ್ದೀನ್ ಮಿರ್ಚಿ, ಸೋಮಶೇಖರ ಮಸಕನಳ್ಳಿ ಶರಣಗೌಡ ಮಾಲಿಪಾಟೀಲ್. ಅಮರೇಶ ಜಾಕಾ, ಜಿಲ್ಲಾ‌ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸಂಜೀವಕುಮಾರ ರಾಯಚೂರಕರ್, ತಾಲೂಕು‌ ಆರೋಗ್ಯ ಅಧಿಕಾರಿ ಡಾ. ಹಣಮಂತರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು‌.
    ಸುಮಾರು 25 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.

  • ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ ಆರ್ ಐ ಕೋಟಾ ಕೋರಿ ಕೇಂದ್ರಕ್ಕೆ ಪತ್ರ ಬರೆದ ಸಚಿವ ಶರಣಪ್ರಕಾಶ್ ಪಾಟೀಲ್

    ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ ಆರ್ ಐ ಕೋಟಾ ಕೋರಿ ಕೇಂದ್ರಕ್ಕೆ ಪತ್ರ ಬರೆದ ಸಚಿವ ಶರಣಪ್ರಕಾಶ್ ಪಾಟೀಲ್

    • >ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರಿಗೆ ಪತ್ರ 
    • >ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15ರಷ್ಟು ಎನ್ ಆರ್ ಐ ಕೋಟಾ ಕೊಡಿ
    • >508 ಸೂಪರ್ ನ್ಯೂಮೆರರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರುಮಾಡುವಂತೆ ಕೇಂದ್ರಕ್ಕೆ ಒತ್ತಾಯ

    ಸತ್ಯಕಾಮ ವಾರ್ತೆ ಬೆಂಗಳೂರು:

    ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ 2025-26ನೇ ಶೈಕ್ಷಣಿಕ ವರ್ಷದಿಂದ ಅನಿವಾಸಿ ಭಾರತೀಯ (ಎನ್ ಆರ್ಐ) ಕೋಟಾ ಆರಂಭಿಸಲು ಸೂಪರ್ ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಪತ್ರ ಬರೆದಿದೆ.

    ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‍ಎಂಸಿ) ಅಧ್ಯಕ್ಷರಿಗೆ ಈಕುರಿತು ಪತ್ರ ಬರೆದಿದ್ದು, ರಾಜ್ಯದಲ್ಲಿರುವ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ 508 ಹೆಚ್ಚುವರಿ ಸೂಪರ್ ನ್ಯೂಮರರಿ (supernumerary) ಎಂಬಿಬಿಎಸ್ ಸೀಟುಗಳನ್ನು ಸೃಷ್ಟಿಸುವ ಮೂಲಕ ಶೇ 15ರಷ್ಟು ಎನ್ಆರ್ ಐ ಕೋಟಾ ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.

    ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಯುಜಿ-ಎಂಬಿಬಿಎಸ್ ವಾರ್ಷಿಕ ಮಂಜೂರಾದ ಸೀಟುಗಳ ಮೇಲೆ ಹೆಚ್ಚುವರಿ ಸೀಟುಗಳನ್ನು ರಚಿಸುವುದು ಸೂಪರ್ ನ್ಯೂಮರರಿ ಉದ್ದೇಶವಾಗಿದೆ. ಪ್ರಸ್ತಕ ವೈದ್ಯಕೀಯ ಶಿಕ್ಷಣ ಇಲಾಖೆಯಡಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳು 2023-24ನೇ ಸಾಲಿನಲ್ಲಿ 3,450 ಸೀಟುಗಳ ಸಾಮಥ್ರ್ಯವನ್ನು ಹೊಂದಿದ್ದು ಅದರಲ್ಲಿ 85% (2929 ಸೀಟುಗಳು) ಕರ್ನಾಟಕ ಕೋಟಾ ಮತ್ತು 521 ಅಂದರೆ15% ಅಖಿಲ ಭಾರತ ಕೋಟಾ ಆಗಿದೆ.

