Category: State

  • ಕಲ್ಯಾಣ ಕರ್ನಾಟಕ ಸಂಪಾದಕರ ಧ್ವನಿ ಸರ್ಕಾರದ ಬಾಗಿಲಲ್ಲಿ ಮೊಳಗಿತು—2 ಪುಟ ಜಾಹೀರಾತಿಗೆ ಸಕಾರಾತ್ಮಕ ಬೆಳವಣಿಗೆ!

    ಕಲ್ಯಾಣ ಕರ್ನಾಟಕ ಸಂಪಾದಕರ ಧ್ವನಿ ಸರ್ಕಾರದ ಬಾಗಿಲಲ್ಲಿ ಮೊಳಗಿತು—2 ಪುಟ ಜಾಹೀರಾತಿಗೆ ಸಕಾರಾತ್ಮಕ ಬೆಳವಣಿಗೆ!

    ಸತ್ಯಕಾಮ ವಾರ್ತೆ ಬೆಂಗಳೂರು:

    ಕಲ್ಯಾಣ ಕರ್ನಾಟಕದ ಪತ್ರಿಕೆಗಳ ಧ್ವನಿ ಇದೀಗ ಸರ್ಕಾರದ ಬಾಗಿಲಲ್ಲಿ ಗಟ್ಟಿಯಾಗಿ ಮೊಳಗಿದೆ. ಹಲವು ವರ್ಷಗಳ ಆಶೆ, ಬೇಡಿಕೆ ಮತ್ತು ಹೋರಾಟಕ್ಕೆ ಹೊಸ ಆಶಾಕಿರಣ ಮೂಡಿಸಿದ್ದು, ಕಲ್ಯಾಣ ಕರ್ನಾಟಕ ಸಂಪಾದಕರ ಸಂಘದ ನಿಯೋಗವು ಮೂರು ದಿನಗಳ ಕಾಲ ಬೆಂಗಳೂರಿನ ಪ್ರವಾಸದ ವೇಳೆ ಪ್ರಮುಖ ನಾಯಕರನ್ನು ಭೇಟಿಯಾಗಿ ವಿಷಯವನ್ನು ಸರ್ಕಾರದ ಮಟ್ಟಕ್ಕೆ ತಲುಪಿಸಿದೆ. ಈ ಹೋರಾಟಕ್ಕೆ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿರುವುದು ಸಂಪಾದಕರ ಹೋರಾಟದ ಮಹತ್ತರ ಹೆಜ್ಜೆಯಾಗಿದೆ.

    ನಿಯೋಗವು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಅಜಯ್ ಸಿಂಗ್ ಅವರನ್ನು ಭೇಟಿಯಾಗಿ ಸುಮಾರು 30 ನಿಮಿಷಗಳ ಕಾಲ ವಿಸ್ತೃತ ಚರ್ಚೆ ಮಾಡಲಾಯಿತು. ಸಂಪಾದಕರ “ಕಲ್ಯಾಣ ಕರ್ನಾಟಕದ ಪತ್ರಿಕೆಗಳು ಕೇವಲ ಸುದ್ದಿಯ ವೇದಿಕೆಗಳಲ್ಲ — ಇದು ಜನರ ಧ್ವನಿ, ಹೋರಾಟದ ಶಕ್ತಿ, ಮತ್ತು ನಾಡಿನ ನಿಜವಾದ ಮುಖ” ಎಂದು ಭಾವನಾತ್ಮಕವಾಗಿ ಮನವರಿಕೆ ಮಾಡಿದರು. ಮಂಡಳಿ ಅಧ್ಯಕ್ಷರು ವಿಷಯವನ್ನು ಸಕಾರಾತ್ಮಕವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    ನಂತರ ನಿಯೋಗವು ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಾದ ಕೆ.ವಿ.ಪ್ರಭಾಕರ್ ಅವರನ್ನು ಭೇಟಿಯಾಗಿ ವಿಷಯದ ತೀವ್ರತೆಯನ್ನು ತಿಳಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು. ಅವರು ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಕ್ರಮದ ಭರವಸೆ ನೀಡಿದರು. ಅದೇ ದಿನ ವಿಧಾನಸೌಧದಲ್ಲಿ ಇರುವ ಬ್ಯಾಂಕೆಟ್ ಹಾಲ್‌ನಲ್ಲಿ ಕಲ್ಯಾಣ ಕರ್ನಾಟಕ ಸಂಪಾದಕರ ಸಂಘ ಸನ್ಮಾನ್ಯ ಶ್ರೀ ಮುಖ್ಯಮಂತ್ರಿಗಳಿಗೆ ನೇರವಾಗಿ ಮನವಿ ಪತ್ರ ಸಲ್ಲಿಸಲಾಯಿತು.

    ಈ ಪ್ರಯಾಣದ ಅತ್ಯಂತ ಪ್ರಭಾವಶೀಲ ಹಂತವೆಂದರೆ ಕಲ್ಬುರ್ಗಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರನ್ನು ಭೇಟಿಯಾದ ಕ್ಷಣ. ಸಚಿವರು ವಿಷಯದ ಗಂಭೀರತೆಯನ್ನು ಮನಗಂಡು, “ನಿಮ್ಮ ಧ್ವನಿ ನ್ಯಾಯಸಮ್ಮತವಾಗಿದೆ. ಮಂಡಳಿ ಅಧ್ಯಕ್ಷರೊಂದಿಗೆ ನೇರವಾಗಿ ಮಾತನಾಡುತ್ತೇನೆ. ಈ ಬೇಡಿಕೆಗೆ ಸ್ಪಂದನೆ ದೊರೆಯಲಿದೆ,” ಎಂದು ಸ್ಪಷ್ಟ ಭರವಸೆ ನೀಡಿದರು. ಈ ಮಾತು ಕಲ್ಯಾಣ ಕರ್ನಾಟಕ ಸಂಪಾದಕರ ಹೋರಾಟಕ್ಕೆ ಹೊಸ ಉತ್ಸಾಹ ನೀಡಿತು.

