Category: State

  • ಟಿಇಟಿ ಪರೀಕ್ಷೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ

    ಟಿಇಟಿ ಪರೀಕ್ಷೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ

    ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಬಂದರೆ ಮಾತ್ರ ಪರೀಕ್ಷೆ ಕೇಂದ್ರದೊಳಗೆ ಅವಕಾಶ : ಜಿಲ್ಲಾಧಿಕಾರಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಜೂನ್ 30 ರಂದು 25 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರೀಕ್ಷೆ ಸಂಬಂಧ ನಿಯೋಜಿತ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    ಈ ಪರೀಕ್ಷೆಯ ಮೊದಲ ಪತ್ರಿಕೆಗೆ 4002 ಹಾಗೂ ಮಧ್ಯಾಹ್ನ ಪತ್ರಿಕೆಗೆ 6026 ಸೇರಿ ಒಟ್ಟು 10,028 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.

    ಪರೀಕ್ಷಾ ಕೇಂದ್ರಗಳಲ್ಲಿ ಅಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆವರೆಗೆ ಪೇಪರ್-1 ಮತ್ತು ಮಧ್ಯಾಹ್ನ 2 ರಿಂದ ಸಂಜೆ 4.30 ರವರೆಗೆ ಪೇಪರ್-2 ಪರೀಕ್ಷೆ ನಡೆಯಲಿವೆ. ಪರೀಕ್ಷಾ ಕೇಂದ್ರದ ಆವರಣದೊಳಗೆ ಅಭ್ಯರ್ಥಿಗಳ ಪ್ರವೇಶ, ಬೆಲ್ ಆಗುವ ಸಮಯ, ನಿಗದಿತ ವೇಳಾಪಟ್ಟಿಯಂತೆ ಮತ್ತು ಮಾರ್ಗಸೂಚಿ ಅನ್ವಯ ಪರೀಕ್ಷೆ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

    ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಬಂದರೆ ಮಾತ್ರ ಪರೀಕ್ಷೆ ಕೇಂದ್ರದೊಳಗೆ ಅವಕಾಶ ಕಲ್ಪಿಸಲಾಗುತ್ತದೆ. ಸಮಯ ಮೀರಿ ಬಂದರೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಸೂಚಿಸಿದರು.

    ಯಾವುದೇ ರೀತಿಯ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ವಾಚ್‍ಗಳನ್ನು ಪ್ರವೇಶ ಕೇಂದ್ರಗಳೊಳಗೆ ನಿರ್ಬಂಧಿಸಬೇಕು. ಸೂಕ್ತವಾದ ಆಸನ ವ್ಯವಸ್ಥೆ, ಅಂಗವಿಕಲರಿಗೆ ಅನುಕೂಲಕರ ವ್ಯವಸ್ಥೆ ಮಾಡಬೇಕು. ಪರೀಕ್ಷೆಗೆ ಪೂರ್ವಭಾವಿಯಾಗಿ ಕೇಂದ್ರಗಳಿಗೆ ಸಂಬಂಧಿಸಿದ ಅಧಿಕಾರಿ ಗಳು ತೆರಳಿ, ಆಸನ ವ್ಯವಸ್ಥೆ, ಸಿಸಿ ಟಿವಿ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದರು.

    ಪರೀಕ್ಷೆ ಶಾಂತಿಯುತವಾಗಿ ನಡೆಸಲು ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಸಿಬ್ಬಂದಿ ಹಾಗೂ ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಮಾರ್ಗಾಧಿಕಾರಿಗಳು ಪಡೆದು ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಿಗೆ ಸರಬರಾಜು ಮಾಡಲು ಪ್ರತಿ ಮಾರ್ಗಕ್ಕೆ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕೆಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

    ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ

    ಅಂದು ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರಗಳಿಗೆ, ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಲುವಾಗಿ ಸೆಕ್ಷನ್ 144 ರನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀ ವರೆಗೆ ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಪರೀಕ್ಷಾ ಕೇಂದ್ರಗಳು

    ನಗರದ ಸಭಾ ಪಿಯು ಕಾಲೇಜು, ನ್ಯೂ ಕನ್ನಡ ಪ್ರೌಢಶಾಲೆ, ದೋಖಾ ಜೈನ್ ಸ್ಕೂಲ್, ಆರ್ ವಿ ಹೈಸ್ಕೂಲ್ ಹಾಗೂ ಪಿಯು ಕಾಲೇಜು, ಜವಾಹರ್ ಪ್ರೌಢಶಾಲೆ ಮತ್ತು ಪಿಯು ಕಾಲೇಜು, ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಮತ್ತು ಮಹಿಳಾ ಪಿಯು ಹಾಗೂ ಹುಡುಗಿಯರ ಪ್ರೌಢಶಾಲೆ, ಡಾನ್ ಬಾಸ್ಕೋ ಪ್ರೌಢಶಾಲೆ ಹಾಗೂ ಪಿಯು ಕಾಲೇಜು, ಡಿಡಿಯು ಇಂಟರ್ ನ್ಯಾಷನಲ್ ಹೆಚ್ ಎಸ್, ನಿವೇದಿತಾ ಪಾಲಿಟೆಕ್ನಿಕ್ ಕಾಲೇಜು, ಆದರ್ಶ ವಿದ್ಯಾಲಯ, ಮಹತ್ಮಾ ಗಾಂಧಿ ಪ್ರೌಢಶಾಲೆ, ಚಿರಂಜೀವಿ ಪ್ರೌಢಶಾಲೆ, ಎಲ್.ಕೆ.ಇ.ಟಿ ಮಹಿಳಾ ಪಿಯು ಕಾಲೇಜು, ನವನಂದಿ ಹೈಸ್ಕೂಲ್, ಸ್ವಾಮಿ ವಿದ್ಯಾರಣ್ಯ ಹೆಚ್.ಪಿ.ಎಸ್ ಶಾಲೆ, ದಿವಂಗತ ತಿಮ್ಮಣ್ಣ ಹೆಡಗಿಮದ್ರಾ ಆಂಗ್ಲ ಮಾಧ್ಯಮ ಶಾಲೆ, ಸಪ್ತಗಿರಿ ಆಂಗ್ಲ ಮಾಧ್ಯಮ ಶಾಲೆ, ಸರಕಾರಿ ಮಹಿಳಾ ಪದವಿ ಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ ಎಸ್.ಪಿ, ಜಿಲ್ಲಾ ಖಜಾನೆ ಅಧಿಕಾರಿ ಮಾಲಿಂಗರಾಯ ಬಿ, ಡಿಡಿಪಿಐ ಮಂಜುನಾಥ, ಜಿಲ್ಲಾ ನೋಡಲ್ ಅಧಿಕಾರಿ ಬಸನಗೌಡ ಆಲ್ದಾಳ ಸೇರಿದಂತೆ ಪರೀಕ್ಷೆಗೆ ಜವಾಬ್ದಾರಿ ವಹಿಸಿದ ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಲಂಚ ಪಡೆಯುವ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಡಿಸಿಎಂ ಡಿ. ಕೆ.ಶಿವಕುಮಾರ್

    ಲಂಚ ಪಡೆಯುವ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಡಿಸಿಎಂ ಡಿ. ಕೆ.ಶಿವಕುಮಾರ್

    ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿಯಲ್ಲಿ ಸೋಮವಾರ ನಡೆದ “ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಇದಕ್ಕೂ ಮೊದಲು ಕಾರ್ಯಕ್ರಮದ ಉದ್ದೇಶ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಕ್ರಿಯೆ ಕುರಿತು ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಎಂಎಲ್ಸಿ ರವಿ, ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಸಿಇಓ ದಿಗ್ವಿಜಯ್ ಸಿಂಗ್ ಬೋಡಕೆ, ಎಸ್ಪಿ ಕಾರ್ತಿಕ್ ರೆಡ್ಡಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

     

    ಭೂಮಿ, ಮನೆ, ನಿವೇಶನ ರಹಿತರು, ರೈತರ ಕಷ್ಟಗಳಿಗೆ ಸ್ಥಳದಲ್ಲೇ ಪರಿಹಾರ; ಲಂಚ ಪಡೆಯುವ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಡಿಸಿಎಂ ಡಿ. ಕೆ.ಶಿವಕುಮಾರ್

    ಚನ್ನಪಟ್ಟಣ, ಜೂನ್ 24: 

    “ವಿವಿಧ ಸಮಸ್ಯೆ ಹೊತ್ತು ಬಂದವರಿಗೆ ಸ್ಥಳದಲ್ಲೇ ಪರಿಹಾರ. ರೈತರ ಜಮೀನುಗಳಿಗೆ ಖಾತೆ ಮಾಡಿಕೊಡಲು ಒಂದು ರೂಪಾಯಿ ಲಂಚ ಮುಟ್ಟುವಂತಿಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ” – ಇದು ಚನ್ನಪಟ್ಟಣದ ಜಿಲ್ಲಾ ಪಂಚಾಯ್ತಿ ಮಟ್ಟದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ “ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮದ ಒಟ್ಟು ಚಿತ್ರಣ.

    ಕೋಡಂಬಳ್ಳಿ ಹಾಗೂ ಅಕ್ಕೂರು ಜಿಲ್ಲಾ ಪಂಚಾಯ್ತಿ ಮಟ್ಟದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಕ್ಷೇತ್ರದ ಜನರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ವ್ಯಕ್ತವಾದ ಪ್ರಮುಖ ಸಮಸ್ಯೆಗಳಿಗೆ ಶಿವಕುಮಾರ್ ಅವರು ಸ್ಪಂದಿಸಿದ ರೀತಿ ಹೀಗಿತ್ತು:

    ಜೆ. ಬ್ಯಾಡರಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಖಾತೆ ಮಾಡಿಕೊಡಲು 15- 20 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಪೂರ್ಣಿಮಾ ಅವರು ದೂರು ನೀಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು “ಲಂಚ ಪಡೆಯುವ ಪಿಡಿಓ, ಗ್ರಾಮ ಲೆಕ್ಕಿಗರು ಬೇರೆ ಜಾಗ ಹುಡುಕಿಕೊಳ್ಳಿ. ನನ್ನ ಕ್ಷೇತ್ರದ ಜನರಿಗೆ ತೊಂದರೆ ಆಗಬಾರದು” ಎಂದರು.

    ಲಂಚ ಪಡೆಯುವ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಡಿಸಿಎಂ ಡಿ. ಕೆ.ಶಿವಕುಮಾರ್

    “ಮುಂದಿನ 15 ದಿನಗಳಲ್ಲಿ ಲಂಚ ಪಡೆಯುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮುಂದಿನ ದಿನಗಳಲ್ಲಿ ಈ ಬಗ್ಗೆ ದೂರುಗಳು ಬರಬಾರದು” ಎಂದು ಜಿಲ್ಲಾ ಪಂಚಾಯತಿ ಸಿಇಓ ದಿಗ್ವಿಜಯ ಬೋಡಕೆ ಅವರಿಗೆ ಖಡಕ್ ಸೂಚನೆ ನೀಡಿದರು.

    ಶ್ರವಣಯ್ಯನ ತೋಪಿನ ಸುಶೀಲ, ರತ್ನಮ್ಮ, ರಾಜಮ್ಮ, ಚಿಕ್ಕತಾಯಮ್ಮ ಸೇರಿದಂತೆ 21 ಕ್ಕೂ ಹೆಚ್ಚು ಜನ ಕಳೆದ 10 ವರ್ಷಗಳಿಂದ ಮನೆಗಳಿಗೆ ಹಕ್ಕುಪತ್ರ ನೀಡುತ್ತಿಲ್ಲ ಎಂದು ದೂರಿದಾಗ, “ಮುಂದಿನವಾರದೊಳಗೆ ಇವರಿಗೆ ಹಕ್ಕುಪತ್ರಗಳನ್ನು ನೀಡಬೇಕು” ಎಂದು ಹೇಳಿದರು. ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿಗಳು ಮುಂದಿನವಾರ ಖುದ್ದಾಗಿ ನಾನೇ ಬಂದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದರು.

    ನಿಮ್ಮನ್ನು ನೋಡಲು ಮಾತ್ರ ಬಂದಿದ್ದೇನೆ

    “ಅರ್ಜಿ ಎಲ್ಲಿ, ಏನು ಸಮಸ್ಯೆ” ಎಂದು ಡಿಸಿಎಂ ಅವರ ಪ್ರಶ್ನೆಗೆ ಉತ್ತರಿಸಿದ ಚನ್ನಪಟ್ಟಣದ ನಿವಾಸಿ ಶಿವಗಂಗಮ್ಮ, “ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಶಕ್ತಿ ಯೋಜನೆಯಿಂದ ನನಗೆ ತುಂಬಾ ಒಳ್ಳೆಯದಾಗಿದೆ, ನನ್ನದು ಏನೂ ಸಮಸ್ಯೆ ಇಲ್ಲ. ನಿಮ್ಮನ್ನು ನೋಡಲು ಮಾತ್ರ ಬಂದಿದ್ದೇನೆ” ಎಂದಾಗ ಡಿಸಿಎಂ ನಕ್ಕು ಹಿರಿಯ ಜೀವದ ಆಶೀರ್ವಾದ ಪಡೆದು “ನಿನ್ನಂತೆ ಎಲ್ಲರ ಸಮಸ್ಯೆಯು ಇಲ್ಲದಂತೆ ಆಗಲಿ ಕಣವ್ವ” ಎಂದರು.

    ಹುಣಸನಹಳ್ಳಿಯ ಬಿಸಿಲಮ್ಮ ದೇವಿ ದೇವಸ್ಥಾನದ ಮಾಳಿಗೆ ಸೋರುತ್ತಿದೆ, ಸೇವಾ ಸಮಿತಿಯನ್ನು ಅಭಿವೃದ್ಧಿ ಸಮಿತಿಯನ್ನಾಗಿ ಪರಿವರ್ತಿಸಲು ಅನುವು ಮಾಡಿಕೊಡಬೇಕು ಎನ್ನುವ ಮನವಿಗೆ, ” ದೇವಸ್ಥಾನಕ್ಕೆ ಸಂಬಂಧಪಟ್ಟ ಜಮೀನಿನಲ್ಲಿ ಕಟ್ಟಿರುವ ತೆಂಗಿನ ನಾರಿನ ಕಾರ್ಖಾನೆಗೆ ಪರ್ಯಾಯ ಜಾಗ ಕಲ್ಪಿಸಿ ಅಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಹಾಗೂ ನಿಮ್ಮ ಎಲ್ಲಾ ಮನವಿಗಳಿಗೆ ಪರಿಹಾರ ನೀಡಲಾಗುವುದು” ಎಂದು ಭರವಸೆ ನೀಡಿದರು.

