Category: State

  • ಸಂಕ್ರಾಂತಿ–ಗಣರಾಜ್ಯೋತ್ಸವಕ್ಕೆ ಪ್ರಯಾಣಿಕರ ಭಾರೀ ದಟ್ಟಣೆ: ಮೈಸೂರು–ಬೆಳಗಾವಿ ನಡುವೆ 3 ಟ್ರಿಪ್ ವಿಶೇಷ ರೈಲು ಘೋಷಣೆ

    ಸಂಕ್ರಾಂತಿ–ಗಣರಾಜ್ಯೋತ್ಸವಕ್ಕೆ ಪ್ರಯಾಣಿಕರ ಭಾರೀ ದಟ್ಟಣೆ: ಮೈಸೂರು–ಬೆಳಗಾವಿ ನಡುವೆ 3 ಟ್ರಿಪ್ ವಿಶೇಷ ರೈಲು ಘೋಷಣೆ

     


    ಸಂಕ್ರಾಂತಿ ಹಬ್ಬ ಮತ್ತು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ರೈಲುಗಳಿಗೆ ಭಾರೀ ಬೇಡಿಕೆ ಉಂಟಾಗುತ್ತಿರುವುದರಿಂದ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನೈಋತ್ಯ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಮತ್ತು ಬೆಳಗಾವಿ ನಡುವೆ ಮೂರು ಟ್ರಿಪ್‌ಗಳ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ.

     

    ಮೈಸೂರು–ಬೆಳಗಾವಿ ವಿಶೇಷ ರೈಲು (06285)

    ಈ ವಿಶೇಷ ರೈಲು ಜನವರಿ 13, 16 ಮತ್ತು 23ರಂದು ರಾತ್ರಿ 8:40ಕ್ಕೆ ಮೈಸೂರಿನಿಂದ ಹೊರಟು, ಮರುದಿನ ಬೆಳಗ್ಗೆ 10:30ಕ್ಕೆ ಬೆಳಗಾವಿಗೆ ತಲುಪಲಿದೆ. ಹಬ್ಬದ ಸಮಯದಲ್ಲಿ ಉತ್ತರ ಕರ್ನಾಟಕದತ್ತ ತೆರಳುವ ಪ್ರಯಾಣಿಕರಿಗೆ ಇದು ಬಹಳ ಅನುಕೂಲಕರವಾಗಲಿದೆ.

     

    ಬೆಳಗಾವಿ–ಮೈಸೂರು ವಿಶೇಷ ರೈಲು (06286)

    ಮರಳುವ ಪ್ರಯಾಣಿಕರ ಸೌಲಭ್ಯಕ್ಕಾಗಿ ಬೆಳಗಾವಿಯಿಂದ ಮೈಸೂರಿಗೆ ವಿಶೇಷ ರೈಲು ಕೂಡ ವ್ಯವಸ್ಥೆ ಮಾಡಲಾಗಿದೆ. ಈ ರೈಲು ಜನವರಿ 15, 18 ಮತ್ತು 26ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಗ್ಗೆ 6:15ಕ್ಕೆ ಮೈಸೂರಿಗೆ ತಲುಪಲಿದೆ.

     

    ನಿಲ್ದಾಣಗಳು

    ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ

    ಮಂಡ್ಯ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಲ್ನಾವರ, ಲೋಂಡಾ ಹಾಗೂ ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತವೆ.

     

    ಬೋಗಿಗಳ ವಿವರ

    ಒಟ್ಟು 23 ಬೋಗಿಗಳನ್ನು ಒಳಗೊಂಡಿರುವ ಈ ವಿಶೇಷ ರೈಲಿನಲ್ಲಿ –

    ಎಸಿ 2-ಟೈರ್ ಕಮ್ ಎಸಿ 3-ಟೈರ್ – 1 ಬೋಗಿ

    ಎಸಿ 3-ಟೈರ್ – 3 ಬೋಗಿಗಳು

    ಸ್ಲೀಪರ್ ಕ್ಲಾಸ್ – 13 ಬೋಗಿಗಳು

    ಸಾಮಾನ್ಯ ದ್ವಿತೀಯ ದರ್ಜೆ – 4 ಬೋಗಿಗಳು

    ಎಸ್‌ಎಲ್‌ಆರ್/ಡಿ – 2 ಬೋಗಿಗಳು ಇರಲಿವೆ.

    ಹಬ್ಬದ ಸಂಭ್ರಮದ ನಡುವೆಯೂ ಸುಗಮ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣಕ್ಕೆ ಈ ವಿಶೇಷ ರೈಲುಗಳು ಪ್ರಯಾಣಿಕರಿಗೆ ದೊಡ್ಡ ನೆರವಾಗಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

  • ಗೃಹಲಕ್ಷ್ಮಿ ಬಾಕಿ ಹಣಕ್ಕೆ ಗುಡ್‌ ನ್ಯೂಸ್‌; ಫೆಬ್ರವರಿ–ಮಾರ್ಚ್‌ ಹಣ ಶೀಘ್ರ ಬಿಡುಗಡೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್

    ಗೃಹಲಕ್ಷ್ಮಿ ಬಾಕಿ ಹಣಕ್ಕೆ ಗುಡ್‌ ನ್ಯೂಸ್‌; ಫೆಬ್ರವರಿ–ಮಾರ್ಚ್‌ ಹಣ ಶೀಘ್ರ ಬಿಡುಗಡೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್

    ಗೃಹಲಕ್ಷ್ಮಿ ಯೋಜನೆಯಡಿ ಎರಡು ತಿಂಗಳ ಬಾಕಿ ಹಣ ಸಿಗದಿದ್ದ ಮಹಿಳೆಯರಿಗೆ ಸರ್ಕಾರದಿಂದ ಸಕಾರಾತ್ಮಕ ಸಂದೇಶ ಸಿಕ್ಕಿದೆ. ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಗೃಹಲಕ್ಷ್ಮಿ ಹಣವನ್ನು ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣಕಾಸು ಇಲಾಖೆಯ ಅನುಮತಿ ದೊರಕಿದ ತಕ್ಷಣವೇ ಈ ಎರಡು ತಿಂಗಳ ಬಾಕಿ ಹಣ ಬಿಡುಗಡೆ ಆಗಲಿದೆ ಎಂದು ಹೇಳಿದರು. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ವಿಧಾನಸಭೆಯಲ್ಲೂ ಈ ವಿಷಯಕ್ಕೆ ಉತ್ತರ ನೀಡಲಾಗಿದೆ ಎಂದರು.

    ಕೆಲವು ಫಲಾನುಭವಿಗಳಿಗೆ ಹಣ ಜಮಾ ಆಗದೇ ಇರುವುದಕ್ಕೆ ಕಾರಣವನ್ನೂ ಸಚಿವೆ ವಿವರಿಸಿದರು. ಅನರ್ಹ ರೇಷನ್‌ ಕಾರ್ಡ್‌ಗಳನ್ನು ರದ್ದುಗೊಳಿಸಿರುವ ಕಾರಣ ಕೆಲವರ ಹಣ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಗೃಹಲಕ್ಷ್ಮಿ ಯೋಜನೆ ಸಂಪೂರ್ಣವಾಗಿ ರೇಷನ್‌ ಕಾರ್ಡ್‌ ಆಧಾರಿತವಾಗಿರುವುದರಿಂದ, ಆಹಾರ ಇಲಾಖೆಯಿಂದ ಹೊಸ ದತ್ತಾಂಶ ಬಂದ ಬಳಿಕ ಅರ್ಹರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ. ತೆರಿಗೆ ಪಾವತಿದಾರರಲ್ಲದ ಅರ್ಹ ಮಹಿಳೆಯರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅವರು ಭರವಸೆ ನೀಡಿದರು.

    ಇದೇ ವೇಳೆ ಗೃಹಲಕ್ಷ್ಮಿ ಸಹಕಾರ ಸಂಘದ ಕುರಿತು ಮಹತ್ವದ ಮಾಹಿತಿ ನೀಡಿದ ಸಚಿವೆ, ಸಂಘದ ಸದಸ್ಯರು ತಿಂಗಳಿಗೆ 200 ರೂಪಾಯಿ ಉಳಿಸುವಂತೆ ತಿಳಿಸಿದರು. ಕನಿಷ್ಠ ಆರು ತಿಂಗಳು ಸದಸ್ಯತ್ವ ಪೂರ್ಣಗೊಂಡ ನಂತರ ಸಾಲ ಸೌಲಭ್ಯ ಪಡೆಯಲು ಅವಕಾಶ ಸಿಗಲಿದೆ. ಹೆಚ್ಚು ನಿಯಮಗಳಿಲ್ಲದೆ ನಿಜವಾದ ಅರ್ಹರನ್ನು ಗುರುತಿಸಿ ಸಾಲ ನೀಡುವ ವ್ಯವಸ್ಥೆ ಮಾಡಲಾಗುವುದು. ಮುಂದಿನ ಹಂತದಲ್ಲಿ ಗೃಹಲಕ್ಷ್ಮಿ ಸದಸ್ಯರಿಗೆ ಆರೋಗ್ಯ ವಿಮೆ ಒದಗಿಸುವ ಯೋಚನೆಯೂ ಸರ್ಕಾರದ ಮುಂದಿದೆ ಎಂದು ಹೇಳಿದರು.

