Category: Latest News

  • ಹತ್ತಿಯಲ್ಲಿ ರಬ್ಬರ್ ಹುಳು ನಿಯಂತ್ರಿಸಲು ಕೀಟನಾಶಕ ಸಿಂಪಡಿಸಿ.

    ಹತ್ತಿಯಲ್ಲಿ ರಬ್ಬರ್ ಹುಳು ನಿಯಂತ್ರಿಸಲು ಕೀಟನಾಶಕ ಸಿಂಪಡಿಸಿ.

    ಸತ್ಯಕಾಮ‌ ವಾರ್ತೆ ವಡಗೇರಾ:
    ತಾಲೂಕಿನ ವಡಗೇರಾ ಹೋಬಳಿ ವ್ಯಾಪ್ತಿಯಲ್ಲಿ ಹತ್ತಿ ಬೆಳೆಯಲ್ಲಿ ಹತ್ತಿ ಕಾಯಿಕೊರಕ ರಬ್ಬರ ಹುಳುವಿನ ಹಾವಳಿ ಹೆಚ್ಚಾಗಿದ್ದು, ರೈತರು ಹುಳುಗಳನ್ನು ನಿಯಂತ್ರಿಸಲು ಕೀಟನಾಶಕ ಸಿಂಪರಣೆ ಮಾಡಿ ಎಂದು ವಡಗೇರಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಗಣಪತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಕ್ಲೋರಂಟ್ರಾನಿಲಿಪ್ರೋಲ್+ ಲ್ಯಾಂಬ್ಡಾ ಸೈಹಾಲೋಥ್ರೀನ್ ಕೀಟನಾಶಕ ಜೊತೆಗೆ ಬೇವಿನ ಎಣ್ಣೆಯನ್ನು ಸೇರಿಸಿ ಸಿಂಪರಣೆ ಮಾಡಬೇಕು. ಮತ್ತೆ ಹತ್ತು ದಿನಗಳ ನಂತರ, ಪ್ರೊಫೆನೊಪೊಸ್ +ಸೈಪರ್ಮೆಥ್ರಿನ್ ಜೊತೆಗೆ ಬೇವಿನ ಎಣ್ಣೆಯನ್ನು ಸೇರಿಸಿ ಸಿಂಪರಣೆ ಮಾಡಬೇಕು.ಅಸೆಟಾಮಿಪ್ರಿಡ್ + ಬೈಫೆಂತ್ರಿನ್ ಜೊತೆ ಬೇವಿನ ಎಣ್ಣೆಯನ್ನು ಸೇರಿಸಿ ಸಿಂಪರಣೆ ಮಾಡಬೇಕು ಮತ್ತೆ ಹತ್ತು ದಿನಗಳ ನಂತರ, ರೈತರು ಪ್ರತಿ ಎಕರೆಗೆ ಈ ಮೇಲ್ಕಂಡ ಕೀಟನಾಶಕವನ್ನು 200 ಮೀ.ಲೀ ಕಡ್ಡಾಯವಾಗಿ ಸಿಂಪರಣೆಯನ್ನು ಮಾಡಬೇಕು ಎಂದಿದ್ದಾರೆ, ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ತಿಳಿಸಿದ್ದಾರೆ.

  • ಸೆ.14 ರಂದು ರಾಷ್ಟೀಯ ಲೋಕ ಅದಾಲತ್

    ಸೆ.14 ರಂದು ರಾಷ್ಟೀಯ ಲೋಕ ಅದಾಲತ್

    ಸತ್ಯಕಾಮ ವಾರ್ತೆ ಯಾದಗಿರಿ:
    ಸೆ.14(SEP 14) ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್(LOK ADALAT) ನಡೆಯುತ್ತಿದ್ದು, ಬಾಕಿ ಇರುವ ವ್ಯಾಜ್ಯಗಳನ್ನು ಸಾರ್ವಜನಿಕರು ಇತ್ಯರ್ಥ ಮಾಡಿಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ  ಜಿಲ್ಲಾ  ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮರಿಯಪ್ಪ ಅವರು ಹೇಳಿದರು.
    ಶನಿವಾರ ನಗರದ ಜಿಲ್ಲಾ ನ್ಯಾಯಾಲಯದ ಕಚೇರಿಯಲ್ಲಿ ನೆಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ರಾಷ್ಟ್ರೀಯ ಲೋಕ ಅದಾಲತ್ ಮೂಲಕ ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ. ಇದರ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಿಲ್ಲೆಯಲ್ಲಿರುವ ಎಲ್ಲಾ ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಲೋಕ್ ಅದಾಲತ್ತನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಅದಾಲತ್‌ನ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕೆಂದರು.
    ಈ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಪರಿಹರಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ರಾಜಿಯಾಗಬಲ್ಲ ಎಲ್ಲಾ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟಾ‌ರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಭೂಸ್ವಾಧೀನ ಪರಿಹಾರ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಎಂ.ಎಂ.ಡಿ.ಆರ್. ಕಾಯ್ದೆಯಡಿಯ ಪ್ರಕರಣಗಳನ್ನು ಪರಿಹರಿಸಿಕೊಳ್ಳಬಹುದು. ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳು (ವಿಚ್ಛೇದನ ಹೊರತು ಪಡಿಸಿ) ಪಿಂಚಣಿ ಪ್ರಕರಣಗಳು, ವೇತನ ಭತ್ಯೆ ಸಂಬಂಧಿಸಿದ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕ, ಕೈಗಾರಿಕಾ ಕಾರ್ಮಿಕರ ವೇತನ, ಕಾರ್ಮಿಕ ವಿವಾದ ಇತ್ಯಾದಿ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.
    ಇದುವರೆಗೆ ಜಿಲ್ಲೆಯ್ಯಾದಂತ ಒಟ್ಟು 4325 ಪ್ರಕರಣಗಳನ್ನು ಲೋಕ ಅದಾಲತನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿದೆ. ಯಾದಗಿರಿ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಒಟ್ಟು 04 ಬೆಂಚ್‌ ಗಳನ್ನು, ಶಹಾಪೂರ 03 ಮತ್ತು ಸುರಪೂರದಲ್ಲಿ 03 ಬೆಂಚ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಪ್ರತಿ ಬೆಂಚನಲ್ಲಿ ಒಬ್ಬರು ನ್ಯಾಯಾಧೀಶರು ಹಾಗೂ ಒಬ್ಬರು ವಕೀಲರು ಸಂಧಾನಕಾರರಾಗಿ ಭಾಗವಹಿಸುವರು, ಅವರ ಮುಖಾಂತರ ರಾಜೀ ಸಂಧಾನ ಮಾಡಿಸಲಾಗುವುದು ಎಂದು ಹೇಳಿದರು.
    ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಪ್ರಕರಣಗಳನ್ನು ಬಗೆಹರಿಸಿಕೊಂಡಲ್ಲಿ ಸಾಕಷ್ಟು ಸಮಯ ಮತ್ತು ಹಣ ಉಳಿತಾಯ ಮಾಡಬಹುದಾಗಿದೆ. ಸಿವಿಲ್ ಪ್ರಕರಣಗಳಲ್ಲಿ ರಾಜೀ ಆದರೆ ನ್ಯಾಯಾಲಯಕ್ಕೆ ತುಂಬಿದ ನ್ಯಾಯಾಲಯ ಶುಲ್ಕ ಸಹ ವಾಪಸ್ಸಾಗುತ್ತದೆ. ಮತ್ತು ಇದರಿಂದ ಉಭಯ ಪಕ್ಷಗಾರರಲ್ಲಿ ದ್ವೇಷದ ಭಾವನೆ ಕಡಿಮೆಯಾಗಿ ಸಾಮರಸ್ಯ ಮೂಡುತ್ತದೆ. ಸಾರ್ವಹನಿಕರು ವಿಶೇಷವಾಗಿ ಕಕ್ಷಿಗಾರರು ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ನ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
  • ಆ.29ರಂದು ವಚನ ದಿನ ಕಾರ್ಯಕ್ರಮ ಆಯೋಜನೆ

