ಚಿತ್ರದುರ್ಗ ಬಸ್ ದುರಂತ: ಅದೃಷ್ಟವಶಾತ್ ಪಾರಾದ ಸ್ಕೂಲ್ ಟ್ರಿಪ್ ವಾಹನ

ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದ ಭೀಕರ ಬಸ್ ದುರಂತ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಮಧ್ಯರಾತ್ರಿ ವೇಳೆ ಟ್ಯಾಂಕರ್‌ ಒಂದು ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿಕೊಂಡು, ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಈ ದುರ್ಘಟನೆಯಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದು, ಸ್ಥಳದಲ್ಲಿ ಕಂಡ ದೃಶ್ಯಗಳು ಮಾನವೀಯತೆಯನ್ನು ಕಲುಷಿತಗೊಳಿಸುವಂತಿದ್ದವು.

ಅಪಘಾತದ ತೀವ್ರತೆಯನ್ನು ಕಣ್ಣಾರೆ ಕಂಡ ಮತ್ತೊಂದು ಬಸ್‌ನ ಚಾಲಕ ಹಾಗೂ ಸಿಬ್ಬಂದಿ ಹೇಳಿಕೆಗಳು ಹೃದಯವಿದ್ರಾವಕವಾಗಿವೆ. ಡಿಕ್ಕಿ ಹೊಡೆಯುತ್ತಿದ್ದಂತೆ ಬಸ್‌ನ ಡೀಸೆಲ್ ಟ್ಯಾಂಕ್ ಭಾಗದಲ್ಲಿ ಭಾರೀ ಸ್ಪಾರ್ಕ್ ಉಂಟಾಗಿ, ಬೆಂಕಿ ಕ್ಷಿಪ್ರವಾಗಿ ಬಸ್‌ನೊಳಗೆ ಹರಡಿತು. ಕೆಲವೇ ಕ್ಷಣಗಳಲ್ಲಿ ಸ್ಫೋಟದ ಶಬ್ದ ಕೇಳಿಬಂದಿದ್ದು, ಒಳಗಿದ್ದವರು ಜೀವ ಉಳಿಸಿಕೊಳ್ಳಲು ಕೂಗಾಡುತ್ತಿದ್ದ ದೃಶ್ಯ ಇನ್ನೂ ಕಣ್ಣಮುಂದೇ ಇದೆ ಎಂದು ಅವರು ಹೇಳಿದ್ದಾರೆ.

ಈ ಅಪಘಾತದ ವೇಳೆ ಅದೃಷ್ಟವಶಾತ್ ಪಾರಾದ ಒಂದು ಸ್ಕೂಲ್ ಟ್ರಿಪ್ ಬಸ್ ಕೂಡಾ ಅದೇ ಮಾರ್ಗದಲ್ಲಿ ಸಾಗುತ್ತಿತ್ತು. ಬೆಂಗಳೂರಿನಿಂದ ದಾಂಡೇಲಿಗೆ ಪ್ರವಾಸಕ್ಕೆ ಹೊರಟಿದ್ದ ಸುಮಾರು 43 ಮಕ್ಕಳು ಇದ್ದ ಬಸ್, ಅಪಘಾತಗೊಂಡ ಬಸ್ ಹಿಂದೆಯೇ ಸಾಗುತ್ತಿತ್ತು. ಸೀ ಬರ್ಡ್ ಬಸ್‌ಗೆ ಟ್ಯಾಂಕರ್ ಡಿಕ್ಕಿಯಾದ ಕ್ಷಣದಲ್ಲೇ ಸ್ಕೂಲ್ ಬಸ್ ಚಾಲಕ ಎಚ್ಚರಿಕೆಯಿಂದ ವಾಹನವನ್ನು ನಿಧಾನಗೊಳಿಸಿ ಎಡಬದಿಗೆ ನಿಲ್ಲಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಸ್ವಲ್ಪ ಮಟ್ಟಿಗೆ ಬಸ್‌ಗೆ ಹಾನಿಯಾದರೂ ಮಕ್ಕಳಿಗೆ ಯಾವುದೇ ಅಪಾಯವಾಗಿಲ್ಲ. ತಕ್ಷಣವೇ ಮಕ್ಕಳನ್ನು ಬೇರೆ ವಾಹನ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕಳಿಸಲಾಗಿದೆ.

ಅಪಘಾತದ ಬಳಿಕ ಮಾನವೀಯತೆ ಮೆರೆದ ಕೆಲವರು ಜೀವ ಉಳಿಸುವ ಪ್ರಯತ್ನಕ್ಕೆ ಧಾವಿಸಿದರು. ಕೂಗು, ಗೊಂದಲದ ನಡುವೆ ಕೆಲವರು ಬಸ್‌ಗೆ ಹತ್ತಿರ ಹೋಗಿ ಗಾಯಗೊಂಡವರನ್ನು ಹೊರಕ್ಕೆ ಎಳೆದಿದ್ದಾರೆ. ಆದರೆ ಬೆಂಕಿ ಮತ್ತಷ್ಟು ತೀವ್ರವಾಗುತ್ತಿದ್ದಂತೆ ಹತ್ತಿರ ಹೋಗುವುದೇ ಅಪಾಯಕಾರಿ ಸ್ಥಿತಿಗೆ ತಲುಪಿತ್ತು. ಮಗುವೊಂದು ಒಳಗಿದೆ ಎಂದು ತಾಯಿ ಕೂಗುತ್ತಿದ್ದ ದೃಶ್ಯ ನೋಡಿದವರು ಇನ್ನೂ ಮೌನವಾಗಿದ್ದಾರೆ.

ಈ ನಡುವೆ ಅಪಘಾತಗೊಂಡ ಬಸ್‌ನ ಸಹಾಯಕ ಕ್ಲೀನರ್ ಹೇಳಿಕೆಯೂ ಬೆಚ್ಚಿಬೀಳಿಸುವಂತಿದೆ. ಟ್ಯಾಂಕರ್ ಬಂದು ಬಸ್‌ನ ಮಧ್ಯಭಾಗಕ್ಕೆ ಭಾರಿಯಾಗಿ ಡಿಕ್ಕಿಯಾದ ವೇಗಕ್ಕೆ ಗ್ಲಾಸ್ ಒಡೆದು, ನಿದ್ದೆಯಲ್ಲಿದ್ದ ತಾನು ಹೊರಗೆ ಎಸೆಯಲ್ಪಟ್ಟಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಅದೇ ಕಾರಣಕ್ಕೆ ಪ್ರಾಣ ಉಳಿದಿದ್ದು, ಬಳಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಡೀಸೆಲ್ ಟ್ಯಾಂಕ್ ಭಾಗದಲ್ಲೇ ಡಿಕ್ಕಿಯಾಗಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ಆವರಿಸಿಕೊಂಡಿದೆ ಎಂಬುದು ಸ್ಪಷ್ಟವಾಗಿದೆ.

ದುರ್ಘಟನೆಯ ಬಳಿಕ ರಾಷ್ಟ್ರದಾದ್ಯಂತ ಸಂತಾಪ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ ಪರಿಹಾರ ಘೋಷಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದಾರೆ. ಘಟನೆಗೆ ಕಾರಣ ಪತ್ತೆ ಹಚ್ಚಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ಕೂಡಾ ನೀಡಿದ್ದಾರೆ.

ಒಟ್ಟಿನಲ್ಲಿ ಚಿತ್ರದುರ್ಗದ ಈ ದುರಂತ ರಸ್ತೆ ಸುರಕ್ಷತೆ ಕುರಿತು ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಕ್ಷಣಮಾತ್ರದ ಅಜಾಗರೂಕತೆ ಹೇಗೆ ಅನೇಕ ಕುಟುಂಬಗಳ ಬದುಕನ್ನೇ ಕತ್ತಲಿಗೆ ತಳ್ಳಬಹುದು ಎಂಬುದಕ್ಕೆ ಈ ಘಟನೆ ನೋವಿನ ಸಾಕ್ಷಿಯಾಗಿದೆ.

apvc-iconPost Views: 15

Comments

Leave a Reply

Your email address will not be published. Required fields are marked *