    ಈಗಾಗಲೇ ರಾಜಸ್ಥಾನ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಪುದುಚೇರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.7-15ರಷ್ಟು ಎನ್ ಆರ್ ಐ ಕೋಟಾವನ್ನು ನೀಡಿರುವ, ನಿದರ್ಶನಗಳನ್ನು ಹಾಗು ಈ ರಾಜ್ಯಗಳು ಎನ್ ಆರ್ ಐ ವಿದ್ಯಾರ್ಥಿಗಳಿಗೆ ವಾರ್ಷಿಕ 75,000 ಡಾಲರ್ ದಿಂದ 100,000 ಡಾಲರ್ ಗಿಂತ ಹೆಚ್ಚು ಶುಲ್ಕ ವಿಧಿಸಿರುವುದ್ದನು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಬಜೆಟ್ ಹಂಚಿಕೆ, ವಿದ್ಯಾರ್ಥಿಗಳ ಶುಲ್ಕ, ಕೇಂದ್ರ ಮತ್ತು ರಾಜ್ಯಅನುದಾನಗಳು ಮತ್ತು ಇತರ ದೇಣಿಗೆಗಳ ಹೊರತಾಗಿಯೂ ರಾಜ್ಯದ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು ಹಣದ ಕೊರತೆಯನ್ನು ಎದುರಿಸುತ್ತಿವೆ ಎಂದು ಪಾಟೀಲ್ ಪತ್ರದಲ್ಲಿ ಹೇಳಿದ್ದಾರೆ.

    ಕರ್ನಾಟಕದಲ್ಲಿ ಎನ್ ಆರ್ ಐ ಕೋಟಾ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಮಾತ್ರ ಅನುಮತಿಯಿದ್ದು, ಪ್ರತಿ ವಿದ್ಯಾರ್ಥಿ ವಾರ್ಷಿಕ 1 ಕೋಟಿ ರೂ ಯಿಂದ 2.5 ಕೋಟಿ ರೂ. ಕೋರ್ಸ್ ಶುಲ್ಕ ಪಾವತಿಸಬೇಕಾಗುತ್ತದೆ. ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ ಎನ್ ಆರ್ ಐ ಕೋಟಾ ಜಾರಿಯಾದಲ್ಲಿ ವಿದ್ಯಾರ್ಥಿಗೆ ವಾರ್ಷಿಕ ರೂ. 25 ಲಕ್ಷ ಶುಲ್ಕ ನಿಗದಿಪಡಿಸಬಹುದು, ಇದು ವೈದ್ಯಕೀಯ ಶಿಕ್ಷಣ ಇಲಾಖೆಗೆ ಮೊದಲ ವರ್ಷಕ್ಕೆ 127 ಕೋಟಿ ರೂ ಮತ್ತು 5ನೇ ವರ್ಷಕ್ಕೆ 571.5 ಕೋಟಿ ರೂ. ಸಂದಾಯವಾಗುತ್ತದೆ. ಈ ಸಂಸ್ಥೆಗಳನ್ನು ಶ್ರೇಷ್ಠತೆಯ ಕೇಂದ್ರವನ್ನಾಗಿ ಮಾಡಲು, ಗುಣಮಟ್ಟದ ಶಿಕ್ಷಣ, ತರಬೇತಿ, ನಿರ್ವಹಣೆ, ವೈದ್ಯಕೀಯ ಉಪಕರಣಗಳು, ಔಷಧಗಳ ಖರೀದಿ, ರೋಗಿಗಳ ಹೊರೆ ನಿರ್ವಹಣೆ, ಮೂಲಸೌಕರ್ಯ ಸುಧಾರಣೆ, ಅಧ್ಯಾಪಕರ ಸಾಮರ್ಥ್ಯ ಮತ್ತು ಸಂಶೋಧನೆಗೆ ಎನ್‌ಆರ್‌ಐ ಕೋಟಾದ ಮೂಲಕ ಹೆಚ್ಚುವರಿ ಹಣದ ಅಗತ್ಯವಿದೆ ಎಂದು ಸಚಿವರು ಪ್ರತಿಪಾದಿಸಿದ್ದಾರೆ.

    ಲಭ್ಯವಿರುವ ವಾರ್ಷಿಕ ಸೀಟುಗಳ ಒಳಗೆ ಎನ್ ಆರ್ ಐ ಕೋಟಾವನ್ನು ರಚಿಸುವುದು ಕಾರ್ಯಸಾಧ್ಯವಲ್ಲ. ಹಾಗೆ ಮಾಡಿದರೆ ಬಡವರು ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಕಡಿಮೆ ಸೀಟು ಸೃಷ್ಟಿಯಾಗುತ್ತವೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ನಾವು ವಿರೋಧ ಎದುರಿಸಬೇಕಾಗುತ್ತದೆ ಎಂದು ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ರಾಜ್ಯದಲ್ಲಿರುವ ಸರ್ಕಾರಿ ಪಶು ವೈದ್ಯಕೀಯ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು 15% ಎನ್ ಆರ್ ಐ ಕೋಟಾವನ್ನು ಹೊಂದಿವೆ. ಎನ್ ಆರ್ ಐ ಕೋಟಾದಿಂದ ಈ ವಿಶ್ವವಿದ್ಯಾಲಯಗಳು ಉತ್ತಮ ಸೌಲಭ್ಯಗಳು ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಹಾಯ ಮಾಡುತ್ತವೆ ಎಂದು ಯುಜಿಸಿ ಅಧ್ಯಕ್ಷರಿಗೆ ಸಚಿವರು ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

