Category: State

  • ಹಾಸ್ಟೆಲ್ ಊಟ ಸೇವಿಸಿ 28ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

    ಹಾಸ್ಟೆಲ್ ಊಟ ಸೇವಿಸಿ 28ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

    ಯಾದಗಿರಿ: ಗುರುಮಠಕಲ್ ಪಟ್ಟಣದ ಮೆಟ್ರಿಕ್ ನಂತರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಿಳಾ ವಸತಿ ನಿಲಯದಲ್ಲಿ ಬುಧವಾರ ರಾತ್ರಿ ಊಟ ಸೇವಿಸಿದ ಬಳಿಕ ೩೩ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಂತಿ, ಭೇದಿ ಮತ್ತು ಹೊಟ್ಟೆನೋವಿನಿಂದ ಬಳಲಿರುವ ಘಟನೆ ಬೆಳಕಿಗೆ ಬಂದಿದೆ.

    ರಾತ್ರಿ ೭.೩೦ರ ಸುಮಾರಿಗೆ ಚಿಕನ್, ಚಪಾತಿ, ಅನ್ನ ಸೇವಿಸಿದ ಬಳಿಕ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿನಿಯರಿಗೆ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಬಳಿಕ ಅವರನ್ನು ಗುರುಮಠಕಲ್ ತಾಲೂಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಮೂವರು ವಿದ್ಯಾರ್ಥಿನಿಯರನ್ನು ಹೆಚ್ಚಿನ ಚಿಕಿತ್ಸೆಗೆ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ.

    ಒಟ್ಟು ೧೫೦ ವಿದ್ಯಾರ್ಥಿಗಳಲ್ಲಿ ೩೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥಗೊಂಡಿರುವುದರಿAದ ಫುಡ್ ಪಾಯಿಸನ್ ಶಂಕೆ ವ್ಯಕ್ತವಾಗಿದೆ ಎಂದು ಚಿಕಿತ್ಸಕ ವೈದ್ಯರು ಹೇಳಿದ್ದಾರೆ.

    ತುರ್ತು ಪರಿಸ್ಥಿತಿಯನ್ನು ಮನಗಂಡು ತಾಲೂಕ ಆಸ್ಪತ್ರೆ ವೈದ್ಯರ ಜೊತೆಗೆ ಪಟ್ಟಣದ ಸ್ಥಳೀಯ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಕೂಡ ಸೇರ್ಪಡೆಗೊಂಡು ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ನೀಡಿದ್ದಾರೆ. ಆಸ್ಪತ್ರೆ ಮೂಲಗಳ ಪ್ರಕಾರ ಎಲ್ಲಾ ವಿದ್ಯಾರ್ಥಿನಿಯರ ಸ್ಥಿತಿ ಈಗ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಘಟನೆಯ ಮಾಹಿತಿ ತಿಳಿದ ಜಿಲ್ಲಾ ಆಡಳಿತದ ತಂಡ ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಾಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ತಹಸೀಲ್ದಾರ್ ಹಾಗೂ ಇಲಾಖೆ ಅಧಿಕಾರಿಗಳು ಮಧ್ಯರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸಾ ವ್ಯವಸ್ಥೆ ಪರಿಶೀಲಿಸಿದರು.

    ಗುರುಮಠಕಲ್ ಪೊಲೀಸ್ ಠಾಣೆ ಸಿಬ್ಬಂದಿಗಳು ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಹಾಸ್ಟೆಲ್‌ನ ಅಡಿಗೆ, ಸಂಗ್ರಹಣೆ ಹಾಗೂ ಸ್ವಚ್ಛತೆ ಕುರಿತು ಆಹಾರ ಸುರಕ್ಷತಾ ಇಲಾಖೆಯು ತಪಾಸಣೆ ಆರಂಭಿಸಿದೆ.

    ಘಟನೆಯಿAದ ಆತಂಕಗೊAಡ ಪೋಷಕರು ಆಸ್ಪತ್ರೆಗೆ ಧಾವಿಸಿ ಮಕ್ಕಳ ಆರೋಗ್ಯ ವಿಚಾರಿಸಿದರು.

  • ಹೊಸ ವರ್ಷದ ಸಂಭ್ರಮಕ್ಕೆ ಬಿಗಿ ನಿಯಮಗಳು: ಪೊಲೀಸರಿಂದ ಹೊಸ ಗೈಡ್‌ಲೈನ್ಸ್ ಜಾರಿ

    ಹೊಸ ವರ್ಷದ ಸಂಭ್ರಮಕ್ಕೆ ಬಿಗಿ ನಿಯಮಗಳು: ಪೊಲೀಸರಿಂದ ಹೊಸ ಗೈಡ್‌ಲೈನ್ಸ್ ಜಾರಿ

    ಪ್ರತಿ ವರ್ಷ ಡಿಸೆಂಬರ್ ತಿಂಗಳು ಪ್ರಾರಂಭವಾದ ಕೂಡಲೇ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮದ ಸದ್ದು ಗದ್ದಲ ಶುರುವಾಗುತ್ತದೆ. ಐಟಿ ನಗರವಾದ ಈ ಸಿಲಿಕಾನ್ ಸಿಟಿಯಲ್ಲಿ ವಿಶೇಷವಾಗಿ ಯುವಜನತೆಯೇ ನ್ಯೂ ಇಯರ್ ವೆಲ್‌ಕಮ್‌ಗೆ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಪಬ್‌ಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಓಪನ್ ಪಾರ್ಟಿ ಸ್ಥಳಗಳು ಉತ್ಸವದ ರಂಗಿನೆಯನ್ನೇ ತಳೆಯುತ್ತವೆ. ಆದರೆ ಇತ್ತೀಚೆಗೆ ಗೋವಾದ ನೈಟ್‌ಕ್ಲಬ್ ದುರಂತದಲ್ಲಿ ಸಂಭವಿಸಿದ ವಿಷಾದನೀಯ ಘಟನೆ ದೇಶವನ್ನೇ ತಲ್ಲಣಗೊಳಿಸಿದ ಹಿನ್ನೆಲೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಚಿತ ಮುನ್ನೆಚ್ಚರಿಕೆ ಕ್ರಮಗಳನ್ನು ಬೆಂಗಳೂರಿನ ಪೊಲೀಸರು ಕೈಗೊಂಡಿದ್ದಾರೆ.

    ಹೊಸ ವರ್ಷಕ್ಕೆ ಇನ್ನೂ 20 ದಿನ ಬಾಕಿ ಇರುವಾಗಲೇ, ನಗರದ ಪಬ್-ಬಾರ್ ಹಾಗೂ ಸೆಲೆಬ್ರೇಷನ್ ಸ್ಥಳಗಳ ಮೇಲೆ ಪೊಲೀಸರು ಕಣ್ಣಕಟ್ಟುವ ಬಿಗಿ ನಿಯಮಗಳನ್ನು ಅಳವಡಿಸಿದ್ದಾರೆ. ನಗರ ಪೊಲೀಸ್‌ ಅಧಿಕಾರಿಗಳು ಪಬ್‌ ಮತ್ತು ಹೋಟೆಲ್‌ ಮಾಲೀಕರ ಜೊತೆ ವಿಶೇಷ ಸಭೆ ನಡೆಸಿ, ಸುರಕ್ಷತೆ ಮತ್ತು ಕಾನೂನು ಪಾಲನೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

    ಹೊಸ ವರ್ಷಾಚರಣೆಗಾಗಿ ಜಾರಿಗೊಂಡ ಪ್ರಮುಖ ಗೈಡ್‌ಲೈನ್ಸ್:

    ಫೈರ್ ಡಿಪಾರ್ಟ್‌ಮೆಂಟ್ ಪರವಾನಗಿ ಕಡ್ಡಾಯ:

    ಯಾವುದೇ ಪಬ್‌, ಬಾರ್‌, ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಲು ಅಗ್ನಿಶಾಮಕ ಇಲಾಖೆಯಿಂದ ಅನುಮತಿ ತಗೊಳ್ಳಲೇಬೇಕು.

    ಪರವಾನಗಿ ಇಲ್ಲದಿದ್ದರೆ ಸ್ಥಳವನ್ನು ತಕ್ಷಣ ಮುಚ್ಚಲಾಗುವುದು:

    ಪರ್ಮಿಷನ್‌ ಇಲ್ಲದೆ ಸೇವೆ ನೀಡಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ.