    ಈ ಹೋರಾಟದ ಮುಂಚೂಣಿಯಲ್ಲಿ ಗೌರವಾಧ್ಯಕ್ಷರು ಸುರೇಶ ಗೌರೆ, ಪ್ರಧಾನ ಕಾರ್ಯದರ್ಶಿ ಹನುಮಂತ್ ಭೋಧಾನಕರ್, ಉಪಾಧ್ಯಕ್ಷರು ಆನಂದ ಮಣ್ಣೂರ, ಚಂದ್ರಶೇಖರ ಕವಲಗಿ, ಶಿವಕುಮಾರ್ ತೊಟ್ನಲಳಿ, ಸದಸ್ಯರು ವಿಠಲ್ ಚಿಕಣಿ ಮತ್ತು ಬಾಬು ಚೌಹಾಣ್ ಇದ್ಧರು. ಎಲರ ಒಗ್ಗಟ್ಟು, ಹೋರಾಟ ಮತ್ತು ಧ್ವನಿ ಸರ್ಕಾರದ ಕಿವಿಗೆ ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

    ಸಂಘದ ಅಧ್ಯಕ್ಷರು ಹಾಗೂ ಸದಸ್ಯರು — ಮಾಧ್ಯಮ ಮಾನ್ಯತಾ ಸಮಿತಿ ಗುರುರಾಜ ಕುಲಕರ್ಣಿ ಅವರು ಘೋಷಣಾತ್ಮಕವಾಗಿ ಹೇಳಿದರು, ನಮ್ಮ ಧ್ವನಿ ಕೇವಲ ಪತ್ರಿಕೆಗಳಲ್ಲ, ಈಗ ಸರ್ಕಾರದ ಕಿವಿಯಲ್ಲೂ ಮೊಳಗುತ್ತಿದೆ. 2 ಪುಟ ಜಾಹೀರಾತು ನಮ್ಮ ಹಕ್ಕು — ಈ ಹೋರಾಟ ಕೇವಲ ಬೇಡಿಕೆಯಲ್ಲ, ಮಾಧ್ಯಮದ ಗೌರವದ ಹೋರಾಟ. ಈಗ ಹಿಂದಿರುಗುವುದಿಲ್ಲ.” “ಒಗ್ಗಟ್ಟಾಗಿದಾಗ ಪತ್ರಕರ್ತರ ಧ್ವನಿ ಗೋಡೆಗಳನ್ನೇ ಕಂಪಿಸುತ್ತದೆ. ಈ ಹೋರಾಟದ ಗೆಲುವಿನ ಬಾಗಿಲು ತೆರೆಯಲಾಗಿದೆ. ಅಂತಿಮ ನಿರ್ಧಾರ ಬರುವ ತನಕ ನಮ್ಮ ಹೋರಾಟ ತೀವ್ರಗೊಳ್ಳುತ್ತದೆ,” ಎಂದು ಸ್ಪಷ್ಟಪಡಿಸಿದರು.

    ಸಂಘವು ಮುಂದಿನ ಹಂತದಲ್ಲಿ ಮಂಡಳಿ ಅಧ್ಯಕ್ಷರು ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ಅಂತಿಮ ಮಾತುಕತೆ ನಡೆಸಲು ಸಜ್ಜಾಗಿದೆ. ಸಂಪಾದಕರ ಧ್ವನಿ ಇದೀಗ ಶಕ್ತಿ — ಸರ್ಕಾರದ ಕಿವಿಗೊಡಬೇಕಾದ ನಾದವಾಗಿದೆ.

  • ಮಹಾತ್ಮಗಾಂಧಿ ನರೇಗಾ ಯೋಜನೆಯ ಉದ್ಯೋಗ ಚೀಟಿಗೆ ಇ-ಕೆವೈಸಿ ಅಭಿಯಾನ

    ಮಹಾತ್ಮಗಾಂಧಿ ನರೇಗಾ ಯೋಜನೆಯ ಉದ್ಯೋಗ ಚೀಟಿಗೆ ಇ-ಕೆವೈಸಿ ಅಭಿಯಾನ

    ಸತ್ಯಕಾಮ ವಾರ್ತೆ ಯಾದಗಿರಿ:

    ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಕುಟುಂಬಗಳ ಜಾಬ್ ಕಾರ್ಡ್ ಮಾನ್ಯತಾ ಅವಧಿಯನ್ನು ಇ-ಕೆವೈಸಿ ಮೂಲಕ ಪೂರ್ಣಗೊಳಿಸಲಾಗುತ್ತಿದ್ದು, ಎಲ್ಲ್ಲಾ ನರೇಗಾ ಕೂಲಿ ಕಾರ್ಮಿಕರು ಈ ಅಭಿಯಾನದಲ್ಲಿ ಭಾಗವಹಿಸಿ ಕಡ್ಡಾಯವಾಗಿ ತಮ್ಮ ಜಾಬ್ ಕಾರ್ಡ್ಗೆ ಇ-ಕೆವೈಸಿ ಮಾಡಿಕೊಳ್ಳಬೇಕು ಎಂದು ಯಾದಗಿರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲವೀಶ್ ಒರಡಿಯಾ ರವರು ಮನವಿ ಮಾಡಿದ್ದಾರೆ.

    ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಆದೇಶ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೋಂದಾಯಿತ ಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್ ಅನ್ನು ಇ-ಕೆವೈಸಿ ಮೂಲಕ ಮೌಲ್ಯೀಕರಿಸುತ್ತಿದ್ದು, ನರೇಗಾ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಸಕ್ರಿಯ ಕುಟುಂಬಗಳ ಜಾಬ್ ಕಾರ್ಡ್ ಮಾನ್ಯತಾ ಅಭಿಯಾನದ ಮಾದರಿಯಲ್ಲಿ ಅತೀ ತುರ್ತಾಗಿ ಇ-ಕೆವೈಸಿ ಮೂಲಕ ಪೂರ್ಣಗೊಳಿಸಲು ಸಿಬ್ಬಂದಿಗಳಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದೆ ಎಂದರು.

    ತರಬೇತಿ ಪಡೆದ ಎಲ್ಲಾ ಸಿಬ್ಬಂದಿಗಳು ಜಾಬ್ ಕಾರ್ಡ್ಗಳಿಗೆ ಇ-ಕೆವೈಸಿ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಇ-ಕೆವೈಸಿ ಪ್ರಕ್ರಿಯೆಯಲ್ಲಿ ಕೂಲಿಕಾರ್ಮಿಕರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಮುಂದಿನ ದಿನಗಳಲ್ಲಿ ಇ-ಕೆವೈಸಿ ಮಾಡಿಕೊಳ್ಳದ ಜಾಬ್-ಕಾರ್ಡ್ಗಳು ನಿಷ್ಕ್ರಿಯವಾಗುತ್ತವೆ ಎಂದು ತಿಳಿಸಿದ್ದಾರೆ.

    ಮಹಾತ್ಮಗಾಂಧಿ ನರೇಗಾ ಯೋಜನೆಯ ಹೆಚ್ಚು ಪಾರದರ್ಶಕ ಅನುಷ್ಟಾನಕ್ಕೆ ಮತ್ತೊಂದು ಹೆಜ್ಜೆ ಇ-ಕೆವೈಸಿ ಆಗಿದ್ದು, ನರೇಗಾ ಕೂಲಿಕಾರರು, ಕಾಯಕ ಬಂಧುಗಳು ತಮ್ಮ ಜಾಬ್ ಕಾರ್ಡ್ಗಳಿಗೆ ಇ-ಕೆವೈಸಿ ಅಷ್ಟೇಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನಮ್ಮ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಶಹಾಪುರ 51944, ಸುರಪುರ 56669, ಯಾದಗಿರಿ 40934, ಗುರುಮಿಟಕಲ್ 22022, ವಡಗೇರಾ 32215 ಹಾಗೂ ಹುಣಸಗಿ 48155 ಸೇರಿ ಒಟ್ಟು 2,51,939 ಜನ ಸಕ್ರಿಯ ಕೂಲಿಕಾರ್ಮಿಕರಿದ್ದು, ಎಲ್ಲರೂ ಸಹ ತಪ್ಪದೇ ತಮ್ಮ ಜಾಬ್ ಕಾರ್ಡ್ಗೆ ಇ-ಕೆವೈಸಿ ಅಪ್ಲೇಟ್ ಮಾಡಿಕೊಳ್ಳಲು ತಿಳಿಸಿದ್ದಾರೆ.

    ಹೆಚ್ಚಿನ ಮಾಹಿತಿಗಾಗಿ ಆಯಾ ಗ್ರಾಮ ಪಂಚಾಯಿತಿ ಪಿಡಿಓ, ಕಾರ್ಯದರ್ಶಿ, ಡಿಇಒ, ಬಿಎಫ್ಟಿ, ಜಿಕೆಎಂ ಸೇರಿದಂತೆ ನರೇಗಾ ಸಿಬ್ಬಂದಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ.

  • ಸಮೀಕ್ಷೆ ವೇಳೆ ಹೆಮ್ಮಯಿಂದ ಮಾದಿಗ ಎಂದು ಬರೆಸಿ – ನೀಲೇಶ್ ಕೊಯಿನಿ

    ಸಮೀಕ್ಷೆ ವೇಳೆ ಹೆಮ್ಮಯಿಂದ ಮಾದಿಗ ಎಂದು ಬರೆಸಿ – ನೀಲೇಶ್ ಕೊಯಿನಿ

    ಸತ್ಯಕಾಮ ವಾರ್ತೆ ಗುರುಮಠಕಲ್ : 

    ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ನಡೆಸಲಾಗುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದವರು ತಪ್ಪದೆ ಭಾಗವಹಿಸಿ, ಜಾತಿ ಮತ್ತು ಉಪಜಾತಿ ಕಾಲಂನಲ್ಲಿ ಮಾದಿಗ ಎಂದೇ ನಮೂದಿಸಬೇಕು, ಕೋಡ್ 61– ಮಾದಿಗ’ ಎಂದು ತಾಲೂಕ ಮಾದಿಗ ದಂಡೋರ ಕಾರ್ಯದರ್ಶಿ ನೀಲೇಶ್ ಕೊಯಿನಿ ಹೇಳಿದರು.

