Tag: CM Siddaramaiah

  • ಪವರ್ ಶೇರಿಂಗ್ ಗೊಂದಲದ ಮಧ್ಯೆ ಅಹಿಂದ ಕಾರ್ಡ್‌

    ಪವರ್ ಶೇರಿಂಗ್ ಗೊಂದಲದ ಮಧ್ಯೆ ಅಹಿಂದ ಕಾರ್ಡ್‌

    ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಒಳಾಂಗಣ ಪವರ್ ಶೇರಿಂಗ್ ಗೊಂದಲ ದಿನದಿಂದ ದಿನಕ್ಕೆ ತೀವ್ರವಾಗುತ್ತಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಂದ್ರಬಿಂದು ಮಾಡಿಕೊಂಡು ಮತ್ತೊಮ್ಮೆ ಅಹಿಂದ ರಾಜಕೀಯ ಸಕ್ರಿಯವಾಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ. ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಒಟ್ಟುಗೂಡಿಸಿದ ಅಹಿಂದ ಚಳವಳಿ ಮೂಲಕ ಸಿದ್ದರಾಮಯ್ಯ ತಮ್ಮ ರಾಜಕೀಯ ಬಲವನ್ನು ಮತ್ತೆ ಒತ್ತಿ ಹೇಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

    ಈ ಹಿನ್ನಲೆಯಲ್ಲಿ, ಸಿಎಂ ಸಿದ್ದರಾಮಯ್ಯ ಆಪ್ತ ವಲಯವು ಬೆಂಗಳೂರಿನಲ್ಲಿ ಭಾರೀ ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಾಂಗ್ರೆಸ್ ಪಕ್ಷದ ಒಳಗಿನ ನಾಯಕತ್ವದ ಚರ್ಚೆ, ಮುಂದಿನ ರಾಜಕೀಯ ದಿಕ್ಕು ಹಾಗೂ ಸಿಎಂ ಸ್ಥಾನಕ್ಕೆ ಸಂಬಂಧಿಸಿದ ಊಹಾಪೋಹಗಳ ನಡುವೆ ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

    ಜನವರಿ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲೇ ಹಿಂದುಳಿದ ವರ್ಗಗಳ ಒಕ್ಕೂಟದ ನೇತೃತ್ವದಲ್ಲಿ ಅಹಿಂದ ಸಮಾವೇಶ ಆಯೋಜಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಸಮಾವೇಶದ ಮುಖ್ಯ ಅಜೆಂಡಾವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ‘ಅಹಿಂದ ರತ್ನ’ ಎಂಬ ಗೌರವಪೂರ್ಣ ಘೋಷಣೆ ಮಾಡುವ ಸಿದ್ಧತೆ ನಡೆದಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

    ಈ ಅಹಿಂದ ಸಮಾವೇಶಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಮ್ಮತಿ ನೀಡುತ್ತದೆಯೇ? ಅಥವಾ ಹಾಸನ ಸಮಾವೇಶದಂತೆ ಈ ಬಾರಿ ಕೂಡ ಪಕ್ಷದ ಕೇಂದ್ರ ನಾಯಕತ್ವವೇ ವೇದಿಕೆಯ ಅಸ್ತ್ರವಾಗಿ ಬಳಸಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

    ಪಕ್ಷದ ಹೈಕಮಾಂಡ್ ಸೂಚನೆಗಳನ್ನು ಮೀರಿ ಪ್ರತ್ಯೇಕ ಅಹಿಂದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವರೇ? ಅಥವಾ ಹೈಕಮಾಂಡ್ ಜೊತೆ ಸಮನ್ವಯ ಸಾಧಿಸಿ ಈ ಶಕ್ತಿ ಪ್ರದರ್ಶನ ನಡೆಯಲಿದೆಯೇ ಎಂಬುದನ್ನು ಕಾದು ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಒಟ್ಟಿನಲ್ಲಿ, ಅಹಿಂದ ಶಕ್ತಿ ಪ್ರದರ್ಶನ ಕಾಂಗ್ರೆಸ್ ಒಳರಾಜಕೀಯದಲ್ಲಿ ಯಾವ ರೀತಿಯ ತಿರುವು ತರುತ್ತದೆ ಎಂಬುದು ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದ ಪ್ರಮುಖ ಚರ್ಚೆಯ ವಿಷಯವಾಗಲಿದೆ.

  • ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುಭಾರಂಭ!ಆಡಳಿತ ಪಕ್ಷ v/s ವಿಪಕ್ಷ – ರಾಜಕೀಯ ಪೈಪೋಟಿಗೆ ಕುಂದಾನಗರಿ ರಣಭೂಮಿ!

    ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುಭಾರಂಭ!ಆಡಳಿತ ಪಕ್ಷ v/s ವಿಪಕ್ಷ – ರಾಜಕೀಯ ಪೈಪೋಟಿಗೆ ಕುಂದಾನಗರಿ ರಣಭೂಮಿ!

    ರಾಜ್ಯದ ರಾಜಕೀಯ ಭವಿಷ್ಯ ನಿರ್ಧರಿಸುವಂತೆ ಕಾಣುತ್ತಿರುವ ಬೆಳಗಾವಿ ಚಳಿಗಾಲದ ಅಧಿವೇಶನ ಇಂದು ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಿದೆ. ಕರ್ನಾಟಕ ರಾಜಕೀಯದ ಕೇಂದ್ರಬಿಂದು ಆಗಿರುವ ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜನರ ಬಿಕ್ಕಟ್ಟುಗಳು, ಸರ್ಕಾರಿ ಭರವಸೆಗಳ ಅನುಷ್ಠಾನ, ಹಾಗೂ ಸಿಎಂ ಕುರ್ಚಿ ಸುತ್ತಲಿನ ಹಗ್ಗಜಗ್ಗಾಟ ಎಲ್ಲವೂ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿವೆ. ಸರ್ಕಾರ ಮತ್ತು ವಿಪಕ್ಷಗಳ ನಡುವಿನ ಮನೋವೈಜ್ಞಾನಿಕ ಆಟ ಈಗ ಮತ್ತಷ್ಟು ಹೆಚ್ಚಾಗಿದೆ!

    10 ದಿನಗಳ ಈ ಅಧಿವೇಶನ ಡಿಸೆಂಬರ್ 19ರವರೆಗೆ ನಡೆಯಲಿದ್ದು, 21ಕ್ಕೂ ಹೆಚ್ಚು ವಿಧೇಯಕಗಳ ಮಂಡನೆಯ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

    ಬಿಜೆಪಿ–ಜೆಡಿಎಸ್ ದೋಸ್ತಿ ದಾಳಿ ಸರ್ಕಾರದ ರಕ್ಷಣಾ ಕೌಶಲ್ಯಕ್ಕೆ ಪರೀಕ್ಷೆ:

    ವಿಪಕ್ಷ ಬಿಜೆಪಿ–ಜೆಡಿಎಸ್ ಜಂಟಿ ದಾಳಿ ನಡೆಸಲು ತಂತ್ರ ರೂಪಿಸಿವೆ. ಸರ್ಕಾರವನ್ನು ಮೂಲೆಗೆ ತಳ್ಳಲು ಒಳಗಿನ ಅಸಮಾಧಾನ, ಬಣಗಾರಿಕೆ ಹಾಗೂ ನಾಯಕತ್ವ ಬದಲಾವಣೆ ಚರ್ಚೆಗಳನ್ನು ಆಯುಧವಾಗಿ ಬಳಸಿಕೊಳ್ಳಲಿವೆ.

    ಮುಂದುವರಿದ ರಾಜಕೀಯ ಬದಲಾವಣೆಗಳ ಹಿನ್ನೆಲೆಯಲ್ಲಿ ಅವಿಶ್ವಾಸ ನಿಲುವಳಿ ತರಲು ಚಿಂತನೆ ನಡೆದರೂ ಕಮಲಪಡೆ ಈಗ ಹಿಂದೆ ಸರಿದಿದೆ.

