Category: Sports

  • ಸೂರ್ಯಕುಮಾರ್ ವಿವಾದ: ಖುಷಿ ಮುಖರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ

    ಸೂರ್ಯಕುಮಾರ್ ವಿವಾದ: ಖುಷಿ ಮುಖರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ

     


    ಭಾರತದ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹೆಸರು ಒಳಗೊಂಡ ಹೇಳಿಕೆಗಳ ಕಾರಣದಿಂದ ನಟಿ ಖುಷಿ ಮುಖರ್ಜಿ ಇತ್ತೀಚೆಗೆ ಭಾರೀ ವಿವಾದಕ್ಕೆ ಸಿಲುಕಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ, ಸೂರ್ಯಕುಮಾರ್ ಯಾದವ್ ಹಿಂದೆ ತಮಗೆ ಮೆಸೇಜ್ ಮಾಡುತ್ತಿದ್ದರು ಎಂದು ಹೇಳಿದ ನಟಿಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದ್ದು, ವಿಷಯ ಕಾನೂನು ಹಂತಕ್ಕೂ ತಲುಪಿದೆ.

     

    ಈ ಹೇಳಿಕೆಗಳು ಕ್ರಿಕೆಟಿಗನ ಗೌರವಕ್ಕೆ ಧಕ್ಕೆ ತರುವಂತಿವೆ ಎಂದು ಆರೋಪಿಸಿ, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಫೈಜಾನ್ ಅನ್ಸಾರಿ ಅವರು ಖುಷಿ ಮುಖರ್ಜಿ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಜ.13ರಂದು ಈ ಕುರಿತು ದೂರು ಸಲ್ಲಿಸಿರುವ ಅನ್ಸಾರಿ, ಸೂರ್ಯಕುಮಾರ್ ಯಾದವ್ ಅವರಂತಹ ಅಂತರಾಷ್ಟ್ರೀಯ ಮಟ್ಟದ ಆಟಗಾರರ ಬಗ್ಗೆ ಆಧಾರರಹಿತ ಹೇಳಿಕೆಗಳನ್ನು ನೀಡುವುದು ಅಸಹ್ಯಕರ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

     

    ಮಾಧ್ಯಮಗಳ ಮುಂದೆ ಮಾತನಾಡಿದ ಅನ್ಸಾರಿ, ಖುಷಿ ಮುಖರ್ಜಿ ನೀಡಿದ ಹೇಳಿಕೆಗಳು ಕೇವಲ ಪ್ರಚಾರಕ್ಕಾಗಿ ಮಾಡಿರುವ ಸುಳ್ಳು ಆರೋಪಗಳೆಂದು ಹೇಳಿದ್ದಾರೆ. ಇದರಿಂದ ಕ್ರಿಕೆಟಿಗರ ವ್ಯಕ್ತಿತ್ವಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಎಫ್‌ಐಆರ್ ದಾಖಲಿಸಬೇಕು ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಅವರ ಒತ್ತಾಯ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅನುಯಾಯಿಗಳು ಇರುವುದನ್ನು ಉಲ್ಲೇಖಿಸಿದ ಅವರು, ಈ ವಿಷಯವನ್ನು ಜನರ ಮುಂದೆ ತರುವ ಜವಾಬ್ದಾರಿ ನನ್ನದೆಂದು ಹೇಳಿದ್ದಾರೆ.

     

    ಈ ವಿವಾದದ ಮೂಲ ಕ್ರಿಕೆಟಿಗರನ್ನು ಡೇಟ್ ಮಾಡುವ ಕುರಿತು ಕೇಳಲಾದ ಪ್ರಶ್ನೆಗೆ ಖುಷಿ ಮುಖರ್ಜಿ ನೀಡಿದ ಉತ್ತರ. ಯಾವುದೇ ಕ್ರಿಕೆಟಿಗರನ್ನು ಡೇಟ್ ಮಾಡುವ ಆಸಕ್ತಿ ಇಲ್ಲ ಎಂದು ಹೇಳಿದ್ದ ಅವರು, ಕೆಲವರು ಹಿಂದೆ ತಮ್ಮತ್ತ ಆಸಕ್ತಿ ತೋರಿಸಿದ್ದರು ಎಂದಿದ್ದರು. ಅದರಲ್ಲೂ ಸೂರ್ಯಕುಮಾರ್ ಯಾದವ್ ಹಿಂದೆ ಮೆಸೇಜ್ ಮಾಡುತ್ತಿದ್ದರು ಎಂದು ಹೇಳಿದ್ದ ಮಾತುಗಳು ಹೆಚ್ಚು ಚರ್ಚೆಗೆ ಗ್ರಾಸವಾದವು. ಬಳಿಕ “ಈಗ ಅವರು ಸಂಪರ್ಕದಲ್ಲಿಲ್ಲ, ತಮ್ಮ ಹೆಸರನ್ನು ಅವರೊಂದಿಗೆ ಜೋಡಿಸಬಾರದು” ಎಂದು ಕೂಡ ಹೇಳಿದ್ದರು. ಈ ಹೇಳಿಕೆಗಳು ವೈರಲ್ ಆಗುತ್ತಿದ್ದಂತೆ ಟೀಕೆ, ಆಕ್ರೋಶ ಎರಡೂ ಹೆಚ್ಚಿದವು.

     

    ವಿವಾದ ತೀವ್ರವಾದ ನಂತರ, ಖುಷಿ ಮುಖರ್ಜಿ ತಮ್ಮ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಎನ್‌ಡಿಟಿವಿ ಜೊತೆ ಮಾತನಾಡಿದ ಅವರು, ಸೂರ್ಯಕುಮಾರ್ ಯಾದವ್ ಅವರೊಂದಿಗೆ ಯಾವುದೇ ಪ್ರಣಯ ಸಂಬಂಧ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ, ಕೆಲವು ಅಂಶಗಳನ್ನು ಅತಿಶಯವಾಗಿ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು. ಅಲ್ಲದೆ, ತಮ್ಮ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದ್ದುದರಿಂದ ಗೊಂದಲ ಉಂಟಾಗಿದೆ ಎಂದು ಕೂಡ ತಿಳಿಸಿದ್ದಾರೆ.

     

    ಹಿಂದೆ ಸೂರ್ಯಕುಮಾರ್ ಯಾದವ್ ಜೊತೆ ಸ್ನೇಹಿತರಾಗಿ ಮಾತ್ರ ಮಾತನಾಡಿದ್ದೆ ಎಂದು ಹೇಳಿದ ಖುಷಿ ಮುಖರ್ಜಿ, ಈಗ ಅವರೊಂದಿಗೆ ಯಾವುದೇ ಸಂಪರ್ಕ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿವಾದದ ನಡುವೆಯೇ ಟೀಮ್ ಇಂಡಿಯಾ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಮುಂಬರುವ ವಿಶ್ವಕಪ್‌ಗೆ ಶುಭಾಶಯ ಕೋರಿರುವ ಅವರು, ಹಿಂದೆ ನಡೆದ ಮಾತುಕತೆಗಳು ಸಂಪೂರ್ಣವಾಗಿ ಸ್ನೇಹಪೂರ್ವಕವಾಗಿದ್ದವು ಎಂದು ಹೇಳಿದ್ದಾರೆ.

     

    ಒಟ್ಟಿನಲ್ಲಿ, ಒಂದು ಹೇಳಿಕೆಯಿಂದ ಆರಂಭವಾದ ವಿಷಯ ಇದೀಗ ಭಾರೀ ಕಾನೂನು ಮತ್ತು ಸಾಮಾಜಿಕ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

  • 2026ರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ:  ಗಿಲ್ ತಂಡದಿಂದ ಹೊರಗೆ!

    2026ರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ: ಗಿಲ್ ತಂಡದಿಂದ ಹೊರಗೆ!