    ಈ ಮೂಲಕ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚು ಮೀಸಲಾತಿ ಪಡೆಯುವ ಪ್ರಯತ್ನ ಮಾಡಬೇಕಿದೆ. ಜನಸಂಖ್ಯೆಯಲ್ಲಿ ಕಡಿಮೆ ಇರುವವರು ಅಭಿವೃದ್ಧಿಯಲ್ಲಿ ಮುಂದಿದ್ದಾರೆ. ಆದರೆ, ಜನಸಂಖ್ಯೆಯಲ್ಲಿ ಮುಂದಿರುವ ನಾವು ಅಭಿವೃದ್ಧಿಯಲ್ಲಿ ಹಿಂದುಳಿದಿದ್ದೇವೆ.

    ಸರ್ಕಾರದ ಮೂರೂ ಆಯೋಗಗಳು ಮಾದಿಗರ ಸಂಖ್ಯೆ ಹೆಚ್ಚಿದೆ, ಆದರೆ ಹಿಂದುಳಿದಿದ್ದಾರೆ ಎಂದು ಹೇಳಿವೆ. ಈಗ ಒಳ ಮೀಸಲಾತಿ ಜಾರಿಯಾಗಿದೆ. ಆದರೂ, ನಮ್ಮ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನ ನಡೆದಿದೆ. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಂಡು, ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಸಮುದಾಯದ ಜಾಗೃತರಾಗಿ ಎಂದರು.

  • ಗುಣಮಟ್ಟದ ಕೆಲಸದೊಂದಿಗೆ ನಿಗದಿತ ಅವಧಿಯಲ್ಲಿ ಮುಗಿಸಿ: ಶಾಸಕ ಪಾಟೀಲ್ ಸೂಚನೆ

    ಗುಣಮಟ್ಟದ ಕೆಲಸದೊಂದಿಗೆ ನಿಗದಿತ ಅವಧಿಯಲ್ಲಿ ಮುಗಿಸಿ: ಶಾಸಕ ಪಾಟೀಲ್ ಸೂಚನೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಗುಣಮಟ್ಟ ಕಾಮಗಾರಿ ಆಗಬೇಕು ಮತ್ತು ನಿಗದಿತ ಅವಧಿಯಲ್ಲಿ ಮುಗಿಸಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

    ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಯ ಮ್ಯಾಕ್ರೋ ಯೋಜನೆ ಅಡಿಯಲ್ಲಿ 3.48 ಕೋಟಿ ರೂ. ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಕುರಕುಂದಾದಲ್ಲಿ ಅಡಿಗಲ್ಲು ನೆರವೇರಿಸಿ ಮಾತನಾಡಿದರು.

    ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಸತಿ ನಿಲಯಗಳ ಕಟ್ಟಡಗಳ ಬೇಡಿಕೆ ಬಹುದಿನಗಳಿಂದಲ್ಲೂ ಇತ್ತು. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಬರುವ ದಿನಗಳಲ್ಲಿ ಉತ್ತಮ ಕಟ್ಟಡಗಳು ಈ ಗ್ರಾಮ ಹೊಂದಲಿದೆ ಎಂದರು.

    ರಾಜ್ಯದ ಸಮಗ್ರದ ಅಭಿವೃದ್ಧಿಗೆ ಬದ್ಧವಾಗಿದೆ. ಅದರಲ್ಲಿ ಜನರ ಆರೋಗ್ಯ ಕಾಪಾಡುವಲ್ಲಿ ವಿಶೇಷ ಕಾಳಜಿ ಹೊಂದಿದೆ ಎಂದರು.

    ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಎಸ್. ಸೂಗುರೆಡ್ಡಿ ಮಾತನಾಡಿ, ಶಾಸಕರ ಕಾಳಜಿ ಮತ್ತು ಸತತ ಪ್ರಯತ್ನದ ಫಲವಾಗಿ ಈ ಕೆಲಸ ಕಾರ್ಯರೂಪಕ್ಕೆ ಬರುತ್ತಿದೆ. ನಿಗದಿತ ಅವಧಿಯೊಳಗೆ ಕಟ್ಟಡಗಳನ್ನು ನಿರ್ಮಿಸಿಕೊಡಲಾಗುವುದೆಂದು ಹೇಳಿದರು.

    ಕಾರ್ಯಕ್ರಮದಲ್ಲಿ EO ಮಲ್ಲಿಕಾರ್ಜುನ ಸಂಗವಾರ ವಡಗೇರಾ, ತಾಲೂಕ ಆರೋಗ್ಯ ಅಧಿಕಾರಿ ರಮೇಶ ಗುತ್ತೇದಾರ, ಖಾಜಾ ಮೊನುದ್ದಿನ್ ಮಿರ್ಚಿ,ಸಾಬಣ್ಣ ಗುಂಜನೂರ್, ಬನಪ್ಪ, ಶೂಪುತ್ರಪ್ಪ ಪದ್ದಿ, ರಾಮಲಿಂಗ ಕುದರೆ, ಶರಣಬಸಪ್ಪ, ದೇವಪ್ಪ ವಟ್ಟ, ಕಾಸಿಮ್ ಮುತ್ಯಾ, ಕುರುಕುಂದಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಮುದ್ದಮ್ಮ ಗುಡುಸಾಬ, ಕುರಕುಂದಾ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಮಲ್ಲಪ್ಪ ಹಣಮಂತ ಇದ್ದರು.

