ಧ್ರುವ ಸರ್ಜಾ ವಿರುದ್ಧ ದೂರು ದಾಖಲು

ಸದ್ಯ ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರಾದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಭಾರೀ ಅಭಿಮಾನಿ ಬಳಗ ಮತ್ತು ಆ್ಯಕ್ಷನ್ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿರುವ ಈ ನಟನ ವಿರುದ್ಧ ಇದೀಗ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ಸುದ್ದಿಯಾಗಿದೆ.

ಮಾಹಿತಿಯ ಪ್ರಕಾರ, ಮನೋಜ್ ಎಂಬ ನಿವಾಸಿಯವರು ಧ್ರುವ ಸರ್ಜಾ, ಅವರ ಮ್ಯಾನೇಜರ್, ಚಾಲಕ ಹಾಗು ಕೆಲವು ಅಭಿಮಾನಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಧ್ರುವ ಸರ್ಜಾ ವಾಸಿಸುವ ಮನೆಯ ಅಕ್ಕಪಕ್ಕದ ನಿವಾಸಿಗಳಿಗೆ ಈ ಎಲ್ಲರಿಂದ ನಿರಂತರ ತೊಂದರೆ ಆಗುತ್ತಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಪ್ರಕಾರ, ಪ್ರತಿದಿನವೂ ಧ್ರುವ ಸರ್ಜಾ ಅವರ ಮನೆಯನ್ನು ನೋಡುವುದಕ್ಕಾಗಿ ಅನೇಕ ಅಭಿಮಾನಿಗಳು ಬಂದು ಮನೆಯ ಮುಂದೆಯೇ ಬೈಕ್‌ಗಳನ್ನು ಪಾರ್ಕ್ ಮಾಡುತ್ತಾರೆ, ಧೂಮಪಾನ ಮಾಡುತ್ತಾರೆ, ಮತ್ತು ಗೋಡೆಗಳ ಮೇಲೆ ಉಗುಳುವಂತಹ ಅಸಭ್ಯ ವರ್ತನೆ ತೋರಿಸುತ್ತಿದ್ದಾರೆ. ಈ ಘಟನೆಗಳಿಂದ ಪ್ರದೇಶದ ಶಾಂತಿ ಭಂಗವಾಗಿದ್ದು, ಅಕ್ಕಪಕ್ಕದ ಜನರಿಗೆ ದಿನನಿತ್ಯ ಕಿರಿಕಿರಿ ಉಂಟಾಗುತ್ತಿದೆ ಎಂದು ಮನೋಜ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮನೋಜ್ ಬೇಡಿಕೆ ಇಟ್ಟಿದ್ದಾರೆ.

ಸದ್ಯ ಈ ದೂರಿನನ್ವಯ, ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (Non Cognizable Report) ದಾಖಲಾಗಿದ್ದು, ಪೊಲೀಸರು ವಿಷಯದ ಕುರಿತು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

ಧ್ರುವ ಸರ್ಜಾ ಅಥವಾ ಅವರ ತಂಡದಿಂದ ಈ ಕುರಿತು ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಂದಿಲ್ಲ. ಆದರೆ ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಚರ್ಚೆಗೆ ಗ್ರಾಸವಾಗಿದ್ದು, ಅಭಿಮಾನಿಗಳು ಹಾಗೂ ಸ್ಥಳೀಯರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಸಿನಿ ಲೋಕದ ಆ್ಯಕ್ಷನ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದ ಧ್ರುವ ಸರ್ಜಾ ಇತ್ತೀಚೆಗೆ ತಮ್ಮ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ರೀತಿಯ ವಿವಾದಾತ್ಮಕ ದೂರುಗಳು ಅವರ ಮೇಲೆ ಹೊಸ ಸವಾಲು ಎಸೆದಂತಾಗಿದೆ.

apvc-iconPost Views: 29

Comments

Leave a Reply

Your email address will not be published. Required fields are marked *