    2026ರ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ನಡೆಯಲಿರುವ ಪುರುಷರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ತಂಡ ಪ್ರಕಟವಾಗಿದ್ದು, ಈ ಸುದ್ದಿ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮುಂಬೈನಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಡಿಸೆಂಬರ್ 20ರಂದು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ತಂಡವನ್ನು ಅಂತಿಮಗೊಳಿಸಲಾಗಿದ್ದು, ಸೂರ್ಯಕುಮಾರ್ ಯಾದವ್ ಅವರಿಗೆ ನಾಯಕತ್ವದ ಹೊಣೆ ನೀಡಲಾಗಿದೆ. ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಹೆಸರಾಗಿರುವ ಸೂರ್ಯಕುಮಾರ್ ಅವರ ನೇತೃತ್ವದಲ್ಲಿ ಭಾರತ ಈ ಬಾರಿ ಟ್ರೋಫಿಗೆ ಗಂಭೀರ ಸವಾಲು ಹಾಕಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

    ಈ ತಂಡದಲ್ಲಿ ಯುವಕರು ಮತ್ತು ಅನುಭವಿ ಆಟಗಾರರ ಸಮತೋಲನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆರಂಭಿಕ ವಿಭಾಗದಲ್ಲಿ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಇದ್ದರೆ, ಮಧ್ಯಮ ಕ್ರಮದಲ್ಲಿ ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಮತ್ತು ರಿಂಕು ಸಿಂಗ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಆಲ್‌ರೌಂಡರ್ ಅಕ್ಸರ್ ಪಟೇಲ್ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಿರುವುದು ಗಮನಸೆಳೆದ ನಿರ್ಧಾರವಾಗಿದೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ವೇಗದ ದಾಳಿಗೆ ಮುನ್ನಡೆಸಲಿದ್ದು, ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಸ್ಪಿನ್ ಆಯ್ಕೆಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹರ್ಷಿತ್ ರಾಣಾ ಮತ್ತು ವಾಷಿಂಗ್ಟನ್ ಸುಂದರ್ ತಂಡಕ್ಕೆ ಹೆಚ್ಚುವರಿ ಬಲ ನೀಡಿದ್ದಾರೆ.

    ತಂಡದ ಆಯ್ಕೆ ಕುರಿತು ಸ್ಪಷ್ಟನೆ ನೀಡಿದ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್, ಶುಭ್ಮನ್ ಗಿಲ್ ಅವರನ್ನು ಕೈಬಿಟ್ಟಿರುವುದಕ್ಕೆ ಕಾರಣವನ್ನು ವಿವರಿಸಿದ್ದಾರೆ. ಗಿಲ್ ಇತ್ತೀಚಿನ ದಿನಗಳಲ್ಲಿ ಬೇಕಾದ ಮಟ್ಟದ ಫಾರ್ಮ್‌ನಲ್ಲಿ ಇಲ್ಲದಿರುವುದರಿಂದ ವಿಶ್ವಕಪ್‌ನಂತಹ ಮಹತ್ವದ ಟೂರ್ನಿಗೆ ಅವಕಾಶ ನೀಡಲಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಉಪನಾಯಕನ ಅಗತ್ಯವಿದ್ದ ಹಿನ್ನೆಲೆಯಲ್ಲಿ ಅಕ್ಸರ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬುದನ್ನೂ ಅಗರ್ಕರ್ ಸ್ಪಷ್ಟಪಡಿಸಿದರು. ಫಾರ್ಮ್‌ನಲ್ಲಿರುವ ಇಶಾನ್ ಕಿಶನ್ ಅವರನ್ನು ಮತ್ತೆ ತಂಡಕ್ಕೆ ಕರೆತರಲಾಗಿದ್ದು, ಅವರನ್ನು ಮೀಸಲು ಆರಂಭಿಕ ಆಟಗಾರನಾಗಿ ನೋಡಲಾಗಿದೆ. ಸಂಜು ಸ್ಯಾಮ್ಸನ್ ಪ್ರಮುಖ ವಿಕೆಟ್ ಕೀಪರ್ ಆಗಿದ್ದು, ತಂಡದ ಬ್ಯಾಟಿಂಗ್ ಆಳವನ್ನು ಹೆಚ್ಚಿಸುವ ಉದ್ದೇಶದಿಂದ ರಿಂಕು ಸಿಂಗ್ ಅವರನ್ನು ಫಿನಿಷರ್ ಪಾತ್ರಕ್ಕೆ ಮರಳಿ ಕರೆತರಲಾಗಿದೆ.

    ಶುಭ್ಮನ್ ಗಿಲ್ ಅವರನ್ನು ತಂಡದಿಂದ ಹೊರಗಿಟ್ಟಿರುವ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಗಿಲ್ ಗುಣಮಟ್ಟದ ಬ್ಯಾಟರ್ ಆಗಿದ್ದು, ಕೆಲವು ಪಂದ್ಯಗಳಲ್ಲಿ ಲಯ ತಪ್ಪಿದ್ದರೂ ಅವರ ಸಾಮರ್ಥ್ಯದ ಮೇಲೆ ಯಾವುದೇ ಸಂಶಯ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ನಿರ್ಧಾರವನ್ನು ಗಿಲ್ ಸರಿಯಾದ ಮನೋಭಾವದಲ್ಲಿ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವನ್ನೂ ಗವಾಸ್ಕರ್ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ 2026ರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟವಾದ ಸುದ್ದಿ ಗೂಗಲ್‌ನಲ್ಲಿ ಭಾರೀ ಟ್ರೆಂಡ್ ಆಗಿದೆ. team india t20 wc squad ಎಂಬ ಕೀವರ್ಡ್ ಬಳಸಿ ಅನೇಕರು ಮಾಹಿತಿ ಹುಡುಕಿದ್ದು, ಕ್ರಿಕೆಟ್ ಅಭಿಮಾನಿಗಳ ಕುತೂಹಲ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಹೊಸ ನಾಯಕತ್ವ, ಧೈರ್ಯವಾದ ಆಯ್ಕೆಗಳು ಮತ್ತು ಯುವ ಪ್ರತಿಭೆಗಳ ಸೇರ್ಪಡೆಯೊಂದಿಗೆ ಈ ಬಾರಿ ಟೀಂ ಇಂಡಿಯಾ ವಿಶ್ವಕಪ್‌ನಲ್ಲಿ ಏನು ಸಾಧಿಸಲಿದೆ ಎಂಬುದನ್ನು ಕಾದು ನೋಡುವಂತಾಗಿದೆ.

  • IND vs SA :ಎರಡನೇ ಪಂದ್ಯದಲ್ಲಿ ಮುಗ್ಗರಿಸಿದ ಸೂರ್ಯ ಪಡೆ

    IND vs SA :ಎರಡನೇ ಪಂದ್ಯದಲ್ಲಿ ಮುಗ್ಗರಿಸಿದ ಸೂರ್ಯ ಪಡೆ

    ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡ ಕ್ಷಣದಿಂದಲೇ ನಿರೀಕ್ಷೆಗಳು ಗಗನಕ್ಕೆ ಏರಿದ್ದವು. ಆದರೆ ಮೈದಾನದಲ್ಲಿ ನಡೆದ ಚಿತ್ರ ಸಂಪೂರ್ಣ ವಿಭಿನ್ನ. ಕಟಕ್‌ನಲ್ಲಿ ಕಂಡ ಮುಖಭಂಗಕ್ಕೆ ದಕ್ಷಿಣ ಆಫ್ರಿಕಾ ತಂಡ ಇದೇ ಮೈದಾನದಲ್ಲಿ ದಿಟ್ಟ ತಿರುಗೇಟು ನೀಡಿ ಭಾರತವನ್ನು ಬರೋಬ್ಬರಿ 51 ರನ್‌ಗಳಿಂದ ಮಣಿಸಿ, ಸರಣಿಯನ್ನು 1-1ರಿಂದ ಸಮಬಲಕ್ಕೆ ತಂದಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ನಿಂತ ದಕ್ಷಿಣ ಆಫ್ರಿಕಾ, ಆರಂಭದಿಂದಲೇ ಭಾರತೀಯ ಬೌಲಿಂಗ್‌ ಮೇಲೆ ಮನ ಬಂದತೆ ದಾಳಿ ಶುರುಮಾಡಿತು. ವಿಶೇಷವಾಗಿ ಕ್ವಿಂಟನ್ ಡಿ ಕಾಕ್, ಭಾರತದ  ಬೌಲಿಂಗ್‌ನ ಪ್ರತಿ ತಪ್ಪನ್ನೂ  ಶಿಕ್ಷಿಸಿದರು. ರೀಝಾ ಹೆಂಡ್ರಿಕ್ಸ್ ಔಟಾದರೂ ಮಾರ್ಕಂ ಜೊತೆಗೂಡಿ ಡಿ ಕಾಕ್‌ ಸಿಡಿಲಬ್ಬರಕ್ಕೆ ವೇಗವೇ ಹೆಚ್ಚಿತು. 46 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ಸೇರಿ ಕೇವಲ 10 ರನ್‌ಗಳಿಂದ ಶತಕ ವಂಚಿತರಾದರು. ಭಾರತದ ಮೇಲೆ ಒತ್ತಡದ  ಕಟ್ಟಡ ಕಟ್ಟಿದ ಇನ್ನಿಂಗ್ಸ್ ಅದೇ.