    ಕಾಲಿನ ಸ್ವಾಧೀನ ಕಳೆದುಕೊಂಡಿರುವ ಕರಲಹಳ್ಳಿಯ ವಿಕಲಚೇತನ ಪುಟ್ಟರಾಜು ಅವರಿಗೆ “ಸ್ವಂತ ಉದ್ಯೋಗ ಮಾಡಲು 1 ಲಕ್ಷ ಹಣ ಬರುವಂತೆ ಮಾಡುತ್ತೇನೆ. ಜಿಲ್ಲಾ ಕಾಂಗ್ರೆಸ್ ಪಕ್ಷದ ನಾಯಕರನ್ನು ಭೇಟಿಯಾಗು, ಅವರು ನನ್ನ ಪರವಾಗಿ ನಿನಗೆ ಸಹಾಯ ಮಾಡುತ್ತಾರೆ” ಎಂದರು. ಪುಟ್ಟರಾಜುವಿಗೆ ಸಹಾಯ ಮಾಡಬೇಕು ಎಂದು ಜಿಲ್ಲಾ ನಾಯಕರಿಗೆ ಸೂಚನೆ ನೀಡಿದರು.

    ಸರ್ಕಾರಿ ಕೆಲಸ ಕೊಡಿಸಲು ಆಗುವುದಿಲ್ಲ

    ಸರ್ಕಾರಿ ಕೆಲಸ ಕೊಡಿಸಿ ಎಂಬ ವೈ.ಟಿ. ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜು ಮನವಿಗೆ, “ಸರ್ಕಾರಿ ಕೆಲಸ ಕೊಡಿಸಲು ಆಗುವುದಿಲ್ಲ. ಏನಾದರೂ ಸ್ವಯಂ ಉದ್ಯೋಗ ಮಾಡು” ಎಂದು ಹೇಳಿದರು.

    ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಕರೆ ಮಾಡಿ ಪರಿಹಾರ ಸೂಚನೆ

    ಕೊಂಡಾಪುರ ಕೃಷ್ಣ, ಜಮೀನು ನನ್ನ ಹೆಸರಿಗೆ ಆಗಿ 5 ವರ್ಷಗಳು ಕಳೆದರೂ ಖಾತೆ ನೀಡುತ್ತಿಲ್ಲ ಎಂದು ಹೇಳಿದಾಗ, ಪಕ್ಕದಲ್ಲೇ ಇದ್ದ ಜಿಲ್ಲಾಧಿಕಾರಿಗಳು ಡಿಸಿಎಂ ಸೂಚನೆ ಮೇರೆಗೆ ತಕ್ಷಣ ಕಂದಾಯ ಅಧಿಕಾರಿಗೆ ಕರೆ ಮಾಡಿ ಕೂಡಲೇ ದಾಖಲೆ ನೀಡುವಂತೆ ತಿಳಿಸಿದರು.

    ಚನ್ನಪಟ್ಟಣ ತಾಲ್ಲೂಕಿನ ಅಂಗನವಾಡಿ ಕಾರ್ಯಕಾರ್ಯಕರ್ತೆಯರು ಎಲ್ ಕೆಜಿ, ಯುಕೆಜಿ ಶಿಕ್ಷಕರಾಗಿ ನಮ್ಮನ್ನೇ ಮುಂದುವರೆಸಿ ಎಂದು ಮನವಿ ಮಾಡಿದಾಗ, “ಇದು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕು” ಎಂದರು.

    ಅಂಬಾಡಳ್ಳಿಯ ರೇಣುಕಮ್ಮ, ಮಾದಾಪುರ ಗ್ರಾಮದ ಚಿಕ್ಕಮ್ಮ ಒಂದು ವರ್ಷ ಕಳೆದರೂ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದಾಗ “ಮುಂದಿನ ತಿಂಗಳು ಬರುವಂತೆ ಮಾಡುತ್ತೇನೆ” ಎಂದು ಭರವಸೆ ನೀಡಿದರು.

    ಪೋಡಿ, ಪಹಣಿ, ಬಗರ್ ಹುಕುಂ, ವಸತಿ ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮನವಿಗಳು ಸಲ್ಲಿಕೆಯಾದವು.

  • ಈಜು ತರಬೇತುದಾರರ ನೇಮಕಕ್ಕೆ ಅರ್ಜಿ ಆಹ್ವಾನ

    ಈಜು ತರಬೇತುದಾರರ ನೇಮಕಕ್ಕೆ ಅರ್ಜಿ ಆಹ್ವಾನ

    ಸತ್ಯಕಾಮ ವಾರ್ತೆ ಯಾದಗಿರಿ:

    ಈಜು ತರಬೇತುದಾರರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ರಾಜು ಬಾವಿಹಳ್ಳಿ ಅವರು ತಿಳಿಸಿದ್ದಾರೆ.

    ಯುವಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಖೇಲೋ ಇಂಡಿಯಾ ಸಣ್ಣ ತರಬೇತಿ ಕೇಂದ್ರವನ್ನು ಆರಂಭಕ್ಕೆ ತರಬೇತಿ ಕೇಂದ್ರ ಖೇಲೋ ಇಂಡಿಯಾ ನಿಯಮಾನುಸಾರ ಈಜು ತರಬೇತುದಾರರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ರಾಷ್ಟç, ರಾಜ್ಯಮಟ್ಟದ ಈಜು ಕ್ರೀಡೆಯಲ್ಲಿ ಪದಕ ಪಡೆದ ಅಥವಾ ಸರ್ಕಾರಿ ಅಧಿಕೃತ ಸಂಸ್ಥೆಯಿAದ ಈಜು ತರಬೇತಿ ಪ್ರಮಾಣ ಪತ್ರ ಹೊಂದಿರುವ ಆಸಕ್ತ ಈಜು ತರಬೇತುದಾರರು ತಮ್ಮ ದಾಖಲಾತಿಗಳನ್ನು ಸಿ.ವಿ (RESUME) ಯೊಂದಿಗೆ ಸಹಾಯಕ ನಿರ್ದೇಶಕರ, ಕಾರ್ಯಾಲಯ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಚಿತ್ತಾಪೂರ ರಸ್ತೆ, ಯಾದಗಿರಿ 2024ರ ಜುಲೈ 5ರ ಒಳಗೆ ಅರ್ಜಿಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     

     

  • ನಗರ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ನಡೆದ ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಶಿಬಿರ

    ನಗರ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ನಡೆದ ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಶಿಬಿರ

    ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು ಶ್ಲಾಘನೀಯ ನಗರಸಭೆ ಸದಸ್ಯ ಎಂ.ಡಿ ಮಹೆಬೂಬ ಅಲಿ

     

     

    ಸತ್ಯಕಾಮ ವಾರ್ತೆ ಯಾದಗಿರಿ:

    ವಸತಿ ರಹಿತರಿಗೆ ಇರುವ ಉಚಿತ ಆಶ್ರಯ ಕೇಂದ್ರದಲ್ಲಿ ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು ಶ್ಲಾಘನೀಯವಾಗಿದ್ದು ಈ ಕೇಂದ್ರಕ್ಕೆ ಮೂಲಸೌಕರ್ಯ ಒದಗಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ನಗರಸಭೆ ಸದಸ್ಯ ಎಂ.ಡಿ ಮಹೆಬೂಬ ಅಲಿ ಅವರು ಅಭಿಪ್ರಾಯಪಟ್ಟರು.