    ಆ.29ರಂದು ವಚನ ದಿನ ಕಾರ್ಯಕ್ರಮ ಆಯೋಜನೆ

    ಸತ್ಯಕಾಮ ವಾರ್ತೆ ಯಾದಗಿರಿ:
    ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನದಿನ ಹಾಗೂ ಸಂಸ್ಥಾಪಕರಾದ ಜಗದ್ಗುರು ಲಿಂ. ಪೂಜ್ಯ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 109 ನೇ ಜಯಂತಿ ಅಂಗವಾಗಿ ಆ. 29 ಗುರವಾರದಂದು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ವಚನ ದಿನ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸಿದ್ದಪ್ಪ ಎಸ್ ಹೊಟ್ಟಿ ಹೇಳಿದರು.

    ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿ ಘೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಕಾರ್ಯಕ್ರಮದಲ್ಲಿ ಪೂಜ್ಯ ಶಾಂತವೀರ ಗುರು ಮುರುಘ ರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಶರಣ ಕುಪೇಂದ್ರ ವಠಾರ ಅವರು ಈ ಕಾರ್ಯಕ್ರವನ್ನು ಉದ್ಘಾಟಿಸಲಿದ್ದಾರೆ. ಸಿದ್ದಪ್ಪ ಎಸ್ ಹೊಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶರಣ ಮಹಿಪಾಲ ರೆಡ್ಡಿ ಮುನ್ನೂರು. ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶರಣ ವೆಂಕಟಗಿರಿ ದೇಶಪಾಂಡೆ ಹಾಗೂ ಶರಣ ಪ್ರಕಾಶ ಅಂಗಡಿ ಕನ್ನಳ್ಳಿ ಅವರ ಅತಿಥಿಗಳಾಗಿ ಭಾಗವಹಿಸುವವರು. ಶರಣ ಡಾ. ಸುಭಾಷ ಚಂದ್ರ ಕೌಲಗಿ ಅವರು ಪ್ರಾಸ್ತಾವಿಕ ಮಾತನಾಡುತ್ತಾರೆ. ಶರಣ ಅಖಂಡೇಶ್ವರ ಹಿರೇಮಠ ಅವರಯ ಗೌರವ ಉಪಸ್ಥಿತಿ ಇರಲಿದ್ದಾರೆ. ಶರಣ ನಾಗಪ್ಪ ಮಾಲಿ ಪಾಟೀಲ ಪತ್ರಕರ್ತರು ಇವರನ್ನ ವಿಶೇಷ ಸನ್ಮಾನ ಸಮಾರಂಭ ಏರ್ಪಡಿಸಿದ್ದೇವೆ ಮತ್ತು ಯಡಿಯೂರ ಸಿರಿ ಸಂಗೀತ ಪಾಠಶಾಲೆ ಯಾದಗಿರಿ ಇವರಿಂದ ವಚನ ಗಾಯನ ಕಾರ್ಯಕ್ರಮ ಆಯೋಜಿದ್ದೇವೆ ಎಂದು ಮಾಹಿತಿ ನೀಡಿದರು.

    ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಆರ್ ಮಾಹದೇವಪ್ಪ ಗೌಡ ಅಬ್ಬೆತುಮಕೂರ. ಅಯ್ಯಣ್ಣ ಹುಂಡೇಕಾರ. ಡಾ. ಸುಭಾಷ ಚಂದ್ರ ಕೌಲಗಿ. ಡಾ. ಭೀಮರಾಯ ಲಿಂಗೇರಿ . ದೇವಿಂದ್ರರೆಡ್ಡಿ ಯಡ್ಡಳ್ಳಿ ಇದ್ದರು.

  • ಕಾಣೆಯಾದ ವ್ಯಕ್ತಿ ಪತ್ತೆಗೆ ಮನವಿ

    ಕಾಣೆಯಾದ ವ್ಯಕ್ತಿ ಪತ್ತೆಗೆ ಮನವಿ

    ಸತ್ಯಕಾಮ ವಾರ್ತೆ ಯಾದಗಿರಿ :

    ಯಾದಗಿರಿ ನಗರದ ಅಜೀಜ್ ಕಾಲೋನಿ ನಿವಾಸಿಯಾದ ಶೇಖ ಇರ್ಫಾನ್ 25 ವರ್ಷ ಪುರುಷ ಕಾಣೆಯಾಗಿದ್ದು, ಈ ಕುರಿತು ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ನಗರ ಠಾಣಾಧಿಕಾರಿ ತಿಳಿಸಿದ್ದಾರೆ.

    ಕಾಣೆಯಾದ ಪುರುಷ 2024ರ ಆಗಸ್ಟ್ 20 ರಂದು ರಾತ್ರಿ ಸಮಯದಲ್ಲಿ ಅಂದಾಜು 2 ಗಂಟೆಗೆ ಸುಮಾರಿಗೆ ತನ್ನ ಮೊಬೈಲ್ ಮನೆಯಲ್ಲಿ ಬಿಟ್ಟು ಮನೆಯಿಂದ ಹೋಗಿದ್ದು, ಮರಳಿ ಮನೆಗೆ ಬಂದಿರುವುದಿಲ್ಲ. ಕುಟುಂಬದವರು ಪರಿಚಯವಿರುವ ನಗರದಲ್ಲಿ ಎಲ್ಲಾ ಕಡೆ ಹುಡುಕಾಡಿದ್ದು, ಎಲ್ಲಿಯೂ ಕಂಡು ಬಂದಿರುವುದಿಲ್ಲ. ಪುರುಷ ಕಾಣೆಯಾದ ಬಗ್ಗೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುರುಷನ ಮಾಹಿತಿ ಸಿಕ್ಕರೆ ಯಾದಗಿರಿ ನಗರ ಪೊಲೀಸ್ ಠಾಣೆಗೆ ತಿಳಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಜಿಲ್ಲಾಡಳಿತ ಭವನದಲ್ಲಿ ದುರ್ವಾಸನೆಯಿಂದ ನಾರುತ್ತಿರುವ ಶೌಚಾಲಯಗಳು

    ಜಿಲ್ಲಾಡಳಿತ ಭವನದಲ್ಲಿ ದುರ್ವಾಸನೆಯಿಂದ ನಾರುತ್ತಿರುವ ಶೌಚಾಲಯಗಳು

    ವರದಿ: ಕುದಾನ್ ಸಾಬ್
    ಸತ್ಯಕಾಮ ವಾರ್ತೆ ಯಾದಗಿರಿ:
    ದೀಪದ ಕೆಳಗೆ ಕತ್ತಲು ಎಂಬಂತೆ ಬಯಲು ಶೌಚಮುಕ್ತ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಿಲ್ಲಾಡಳಿತ ಭವನದಲ್ಲೇ ಶೌಚಾಲಯಗಳ ಅವ್ಯವಸ್ಥೆ ಕಂಡು ಇಲ್ಲಿನ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪರದಾಡುವ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ.

