ಕಡುಬಡವರಿಗೆ ಸೂರು ಒದಗಿಸುವ ಕೆಲಸವಾಗಲಿ : ಶಾಸಕ ತುನ್ನೂರ ಸೂಚನೆ

ಸತ್ಯಕಾಮ ವಾರ್ತೆ ಯಾದಗಿರಿ:

ಸ್ವಂತ ಮನೆ ಹೊಂದುವ ಕನಸಿನ ಕಡುಬಡವರ ಪಾಲಿಗೆ ಆಶ್ರಯ ಸಮಿತಿ ಆಶಾಕಿರಣವಾಗಬೇಕು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಸೂಚಿಸಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಬ್ಸಿಡಿ ಸಹಾಯದಿಂದ ಭೂಮಿ ಖರೀದಿ ಮಾಡಿ ಅರ್ಹರಿಗೆ ನಿವೇಶನ ಹಂಚುವ ಯೋಜನೆ ಯಶಸ್ವಿಯಾಗಲು ಎಲ್ಲರೂ ಪಕ್ಷಬೇಧ ಮರೆತು ಶ್ರಮಿಸಬೇಕು ಎಂದರು.

ಈಗಿರುವ ಆಶ್ರಯ ನಿವೇಶನಗಳ ಹಂಚಿಕೆಯಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಮಾತ್ರ ಅರ್ಹರಿಗೆ ನಿವೇಶನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

೨೦೨೫-೨೬ನೇ ಸಾಲಿನ ೨.೦ ಪಿಎಂಎವೈ (ಯು) ಅರ್ಜಿಗಳ ವಿಲೇವಾರಿ ಕುರಿತು ಸುದೀರ್ಘ ಚರ್ಚೆ ನಡೆಸಿದ ಶಾಸಕರು, ನಗರದ ಮಂಗಳಮುಖಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದರು.

ಒಟ್ಟು ೩೦೫೦ ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳನ್ನು ಶೀಘ್ರ ಪರಿಶೀಲಿಸಿ ವ್ಯಾಲಿಡೇಶನ್ ಮಾಡಲು ಸೂಚನೆ ನೀಡಿದರು, ಸರ್ವೆ ನಂ.೧೫೧/೧ರಲ್ಲಿ ೯ ಜನ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ ನೀಡುವ ನಿರ್ಣಯ ಕೈಗೊಳ್ಳಲಾಯಿತು.

ಸರ್ವೆ ನಂ.೧೫೧ರಲ್ಲಿ ಇರುವ ೪೨ ನಿವೇಶನಗಳ ಬಗ್ಗೆ ಕಾನೂನು ಸಲಹೆ ಪಡೆದು ಪರಿಶೀಲನೆ ನಡೆಸಲು ಸೂಚಿಸಿದರು. ಅಲ್ಲದೆ ಹೈಟೆನ್ಶನ್ ವೈಯರ್ ಇರುವ ಪ್ರದೇಶದಲ್ಲಿ ಮನೆಗಳಿರುವುದರಿಂದ, ಜೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ವೈರ್ ಸ್ಥಳಾಂತರ ಹಾಗೂ ರಸ್ತೆ ನಿರ್ಮಾಣದ ತ್ವರಿತ ಕ್ರಮ ಕೈಗೊಳ್ಳುವಂತೆ ಹೇಳಿದರು.

ಸರ್ವೆ ನಂ.೮೮/೬ ಮತ್ತು ೯೦/೨ರಲ್ಲಿ ಹಲವು ವರ್ಷಗಳಿಂದ ಅತಿಕ್ರಮಣ ನಡೆದಿರುವ ವಿಷಯವನ್ನು ಸದಸ್ಯರು ಗಮನಕ್ಕೆ ತಂದರು. ಅತಿಕ್ರಮಣ ಮಾಡಿದ ೭೦ ಜನರಿಗೆ ನೋಟಿಸ್ ನೀಡಲು ಶಾಸಕ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಸದಸ್ಯರು ಆಶ್ರಯ ಸಮಿತಿಗೆ ಪ್ರತ್ಯೇಕ ಕಚೇರಿ ಮಾಡುವಂತೆ ಮನವಿ ಮಾಡಿದ್ದು, ಶಾಸಕರು ಕೂಡಲೇ ಕಚೇರಿ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ನಗರಸಭೆ ಪೌರಯುಕ್ತ ಉಮೇಶ ಚೌಹಾಣ್, ಆಶ್ರಯ ಸಮಿತಿ ಸದಸ್ಯರು ಪ್ರಭಾಕರ್ ಜಿ., ಆರತಿ ಅಮರೇಶ್ ಜಾಕ, ಶಿವಕುಮಾರ್ ಕರದಳ್ಳಿ, ಇಮುನವೆಲ್ ಕ್ರಿಸ್ಟೋಫರ್ ಬೆಳ್ಳಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

apvc-iconPost Views: 6

Comments

Leave a Reply

Your email address will not be published. Required fields are marked *