    ಮಹಿಳೆಯರ ಸುರಕ್ಷತೆ ಮತ್ತು ಸಹಾಯಕ್ಕಾಗಿ ‘ಅಕ್ಕ ಪಡೆ’ ಎಂಬ ಹೊಸ ಯೋಜನೆಯನ್ನೂ ಸರ್ಕಾರ ಆರಂಭಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗೃಹ ಇಲಾಖೆಯ ಸಹಯೋಗದಲ್ಲಿ ಈ ಪಡೆ ಕಾರ್ಯನಿರ್ವಹಿಸಲಿದೆ. ಈಗಾಗಲೇ ಸಿಬ್ಬಂದಿ ನೇಮಕಾತಿ ಮಾಡಲಾಗಿದ್ದು, ಅವರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಬಸ್‌ ನಿಲ್ದಾಣಗಳು, ದೇವಸ್ಥಾನಗಳು, ಮಾಲ್‌ಗಳು, ಉದ್ಯಾನವನಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಕ್ಕ ಪಡೆ ಗಸ್ತು ತಿರುಗಲಿದೆ ಎಂದು ಸಚಿವೆ ತಿಳಿಸಿದರು.

    ಅಕ್ಕ ಪಡೆ ಶಾಲೆ ಮತ್ತು ಕಾಲೇಜುಗಳಿಗೂ ಭೇಟಿ ನೀಡಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ. ದೂರು ನೀಡಲು ಹಿಂಜರಿಯುವ ಮಹಿಳೆಯರ ಗುರುತು ಸಂಪೂರ್ಣವಾಗಿ ಗೌಪ್ಯವಾಗಿರುತ್ತದೆ. ಸಾಮಾಜಿಕ ಜಾಲತಾಣಗಳ ವಂಚನೆ, ಕೌಟುಂಬಿಕ ಹಿಂಸೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವ ಮಹಿಳೆಯರು ಅಕ್ಕ ಪಡೆಗೆ ದೂರು ನೀಡಬಹುದಾಗಿದೆ ಎಂದು ಸಚಿವೆ ಹೇಳಿದರು.

    ಒಟ್ಟಾರೆ, ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಶೀಘ್ರದಲ್ಲೇ ಬಿಡುಗಡೆ ಆಗಲಿದ್ದು, ಜೊತೆಗೆ ಮಹಿಳೆಯರ ಆರ್ಥಿಕ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಹೊಸ ಕ್ರಮಗಳು ಜಾರಿಗೆ ಬರುತ್ತಿರುವುದು ಸರ್ಕಾರದ ಮಹತ್ವಾಕಾಂಕ್ಷಿ ನಡೆ ಎಂಬುದಾಗಿ ಸಚಿವರ ಹೇಳಿಕೆ ಸ್ಪಷ್ಟಪಡಿಸಿದೆ.

  • ಡಾ. ಜಯಮಾಲಾಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ: ಕನ್ನಡ ಸಿನಿಮಾ ಇತಿಹಾಸಕ್ಕೆ ಗೌರವ ಸಲ್ಲಿಸಿದ ಕರ್ನಾಟಕ ಸರ್ಕಾರ

    ಡಾ. ಜಯಮಾಲಾಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ: ಕನ್ನಡ ಸಿನಿಮಾ ಇತಿಹಾಸಕ್ಕೆ ಗೌರವ ಸಲ್ಲಿಸಿದ ಕರ್ನಾಟಕ ಸರ್ಕಾರ


    ಕನ್ನಡ ಚಿತ್ರರಂಗದ ಇತಿಹಾಸವನ್ನು ನಿರ್ಮಿಸಿದ ಸಾಧಕರನ್ನು ಗೌರವಿಸುವುದು ಕೇವಲ ಪ್ರಶಸ್ತಿ ಪ್ರದಾನವಲ್ಲ, ಅದು ಒಂದು ಸಂಸ್ಕೃತಿಯ ಆಚರಣೆ. ನಟನೆಯಿಂದ ಹಿಡಿದು ನಿರ್ದೇಶನ, ನಿರ್ಮಾಣ ಹಾಗೂ ತಾಂತ್ರಿಕ ಕ್ಷೇತ್ರಗಳವರೆಗೆ ತಮ್ಮ ಬದುಕನ್ನೇ ಸಿನಿಮಾಗೆ ಅರ್ಪಿಸಿದ ಮಹನೀಯರನ್ನು ಸ್ಮರಿಸುವ ಈ ಗೌರವಗಳು, ಮುಂದಿನ ತಲೆಮಾರಿಗೆ ಪ್ರೇರಣೆಯಾಗುತ್ತವೆ. ಅಂಥದ್ದೇ ಮಹತ್ವದ ಘೋಷಣೆಯನ್ನು ಕರ್ನಾಟಕ ಸರ್ಕಾರ ಮಾಡಿದ್ದು, 2020 ಮತ್ತು 2021ನೇ ಸಾಲಿನ ಸಿನಿಮಾ ಕ್ಷೇತ್ರದ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಪ್ರಕಟಿಸಿದೆ.

    ಈ ಬಾರಿ ಹಿರಿಯ ನಟಿ, ಸಮಾಜ ಸೇವಕಿ ಹಾಗೂ ರಾಜಕೀಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಡಾ. ಜಯಮಾಲಾ ಅವರಿಗೆ ಡಾ. ರಾಜ್‌ಕುಮಾರ್ ಪ್ರಶಸ್ತಿ ಘೋಷಿಸಿರುವುದು ಕನ್ನಡ ಸಿನಿರಸಿಕರಲ್ಲಿ ಸಂತಸ ಮೂಡಿಸಿದೆ. ನಟನೆಯ ಮೂಲಕ ಮಹಿಳಾ ಪಾತ್ರಗಳಿಗೆ ಹೊಸ ಆಯಾಮ ನೀಡಿದ ಜಯಮಾಲಾ ಅವರ ಸಾಧನೆಗೆ ಇದು ತಕ್ಕ ಗೌರವವಾಗಿದೆ.

    ಗೌರವದ ಪ್ರತೀಕವಾದ ಪ್ರಶಸ್ತಿಗಳು

    ಡಾ. ರಾಜ್‌ಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ಡಾ. ವಿಷ್ಣುವರ್ಧನ್ ಪ್ರಶಸ್ತಿಗಳು ಕನ್ನಡ ಚಿತ್ರರಂಗದ ಮೂವರು ದಿಗ್ಗಜರ ಹೆಸರಿನಲ್ಲಿ ನೀಡಲಾಗುವ ಅತ್ಯುನ್ನತ ಜೀವಮಾನ ಗೌರವ ಪ್ರಶಸ್ತಿಗಳಾಗಿವೆ.

    ಪ್ರತಿ ಪ್ರಶಸ್ತಿಯೂ ₹5 ಲಕ್ಷ ನಗದು ಹಾಗೂ 50 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.

     

    2020ನೇ ಸಾಲಿನ ಪ್ರಶಸ್ತಿ ಪುರಸ್ಕೃತರು:

    1.ಡಾ. ರಾಜ್‌ಕುಮಾರ್ ಪ್ರಶಸ್ತಿ:

    ಹಿರಿಯ ನಟಿ ಡಾ. ಜಯಮಾಲಾ

    ನಟನೆಯ ಮೂಲಕ ಸಾಮಾಜಿಕ ಸಂದೇಶ ನೀಡಿದ ಜಯಮಾಲಾ, ಕನ್ನಡ ಸಿನಿಮಾಗೆ ಶಕ್ತಿಶಾಲಿ ಮಹಿಳಾ ಪಾತ್ರಗಳ ಕೊಡುಗೆ ನೀಡಿದ ಅಪರೂಪದ ನಟಿ.

     

    2. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ:

    ಹಿರಿಯ ನಿರ್ದೇಶಕ ಎಂ.ಎಸ್. ಸತ್ಯು

    ಸಾಮಾಜಿಕ ಚಿಂತನೆ, ವಾಸ್ತವಿಕತೆ ಮತ್ತು ರಾಜಕೀಯ ಪ್ರಜ್ಞೆಯ ಚಿತ್ರಗಳ ಮೂಲಕ ಕನ್ನಡ ಸಿನಿರಂಗಕ್ಕೆ ವಿಶಿಷ್ಟ ಗುರುತು ನೀಡಿದ ನಿರ್ದೇಶಕ.