    ಹೆಚ್ಚು ಜನರಿಗೆ ಪ್ರವೇಶ ನಿಷೇಧ:

    ನಿಗದಿಗಿಂತ ಹೆಚ್ಚು ಜನರನ್ನು ಸೇರಿಸಿಕೊಂಡು ಅಪಾಯಕ್ಕೆ ಕಾರಣವಾದರೆ ಅದರ ಹೊಣೆಗಾರಿಕೆ ನೇರವಾಗಿ ಮಾಲೀಕರಿಗೇ.

    ಸಮಯ ಮೀರಿದ ಸೇವೆ ನಿಷೇಧ:

    ಪೊಲೀಸರ ಅನುಮತಿ ಸಮಯ ಮೀರಿಸಿ ಪಾರ್ಟಿ, ಮದ್ಯಸೇವನೆ ಅನುಮತಿಯಿಲ್ಲ.

    ಸಿಸಿಟಿವಿ ಕಡ್ಡಾಯ:

    ಸೆಲೆಬ್ರೇಷನ್ ಆಗುವ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿರಲೇಬೇಕು.

    ಮಹಿಳೆಯರ ಸುರಕ್ಷತೆಗೆ ವಿಶೇಷ ಕ್ರಮಗಳು:

    ಮಹಿಳೆಯುಳ್ಳ ಗ್ರಾಹಕರಿಗಾಗಿ ಸುರಕ್ಷತಾ ಪ್ರೋಟೋಕಾಲ್‌ ಕಟ್ಟುನಿಟ್ಟಾಗಿ ಪಾಲಿಸಬೇಕು.

    ಬೆಂಗಳೂರು ನಗರದಲ್ಲಿ ನ್ಯೂ ಇಯರ್ ಸೆಲೆಬ್ರೇಷನ್ ವೇಳೆ ಯಾವುದೇ ರೀತಿಯ ಅಪಾಯ ಸಂಭವಿಸದಂತೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಪೊಲೀಸರು ಜಾರಿಗೆ ತಂದಿದ್ದಾರೆ. ಸುರಕ್ಷಿತ ಮತ್ತು ಶಿಸ್ತಿನ ಹೊಸ ವರ್ಷವನ್ನು ಸ್ವಾಗತಿಸುವುದು ಎಲ್ಲರ ಜವಾಬ್ದಾರಿಯೇ ಆಗಿದೆ.

  • ಮೆಟ್ರೋಕ್ಕೆ 96 ಹೊಸ ರೈಲು: 3 ನಿಮಿಷಕ್ಕೊಂದು ಮೆಟ್ರೋ

    ಮೆಟ್ರೋಕ್ಕೆ 96 ಹೊಸ ರೈಲು: 3 ನಿಮಿಷಕ್ಕೊಂದು ಮೆಟ್ರೋ

    ಬೆಂಗಳೂರು ನಗರದ ವೇಗದ ಬೆಳವಣಿಗೆಗೆ ಅನುಪಾತವಾಗಿ ಇಲ್ಲಿ ಟ್ರಾಫಿಕ್ ಸಮಸ್ಯೆಯೂ ಅಬ್ಬರಿಸಿದೆ. ಕೆಲಸಕ್ಕೆ ಹೋಗುವಾಗ, ಕಾಲೇಜು, ಆಸ್ಪತ್ರೆ, ಅಥವಾ ಸಾಮಾನ್ಯವಾಗಿ ನಗರದಲ್ಲಿ ಸಂಚಾರ ಮಾಡುವಾಗ ವಾಹನ ದಟ್ಟಣೆ ಜನರನ್ನು ಗಂಟೆಗಳ ಕಾಲ ಸಿಲುಕಿಸಿಟ್ಟಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂಬಂತೆ ಬೆಂಗಳೂರಿನ ಮೆಟ್ರೋ ಸಾರಿಗೆ (Namma Metro) ಜನರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಈಗ ಈ ಮೆಟ್ರೋ ಸೌಲಭ್ಯವನ್ನು ಇನ್ನಷ್ಟು ವಿಸ್ತರಿಸುವ ದೊಡ್ಡ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ.

    ನಗರದ ಪ್ರತಿಯೊಂದು ಆರಂಭದಿಂದ ಕೊನೆಯವರೆಗೂ ಮೆಟ್ರೋ ತಲುಪಿಸುವ ಗುರಿ ಹೊಂದಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ಈಗ ಹೊಸ ರೈಲು ಹಾಗೂ ಕೋಚ್‌ಗಳ ಆರ್ಡರ್ ನೀಡಿದೆ. ಇದರಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿದರೂ, ಒಂದು ರೈಲುಗಾಗಿ ಹೆಚ್ಚು ಸಮಯ ಕಾಯಬೇಕಾಗುವುದಿಲ್ಲ. ಮುಂದಿನ ದಿನಗಳಲ್ಲಿ 3 ನಿಮಿಷಕ್ಕೊಮ್ಮೆ ಮೆಟ್ರೋ ನಿಮ್ಮ ಪ್ಲಾಟ್‌ಫಾರ್ಮ್‌ಗೆ ಬಂದು ನಿಲ್ಲಲಿದೆ!

    ಪ್ರಸ್ತುತ ಗ್ರೀನ್, ಪರ್ಪಲ್ ಮತ್ತು ಯೆಲ್ಲೋ ಸೇರಿ ಒಟ್ಟು 63 ರೈಲುಗಳು ನಮ್ಮ ಮೆಟ್ರೋ ಬಳಿಯಿವೆ.

    ಗ್ರೀನ್ + ಪರ್ಪಲ್ ಲೈನ್‌ನಲ್ಲಿ: 57 ರೈಲು

    ಯೆಲ್ಲೋ ಲೈನ್‌ನಲ್ಲಿ: 6 ರೈಲು

    ಹೊಸ ಸೇರ್ಪಡೆ ಹೀಗಿದೆ:

    ಗ್ರೀನ್ ಮತ್ತು ಪರ್ಪಲ್ ಲೈನ್ – 21 ಹೊಸ ರೈಲುಗಳು

    ಯೆಲ್ಲೋ ಲೈನ್ – 9 ಹೊಸ ರೈಲುಗಳು

    ಹೆಚ್ಚುವರಿ ಆರ್ಡರ್ – 6 ರೈಲುಗಳು

    ಪಿಂಕ್ ಲೈನ್‌ ವಿಶೇಷ:

    ಕಾಳೇನ ಅಗ್ರಹಾರ ಟು ನಾಗವಾರ – 16 ರೈಲು

    ಹೆಚ್ಚುವರಿ – 7 ರೈಲು

    ಒಟ್ಟು 23 ರೈಲುಗಳು

    ಬ್ಲೂ ಲೈನ್‌ಗಾಗಿ ದೊಡ್ಡ ಸೇರ್ಪಡೆ:

    ಸಿಲ್ಕ್ ಬೋರ್ಡ್ ಟು ಕೆ.ಆರ್ ಪುರ – 16 ರೈಲು

    ಕೆ.ಆರ್ ಪುರ ಟು ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಟು 21 ರೈಲು

    ಒಟ್ಟು 37 ರೈಲುಗಳು

    3 ನಿಮಿಷಕ್ಕೊಂದು ಮೆಟ್ರೋ!

    ಬ್ಲೂ ಮತ್ತು ಪಿಂಕ್ ಲೈನ್‌ಗಳು ಚಾಲನೆಗೊಂಡು, ಹೊಸ ರೈಲುಗಳು ಸೇರಿಕೊಂಡರೆ, ಪ್ರತಿ 3 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ ಸಾಧ್ಯವಾಗಲಿದೆ.

    ಒಟ್ಟು ರೈಲುಗಳ ಸಂಖ್ಯೆ ರೈಸ್!

    ಈಗಿರುವ 63 ರೈಲುಗಳಿಗೆ 96 ಹೊಸ ರೈಲುಗಳು ಸೇರಿದರೆ, ಒಟ್ಟು 159 ರೈಲುಗಳು ನಮ್ಮ ಮೆಟ್ರೋ ಬಳಿಯಲ್ಲಿರಲಿವೆ.

    ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಇದು ದೊಡ್ಡ ನಿರಾಳಿಕೆಯ ಸುದ್ದಿ. ಹೊಸ ಮಾರ್ಗಗಳು ತೆರೆಯುತ್ತಾ, ರೈಲುಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದ್ದಂತೆ, ಪ್ರಯಾಣ ಸುಗಮವಾಗುವುದು ಖಚಿತ. ಮೆಟ್ರೋ ಅಭಿವೃದ್ಧಿಯ ಈ ವೇಗ ಮುಂದುವರಿದರೆ, ಭವಿಷ್ಯದಲ್ಲಿ ಬೆಂಗಳೂರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲೇ ಕ್ರಾಂತಿಯನ್ನು ಕಾಣಲಿದೆ.

  • ತಿರುಪತಿ–ಶಿರಡಿ ನೇರ ರೈಲು ಸೇವೆಗೆ ಸೋಮಣ್ಣ ಹಸಿರು ನಿಶಾನೆ

    ತಿರುಪತಿ–ಶಿರಡಿ ನೇರ ರೈಲು ಸೇವೆಗೆ ಸೋಮಣ್ಣ ಹಸಿರು ನಿಶಾನೆ

    ಭಾರತವು ಯಾತ್ರಾಧಾರಿತ ಸಂಸ್ಕೃತಿಯಿಂದ ಹೆಸರುವಾಸಿಯಾಗಿದ್ದು, ಲಕ್ಷಾಂತರ ಭಕ್ತರು ಪ್ರತಿದಿನ ತಮ್ಮ ನಂಬಿಕೆ ಮತ್ತು ಭಕ್ತಿಯ ಪಯಣದಲ್ಲಿ ಹಲವು ಪವಿತ್ರ ಕ್ಷೇತ್ರಗಳನ್ನು ಭೇಟಿ ಕೊಡುತ್ತಾರೆ. ಆಂಧ್ರಪ್ರದೇಶದ ಪುಣ್ಯ ಕ್ಷೇತ್ರ ತಿರುಪತಿ ಹಾಗೂ ಮಹಾರಾಷ್ಟ್ರದ ಪ್ರಸಿದ್ಧ ಶಿರಡಿ ಇವು ಭಾರತೀಯ ಭಕ್ತರ ಹೃದಯದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಎರಡು ಪ್ರಮುಖ ತೀರ್ಥಕ್ಷೇತ್ರಗಳು. ಈಗ ಈ ಎರಡೂ ಧಾರ್ಮಿಕ ಕೇಂದ್ರಗಳನ್ನು ನೇರವಾಗಿ ಸಂಪರ್ಕಿಸುವ ಮತ್ತೊಂದು ಸೌಲಭ್ಯದ ಬಗ್ಗೆ ಮಾಹಿತಿ ತಿಳಿದುಬಂದಿದೆ.

    ಭಕ್ತರ ಆದ್ಯತೆ ಮತ್ತು ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು, ತಿರುಪತಿ–ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲು ಸೇವೆಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಂಗಳವಾರ ನವದೆಹಲಿಯ ರೈಲ್ ಭವನದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿಸಿದರು.

    ನಾಲ್ಕು ರಾಜ್ಯಗಳನ್ನು ಜೋಡಿಸುವ ತೀರ್ಥಸೇತುವೆ:

    ಈ ಹೊಸ ರೈಲು ಮಾರ್ಗವು ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಜೋಡಿಸುವ ಮೂಲಕ ದೀರ್ಘಾವಧಿಯ ಸಾರಿಗೆ ಮತ್ತು ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕನ್ನು ನೀಡಲಿದೆ.

    ಇದು ದಕ್ಷಿಣ ಕರಾವಳಿ ಭಾಗದ ಭಕ್ತರಿಗೆ ಶಿರಡಿಗೆ ಮೊದಲ ನೇರ ರೈಲು ಸಂಪರ್ಕ ಒದಗಿಸುವ ಮಹತ್ವದ ಹೆಜ್ಜೆಯಾಗಿದೆ.

    ಯಾತ್ರಾರ್ಥಿಗಳಿಗೆ ಅನೇಕ ಲಾಭ:

    • ಭಕ್ತರಿಗೆ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣ.
    • ಪ್ರತಿ ಮಾರ್ಗಕ್ಕೆ ಸುಮಾರು 30 ಗಂಟೆಗಳ ಸುಗಮ ಪ್ರಯಾಣ.
    • ನಾಲ್ಕು ರಾಜ್ಯಗಳಲ್ಲಿ ಆರ್ಥಿಕ ಹಾಗೂ ಪ್ರವಾಸೋದ್ಯಮ ಚಟುವಟಿಕೆಗೆ ಉತ್ತೇಜನೆ.
    • ಮಾರ್ಗ ಮಧ್ಯೆ 31 ಪ್ರಮುಖ ನಿಲ್ದಾಣಗಳ ಸಂಪರ್ಕ.
    • ನೆಲ್ಲೂರು
    • ಗುಂಟೂರು
    • ಸಿಕಂದರಾಬಾದ್
    • ಬೀದರ್
    • ಮನ್ಮಾಡ್
    • ಮತ್ತು ಮತ್ತಿತರ ಪ್ರಮುಖ ನಿಲ್ದಾಣಗಳು

    ಪಾರ್ಲಿ ವೈಜನಾಥ್‌ನಂತಹ ಪ್ರಸಿದ್ಧ ಶಿವ ಕ್ಷೇತ್ರಗಳ ಸಂಪರ್ಕವೂ ಈ ರೈಲು ಮಾರ್ಗದ ವಿಶೇಷತೆ.

    ಸೋಮಣ್ಣ ಅವರ ಅಭಿಪ್ರಾಯ:

    ಈ ವಿಶೇಷ ಸೇವೆ ಪ್ರಾರಂಭವಾಗಿರುವುದು ನಾಲ್ಕು ರಾಜ್ಯಗಳ ಭಕ್ತರಿಗೂ ಐತಿಹಾಸಿಕ ಕ್ಷಣ ಎಂದು ಸಚಿವ ಸೋಮಣ್ಣ ಹೇಳಿದರು. ರೈಲ್ವೆ ನಮ್ಮ ದೇಶದ ಜೀವನಾಡಿ. ಭಕ್ತರು ಈಗ ಯಾತ್ರೆಯನ್ನು ಇನ್ನಷ್ಟು ಶ್ರಮವಿಲ್ಲದೆ, ಸುಲಭವಾಗಿ ಕೈಗೊಳ್ಳಲು ಈ ರೈಲು ಸೇವೆ ಮಹತ್ತರ ಎಂದು ತಿಳಿಸಿದ್ದಾರೆ.

    ಧಾರ್ಮಿಕ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ:

    ತಿರುಪತಿ ಮತ್ತು ಶಿರಡಿ ಪುಣ್ಯಕ್ಷೇತ್ರಗಳ ನಡುವೆ ನೇರ ಸಂಪರ್ಕ ದೊರಕಿರುವುದರಿಂದ, ಯಾತ್ರಾರ್ಥಿಗಳ ಸಂಖ್ಯೆ ಮತ್ತಷ್ಟು ಏರಲಿದೆ. ಪ್ರಾದೇಶಿಕ ಅಭಿವೃದ್ಧಿಗೆ ಸಹಕಾರಿ. ವ್ಯಾಪಾರ ಮತ್ತು ಉದ್ಯೋಗಾವಕಾಶಗಳಿಗೆ ಹೊಸ ದಾರಿ ಸಿಗುತ್ತದೆ.

  • ‘ಶಕ್ತಿ’ ಯೋಜನೆ:NWKRTCಗೆ  ಹೊರಲಾರದ ಭಾರ!

    ‘ಶಕ್ತಿ’ ಯೋಜನೆ:NWKRTCಗೆ  ಹೊರಲಾರದ ಭಾರ!

    ಉಚಿತ ಪ್ರಯಾಣವನ್ನು ಮಹಿಳೆಯರಿಗೆ ನೀಡುವ ‘ಶಕ್ತಿ’ ಯೋಜನೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದರೂ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮಾತ್ರ ಈ ಯೋಜನೆ ಭಾರವಾಗಿಬಿಟ್ಟಿದೆ. ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರ ಬಸ್ ಪ್ರಯಾಣದ ಸಂಖ್ಯೆ ಹೆಚ್ಚಾದರೂ, ಅದರ ವೆಚ್ಚವನ್ನು ಸರ್ಕಾರದಿಂದ ತೆಗೆಯುವ ಕೆಲಸ ನಿರೀಕ್ಷಿತ ವೇಗದಲ್ಲಿ ನಡೆಯದ ಕಾರಣ NWKRTC ಈಗ ಗಂಭೀರ ಆರ್ಥಿಕ ಒತ್ತಡಕ್ಕೆ ಸಿಲುಕಿದೆ.