    ಇನ್ನೊಂದು ಕಡೆ, ಅರ್ಶದೀಪ್ ಸಿಂಗ್ 11ನೇ ಓವರ್‌ನಲ್ಲಿ ಎಸೆದ 7 ವೈಡ್​ಗಳು ದಕ್ಷಿಣ ಆಫ್ರಿಕಾ ಮೊತ್ತಕ್ಕೆ ಇನ್ನಷ್ಟು ಬೂಸ್ಟರ್ ನೀಡಿದಂತಾಯಿತು. ಡೆತ್ ಓವರ್‌ಗಳಿಗೆ ಬಂದಾಗ ಪಿರೇರಾ (30 ರನ್), ಡೇವಿಡ್ ಮಿಲ್ಲರ್ (20 ರನ್) ವೇಗದ ಲಯ ತೋರಿದ ಪರಿಣಾಮ ತಂಡದ ಮೊತ್ತ 213/4ಕ್ಕೆ ಏರಿತು. ಭಾರತದ ಬೌಲಿಂಗ್‌ನಲ್ಲಿ ಅಕ್ಷರ್ ಮತ್ತು ವರುಣ್ ಮಾತ್ರ ಸ್ವಲ್ಪ ಹಿಡಿತ ತೋರಿದರು ಎನ್ನಬಹುದು.

    ಬೃಹತ್ ಗುರಿಯನ್ನು ಬೆನ್ನತ್ತಲು ಬಂದ ಭಾರತದಿಂದ ಎಲ್ಲರೂ ನಿರೀಕ್ಷಿಸಿದ್ದ ಚೇಸಿಂಗ್ ಕಲರವ ಕಾಣಿಸಲಿಲ್ಲ. ಟಾಸ್ ಗೆದ್ದು ಚೇಸಿಂಗ್ ಆಯ್ದುಕೊಂಡ ಭಾರತಕೆ ಇದೇ ನಿರ್ಧಾರ ಕೇಡು ತಂದಂತೆ, ಆರಂಭದಲ್ಲೇ ವಿಕೆಟ್ ಕುಸಿತಗಳ ಸರಪಳಿ ಶುರುವಾಯಿತು. ಅದರಲ್ಲಿ ತಿಲಕ್ ವರ್ಮಾ ಒಬ್ಬರೇ ಹೋರಾಟ ನೆಡೆಸಿದರೂ ಫಲಕಾರಿ ಯಾಗಲಿಲ್ಲ. 34 ಎಸೆತಗಳಲ್ಲಿ 62 ರನ್‌ಗಳ ಧೈರ್ಯದ ಇನ್ನಿಂಗ್ಸ್ (2 ಬೌಂಡರಿ, 5 ಸಿಕ್ಸರ್) ಭಾರತದ ಬೆನ್ನೆಲುಬಾಗಿ ನಿಂತರೂ, ಮಧ್ಯಮ ಕ್ರಮಾಂಕದಿಂದ ಬೆಂಬಲ ಸಿಗದೇ ಹೋದುದು ಭಾರತಕ್ಕೆ ಗಂಭೀರ ಹೊಡೆತವಾಗಿತ್ತು.

    ದಕ್ಷಿಣ ಆಫ್ರಿಕಾ ಬೌಲಿಂಗ್‌ನಲ್ಲಿ ಬಾರ್ಟಮನ್ ಭಾರತೀಯ ಬ್ಯಾಟಿಂಗ್‌ಗೆ ನಿಜವಾದ ಕಂಟಕವಾದರು. 4 ವಿಕೆಟ್‌ಗಳನ್ನು ಕಿತ್ತು ಭಾರತವನ್ನು ಸಂಪೂರ್ಣ ಒತ್ತಡಕ್ಕೆ ತಳ್ಳಿದರು.ಲುಂಗಿ ಎನ್ ಗಿಡಿ ಮತ್ತು ಯಾನ್ಸನ್ ಅವರ ಸೂಕ್ತ ಬೌಲಿಂಗ್ ಕೂಡ ಭಾರತವನ್ನು ಮತ್ತಷ್ಟು ಸಿಕ್ಕಿಹಾಕಿತು.

    ಕೊನೆಗೆ, ಟೀಂ ಇಂಡಿಯಾ 19.1 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಗಿ, ಕಟಕ್‌ನಲ್ಲಿ ಕಂಡ ಗೆಲುವಿನ ಜಾಲವನ್ನು ಚಂಡೀಗಢದಲ್ಲಿ ಹಿಡಿಯಲು ವಿಫಲವಾಯಿತು. ದಕ್ಷಿಣ ಆಫ್ರಿಕಾ 51 ರನ್‌ಗಳ ಭರ್ಜರಿ ಜಯ ಸಾಧಿಸಿತು.

  • “ಕ್ರಿಕೆಟ್ ಬಿಟ್ರೆ ನನಗೆ ಬೇರೇನೂ ಇಷ್ಟವಿಲ್ಲ” – ಸ್ಮೃತಿ ಮಂದಾನಾ

    “ಕ್ರಿಕೆಟ್ ಬಿಟ್ರೆ ನನಗೆ ಬೇರೇನೂ ಇಷ್ಟವಿಲ್ಲ” – ಸ್ಮೃತಿ ಮಂದಾನಾ

    ಮದುವೆ ರದ್ದು ವಿಚಾರದಿಂದ ಸುದ್ದಿಯಾಗಿದ್ದ ಸ್ಮೃತಿ ಮಂದಾನಾ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಆದರೆ ವೇದಿಕೆ ಮೇಲೆ ಮಾತನಾಡಿದ ಕ್ಷಣದಲ್ಲೇ ಅವರ ಮನಸ್ಸು ಎಲ್ಲಿದೆ ಎನ್ನುವುದು ಸ್ಪಷ್ಟವಾಯಿತು ಕ್ರಿಕೆಟ್‌ ಹೊರತು ಬೇರಾವುದೂ ಅವರಿಗೆ ಮುಖ್ಯವಲ್ಲ. ವೈಯಕ್ತಿಕ ಗೊಂದಲಗಳ ಮಧ್ಯೆಯೂ ಅವರ ಗಮನ ಪೂರ್ಣವಾಗಿ ಆಟದಲ್ಲೇ ಇದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಮೃತಿ, “ಭಾರತೀಯ ಜರ್ಸಿ ಧರಿಸುವ ಯೋಚನೆಯೇ ನನ್ನನ್ನು ಮತ್ತೆ ಮತ್ತೆ ಎಬ್ಬಿಸುತ್ತದೆ. ಕ್ರಿಕೆಟ್ ಬಿಟ್ಟರೆ ಬೇರೇನೂ ನನ್ನ ಮನಸ್ಸಿಗೆ ತಟ್ಟುವುದೇ ಇಲ್ಲ,” ಎಂದು ಹೇಳಿದರು. ಮದುವೆ ವಿಷಯದಲ್ಲಿ ಏನೇ ಆಗಿರಲಿ, ತಮ್ಮ ಬದುಕಿನ ಮೂಲ ದಿಕ್ಕು ಕ್ರಿಕೆಟ್‌ ಆಗಿದೆ ಅನ್ನುವುದನ್ನು ಅವರು ಮತ್ತೊಮ್ಮೆ ಸಾಬೀತುಪಡಿಸಿದರು.

    ವಿಶ್ವಕಪ್ ಗೆಲುವಿನ ಬಗ್ಗೆ ಮಾತನಾಡಿದ ಅವರು, ಆ ಟ್ರೋಫಿ ತಂಡದ ಹಲವು ವರ್ಷಗಳ ಪರಿಶ್ರಮದ ಫಲ ಎಂದು ಹೇಳಿದರು. ಫೈನಲ್ ಪಂದ್ಯಕ್ಕೂ ಮುನ್ನ ನಾವು ಗೆಲುವಿನ ಕ್ಷಣವನ್ನು ಮನಸ್ಸಿನಲ್ಲಿ ಪುನಃ ಪುನಃ ಕಲ್ಪಿಸಿಕೊಂಡಿದ್ದೆವು; ನಿಜವಾಗಿ ಟ್ರೋಫಿ ಕೈಗೆ ಸಿಕ್ಕಾಗ, ಎಲ್ಲರಿಗೂ ಅದು ಭಾವನಾತ್ಮಕ ಕ್ಷಣವಾಗಿತ್ತು ಎಂದು ಸ್ಮೃತಿ ನೆನಪಿಸಿಕೊಂಡರು.

    ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಸ್ಟ್ಯಾಂಡ್ಸ್‌ನಲ್ಲಿ ಹಾಜರಿದ್ದುದೇ ತಂಡಕ್ಕೆ ದೊಡ್ಡ ಬಲ ನೀಡಿತು ಎಂದು ಸ್ಮೃತಿ ಹೇಳಿದರು. “ಅವರ ಕಣ್ಣಲ್ಲಿ ಕಾಣಿಸಿದ ಹೆಮ್ಮೆಯೇ ನಮ್ಮ ಗೆಲುವಿನ ನಿಜವಾದ ಮೌಲ್ಯ,” ಎಂಬ ಅವರ ಹೇಳಿಕೆ, ಹಿರಿಯ ಆಟಗಾರರೊಂದಿಗೆ ಯುವ ತಂಡದ ಭಾವನಾತ್ಮಕ ಬಂಧವನ್ನು ತೋರಿಸಿತು.

    ವೈಯಕ್ತಿಕ ವಿಷಯಗಳಲ್ಲಿ ಏರಿಳಿತಗಳಿದ್ದರೂ, ಸ್ಮೃತಿ ಈಗಾಗಲೇ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ತಯಾರಿಯಲ್ಲಿದ್ದಾರೆ. ನೆಟ್ಸ್‌ನಲ್ಲಿ ಮತ್ತೆ ಬ್ಯಾಟ್ ಹಿಡಿದಿರುವ ಅವರು, ಮೈದಾನವೇ ತಮ್ಮ ನಿಜವಾದ ಮನೆ ಎಂಬುದನ್ನು ತೋರಿಸಿದ್ದಾರೆ.

  • IND vs SA T20: ಕಟಕ್ ಪಂದ್ಯಕ್ಕೆ ತಂಡ ಸಿದ್ಧ  ಭಾರತ ತಂಡದ 11ರ ಬಳಗ ಹೇಗಿರಲಿದೆ?

    IND vs SA T20: ಕಟಕ್ ಪಂದ್ಯಕ್ಕೆ ತಂಡ ಸಿದ್ಧ ಭಾರತ ತಂಡದ 11ರ ಬಳಗ ಹೇಗಿರಲಿದೆ?

    ಭಾರತ–ದಕ್ಷಿಣ ಆಫ್ರಿಕಾ ಟಿ20 ಸರಣಿ ಆರಂಭಕ್ಕೆ ಗಂಟೆಗಳು ಮಾತ್ರ ಬಾಕಿ. ಕಟಕ್‌ನ ಕ್ರೀಡಾಂಗಣದಲ್ಲಿ ಇಂದು ನೆಡೆಯಲಿದೆ. ಐದು ಪಂದ್ಯಗಳ ಈ ಸರಣಿಯ ಮೊದಲ ಹಣಾಹಣಿಗೆ ಯಾವ 11 ಮಂದಿ ಮೈದಾನಕ್ಕಿಳಿಯಲಿದ್ದಾರೆ ಎಂಬುದು ಈಗಲೇ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಚರ್ಚೆಯಾಗಿದೆ. ಕಾರಣ ಟೀಂ ಇಂಡಿಯಾ ಶಿಬಿರದಲ್ಲಿ ಅನೇಕರು ಫಾರ್ಮ್ನಲ್ಲಿರುವುದು.

    ಮೊದಲನೆಯದಾಗಿ, ಆರಂಭಿಕ ಜೋಡಿಯೇ ಈಗ ಕುತೂಹಲ. ಕುತ್ತಿಗೆ ನೋವಿನಿಂದ ಹೊರ ಬಂದಿರುವ ಉಪನಾಯಕ ಶುಭ್‌ಮನ್ ಗಿಲ್ ಮತ್ತೆ ತಂಡಕ್ಕೆ ಸೇರಿದ ಸುದ್ದಿ ಶಿಬಿರಕ್ಕೆ ಹೊಸ ಚೈತನ್ಯ ತಂದಿದೆ. ಗಿಲ್ ಜೊತೆಗೆ ಅಭಿಷೇಕ್ ಶರ್ಮಾ ಇನಿಂಗ್ಸ್‌‌ಗೆ ಸ್ಫೋಟಕ ಆರಂಭ ಕೊಡುವ ಸಾಧ್ಯತೆ ಬಲವಾಗಿದೆ. ಇವರಿಬ್ಬರ ಆಟದ ಶೈಲಿ ಕಟಕ್ ಪಿಚ್‌ಗೆ ಚೆನ್ನಾಗಿ ಹೊಂದಿಕೊಳ್ಳಬಹುದು ಎಂಬ ನಿರೀಕ್ಷೆಯೂ ಇದೆ.

    ಮೂರನೇ ಕ್ರಮಾಂಕಕ್ಕೆ ಬಂದರೆ, ನಾಯಕ ಸೂರ್ಯಕುಮಾರ್ ಯಾದವ್ ಆಗಮಿಸುತ್ತಾರೆ. ಅಬ್ಬರದ ಸ್ಟ್ರೈಕ್‌ರೇಟ್ ಮೂಲಕ ತೀವ್ರ ಒತ್ತಡದಲ್ಲೂ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯ ಅವರಿಗೆ ಇದೆ. ಅವರ ನಂತರ ತಿಲಕ್ ವರ್ಮಾ ನಡೆಯುವ ವೇಗ ಬದಲಾಯಿಸುವ ಗುಣವಿರುವ ಯುವ ಮುಖ. ಮಧ್ಯ ಕ್ರಮಾಂಕದ ಹೊಣೆಗಾರಿಕೆಯ ಬಹುತೇಕ ಭಾಗ ಇವರಿಬ್ಬರ ಮೇಲೆ ಇರುತ್ತದೆ.

    ಆಲ್‌ರೌಂಡ್ ವಿಭಾಗದಲ್ಲಿ ದೊಡ್ಡ ಹೆಸರು ಹಾರ್ದಿಕ್ ಪಾಂಡ್ಯ. ಗಾಯದಿಂದ ಚೇತರಿಸಿಕೊಂಡು ಮರಳುತ್ತಿರುವ ಹಾರ್ದಿಕ್, ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಸಮತೋಲನ ತರುತ್ತಾರೆ. ಇವರೊಂದಿಗೆ ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಕೂಡ ಇದ್ದಾರೆ. ಅಕ್ಷರ್‌ರ ಸ್ಪಿನ್, ದುಬೆರ ಶಕ್ತಿಶಾಲಿ ಹಿಟಿಂಗ್ಇವೆರಡೂ ತಂಡಕ್ಕೆ ಉಪಯೋಗ.

    ವಿಕೆಟ್ ಕೀಪರ್ ಸ್ಥಾನ ಮಾತ್ರ ಇನ್ನೂ ಸಂಪೂರ್ಣ ಸ್ಪಷ್ಟವಾಗಿಲ್ಲ. ಜಿತೇಶ್ ಶರ್ಮಾ ಇತ್ತೀಚಿನ ಪಂದ್ಯಗಳಲ್ಲಿ ಅವಕಾಶ ಬಳಸಿಕೊಂಡಿದ್ದರೆ, ಅನುಭವದ ಮೈಲಿಗಲ್ಲು ಹೊಂದಿರುವ ಸಂಜು ಸ್ಯಾಮ್ಸನ್ ಕೂಡ ಬಾಗಿಲಲ್ಲೇ ನಿಂತಿದ್ದಾರೆ. ನಿರ್ಧಾರ ಯಾವತ್ತಕ್ಕೆ ಬದಲಾಗುತ್ತದೆ ಎಂಬ ಕುತೂಹಲವಿದೆ. ಆದರೆ ತಂಡದ ಒಳಗಿನ ಚಲನವಲನ ನೋಡಿದರೆ, ಜಿತೇಶ್‌ಗೆ ಸ್ವಲ್ಪ ಹೆಚ್ಚು ಬಲವಿದೆ.