     

    3. ಡಾ. ವಿಷ್ಣುವರ್ಧನ್ ಪ್ರಶಸ್ತಿ:

    ಹಿರಿಯ ಸ್ಥಿರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ್ ನಾರಾಯಣ್

    ಹಲವಾರು ದಶಕಗಳ ಕಾಲ ಕನ್ನಡ ಚಿತ್ರರಂಗದ ದೃಶ್ಯ ಸೌಂದರ್ಯಕ್ಕೆ ಜೀವ ತುಂಬಿದ ತಾಂತ್ರಿಕ ತಜ್ಞ.

    2021ನೇ ಸಾಲಿನ ಪ್ರಶಸ್ತಿ ಪುರಸ್ಕೃತರು

     

    4. ಡಾ. ರಾಜ್‌ಕುಮಾರ್ ಪ್ರಶಸ್ತಿ

    ನಿರ್ಮಾಪಕ ಸಾ. ರಾ. ಗೋವಿಂದ್

    ಗುಣಮಟ್ಟದ ಚಿತ್ರಗಳನ್ನು ನಿರ್ಮಿಸಿ ಕನ್ನಡ ಸಿನಿಮಾಗೆ ಮೌಲ್ಯ ನೀಡಿದ ಹಿರಿಯ ನಿರ್ಮಾಪಕ.

     

    5. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ:

    ನಿರ್ದೇಶಕ ಶಿವರುದ್ರಯ್ಯ ಕೆ.

    ಸಾಹಿತ್ಯಾಧಾರಿತ ಹಾಗೂ ಸಂವೇದನಾಶೀಲ ಚಿತ್ರಗಳ ಮೂಲಕ ಗುರುತಿಸಿಕೊಂಡ ನಿರ್ದೇಶಕ.

     

    ಡಾ. ವಿಷ್ಣುವರ್ಧನ್ ಪ್ರಶಸ್ತಿ:

    ಹಿರಿಯ ನಟ ಎಂ.ಕೆ. ಸುಂದರ್ ರಾಜ್

    ಪಾತ್ರಗಳ ವೈವಿಧ್ಯತೆ ಮತ್ತು ಅಭಿನಯದ ಘನತೆಯಿಂದ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಸ್ಥಾನ ಪಡೆದ ನಟ.

    ಕನ್ನಡ ಸಿನಿಮಾಗೆ ಸರ್ಕಾರದ ಗೌರವ

    ಈ ಪ್ರಶಸ್ತಿಗಳ ಮೂಲಕ ಕನ್ನಡ ಚಿತ್ರರಂಗದ ಸಾಧನೆಗಳನ್ನು ಸರ್ಕಾರ ಗೌರವಿಸಿರುವುದು ಶ್ಲಾಘನೀಯ. ಇದು ಕೇವಲ ವ್ಯಕ್ತಿಗಳ ಗೌರವವಲ್ಲ, ಕನ್ನಡ ಸಿನಿಮಾದ ಇತಿಹಾಸ, ಸಂಸ್ಕೃತಿ ಮತ್ತು ಸೃಜನಶೀಲತೆಗೆ ಸಲ್ಲುವ ಗೌರವವಾಗಿದೆ.

     

  • ನ್ಯಾಷನಲ್ ಹೆರಾಲ್ಡ್‌ಗೆ ಕೋಟಿ ಕೋಟಿ ಜಾಹೀರಾತು: ಕರ್ನಾಟಕ ಸರ್ಕಾರದ ಜಾಹೀರಾತು ಬಜೆಟ್‌ ಮೇಲೆ ಬಿಜೆಪಿ ಗಂಭೀರ ಆರೋಪ

    ನ್ಯಾಷನಲ್ ಹೆರಾಲ್ಡ್‌ಗೆ ಕೋಟಿ ಕೋಟಿ ಜಾಹೀರಾತು: ಕರ್ನಾಟಕ ಸರ್ಕಾರದ ಜಾಹೀರಾತು ಬಜೆಟ್‌ ಮೇಲೆ ಬಿಜೆಪಿ ಗಂಭೀರ ಆರೋಪ


    ಕರ್ನಾಟಕ ರಾಜಕೀಯದಲ್ಲಿ ಮತ್ತೊಮ್ಮೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದ ಖಜಾನೆಯಿಂದ, ಕಡಿಮೆ ಓದುಗರಿರುವ ರಾಷ್ಟ್ರೀಯ ಪತ್ರಿಕೆಗೆ ಕೋಟ್ಯಂತರ ರೂಪಾಯಿ ಜಾಹೀರಾತು ಹಣ ಹರಿದಿದೆ ಎಂಬ ಆರೋಪವನ್ನು ಬಿಜೆಪಿ ಮುಂದಿಟ್ಟಿದ್ದು, ಇದಕ್ಕೆ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

    ಸಾರ್ವಜನಿಕ ಹಣವನ್ನು ಹೇಗೆ, ಯಾರಿಗೆ ಮತ್ತು ಯಾವ ಮಾನದಂಡದ ಆಧಾರದಲ್ಲಿ ಬಳಸಬೇಕು ಎಂಬ ಪ್ರಶ್ನೆ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಜಾಹೀರಾತು ಬಜೆಟ್‌ನ ಪಾರದರ್ಶಕತೆ ಕುರಿತು ಹೊಸ ಸಂಶಯಗಳನ್ನು ಎಬ್ಬಿಸಿದೆ.

    ಬಿಜೆಪಿ ಆರೋಪವೇನು?
    ಬಿಜೆಪಿ ಆರೋಪಿಸಿದಂತೆ, ಕರ್ನಾಟಕ ಸರ್ಕಾರದ ಜಾಹೀರಾತು ಬಜೆಟ್‌ನಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಅಸಮಾನ ಪ್ರಮಾಣದ ಹಣ ನೀಡಲಾಗಿದೆ.
    2023–24 ನೇ ಸಾಲಿನಲ್ಲಿ ನ್ಯಾಷನಲ್ ಹೆರಾಲ್ಡ್‌ಗೆ ₹1.90 ಕೋಟಿ ಜಾಹೀರಾತು
    2024–25 ನೇ ಸಾಲಿನಲ್ಲಿ ಸುಮಾರು ₹99 ಲಕ್ಷ ಜಾಹೀರಾತು ಹಣ ನೀಡಲಾಗಿದೆ.
    ಬಿಜೆಪಿ ಹೇಳುವ ಪ್ರಕಾರ, 2024–25 ರಲ್ಲಿ ರಾಜ್ಯ ಸರ್ಕಾರ ಎಲ್ಲಾ ರಾಷ್ಟ್ರೀಯ ಪತ್ರಿಕೆಗಳಿಗೆ ಒಟ್ಟು ₹1.42 ಕೋಟಿ ಖರ್ಚು ಮಾಡಿದ್ದರೆ, ಅದರಲ್ಲಿ ಶೇ.69ರಷ್ಟು ಹಣ ನ್ಯಾಷನಲ್ ಹೆರಾಲ್ಡ್‌ಗೆ ಮಾತ್ರ ನೀಡಲಾಗಿದೆ.

    ಕಡಿಮೆ ಓದುಗರಿರುವ, ರಾಜ್ಯದಲ್ಲಿ ಅಥವಾ ದೆಹಲಿಯಲ್ಲಿ ಸರಿಯಾದ ವಿತರಣೆ ಇಲ್ಲದ ಪತ್ರಿಕೆಗೆ ಇಷ್ಟೊಂದು ಮೊತ್ತ ನೀಡಿರುವುದೇಕೆ? ಎಂಬುದೇ ಬಿಜೆಪಿ ಪ್ರಮುಖ ಪ್ರಶ್ನೆ.

    ನ್ಯಾಷನಲ್ ಹೆರಾಲ್ಡ್ ಪ್ರೀತಿ – ಸಿದ್ದರಾಮಯ್ಯ ಸರ್ಕಾರದ ಮೇಲೆ ಚಾರ್ಜ್‌ಶೀಟ್:
    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಷನಲ್ ಹೆರಾಲ್ಡ್ ಮೇಲಿನ ವಿಶೇಷ ಪ್ರೀತಿ ಹೆಚ್ಚಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದು ಕೇವಲ ಜಾಹೀರಾತು ವಿಷಯವಲ್ಲ, ರಾಜಕೀಯ ಪ್ರೇರಿತ ನಿರ್ಧಾರ ಎಂಬ ಗಂಭೀರ ಆರೋಪವನ್ನೂ ಮಾಡಿದೆ.