  • ಸೆ.15 ರಂದು ಇಂಜಿನಿಯರ್ ದಿನಾಚರಣೆ: ಭೀಮಣ್ಣಗೌಡ ಕ್ಯಾತನಾಳ

    ಸೆ.15 ರಂದು ಇಂಜಿನಿಯರ್ ದಿನಾಚರಣೆ: ಭೀಮಣ್ಣಗೌಡ ಕ್ಯಾತನಾಳ

    ಸತ್ಯಕಾಮ ವಾರ್ತೆ ಯಾದಗಿರಿ:

    ಇಲ್ಲಿನ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಅಸೋಸಿಯೇಶನ್ ನಿಂದ ನಗರದ ವಿವೇಕಾನಂದ ನಗರದ ತಾಯಮ್ಮ ದೇವಿ, ಹನುಮಾನ ಹಾಗೂ ಈಶ್ವರ ದೇವಾಲಯದ ಸಭಾಂಗಣದಲ್ಲಿ ಸೆ. 15 ರಂದು ಮಧ್ಯಾಹ್ನ 12 ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಅವರ 164 ಜನ್ಮದಿನದಂಗವಾಗಿ ಇಂಜಿನಿಯರ್ ಡೇ ಕಾರ್ಯಕ್ರಮ‌ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇನ್ ಅಧ್ಯಕ್ಷ ಭೀಮಣ್ಣಗೌಡ ಕ್ಯಾತನಾಳ್ ತಿಳಿಸಿದ್ದಾರೆ.

    ಶುಕ್ರವಾರ ಪತ್ರಿಕಾ ಭವನದಲ್ಲಿ‌ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಿಸಿ ಹರ್ಷಲ್ ಬೋಯರ್, ಜಿಪಂ ಸಿಇಒ ಲವೀಶ್ ಓರ್ಡಿಯಾ ಮತ್ತು ಎಸ್ ಪಿ ಪ್ರಥ್ವಿಕ್ ಶಂಕರ್ ಅವರು ಭಾಗವಹಿಸುವರು. ವಿವಿಧ ಇಲಾಖೆಗಳ ಪೌರಾಯುಕ್ತ ಉಮೇಶ ಚವ್ಹಾಣ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಪೂಜಾರಿ,ಇಂಜಿನಿಯರ್ ಪ್ರಕಾಶ, ನಫೆಡ್ ರಾಷ್ಟ್ರಿಯ ಉಪಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ವಿಶ್ವೇಶ್ವರಯ್ಯ ಕಾರ್ಮಿಕ ಸಂಘದ ಅಧ್ಯಕ್ಷ ದೇವಜಿ ಯಾದವ್ ಸೇರಿದಂತೆಯೇ ಇತರರು ಅತಿಥಿಗಳಾಗಿ ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು, ಅಧಿಕಾರಿಗಳನ್ನು‌ ಮತ್ತು ಪ್ರತಿಭಾವಂತ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಗುವುದೆಂದು ಕ್ಯಾತನಾಳ್ ಹೇಳಿದರು.

    ಇದರಂಗವಾಗಿ ಸೆ.14 ರಂದು ಬೆಳಗ್ಗೆ 6.30ರಿಂದ ಇಲ್ಲಿನ ಸರ್ಕಾರಿ‌ ಡಿಗ್ರಿ ಕಾಲೇಜಿನಿಂದ ಲೋಕೋಪಯೋಗಿ ಕಚೇರಿಯವರೆಗೂ ಮ್ಯಾರಥಾನ ಹಮ್ಮಿಕೊಳ್ಳಲಾಗಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಅಸೋಸಿಯೇನ್ ಪದಾಧಿಕಾರಿಗಳಾದ ಇರ್ಫಾನ್ ಬಾದಲ್, ಸೋಮಶೇಖರ ಗಣದೂರ, ಬಸವರಾಜ ಕಲಕೇರಿ, ಲೂಕಮಾನ್ ಅಹ್ಮದ್, ಲಕ್ಷ್ಮಣ ಬಾಹುರ, ಗೋಪಿ ಸೇರಿದಂತೆಯೇ ಇತರರಿದ್ದರು.

  • ಕಡುಬಡವರಿಗೆ ಸೂರು ಒದಗಿಸುವ ಕೆಲಸವಾಗಲಿ : ಶಾಸಕ ತುನ್ನೂರ ಸೂಚನೆ

    ಕಡುಬಡವರಿಗೆ ಸೂರು ಒದಗಿಸುವ ಕೆಲಸವಾಗಲಿ : ಶಾಸಕ ತುನ್ನೂರ ಸೂಚನೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಸ್ವಂತ ಮನೆ ಹೊಂದುವ ಕನಸಿನ ಕಡುಬಡವರ ಪಾಲಿಗೆ ಆಶ್ರಯ ಸಮಿತಿ ಆಶಾಕಿರಣವಾಗಬೇಕು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಸೂಚಿಸಿದರು.

    ಇಲ್ಲಿನ ನಗರಸಭೆ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಬ್ಸಿಡಿ ಸಹಾಯದಿಂದ ಭೂಮಿ ಖರೀದಿ ಮಾಡಿ ಅರ್ಹರಿಗೆ ನಿವೇಶನ ಹಂಚುವ ಯೋಜನೆ ಯಶಸ್ವಿಯಾಗಲು ಎಲ್ಲರೂ ಪಕ್ಷಬೇಧ ಮರೆತು ಶ್ರಮಿಸಬೇಕು ಎಂದರು.