    ನಗರಸಭೆ, ಜಿಲ್ಲಾ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ( ಡೇ- ನಲ್ಮಾ) ಅಭಿಯಾನದಡಿಯಲ್ಲಿ ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಗರದ ವಸತಿರಹಿತರ ಆಶ್ರಯ ಕೇಂದ್ರದಲ್ಲಿ ನಡೆದ ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ಶಿಬಿರವನ್ನು ಸಸಿಗಳನ್ನು ನೆಟ್ಟು ಹಾಗೂ ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಆರೋಗ್ಯವೇ ಭಾಗ್ಯ, ಆರೋಗ್ಯ ವಾಗಿದ್ದರೆ ಸುಖವಾಗಿ ಬಾಳಬಹುದ ಎಂದರು. ಎಲ್ಲರೂ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದರು.

    ಕೌಶಲ್ಯಾಭಿವೃದ್ದಿ ಇಲಾಖೆಯ ಅಭಿಯಾನ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ ಮಾತನಾಡಿ, ನಗರದಲ್ಲಿ ಕಾರ್ಮಿಕರಾಗಿದ್ದು, ವಸತಿ ಇಲ್ಲದವರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡುವ ಉದ್ದೇಶದಿಂದ ಈ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇಲ್ಲಿ ವಾಸ್ತವ್ಯ ಇರುವವರಿಗೆ ಊಟ, ತಿಂಡಿಯ ಅಗತ್ಯವಿದ್ದರೆ ಅದನ್ನು ಕೂಡ ಒದಗಿಸಿಕೊಡಲಾಗುತ್ತದೆ ಎಂದರು. ಆಶ್ರಯದಲ್ಲಿ ಇರುವವರು ಸ್ವಯಂ ಉದ್ಯೋಗಿಗಳಾಗಲು ಸರ್ಕಾರದ ಹಲವು ಯೋಜನೆಗಳಿದ್ದು ಅವುಗಳ ಸದುಪಯೋಗ ಪಡೆಯಲು ಅಗತ್ಯ ಸಹಕಾರವನ್ನು ಇಲಾಖೆಯಿಂದ ನೀಡುತ್ತೇವೆ ಎಂದರು.

    ನಗರಸಭೆಯ ಮ್ಯಾನೇಜರ್ ಅಶ್ವಿನಿ ಅವರು ಮಾತನಾಡಿ, ವಸತಿರಹಿತ ನಿರಾಶ್ರಿತರಿಗೆ ಆಶ್ರಯ ನೀಡೋ ನಿಟ್ಟಿನಲ್ಲಿ ಸರ್ಕಾರಗಳು ಅನೇಕ ಯೋಜನೆಗಳನ್ನ ಜಾರಿಗೆ ತಂದಿವೆ. ಇಂತಹ ನಿರಾಶ್ರಿತರ ರಕ್ಷಣೆ ನಮ್ಮ ಕರ್ತವ್ಯ ಆಗಿದೆ ಎಂದರು.

    ಡಾ.ಮಹೇಶ ಅವರು ನಿರಾಶ್ರಿತರಿಗೆ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದರು

    ಈ ಸಂದರ್ಭದಲ್ಲಿ ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಭೀಮಣ್ಣ ವೈದ್ಯ, ನಗರಠಾಣೆಯ ಎಎಸ್ಐ ಹಸನ್ ಪಟೇಲ್, ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ ದೊಡ್ಡಮನಿ, ನಗರಸಭೆಯ ಸಿಬ್ಬಂದಿಗಳಾದ ಪದ್ಮಾ, ಮಂಜುನಾಥ, ಶಿವಪುತ್ರ, ಸಿಆರ್ಪಿ ಗಳಾದ ಅವ್ವಮ್ಮ, ಪ್ರೇಮಾ ಸಂಸ್ಥೆಯ ವ್ಯವಸ್ಥಾಪಕರಾದ ಮೌನೇಶ ಇಟಗಿ, ಭೀಮಾಶಂಕರ ಕಟ್ಟಿಮನಿ, ಸೇವಕರಾದ ಬೀರಲಿಂಗಪ್ಪ ಕಿಲ್ಲನಕೇರಾ, ಕೇರಟೇಕರಗಳಾದ ಮಲ್ಲು ನಾಟೇಕಾರ, ದೇವಮ್ಮ, ಕೃಷ್ಣ ಸೇರಿದಂತೆ ನಿರಾಶ್ರಿತರು ಉಪಸ್ಥಿತರಿದ್ದರು.

  • ಶಿಕ್ಷಕರು ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜೊತೆಗೆ ಸ್ಪರ್ಧಾ ಮನೋಭಾವನೆ ಮೂಡಿಸಿ : ಶಾಸಕ ಕಂದಕೂರ

    ಶಿಕ್ಷಕರು ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಜೊತೆಗೆ ಸ್ಪರ್ಧಾ ಮನೋಭಾವನೆ ಮೂಡಿಸಿ : ಶಾಸಕ ಕಂದಕೂರ

    
    
    
    ಸತ್ಯಕಾಮ ವಾರ್ತೆ ಯಾದಗಿರಿ:

    ಪ್ರಸಕ್ತ ದಿನಗಳಲ್ಲಿ ಶಿಕ್ಷಣಕ್ಕೆ ಎಲ್ಲರೂ ಒತ್ತು ನೀಡುವುದು ಅವಶ್ಯಕವಾಗಿದೆ, ಈ ನಿಟ್ಟಿನಲ್ಲಿ ವಸತಿ ಶಾಲೆಗಳಲ್ಲಿ ಶಿಕ್ಷಕರು ವಿಧ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿ, ಅವರಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಅವರಲ್ಲಿ ಸ್ಪರ್ಧಾ ಮನೊಭಾವನೆ ಮೂಡಿಸಿದಲ್ಲಿ ಮಾತ್ರ ಅವರಲ್ಲಿರುವ ಪ್ರತಿಭೆಗಳು, ಜ್ಞಾನ ವಿಕಾಸವಾಗುತ್ತದೆ ಎಂದು ಗುರುಮಿಠಕಲ್ ಮತಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅಭಿಪ್ರಾಯ ಪಟ್ಟರು.

    ಗುರುಮಿಠಕಲ್ ಮತಕ್ಷೇತ್ರದ ಕೊಟಗೇರಾ ಗ್ರಾಮದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಯಾದಗಿರಿ ವತಿಯಿಂದ ೨೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಡಾ. ಬಿ.ಆರ್ ಅಂಬೇಡ್ಕರ ವಸತಿ ಶಾಲೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ, ಶುದ್ಧ ಕುಡಿಯುವ ನೀರು, ಉದ್ಯೋಗ ಸೃಷ್ಟಿಗೆ ಹೆಚ್ಚು ಗಮನ ನೀಡುತ್ತಿದ್ದೇನೆ, ಕಾರಣ ಗ್ರಾಮೀಣ ಭಾಗದ ಜನರು ತಮ್ಮ ಮಕ್ಕಳಿಗೆ ತಪ್ಪದೇ ಶಿಕ್ಷಣ ಒದಗಿಸಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.