    ಬೌಲಿಂಗ್ ಹೆಗ್ಗಳಿಕೆಗೆ ಬಂದರೆ ಬುಮ್ರಾ ಇದ್ದಂತೆಯೇ ಭದ್ರತೆ. ಅರ್ಷದೀಪ್ ಸಿಂಗ್ ಆರಂಭದ ಓವರ್‌ಗಳಲ್ಲಿ ಸ್ವಿಂಗ್‌ನಿಂದ ಸವಾಲು ಹಾಕಬಹುದು. ಮೂರನೇ ಪ್ರಮುಖ ಬೌಲರ್ ವರುಣ್ ಚಕ್ರವರ್ತಿ ರಂಗಿನ ವೈವಿಧ್ಯಮಯ ಸ್ಪಿನ್‌ಗಳು ಟಿ20 ಕ್ರಿಕೆಟ್‌ಗೆ ನೀಡುವ ರಹಸ್ಯ ಅಸ್ತ್ರ. ಜೊತೆಗೂಡಿ ಅಕ್ಷರ್ ಹಾಗೂ ಹಾರ್ದಿಕ್ ಸಹಾಯಕ ಬೌಲರ್‌ಗಳಾಗಿ ತಮ್ಮ ಪಾತ್ರ ನಿಭಾಯಿಸುತ್ತಾರೆ.

    ಕಟಕ್‌ನ ಮೊದಲ ಟಿ20ಗಾಗಿ ಭಾರತದ ಸಂಭಾವ್ಯ 11 ಹೀಗಿದೆ:

    ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

    ಸರಣಿ ಆರಂಭವಾಗುವುದಕ್ಕೂ ಮುನ್ನವೇ ಉತ್ಸಾಹ ಶ್ರೇಷ್ಟ ಮಟ್ಟಕ್ಕೆ ತಲುಪಿದೆ. ಭಾರತದ ಈ ಹೊಸ ಸಂಯೋಜನೆ ಮೈದಾನದಲ್ಲಿ ಎಷ್ಟು ಫಲ ನೀಡುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  • ಐಪಿಎಲ್ ನ ಮತ್ತೊಂದು ತಂಡ ಈಗ ಮಾರಾಟಕ್ಕಿದೆ!

    ಐಪಿಎಲ್ ನ ಮತ್ತೊಂದು ತಂಡ ಈಗ ಮಾರಾಟಕ್ಕಿದೆ!

    ಐಪಿಎಲ್ ಅಂಗಳದಲ್ಲಿ ಮತ್ತೊಂದು ದೊಡ್ಡ ಚಲನವಲನದ ಗಾಳಿ ಬೀಳತೊಡಗಿದೆ. ಮೊದಲ ಸೀಸನ್‌ನಲ್ಲೇ ಚಾಂಪಿಯನ್ ಆಗಿ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದ ರಾಜಸ್ಥಾನ್ ರಾಯಲ್ಸ್ ಈಗ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. ತಂಡದ ಒಡೆತನಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆ ಬರಬಹುದಾದ ಸೂಚನೆಗಳು ಸುತ್ತಮುತ್ತ ಹರಡಿವೆ. ಫ್ರಾಂಚೈಸಿಯ ಮುಖ್ಯ ಮಾಲೀಕರಾದ ಮನೋಜ್ ಬದಾಲೆ ತಮ್ಮ ಬಹುಪಾಲು ಷೇರುಗಳನ್ನು ಮಾರಾಟ ಮಾಡುವ ದಿಸೆಯಲ್ಲಿ ಚರ್ಚೆ ಆರಂಭಿಸಿರುವುದು ಮಾರುಕಟ್ಟೆಯಲ್ಲಿ ಹೊಸ ಚರ್ಚೆಗೆ ದಾರಿಯಾಗಿದೆ.

    ರಾಜಸ್ಥಾನ್ ರಾಯಲ್ಸ್ ಮೌಲ್ಯ ಈಗ ಬಿಲಿಯನ್ ಡಾಲರ್ ಗಡಿಯನ್ನೇ ತಲುಪಿದೆ ಎನ್ನುವ ಅಂದಾಜು ಕ್ರಿಕೆಟ್‌ ವ್ಯವಹಾರ ಜಗತ್ತಿಗೆ ಮತ್ತಷ್ಟು ಚಟುವಟಿಕೆ ತಂದಿದೆ. ಬದಾಲೆ ಅವರಿಗೆ ಸೇರಿದ ‘ಎಮರ್ಜಿಂಗ್ ಮೀಡಿಯಾ ವೆಂಚರ್ಸ್’ ಈ ತಂಡದಲ್ಲಿ ದೊಡ್ಡ ಪಾಲನ್ನು ಹೊಂದಿದೆ. ಉಳಿದ ಪಾಲು ಅಮೆರಿಕ ಮೂಲದ ಹೂಡಿಕೆ ಸಂಸ್ಥೆಗಳು ಮತ್ತು ಮಾಧ್ಯಮ ಗುಂಪುಗಳಿಗೆ ಸೇರಿದೆ. ಹೊಸ ಹೂಡಿಕೆದಾರರು ಯಾರಾಗುತ್ತಾರೆ? ಎಷ್ಟು ಪ್ರಮಾಣದ ಹಂಚಿಕೆ ಮಾರಾಟವಾಗಬಹುದು? ಈ ಪ್ರಶ್ನೆಗಳಿಗೂ ಉತ್ತರ ಇನ್ನೂ ಸಿಕ್ಕಿಲ್ಲ.

    ಈ ಬಾರಿ ವ್ಯವಹಾರವನ್ನು ನಿಭಾಯಿಸಲು ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ಹೊಂದಿರುವ ‘ದಿ ರೈನ್ ಗ್ರೂಪ್’ ಸಲಹೆಗಾರರಾಗಿ ನೇಮಕಗೊಂಡಿದೆ. ಇತ್ತೀಚೆಗೆ ಗುಜರಾತ್ ಟೈಟಾನ್ಸ್ ಮಾಲೀಕತ್ವ ಬದಲಾದ ಬಳಿಕ, ಐಪಿಎಲ್ ಫ್ರಾಂಚೈಸಿಗಳ ಮೌಲ್ಯ ಮತ್ತು ಬೇಡಿಕೆ ಎರಡೂ ಹೆಚ್ಚಿರುವುದರಿಂದ, ರಾಜಸ್ಥಾನ್ ರಾಯಲ್ಸ್ ಮೇಲೂ ಹೂಡಿಕೆದಾರರ ಕಣ್ಣುಬಿದ್ದಿದೆ. ಖಾಸಗಿ ಈಕ್ವಿಟಿ ಸಂಸ್ಥೆಗಳು, ದೊಡ್ಡ ಉದ್ಯಮಿ ಗುಂಪುಗಳು, ಕ್ರೀಡಾ ಹೂಡಿಕೆದಾರರು ಎಲ್ಲರೂ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ.

    ಆದಾಗ್ಯೂ, ಎಲ್ಲರೂ ಈ ಓಟಕ್ಕೆ ಸಿದ್ಧವಾಗಿಲ್ಲ. ಕೆಲವು ಹೆಸರುಗಟ್ಟಿದ ಉದ್ಯಮಿಗಳು ಈಗಾಗಲೇ ತಮ್ಮ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಐಪಿಎಲ್ ನಿಯಮ ಪ್ರಕಾರ ಯಾವುದೇ ವ್ಯಕ್ತಿ ಅಥವಾ ಕಂಪನಿ ಒಂದೇ ವೇಳೆ ಎರಡು ತಂಡಗಳ ನೇರ ಒಡೆತನ ಹೊಂದಲು ಸಾಧ್ಯವಿಲ್ಲ. ಹೀಗಾಗಿ ರಾಯಲ್ಸ್ ಖರೀದಿಗೆ ಹೂಡಿಕೆ ಮಾಡಲು ಮುಂದಾಗುವವರು ತಮ್ಮ ಆಯ್ಕೆಯನ್ನು ಸ್ಪಷ್ಟಪಡಿಸಲೇಬೇಕಾಗುತ್ತದೆ.

    ತಂಡದ ಮೈದಾನದ ಬಲವೂ ಈ ಚರ್ಚೆಗೆ ಹೊಸ ಚೈತನ್ಯ ನೀಡಿದೆ. ಕೋಚ್ ಕುಮಾರ್ ಸಂಗಕಾರ ನೇತೃತ್ವದಲ್ಲಿ ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್ ಮುಂತಾದ ಪ್ರಮುಖ ಆಟಗಾರರು ತಂಡದ ಮೌಲ್ಯ ಹೆಚ್ಚಿಸುವಲ್ಲಿ ಪಾತ್ರವಹಿಸಿದ್ದಾರೆ. ಬರುವ ಸೀಸನ್‌ಗೆ ಮುನ್ನ ಇಂತಹ ಸುದ್ದಿ ಬಹಿರಂಗವಾಗಿರುವುದರಿಂದ, ಕ್ರೀಡಾಪ್ರೇಮಿಗಳಿಗೆ ತಂಡದ ಭವಿಷ್ಯವೇ ಕುತೂಹಲದ ವಿಷಯವಾಗಿದೆ.

