ಹುಣಸಗಿ: ತಾಲೂಕಿನ ಜೋಗುಂಡಬಾವಿ ಗ್ರಾಮದಲ್ಲಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ 17 ವರ್ಷದ ಜಗದೀಶ ಎಂಬ ಬಾಲಕನ ಶವವನ್ನು ಹೊರತೆಗೆಸಿ ಮರು ಶವಪರೀಕ್ಷೆ ನಡೆಸಲಾಯಿತು.
ಜಗದೀಶ, ಯಮನಪ್ಪ ಇಂಗಳಗಿ ಮತ್ತು ದುರ್ಗವ್ವ ದಂಪತಿ ಪುತ್ರ. ಏಪ್ರಿಲ್ 23ರಂದು ಗ್ರಾಮದ ಹಣಮಂತ ಅವರ ಜಮೀನಿನ ಬಾವಿಗೆ ಈಜಾಡಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ನಂತರ ಪೋಷಕರು ಹೊಲದಲ್ಲೇ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಆದರೆ ಜುಲೈ 12ರಂದು ಮಗನ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ ತಂದೆ ಯಮನಪ್ಪ ಅವರು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಪ್ರಕಾರ ಪೋಷಕರ ಸಮ್ಮುಖದಲ್ಲಿ ತಹಶೀಲ್ದಾರ್ ಎಂ. ಬಸವರಾಜ ಅವರ ನೇತೃತ್ವದಲ್ಲಿ ಶವವನ್ನು ಹೊರತೆಗೆಸಿ ಶವಪರೀಕ್ಷೆ ನಡೆಸಲಾಯಿತು. ಈ ವೇಳೆ ಪಿಎಸ್ಐ ರಾಜಶೇಖರ ಹಾಗೂ ವೈದ್ಯರು ಉಪಸ್ಥಿತರಿದ್ದರು.