    ಸರ್ಕಾರವು ಶಕ್ತಿ ಯೋಜನೆಯಡಿ ಬಸ್‌ಗಳಲ್ಲಿ ಪ್ರಯಾಣಿಸಿದ ಮಹಿಳೆಯರ ಟಿಕೆಟ್ ಮೊತ್ತವನ್ನು ನಿಗಮಕ್ಕೆ ಮರುಪಾವತಿ ಮಾಡಬೇಕಿದೆ. ನಿಗಮಗಳು ಪ್ರತಿಮಾಸವೂ ಈ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸುತ್ತಿವೆ. ಆದರೆ ಸರ್ಕಾರದಿಂದ ಬರುವ ಹಣ ವಾರಂವಾರ ತಡವಾಗುತ್ತಿದ್ದು, ಮುಖ್ಯವಾಗಿ ಪೂರ್ಣ ಪ್ರಮಾಣದಲ್ಲಿ ಬರದೇ ಇರುವುದು ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಪ್ರತೀ ತಿಂಗಳು ಸುಮಾರು 130 ಕೋಟಿ ರೂಪಾಯಿ ಮರುಪಾವತಿ ಪಡೆಯಬೇಕಾದ NWKRTCಗೆ ಸರ್ಕಾರದಿಂದ ಸಿಗುತ್ತಿರುವುದು 100 ರಿಂದ 110 ಕೋಟಿ ರೂಪಾಯಿಗಳಷ್ಟೇ. ಉಳಿದ ಹಣ ಹಂತ ಹಂತವಾಗಿ ಜಮೆಯಾಗುತ್ತಾ ಬಂದಿದ್ದು, ಈಗ ಬಾಕಿಯ ಮೊತ್ತ ಬರೋಬ್ಬರಿ 940 ಕೋಟಿಗೆ ಏರಿದೆ.

    ಈ ದೊಡ್ಡ ಬಾಕಿಯ ಪರಿಣಾಮ ನಿಗಮದ ದೈನಂದಿನ ಚಟುವಟಿಕೆಗಳ ಮೇಲೂ ನೇರವಾಗಿ ಬಿದ್ದಿದೆ. ಸಿಬ್ಬಂದಿಯ ಪಿಎಫ್ ಕಂತುಗಳನ್ನು ಪಾವತಿಸಲು ನಿಗಮ ಬಾಧ್ಯವಾಗಿದ್ದು, ಅದಕ್ಕೂ ಸಾಲದ ಮೊರೆ ಹೋಗಬೇಕಾಯಿತು. 646 ಕೋಟಿ ರೂಪಾಯಿ ಸಾಲ ಮಾಡಿ ಸಿಬ್ಬಂದಿಯ ಪಿಎಫ್ ಕರಾರುಗಳನ್ನು ಪೂರೈಸಿದ್ದರೂ, ಇನ್ನೂ ನಿವೃತ್ತ ನೌಕರರಿಗೆ ಕೊಡಬೇಕಾಗಿರುವ ಸುಮಾರು 45 ಕೋಟಿ ರೂಪಾಯಿ ಗ್ರಾಚ್ಯುಟಿ ಮೊತ್ತ ಬಾಕಿಯೇ ಉಳಿದಿದೆ. ವೇತನಗಳ ಪಾವತಿಗೂ ಸರ್ಕಾರದಿಂದ ಬರುವ ಹಣವೇ ಬಳಸಬೇಕಾದ ಪರಿಸ್ಥಿತಿ ಬಂದಿರುವುದರಿಂದ, ಅಭಿವೃದ್ಧಿ ಕಾರ್ಯಗಳು ಅಡ್ಡಿಯಿಲ್ಲದೆ ಸಾಗಲು ನಿಗಮದ ಬಳಿ ಹಣವೇ ಉಳಿದಿಲ್ಲ.

    ಇದೇ ಸಂದರ್ಭದಲ್ಲಿ ಬಸ್‌ಗಳ ನಿರ್ವಹಣೆ, ಹೊಸ ವಾಹನಗಳ ಖರೀದಿ, ಮೂಲಭೂತ ಸೌಲಭ್ಯಗಳ ಸುಧಾರಣೆ ಎಲ್ಲವೂ ಹಣದ ಕೊರತೆಯಿಂದ ಸ್ಥಗಿತಗೊಂಡಿವೆ. ಉಚಿತ ಪ್ರಯಾಣದ ಫಲಾನುಭವಿಗಳು ದಿನಕ್ಕೊಂದು ಹೊಸ ದಾಖಲೆ ಬರೆಯುತ್ತಿದ್ದರೂ, ಆ ಹೊಣೆಯನ್ನು ಹೊರುವ ನಿಗಮಗಳು ಮೂಲಭೂತ ಆರ್ಥಿಕ ನೆರವಿಗಾಗಿ ಸರ್ಕಾರದ ಬಾಗಿಲಲ್ಲಿ ಕಾಯಬೇಕಾದ ಪರಿಸ್ಥಿತಿ ಮೂಡಿದೆ.

    ಶಕ್ತಿ ಯೋಜನೆಯಿಂದ ಮಹಿಳೆಯರ ಸಂಚಾರ ಸುಲಭವಾಗಿರುವುದು ರಾಜ್ಯಕ್ಕೆ ಶ್ಲಾಘನೀಯ ವಿಷಯವಾದರೂ, ಅದರ ಹೊಣೆಗಾರಿಕೆಯನ್ನು ನಿಭಾಯಿಸುವ ನಿಗಮಗಳು ಆರ್ಥಿಕವಾಗಿ ಬಲಿಯಾಗಬೇಕಾದರೆ ಮರುಪಾವತಿ ವ್ಯವಸ್ಥೆಯಲ್ಲಿ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕಾದ ಅಗತ್ಯ ಸ್ಪಷ್ಟವಾಗಿದೆ.

  • IND vs SA T20: ಕಟಕ್ ಪಂದ್ಯಕ್ಕೆ ತಂಡ ಸಿದ್ಧ  ಭಾರತ ತಂಡದ 11ರ ಬಳಗ ಹೇಗಿರಲಿದೆ?

    IND vs SA T20: ಕಟಕ್ ಪಂದ್ಯಕ್ಕೆ ತಂಡ ಸಿದ್ಧ ಭಾರತ ತಂಡದ 11ರ ಬಳಗ ಹೇಗಿರಲಿದೆ?

    ಭಾರತ–ದಕ್ಷಿಣ ಆಫ್ರಿಕಾ ಟಿ20 ಸರಣಿ ಆರಂಭಕ್ಕೆ ಗಂಟೆಗಳು ಮಾತ್ರ ಬಾಕಿ. ಕಟಕ್‌ನ ಕ್ರೀಡಾಂಗಣದಲ್ಲಿ ಇಂದು ನೆಡೆಯಲಿದೆ. ಐದು ಪಂದ್ಯಗಳ ಈ ಸರಣಿಯ ಮೊದಲ ಹಣಾಹಣಿಗೆ ಯಾವ 11 ಮಂದಿ ಮೈದಾನಕ್ಕಿಳಿಯಲಿದ್ದಾರೆ ಎಂಬುದು ಈಗಲೇ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಚರ್ಚೆಯಾಗಿದೆ. ಕಾರಣ ಟೀಂ ಇಂಡಿಯಾ ಶಿಬಿರದಲ್ಲಿ ಅನೇಕರು ಫಾರ್ಮ್ನಲ್ಲಿರುವುದು.

    ಮೊದಲನೆಯದಾಗಿ, ಆರಂಭಿಕ ಜೋಡಿಯೇ ಈಗ ಕುತೂಹಲ. ಕುತ್ತಿಗೆ ನೋವಿನಿಂದ ಹೊರ ಬಂದಿರುವ ಉಪನಾಯಕ ಶುಭ್‌ಮನ್ ಗಿಲ್ ಮತ್ತೆ ತಂಡಕ್ಕೆ ಸೇರಿದ ಸುದ್ದಿ ಶಿಬಿರಕ್ಕೆ ಹೊಸ ಚೈತನ್ಯ ತಂದಿದೆ. ಗಿಲ್ ಜೊತೆಗೆ ಅಭಿಷೇಕ್ ಶರ್ಮಾ ಇನಿಂಗ್ಸ್‌‌ಗೆ ಸ್ಫೋಟಕ ಆರಂಭ ಕೊಡುವ ಸಾಧ್ಯತೆ ಬಲವಾಗಿದೆ. ಇವರಿಬ್ಬರ ಆಟದ ಶೈಲಿ ಕಟಕ್ ಪಿಚ್‌ಗೆ ಚೆನ್ನಾಗಿ ಹೊಂದಿಕೊಳ್ಳಬಹುದು ಎಂಬ ನಿರೀಕ್ಷೆಯೂ ಇದೆ.