    ಜಿಲ್ಲೆಯ ಆಡಳಿತ ಶಕ್ತಿ ಕೇಂದ್ರವಾದ ಜಿಲ್ಲಾಡಳಿತ ಭವನದಲ್ಲಿರುವ ಶೌಚಾಲಯಗಳು ಇದ್ದರೂ ಇಲ್ಲದಂತಾಗಿದೆ, ಗ್ರಾಮೀಣ ಭಾಗದಿಂದ ನೂರಾರು ಜನರು ಸಮಸ್ಯೆಗಳನ್ನು ಹೊತ್ತುಕೊಂಡು ಇಲ್ಲಿಗೆ ಬರುತ್ತಾರೆ. ಸಮಸ್ಯೆ ಹೊತ್ತು ಬಂದ ಜನರಿಗೆ ಅಧಿಕಾರಿಗಳು ಸಭೆ, ಕಾರ್ಯಕ್ರಮ, ಅಧಿಕಾರಿಗಳ ನಡುವೆ ಚರ್ಚೆ ಎಂದು ಗಂಟೆಗಂಟಲೆ ಕಾಯಿಸುವ ವೇಳೆ ಸಾರ್ವಜನಿಕರು ತಮ್ಮ ನೈಸರ್ಗಿಕ ಬಾದೆ ತೀರಿಸಿಕೊಳ್ಳುವುದಕ್ಕೆ ಇಲ್ಲಿರುವ ಶೌಚಾಲಯದತ್ತ ಕಾಲಿಟ್ಟರೆ ಶೌಚಾಲಯದ ಅವ್ಯವಸ್ಥೆಯನ್ನು ಕಂಡು ಜಿಲ್ಲಾಡಳಿತಕ್ಕೆ ಛೀಮಾರಿ ಹಾಕುವಂತಾಗಿದೆ.

    ಹೌದು. ಇಲ್ಲಿರುವ ಶೌಚಾಲಯಗಳನ್ನು ಬಳಸುವುದೇ ಕಷ್ಟವಾಗಿದ್ದೂ, ಪುರುಷರು ಬಳಸುವ ಕೆಲುವು ಶೌಚಾಲಯಗಳಲ್ಲಿ ನೀರಿನ ಪೈಪ್‌ ಕಿತ್ತು ಹೋಗಿದ್ದರೂ ಸರಿಪಡಿಸಿಲ್ಲ, ಶೌಚದಲ್ಲಿ ಒಂದು ಕ್ಷಣ ಅದರ ಒಳಗೆ ನಿಲ್ಲಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ಜನರು ಅನಿವಾರ್ಯವಾಗಿ ನೈಸರ್ಗಿಕ ಬಾಧೆಯನ್ನು ವಿಸರ್ಜಿಸಬೇಕಾದ ಪರಿಸ್ಥಿತಿ ಬಂದಿದೆ.

    ಭವನದಲ್ಲಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಭಾಂಗಣದಲ್ಲಿರುವ ಶೌಚಾಲಯದಲ್ಲಿನ ಪುರುಷರ ಕೊಠಡಿಯಲ್ಲಿ ಟೈಲ್ಸ್ ಗಳು ಕಿತ್ತು ಹೋಗಿದ್ದರೇ, ಮೂರು ಅಂತಸ್ತಿನ ಬಿಲ್ಡಿಂಗ್ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆಯ ಉಪಕರಣಗಳು ಮುರಿದು ಬಿದ್ದಿವೆ, ಅಲ್ಲದೇ ಮಲ ವಿಸರ್ಜನೆ ಮಾಡಲು ಹೋದರೆ ಸರಿಯಾದ ಸ್ವಚ್ಚತೆ ಇಲ್ಲಾ, ಶೌಚಾಲಯ ಉಪಯೋಗಿಸಿದ ಬಳಿಕ ಕೈ ತೊಳೆಯಲು ಸಿಂಕ್ ಬಳಿ ಬಂದರೆ ಅದರಲ್ಲಿ ನಳಗಳೇ ಇಲ್ಲಾ. ಇವುಗಳ ಬಗ್ಗೆ ಅಧಿಕಾರಿಗಳ ಗಮನಿಕಿದ್ದರೂ ಯಾವೊಬ್ಬರು ಅತ್ತ ಕಡೆ ಹೋಗುವುದಿಲ್ಲ.

    ಜನರಿಗೆ ಸ್ವಚ್ಛದ ಬಗ್ಗೆ ನೀತಿ ಪಾಠವೇಳುವ ಜಿಲ್ಲಾಡಳಿತವೇ ಇಲ್ಲಿನ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಊರ ಸ್ವಚ್ಛತೆಯನ್ನು ಹೇಗೆ ನಿರ್ವಹಿಸಲು ಸಾಧ್ಯವೆಂದು ಜನರು ಆಡಿಕೊಳ್ಳುತ್ತಿದ್ದಾರೆ.

    ಜಿಲ್ಲಾ ಕೇಂದ್ರದ ಪ್ರಮುಖ ಆಡಳಿತ ಕಚೇರಿಯಲ್ಲೇ ಶೌಚಾಲಯಗಳು ಹೀಗಿರಬೇಕಾದರೆ, ತಾಲ್ಲೂಕು ಕೇಂದ್ರಗಳ ಕಚೇರಿಯಲ್ಲಿ ಹೇಗಿರಬಹುದೆಂಬುದನ್ನು ನೀವೇ ಊಹಿಸಿಕೊಳ್ಳಿ. ಇದರ ನಿರ್ವಹಣೆಗಾಗಿ ಪ್ರತಿ ವರ್ಷ ಲಕ್ಷಗಟ್ಟಲೇ ಹಣವನ್ನು ಮಿಸಲಿಡಲಾಗುತ್ತದೆ, ಆದರೆ ಇದರ ಅನುದಾನವನ್ನು ಬಳಕೆ ಮಾಡದೇ ಗುತ್ತಿಗೆದಾರನ ಜೇಬಿಗೆ ಬಿದ್ದೀರಬಹುದಾ ಎಂಬ ಅನುಮಾನ ಕಾಡತೊಡಗಿದೆ.

    ಹಿರಿಯ ಅಧಿಕಾರಿಗಳ ಶೌಚಾಲಯ ಸ್ವಚ್ಛತೆ ಹಾಗೂ ಪ್ರತಿ ವರ್ಷ ನಿರ್ವಹಣೆ ಮಾಡಲಾಗುತ್ತದೆ, ಆದರೆ ಸಭಾಂಗಣದಲ್ಲಿನ ಶೌಚಾಲಯಗಳು ಹಲವು ವರ್ಷಗಳಿಂದ ನಿರ್ವಹಣೆ ಕಾಣದೇ ಸೊರಗಿದೆ. ಮಾದರಿಯಾಗಬೇಕಿದ್ದ ಜಿಲ್ಲಾಡಾಳಿತ ಭವನದಲ್ಲಿಯೇ ಶೌಚಾಲಯಗಳು ಅವ್ಯವಸ್ಥೆಯ ಆಗರವಾಗಿದ್ದೂ ದುರ್ದೈವೇ ಸರಿ.