    ಅಧಿವೇಶನದ ಮೊದಲ ದಿನ ಸಂತಾಪ ಸೂಚನೆ ಬಳಿಕ ಕಲಾಪ ಮುಂದೂಡಲಾಗುತ್ತದೆ. ನಂತರದಿಂದ ಪ್ರತಿಯೊಂದು ವಿಚಾರವೂ ಸರ್ಕಾರಕ್ಕೆ ಸವಾಲಾಗುವ ಸನ್ನಿವೇಶ ನಿರ್ಮಾಣವಾಗಲಿದೆ.

    ಉತ್ತರ ಕರ್ನಾಟಕ ಪ್ರಮುಖ ಅಸ್ತ್ರ:

    ಕಳೆದ ಅಧಿವೇಶನದಲ್ಲಿ ಸರ್ಕಾರ ನೀಡಿದ್ದ ಭರವಸೆಗಳ ಅನುಷ್ಠಾನದ ಬಗ್ಗೆ ವಿಪಕ್ಷಗಳು ಕಿಡಿಗೇಡಿಯಾಗಿ ಪ್ರಶ್ನೆ ಎತ್ತಲಿವೆ. ನೀರಾವರಿ, ಬೆಳೆ ಬೆಲೆ ಹಾಗೂ ಮೂಲಭೂತ ಸೌಕರ್ಯಗಳ ವಿಚಾರಗಳು ಚರ್ಚೆಗೆ ಬರುವ ನಿರೀಕ್ಷೆಯಿದೆ.

    ಪ್ರತಿಭಟನೆಯ ಬಿಸಿ ಬೆಳಗಾವಿಯ ಬೀದಿಗಳೂ ಕದನಭೂಮಿ:

    ಅಧಿವೇಶನಕ್ಕೆ ಸಮೀಪಿಸುತ್ತಿರುವಾಗಲೇ ವಿವಿಧ ಸಂಘಟನೆಗಳು ಪ್ರತಿಭಟನೆಯ ಸಿದ್ಧತೆಯಲ್ಲಿ ಇವೆ.

    • ಕಬ್ಬು ಬೆಲೆ — ರೈತರ ಆಕ್ರೋಶ
    • ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಲೆ ಕುಸಿತ
    • 2.5 ಲಕ್ಷ ಹುದ್ದೆಗಳ ನೇಮಕಾತಿ ಬೇಡಿಕೆ

    ಒಳ ಮೀಸಲಾತಿ ವಿವಾದ ಪರಿಶಿಷ್ಟ ಸಮುದಾಯಗಳ ಪ್ರತಿಭಟನೆ:

    ಅಂಗನವಾಡಿ, ಆಶಾ ಹಾಗೂ ಗ್ರಾಮ ಪಂಚಾಯಿತಿ ನೌಕರರ ವೇತನ ಪರಿಷ್ಕರಣೆ.

    ಮಹಾರಾಷ್ಟ್ರ ಪರ ಸಂಘಟನೆಗಳ ತಗಾದೆ ಆತಂಕ.

    ಬೆಳಗಾವಿ ಅಧಿವೇಶನವೆಂದರೆ ರಾಜಕೀಯದಷ್ಟೇ ಜನಾಆಸೆಯ ವಿಷಯ! ಈ ಬಾರಿ ಕೂಡ ಆಡಳಿತ–ವಿಪಕ್ಷಗಳ ರಾಜಕೀಯ ಕಾದಾಟದ ನಡುವೆ ಜನರ ಸಮಸ್ಯೆಗಳು ಯಾವ ಮಟ್ಟಿಗೆ ಆಲಿಸಿಕೊಳ್ಳಲಾಗುತ್ತವೆ ಎಂಬುದೇ ದೊಡ್ಡ ಪ್ರಶ್ನೆ