ಬಿಲಾಸ್ಪುರ್ (ಛತ್ತೀಸ್ಗಢ): ಮಂಗಳವಾರ ಸಂಜೆ ಛತ್ತೀಸ್ಗಢದ ಬಿಲಾಸ್ಪುರ್ ಜಿಲ್ಲೆಯ ಲಾಲ್ಖದಾನ್ ಬಳಿ ರೈಲು ಮಾರ್ಗದಲ್ಲಿ ನಡುಗುವಂತ ಘಟನೆ ನಡೆಯಿತು. ಪ್ಯಾಸೆಂಜರ್ ರೈಲು ಹಾಗೂ ಗೂಡ್ಸ್ ರೈಲುಗಳು ಪರಸ್ಪರ ಮುಖಾಮುಖಿಯಾಗಿ ಢಿಕ್ಕಿ ಹೊಡೆದ ಪರಿಣಾಮ, ಕ್ಷಣಾರ್ಧದಲ್ಲಿ ಅನೇಕ ಬೋಗಿಗಳು ಹಳಿ ತಪ್ಪಿ ಪರಸ್ಪರದ ಮೇಲೆ ಏರಿವೆ. ಈ ಭೀಕರ ಅಪಘಾತದಲ್ಲಿ ಹಲವರು ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ನಂತರ ತಕ್ಷಣವೇ ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಕತ್ತಲಿನ ನಡುವೆಯೇ ಗಾಯಾಳುಗಳನ್ನು ಹೊರತೆಗೆದು ಸಮೀಪದ ಆಸ್ಪತ್ರೆಗಳಿಗೆ ಸಾಗಿಸುವ ಕಾರ್ಯ ನಡೆದಿದೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಡಿಕ್ಕಿಯ ತೀವ್ರತೆ ಅಷ್ಟು ಭಯಾನಕವಾಗಿತ್ತು ಎಂದು ಪ್ರತ್ಯಕ್ಷ ಸಾಕ್ಷಿಗಳು ಹೇಳಿದ್ದಾರೆ, ಬೋಗಿಗಳ ಲೋಹದ ಚೂರುಗಳು ದೂರದೂರಿಗೆ ಹಾರಿಹೋಗಿದ್ದವು. ಅಲ್ಲದೆ ಡಿಕ್ಕಿಯಿಂದ ಓವರ್ಹೆಡ್ ತಂತಿಗಳು ಕಳಚಿಕೊಂಡಿದ್ದು, ಸಿಗ್ನಲ್ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿ ಬಿಲಾಸ್ಪುರ್ ಮಾರ್ಗದ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅನೇಕ ರೈಲುಗಳು ತಡೆದಿಡಲ್ಪಟ್ಟಿದ್ದು, ಕೆಲವು ಬೇರೆ ಮಾರ್ಗಗಳಿಗೆ ತಿರುಗಿಸಲಾಗುತ್ತಿದೆ.
ಘಟನೆಯ ನಂತರ ರೈಲ್ವೆ ಇಲಾಖೆ ತುರ್ತು ತನಿಖೆಗೆ ಆದೇಶ ನೀಡಿದ್ದು, ಅಪಘಾತದ ನಿಖರ ಕಾರಣ ತಿಳಿಯುವ ಕಾರ್ಯ ಪ್ರಾರಂಭವಾಗಿದೆ. ಮೊದಲ ಹಂತದ ಮಾಹಿತಿಯ ಪ್ರಕಾರ ಸಿಗ್ನಲ್ ದೋಷ ಅಪಘಾತಕ್ಕೆ ಕಾರಣವಾಗಿರುವ ಸಾಧ್ಯತೆಗಳಿರಬಹುದು ಎಂದು ಪರಿಗಣಿಸಿದ್ದಾರೆ.
ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಜನತೆ ಕೋಪೋದ್ರಿಕ್ತರಾಗಿದ್ದು, “ಪ್ರತಿ ಕೆಲವು ತಿಂಗಳುಗಳಿಗೊಮ್ಮೆ ಈ ರೀತಿಯ ಘಟನೆಗಳು ನಡೆಯುತ್ತಿವೆ, ರೈಲ್ವೆ ಇಲಾಖೆ ನಿಜವಾಗಿಯೂ ಎಚ್ಚರದಲ್ಲಿದೆಯೇ?” ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ.
ಇದೇ ವೇಳೆ ಅಧಿಕಾರಿಗಳು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸುವ ಕಾರ್ಯ ಕೈಗೊಂಡಿದ್ದು, ಸಹಾಯವಾಣಿ ಸಂಖ್ಯೆಗಳ ಮೂಲಕ ಮಾಹಿತಿಯನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ. ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರಿಯಲಿದ್ದು, ಸಾವಿನ ನಿಖರ ಸಂಖ್ಯೆ ಹಾಗೂ ಹಾನಿಯ ಪ್ರಮಾಣವನ್ನು ಬೆಳಗ್ಗಿನ ವೇಳೆಗೆ ಬಹಿರಂಗಪಡಿಸುವ ಸಾಧ್ಯತೆ ಇದೆ.

Leave a Reply