    ನಿತ್ಯದ ಕಚೇರಿ ವ್ಯವಹಾರಕ್ಕೆ ಆಗಮಿಸುವ ಗ್ರಾಮೀಣ ಜನತೆಗೆ ಇದರ ಗೋಳು ಹೇಳತೀರದಾಗಿದೆ. ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ಸಾರ್ವಜನಿಕರಿಗೆ ಶೌಚಾಲಯಗಳ ಸಮರ್ಪಕ ವ್ಯವಸ್ಥೆ ಮಾಡುವಲ್ಲಿ ಮುಂದಾಗವರಾ ಎಂಬುದು ಕಾಲವೇ ಉತ್ತರಿಸಲಿದೆ.

  • ಸರ್ಕಾರಿ ವೈದ್ಯನ ಸೇವೆ ಮರೀಚಿಕೆ;‌ ಸಂಬಳಕ್ಕೆ ಹಾಜರ್-ಕೆಲಸಕ್ಕೆ ಗೈರು..!

    ಸರ್ಕಾರಿ ವೈದ್ಯನ ಸೇವೆ ಮರೀಚಿಕೆ;‌ ಸಂಬಳಕ್ಕೆ ಹಾಜರ್-ಕೆಲಸಕ್ಕೆ ಗೈರು..!

    ವರದಿ: ಶ್ರೀಶೈಲ್ ಪೂಜಾರಿ

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ಸರ್ಕಾರಿ ಕೆಲಸ ದೇವರ ಕೆಲಸ. ಈ ಮಾತನ್ನು ಸಾರ್ಥಕ ಪಡಿಸಬೇಕಾದರೆ ಸರ್ಕಾರಿ ನೌಕರರು ತಮ್ಮ ದಿನನಿತ್ಯ ಸೇವಾ ಮನೋಭಾವದಿಂದ ದುಡಿಯಬೇಕು ಆದರೆ ತಾಲೂಕಿನ ಗರಸಂಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಗೂ ವೈದ್ಯರು ಸರ್ಕಾರಕ್ಕೆ ಚಳ್ಳೆ ಹಣ್ಣು ತಿನ್ನಿಸಿ ಗೈರು ಹಾಜರಾಗಿ ಸಂಬಳ ಪಡೆಯುತ್ತಿರುವುದು ಸತ್ಯಕಾಮ ಪತ್ರಿಕೆಯಿಂದ ಬಯಲಿಗೆ ಬಿದ್ದಿದೆ.

     

    ಹೌದು.. ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿ ಗ್ರಾಮದ ಆಸ್ಪತ್ರೆಗೆ ಒಟ್ಟು 6 ಉಪ ಕೇಂದ್ರಗಳು ಒಳಪಡುತ್ತವೆ ಅದರಲ್ಲಿ ಕವಡಿಮಟ್ಟಿ, ಆಲೂರು, ಸರೂರು, ರಕ್ಕಸಗಿ, ಗರಸಂಗಿ ಸೇರಿದಂತೆ ಹಲವು ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತದೆ. ವೈದ್ಯೋ ನಾರಾಯಣೋ ಹರಿಃ ಎಂಬಂತೆ ವೈದ್ಯನಾದವನು ದೇವರಿಗೆ ಸಮಾನವಾದವನು. ಆತನು ರೋಗಿಯ ರೋಗವನ್ನು ಗುಣಪಡಿಸುವನು. ಮುಚ್ಚುಮರೆ ಮಾಡದೇ ರೋಗಿಯು ತನ್ನ ಸಮಸ್ಯೆಗಳನ್ನು ಹೇಳುವುದು ಕೇವಲ ವೈದ್ಯನ ಮುಂದೊಂದೇ. ಆದರೆ ಇಲ್ಲಿ ಆ ವೈದ್ಯರೆ ಹಂತಕರಾಗುವ ಪ್ರಶ್ನೆ ಎದುರಾಗಿದೆ. ವೈದ್ಯರ ಬದಲಿಗೆ ಇಲ್ಲಿ ಬರುವ ರೋಗಿಗಳಿಗೆ ನರ್ಸ್, ಲ್ಯಾಬ್ ಟೆಕ್ನಿಷಿಯನ್ ಸೇರಿ ಬೇರೆ ಸಿಬ್ಬಂದಿಗಳು ಚಿಕಿತ್ಸೆ ನೀಡುತ್ತಿದ್ದಾರೆ. ಇವರು ಚಿಕಿತ್ಸೆ ನೀಡುತ್ತಿರುವುದು ದೊಡ್ಡ ಅಪರಾಧ ಅಂತ ಗೊತ್ತಿದ್ದರು ಹಳ್ಳಿ ಜನರ ಜೀವನದ ಜತೆಗೆ ಚೆಲ್ಲಾಟ ವಾಡುತ್ತಿದ್ದಾರೆ.

     

    ವೈದ್ಯರ ಸಲಹೆ ಮೇರೆಗೆ ಮಾತ್ರ ಬೆರೊಬ್ಬ ಆರೋಗ್ಯ ಇಲಾಖೆ ಸಿಬ್ಬಂದಿಗಳು ಚಿಕಿತ್ಸೆ ನೀಡಬೇಕು. ಆದರೆ ಇಲ್ಲಿ ಎಂಬಿಬಿಎಸ್, ಬಿಎಎಮ್ಎಸ್ ಮುಗಿಸದ ಸಿಬ್ಬಂದಿಗಳೇ ವೈದ್ಯರಾಗಿದ್ದಾರೆ. ಇವರು ನೀಡಿದ ಚಿಕಿತ್ಸೆಯೇ ಇಲ್ಲಿ ಪೈನಲ್ ಎನ್ನೋವಾಗೆ ಆಗಿದೆ. ಹೆಸರಿಗೆ ಮಾತ್ರ ಆಸ್ಪತ್ರೆ ಇದಾಗಿದ್ದು, ರೋಗಿಗಳ ಪಾಲಿಗಂತು ನರಕಯಾತನೆ ಆಗಿದೆ. ಯಾಕಂದ್ರೆ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ. ಇಲ್ಲಿ ನರ್ಸ್ ಹಾಗೂ ಆಸ್ಪತ್ರೆ ಸಿಬ್ಬಂದಿಗಳೇ ಎಲ್ಲಾ ಕಾರುಬಾರು.

    ಗರಸಂಗಿ ಆಸ್ಪತ್ರೆಗೆ ನಿಯೋಜನೆಗೊಂಡ ವೈದ್ಯ ಎಮ್.ಎಸ್ ಪಾಟೀಲ್ ಒಂದು ದಿನವೂ ಆಸ್ಪತ್ರೆಗೆ ಬಂದಿಲ್ಲ. ಹೆಸರಿಗೆ ಮಾತ್ರ ಆಸ್ಪತ್ರೆ ವೈದ್ಯರು ಎನ್ನುಂತೆ ಆಗಿದೆ. ಇಲ್ಲಿವರೆಗೂ ಆಸ್ಪತ್ರೆಗೆ ಬಂದೆ ಇಲ್ಲ. ವೈದ್ಯರ ಹಾಜರಾತಿ ಕೂಡ ಸಂಪೂರ್ಣ ಖಾಲಿ ಇದ್ದು, ಸಂಬಳ ಮಾತ್ರ ತೆಗೆದುಕೊಳ್ಳುತ್ತಿದ್ದಾರೆ. ಈ ಮಾಹಿತಿ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಸತೀಶ್ ತಿವಾರಿಗೆ ಗೊತ್ತಿದ್ದರು ಸಹ ಕಂಡು ಕಾಣದಂತೆ ಮೂಖರಂತೆ ವರ್ತಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ.