    ಇನ್ನು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ತೀವ್ರವಾಗಿ ಪ್ರತಿಕ್ರಿಯಿಸಿ, ನ್ಯಾಷನಲ್ ಹೆರಾಲ್ಡ್ ಸ್ಕ್ಯಾಮ್‌ನಲ್ಲಿ ತಾಯಿ–ಮಗ ಬೇಲ್ ಮೇಲೆ ಇದ್ದಾರೆ. ಅಂಥ ಪತ್ರಿಕೆಗೆ ಕರ್ನಾಟಕ ಸರ್ಕಾರದ ದುಡ್ಡು ಕೊಡೋದು ಸಿದ್ದರಾಮಯ್ಯ ಸರ್ಕಾರದ ರಾಷ್ಟ್ರೀಯ ಬೌದ್ಧಿಕ ದಿವಾಳಿತನ ಎಂದು ಕಿಡಿಕಾರಿದ್ದಾರೆ.

    ಇನ್ನು ಬಿಜೆಪಿ ನಾಯಕ ಅಶೋಕ್ ಕೂಡ ನ್ಯಾಷನಲ್ ಹೆರಾಲ್ಡ್ ಬೋಗಸ್ ಪತ್ರಿಕೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕಾಂಗ್ರೆಸ್–ಡಿಸಿಎಂ ಸಮರ್ಥನೆ ಏನು?
    ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರಕ್ಕೆ ಜಾಹೀರಾತು ನೀಡುವ ಸಂಪೂರ್ಣ ಅಧಿಕಾರ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.
    ಇನ್ನು ಸಚಿವ ಪ್ರಿಯಾಂಕ್ ಖರ್ಗೆ, ಇದು ಸಂಪೂರ್ಣವಾಗಿ ಕಾನೂನುಬದ್ಧ (ಲೀಗಲ್) ವಹಿವಾಟು ಎಂದು ಸ್ಪಷ್ಟಪಡಿಸಿದ್ದಾರೆ.

    ಜಾಹೀರಾತು ಹಣ – ರಾಜಕೀಯ ವಿವಾದದ ಕೇಂದ್ರಬಿಂದು:
    ಒಟ್ಟಾರೆ, ನ್ಯಾಷನಲ್ ಹೆರಾಲ್ಡ್‌ಗೆ ನೀಡಿದ ಜಾಹೀರಾತು ಹಣವು ಕೇವಲ ಆರ್ಥಿಕ ವಿಚಾರವಲ್ಲ, ಇದು ರಾಜಕೀಯ ನೈತಿಕತೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಹಣದ ಬಳಕೆ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ.
    ಈ ಆರೋಪ–ಪ್ರತ್ಯಾರೋಪಗಳು ಮುಂದಿನ ದಿನಗಳಲ್ಲಿ ರಾಜಕೀಯ ಮಟ್ಟದಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

  • ನಗರಸಭೆ ಡಿ. ಗ್ರೂಪ್ ಸಿಬ್ಬಂದಿಗೆ ಪ್ರಭಾರಿ ಹುದ್ದೆ

    ನಗರಸಭೆ ಡಿ. ಗ್ರೂಪ್ ಸಿಬ್ಬಂದಿಗೆ ಪ್ರಭಾರಿ ಹುದ್ದೆ

    • ಸಂಬಳ ಒಂದೇ, ಕೆಲಸ ಎರಡು – ನಗರಸಭೆ ಕ್ರಮಕ್ಕೆ ಆಕ್ಷೇಪ

    ವರದಿ: ಕುದಾನ್ ಸಾಬ್ 

    ಸತ್ಯಕಾಮ ವಾರ್ತೆ ಯಾದಗಿರಿ:

    ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಹೇಳಲಾಗುತ್ತಿರುವ ನಡುವೆಯೇ, ಇರುವ ಡಿ. ಗ್ರೂಪ್ ಸಿಬ್ಬಂದಿಗೆ ಪ್ರಭಾರಿ ಹುದ್ದೆ ನೀಡಿ, ನಗರಸಭೆಯ ಕೆಲಸಗಳ ಜೊತೆಗೆ ಪತ್ರಿಕಾ ಭವನದ ಸ್ವಚ್ಛತೆ ಕಾರ್ಯವನ್ನೂ ನಿರ್ವಹಿಸುವಂತೆ ಸೂಚಿಸಿರುವುದು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

    ನಗರಸಭೆಯ ದೈನಂದಿನ ಕಾರ್ಯಭಾರವೇ ಹೆಚ್ಚಾಗಿರುವ ಸಂದರ್ಭದಲ್ಲಿ, ನಗರಸಭೆಯ ಖಾಯಂ ಡಿ-ಗ್ರೂಪ್ ಸಿಬ್ಬಂದಿ ಶ್ರೀಶೈಲ  ಅವರನ್ನು ನಗರಸಭೆಯ ವ್ಯಾಪ್ತಿಗೆ ಹೊರಗಿನ ಕಾರ್ಯಗಳಿಗೆ ನಿಯೋಜಿಸಿರುವುದು ಆಡಳಿತಾತ್ಮಕ ಅಸಮಂಜಸತೆ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆ ಕೇಳಿಬರುತ್ತಿದೆ.

    ನಗರಸಭೆ ಸಿಬ್ಬಂದಿಯನ್ನು ನಗರಸಭೆಯ ಹೊರಗಿನ ಕೆಲಸಗಳಿಗೆ ಬಳಸುವುದು ಸೇವಾ ನಿಯಮಗಳಿಗೆ ವಿರುದ್ಧವಾಗಬಹುದು ಎಂದು ವಿದ್ಯಾವಂತರು ಅಭಿಪ್ರಾಯಪಟ್ಟಿದ್ದಾರೆ. ಸಿಬ್ಬಂದಿ ಕೊರತೆ ಇದ್ದಲ್ಲಿ ಹೊಸ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸುವುದು ಅಥವಾ ತಾತ್ಕಾಲಿಕ ವ್ಯವಸ್ಥೆ ರೂಪಿಸುವುದು ಆಡಳಿತದ ಕರ್ತವ್ಯವಾಗಿದ್ದು, ಇರುವ ಸಿಬ್ಬಂದಿಗೆ ಹೆಚ್ಚುವರಿ ಹೊರೆ ಹಾಕುವುದು ಸೂಕ್ತವಲ್ಲ ಎಂದು ಅವರು ತಿಳಿಸಿದ್ದಾರೆ.

    ಸಂಘದ ಹೊಣೆಗಾರಿಕೆ ಪ್ರಶ್ನಾರ್ಥಕ: ಪತ್ರಿಕಾ ಭವನದ ದಿನನಿತ್ಯದ ನಿರ್ವಹಣೆ, ಸ್ವಚ್ಛತೆ ಸೇರಿದಂತೆ ಮೂಲಭೂತ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿ ಆ ಭವನವನ್ನು ನಡೆಸುತ್ತಿರುವ ಸಂಘದದ್ದೇ ಆಗಿರಬೇಕು. ಆದರೆ ಸಂಘವು ತನ್ನ ಕರ್ತವ್ಯವನ್ನು ನಿರ್ವಹಿಸದೇ, ನಗರಸಭೆ ಸಿಬ್ಬಂದಿಯನ್ನು ಅವಲಂಬಿಸಿರುವುದು ಸರಿಯಲ್ಲ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ. ಸಂಘಕ್ಕೆ ಸಿಬ್ಬಂದಿ ಅಗತ್ಯವಿದ್ದರೆ, ತನ್ನದೇ ಮೂಲಗಳಿಂದ ನೇಮಕ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಾಪಕವಾಗಿದೆ.

    ಕರ್ನಾಟಕ ನಗರಸಭೆಗಳ ಸೇವಾ ನಿಯಮಗಳ ಪ್ರಕಾರ, ಖಾಯಂ ನೌಕರರನ್ನು ಅವರ ನೇಮಕಾತಿ ಹುದ್ದೆ, ವೇತನ ಶ್ರೇಣಿ ಹಾಗೂ ನಿಗದಿತ ಕಾರ್ಯವ್ಯಾಪ್ತಿಗೆ ಹೊರಗಿನ ಕೆಲಸಗಳಿಗೆ ನಿಯೋಜಿಸುವುದು ನಿಯಮಬಾಹಿರವಾಗಿದೆ. ಯಾವುದೇ ಹೆಚ್ಚುವರಿ ಅಥವಾ ಪ್ರಭಾರಿ ಜವಾಬ್ದಾರಿ ನೀಡಬೇಕಾದಲ್ಲಿ, ಅರ್ಹ ಪ್ರಾಧಿಕಾರದ ಲಿಖಿತ ಆದೇಶ, ಅವಧಿ ನಿಗದಿ ಹಾಗೂ ನಿಯಮಾನುಸಾರ ಭತ್ಯೆ ನೀಡುವುದು ಕಡ್ಡಾಯವಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿ ಖಾಯಂ ನೌಕರರಾದ ಶ್ರೀಶೈಲಾ ಅವರನ್ನು ಸೇವಕ ಹುದ್ದೆಗೆ ಅಥವಾ ನಗರಸಭೆಯ ಹೊರಗಿನ ಕಾರ್ಯಗಳಿಗೆ ನಿಯೋಜಿಸಿರುವುದಾದರೆ, ಅದು ಕರ್ನಾಟಕ ನಗರಸಭೆ ಸೇವಾ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