    2025-26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 15% ಎನ್ ಆರ್ ಐ ಕೋಟಾವನ್ನು ಪ್ರಾರಂಭಿಸಲು ರಾಜ್ಯದ ಪ್ರಸ್ತಾವನೆಗೆ ಅನುಮತಿ ಸಿಗುತ್ತದೆ ಎಂಬ ಭರವಸೆಯನ್ನು ಶರಣಪ್ರಕಾಶ್ ಪಾಟೀಲ್ ವ್ಯಕ್ತಪಡಿಸಿದ್ದಾರೆ.

     

  • ಲಂಚ ಪಡೆಯುವ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಡಿಸಿಎಂ ಡಿ. ಕೆ.ಶಿವಕುಮಾರ್

    ಲಂಚ ಪಡೆಯುವ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಡಿಸಿಎಂ ಡಿ. ಕೆ.ಶಿವಕುಮಾರ್

    ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿಯಲ್ಲಿ ಸೋಮವಾರ ನಡೆದ “ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಇದಕ್ಕೂ ಮೊದಲು ಕಾರ್ಯಕ್ರಮದ ಉದ್ದೇಶ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಕ್ರಿಯೆ ಕುರಿತು ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಎಂಎಲ್ಸಿ ರವಿ, ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಸಿಇಓ ದಿಗ್ವಿಜಯ್ ಸಿಂಗ್ ಬೋಡಕೆ, ಎಸ್ಪಿ ಕಾರ್ತಿಕ್ ರೆಡ್ಡಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

     

    ಭೂಮಿ, ಮನೆ, ನಿವೇಶನ ರಹಿತರು, ರೈತರ ಕಷ್ಟಗಳಿಗೆ ಸ್ಥಳದಲ್ಲೇ ಪರಿಹಾರ; ಲಂಚ ಪಡೆಯುವ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಡಿಸಿಎಂ ಡಿ. ಕೆ.ಶಿವಕುಮಾರ್

    ಚನ್ನಪಟ್ಟಣ, ಜೂನ್ 24: 

    “ವಿವಿಧ ಸಮಸ್ಯೆ ಹೊತ್ತು ಬಂದವರಿಗೆ ಸ್ಥಳದಲ್ಲೇ ಪರಿಹಾರ. ರೈತರ ಜಮೀನುಗಳಿಗೆ ಖಾತೆ ಮಾಡಿಕೊಡಲು ಒಂದು ರೂಪಾಯಿ ಲಂಚ ಮುಟ್ಟುವಂತಿಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ” – ಇದು ಚನ್ನಪಟ್ಟಣದ ಜಿಲ್ಲಾ ಪಂಚಾಯ್ತಿ ಮಟ್ಟದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ “ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದ ಒಟ್ಟು ಚಿತ್ರಣ.

    ಕೋಡಂಬಳ್ಳಿ ಹಾಗೂ ಅಕ್ಕೂರು ಜಿಲ್ಲಾ ಪಂಚಾಯ್ತಿ ಮಟ್ಟದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಕ್ಷೇತ್ರದ ಜನರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ವ್ಯಕ್ತವಾದ ಪ್ರಮುಖ ಸಮಸ್ಯೆಗಳಿಗೆ ಶಿವಕುಮಾರ್ ಅವರು ಸ್ಪಂದಿಸಿದ ರೀತಿ ಹೀಗಿತ್ತು:

    ಜೆ. ಬ್ಯಾಡರಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಖಾತೆ ಮಾಡಿಕೊಡಲು 15- 20 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಪೂರ್ಣಿಮಾ ಅವರು ದೂರು ನೀಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು “ಲಂಚ ಪಡೆಯುವ ಪಿಡಿಓ, ಗ್ರಾಮ ಲೆಕ್ಕಿಗರು ಬೇರೆ ಜಾಗ ಹುಡುಕಿಕೊಳ್ಳಿ. ನನ್ನ ಕ್ಷೇತ್ರದ ಜನರಿಗೆ ತೊಂದರೆ ಆಗಬಾರದು” ಎಂದರು.