    ಒಟ್ಟಾರೆ ನೋಡಿದರೆ, ರಾಜಸ್ಥಾನ್ ರಾಯಲ್ಸ್ ಮಾರಾಟದ ಚರ್ಚೆ ಈಗ ಐಪಿಎಲ್ ಕ್ಷೇತ್ರದಲ್ಲಿ ಭಾರೀ ಚಲನವಲನ ಸೃಷ್ಟಿಸಿದೆ. ಮೌಲ್ಯ ಎಷ್ಟು ಅಂತಿಮವಾಗುತ್ತದೆ? ನೂತನ ಮಾಲೀಕರು ಯಾರು?ಈ ಪ್ರಶ್ನೆಗಳ ಉತ್ತರ ಮುಂದಿನ ವಾರಗಳಲ್ಲಿ ಬಹಿರಂಗವಾಗುವ ಸಾಧ್ಯತೆ ಇದೆ.

  • ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಜಯ 

    ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಜಯ 

    ಮೆಲ್ಬರ್ನ್‌ನಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದ ಭಾರತ ತಂಡ ಹೋಬರ್ಟ್‌ನಲ್ಲಿ ಅದ್ಭುತ ತಿರುಗೇಟು ನೀಡಿದೆ. ಐದು ಪಂದ್ಯಗಳ ಟಿ20 ಐ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿ ಸರಣಿಯನ್ನು 1-1 ಸಮಬಲಕ್ಕೆ ತಂದಿದೆ. ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಆಸ್ಟ್ರೇಲಿಯಾದ ಬಲಿಷ್ಠ ಬ್ಯಾಟಿಂಗ್ ಶಕ್ತಿಯನ್ನು 186 ರನ್‌ಗಳೊಳಗೆ ಕಟ್ಟಿಹಾಕುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಯಿತು.

    ಹರ್ಷಿತ್ ರಾಣಾ ಅವರ ಬದಲಿಗೆ ತಂಡದಲ್ಲಿ ಅವಕಾಶ ಪಡೆದುಕೊಂಡ ಅರ್ಶದೀಪ್ ಸಿಂಗ್ ತಮ್ಮ ಆಯ್ಕೆಯೇ ಶತಪಾಲು ಲೇಸೆಂದು ಸಾಬೀತುಪಡಿಸಿದರು. ಆರಂಭದಲ್ಲೇ  ವೇಗ ಮತ್ತು  ಸ್ವಿಂಗ್‌ನಿಂದ ಆಸ್ಟ್ರೇಲಿಯಾ ಟಾಪ್ ಆರ್ಡರ್‌ನ್ನು ಪೆವಿಲಿಯನ್ ಸೇರುವಂತೆ ಮಾಡಿದರು. ತಮ್ಮ 4 ಓವರ್‌ಗಳಲ್ಲಿ ಕೇವಲ 27 ರನ್ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಟಿಂ ಡೇವಿಡ್ (38 ಎಸೆತಗಳಲ್ಲಿ 74) ಹಾಗೂ ಮಾರ್ಕಸ್ ಸ್ಟೋಯ್ನಿಸ್ (42 ರನ್) ಮಾತ್ರ ಆಸ್ಟ್ರೇಲಿಯಾ ಪರ ಬ್ಯಾಟ್ ಬೀಸಿದರು ಇತರರು ಯಾವುದೇ ಪ್ರಭಾವ ಬೀರಲಿಲ್ಲ. ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು.

    187 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಸ್ಫೋಟಕ ಆರಂಭ ನೀಡಿದರು. ಕೇವಲ 16 ಎಸೆತಗಳಲ್ಲಿ 25 ರನ್ (2 ಬೌಂಡರಿ, 2 ಸಿಕ್ಸರ್) ಬಾರಿಸಿದ ಅವರು ಆಸ್ಟ್ರೇಲಿಯಾ ತಂಡದ ಬೌಲಿಂಗ್‌ನ್ನು ಮೊದಲ ಕ್ಷಣದಿಂದಲೇ ಒತ್ತಡಕ್ಕೆ ಸಿಲುಕಿಸಿದರು. ಆದರೆ ನೇಥನ್ ಎಲ್ಲಿಸ್ ಬೌಲಿಂಗ್‌ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಕಡೆಗೆ ಸೇರಿದರು. ಆ ಬಳಿಕ ಶುಭಮನ್ ಗಿಲ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಪವರ್ ಪ್ಲೇನಲ್ಲಿ ಸ್ಕೋರ್‌ಬೋರ್ಡ್‌ನಲ್ಲಿ ಮೊತ್ತವನ್ನು ಹೆಚ್ಚಿಸಿದರು. ಸೂರ್ಯಕುಮಾರ್ ಕೇವಲ 11 ಎಸೆತಗಳಲ್ಲಿ 24 ರನ್ ಗಳಿಸಿ ತಂಡಕ್ಕೆ ಹಿನ್ನಡೆ ಆಗದಂತೆ ನೋಡಿಕೊಂಡರು.

    ಮಧ್ಯ ಕ್ರಮಾಂಕದಲ್ಲಿ ತಿಲಕ್ ವರ್ಮಾ (26 ಎಸೆತಗಳಲ್ಲಿ 29) ಮತ್ತು ಅಕ್ಷರ್ ಪಟೇಲ್ (12 ಎಸೆತಗಳಲ್ಲಿ 17) ಇಬ್ಬರೂ ಕೂಡ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಭಾರತ ತಂಡ ಮಧ್ಯದ ಹಂತದಲ್ಲಿ ಸ್ವಲ್ಪ ಸಂಕಷ್ಟಕ್ಕೆ ಸಿಲುಕಿದರೂ, ಆ ವೇಳೆ ವಾಶಿಂಗ್ಟನ್ ಸುಂದರ್ ತಂಡದ ನಂಬಿಗಸ್ತರಾಗಿ ಆಟವಡಿದರು. 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸುಂದರ್ ತಮ್ಮ ಸಮತೋಲನ ಮತ್ತು ಶಾಂತ ಬ್ಯಾಟಿಂಗ್‌ನಿಂದ ಪಂದ್ಯದ ಗತಿ ಸಂಪೂರ್ಣವಾಗಿ ಭಾರತ ಪರ ತಿರುಗಿಸಿದರು. ಅವರಿಗೆ ಜಿತೇಶ್ ಶರ್ಮಾ ತಕ್ಕ ಬೆಂಬಲ ನೀಡಿದರು. ಈ ಜೋಡಿ ಆಸ್ಟ್ರೇಲಿಯಾದ ಗೆಲುವಿನಾಸೆಗೆ ತಣ್ಣೀರೆರಚಿ 9 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ತಲುಪಿಸಿತು.

    ಆಸ್ಟ್ರೇಲಿಯಾದ ಬೌಲರ್‌ಗಳಲ್ಲಿ ಎಲ್ಲಿಸ್ ಮತ್ತು ಸ್ಟೋಯ್ನಿಸ್ ತಲಾ ಎರಡು ವಿಕೆಟ್ ಪಡೆದರೂ, ಭಾರತದ ದೃಢ ಮನೋಭಾವದ ಮುಂದೆ ಅವರು ಅಸಹಾಯಕರಾದರು. ಪಂದ್ಯದಲ್ಲಿನ ಅತೀ ಪ್ರಮುಖ ಪಾತ್ರ ವಹಿಸಿದ ಅರ್ಶದೀಪ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

     

    ಈ ಜಯದೊಂದಿಗೆ ಹೋಬರ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಅಪರೂಪದ ಸಾಧನೆ ಭಾರತ ಮಾಡಿದೆ. ಹೋಬರ್ಟ್ ಕ್ರೀಡಾಂಗಣದಲ್ಲಿ ಕಳೆದ ಐದು ಪಂದ್ಯಗಳಲ್ಲೂ ಗೆಲುವು ಕಂಡಿದ್ದ ಆಸ್ಟ್ರೇಲಿಯಾ ಈ ಬಾರಿ ಸೋಲಿನ ರುಚಿ ಕಂಡಿದೆ.