    ಮೂರನೇ ಕ್ರಮಾಂಕಕ್ಕೆ ಬಂದರೆ, ನಾಯಕ ಸೂರ್ಯಕುಮಾರ್ ಯಾದವ್ ಆಗಮಿಸುತ್ತಾರೆ. ಅಬ್ಬರದ ಸ್ಟ್ರೈಕ್‌ರೇಟ್ ಮೂಲಕ ತೀವ್ರ ಒತ್ತಡದಲ್ಲೂ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯ ಅವರಿಗೆ ಇದೆ. ಅವರ ನಂತರ ತಿಲಕ್ ವರ್ಮಾ ನಡೆಯುವ ವೇಗ ಬದಲಾಯಿಸುವ ಗುಣವಿರುವ ಯುವ ಮುಖ. ಮಧ್ಯ ಕ್ರಮಾಂಕದ ಹೊಣೆಗಾರಿಕೆಯ ಬಹುತೇಕ ಭಾಗ ಇವರಿಬ್ಬರ ಮೇಲೆ ಇರುತ್ತದೆ.

    ಆಲ್‌ರೌಂಡ್ ವಿಭಾಗದಲ್ಲಿ ದೊಡ್ಡ ಹೆಸರು ಹಾರ್ದಿಕ್ ಪಾಂಡ್ಯ. ಗಾಯದಿಂದ ಚೇತರಿಸಿಕೊಂಡು ಮರಳುತ್ತಿರುವ ಹಾರ್ದಿಕ್, ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸಮತೋಲನ ತರುತ್ತಾರೆ. ಇವರೊಂದಿಗೆ ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಕೂಡ ಇದ್ದಾರೆ. ಅಕ್ಷರ್‌ರ ಸ್ಪಿನ್, ದುಬೆರ ಶಕ್ತಿಶಾಲಿ ಹಿಟಿಂಗ್ಇವೆರಡೂ ತಂಡಕ್ಕೆ ಉಪಯೋಗ.

    ವಿಕೆಟ್ ಕೀಪರ್ ಸ್ಥಾನ ಮಾತ್ರ ಇನ್ನೂ ಸಂಪೂರ್ಣ ಸ್ಪಷ್ಟವಾಗಿಲ್ಲ. ಜಿತೇಶ್ ಶರ್ಮಾ ಇತ್ತೀಚಿನ ಪಂದ್ಯಗಳಲ್ಲಿ ಅವಕಾಶ ಬಳಸಿಕೊಂಡಿದ್ದರೆ, ಅನುಭವದ ಮೈಲಿಗಲ್ಲು ಹೊಂದಿರುವ ಸಂಜು ಸ್ಯಾಮ್ಸನ್ ಕೂಡ ಬಾಗಿಲಲ್ಲೇ ನಿಂತಿದ್ದಾರೆ. ನಿರ್ಧಾರ ಯಾವತ್ತಕ್ಕೆ ಬದಲಾಗುತ್ತದೆ ಎಂಬ ಕುತೂಹಲವಿದೆ. ಆದರೆ ತಂಡದ ಒಳಗಿನ ಚಲನವಲನ ನೋಡಿದರೆ, ಜಿತೇಶ್‌ಗೆ ಸ್ವಲ್ಪ ಹೆಚ್ಚು ಬಲವಿದೆ.

    ಬೌಲಿಂಗ್ ಹೆಗ್ಗಳಿಕೆಗೆ ಬಂದರೆ ಬುಮ್ರಾ ಇದ್ದಂತೆಯೇ ಭದ್ರತೆ. ಅರ್ಷದೀಪ್ ಸಿಂಗ್ ಆರಂಭದ ಓವರ್‌ಗಳಲ್ಲಿ ಸ್ವಿಂಗ್‌ನಿಂದ ಸವಾಲು ಹಾಕಬಹುದು. ಮೂರನೇ ಪ್ರಮುಖ ಬೌಲರ್ ವರುಣ್ ಚಕ್ರವರ್ತಿ ರಂಗಿನ ವೈವಿಧ್ಯಮಯ ಸ್ಪಿನ್‌ಗಳು ಟಿ20 ಕ್ರಿಕೆಟ್‌ಗೆ ನೀಡುವ ರಹಸ್ಯ ಅಸ್ತ್ರ. ಜೊತೆಗೂಡಿ ಅಕ್ಷರ್ ಹಾಗೂ ಹಾರ್ದಿಕ್ ಸಹಾಯಕ ಬೌಲರ್‌ಗಳಾಗಿ ತಮ್ಮ ಪಾತ್ರ ನಿಭಾಯಿಸುತ್ತಾರೆ.

    ಕಟಕ್‌ನ ಮೊದಲ ಟಿ20ಗಾಗಿ ಭಾರತದ ಸಂಭಾವ್ಯ 11 ಹೀಗಿದೆ:

    ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

    ಸರಣಿ ಆರಂಭವಾಗುವುದಕ್ಕೂ ಮುನ್ನವೇ ಉತ್ಸಾಹ ಶ್ರೇಷ್ಟ ಮಟ್ಟಕ್ಕೆ ತಲುಪಿದೆ. ಭಾರತದ ಈ ಹೊಸ ಸಂಯೋಜನೆ ಮೈದಾನದಲ್ಲಿ ಎಷ್ಟು ಫಲ ನೀಡುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  • ಇಂದು ರೈತ ಹಸಿರು ಸೇನೆಯಿಂದ “ಬೆಳಗಾವಿ ಚಲೋ”

    ಇಂದು ರೈತ ಹಸಿರು ಸೇನೆಯಿಂದ “ಬೆಳಗಾವಿ ಚಲೋ”

    ಮುದ್ದೇಬಿಹಾಳ; ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ ಹಾಗೂ ನಾಗರಬೆಟ್ಟ ಏತ ನೀರಾವರಿ ಪೂರ್ಣಗೊಳಿಸಲು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಮುದ್ದೇಬಿಹಾಳ ಘಟಕ ಬೆಳಗಾವಿ ಚಲೋ ಇಂದು(ಮಂಗಳವಾರ) ಹಮ್ಮಿಕೊಳ್ಳಲಾಗಿದೆ.

    ಮಂತ್ರಿಮಂಡಲದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.60ಮೀ. ದಿಂದ 524.256 ಮೀ ವರೆಗೆ ಹೆಚ್ಚಿಸುವ ಕಾಮಗಾರಿಗೆ ಕೂಡಲೆ ಟೆಂಡರ ಕರೆಯಬೇಕು. ಕೇಂದ್ರ ಸರಕಾರ ಕೂಡಲೇ ಆದೇಶ ಹೊರಡಿಸಿ ಹೆಚ್ಚುವರಿಯಾಗಿ ದೊರೆಯುವ 170 ಟಿ.ಎಮ್.ಸಿ. ನೀರನ್ನು ಯು.ಕೆ.ಪಿ. 3ನೇ ಹಂತಕ್ಕೆ ಬಳಸಿಕೊಳ್ಳಲು ಅಧಿಸೂಚಿಸಬೇಕು. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು “ರಾಷ್ಟ್ರೀಯ ಯೋಜನೆ” ಎಂದು ಘೋಷಣೆಮಾಡಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಹಸಿರು ಸೇನೆ ರೈತ ಸಂಘದ ತಾಲೂಕು ಅಧ್ಯಕ್ಷ ಬಸನಗೌಡ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ 2015ರಲ್ಲಿ ಮುಖ್ಯಮಂತ್ರಿಗಳು 1ಲಕ್ಷ ಕೋಟಿ ರೂ. ಅನುದಾನ ನೀಡಲು ಮಾತು ಕೊಟ್ಟಿದ್ದು, 1ಲಕ್ಷಕೋಟಿ ರೂ. ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಆಲಮಟ್ಟಿ ಜಲಾಶಯದ ಅಡಿಯಲ್ಲಿ ಬರುವ 9 ಏತ ನೀರಾವರಿ ಯೋಜನೆಗಳನ್ನು ಕೂಡಲೇ ಟೆಂಡರ್ ಕರೆದು ಪೂರ್ಣಗೊಳಿಸಬೇಕು. ಜಲಾನಯನ ಪ್ರದೇಶದಲ್ಲಿ ಆರ್ಥಿಕ ಬೆಳೆಗಳನ್ನು ಬೆಳೆಯಲು ಸರಕಾರ ಆದೇಶ ಮಾಡಬೇಕು ಎಂದು ರೈತ ಸಂಘದ ಬೇಡಿಕೆಯಲ್ಲಿ ಹೇಳಲಾಗಿದೆ.