    ಇಂತಹ ಒಳ್ಳೆಯ ಪರಿಸರದಲ್ಲಿ ಸುಸಜ್ಜಿತ ವಸತಿ ಶಾಲೆ ನಿರ್ಮಾಣ ಮಾಡಲಾಗಿದೆ, ಇಲ್ಲಿನ ಶಿಕ್ಷಕರು ಪರಿಸರ ಸ್ವಚ್ಚತೆ ಆದ್ಯತೆ ನೀಡುವ ಜೊತೆಗೆ ನಿಮಗೆ ತಂಗಲು ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗಿದೆ, ಇಲ್ಲಿಯೇ ಎಲ್ಲರೂ ವಾಸ ಮಾಡಿ, ವಿಧ್ಯಾರ್ಥಿಗಳಿಗೆ ಇನ್ನೂ ಹೆಚ್ಚು ಬೋಧನೆ ಮಾಡುವ ಜೊತೆಗೆ ಅವರ ಚಟುವಟಿಕೆಗಳ ಮೇಲೆ ಗಮನ ಹರಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು.

    ಕೆಕೆಆರ್‌ಡಿಬಿ ಯೋಜನೆಯಡಿಯಲ್ಲಿ ವಸತಿ ಶಾಲೆಯ ಶಿಕ್ಷಕರಿಗೆ ಸಂಬಳ ನೀಡಲಾಗುತ್ತಿದೆ, ಈ ಹಿಂದೆ ನಮ್ಮ ತಂದೆಯವರು ಶಾಸಕರಾಗಿದ್ದ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಶಾಲಾ ಕೋಣೆಗಳನ್ನು ಮಂಜೂರು ಮಾಡಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದರು, ಜಿಲ್ಲೆಯಲ್ಲಿ ೩ ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆಯಿದೆ, ನಾನು ಕೂಡ ಸರ್ಕಾರದ ಮೇಲೆ ನೇಮಕಕ್ಕೆ ಒತ್ತಡ ಹಾಕಿದ್ದೇನೆ, ಅಲ್ಲದೇ ಜಿಲ್ಲಾ ಕೇಂದ್ರ ಯಾದಗಿರಿಯಲ್ಲಿ ೨ ಬಿಸಿಎಂ ವಸತಿ ನಿಲಯಗಳ ಸ್ಥಾಪನೆಗೆ ಕ್ರಮ ಕೈಗೊಂಡಿದ್ದೇನೆ ಎಂದರು.

    ನೆರೆಯ ಮೊಟನಳ್ಳಿ ಕ್ರಾಸ್ ಹತ್ತಿರ ಇರುವ ಮೋರಾರ್ಜಿ ವಸತಿ ಶಾಲೆ ದುರಸ್ತಿಗೆ ಆದಷ್ಟು ಬೇಗನೇ ಕ್ರಮ ಕೈಗೊಂಡು ವಿಧ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲತೆ ಮಾಡಿಕೊಡಲಾಗುವುದು ಎಂದು ತಿಳಿಸಿದರು,ಮತಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಸಾವಿರಾರು ಜನರು ಉದ್ಯೊಗ ಹರಸಿ ಬೃಹತ್ ನಗರಗಳಿಗೆ ವಲಸೆ ಹೋಗಿದ್ದಾರೆ, ಉನ್ನತ ಅಭ್ಯಾಸ ಮಾಡಿದ ನಮ್ಮ ಯುವಕರು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ, ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಬೃಹತ್ ಕೈಗಾರಿಕಾ ಸಚಿವರಾಗಿದ್ದಾರೆ, ಕಡೆಚೂರ-ಬಾಡಿಯಾಲ ಭಾಗದಲ್ಲಿ ೩ ಸಾವಿರ ಎಕರೆ ಕೈಗಾರಿಕಾ ಭೂಮಿಯಿದೆ, ನಾನೂ ಈಗಾಗಲೇ ಅವರನ್ನು ಭೇಟಿಯಾಗಿ ಇಲ್ಲಿನ ವಾಸ್ತವಿಕ ಪರಿಸ್ಥಿತಿಯನ್ನು ವಿವರಿಸಿ, ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಅದ್ಯತೆ ನಿಡಬೇಕೆಂದು ಮನವಿ ಮಾಡಿದ್ದೇನೆ, ಅವರಿಂದಲೂ ಕೂಡ ಸಕರಾತ್ಮಕ ಬೆಂಬಲ ದೊರೆಯಲಿದೆ ಎಂದು ಹೇಳಿದರು.

    ಈ ಹಿಂದೆ ಶಾಸಕರಾಗಿದ್ದ ನಮ್ಮ ತಂದೆ ದಿ. ನಾಗನಗೌಡ ಕಂದಕೂರ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದರು, ಅವರ ಜೊತೆಯಲ್ಲಿ ನಾನೂ ಕೂಡ ಜನರ ಹಾಗೂ ಪಕ್ಷದ ಕಾರ್ಯಕರ್ತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂಧಿಸಿದ ಪರಿಣಾಮ ನೀವೂ ನನ್ನನ್ನೂ ಶಾಸಕನಾಗಿ ಆಯ್ಕೆ ಮಾಡಿದ್ದೀರಿ, ಈ ಭಾಗದ ಹಳ್ಳಿಗಳ ಪ್ರಗತಿಗೆ ಆದ್ಯತೆ ಮೇರೆಗೆ ನಾನೂ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ವೇದಿಕೆ ಮೇಲೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸರೋಜಾ, ಕ್ಷೇತ್ರ ಶಿಕ್ಷಣಾಧಿಕಾರಿ ಋಷಿಕೇಶ, ಬಿಆರ್‌ಸಿ ಮಲ್ಲಿಕಾರ್ಜುನ, ಮೋಟನಳ್ಳಿ ಗ್ರಾ.ಪಂ ಅಧ್ಯಕ್ಷೆ ಧನಲಕ್ಷಿö್ಮ, ಪ್ರಾಂಶುಪಾಲೆ ರಮಾಭಾಯಿ, ಗುರುಮಿಠಕಲ್ ಪಟ್ಟಣ ಪಂಚಾಯತ ಅಧ್ಯಕ್ಷ ಪಾಪಣ್ಣ ಮನ್ನೆ, ಬ್ಲಾಕ್ ಜೆಡಿಎಸ್ ಅಧ್ಯಕ್ಷ ಪ್ರಕಾಶ ನೀರಟ್ಟಿ, ರಾಮಣ್ಣ ಕೋಟಗೇರಾ, ಸುಭಾಶ್ಚಂದ್ರ ಕಟಕಟಿ ಹೊನಗೇರಾ, ದೀಪಕ್ ಬೆಳ್ಳಿ, ರವಿ ಪಾಟೀಲ್, ಗಿರಿನಾಥರಡ್ಡಿ ಚಿಂತಗುAಟಾ, ಅಶೋಕ ಕೋಟಗೇರಾ, ಬಂದಪ್ಪಗೌಡ ಲಿಂಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಮತದಾನದ ವಿಡಿಯೋ ರೆಕಾರ್ಡ್ ಮಾಡಿ ಕೆಲವು ಮತದಾರರಿಂದ ನಿಯಮ ಉಲ್ಲಂಘನೆ