     

    ಗುತ್ತಿಗೆ ಆಧಾರದ ನೌಕರರು ಹಾಗೂ ಖಾಯಂ ಸರ್ಕಾರಿ ನೌಕರರು ಮಧ್ಯಾಹ್ನ 2 ಗಂಟೆ ಆದರೆ ಸಾಕು ಯಾವೊಬ್ಬ ಸಿಬ್ಬಂದಿಗಳು ಈ ಆಸ್ಪತ್ರೆಯಲ್ಲಿ ಇರಲ್ಲ. ಒಟ್ಟು 7 ಜನ ಸಿಬ್ಬಂದಿಗಳಲ್ಲಿ ದಿನಂಪ್ರತಿ ಮೂವರು ಬರುವುದೇ ಅಪರೂಪ. ಯಾವುದೇ ರೋಗಿಗಳು ಮಧ್ಯಾಹ್ನದ ಮೇಲೆ ಬಂದ್ರೆ ಅವರ ಪಾಡು ಹೇಳತೀರದು.

    ಸದ್ಯ ನಿಯೋಜನೆಗೊಂಡ ವೈದ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿ ಗ್ರಾಮದಲ್ಲಿ ಕರ್ತವ್ಯಕ್ಕೆ ಬರುತ್ತಿಲ್ಲ. ಸಿಬ್ಬಂದಿಗಳು ಸಹ ಮೂರು ದಿನಕ್ಕೊಮ್ಮೆ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಹಾಕುತ್ತಾರೆ. ಸರ್ಕಾರ 24X7 ಸೇವೆ ಸಲ್ಲಿಸಬೇಕು ಎಂದು ಆದೇಶಿಸಿದ್ದರೂ ಅದನ್ನು ಯಾವೊಬ್ಬ ನೌಕರನು ಪಾಲಿಸುತ್ತಿಲ್ಲ. ವೈದ್ಯರ ಚಿಕಿತ್ಸೆಯ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗದ ಬಡ ಒಳ ಹಾಗೂ ಹೋರ ರೋಗಿಗಳು ಪರದಾಡುವಂತಾಗಿದೆ. ಇದರಿಂದ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಈ ಭಾಗದ ಜನರು ಮುಖ ಮಾಡುವಂತಾಗಿದೆ.

     

    ಒಟ್ಟಿನಲ್ಲಿ ಇಲ್ಲಿನ ಆಸ್ಪತ್ರೆಯ ವೈದ್ಯ ಹಾಗೂ ಸಿಬ್ಬಂದಿಗಳ ಸೇವೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂಥಾಗಿದ್ದು, ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಆಸ್ಪತ್ರೆ ವೈದ್ಯ ಹಾಗೂ ಸಿಬ್ಬಂದಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಟ್ರೀಟ್ಮೆಂಟ್ ಕೊಡಿಸಿ, ಸಾರ್ವಜನಿಕರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವಂತೆ ಮಾಡುತ್ತಾರಾ ಎಂಬುದು ಕಾದುನೋಡಬೇಕಿದೆ.

     

    ವೈದ್ಯರು ಒಂದು ತಿಂಗಳಿನಿಂದ ಬಂದೇ ಇಲ್ಲ. ಡಾಕ್ಟರ್ ಸಿಗದೇ ನರ್ಸ್ ಒಬ್ಬರೇ ಇಲ್ಲಿ ಡಾಕ್ಟರ್ ರೀತಿ ಚಿಕಿತ್ಸೆ ನೀಡುತ್ತಾರೆ. ಒಂದು ವೇಳೆ ಹೆಚ್ಚು ಕಡಿಮೆಯಾದ್ರೆ ಯಾರು ಹೊಣೆ, ನರ್ಸ್ ಸಹ ಮಧ್ಯಾಹ್ನ 2 ಗಂಟೆಗೆ ನ ನಮ್ಮ ಮುಂದೆಯೇ ಮನೆಗೆ ಹೋಗುತ್ತಾರೆ. ಮಧ್ಯಾಹ್ನದ ಮೇಲೆ ಯಾವೊಬ್ಬ ಸಿಬ್ಬಂದಿಗಳು ಈ ಆಸ್ಪತ್ರೆಯಲ್ಲಿ ಇರೋದಿಲ್ಲ.

    ಗರಸಂಗಿ ಗ್ರಾಮಸ್ಥರು

  • ಲಾಕ್ ಗೇಟ್ ಅಳವಡಿಸಿದ ಕಾರ್ಮಿಕರಿಗೆ ಸನ್ಮಾನಿಸಿ ಸಿಹಿ ತಿನ್ನಿಸಿ ಸಂಸದ ಜಿ.ಕುಮಾರ ನಾಯಕ

    ಲಾಕ್ ಗೇಟ್ ಅಳವಡಿಸಿದ ಕಾರ್ಮಿಕರಿಗೆ ಸನ್ಮಾನಿಸಿ ಸಿಹಿ ತಿನ್ನಿಸಿ ಸಂಸದ ಜಿ.ಕುಮಾರ ನಾಯಕ

    ಟಿಬಿ ಡ್ಯಾಮ್ ನ ಸ್ಟಾಪ್ ಲಾಕ್ ಗೇಟ್ ಅಳವಡಿಸಿದ ಕಾರ್ಮಿಕರಿಗೆ ಸನ್ಮಾನಿಸಿ ಸಿಹಿ ತಿನ್ನಿಸಿ ಸಂಸದ ಜಿ ಕುಮಾರ ನಾಯಕ.

    ಕರ್ನಾಟಕದ ನಾಲ್ಕು ಜಿಲ್ಲೆಗಳು ಸೇರಿದಂತೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ರೈತರ ಜೀವನಾಡಿಯಾದ ತುಂಗಭದ್ರಾ ಜಲಾಶಯದಿಂದ ನದಿಗೆ ಹರಿದು ಹೋಗುತ್ತಿದ್ದ 40 ಟಿಎಂಸಿ ನೀರು ತಡೆಯುವ ಸ್ಟಾಪ್ ಲಾಕ್ ಗೇಟ್ ಅಳವಡಿಕೆಯಲ್ಲಿ ಯಶಸ್ವಿಯಾದ ಎಲ್ಲಾ ಕಾರ್ಮಿಕರು ಮತ್ತು ಅಧಿಕಾರಿಗಳಿಗೆ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾದ ಜಿ.ಕುಮಾರ್ ನಾಯಕ ಅವರು ಅಭಿನಂದನೆ ಸಲ್ಲಿಸಿದರು.

    ಅವರಿಂದು ತುಂಗಭದ್ರಾ ಜಲಾಶಯದ ಪ್ರದೇಶಕ್ಕೆ ಭೇಟಿ ನೀಡಿ,ನದಿಗೆ ಹರಿದು ಹೋಗುತ್ತಿರುವ ನೀರು ತಡೆಯುವ ಗೇಟ್ ಅಳವಡಿಕೆಯಲ್ಲಿ ಯಶಸ್ವಿಯಾದ ಕಾರ್ಮಿಕರು,ಅಧಿಕಾರಿಗ ಅಭಿನಂದಿಸಿ ಮಾತನಾಡಿದರು.