    ಈಗಿರುವ ಆಶ್ರಯ ನಿವೇಶನಗಳ ಹಂಚಿಕೆಯಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಮಾತ್ರ ಅರ್ಹರಿಗೆ ನಿವೇಶನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ೨೦೨೫-೨೬ನೇ ಸಾಲಿನ ೨.೦ ಪಿಎಂಎವೈ (ಯು) ಅರ್ಜಿಗಳ ವಿಲೇವಾರಿ ಕುರಿತು ಸುದೀರ್ಘ ಚರ್ಚೆ ನಡೆಸಿದ ಶಾಸಕರು, ನಗರದ ಮಂಗಳಮುಖಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದರು.

    ಒಟ್ಟು ೩೦೫೦ ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳನ್ನು ಶೀಘ್ರ ಪರಿಶೀಲಿಸಿ ವ್ಯಾಲಿಡೇಶನ್ ಮಾಡಲು ಸೂಚನೆ ನೀಡಿದರು, ಸರ್ವೆ ನಂ.೧೫೧/೧ರಲ್ಲಿ ೯ ಜನ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ ನೀಡುವ ನಿರ್ಣಯ ಕೈಗೊಳ್ಳಲಾಯಿತು.

    ಸರ್ವೆ ನಂ.೧೫೧ರಲ್ಲಿ ಇರುವ ೪೨ ನಿವೇಶನಗಳ ಬಗ್ಗೆ ಕಾನೂನು ಸಲಹೆ ಪಡೆದು ಪರಿಶೀಲನೆ ನಡೆಸಲು ಸೂಚಿಸಿದರು. ಅಲ್ಲದೆ ಹೈಟೆನ್ಶನ್ ವೈಯರ್ ಇರುವ ಪ್ರದೇಶದಲ್ಲಿ ಮನೆಗಳಿರುವುದರಿಂದ, ಜೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ವೈರ್ ಸ್ಥಳಾಂತರ ಹಾಗೂ ರಸ್ತೆ ನಿರ್ಮಾಣದ ತ್ವರಿತ ಕ್ರಮ ಕೈಗೊಳ್ಳುವಂತೆ ಹೇಳಿದರು.

    ಸರ್ವೆ ನಂ.೮೮/೬ ಮತ್ತು ೯೦/೨ರಲ್ಲಿ ಹಲವು ವರ್ಷಗಳಿಂದ ಅತಿಕ್ರಮಣ ನಡೆದಿರುವ ವಿಷಯವನ್ನು ಸದಸ್ಯರು ಗಮನಕ್ಕೆ ತಂದರು. ಅತಿಕ್ರಮಣ ಮಾಡಿದ ೭೦ ಜನರಿಗೆ ನೋಟಿಸ್ ನೀಡಲು ಶಾಸಕ ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಸಭೆಯಲ್ಲಿ ಸದಸ್ಯರು ಆಶ್ರಯ ಸಮಿತಿಗೆ ಪ್ರತ್ಯೇಕ ಕಚೇರಿ ಮಾಡುವಂತೆ ಮನವಿ ಮಾಡಿದ್ದು, ಶಾಸಕರು ಕೂಡಲೇ ಕಚೇರಿ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

    ಸಭೆಯಲ್ಲಿ ನಗರಸಭೆ ಪೌರಯುಕ್ತ ಉಮೇಶ ಚೌಹಾಣ್, ಆಶ್ರಯ ಸಮಿತಿ ಸದಸ್ಯರು ಪ್ರಭಾಕರ್ ಜಿ., ಆರತಿ ಅಮರೇಶ್ ಜಾಕ, ಶಿವಕುಮಾರ್ ಕರದಳ್ಳಿ, ಇಮುನವೆಲ್ ಕ್ರಿಸ್ಟೋಫರ್ ಬೆಳ್ಳಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

  • ಅಕ್ರಮ ಮರಮ್ ಗಣಿಗಾರಿಕೆಗೆ RI ಬೆನ್ನೆಲುಬು:ಆಡಿಯೋ ವೈರಲ್

    ಅಕ್ರಮ ಮರಮ್ ಗಣಿಗಾರಿಕೆಗೆ RI ಬೆನ್ನೆಲುಬು:ಆಡಿಯೋ ವೈರಲ್

    ಸತ್ಯಕಾಮ ವಾರ್ತೆ ಯಾದಗಿರಿ:
    ಜಿಲ್ಲೆಯಲ್ಲಿ ಅಕ್ರಮ ಮರಮ್ ಗಣಿಗಾರಿಕೆ ತಡೆಗಟ್ಟಲು ಆಡಳಿತ ಕ್ರಮ ಕೈಗೊಂಡಿರುವ ವೇಳೆಯಲ್ಲಿ, ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೇ ದಂಧೆಗೆ ಬೆನ್ನೆಲುಬಾಗಿ ನಿಂತಿರುವ ಆಡಿಯೋ ಬಯಲಾಗಿದೆ.
     