    ಈ ಕುರಿತು ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸ್ಪಷ್ಟನೆ ನೀಡಬೇಕೆಂಬ ಒತ್ತಾಯವೂ ಹೆಚ್ಚಾಗಿದೆ. ನಗರಸಭೆ ಸಿಬ್ಬಂದಿಯನ್ನು ಸೇವಾ ನಿಯಮಗಳಿಗೆ ವಿರುದ್ಧವಾಗಿ ಹೊರಗಿನ ಕೆಲಸಗಳಿಗೆ ನಿಯೋಜಿಸಿರುವುದಾದರೆ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಡಿ. ಗ್ರೂಪ್ ಸಿಬ್ಬಂದಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಚಿತ್ರದುರ್ಗ ಬಸ್ ದುರಂತ: ಅದೃಷ್ಟವಶಾತ್ ಪಾರಾದ ಸ್ಕೂಲ್ ಟ್ರಿಪ್ ವಾಹನ

    ಚಿತ್ರದುರ್ಗ ಬಸ್ ದುರಂತ: ಅದೃಷ್ಟವಶಾತ್ ಪಾರಾದ ಸ್ಕೂಲ್ ಟ್ರಿಪ್ ವಾಹನ

    ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದ ಭೀಕರ ಬಸ್ ದುರಂತ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಮಧ್ಯರಾತ್ರಿ ವೇಳೆ ಟ್ಯಾಂಕರ್‌ ಒಂದು ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿಕೊಂಡು, ಬಸ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಈ ದುರ್ಘಟನೆಯಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದು, ಸ್ಥಳದಲ್ಲಿ ಕಂಡ ದೃಶ್ಯಗಳು ಮಾನವೀಯತೆಯನ್ನು ಕಲುಷಿತಗೊಳಿಸುವಂತಿದ್ದವು.

    ಅಪಘಾತದ ತೀವ್ರತೆಯನ್ನು ಕಣ್ಣಾರೆ ಕಂಡ ಮತ್ತೊಂದು ಬಸ್‌ನ ಚಾಲಕ ಹಾಗೂ ಸಿಬ್ಬಂದಿ ಹೇಳಿಕೆಗಳು ಹೃದಯವಿದ್ರಾವಕವಾಗಿವೆ. ಡಿಕ್ಕಿ ಹೊಡೆಯುತ್ತಿದ್ದಂತೆ ಬಸ್‌ನ ಡೀಸೆಲ್ ಟ್ಯಾಂಕ್ ಭಾಗದಲ್ಲಿ ಭಾರೀ ಸ್ಪಾರ್ಕ್ ಉಂಟಾಗಿ, ಬೆಂಕಿ ಕ್ಷಿಪ್ರವಾಗಿ ಬಸ್‌ನೊಳಗೆ ಹರಡಿತು. ಕೆಲವೇ ಕ್ಷಣಗಳಲ್ಲಿ ಸ್ಫೋಟದ ಶಬ್ದ ಕೇಳಿಬಂದಿದ್ದು, ಒಳಗಿದ್ದವರು ಜೀವ ಉಳಿಸಿಕೊಳ್ಳಲು ಕೂಗಾಡುತ್ತಿದ್ದ ದೃಶ್ಯ ಇನ್ನೂ ಕಣ್ಣಮುಂದೇ ಇದೆ ಎಂದು ಅವರು ಹೇಳಿದ್ದಾರೆ.

    ಈ ಅಪಘಾತದ ವೇಳೆ ಅದೃಷ್ಟವಶಾತ್ ಪಾರಾದ ಒಂದು ಸ್ಕೂಲ್ ಟ್ರಿಪ್ ಬಸ್ ಕೂಡಾ ಅದೇ ಮಾರ್ಗದಲ್ಲಿ ಸಾಗುತ್ತಿತ್ತು. ಬೆಂಗಳೂರಿನಿಂದ ದಾಂಡೇಲಿಗೆ ಪ್ರವಾಸಕ್ಕೆ ಹೊರಟಿದ್ದ ಸುಮಾರು 43 ಮಕ್ಕಳು ಇದ್ದ ಬಸ್, ಅಪಘಾತಗೊಂಡ ಬಸ್ ಹಿಂದೆಯೇ ಸಾಗುತ್ತಿತ್ತು. ಸೀ ಬರ್ಡ್ ಬಸ್‌ಗೆ ಟ್ಯಾಂಕರ್ ಡಿಕ್ಕಿಯಾದ ಕ್ಷಣದಲ್ಲೇ ಸ್ಕೂಲ್ ಬಸ್ ಚಾಲಕ ಎಚ್ಚರಿಕೆಯಿಂದ ವಾಹನವನ್ನು ನಿಧಾನಗೊಳಿಸಿ ಎಡಬದಿಗೆ ನಿಲ್ಲಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಸ್ವಲ್ಪ ಮಟ್ಟಿಗೆ ಬಸ್‌ಗೆ ಹಾನಿಯಾದರೂ ಮಕ್ಕಳಿಗೆ ಯಾವುದೇ ಅಪಾಯವಾಗಿಲ್ಲ. ತಕ್ಷಣವೇ ಮಕ್ಕಳನ್ನು ಬೇರೆ ವಾಹನ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕಳಿಸಲಾಗಿದೆ.

    ಅಪಘಾತದ ಬಳಿಕ ಮಾನವೀಯತೆ ಮೆರೆದ ಕೆಲವರು ಜೀವ ಉಳಿಸುವ ಪ್ರಯತ್ನಕ್ಕೆ ಧಾವಿಸಿದರು. ಕೂಗು, ಗೊಂದಲದ ನಡುವೆ ಕೆಲವರು ಬಸ್‌ಗೆ ಹತ್ತಿರ ಹೋಗಿ ಗಾಯಗೊಂಡವರನ್ನು ಹೊರಕ್ಕೆ ಎಳೆದಿದ್ದಾರೆ. ಆದರೆ ಬೆಂಕಿ ಮತ್ತಷ್ಟು ತೀವ್ರವಾಗುತ್ತಿದ್ದಂತೆ ಹತ್ತಿರ ಹೋಗುವುದೇ ಅಪಾಯಕಾರಿ ಸ್ಥಿತಿಗೆ ತಲುಪಿತ್ತು. ಮಗುವೊಂದು ಒಳಗಿದೆ ಎಂದು ತಾಯಿ ಕೂಗುತ್ತಿದ್ದ ದೃಶ್ಯ ನೋಡಿದವರು ಇನ್ನೂ ಮೌನವಾಗಿದ್ದಾರೆ.

    ಈ ನಡುವೆ ಅಪಘಾತಗೊಂಡ ಬಸ್‌ನ ಸಹಾಯಕ ಕ್ಲೀನರ್ ಹೇಳಿಕೆಯೂ ಬೆಚ್ಚಿಬೀಳಿಸುವಂತಿದೆ. ಟ್ಯಾಂಕರ್ ಬಂದು ಬಸ್‌ನ ಮಧ್ಯಭಾಗಕ್ಕೆ ಭಾರಿಯಾಗಿ ಡಿಕ್ಕಿಯಾದ ವೇಗಕ್ಕೆ ಗ್ಲಾಸ್ ಒಡೆದು, ನಿದ್ದೆಯಲ್ಲಿದ್ದ ತಾನು ಹೊರಗೆ ಎಸೆಯಲ್ಪಟ್ಟಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಅದೇ ಕಾರಣಕ್ಕೆ ಪ್ರಾಣ ಉಳಿದಿದ್ದು, ಬಳಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಡೀಸೆಲ್ ಟ್ಯಾಂಕ್ ಭಾಗದಲ್ಲೇ ಡಿಕ್ಕಿಯಾಗಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿ ಆವರಿಸಿಕೊಂಡಿದೆ ಎಂಬುದು ಸ್ಪಷ್ಟವಾಗಿದೆ.

    ದುರ್ಘಟನೆಯ ಬಳಿಕ ರಾಷ್ಟ್ರದಾದ್ಯಂತ ಸಂತಾಪ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ ಪರಿಹಾರ ಘೋಷಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಘಟನೆಗೆ ತೀವ್ರ ದುಃಖ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದಾರೆ. ಘಟನೆಗೆ ಕಾರಣ ಪತ್ತೆ ಹಚ್ಚಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ಕೂಡಾ ನೀಡಿದ್ದಾರೆ.

    ಒಟ್ಟಿನಲ್ಲಿ ಚಿತ್ರದುರ್ಗದ ಈ ದುರಂತ ರಸ್ತೆ ಸುರಕ್ಷತೆ ಕುರಿತು ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಕ್ಷಣಮಾತ್ರದ ಅಜಾಗರೂಕತೆ ಹೇಗೆ ಅನೇಕ ಕುಟುಂಬಗಳ ಬದುಕನ್ನೇ ಕತ್ತಲಿಗೆ ತಳ್ಳಬಹುದು ಎಂಬುದಕ್ಕೆ ಈ ಘಟನೆ ನೋವಿನ ಸಾಕ್ಷಿಯಾಗಿದೆ.