    ಸತ್ಯಕಾಮ ವಾರ್ತೆ ಯಾದಗಿರಿ:
    ಚುನಾವಣಾ ಆಯೋಗದ ಸೂಚನೆಯನ್ನು ಉಲ್ಲಂಘಿಸಿ ಕೆಲವು ಕಡೆ  ಮತದಾರರು ಮತದಾನದ ನಂತರ ಮೊಬೈಲ್‌ ರೆಕಾರ್ಡ್‌ ಹಾಗೂ ಸೆಲ್ಫಿ ಕ್ಲಿಕಿಸಿಕೊಂಡಿರುವ ಘಟನೆಗಳು ಜಿಲ್ಲೆಯ ಕೆಲವಡೆ ನಡೆದಿವೆ.

    ಮತಗಟ್ಟೆಯೊಳಗೆ ಮೊಬೈಲ್ ತೆಗೆದುಕೊಂಡು ಹೋಗಬಾರದು ಎಂಬ ಆದೇಶವಿದ್ರು, ಕೂಡ ಜಿಲ್ಲೆಯ ಕೆಲವು ಕಡೆ ಹಲವು ಯುವಕರು ತಾವು ಮತದಾನ ಮಾಡಿದ ವೀಡಿಯೋ, ಪೊಟೋ ತೆಗದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಒಂದು ಶೋಕಿಯಾಗಿದೆ.

    ಇದಕ್ಕೆ ಸಾಕ್ಷಿಯಂತೆ ವಡಗೇರಾ ತಾಲೂಕಿನ ಕಾಡಂಗೇರಾ (ಬೀ) ಗ್ರಾಮದಲ್ಲಿ ಯುವಕನೊಬ್ಬ ಬಿಜೆಪಿ ಪಕ್ಷಕ್ಕೆ ಮತ ಹಾಕಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಜೊತೆಗೆ, ಬ್ಯಾಲೆಟ್‌ ಪೇಪರ್‌ ಮುದ್ರಣ ಆಗುವುದನ್ನೂ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ, ನಂತರ ಕೆಲ ಗಂಟೆಗಳ ನಂತರ ತೆಗೆದು ಹಾಕಿದ್ದೇನೆ.

    ಇದಲ್ಲದೆ ಯಾದಗಿರಿಯ ಗಂಗು ಮಡಿವಾಳ ಎಂಬ ಯುವಕ ಬಿಜೆಪಿ ಪಕ್ಷಕ್ಕೆ ಮತ ಹಾಕಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಜೊತೆಗೆ, ಬ್ಯಾಲೆಟ್‌ ಪೇಪರ್‌ ಮುದ್ರಣ ಆಗುವುದನ್ನೂ ವಿಡಿಯೋ ಮಾಡಿಕೊಂಡು ಫೇಸ್ ಬುಕ್, ವಾಟ್ಸಾಪ್ ಸ್ಟೇಟ್ ಸನಲ್ಲಿ ಹಂಚಿಕೊಂಡಿದ್ದಾರೆ.

  • ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಘದ ಪದಾಧಿಕಾರಿಗಳ ಅವಿರೋಧ ಆಯ್ಕೆ

    ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಘದ ಪದಾಧಿಕಾರಿಗಳ ಅವಿರೋಧ ಆಯ್ಕೆ

     


    ಕಲಬುರಗಿ: ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಘದ ಸಭೆಯು ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೆಸ್ವಾಮ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಸಂಪಾದಕರ ಸಮಸ್ಯೆಗಳು ಹಾಗು ಅದರ ಪರಿಹಾರ ಹೇಗೆ ಕಂಡುಕೊಳ್ಳಬೇಕೆಂದು ಎಳೆ ಎಳೆಯಾಗಿ ವಿವರಿಸಿದರು. ತದ ನಂತರ ಕಲಬುರಗಿ ಜಿಲ್ಲಾ ಸಮಿತಿ ರಚನೆಗಾಗಿ ಹೆಸರುಗಳನ್ನು ಸೂಚಿಸಲು ತಿಳಿಸಿದಾಗ ಎಲ್ಲ ಸಂಪಾದಕರು ಒಮ್ಮತದ ಅಭ್ಯರ್ಥಿಗಳನ್ನು ಅವಿರೋಧವಾಗಿ ಕಲಬುರಗಿ ಜಿಲ್ಲಾ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘಕ್ಕೆ ಆಯ್ಕೆಯಾದರು.
    ಜಿಲ್ಲಾ ಅಧ್ಯಕ್ಷರಾಗಿ ಸಿದ್ರಾಮಪ್ಪ ಮಾಲಿಬಿರಾದಾರ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಪಿ. ಮಣ್ಣೂರ, ಉಪಾಧ್ಯಕ್ಷರಾಗಿ ಸುರೇಶ ಗೌರೆ, ಅಜೀಜುಲ್ಲಾ ಸರ್ಮಸ್ತ, ಚಂದ್ರಕಾಂತ ಹಾವನೂರ, ಭರತ ಖಮಿತಕರ, ವಾಸುದೇವ ದೇಸಾಯಿ, ಖಜಾಂಚಿಯಾಗಿ ಗುರುರಾಜ ಕುಲಕರ್ಣಿ, ಕಾರ್ಯದರ್ಶಿಗಳಾಗಿ ಹಣಮಂತ ಬೋಧನಕರ್, ಶಿವಕುಮಾರ ಸಿಂಧೆ, ಸಹ ಕಾರ್ಯದರ್ಶಿಗಳಾಗಿ ವಿಜಯಕುಮಾರ ಜಿಡಗಿ, ಮಲ್ಲಿಕಾರ್ಜುನ ಜೋಗ, ಜಂಟಿ ಕಾರ್ಯದರ್ಶಿಗಳಾಗಿ ಜಯಪ್ರಕಾಶ ಪೂಜಾರಿ, ಅವಿನಾಶ ಕೊಳ್ಳೂರ, ಸಂಘಟನಾ ಕಾರ್ಯದರ್ಶಿಗಳಾಗಿ ಬಾಲಾಜಿ ಚಿತ್ತೇಕರ, ಅನೀಲ ಕಪನೂರ ಮತ್ತು ರಾಜ್ಯ ಸಮಿತಿಯ ಹಿರಿಯ ಸಲಹೆಗಾರರಾಗಿ ಸಿದ್ದಣ್ಣ ಮಾಲಗಾರ, ಶಿವರಾಯ ದೊಡ್ಮನಿ, ದೇವೇಂದ್ರಪ್ಪ ಕಪನೂರ, ಶಂಕರ ಕೋಡ್ಲಾ, ಮತ್ತು ಬಿ.ವ್ಹಿ.ಚಕ್ರವರ್ತಿಯವರನ್ನು ಆಯ್ಕೆ ಮಾಡಲಾಗಿದೆ.‌ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಬಸವ ಬಾಗಲವಾಡ, ರಾಜ್ಯ ಖಜಾಂಚಿ ಖಾನಸಾಬ ಮೋಮಿನ, ರಾಜ್ಯ ಕಾರ್ಯದರ್ಶಿ ಸುರೇಶ ಶಿಂಧೆ ಮತ್ತು ರಾಜ್ಯ ಸಹ ಕಾರ್ಯದರ್ಶಿ ಬೌದ್ಧಪ್ರಿಯ ನಾಗಸೇನ ಮತ್ತಿತರರು ಉಪಸ್ಥಿತರಿದ್ದರೆಂದು ನೂತನ ಜಿಲ್ಲಾ‌ ಪ್ರಧಾನ ಕಾರ್ಯದರ್ಶಿ ಆನಂದ‌ ಪಿ. ಮಣ್ಣೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಎಸ್.ಎಸ್.ಎಲ್.ಸಿ. ಪರೀಕ್ಷೆ ನಕಲು,ಇಬ್ಬರ ಶಿಕ್ಷಕರ ಅಮಾನತ್ತು