    ಕಂದಾಯ ನಿರೀಕ್ಷಕ ಮಹೇಂದ್ರ ಲಂಚ ಪಡೆದು ಗಣಿಗಾರಿಕೆ ಮುಂದುವರಿಯಲು ಅವಕಾಶ ನೀಡುತ್ತಿದ್ದಾನೆಂಬುದು ಆಡಿಯೋದಲ್ಲಿ ಬಯಲಾಗಿದ್ದು, ಮೀನು ಸಾಗಾಟಕ್ಕೆ ಹುಂಡಾ ಹೊಡೆದಿದ್ದೇವೆ ಎಂದು ತಹಶೀಲ್ದಾರ್‌ಗೆ ಹೇಳ್ತೀನಿ ಎಂಬ ಮಾತು ಸ್ವತಃ RI ಬಾಯಿಂದಲೇ ಕೇಳಿಬಂದಿದೆ.
    ಮೇಲಾಧಿಕಾರಿಗಳಿಗೆ RI ಯಾವ ರೀತಿ ತಪ್ಪು ಮಾಹಿತಿಯನ್ನು ಕೊಡುತ್ತೇನೆ ಎಂಬುದಕ್ಕೆ ಈ ಆಡಿಯೋ  ಸಾಕ್ಷಿಯಾಗಿದ್ದೂ. ಗ್ರಾಮ ಲೆಕ್ಕಾಧಿಕಾರಿ ದೇವೇಂದ್ರ ಅವರ ಹೆಸರೂ ಈ ಆಡಿಯೋದಲ್ಲಿ ಕೇಳಿಬರುತ್ತಿದೆ.
    ಪಟ್ಟಾ ಲ್ಯಾಂಡ್‌ನಲ್ಲೇ ಮರಮ್ ಗಣಿಗಾರಿಕೆ ಸಾಗುತ್ತಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದೂ,RI–VA ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಹಾಗೆಯೇ ಅಕ್ರಮಕ್ಕೆ ಸಾಥ್ ನೀಡುತ್ತಿರುವ ತಹಶೀಲ್ದಾರ್‌ ಮೇಲೂ ತನಿಖೆ ನಡೆಯಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.
    ಹಲವೆಡೆ ಅಕ್ರಮ ಗಣಿಗಾರಿಕೆ; 
    ಶಹಾಪುರ ತಾಲೂಕಿನ ವಿಭೂತಿಹಳ್ಳಿ, ಗೋಗಿ, ಇಬ್ರಾಹಿಂಪುರ, ಹುರಸುಗುಂಡಿಗಿ, ದೋರನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಿರ್ಬಂಧವಿಲ್ಲದೆ ಅಕ್ರಮ ಗಣಿಗಾರಿಕೆ ಸಾಗುತ್ತಿದೆ. ಅಧಿಕಾರಿಗಳ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
  • ಸೆ.2 ರಿಂದ 3ರ ವರೆಗೆ ನೀರು ಸರಬರಾಜು ಸ್ಥಗಿತ ನಗರದ ಸಾರ್ವಜನಿಕರು ಸಹಕರಿಸಲು ಮನವಿ

    ಸೆ.2 ರಿಂದ 3ರ ವರೆಗೆ ನೀರು ಸರಬರಾಜು ಸ್ಥಗಿತ ನಗರದ ಸಾರ್ವಜನಿಕರು ಸಹಕರಿಸಲು ಮನವಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಜಾಕವೇಲ್‌ದಿಂದ ಫೀಲ್ಟರ್ ಬೆಡ್‌ಗೆ ಹೋಗುವ ಮುಖ್ಯ ರೈಸಿಂಗ್ ಪೈಪ್ ಲೈನ್ ಲಿಕೇಜ ಆಗುತ್ತಿದ್ದು, ಇದರಿಂದ ಅಪಾರ ಪ್ರಮಾಣ ನೀರು ಪೋಲಾಗುತ್ತಿದ್ದು, ಈ ಲಿಕೇಜನ್ನು ರಿಪೇರಿ ಮಾಡುವ ಅವಶ್ಯಕತೆ ಇರುವುದರಿಂದ 2025ರ ಸೆಪ್ಟೆಂಬರ್ 2 ರಿಂದ 3ರ ವರೆಗೆ ನೀರು ಸರಬರಾಜು ಮಾಡುವುದಕ್ಕೆ ಆಗುವುದಿಲ್ಲ ನಗರದ ಸಾರ್ವಜನಿಕರು ಸಹಕರಿಸಬೇಕೆಂದು ಯಾದಗಿರಿ ನಗರಸಭೆ ಪೌರಾಯುಕ್ತರು ಉಮೇಶ ಚವ್ಹಾಣ ಅವರು ತಿಳಿಸಿದ್ದಾರೆ.

  • ಗಣೇಶ ಹಬ್ಬ: ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಪಥ ಸಂಚಲನ

    ಗಣೇಶ ಹಬ್ಬ: ಮುಖ್ಯ ರಸ್ತೆಗಳಲ್ಲಿ ಪೊಲೀಸ್ ಪಥ ಸಂಚಲನ

    ಸತ್ಯಕಾಮ ವಾರ್ತೆ ಗುರುಮಠಕಲ್:

    ಪಟ್ಟಣದಲ್ಲಿ ಗಣೇಶ ಚತುರ್ಥಿ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಿ. ಐ. ವೀರಣ್ಣ ದೊಡ್ಡಮನಿ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು.

    ಪಟ್ಟಣದ ಪೊಲೀಸ್ ಠಾಣೆಯಿಂದ ಪಥ ಸಂಚಲನ ಆರಂಭವಾಗಿ ಗಂಗಾ ಪರಮೇಶ್ವರಿ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಮಲ್ಲಯ್ಯ ಕಟ್ಟ, ನಗರೇಶ್ವರ ದೇವಸ್ಥಾನ, ಚೌಡಿ ಕಟ್ಟ ಮಾರ್ಗವಾಗಿ ಬೀಡಿಕೆ ಕಟ್ಟದಿಂದ ಪೊಲೀಸ್ ಠಾಣೆಗೆ ತಲುಪಿ ಮುಕ್ತಾಯಗೊಂಡಿತು.