  • ಬಿಸಿಲುನಾಡು ರಾಯಚೂರಿನಲ್ಲಿ ದಾಖಲೆ ಚಳಿ: ಕನಿಷ್ಠ ಉಷ್ಣಾಂಶ 9 ಡಿಗ್ರಿಗೆ ಇಳಿಕೆ, ಐದು ದಿನ ತಂಪಿನ ಅಬ್ಬರ

    ಬಿಸಿಲುನಾಡು ರಾಯಚೂರಿನಲ್ಲಿ ದಾಖಲೆ ಚಳಿ: ಕನಿಷ್ಠ ಉಷ್ಣಾಂಶ 9 ಡಿಗ್ರಿಗೆ ಇಳಿಕೆ, ಐದು ದಿನ ತಂಪಿನ ಅಬ್ಬರ

    ರಾಯಚೂರು ಜಿಲ್ಲೆಯು ಸಾಮಾನ್ಯವಾಗಿ ಬಿಸಿಲಿನ ತಾಪಕ್ಕೆ ಹೆಸರುವಾಸಿಯಾಗಿರುವ ಪ್ರದೇಶ. ಆದರೆ ಈ ಬಾರಿ ಡಿಸೆಂಬರ್ ಚಳಿಯು ಅಚ್ಚರಿಯ ತಿರುವು ಪಡೆದು ಬಿಸಿಲುನಾಡಿನ ಜನರ ದಿನಚರಿಯನ್ನೇ ಬದಲಿಸುವ ಮಟ್ಟಿಗೆ ತಂಪಿನ ಹೊಡೆತ ನೀಡಿದೆ. ಉತ್ತರ ಭಾರತದ ವಾತಾವರಣವನ್ನೇ ನೆನಪಿಸುವಂತೆ, ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ ಏಕಾಏಕಿ 9 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಇದು ಈ ಹಂಗಾಮಿನಲ್ಲೇ ದಾಖಲೆ ಮಟ್ಟದ ತಣ್ಣನೆ ವಾತಾವರಣ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಬೀಸುತ್ತಿರುವ ತಂಪುಗಾಳಿಯ ಪರಿಣಾಮ, ರಾಯಚೂರಿನಲ್ಲಿ ಇನ್ನೂ ಐದು ದಿನಗಳವರೆಗೆ ಚಳಿಯ ಅಬ್ಬರ ಮುಂದುವರಿಯಲಿದೆ ಎಂಬ ಮುನ್ಸೂಚನೆ ಜನರಲ್ಲಿ ಆತಂಕಕ್ಕೂ ಎಚ್ಚರಕ್ಕೂ ಕಾರಣವಾಗಿದೆ.

    ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಚಳಿ ಪ್ರಮಾಣ ಕ್ರಮೇಣ ಹೆಚ್ಚಾಗುತ್ತಿದ್ದು, ಬೆಳಗಿನ ಜಾವ ಮತ್ತು ರಾತ್ರಿ ಸಮಯದಲ್ಲಿ ತಣ್ಣನೆಯ ಅನುಭವ ತೀವ್ರವಾಗಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ, ರಾಯಚೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಹಗುರ ಮಳೆಯ ಸಾಧ್ಯತೆಯಿದ್ದು, ಗರಿಷ್ಠ ಉಷ್ಣಾಂಶ 28 ರಿಂದ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 10 ರಿಂದ 7 ಡಿಗ್ರಿ ಸೆಲ್ಸಿಯಸ್ ನಡುವೆಯೇ ಇರಲಿದೆ ಎಂದು ತಿಳಿಸಿದೆ.

    ಚಳಿಯ ಪರಿಣಾಮ ಕೃಷಿ ಕ್ಷೇತ್ರಕ್ಕೂ ತಟ್ಟಿದ್ದು, ರೈತರ ಕೃಷಿ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತಿದೆ. ತೀವ್ರ ಚಳಿಯಿಂದಾಗಿ ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ, ಅಗತ್ಯ ಪೋಷಕಾಂಶಗಳ ಸಿಂಪಡಣೆ ಮಾಡುವಂತೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.

    ಇನ್ನು ಜನಸಾಮಾನ್ಯರ ಆರೋಗ್ಯದ ಮೇಲೂ ಚಳಿಯ ಪ್ರಭಾವ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ವೈದ್ಯರು ಸಾರ್ವಜನಿಕರಿಗೆ ಬೆಳಗಿನ ಜಾವ ವಾಕಿಂಗ್ ಅನ್ನು ತಡವಾಗಿ ಆರಂಭಿಸುವಂತೆ ಸೂಚನೆ ನೀಡುತ್ತಿದ್ದು, ವಿಶೇಷವಾಗಿ ಚಿಕ್ಕಮಕ್ಕಳು ಹಾಗೂ ವೃದ್ಧರು ಹೆಚ್ಚು ಬೆಚ್ಚಗಿನ ಬಟ್ಟೆಗಳನ್ನು ಧರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ತೀವ್ರ ಚಳಿಯ ಸಂದರ್ಭದಲ್ಲಿ ಹೃದಯಾಘಾತ, ರಕ್ತದೊತ್ತಡದಂತಹ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ವೈದ್ಯರು ಮನವಿ ಮಾಡಿದ್ದಾರೆ.

    ಚಳಿಯ ತೀವ್ರತೆಯಿಂದಾಗಿ ಉದ್ಯಾನವನಗಳು ಹಾಗೂ ಕ್ರೀಡಾಂಗಣಗಳು ವಾಕಿಂಗ್‌ಗೆ ಬರುವ ಜನರಿಲ್ಲದೆ ಖಾಲಿ ಖಾಲಿಯಾಗಿ ಕಾಣಿಸುತ್ತಿವೆ. ತಣ್ಣನೆಯಿಂದ ತಪ್ಪಿಸಿಕೊಳ್ಳಲು ಜನರು ಅಲ್ಲಲ್ಲಿ ಬೆಂಕಿ ಹಾಕಿ ಚಳಿ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬರುತ್ತಿದ್ದು, ಬಿಸಿಲುನಾಡು ರಾಯಚೂರು ಈ ಬಾರಿ ಸಂಪೂರ್ಣವಾಗಿ ಚಳಿಯ ಮಡಿಲಲ್ಲಿ ಸಿಲುಕಿರುವಂತಾಗಿದೆ.

  • ಜಮೀನಿಗೆ ದಾರಿಬಳಕೆಗೆ ಅಡ್ಡಿ ಆರೋಪ – ತಹಶೀಲ್ದಾರ್‌ಗೆ ರೈತ ಕುಟುಂಬದ ಮನವಿ.

    ಜಮೀನಿಗೆ ದಾರಿಬಳಕೆಗೆ ಅಡ್ಡಿ ಆರೋಪ – ತಹಶೀಲ್ದಾರ್‌ಗೆ ರೈತ ಕುಟುಂಬದ ಮನವಿ.

    ಮುದ್ದೇಬಿಹಾಳ:- ತಾಲ್ಲೂಕಿನ ಚಿಕ್ಕಬಿಜೂರ ಗ್ರಾಮದ ರೈತ ಶಿವಪುತ್ರಪ್ಪ ಯಮನಪ್ಪ ಹಾಲವರ ಹಾಗೂ ಅವರ ಕುಟುಂಬ, ತಮ್ಮ ಜಮೀನಿಗೆ ವರ್ಷಗಳಿಂದ ಬಳಕೆಯಲ್ಲಿರುವ ದಾರಿಗಳನ್ನು ವ್ಯವಸಾಯೇತರ ಚಟುವಟಿಕೆಗಳಿಗೆ ಮುಂದುವರಿಸಿಕೊಂಡು ಹೋಗಲು ಗ್ರಾಮಸ್ಥರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್‌ ಕಿರ್ತಿ ಚಾಲಕ ಅವರಿಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.

    ಚಿಕ್ಕಬಿಜೂರ ಗ್ರಾಮದಲ್ಲಿರುವ ತಮ್ಮ ಜಮೀನಿನ ರಿ.ಸ.ನಂ. 74/1ರಲ್ಲಿ ಒಟ್ಟು 4 ಎಕರೆ ವಿಸ್ತೀರ್ಣವಿದ್ದು, ಅದರ ಉತ್ತರ ಭಾಗದ 2 ಎಕರೆ ಜಮೀನನ್ನು ಈಗಾಗಲೇ ಉಪಗ್ರಾಮ ಕಂದಾಯಕ್ಕೆ ಒಪ್ಪಿಸಲಾಗಿದ್ದು, ಪಹಣಿಯಲ್ಲೂ ದಾಖಲಾಗಿರುವುದಾಗಿ ಮನವಿಯಲ್ಲಿ ವಿವರಿಸಲಾಗಿದೆ. ಉಳಿದ ದಕ್ಷಿಣ ಭಾಗದ 2 ಎಕರೆ ಜಮೀನಿಗೆ ಪ್ರವೇಶಿಸಲು ಇತಿಹಾಸದಿಂದಲೂ ಎರಡು ದಾರಿಗಳೇ ಇರುವುದಾಗಿ ರೈತ ಕುಟುಂಬ ಸ್ಪಷ್ಟಪಡಿಸಿದೆ.