     

    ಸತ್ಯಕಾಮ ವಾರ್ತೆ ಯಾದಗಿರಿ:
    ಜಿಲ್ಲೆಯಾದ್ಯಂತ ಎಸ್.ಎಸ್.ಎಲ್. ಸಿ ಪರೀಕ್ಷೆ ಆರಂಭವಾಗಿದ್ದು, ಸೋಮವಾರ ನಡೆದ ಪ್ರಥಮ ಭಾಷೆ ಪರೀಕ್ಷೆಯಲ್ಲಿ ನಕಲು ಮಾಡಲು ಸಹಕರಿಸಿದ ಆರೋಪದ ಮೇರೆಗೆ ಇಬ್ಬರು ಸಹ ಶಿಕ್ಷಕರನ್ನು ಅಮಾನತ್ತುಗೊಳಿಸಿ ಡಿ.ಡಿ.ಪಿ.ಐ
    ಮಂಜುನಾಥ ಎಚ್.ಟಿ. ಅವರು ಆದೇಶ ಹೊರಡಿಸಿದ್ದಾರೆ.

    ಸುರಪುರ ತಾಲೂಕಿನ ಹುಣಸಗಿ ಸರಕಾರಿ ಪದವಿ ಪೂರ್ವ ಕಾಲೇಜು (ಬಾಲಕರ) ಮತ್ತು ಸುರಪುರ ಪದವಿ ಪೂರ್ವ ಕಾಲೇಜು (ಬಾಲಕರ) ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರದಲ್ಲಿ ಕ್ರಮವಾಗಿ ಸುರಪುರ ತಾಲೂಕಿನ ಏವೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸಾಹೇಬಗೌಡ ಉಕ್ಕಾಲಿ ಮತ್ತು ಸುರಪುರ ತಾಲೂಕಿನ ಝಂಡದಕೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಹಣಮಂತ್ರಾಯ ಇವರು ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ವಿಫಲರಾದ ಕಾರಣ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು-1957 ನಿಯಮ 10(1) ರನ್ವಯ ಅಮಾನತ್ತು ಮಾಡಲಾಗಿದೆ.

    ಯಾದಗಿರಿ ಜಿಲ್ಲಾ ಪಂಚಾಯತ ಸಿ.ಇ.ಓ ಅವರು ವೆಬ್ ಕಾಸ್ಟಿಂಗ್ ಸಿ.ಸಿ. ಕ್ಯಾಮರಾ ವೀಕ್ಷಣೆ ಮಾಡಿದಾಗ ಹುಣಸಗಿ ಮತ್ತು ಸುರಪುರ ಈ ಪರೀಕ್ಷಾ ಕೇಂದ್ರದಲ್ಲಿ ನಕಲು ನಡೆಯುತ್ತಿದರು, ಕೊಠಡಿ ಮೇಲ್ವಿಚಾರಕರು ಯಾವುದೇ ಕ್ರಮ‌ ಕೈಗೊಳ್ಳದ ಕಾರಣ ಕೊಠಡಿ ಮೆಲ್ವಿಚಾರಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿ.ಡಿ.ಪಿ.ಐ ಅವರಿಗೆ ಸೂಚಿಸಿದರು.

    ನೌಕರರು ಕರ್ನಾಟಕ‌ ನಾಗರಿಕ ಸೇವಾ ನಿಯಮ-98ರಂತೆ ಜೀವನಾಂಶ ಭತ್ಯೆ ಪಡೆಯಲು ಅರ್ಹರಿದ್ದು, ಸಕ್ಷಮ ಪ್ರಾಧಿಕಾರಿಯ ಲಿಖಿತ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

  • ಸತ್ಯಕಾಮ ವರದಿ ಫಲಶ್ರುತಿ : ಗುತ್ತಿಗೆದಾರರಿಂದ ಹಣ ಪಡೆದ ಮೀನಾಕ್ಷಿ ಅಮಾನತ್ತು

    ಸತ್ಯಕಾಮ ವರದಿ ಫಲಶ್ರುತಿ : ಗುತ್ತಿಗೆದಾರರಿಂದ ಹಣ ಪಡೆದ ಮೀನಾಕ್ಷಿ ಅಮಾನತ್ತು

     

    *ಸತ್ಯಕಾಮ ವಾರ್ತೆ ಯಾದಗಿರಿ:*
    ಶಹಾಪುರ ತಾಲೂಕು ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕಿ ಮೀನಾಕ್ಷಿ ಎಂಬುವವರು ಗುತ್ತಿಗೆದಾರರಿಂದ 14 ಸಾವಿರ ರೂ ಹಣ ಪಡೆದಿರುವ ಬಗ್ಗೆ ಸತ್ಯಕಾಮ ವೆಬ್ ಮತ್ತು ಪತ್ರಿಕೆಯಲ್ಲಿ ವರದಿ ಪ್ರಕಟಿಸಿಲಾಗಿತ್ತು, ವರದಿ ಪ್ರಕಟವಾದ ಬೆನ್ನಲೇ ಜಿಲ್ಲಾಪಂಚಾಯತ್ ಸಿಇಒ ಗರಿಮಾ ಪನ್ವಾರ್ ಕಿರಿಯ ಲೆಕ್ಕ ಸಹಾಯಕಿ ಮೀನಾಕ್ಷಿಯವರನ್ನು ಅಮಾನತ್ತು ಮಾಡಿ ಆದೇಶಿಸಿದ್ದಾರೆ.

    ಪ್ರಸ್ತುತ ತಾಲ್ಲೂಕು ಪಂಚಾಯತ ಕಾರ್ಯಾಲಯ ಶಹಾಪೂರನಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಮೀನಾಕ್ಷಿಯವರು ಗುತ್ತಿಗೆದಾರರಿಂದ ಹಣ ಪಡೆದಿರುವುದು ಸರ್ಕಾರಿ ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿ ನಡೆದುಕೊಂಡು ದುರ್ನಡತೆಯನ್ನು ಎಸಗಿರುವುದರಿಂದ ಹಾಗೂ ಕರ್ನಾಟಕ ನಾಗರೀಕ ಸೇವಾ(ನಡತೆ) ನಿಯಮಗಳು 2021, ನಿಯಮ 3ರ ನಿಯಮ (i) (ii) (iii) ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ, ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು * ಮೇಲ್ಮನವಿ) ನಿಯಮಗಳು, 1957 ರ ನಿಯಮ 10(1)(ಡಿ) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.

    ಸದರಿಯವರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ. ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮಗಳು, 1957 ರ ನಿಯಮ 98 ರ ಅನುಸಾರ ಜೀವನ ನಿರ್ವಹಣೆ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಸಿಇಒ ಗರಿಮಾ ಪನ್ವಾರ್ ಅವರು ಆದೇಶಿಸಿದ್ದಾರೆ.

  • ಹತ್ತನೇ ತರಗತಿ ಪರೀಕ್ಷೆ ಬರೆದ ತಾಯಿ- ಮಗ

    ಹತ್ತನೇ ತರಗತಿ ಪರೀಕ್ಷೆ ಬರೆದ ತಾಯಿ- ಮಗ

    ಸತ್ಯಕಾಮ ವಾರ್ತೆ ಶಹಾಪುರ:
    ಎಸ್,ಎಸ್.ಎಲ್ ಸಿ.ಪರೀಕ್ಷೆಯ ಮೊದಲ ದಿನವಾದ ಸೋಮವಾರದಂದು ತಾಲೂಕಿನಾದ್ಯಂತ ಸುಗಮವಾಗಿ ನಡೆದಿದ್ದು.ಅದರಲ್ಲೂ ತಾಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮಗನೊಂದಿಗೆ ಇಂದು ತಾಯಿ ಹತ್ತನೇ ತರಗತಿಯ ಪರೀಕ್ಷೆ ಬರೆಯಲು ಆಗಮಿಸಿದ್ದು ವಿಶೇಷವಾಗಿತ್ತು.ಒಟ್ಟು ಈ ಪರೀಕ್ಷಾ ಕೇಂದ್ರದಲ್ಲಿ 17 ಬ್ಲಾಕ್ ಗಳಿದ್ದು 387 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು,14 ವಿದ್ಯಾರ್ಥಿಗಳು ಗೈರು ಹಾಜರಿದ್ದರು.

    33 ವರ್ಷದ ಗಂಗಮ್ಮ ಎಂಬ ಮಹಿಳೆ ಉತ್ಸಾಹದಿಂದ ಪರೀಕ್ಷೆ ಬರೆಯಲು ಆಗಮಿಸಿದ್ದರು, ಎಸ್.ಎಸ್,ಎಲ್,ಸಿ ಪರೀಕ್ಷೆ ಬರೆಯುವ ಮೂಲಕ ರಾಜ್ಯದಾದ್ಯಂತ ಗಮನ ಸೆಳೆದಿದ್ದಾರೆ,ನನಗೆ ಓದಬೇಕೆಂಬ ಬಯಕೆ ತುಂಬಾ ಇತ್ತು ಆದರೆ ಮನೆಯಲ್ಲಿ ಬಡತನ ಹಾಗೂ ನನಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿಕೊಟ್ಟ ಕಾರಣದಿಂದಾಗಿ ನನಗೆ ವಿದ್ಯಾಭ್ಯಾಸ ಮೂಟಕು ಗೊಳಿಸಲು ಕಾರಣವಾಯಿತು,ಈಗ ನನಗೆ ಅವಕಾಶ ಸಿಕ್ಕಿದೆ,ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಷ್ಟಪಟ್ಟು ಓದಿ 10ನೇ ತರಗತಿ ಪಾಸ್ ಮಾಡಿ ಯಾವುದಾದರೂ ಸರ್ಕಾರಿ ಹುದ್ದೆ ಪಡಿಯಬೇಕೆಂಬ ಆಸೆ ನನ್ನೊಳಗೆ ಚಿಗುರೊಡೆದ ಕಾರಣ ಇಂದು ನನ್ನ ಮಗ ಮಲ್ಲಿಕಾರ್ಜುನ ಜೊತೆಗೆ ನಾನು ಹತ್ತನೇ ತರಗತಿಯ ಪರೀಕ್ಷೆ ಬರೆಯುತ್ತಿದ್ದೇನೆ ಎಂದರು.

    ಮನೆಯಲ್ಲಿ ತನ್ನ ಮಗನೊಂದಿಗೆ ಸತತ ಅಭ್ಯಾಸ ಮಾಡಿ ತನಗಿಂತ ಹದಿನೈದು ವರ್ಷದ ಕಿರಿಯ ವಿದ್ಯಾರ್ಥಿಗಳ ಜೊತೆಗೆ ಇಂದು ಪರೀಕ್ಷೆ ಬರೆಯಲು ತುಂಬಾ ನನಗೆ ಖುಷಿ ನೀಡುತ್ತಿದೆ ಎಂದು ಮುಗುಳ್ನಕ್ಕರು ಕಾರಣ ಇಷ್ಟೇ. ನನ್ನಂತ ಅದೆಷ್ಟೋ ಜನ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ,ಅವರನ್ನೆಲ್ಲರನ್ನು ಪ್ರೇರೇಪಿಸುತ್ತಾ,ಶಾಲೆಗೆ ಕರೆ ತರುವುದೇ ನನ್ನ ಮುಖ್ಯ ಉದ್ದೇಶವಾಗಿದೆ.ಕಲಿಯುವವರಿಗೆ ಯಾವುದೇ ಸಮಯ ಹಾಗೂ ವಯಸ್ಸಿನ ಮಿತಿ ಇಲ್ಲ ಎಂಬ ಮಾತನ್ನು ಗಂಗಮ್ಮಳು ಮತ್ತೊಮ್ಮೆ ಸಾಬೀತು ಮಾಡಿದ್ದಾಳೆ.

    ಅಭ್ಯಾಸಕ್ಕೆ ವಯಸ್ಸಿನ ಹಂಗಿಲ್ಲ ಎಂಬ ಮಾತಿಗೆ ಗಂಗಮ್ಮಳೆ ಸಾಕ್ಷಿ, ಇಂಥ ವಯಸ್ಸಿನಲ್ಲೂ ಮಗನೊಂದಿಗೆ ಪರೀಕ್ಷೆ ಬರೆಯಲು ಮುಂದಾಗಿದ್ದು ನಿಜಕ್ಕೂ ಇವರ ಕಾರ್ಯ ಶ್ಲಾಘನೀವಾದದ್ದು,ಎಂದು ಗ್ರಾಮದ ನಾಗರಿಕರು,ಪ್ರಗತಿಪರ ಚಿಂತಕರು ಹರ್ಷ ಭಕ್ತ ಪಡಿಸಿದ್ದಾರೆ ಶಿಕ್ಷಣ ವಂಚಿತ ಮಹಿಳೆಯರಿಗೆ ಇವರೇ ಮಾದರಿ ಎಂಬುವುದು ತೋರಿಸಿಕೊಟ್ಟಿದ್ದಾರೆ.ಹಲವಾರು ಜವಾಬ್ದಾರಿಗಳ ನಡುವೆ ಶ್ರದ್ಧೆಯಿಂದ ಮಾಡಿದ ಸಾಧನೆ ನಮ್ಮ ಮಕ್ಕಳಿಗೆ ಮಾದರಿಯಾದರೆ ಎಷ್ಟೊಂದು ಒಳ್ಳೆಯದು ಎಂದೆನಿಸುತ್ತಿದೆ.