    ಬಳಿಕ ಮಾತನಾಡಿದ ಅವರು, ಪಟ್ಟಣದಲ್ಲಿ ಗೌರಿ ಗಣೇಶ ಹಬ್ಬವನ್ನು ಯಾವುದೇ ರೀತಿಯ ಅನಾಹುತಗಳು ಆಗದಂತೆ ಶಾಂತಿಯುತವಾಗಿ ಆಚರಿಸಬೇಕು. ಈ ಕಾರಣದಿಂದ ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಥಸಂಚಲನ ನಡೆಸಲಾಯಿತು ಎಂದರು.

    ಗಣೇಶ ಮೂರ್ತಿ ಮೆರವಣಿಗೆ ಮತ್ತು ಮೂರ್ತಿ ವಿಸರ್ಜಿಸುವ ಸಮಯದಲ್ಲಿ ಸಾರ್ವಜನಿಕರು ಎಚ್ಚರ ವಹಿಸಬೇಕು. ಶಾಂತಿ ಕದಡುವ ಕೆಲಸವನ್ನು ಯಾರಾದರೂ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ಇದೇ ಸಂಧರ್ಭದಲ್ಲಿ ಇತ್ತೀಚೆಗೆ ತೆಲಂಗಾಣ ರಾಜ್ಯದ ಕರೀಂ ನಗರದಲ್ಲಿ ಗಣಪತಿ ತರುವ ವೇಳೆ 10ಕ್ಕೂ ಹೆಚ್ಚು ಗಣೇಶ ಮಂಡಳಿಯವರು ವಿದ್ಯುತ್ ಶಾಕ್ ನಿಂದ ಮೃತ ಪಟ್ಟ ಘಟನೆ ನೆನೆದ ಅವರು, ಸುರಕ್ಷತೆ ಕಾಪಾಡಿಕೊಂಡು ಹಬ್ಬ ಆಚರಿಸಿ ಎಂದರು.

  • ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ:ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಲು ಸೆ.1 ರವರೆಗೆ ಅವಧಿ ವಿಸ್ತರಣೆ

    ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ:ಯಾವುದೇ ಜಾತಿಗಳು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಲು ಸೆ.1 ರವರೆಗೆ ಅವಧಿ ವಿಸ್ತರಣೆ

    ಯಾದಗಿರಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕರ್ನಾಟಕ ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ ಜಾತಿ ಮತ್ತು ಪಂಗಡಗಳು ಸೇರಿದಂತೆ ಎಲ್ಲ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸರ್ಕಾರದ ಆದೇಶಾನುಸಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗಗಳು ಮತ್ತು ಇತರೆ ಜಾತಿ/ಉಪಜಾತಿಗಳ ಬಗ್ಗೆ ಸಾರ್ವಜನಿಕರ ಮಾಹಿತಿಗಾಗಿ ದಿನಾಂಕ: 22.08.2025 ರಂದು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ಯಾವುದೇ ಜಾತಿ/ಉಪಜಾತಿಗಳು ಬಿಟ್ಟು ಹೋಗಿದ್ದಲ್ಲಿ, ಅಂತಹ ಅಂಶಗಳ ಬಗ್ಗೆ ಸಲಹೆ, ಸೂಚನೆಗಳು ಇದ್ದಲ್ಲಿ, 07 ದಿನಗಳ ಒಳಗೆ ನೀಡಲು ಕೋರಲಾಗಿತ್ತು.

    ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಈ ಅವಧಿಯನ್ನು ವಿಸ್ತರಿಸಲು ಕೋರಿರುವ ಕಾರಣ, ಈ ಬಗ್ಗೆ ಸಲಹೆ/ಸೂಚನೆ ಮನವಿಗಳನ್ನು ನೀಡುವ ಅವಧಿಯನ್ನು ದಿನಾಂಕ: 01.09.2025 ರ ಸಂಜೆ 5.00 ಘಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಈ ಮೂಲಕ ಪ್ರಕಟಿಸಲಾಗಿದೆ. ಸಂಗ್ರಹಿಸಲಾದ ಜಾತಿ/ಉಪಜಾತಿಗಳ ಪಟ್ಟಿಯನ್ನು ಸೆಪ್ಟೆಂಬ‌ರ್ ತಿಂಗಳಲ್ಲಿ ಪ್ರಾರಂಭವಾಗಲಿರುವ ಸಮೀಕ್ಷೆಗಾಗಿ ಮಾತ್ರ ಉಪಯೋಗಿಸಲಾಗುವುದು.

    ಸಾರ್ವಜನಿಕರು ತಮ್ಮ ಸಲಹೆ/ಸೂಚನೆ/ ಮನವಿಗಳನ್ನು ಸದಸ್ಯ ಕಾರ್ಯದರ್ಶಿಗಳು,ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ನಂ.16, ಡಿ.ದೇವರಾಜ ಅರಸು ಭವನ,ಮಿಲ್ಲರ್ಸ್ ಟ್ಯಾಂಕ್ ಬಂಡ್ ಪ್ರದೇಶ, ವಸಂತ ನಗರ,ಬೆಂಗಳೂರು ಅಥವಾ kscbcb@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ.ಹೆಚ್ಚಿನ‌ವಿವರಗಳಿಗೆ ದೂ.ಸಂಖ್ಯೆ 080-29506668 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.