    ಒಂದು ದಾರಿ ಖಾದಿರಸಾಬ ಬಡೇಸಾಬ ನದಾಫ ಅವರ ಮನೆಯ ಮಗ್ಗುಲಿನಿಂದ ಹಾದು ಹೋಗುವ ಸುಮಾರು 20 ಅಡಿ ಅಗಲದ ದಾರಿಯಾಗಿದ್ದು, ಇನ್ನೊಂದು ದಾರಿ ರಾಮಣ್ಣ ನಿಂಗಪ್ಪ ನಂದ್ಯಾಳ ಹೊಲ ಹಾಗೂ ಉಮಾಶ್ರೀ ಶರಣಪ್ಪ ನಂದ್ಯಾಳ ಅವರ ಮನೆಯ ಪಕ್ಕದಿಂದ ಸಾಗುವ ಸುಮಾರು 25 ಅಡಿ ಅಗಲದ ದಾರಿಯಾಗಿದೆ. ಈ ಎರಡನೇ ದಾರಿಯಲ್ಲಿ ಮಳೆಗಾಲದ ಹೆಚ್ಚುವರಿ ನೀರು ಹರಿದು ಹೋಗುವ ಚರಂಡಿಯೂ ಸೇರಿದೆ ಎಂದು ತಿಳಿಸಿದ್ದಾರೆ.

    ಈ ಎರಡು ಮಾರ್ಗಗಳನ್ನೇ ತಮ್ಮ ಜಮೀನಿಗೆ ವ್ಯವಸಾಯೇತರ ಚಟುವಟಿಕೆಗಳಿಗಾಗಿ ಬಳಸಿಕೊಂಡು ಬರುತ್ತಿದ್ದು, ಇದಕ್ಕೆ ಹೊರತು ಬೇರೆ ಯಾವುದೇ ಪರ್ಯಾಯ ದಾರಿಯೇ ಇಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಗ್ರಾಮಸ್ಥರು ಈ ದಾರಿಗಳ ಬಳಕೆಗೆ ಅಡ್ಡಿಪಡಿಸುತ್ತಿದ್ದು, ಇದರಿಂದ ತಮಗೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.

    ಸ್ಥಳೀಯ ಕಂದಾಯ ಅಧಿಕಾರಿಗಳು ವಿಷಯ ತಿಳಿದಿದ್ದರೂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ರೈತ ಕುಟುಂಬ, ತಮ್ಮ ಜಮೀನಿಗೆ ಇರುವ ಹಳೆಯ ದಾರಿಗಳನ್ನು ಯಥಾಸ್ಥಿತಿಯಲ್ಲಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಿ, ಗ್ರಾಮಸ್ಥರು ಅಡ್ಡಿ ಮಾಡದಂತೆ ತಾಕೀತು ಆದೇಶ ನೀಡುವಂತೆ ತಹಶೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ.

    ನ್ಯಾಯ ಸಿಗದಿದ್ದಲ್ಲಿ ಮೇಲಾಧಿಕಾರಿಗಳು ಹಾಗೂ ಮಾನವ ಹಕ್ಕುಗಳ ಆಯೋಗದ ಗಮನಕ್ಕೂ ವಿಷಯ ತರಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

  • ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಭೇಟಿಗೆ ನಕಾರ ಹೇಳಿದ ದರ್ಶನ್

    ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಭೇಟಿಗೆ ನಕಾರ ಹೇಳಿದ ದರ್ಶನ್

    ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ಆರಂಭವಾಗುತ್ತಿದ್ದಂತೆ, ಪರಪ್ಪನ ಅಗ್ರಹಾರ ಜೈಲಿನೊಳಗಿನ ಬೆಳವಣಿಗೆಗಳು ಮತ್ತೆ ಚರ್ಚೆಗೆ ಬಂದಿವೆ. ಈ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಈಗ ಅಂತರ ಹೆಚ್ಚಾಗಿದೆ ಎನ್ನುವ ಸುಳಿವುಗಳು ಲಭ್ಯವಾಗುತ್ತಿವೆ.

    ಜೈಲು ಸೇರಿದ ಬಳಿಕ ದರ್ಶನ್ ಅವರನ್ನು ಭೇಟಿ ಮಾಡಿ ಮಾತನಾಡಬೇಕು ಎಂಬ ಆಸೆಯನ್ನು ಪವಿತ್ರಾ ಗೌಡ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಟ್ರಯಲ್ ಆರಂಭವಾದ ಈ ಸಮಯದಲ್ಲಿ, ದರ್ಶನ್ ಜೊತೆ ನೇರವಾಗಿ ಮಾತುಕತೆ ನಡೆಸಲು ಅವರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಪ್ರಯತ್ನಕ್ಕೆ ದರ್ಶನ್ ಕಡೆಯಿಂದ ಸ್ಪಷ್ಟ ನಿರಾಕರಣೆ ಎದುರಾಗುತ್ತಿದೆ. ಯಾವುದೇ ಕಾರಣಕ್ಕೂ ಪವಿತ್ರಾ ಗೌಡ ಅವರನ್ನು ಭೇಟಿಯಾಗಲು ತಾವು ಸಿದ್ಧರಿಲ್ಲ ಎಂಬ ನಿಲುವಿಗೆ ದರ್ಶನ್ ಅಂಟಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಪರಪ್ಪನ ಅಗ್ರಹಾರ ಜೈಲಿಗೆ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ, ಪವಿತ್ರಾ ಗೌಡ ಅವರು ದರ್ಶನ್ ಅವರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ಕುರಿತು ಕಾನೂನಿನ ಪ್ರಕಾರ ಏನು ಸಾಧ್ಯವೋ ನೋಡಲಾಗುವುದು ಎಂದು ಅಲೋಕ್ ಕುಮಾರ್ ಹೇಳಿದ್ದರು. ಅದನ್ನೇ ಆಧಾರವಾಗಿ ಇಟ್ಟುಕೊಂಡು ಪವಿತ್ರಾ ಗೌಡ ಮತ್ತೆ ಮತ್ತೆ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಜೈಲಿನೊಳಗಿನ ಪ್ರಕ್ರಿಯೆಗಳಲ್ಲಿ ದರ್ಶನ್ ಅವರ ಸಹಕಾರ ಸಿಗುತ್ತಿಲ್ಲ.

    ದರ್ಶನ್ ಅವರು ಪವಿತ್ರಾ ಗೌಡ ಅವರನ್ನು ನಯವಾಗಿಯೇ ಆದರೆ ದೃಢವಾಗಿ ಭೇಟಿಗೆ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ತಮ್ಮನ್ನು ಭೇಟಿಯಾಗಲು ಬಂದವರೊಂದಿಗೆ ಅವರು ವೈಯಕ್ತಿಕ ವಿಷಯಗಳಿಗಿಂತ ಕಾನೂನು ಹೋರಾಟ, ಪ್ರಕರಣದ ಪ್ರಗತಿ ಮತ್ತು ಮುಂದಿನ ಕ್ರಮಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ ಎನ್ನಲಾಗಿದೆ. “ಈ ಪರಿಸ್ಥಿತಿಗೆ ನಾನೇ ಸಿಲುಕಿದ್ದು ಸಾಕು” ಎಂಬ ಭಾವದಲ್ಲಿ ಅವರು ಯಾವುದೇ ಹೆಚ್ಚುವರಿ ಸಂಪರ್ಕ ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವಂತಿದೆ.

    ಈ ನಡುವೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆ ವೇಗ ಪಡೆದುಕೊಂಡಿದೆ. ಡಿಸೆಂಬರ್ 17ರಂದು ರೇಣುಕಾಸ್ವಾಮಿ ತಂದೆ ಹಾಗೂ ತಾಯಿಯ ವಿಚಾರಣೆ ನಡೆದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಸಾಕ್ಷಿಗಳನ್ನು ಕೋರ್ಟ್ ಎದುರು ಹಾಜರುಪಡಿಸಲಾಗಲಿದೆ. ಇಂಥ ಸಂವೇದನಾಶೀಲ ಹಂತದಲ್ಲಿ ದರ್ಶನ್ ಜೊತೆ ಮಾತನಾಡಬೇಕೆಂಬ ಪವಿತ್ರಾ ಗೌಡ ಅವರ ಆಸೆ ಈಡೇರದೆ ಉಳಿದಿದೆ.