    ಕೃಷ್ಣಾ ಮೇಲ್ದಂಡೆ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಕಛೇರಿಯು ಆಲಮಟ್ಟಿಯಲ್ಲಿ ನೆಪ ಮಾತ್ರಕ್ಕೆ ಇದ್ದು, ಕೂಡಲೇ ಬೆಂಗಳೂರಿನಲ್ಲಿರುವ ವ್ಯವಸ್ಥಾಪಕ ನಿರ್ದೆಶಕರ ಕಛೇರಿಯನ್ನು ರದ್ದುಗೊಳಿಸಿ ಆಲಮಟ್ಟಿಯಲ್ಲೇ ಮುಂದುವರೆಸಬೇಕು. ಕಳೆದ ವರ್ಷದ ಮತ್ತು ಈ ವರ್ಷದ ನೀರಾವರಿ ಸಲಹಾ ಸಮೀತಿ ಸಭೆಗಳನ್ನು ಬೆಂಗಳೂರಿನಲ್ಲಿ ನಡೆಸಲಾಗಿದೆ. ಇದು ರೈತ ವಿರೋಧಿ ನೀತಿ, ಮುಂಬರುವ ಎಲ್ಲ ನೀರಾವರಿ ಸಲಹಾ ಸಮಿತಿ ಸಭೆಗಳನ್ನು ಆಲಮಟ್ಟಿಯಲ್ಲಿ ಜರುಗಿಸಬೇಕು. ಸಭೆಗೆ ಕಡ್ಡಾಯವಾಗಿ 5 ಜನ ರೈತ ಮುಂಖಡರನ್ನು ಪಕ್ಷಾತೀತವಾಗಿ ಆಹ್ವಾನ ನೀಡಬೇಕು.

    ಇನ್ನು ನಾಗರಬೆಟ್ಟ ಏತ ನೀರಾವರಿ ಯೋಜನೆಯ ಕಾಮಗಾರಿ ಪೂರ್ಣಗೊಂಡು 8 ವರ್ಷ ಕಳೆದಿದೆ. ಪಂಪಸೆಟ್ ಪ್ರಾರಂಭ ಸ್ಥಿತಿಯಲ್ಲಿದೆ. ಸುಮಾರು 5 ವರ್ಷದಿಂದ ತಿಂಗಳಿಗೆ 24 ಲಕ್ಷ ರೂ. ಗಳನ್ನು ಕೆ.ಇ.ಬಿ.ಗೆ ಸರಕಾರ ಕನಿಷ್ಠ ಹಣ ತುಂಬುತ್ತಿದೆ. ಆದರೆ 5 ವರ್ಷದಿಂದ ಕಾಲುವೆ ಕಾಮಗಾರಿ ಪೂರ್ಣಗೊಂಡಿಲ್ಲ, ರೈತರ ಹೊಲಗಳಿಗೆ ಸುಮಾರ 5 ವರ್ಷದಿಂದ ನೀರು ಹರಿದಿಲ್ಲ. ಕಾಮಗಾರಿ ವಿಳಂಬ ವಾಗಿದ್ದಕ್ಕೆ ಸಂಬಂದಪಟ್ಟ ಅಧಿಕಾರಿಗಳಮೇಲೆ ಕ್ರಮ ಜರುಗಿಸಬೇಕು, ಹಾಗೂ ಕೂಡಲೆ ರೈತರ ಹೊಲಗಳಿಗೆ ಹೊಲಗಾಲುವೆಗಳೆಗೆ ಶೀಘ್ರ ಟೆಂಡರ ಕರೆದು ನೀರು ಹರಿಸಬೇಕು. ಈ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ಹರಿಸಬೇಕು ಎಂದು ಈ ಬೆಳಗಾವಿ ಚಲೋದಲ್ಲಿ ಧ್ವನಿ ಮೊಳಗಲಿದೆ ಎಂದು ಮುದ್ದೇಬಿಹಾಳ ಹಸಿರು ಸೇನೆ ರೈತ ಸಂಘ ಹೇಳಿದೆ.

  • ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುಭಾರಂಭ!ಆಡಳಿತ ಪಕ್ಷ v/s ವಿಪಕ್ಷ – ರಾಜಕೀಯ ಪೈಪೋಟಿಗೆ ಕುಂದಾನಗರಿ ರಣಭೂಮಿ!

    ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುಭಾರಂಭ!ಆಡಳಿತ ಪಕ್ಷ v/s ವಿಪಕ್ಷ – ರಾಜಕೀಯ ಪೈಪೋಟಿಗೆ ಕುಂದಾನಗರಿ ರಣಭೂಮಿ!

    ರಾಜ್ಯದ ರಾಜಕೀಯ ಭವಿಷ್ಯ ನಿರ್ಧರಿಸುವಂತೆ ಕಾಣುತ್ತಿರುವ ಬೆಳಗಾವಿ ಚಳಿಗಾಲದ ಅಧಿವೇಶನ ಇಂದು ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಿದೆ. ಕರ್ನಾಟಕ ರಾಜಕೀಯದ ಕೇಂದ್ರಬಿಂದು ಆಗಿರುವ ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಜನರ ಬಿಕ್ಕಟ್ಟುಗಳು, ಸರ್ಕಾರಿ ಭರವಸೆಗಳ ಅನುಷ್ಠಾನ, ಹಾಗೂ ಸಿಎಂ ಕುರ್ಚಿ ಸುತ್ತಲಿನ ಹಗ್ಗಜಗ್ಗಾಟ ಎಲ್ಲವೂ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿವೆ. ಸರ್ಕಾರ ಮತ್ತು ವಿಪಕ್ಷಗಳ ನಡುವಿನ ಮನೋವೈಜ್ಞಾನಿಕ ಆಟ ಈಗ ಮತ್ತಷ್ಟು ಹೆಚ್ಚಾಗಿದೆ!

    10 ದಿನಗಳ ಈ ಅಧಿವೇಶನ ಡಿಸೆಂಬರ್ 19ರವರೆಗೆ ನಡೆಯಲಿದ್ದು, 21ಕ್ಕೂ ಹೆಚ್ಚು ವಿಧೇಯಕಗಳ ಮಂಡನೆಯ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

    ಬಿಜೆಪಿ–ಜೆಡಿಎಸ್ ದೋಸ್ತಿ ದಾಳಿ ಸರ್ಕಾರದ ರಕ್ಷಣಾ ಕೌಶಲ್ಯಕ್ಕೆ ಪರೀಕ್ಷೆ:

    ವಿಪಕ್ಷ ಬಿಜೆಪಿ–ಜೆಡಿಎಸ್ ಜಂಟಿ ದಾಳಿ ನಡೆಸಲು ತಂತ್ರ ರೂಪಿಸಿವೆ. ಸರ್ಕಾರವನ್ನು ಮೂಲೆಗೆ ತಳ್ಳಲು ಒಳಗಿನ ಅಸಮಾಧಾನ, ಬಣಗಾರಿಕೆ ಹಾಗೂ ನಾಯಕತ್ವ ಬದಲಾವಣೆ ಚರ್ಚೆಗಳನ್ನು ಆಯುಧವಾಗಿ ಬಳಸಿಕೊಳ್ಳಲಿವೆ.

    ಮುಂದುವರಿದ ರಾಜಕೀಯ ಬದಲಾವಣೆಗಳ ಹಿನ್ನೆಲೆಯಲ್ಲಿ ಅವಿಶ್ವಾಸ ನಿಲುವಳಿ ತರಲು ಚಿಂತನೆ ನಡೆದರೂ ಕಮಲಪಡೆ ಈಗ ಹಿಂದೆ ಸರಿದಿದೆ.

    ಅಧಿವೇಶನದ ಮೊದಲ ದಿನ ಸಂತಾಪ ಸೂಚನೆ ಬಳಿಕ ಕಲಾಪ ಮುಂದೂಡಲಾಗುತ್ತದೆ. ನಂತರದಿಂದ ಪ್ರತಿಯೊಂದು ವಿಚಾರವೂ ಸರ್ಕಾರಕ್ಕೆ ಸವಾಲಾಗುವ ಸನ್ನಿವೇಶ ನಿರ್ಮಾಣವಾಗಲಿದೆ.