    ಭೋರ್ಗರೆದು ಪ್ರವಾಹದ ನೀರಿನೊಂದಿಗೆ ಸೆಣಸಾಡಿ ಜಲಾಶಯದ ಕುಸಿದ 19ನೇ ಗೇಟ್ ಸ್ಥಳದಲ್ಲಿ ಸ್ಟಾಪ್ ಲಾಕ್ ಗೇಟ್ ಅಳವಡಿಸುವ ಮೂಲಕ ತುಂಗಭದ್ರಾ ಜಲಾಶಯದಿಂದ ನದಿಗೆ ಹರಿದು ಹೋಗುತ್ತಿರುವ ಸುಮಾರು 40 ಟಿಎಂಸಿ ನೀರು ಉಳಿಸುವಲ್ಲಿ ಅಧಿಕಾರಿಗಳು ಮತ್ತು ವಿವಿಧ ಕಂಪನಿಯ ಕಾರ್ಮಿಕರ ಸಾಧನೆ ಶ್ಲಾಘನೀಯವಾಗಿದೆ.

    ನಾನು ಒಬ್ಬ ಸಿವಿಲ್ ಇಂಜಿನಿಯರ್ ಆಗಿದ್ದರಿಂದ, ಈ ಕಾರ್ಯ ಎಂತಹ ಕಷ್ಟಕರ ಎನ್ನುವ ಮನವರಿಕೆ ಇದೆ. ಕೇವಲ ಆರು ದಿನಗಳಲ್ಲಿ ನದಿಗೆ ಹರಿದು ಹೋಗುತ್ತಿರುವ ಬಹುಪಾಲು ನೀರು ತಡೆಯುವಲ್ಲಿ ಯಶಸ್ವಿಯಾದ ಜಲಾಶಯದ ಕಾರ್ಮಿಕರು, ಅಧಿಕಾರಿಗಳು ಮತ್ತು ವಿವಿಧ ಕಂಪನಿಯ ತಜ್ಞರು ಪ್ರಶಂಸಾರ್ಹರಾಗಿದ್ದಾರೆ.

    ಜಲಾಶಯದ 19ನೇ ಗೇಟ್ ಕುಸಿತದಿಂದ ಭಾರಿ ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿರುವ ಘಟನೆಯಿಂದ ರೈತರು ತೀವ್ರ ಆತಂಕಕ್ಕೆ ಗುರಿಯಾಗಿದ್ದರು. ಗೇಟ್ ಅಳವಡಿಕೆ ಹೇಗೆ ಎನ್ನುವ ಸವಾಲನ್ನು ಜಲಾಶಯದ ಸಿಬ್ಬಂದಿ ವರ್ಗ ಹಾಗೂ ಕಾರ್ಮಿಕರು ನಿವಾರಿಸುವ ಮೂಲಕ ಇಂದು ರೈತರ ಆತಂಕ ದೂರ ಮಾಡಿದ್ದಾರೆ. ಇವರ ಕಾರ್ಯ ಸಾಧನೆಗೆ ಸರ್ಕಾರದಿಂದ ಸೂಕ್ತ ಬಹುಮಾನ ನೀಡುವಂತೆ ನಾನು ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದರು.

    ಅದೃಷ್ಟವಶಾತ್ ಮೇಲ್ಭಾಗದಲ್ಲಿ ಇನ್ನೂ ಮಳೆ ಪ್ರಮಾಣ ಉತ್ತಮವಾಗಿದೆ. ಸ್ಟಾಪ್ ಲಾಂಗ್ ಗೇಟ್ ಅಳವಡಿಕೆಯ ನಂತರ ಆರು ಟಿಎಂಸಿ ನೀರು ಜಲಾಶಯಕ್ಕೆ ಸಂಗ್ರಹವಾಗಿದೆ. ಎಲ್ಲ ಶ್ರೇಯಸ್ಸು ಇಲ್ಲಿಯ ಕಾರ್ಮಿಕರು ಮತ್ತು ಅಧಿಕಾರಿಗಳಿಗೆ ಸಲ್ಲುತ್ತದೆ ಎಂದರು.

  • ಸಿ.ಎಂ ಕನಸಿನ ಯೋಜನೆಗೆ ಯಾದಗಿರಿಯಲ್ಲಿ ಎಳ್ಳು ನೀರು ಬಿಟ್ರಾ ಅಧಿಕಾರಿಗಳು..

    ಸಿ.ಎಂ ಕನಸಿನ ಯೋಜನೆಗೆ ಯಾದಗಿರಿಯಲ್ಲಿ ಎಳ್ಳು ನೀರು ಬಿಟ್ರಾ ಅಧಿಕಾರಿಗಳು..

    ನಿಗಮದ ಕಚೇರಿಯಲ್ಲಿ ನಾಪತ್ತೆಯಾದ ಅನಿಲಭಾಗ್ಯ ಅಡುಗೆ ಒಲೆಗಳು

    ವರದಿ: ಕುದಾನ್ ಸಾಬ್
    ಸತ್ಯಕಾಮ ವಾರ್ತೆ ಯಾದಗಿರಿ:
    ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯನವರ ಕನಸಿನ‌ ಮಹತ್ವಾಕ್ಷಾಂಕ್ಷಿ ಯೋಜನೆಯಾದ ಅನಿಲ ಭಾಗ್ಯ ಯೋಜನೆಗೆ ಯಾದಗಿರಿಯ ಆಹಾರ ಇಲಾಖೆ ಅಧಿಕಾರಿಗಳು ಎಳ್ಳುನೀರು ಬಿಟ್ಟಿದ್ದೂ,ಜಿಲ್ಲೆಯ ಕರ್ನಾಟಕ ಆಹಾರ ಸರಬರಾಜು ನಿಗಮ ನಿಯಮಿತ ಕಛೇರಿಯಲ್ಲಿ ಅನಿಲ ಭಾಗ್ಯ ಯೊಜನೆಯ ಅರ್ಹ ಪಲಾನುಭವಿಗಳಿಗೆ ತಲುಪಬೇಕಾದ ಅಡುಗೆ ಒಲೆಗಳು ಮೂಲೆ ಗುಂಪಾಗಿವೆ.

    ಅಡುಗೆ ಅನಿಲ ಸಂಪರ್ಕರಹಿತ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡಲು 2017-18ರ ಬಜೆಟ್ನಲ್ಲಿ ಅಂದಿನ ಸರ್ಕಾರ “ಮುಖ್ಯಮಂತ್ರಿ ಅನಿಲಭಾಗ್ಯ ಯೋಜನ ನಿಗಧಿಪಡಿಸಲಾಗಿತ್ತು…

    ಅದರಂತೆ ಯಾದಗಿರಿ ಜಿಲ್ಲೆಗೆ 4902 ಬಿಪಿಎಲ್ ಕಾರ್ಡ್ದಾರರಿಗೆ ಅನಿಲಭಾಗ್ಯ ಯೋಜನೆ ಗುರಿಪಡಿಸಿತ್ತು, ಆದೇಶದಂತೆ ಜಿಲ್ಲೆಗೆ ಸರ್ಕಾರದಿಂದ 4390 ಸ್ಟೌವ್ಗಳು ಮಾತ್ರ ಬಂದಿತ್ತು. ಇದರಲ್ಲಿ 4092 ಗ್ಯಾಸ್ ಸ್ಟೋವ್ ಗಳನ್ನು ವಿತರಣೆ ಮಾಡಲಾಗಿದೆ.

    ಈ ವೇಳೆ ಉಳಿಯಬೇಕಾದ 298 ಸ್ಟೌವ್ಗಳ ಪೈಕಿ 166 ಸ್ಟೌವ್ಗಳ ಕಚೇರಿಯಲ್ಲಿದ್ದೂ 132 ಗ್ಯಾಸ್ ಸ್ಟೋವ್ ಗಳು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಗೋದಾಮಿನಿಂದ ನಾಪತ್ತೆಯಾಗಿವೆ..