    ಒಮ್ಮೆ ಬಹಳ ಆಪ್ತವಾಗಿದ್ದ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧ, ಈ ಕೊಲೆ ಪ್ರಕರಣದ ಬಳಿಕ ಸಂಪೂರ್ಣವಾಗಿ ಬದಲಾಗಿದೆ ಎನ್ನುವುದು ಈಗ ಸ್ಪಷ್ಟವಾಗಿ ಕಾಣಿಸುತ್ತಿದೆ. ಜೈಲು ಸೇರುವುದಕ್ಕೂ ಮುನ್ನ ಅವರಿಬ್ಬರ ನಡುವಿನ ನಿಕಟತೆಯನ್ನು ಅನೇಕ ಫೋಟೋಗಳು ಮತ್ತು ವಿಡಿಯೋಗಳು ತೋರಿಸಿದ್ದವು. ಆದರೆ ಒಂದೇ ಪ್ರಕರಣ ಇಬ್ಬರ ಬದುಕನ್ನು ಸಂಪೂರ್ಣವಾಗಿ ತಿರುಗಿಸಿ ಹಾಕಿದ್ದು, ಇಂದು ಇಬ್ಬರೂ ಜೈಲಿನೊಳಗೆ ತಮ್ಮ ತಮ್ಮ ಹೋರಾಟ ನಡೆಸುವ ಸ್ಥಿತಿಗೆ ತಲುಪಿದ್ದಾರೆ.

  • ಕೇಂದ್ರದ ಪೂರ್ವಾನುಮತಿ ಇಲ್ಲದೆ ಅರಣ್ಯಭೂಮಿ ಗುತ್ತಿಗೆ ಅಕ್ರಮ: ಸುಪ್ರೀಂಕೋರ್ಟ್‌ನ ಮಹತ್ವದ ತೀರ್ಪು

    ಕೇಂದ್ರದ ಪೂರ್ವಾನುಮತಿ ಇಲ್ಲದೆ ಅರಣ್ಯಭೂಮಿ ಗುತ್ತಿಗೆ ಅಕ್ರಮ: ಸುಪ್ರೀಂಕೋರ್ಟ್‌ನ ಮಹತ್ವದ ತೀರ್ಪು

    ಅರಣ್ಯಭೂಮಿಯ ಸಂರಕ್ಷಣೆ ಮತ್ತು ಪರಿಸರ ಸಮತೋಲನ ಕಾಯ್ದುಕೊಳ್ಳುವ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ಮಿತಿ ವಿಧಿಸುವಂತಹ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ. 1980ರ ಅರಣ್ಯ ಸಂರಕ್ಷಣಾ ಕಾಯ್ದೆಯ ಸೆಕ್ಷನ್‌ 2ರ ಪ್ರಕಾರ, ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ಅರಣ್ಯಭೂಮಿಯನ್ನು ಗುತ್ತಿಗೆ ನೀಡಲು ಅಥವಾ ಕೃಷಿ ಸೇರಿದಂತೆ ಅರಣ್ಯೇತರ ಉದ್ದೇಶಗಳಿಗೆ ಬಳಸಲು ಸಾಧ್ಯವಿಲ್ಲ ಎಂದು ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಕಾನೂನಿಗೆ ವಿರುದ್ಧವಾಗಿ ನೀಡಲಾದ ಯಾವುದೇ ಗುತ್ತಿಗೆ ಸಂಪೂರ್ಣವಾಗಿ ಕಾನೂನುಬಾಹಿರವಾಗಿದ್ದು, ಅದನ್ನು ಮುಂದುವರಿಸುವ ಪ್ರಶ್ನೆಯೇ ಇಲ್ಲ ಎಂದು ನ್ಯಾಯಾಲಯ ಕಟ್ಟುನಿಟ್ಟಾಗಿ ಹೇಳಿದೆ.

    ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರಿದ್ದ ಪೀಠವು, ಅರಣ್ಯಭೂಮಿಯ ಮೇಲಿನ ಗುತ್ತಿಗೆಯನ್ನು ಮುಂದುವರಿಸಲು ಸಹಕಾರಿ ಸಂಘಕ್ಕೆ ಅವಕಾಶ ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ಹಿಂದಿನ ಆದೇಶವನ್ನು ರದ್ದುಗೊಳಿಸಿದೆ. ಅರಣ್ಯಭೂಮಿಯನ್ನು ಕೃಷಿ ಉದ್ದೇಶಗಳಿಗೆ ನೀಡುವುದೇ 1980ರ ಅರಣ್ಯ ಸಂರಕ್ಷಣಾ ಕಾಯ್ದೆಗೆ ವಿರುದ್ಧ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ಅಷ್ಟೇ ಅಲ್ಲದೆ, ಹಾನಿಗೊಳಗಾದ ಅರಣ್ಯಭೂಮಿಯನ್ನು ಪುನಃ ಹಸಿರುಗೊಳಿಸುವ ಹೊಣೆಗಾರಿಕೆಯನ್ನು ರಾಜ್ಯ ಅರಣ್ಯ ಇಲಾಖೆಗೆ ನೀಡಿದ ಸುಪ್ರೀಂಕೋರ್ಟ್, ಹನ್ನೆರಡು ತಿಂಗಳ ಒಳಗಾಗಿ ಸ್ಥಳೀಯ ಜಾತಿಯ ಮರಗಳು ಹಾಗೂ ಸಸ್ಯಗಳನ್ನು ನೆಡುವ ಮೂಲಕ ಭೂಮಿಯನ್ನು ಮೂಲ ಸ್ಥಿತಿಗೆ ತರುವಂತೆ ನಿರ್ದೇಶನ ನೀಡಿದೆ.

    ಈ ಪ್ರಕರಣ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಬೆಣಚಿ ಮತ್ತು ತುಮರಿಕೊಪ್ಪ ಗ್ರಾಮಗಳಲ್ಲಿ ಇರುವ ಒಟ್ಟು 134 ಎಕರೆ 6 ಗುಂಟೆ ಅರಣ್ಯಭೂಮಿಗೆ ಸಂಬಂಧಿಸಿದೆ. 1976ರ ಜೂನ್ 30ರಂದು ರಾಜ್ಯ ಸರ್ಕಾರವು ಈ ಭೂಮಿಯನ್ನು ಕೃಷಿ ಉದ್ದೇಶಕ್ಕಾಗಿ ಹತ್ತು ವರ್ಷಗಳ ಗುತ್ತಿಗೆಯ ಮೇಲೆ ಒಂದು ಸಹಕಾರಿ ಸಂಘಕ್ಕೆ ನೀಡಿತ್ತು. ಗುತ್ತಿಗೆ ಅವಧಿಯಲ್ಲಿ ಸಂಘದ ಸದಸ್ಯರು ಮರಗಳನ್ನು ಕಡಿದು ಭೂಮಿಯನ್ನು ಕೃಷಿಗೆ ಬಳಸಿದ್ದರು.

    ಗುತ್ತಿಗೆ ಅವಧಿ ಮುಗಿದ ನಂತರ, ರಾಜ್ಯ ಸರ್ಕಾರವು ಅದನ್ನು ವಿಸ್ತರಿಸಲು ನಿರಾಕರಿಸಿ, 1985ರ ಮಾರ್ಚ್ 13ರಂದು ಗುತ್ತಿಗೆಯನ್ನು ರದ್ದುಗೊಳಿಸಿತು. ಇದನ್ನು ಪ್ರಶ್ನಿಸಿ ಸಹಕಾರಿ ಸಂಘವು 1985 ಮತ್ತು 1987ರಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಿತ್ತು. ಆದರೆ ಆಗ ಹೈಕೋರ್ಟ್ ಅವುಗಳನ್ನು ವಜಾಗೊಳಿಸಿತ್ತು. ನಂತರದ ಹಂತದಲ್ಲಿ ಹೈಕೋರ್ಟ್ ನೀಡಿದ್ದ ಅನುಕೂಲಕರ ಆದೇಶವನ್ನು ಇದೀಗ ಸುಪ್ರೀಂಕೋರ್ಟ್ ರದ್ದುಗೊಳಿಸುವ ಮೂಲಕ ಅರಣ್ಯ ಸಂರಕ್ಷಣೆಗೆ ಬಲವಾದ ಸಂದೇಶ ನೀಡಿದೆ.

    ಈ ತೀರ್ಪು ದೇಶದಾದ್ಯಂತ ಅರಣ್ಯಭೂಮಿಯ ದುರುಪಯೋಗ ತಡೆಯುವಲ್ಲಿ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಕಟ್ಟುನಿಟ್ಟಾದ ಅನುಷ್ಠಾನಕ್ಕೆ ದಿಕ್ಕು ತೋರಿಸುವುದಾಗಿ ಪರಿಗಣಿಸಲಾಗಿದೆ.