ಯಾದಗಿರಿ : ವಾಯುಭಾರ ಕುಸಿತದಿಂದಾಗಿ ಒಂದು ವಾರದವರೆಗೂ ಸುರಿದ ಸತತ ಮಳೆಗೆ ಜಿಲ್ಲೆಯ ರೈತರು ಬಿತ್ತಿದ ಹೆಸರು, ತೊಗರಿ ಮತ್ತು ಹತ್ತಿ ಇತರೆ ಬೆಳೆಗಳು ಹಾಳಾಗಿದ್ದು, ಈಗ ಆರಂಭಿಸಲಿರುವ ಸಮೀಕ್ಷೆ ಬೇಗನೆ ಮುಗಿಸಿ ಹಾನಿಗೊಳಗಾದ ರೈತರಿಗೂ ಹಾಗೂ ಮನೆಗಳು ಕುಸಿದು ಸೂರು ಕಳೆದಕೊಂಡವರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಶುಕ್ರವಾರ ಅಧಿವೇಶನದಲ್ಲಿ ಮಾತನಾಡಿದ ಅವರು, ಈ ಬೆಳೆಗಳು ರಾಶಿ ಹಂತಕ್ಕೆ ಬಂದಿದ್ದವು, ಇದಕ್ಕೆ ಸಿದ್ದರಾಗಿದ್ದ ರೈತರಿಗೆ ಈ ಮಳೆ ಬರಸಿಡಿಲು ಬಡಿದಂತೆಯೇ ಆಗಿದೆ.
ಹೆಸರು ರೈತರ ಮಿತ್ರ ಬೆಳೆ. 40 ದಿನಗಳಲ್ಲಿ ಕೈಸೇರುವ ಇದು ಮಾರಿ ಮುಂದಿನ ಬೆಳೆ ಬಿತ್ತನೆಗೆ ರೈತರು ಸಜ್ಜಾಗುತ್ತಿದ್ದರು. ಆದರೇ ಅವರ ಕನಸು ನುಚ್ಚುನೂರಾಗಿದೆ. ಕಾರಣ ರೈತರು ಉಳಿದರೇ ಎಲ್ಲರೂ ಉಳಿದಂತೇ. ಕಾರಣ ತ್ವರಿತಗಯಲ್ಲಿ ಸಮೀಕ್ಷೆ ನಡೆಸಿ ಪರಿಹಾರ ವಿತರಿಸುವ ಆಗಬೇಕೆಂದು ಶಾಸಕರು ಸಭಾಧ್ಯಕ್ಷರ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಜಿಲ್ಲೆಯ ಆರು ತಾಲೂಕುಗಳಲ್ಲಿ ಮಳೆಯಿಂದ ಮನೆಗಳು ಕುಸಿದಿವೆ. ಇದರಿಂದ ಬಡವರ ಬದುಕು ಬೀದಿಗೆ ಬಂದಿದೆ. ಕಾರಣ, ಸಂಬಂಧಪಟ್ಟ ಅಧಿಕಾರಿಗಳಿಂದ ಇದರ ಸಮೀಕ್ಷೆ ಕೂಡಾ ನಡೆಸಿ ಪರಿಹಾರ ನೀಡಬೇಕೆಂದು ತುನ್ನೂರು ಮನವಿ ಮಾಡಿದ್ದಾರೆ.