    ಲಂಚ ಪಡೆಯುವ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಡಿಸಿಎಂ ಡಿ. ಕೆ.ಶಿವಕುಮಾರ್

    “ಮುಂದಿನ 15 ದಿನಗಳಲ್ಲಿ ಲಂಚ ಪಡೆಯುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ಈ ಬಗ್ಗೆ ದೂರುಗಳು ಬರಬಾರದು” ಎಂದು ಜಿಲ್ಲಾ ಪಂಚಾಯತಿ ಸಿಇಓ ದಿಗ್ವಿಜಯ ಬೋಡಕೆ ಅವರಿಗೆ ಖಡಕ್ ಸೂಚನೆ ನೀಡಿದರು.

    ಶ್ರವಣಯ್ಯನ ತೋಪಿನ ಸುಶೀಲ, ರತ್ನಮ್ಮ, ರಾಜಮ್ಮ, ಚಿಕ್ಕತಾಯಮ್ಮ ಸೇರಿದಂತೆ 21 ಕ್ಕೂ ಹೆಚ್ಚು ಜನ ಕಳೆದ 10 ವರ್ಷಗಳಿಂದ ಮನೆಗಳಿಗೆ ಹಕ್ಕುಪತ್ರ ನೀಡುತ್ತಿಲ್ಲ ಎಂದು ದೂರಿದಾಗ, “ಮುಂದಿನವಾರದೊಳಗೆ ಇವರಿಗೆ ಹಕ್ಕುಪತ್ರಗಳನ್ನು ನೀಡಬೇಕು” ಎಂದು ಹೇಳಿದರು. ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿಗಳು ಮುಂದಿನವಾರ ಖುದ್ದಾಗಿ ನಾನೇ ಬಂದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದರು.

    ನಿಮ್ಮನ್ನು ನೋಡಲು ಮಾತ್ರ ಬಂದಿದ್ದೇನೆ

    “ಅರ್ಜಿ ಎಲ್ಲಿ, ಏನು ಸಮಸ್ಯೆ” ಎಂದು ಡಿಸಿಎಂ ಅವರ ಪ್ರಶ್ನೆಗೆ ಉತ್ತರಿಸಿದ ಚನ್ನಪಟ್ಟಣದ ನಿವಾಸಿ ಶಿವಗಂಗಮ್ಮ, “ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಶಕ್ತಿ ಯೋಜನೆಯಿಂದ ನನಗೆ ತುಂಬಾ ಒಳ್ಳೆಯದಾಗಿದೆ, ನನ್ನದು ಏನೂ ಸಮಸ್ಯೆ ಇಲ್ಲ. ನಿಮ್ಮನ್ನು ನೋಡಲು ಮಾತ್ರ ಬಂದಿದ್ದೇನೆ” ಎಂದಾಗ ಡಿಸಿಎಂ ನಕ್ಕು ಹಿರಿಯ ಜೀವದ ಆಶೀರ್ವಾದ ಪಡೆದು “ನಿನ್ನಂತೆ ಎಲ್ಲರ ಸಮಸ್ಯೆಯು ಇಲ್ಲದಂತೆ ಆಗಲಿ ಕಣವ್ವ” ಎಂದರು.

    ಹುಣಸನಹಳ್ಳಿಯ ಬಿಸಿಲಮ್ಮ ದೇವಿ ದೇವಸ್ಥಾನದ ಮಾಳಿಗೆ ಸೋರುತ್ತಿದೆ, ಸೇವಾ ಸಮಿತಿಯನ್ನು ಅಭಿವೃದ್ಧಿ ಸಮಿತಿಯನ್ನಾಗಿ ಪರಿವರ್ತಿಸಲು ಅನುವು ಮಾಡಿಕೊಡಬೇಕು ಎನ್ನುವ ಮನವಿಗೆ, ” ದೇವಸ್ಥಾನಕ್ಕೆ ಸಂಬಂಧಪಟ್ಟ ಜಮೀನಿನಲ್ಲಿ ಕಟ್ಟಿರುವ ತೆಂಗಿನ ನಾರಿನ ಕಾರ್ಖಾನೆಗೆ ಪರ್ಯಾಯ ಜಾಗ ಕಲ್ಪಿಸಿ ಅಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಹಾಗೂ ನಿಮ್ಮ ಎಲ್ಲಾ ಮನವಿಗಳಿಗೆ ಪರಿಹಾರ ನೀಡಲಾಗುವುದು” ಎಂದು ಭರವಸೆ ನೀಡಿದರು.