    ನಾಪತ್ತೆಯಾಗಿರುವ 132 ಅಡುಗೆ ಅನಿಲ ಒಲೆಗಳ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಆಹಾರ ಇಲಾಖೆ ಅಧಿಕಾರಿಗಳು KFCSC ಮೇಲೆ, KFCSCಯವರು ಆಹಾರ ಇಲಾಖೆಯವರು ಮೇಲೆ ಒಬ್ಬರನ್ನೊಬ್ಬರು ದೂರುತ್ತಿದ್ದಾರೆ ಹೊರತು ನಾಪತ್ತೆಯಾದ ಸ್ಟೌವ್ ಗಳು ಎಲ್ಲಿ ಹೋಗಿವೆ ಎಂಬುದನ್ನಾ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ.

    ಅದರಲ್ಲೂ ಪ್ರಮುಖವಾಗಿ ಕಚೇರಿಯಲ್ಲಿ ಇರಬೇಕಿದ್ದ 298 ಸ್ಟೋವ್ ಗಳ ಪೈಕಿ ಉಳಿದ 166 ಸ್ಟೋವ್ ಗಳನ್ನೂ ಫಲಾನುಭವಿಗಳಿಗೆ ಕೊಡದೇ ಫಲಾನುಭವಿಗಳಿಗೆ ಹಂಚಲು ಇನ್ನೂ 512 ಅನಿಲ ಗ್ಯಾಸ್ ಗಳು ಬೇಕು ಎಂದು ಜಿಲ್ಲಾ ಆಹಾರ ಇಲಾಖೆ ಬೇಡಿಕೆ ಇಟ್ಟಿತ್ತು.

    ಸದ್ಯ ಗೋದಾಮುನಿಲ್ಲಿರುವ 167 ಗ್ಯಾಸ್ ಸ್ಟೋವ್ ಗಳು ನಿತ್ರಾಣ ಸ್ಥಿತಿಯಲ್ಲಿದ್ದು, ಆಹಾರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು, ಈ ಹಿಂದೆ ಅನಿಲ ಭಾಗ್ಯ ಯೋಜನೆಯ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡುತ್ತದೇಯಾ ಅಥವಾ ತಮ್ಮ ಮೊಂಡತನದಿಂದ ಗೋದಾಮಿನಲ್ಲಿ ತುಕ್ಕು ಹಿಡಿಯಲು ಬಿಟ್ಟು ಸರ್ಕಾರದ ಹಣವನ್ನು ಪೋಲು ಮಾಡಲು ಬಿಡುತ್ತಾರಾ ಎಂಬುದು ಕಾದು ನೋಡಬೇಕಿದೆ.

    ಆಹಾರ ಇಲಾಖೆ ಅಧಿಕಾರಿಗಳಿಗೆ ಚಾಟಿ ಬೀಸುವರಾ ಜಿಲ್ಲಾಧಿಕಾರಿ.?

    ಇತ್ತೀಚಿಗೆ ಜಿಲ್ಲೆಯ ಆಹಾರ ಇಲಾಖೆಯ ಮೇಲೆ ಹಲವು ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ಅದರಲ್ಲಿ ಈ ಅನಿಲ ಭಾಗ್ಯ ಕೂಡ ಒಂದು ಆಗಿದ್ದು, ಫಲಾನುಭವಿಗಳಿಗೆ ತಲುಪಬೇಕಾದ ಗ್ಯಾಸ್ ಸ್ಟೋವ್ ಗಳು ಗೋದಾಮಿನಲ್ಲಿ ಹಾಗೂ ಅಧಿಕಾರಿಗಳ ಪಾಲಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಆಹಾರ ನಿಗಮ ನಿಯಮಿತ ಕಛೇರಿಯಲ್ಲಿ ಆಡುಗೆ ಅನಿಲ ಭಾಗ್ಯ ಒಲೆಗಳು ಉಳಿಯಲು ಕಾರಣರಾದ ಭ್ರಷ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಚಾಟಿ ಬೀಸುವರಾ ಎಂಬುದನ್ನ ಕಾದು ನೋಡಬೇಕಿದೆ.

    ===========================

    ಇಲಾಖೆ ಬಳಿಯಿಲ್ಲ ಅರ್ಜಿಗಳ ಮಾಹಿತಿ

    ಅನಿಲ ಭಾಗ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆಹಾರ ಇಲಾಖೆಗೆ ಎಷ್ಟು ಅರ್ಜಿಗಳು ಬಂದಿವೆ ಹಾಗೂ ವಿತರಿಸಲಾಗಿರುವ ಫಲಾನುಭವಿಗಳ ಮಾಹಿತಿ ಸೇರಿದಂತೆ ಅನಿಲ ಭಾಗ್ಯದ ದಾಖಲಾತಿಗಳು ಇಲಾಖೆ ಬಳಿಯಿಲ್ಲ.

    ==================================

    ನಾಪತ್ತೆಯಾದ ಸ್ಟೋವ್ ಗಳಲ್ಲಿ ನಿವೃತ್ತಿಗೊಂಡ ಗೋದಾಮು ವ್ಯವಸ್ಥಾಪಕನ ಕೈವಾಡ.?

    ಈ ಹಿಂದೆ ನಿಗಮದಲ್ಲಿ ಗೊದಮು ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಬಸವಂತ ರೆಡ್ಡಿಯವರು ಅನಿಲ ಭಾಗ್ಯ ಯೋಜನೆಯ ಒಲೆಗಳನ್ನು ವಿತರಿಸುವಲ್ಲಿ ಗೋಲ್ ಮಾಲ್ ಮಾಡಿರುವ ಪ್ರಕರಣ ಒಂದು ಬೆಳಕಿಗೆ ಬಂದಿದ್ದು, ಬಸವಂತ ರೆಡ್ಡಿಯವರು 42 ಅನಿಲ ಭಾಗ್ಯ ಯೋಜನೆಯ ಒಲೆಗಳನ್ನು ನಾಯ್ಕಲ್ ಗ್ರಾಮದಲ್ಲಿರುವ ಭಾರತ್ ಗ್ಯಾಸ್ ಏಜೆನ್ಸಿಗೆ ನೀಡಿರುವುದರ ಸ್ವೀಕೃತಿ ಪತ್ರ ಪತ್ರಿಕೆಗೆ ಲಭ್ಯವಾಗಿದ್ದು, ಪತ್ರಿಕೆ ಅದನ್ನು ಸೂಕ್ಷ್ಮವಾಗಿ ಪರಿಗಣಿಸಿ  ಬಸವಂತ ರೆಡ್ಡಿಯವರು ಸ್ವೀಕೃತಿ ಪತ್ರದಲ್ಲಿ ಸಹಿ ತೆಗೆದುಕೊಂಡಿರುವವರ ಏಜೆನ್ಸಿಯನ್ನು ಸಂಪರ್ಕಿಸಿದಾಗ ಸ್ವೀಕೃತಿ ಪತ್ರದಲ್ಲಿ ಸಹಿ ಮಾಡಿರುವವರು 2018 ರಲ್ಲಿ  ಭಾರತ್ ಗ್ಯಾಸ್ ನಿಂದ ಕೆಲಸ ಬಿಟ್ಟಿದ್ದಾರೆಂದು ಖುದ್ದಾಗಿ ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕ ಸತ್ಯಕಾಮ ಪತ್ರಿಕೆಗೆ ತಿಳಿಸಿದ್ದಾರೆ. ಹಾಗಾದರೇ ನಿವೃತ್ತಿಗೊಂಡ ಗೋದಾಮು ವ್ಯವಸ್ಥಾಪಕ ಬಸವಂತ ರೆಡ್ಡಿಯವರು ಆತನ ಸಹಿಯನ್ನೇ ನಕಲಿ ಮಾಡಿದ್ರಾ ಅನುಮಾನವಿಗ ವ್ಯಕ್ತವಾಗುತ್ತಿದ್ದೂ,  ಈ ಅನಿಲಭಾಗ್ಯದಲ್ಲಿನ ಸೂಕ್ತ ಮಾಹಿತಿ ದೊರೆಯಾಗಬೇಕಾದರೇ ನಿವೃತ್ತಿಗೊಂಡ ಗೋದಾಮು ವ್ಯವಸ್ಥಾಪಕನ ವಿರುದ್ಧ ಸೂಕ್ತ ತನಿಖೆ ನಡೆಸಿಬೇಕಾಗಿದೆ.