    ಉತ್ತರ ಕರ್ನಾಟಕ ಪ್ರಮುಖ ಅಸ್ತ್ರ:

    ಕಳೆದ ಅಧಿವೇಶನದಲ್ಲಿ ಸರ್ಕಾರ ನೀಡಿದ್ದ ಭರವಸೆಗಳ ಅನುಷ್ಠಾನದ ಬಗ್ಗೆ ವಿಪಕ್ಷಗಳು ಕಿಡಿಗೇಡಿಯಾಗಿ ಪ್ರಶ್ನೆ ಎತ್ತಲಿವೆ. ನೀರಾವರಿ, ಬೆಳೆ ಬೆಲೆ ಹಾಗೂ ಮೂಲಭೂತ ಸೌಕರ್ಯಗಳ ವಿಚಾರಗಳು ಚರ್ಚೆಗೆ ಬರುವ ನಿರೀಕ್ಷೆಯಿದೆ.

    ಪ್ರತಿಭಟನೆಯ ಬಿಸಿ ಬೆಳಗಾವಿಯ ಬೀದಿಗಳೂ ಕದನಭೂಮಿ:

    ಅಧಿವೇಶನಕ್ಕೆ ಸಮೀಪಿಸುತ್ತಿರುವಾಗಲೇ ವಿವಿಧ ಸಂಘಟನೆಗಳು ಪ್ರತಿಭಟನೆಯ ಸಿದ್ಧತೆಯಲ್ಲಿ ಇವೆ.

    • ಕಬ್ಬು ಬೆಲೆ — ರೈತರ ಆಕ್ರೋಶ
    • ಮೆಕ್ಕೆಜೋಳ ಮತ್ತು ಹೆಸರುಕಾಳು ಬೆಲೆ ಕುಸಿತ
    • 2.5 ಲಕ್ಷ ಹುದ್ದೆಗಳ ನೇಮಕಾತಿ ಬೇಡಿಕೆ

    ಒಳ ಮೀಸಲಾತಿ ವಿವಾದ ಪರಿಶಿಷ್ಟ ಸಮುದಾಯಗಳ ಪ್ರತಿಭಟನೆ:

    ಅಂಗನವಾಡಿ, ಆಶಾ ಹಾಗೂ ಗ್ರಾಮ ಪಂಚಾಯಿತಿ ನೌಕರರ ವೇತನ ಪರಿಷ್ಕರಣೆ.

    ಮಹಾರಾಷ್ಟ್ರ ಪರ ಸಂಘಟನೆಗಳ ತಗಾದೆ ಆತಂಕ.

    ಬೆಳಗಾವಿ ಅಧಿವೇಶನವೆಂದರೆ ರಾಜಕೀಯದಷ್ಟೇ ಜನಾಆಸೆಯ ವಿಷಯ! ಈ ಬಾರಿ ಕೂಡ ಆಡಳಿತ–ವಿಪಕ್ಷಗಳ ರಾಜಕೀಯ ಕಾದಾಟದ ನಡುವೆ ಜನರ ಸಮಸ್ಯೆಗಳು ಯಾವ ಮಟ್ಟಿಗೆ ಆಲಿಸಿಕೊಳ್ಳಲಾಗುತ್ತವೆ ಎಂಬುದೇ ದೊಡ್ಡ ಪ್ರಶ್ನೆ

  • ಚಳಿಗಾಲದ ಅಧಿವೇಶನಕ್ಕೆ ಸುವರ್ಣಸೌಧದ ಸುತ್ತ ಭದ್ರತಾ ವಲಯ ಗಟ್ಟಿ

    ಚಳಿಗಾಲದ ಅಧಿವೇಶನಕ್ಕೆ ಸುವರ್ಣಸೌಧದ ಸುತ್ತ ಭದ್ರತಾ ವಲಯ ಗಟ್ಟಿ

    ಕರ್ನಾಟಕ ರಾಜಕೀಯದ ಅರಮನೆ ಎಂದೇ ಕರೆಯಲ್ಪಡುವ ಬೆಳಗಾವಿಯ ಸುವರ್ಣಸೌಧ ಮತ್ತೊಮ್ಮೆ ರಾಜ್ಯ ರಾಜಕೀಯದ ಪ್ರಮುಖ ಚಟುವಟಿಕೆಗಳಿಗೆ ಸಾಕ್ಷಿಯಾಗಲು ಸಜ್ಜಾಗಿದೆ.

    ಡಿಸೆಂಬರ್‌ 8ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಎದುರಿಸಬೇಕಾದ ಪ್ರಶ್ನೆಗಳು ಗಂಭೀರವಾಗಿವೆ ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆ, ಉತ್ತರ ಕರ್ನಾಟಕದ ಬೇಡಿಕೆಗಳು, ಗಡಿ ವಿವಾದ, ರಾಜ್ಯದ ಹಣಕಾಸು ಪರಿಸ್ಥಿತಿ, ಹಾಗೂ ಜನಮುಖಿ ಯೋಜನೆಗಳ ಅನುಷ್ಟಾನ. ಇಂತಹ ಮಹತ್ವದ ಅಧಿವೇಶನದ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.

    ಸುವರ್ಣಸೌಧ ಸುತ್ತ ಹೈಅಲರ್ಟ್ — 6,000 ಪೊಲೀಸ್ ಪಡೆ ನಿಯೋಜನೆ:

    ಕೆಲವು ದಿನಗಳ ಹಿಂದೆ ದೆಹಲಿ ಕೆಂಪುಕೋಟೆಯ ಬಳಿಯಲ್ಲಿ ನಡೆದ ಕಾರು ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಜಾಗೃತರಾಗಿರುವ ಸುರಕ್ಷತಾ ಸಂಸ್ಥೆಗಳು ಬೆಳಗಾವಿಯಲ್ಲಿ ಹೆಚ್ಚಿನ ನಿಗಾವಹಿಸಲು ಸೂಚನೆ ನೀಡಿವೆ. ಇದರ ಫಲವಾಗಿ, ಸುವರ್ಣಸೌಧ ಸುತ್ತಮುತ್ತ ಮತ್ತು ಬೆಳಗಾವಿ ಮಹಾನಗರದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

    ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರ ನೇತೃತ್ವದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು:

    • 6,000 ಪೊಲೀಸರ ಹೆಚ್ಚುವರಿ ನಿಯೋಜನೆ
    • 6 ಎಸ್‌ಪಿ ಹುದ್ದೆಯ ಅಧಿಕಾರಿಗಳು
    • 146 ಹಿರಿಯ ಪೊಲೀಸ್ ಅಧಿಕಾರಿಗಳು
    • 3,820 ಪೊಲೀಸ್ ಸಿಬ್ಬಂದಿ
    • 500 ಹೋಂ ಗಾರ್ಡ್‌ಗಳು
    • 8 ಕ್ಷಿಪ್ರ ಕಾರ್ಯಪಡೆ ತಂಡಗಳು
    • 10 ಡಿಎಆರ್ ತುಕಡಿಗಳು
    • 35 ಕೆಎಸ್‌ಆರ್‌ಪಿ ತುಕಡಿಗಳು
    • 1 ಬಾಂಬ್‌ ನಿಷ್ಕ್ರಿಯ ಪಡ (ಬಿಡಿಡಿಎಸ್)
    • 1 ಗರುಡಾ ಫೋರ್ಸ್
    • 16 ವಿಶೇಷ ತಪಾಸಣೆ ತಂಡಗಳು

    ಪೊಲೀಸ್ ಸರ್ಪಗಾವಲು ವ್ಯವಸ್ಥೆ ಜಾರಿಗೊಂಡಿದ್ದು, ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರತಿಭಟನೆಗಳಿಗೆ ಸ್ಥಳ ನಿಗದಿ ಮಾಡಲಾಗಿದೆ.