    ಕಾಲಿನ ಸ್ವಾಧೀನ ಕಳೆದುಕೊಂಡಿರುವ ಕರಲಹಳ್ಳಿಯ ವಿಕಲಚೇತನ ಪುಟ್ಟರಾಜು ಅವರಿಗೆ “ಸ್ವಂತ ಉದ್ಯೋಗ ಮಾಡಲು 1 ಲಕ್ಷ ಹಣ ಬರುವಂತೆ ಮಾಡುತ್ತೇನೆ. ಜಿಲ್ಲಾ ಕಾಂಗ್ರೆಸ್ ಪಕ್ಷದ ನಾಯಕರನ್ನು ಭೇಟಿಯಾಗು, ಅವರು ನನ್ನ ಪರವಾಗಿ ನಿನಗೆ ಸಹಾಯ ಮಾಡುತ್ತಾರೆ” ಎಂದರು. ಪುಟ್ಟರಾಜುವಿಗೆ ಸಹಾಯ ಮಾಡಬೇಕು ಎಂದು ಜಿಲ್ಲಾ ನಾಯಕರಿಗೆ ಸೂಚನೆ ನೀಡಿದರು.

    ಸರ್ಕಾರಿ ಕೆಲಸ ಕೊಡಿಸಲು ಆಗುವುದಿಲ್ಲ

    ಸರ್ಕಾರಿ ಕೆಲಸ ಕೊಡಿಸಿ ಎಂಬ ವೈ.ಟಿ. ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜು ಮನವಿಗೆ, “ಸರ್ಕಾರಿ ಕೆಲಸ ಕೊಡಿಸಲು ಆಗುವುದಿಲ್ಲ. ಏನಾದರೂ ಸ್ವಯಂ ಉದ್ಯೋಗ ಮಾಡು” ಎಂದು ಹೇಳಿದರು.

    ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಕರೆ ಮಾಡಿ ಪರಿಹಾರ ಸೂಚನೆ

    ಕೊಂಡಾಪುರ ಕೃಷ್ಣ, ಜಮೀನು ನನ್ನ ಹೆಸರಿಗೆ ಆಗಿ 5 ವರ್ಷಗಳು ಕಳೆದರೂ ಖಾತೆ ನೀಡುತ್ತಿಲ್ಲ ಎಂದು ಹೇಳಿದಾಗ, ಪಕ್ಕದಲ್ಲೇ ಇದ್ದ ಜಿಲ್ಲಾಧಿಕಾರಿಗಳು ಡಿಸಿಎಂ ಸೂಚನೆ ಮೇರೆಗೆ ತಕ್ಷಣ ಕಂದಾಯ ಅಧಿಕಾರಿಗೆ ಕರೆ ಮಾಡಿ ಕೂಡಲೇ ದಾಖಲೆ ನೀಡುವಂತೆ ತಿಳಿಸಿದರು.

    ಚನ್ನಪಟ್ಟಣ ತಾಲ್ಲೂಕಿನ ಅಂಗನವಾಡಿ ಕಾರ್ಯಕಾರ್ಯಕರ್ತೆಯರು ಎಲ್ ಕೆಜಿ, ಯುಕೆಜಿ ಶಿಕ್ಷಕರಾಗಿ ನಮ್ಮನ್ನೇ ಮುಂದುವರೆಸಿ ಎಂದು ಮನವಿ ಮಾಡಿದಾಗ, “ಇದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕು” ಎಂದರು.

    ಅಂಬಾಡಳ್ಳಿಯ ರೇಣುಕಮ್ಮ, ಮಾದಾಪುರ ಗ್ರಾಮದ ಚಿಕ್ಕಮ್ಮ ಒಂದು ವರ್ಷ ಕಳೆದರೂ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದಾಗ “ಮುಂದಿನ ತಿಂಗಳು ಬರುವಂತೆ ಮಾಡುತ್ತೇನೆ” ಎಂದು ಭರವಸೆ ನೀಡಿದರು.

    ಪೋಡಿ, ಪಹಣಿ, ಬಗರ್ ಹುಕುಂ, ವಸತಿ ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮನವಿಗಳು ಸಲ್ಲಿಕೆಯಾದವು.