  • ಮಹಾಪೌರರಾದ ಯಲ್ಲಪ್ಪ ಎಸ್ ನಾಯ್ಕೋಡಿ ರವರಿಗೆ ಉದಯ ನಗರ ನಾಗರಿಕರಿಂದ  ಸನ್ಮಾನ ಕಾರ್ಯಕ್ರಮ

    ಮಹಾಪೌರರಾದ ಯಲ್ಲಪ್ಪ ಎಸ್ ನಾಯ್ಕೋಡಿ ರವರಿಗೆ ಉದಯ ನಗರ ನಾಗರಿಕರಿಂದ ಸನ್ಮಾನ ಕಾರ್ಯಕ್ರಮ

    ಕಲಬುರಗಿ: ಪೌರರಾದ ಯಲ್ಲಪ್ಪ ಎಸ್ ನಾಯ್ಕೋಡಿ ರವರಿಗೆ ಉದಯ ನಗರ ನಾಗರಿಕರಿಂದ ಅದ್ದೂರಿ ಹೃದಯಸ್ವರ್ಶ ಸನ್ಮಾನ ಕಾರ್ಯಕ್ರಮ,

    ಕಾರ್ಯಕ್ರಮದ ಅತಿಥಿಗಳಾಗಿ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ ಕೂಡ ಭಾಗಿಯಾಗಲಿದ್ದಾರೆ.

    ಕಲಬುರಗಿ ನಗರದ ೫೩ನೇ ವಾರ್ಡನಿಂದ ಮಹಾನಗರ ಪಾಲಿಕೆಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಯಲ್ಲಪ್ಪ. ಎಸ್. ನಾಯ್ಕೋಡಿ ಇವರು, ನೂತನವಾಗಿ ಕಲಬುರಗಿ ಮಹಾನಗರ ಪಾಲಿಕೆಗೆ ಮಹಾ ಪೌರರಾಗಿ ನೇಮಕಗೊಂಡ ಪ್ರಯುಕ್ತ ದಿನಾಂಕ: ೭-೦೮-೨೦೨೪ ರಂದು ಮುಂಜಾನೆ ೧೦.೩೦ ಗಂಟೆಗೆ ಉದಯ ನಗರ ಬಡಾವಣೆಯ ನಾಗರಿಕರಿಂದ ಮಹಾ ಪೌರರಿಗೆ ಅದ್ದೂರಿಯಾಗಿ ಹೃದಯಸ್ವರ್ಶ ಸನ್ಮಾನ ಹಮ್ಮಿಕೊಳ್ಳಲಾಗಿದೆ, ಸದರಿ ಕಾರ್ಯಕ್ರಮಕ್ಕೆ ಕಲಬುರಗಿ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ ರವರು ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಹಾಗೂ ಕಾರ್ಯಕ್ರಮದ ಅಧ್ಯಕ್ಷಸ್ಥಾನವನ್ನು ಉದಯ ನಗರ ಬಡಾವಣೆಯ ಸಂಘದ ಅಧ್ಯಕ್ಷರಾದ  ಮೋನಪ್ಪ ಬಡಿಗೇರ ವಹಿಸಲಿದ್ದಾರೆ ಪ್ರಯುಕ್ತ ಸದರಿ ಕರ್ಯಾಕ್ರಮಕ್ಕೆ ಬಡಾವಣೆಯ ಜನತೆಯು  ಮಹಾಪೌರರ ಅಭೀಮಾನಿಗಳು ಹೆಚ್ಚನ ಸಂಖೈಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕಾರ್ಯದರ್ಶಿಗಳಾದ  ದೇವೆಂದ್ರಪ್ಪ ತೋಟ್ನಳ್ಳಿ ಮತ್ತು ಗುರುರಾಜ ಕುಲಕರ್ಣಿ ಪತ್ರಿಕಾ ಪ್ರಕಟಣೆ ಮೂಲಕ ತೀಳಿಸಿರುತಾರೆ.

  • ಲೋಕಾಯುಕ್ತರ ಬಲೆಗೆ:  ಅಗ್ನಿಶಾಮಕ ಅಧಿಕಾರಿ ಗುರುರಾಜ್ ಹಾಗೂ ಸಿಬ್ಬಂದಿ ಸೋಪನ್ ರಾವ್

    ಲೋಕಾಯುಕ್ತರ ಬಲೆಗೆ: ಅಗ್ನಿಶಾಮಕ ಅಧಿಕಾರಿ ಗುರುರಾಜ್ ಹಾಗೂ ಸಿಬ್ಬಂದಿ ಸೋಪನ್ ರಾವ್


    *ಸತ್ಯಕಾಮ ವಾರ್ತೆ ಕಲಬುರಗಿ:*
    ಪೆಟ್ರೋಲ್ ಬಂಕ್ ನಿರಾಕ್ಷೇಪಣಾ ಪತ್ರ (ಎನ್‌ಒಸಿ)ವನ್ನು ನೀಡಲು 20 ಸಾವಿರ ಹಣ ಪಡೆಯುತ್ತಿದ್ದಾಗ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ್ ಹಾಗೂ ಸಿಬ್ಬಂದಿ ಸೋಪನ್ ರಾವ್ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

    ಚಿತ್ತಾಪೂರದ ರಾಜರಾಮಪ್ಪ ನಾಯಕ್ ಅವರು ತಮ್ಮ ಪೆಟ್ರೋಲ್ ಬಂಕ್ ಎನ್‌ಒಸಿ ಕೋರಿ ಅಗ್ನಿಶಾಮಕ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಎನ್ಒಸಿ ನೀಡುವುದಕ್ಕೆ ಕಲಬುರ್ಗಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ್ ಹಾಗೂ ಸಿಬ್ಬಂದಿ ಸೋಪನ್ ರಾವ್ ಒಂದು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಇಬ್ಬರು ಫಲಾನುಭವಿಯಿಂದ ಮುಂಗಡವಾಗಿ 20 ಸಾವಿರ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

    ಲೋಕಾಯುಕ್ತ ಎಸ್‌.ಪಿ.ಜಾನ್ ಆಂಟೋನಿ ನೇತೃತ್ವದಲ್ಲಿ ಡಿ.ಎಸ್‌.ಪಿ . ಮಂಜುನಾಥ್. ಇನ್‌ಸ್ಪೆಕ್ಟರ್‌ ದ್ರುವತಾರ, ಸಿಬ್ಬಂದಿ ಮಲ್ಲಿನಾಥ್. ಮಸೂದ್. .ದಾಳಿ ನಡೆಸಿದ್ದರು.