    ಅತಿಥಿಗಳ ವಸತಿ ಮತ್ತು ನಿರ್ವಹಣೆ:

    ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ಅಧಿವೇಶನಕ್ಕೆ ಆಗಮಿಸುವ ಎಲ್ಲಾ ಅಧಿಕಾರಿಗಳ ವಸತಿ ವ್ಯವಸ್ಥೆ ಪೂರ್ಣಗೊಂಡಿದೆ. ಜಿಲ್ಲಾಡಳಿತ ಈಗಾಗಲೇ 3,000 ಕೊಠಡಿಗಳನ್ನು ಬುಕ್ ಮಾಡಿಸಿದ್ದು, ಸಿಎಂ ಮತ್ತು ಡಿಸಿಎಂಗೆ ವಿಶೇಷ ಅತಿಥಿ ಗೃಹದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ. ಅಧಿವೇಶನ ಸಿಬ್ಬಂದಿಗೆ ಆಹಾರ, ಸಾರಿಗೆ, ಹಾಗೂ ಸಂವಹನ ವ್ಯವಸ್ಥೆಗಳನ್ನೂ ಸಜ್ಜುಗೊಳಿಸಲಾಗಿದೆ.

    ಅಧಿವೇಶನದ ಮಹತ್ವ:

    ಬೆಳಗಾವಿ ಅಧಿವೇಶನವು ವಿಶೇಷ ಪ್ರಾಮುಖ್ಯತೆಯದ್ದಾಗಿದೆ ಏಕೆಂದರೆ, ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯಗಳು ಇಲ್ಲಿ ಹೆಚ್ಚಿನ ಚರ್ಚೆಗೆ ಬರುತ್ತವೆ. ಗಡಿ ಸಮಸ್ಯೆ ಕುರಿತು ರಾಜಕೀಯ ತಾಪಮಾನ ಏರಲಿದೆ. ಜನರ ಸಮಸ್ಯೆಗಳ ಕುರಿತು ವಿರೋಧಪಕ್ಷಗಳು ಕಿಡಿಕಾರಲು ಸಜ್ಜಾಗಿವೆ. ಜನರ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವ ಚರ್ಚೆಗಳು, ತೀರ್ಮಾನಗಳು ಇಲ್ಲಿಂದ ಹೊರಬರಬೇಕು ಎಂಬ ನಿರೀಕ್ಷೆ ಹೆಚ್ಚಿದೆ.

  • ‘ದಿ ಡೆವಿಲ್’ ಮೂಲಕ ಗಲ್ಲಿ ಗಲ್ಲಿಯಲ್ಲೂ ಗಿಲ್ಲಿ ಹವಾ!

    ‘ದಿ ಡೆವಿಲ್’ ಮೂಲಕ ಗಲ್ಲಿ ಗಲ್ಲಿಯಲ್ಲೂ ಗಿಲ್ಲಿ ಹವಾ!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಚಿತ್ರದ ಟ್ರೇಲರ್ ಬಿಡುಗಡೆಯಾದ ಕ್ಷಣದಿಂದಲೇ ಸೋಶಿಯಲ್ ಮೀಡಿಯಾ ಗದ್ದಲಗೊಂಡಿದೆ. ಆದರೆ ಟ್ರೇಲರ್‌ನಲ್ಲಿ ಎಲ್ಲರ ಗಮನ ಸೆಳೆದದ್ದು ಒಂದೇ ‘ಬಿಗ್ ಬಾಸ್ ಕನ್ನಡ 12’ ಮೂಲಕ ಜನಪ್ರಿಯರಾಗಿರುವ ಗಿಲ್ಲಿ ನಟನ ತಕ್ಷಣದ ಹಾಸ್ಯಭರಿತ ಎಂಟ್ರಿ.

    ಟ್ರೇಲರ್‌ನಲ್ಲೊಂದು ಸಣ್ಣ ಸನ್ನಿವೇಶ. ಪೊಲೀಸ್‌ ಮುಂದೆ ಕುಳಿತಿರುವ ಗಿಲ್ಲಿ ನಟ, ತಮ್ಮದೇ ಶೈಲಿಯಲ್ಲಿ “ಎಕ್ಸ್‌ಕ್ಯೂಸ್ ಮಿ ಪಿಸಿ… ಸ್ವಲ್ಪ ಎಸಿ ಹಾಕಮ್ಮ… ಲಾಟ್ ಆಫ್ ಸೆಕೆ!” ಎನ್ನುವ ಡೈಲಾಗ್ ಹೇಳುತ್ತಾರೇನು, ಕ್ಷಣಾರ್ಧದಲ್ಲೇ ಆ ದೃಶ್ಯಕ್ಕೇ ಬಣ್ಣ ಬದಲಾಗುತ್ತದೆ. ಅವರ ಡೆಲಿವರಿ, ಟೈಮಿಂಗ್ ಎರಡೂ ಸೇರಿ ಟ್ರೇಲರ್‌ನಲ್ಲಿರುವ ಗಂಭೀರತೆಯಲ್ಲಿ ಕ್ಷಣಿಕ ನಗುವಿನ ಗಾಳಿ ಹರಿಸುತ್ತವೆ.

    ಬಿಗ್ ಬಾಸ್’ ಮನೆಯಲ್ಲಿ ಈಗಾಗಲೇ ಗಿಲ್ಲಿ ನಟ ಹಾಸ್ಯದಿಂದ ಜನರ ಮನ ಗೆದ್ದಿದ್ದಾರೆ. ಡಬಲ್ ಮೀನಿಂಗ್ ಬೇಡ, ಅಸಭ್ಯ ಪದ ಬೇಡ… ಮನೆಯಲ್ಲೇ ನಡೆಯುವ ಚಿಕ್ಕ ಘಟನೆಗಳಿಗೆ ಸನ್ನಿವೇಶ, ಚಿತ್ರ ರೆಫರೆನ್ಸ್‌ ಜೋಡಿಸಿ, ತಕ್ಷಣ ಕಾಮಿಡಿ ಸಿಡಿಸುವುದು ಅವರ ಸ್ಟೈಲ್. ಅದೇ ಶೈಲಿ ಟ್ರೇಲರ್‌ನಲ್ಲೂ ಕಂಡುಬಂದಿದ್ದು, ವೀಕ್ಷಕರಿಗೆ “ಇವರ ಪಾತ್ರ ಸಿನಿಮಾದಲ್ಲೂ ಮುಖ್ಯವೇನೋ” ಎಂಬ ಅಂದಾಜು ಮೂಡಿಸಿದೆ.

    ಈಗಾಗಲೇ ಶೋ ಮೂಲಕ ಜನರಿಗೆ ಕನೆಕ್ಟ್ ಆಗಿರುವ ಅವರು, ದೊಡ್ಡ ಪರದೆ ಮೇಲೂ ತಮ್ಮದೇ ರೀತಿಯ ಗುರುತು ಮೂಡಿಸಿಕೊಳ್ಳಬಹುದು ಅನ್ನೋ ಆಸೆ ಅಭಿಮಾನಿಗಳಲ್ಲಿದೆ. ‘ಮ್ಯಾಕ್ಸ್ ಮಂಜು’ ಹೇಗೆ ಒಂದು ಚಿತ್ರದ ಮೂಲಕ ಹೊಸ ಇಮೇಜ್ ಪಡೆದುಕೊಂಡರೋ, ಗಿಲ್ಲಿ ನಟನಿಗೂ ‘ದಿ ಡೆವಿಲ್’ ಅದೇ ಅವಕಾಶ ಕೊಡುವ ಸಾಧ್ಯತೆ ದೊಡ್ಡದು.

    ಡಿಸೆಂಬರ್ 11ರಂದು ಸಿನಿಮಾ ಬಿಡುಗಡೆಯಾಗಲಿದೆ. ಟ್ರೇಲರ್‌ನಲ್ಲಿ ಕೇವಲ ಕೆಲವು ಸೆಕೆಂಡ್‌ನಲ್ಲಿಲೇ ಸದ್ದು ಮಾಡಿದ ಗಿಲ್ಲಿ ನಟ, ಚಿತ್ರ ಬಂದ ಮೇಲೆ ಇನ್ನೂ ಹೆಚ್ಚು ಜನಪ್ರಿಯತೆ ಪಡೆಯುವ ಸಾಧ್ಯತೆ ಸ್ಪಷ್ಟವಾಗಿದೆ. ದರ್ಶನ್‌ ಅಭಿನಯದ ಭಾರೀ ಚಿತ್ರದಲ್ಲಿ ಅವರು ಯಾವ ರೀತಿಯಲ್ಲಿ ಮೆರುಗು ತರುತ್ತಾರೆ ಅನ್ನೋದನ್ನು ಈಗ ಎಲ್ಲರೂ ಕಾತರದಿಂದ ಕಾದಿದ್ದಾರೆ.