  • ಭಾರತದ ಮಹಿಳಾ ತಂಡ ಫೈನಲ್‌ಗೆ; ಆಸ್ಟ್ರೇಲಿಯಾ ಮಣಿಸಿ ಇತಿಹಾಸಿಕ ಗೆಲುವು

    ಭಾರತದ ಮಹಿಳಾ ತಂಡ ಫೈನಲ್‌ಗೆ; ಆಸ್ಟ್ರೇಲಿಯಾ ಮಣಿಸಿ ಇತಿಹಾಸಿಕ ಗೆಲುವು

    ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಐತಿಹಾಸಿಕ ಸಾಧನೆಯನ್ನು ಗೈದು ಫೈನಲ್‌ಗೆ ಪ್ರವೇಶಿಸಿದೆ. ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ ಹಾಲಿ ವಿಶ್ವಚಾಂಪಿಯನ್ ಆದ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಮಣಿಸಿ ವಿಶ್ವದಾಖಲೆಯ ಗುರಿ ಬೆನ್ನತ್ತುವುದರ ಮೂಲಕ ಸಾಧನೆ ಮಾಡಿತು. 338 ರನ್‌ಗಳ ಗುರಿ ಎದುರಿಸಿದ ಭಾರತ, ಒತ್ತಡದ ಸಂದರ್ಭದಲ್ಲೂ ಶಾಂತಿ ಕಳೆದುಕೊಳ್ಳದೇ, ನಿರ್ಧಾರಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿತು.

    ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಹಿಳಾ ತಂಡ 49.5 ಓವರ್‌ಗಳಲ್ಲಿ 338 ರನ್ ಗಳಿಸಿತು. ಆಸ್ಟ್ರೇಲಿಯಾಗೆ ಉತ್ತಮ ಆರಂಭ ಸಿಕ್ಕಿದ್ದರೂ, ಮಧ್ಯ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ಆಸ್ಟ್ರೇಲಿಯಾ ನಿರೀಕ್ಷಿತ ಅಂತ್ಯ ಪಡೆಯುವಲ್ಲಿ ವಿಫಲವಾಯಿತು. ಭಾರತೀಯ ಬೌಲರ್‌ಗಳು ಪ್ರಮುಖ ಕ್ಷಣಗಳಲ್ಲಿ ವಿಕೆಟ್‌ ತೆಗೆಯುವ ಮೂಲಕ ಪಂದ್ಯವನ್ನು ಹಿಡಿತದಲ್ಲಿಟ್ಟರು.

    ಭಾರತದ ಇನ್ನಿಂಗ್ಸ್‌ಗೆ ಚಾಲನೆ ಸಿಕ್ಕ ತಕ್ಷಣವೇ, ಆರಂಭಿಕ ಆಟಗಾರ್ತಿಯರು ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಬೇಗನೆ ಪೆವಿಲಿಯನ್ ಸೇರುವ ಮೂಲಕ ತಂಡವನ್ನು ಒತ್ತಡಕ್ಕೆ ಸಿಲುಕಿಸಿದ್ದರು. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಥಳೀಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಪಂದ್ಯದ ಭವಿಷ್ಯವನ್ನು ಬದಲಾಯಿಸಿ ಜತೆಯಾಟ ಪ್ರದರ್ಶಿಸಿದರು. ಇಬ್ಬರು ತಾಳ್ಮೆಯ ಜೊತೆಗೆ ಆಕ್ರಮಣಾತ್ಮಕ ಆಟ ತೋರಿಸಿ 165 ರನ್‌ಗಳ ಅಮೂಲ್ಯ ಜೊತೆಯಾಟ ಆಡಿದರು.

    ಹರ್ಮನ್‌ಪ್ರೀತ್ ಕೌರ್ 89 ರನ್ ಗಳಿಸಿ ಔಟಾದರೂ, ಜೆಮಿಮಾ ರೋಡ್ರಿಗಸ್ ಕ್ರೀಸ್‌ ಕಚ್ಚಿ ನಿಂತಿದ್ದು ತಂಡಕ್ಕೆ ದೊಡ್ಡ ಸಹಾಯವಾಯ್ತು. ಒತ್ತಡದ ಸಂದರ್ಭದಲ್ಲೂ ಶಾಂತ ಮನೋಭಾವದಿಂದ ಆಡಿದ ಜೆಮಿಮಾ 127 ರನ್‌ಗಳ ಅಜೇಯ ಇನ್ನಿಂಗ್ಸ್ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ಅಂತಿಮ ಹಂತದಲ್ಲಿ ದೀಪ್ತಿ ಶರ್ಮಾ, ರಿಚಾ ಘೋಷ್ ಹಾಗೂ ಅಮನ್‌ಜೋತ್ ಕೌರ್ ಅಗತ್ಯ ರನ್‌ಗಳನ್ನು ಸೇರಿಸಿ ಭಾರತ ಗುರಿ ತಲುಪುವಲ್ಲಿ ಯಶಸ್ವಿಯಾದರು.

    ಈ ಮೂಲಕ ವಿಶ್ವಕಪ್ ನಾಕೌಟ್ ಹಂತದಲ್ಲಿ ಅತಿ ದೊಡ್ಡ ಗುರಿ ಬೆನ್ನತ್ತಿದ ತಂಡ ಎಂಬ ಗೌರವ ಭಾರತಕ್ಕೆ ದೊರಕಿದೆ. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ ಸೋಲಿಗೆ ಭಾರತ ಈ ಪಂದ್ಯದಲ್ಲಿ ಸಮರ್ಪಕ ತಿರುಗೇಟು ನೀಡಿದೆ.

    ನವೆಂಬರ್ 2ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದೆ. ಪ್ರಸ್ತುತ ಆಟದ ಶೈಲಿ, ತಂಡದ ಆತ್ಮವಿಶ್ವಾಸ ಹಾಗೂ ಪ್ರದರ್ಶನವನ್ನು ಗಮನಿಸಿದರೆ ಭಾರತ ಈ ಬಾರಿ ಟ್ರೋಫಿ ಗೆಲ್ಲಲು ಹಾಟ್ ಫೆವರೇಟ್ ತಂಡವಾಗಿದೆ.

  • “ಮೇಡಂ, ನಿಮ್ಮ ಹಸ್ಬೆಂಡ್ ತುಂಬಾ ಒರಟ” – ಕೆಎಲ್ ರಾಹುಲ್

    “ಮೇಡಂ, ನಿಮ್ಮ ಹಸ್ಬೆಂಡ್ ತುಂಬಾ ಒರಟ” – ಕೆಎಲ್ ರಾಹುಲ್

    ಕ್ರಿಕೆಟ್ ಲೋಕದಲ್ಲಿ ಕೆಎಲ್ ರಾಹುಲ್ ಎಂಬ ಹೆಸರು ಅಷ್ಟೇ ಶಾಂತವಾಗಿ, ಅಷ್ಟೇ ಪ್ರಭಾವಶಾಲಿಯಾಗಿ ಬೆಳಗುತ್ತಿದೆ. ಮೈದಾನದಲ್ಲಿ ಗಂಭೀರವಾಗಿ, ದೃಢತೆಯಿಂದ ಆಟವಾಡುವ ಈ ಆಟಗಾರನ ಮತ್ತೊಂದು ಮುಖ ಹಾಸ್ಯ ಮತ್ತು ಸ್ನೇಹಭಾವದಿಂದ ಕೂಡಿದೆ. ಇತ್ತೀಚೆಗೆ ಅವರು ಹಂಚಿಕೊಂಡ ಒಂದು ಸಣ್ಣ ಘಟನೆ ಕ್ರಿಕೆಟ್ ಅಭಿಮಾನಿಗಳಲ್ಲಿ ನಗುವಿನ ಅಲೆ ಎಬ್ಬಿಸಿದೆ. ಅದು ಅವರ ಮೆಂಟರ್ ಆಗಿದ್ದ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಬಗ್ಗೆ ಮತ್ತು ಅದರಲ್ಲಿ ಪ್ರಮುಖ ಪಾತ್ರದಲ್ಲಿ ಅವರ ಪತ್ನಿಯೂ ಕೂಡ ಇದ್ದಾರೆ.

    ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆಡುತ್ತಿದ್ದ ಸಮಯದಲ್ಲಿ, ತಂಡದ ಮೆಂಟರ್ ಆಗಿದ್ದವರು ಕೆವಿನ್ ಪೀಟರ್ಸನ್. ಕಠಿಣ ಶಿಸ್ತು, ದೃಢ ಮಾರ್ಗದರ್ಶನ ಮತ್ತು ಕಟುವಾದ ವಿಶ್ಲೇಷಣೆಗಳು ಪೀಟರ್ಸನ್ ಅವರ ಕೋಚಿಂಗ್ ಶೈಲಿಯ ಮುಖ್ಯ ಅಂಶಗಳಾಗಿವೆ. ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದ ರಾಹುಲ್‌ಗೆ ಅನೇಕ ಪಾಠಗಳು ಕಲಿತರೂ, ಕೆಲವೊಮ್ಮೆ ಆ ಕಠಿಣತನ ತಾಳಲಾಗದಂತಾಗುತ್ತಿತ್ತು.

    ರಾಹುಲ್‌ನ ಪ್ರಕಾರ, “ಕೆವಿನ್ ಪೀಟರ್ಸನ್ ಅವರಿಂದ ನಾನು ತುಂಬಾ ಕಲಿತಿದ್ದೇನೆ. ಆದರೆ ಅವರು ಕೆಲವೊಮ್ಮೆ ತುಂಬಾ ಗಂಭೀರವಾಗಿ ಮಾತಾಡುತ್ತಿದ್ದರು. ಅವರ ಪಾಠ ಕೇಳುವಾಗ ನಕ್ಕುಬಿಡಲು ಸಹ ಆಗುತ್ತಿರಲಿಲ್ಲ. ಅವರು ತುಂಬಾ ಏಕಾಗ್ರತೆಯಲ್ಲಿರುತ್ತಾರೆ, ನಾನು ಒಳಗೆ ನಕ್ಕುಕೊಂಡೇ ಇರ್ತೀನಿ.”

    ಈ ಘಟನೆಯ ಕುತೂಹಲಕರ ಭಾಗವೆಂದರೆ ರಾಹುಲ್ ಅವರು ಒಮ್ಮೆ ಕೆವಿನ್ ಪೀಟರ್ಸನ್ ಅವರ ಪತ್ನಿಗೇ ದೂರು ನೀಡಿಬಿಟ್ಟಿದ್ದೆ ಎಂದು ಹೇಳಿಕೊಂಡಿದ್ದಾರೆ.

    “ನಾವು ಯೂರೋಪ್ ಪ್ರವಾಸದಲ್ಲಿದ್ದಾಗ ಒಮ್ಮೆ ಅವರ ಪತ್ನಿಯನ್ನು ಭೇಟಿ ಮಾಡಿದ್ದೆ. ಅಲ್ಲಿ ನಾನು ನಕ್ಕು ಅವರ ಬಳಿ ಹೇಳಿದೆ ‘ಮೇಡಂ, ನಿಮ್ಮ ಹಸ್ಬೆಂಡ್ ತುಂಬಾ ಒರಟ. ಅಭ್ಯಾಸದಲ್ಲಿ ತುಂಬಾ ಕಠಿಣವಾಗಿ ಮಾತನಾಡುತ್ತಾರೆ. ಸ್ವಲ್ಪ ಅವರಿಗೆ ಹೇಳಿ ಪ್ಲೀಸ್, ನನ್ನ ಮೇಲೆ ಮೃದುಧೋರಣೆಯಿಂದ ಕನಿಕರ ಇರಲಿ!’”

    ಅದನ್ನು ಕೇಳಿ ಪೀಟರ್ಸನ್ ಅವರ ಪತ್ನಿಯೂ ನಕ್ಕರಂತೆ. ಈ ಹಾಸ್ಯಭರಿತ ಕ್ಷಣವು ಪೀಟರ್ಸನ್ ಮತ್ತು ರಾಹುಲ್ ನಡುವಿನ ಸ್ನೇಹದ ನಿಜವಾದ ಹತ್ತಿರತನವನ್ನು ತೋರಿಸುತ್ತದೆ.

    ಈ ಘಟನೆ ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ನಡೆಸಿದ 2 Sloggers ಎಂಬ ಯುಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಬಹಿರಂಗವಾಯಿತು. ಸಂಭಾಷಣೆಯ ವೇಳೆ ಅಥಿಯಾ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ರಾಹುಲ್ ತಮ್ಮ ಗುರು ಶಿಷ್ಯರ ನಡುವಿನ ಸಣ್ಣಪುಟ್ಟ ನೊಣಜಗಳ ಕುರಿತು ಹಾಸ್ಯಾತ್ಮಕವಾಗಿ ಹಂಚಿಕೊಂಡರು.

    “ಪ್ರತಿ ಬಾರಿ ಕೆವಿನ್ ಜೊತೆ ಜಗಳವಾದಾಗ, ನನ್ನ ಪತ್ನಿಯೇ ನನಗೆ ಬುದ್ಧಿ ಹೇಳುತ್ತಾಳೆ,” ಎಂದು ನಗುತ್ತಾ ಹೇಳಿದ್ದಾರೆ ರಾಹುಲ್. “ಆದರೂ ಕೆವಿನ್ ನನ್ನ ಜೀವನದಲ್ಲಿ ಒಬ್ಬ ಪ್ರೇರಕ. ಅವರಿಂದ ಕಲಿತ ಪಾಠಗಳು ಇಂದು ನನ್ನ ಆಟದ ಗುಣಮಟ್ಟವನ್ನು ರೂಪಿಸಿವೆ” ಎಂದು ಹೇಳಿಕೊಂಡಿದ್ದಾರೆ.

  • Asia Cup trophy controversy: ಬಿಸಿಸಿಐನಿಂದ ಮೊಹ್ಸಿನ್ ನಖ್ವಿಗೆ ಕಠಿಣ ಎಚ್ಚರಿಕೆ!

    Asia Cup trophy controversy: ಬಿಸಿಸಿಐನಿಂದ ಮೊಹ್ಸಿನ್ ನಖ್ವಿಗೆ ಕಠಿಣ ಎಚ್ಚರಿಕೆ!

    ಏಷ್ಯಾ ಕಪ್ 2025 ಮುಗಿದು ತಿಂಗಳಾದರೂ, ಭಾರತ ಜಯಿಸಿದ ಟ್ರೋಫಿ ಇನ್ನೂ ಟೀಂ ಇಂಡಿಯಾ ಕೈಗೆ ತಲುಪಿಲ್ಲ! ಈ ಅಸಾಮಾನ್ಯ ಸ್ಥಿತಿಯು ಈಗ ಕ್ರಿಕೆಟ್ ವಲಯದ ಪ್ರಮುಖ ಚರ್ಚೆಯ ವಿಷಯವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿರುವ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮುಖ್ಯಸ್ಥರಾಗಿರುವ ಮೊಹ್ಸಿನ್ ನಖ್ವಿ ಟ್ರೋಫಿಯನ್ನು ದುಬೈ ಕಚೇರಿಯಲ್ಲಿ ಇರಿಸಿಕೊಂಡಿರುವುದು ಬಿಸಿಸಿಐನ (BCCI) ಕೆಂಗಣ್ಣಿಗೆ ಗುರಿಯಾಗಿದೆ.

    ಸೆಪ್ಟೆಂಬರ್ 28ರಂದು ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತವು ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿತ್ತು. ಆದರೆ ಪಂದ್ಯ ಅಂತ್ಯದ ವೇಳೆ ಟ್ರೋಫಿ ವಿತರಣಾ ಸಮಾರಂಭ ನಡೆಯಲಿಲ್ಲ. ಕಾರಣವೆಂದರೆ ಟೀಂ ಇಂಡಿಯಾ ಆಟಗಾರರು ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದರು. ನಖ್ವಿ ಅವರು ಪಾಕಿಸ್ತಾನದ ಆಂತರಿಕ ಸಚಿವರಾಗಿರುವುದರ ಜೊತೆಗೆ, ಕಾಶ್ಮೀರದ ಪೆಹಲ್ಗಾಮ್ ಉಗ್ರ ದಾಳಿಯ ನಂತರ ರಾಜಕೀಯ ಹೇಳಿಕೆಗಳನ್ನು ನೀಡಿದ ಕಾರಣದಿಂದಾಗಿ ಭಾರತೀಯ ತಂಡ ಅವರು ನೀಡುವ ಟ್ರೋಫಿಯನ್ನು ಸ್ವೀಕರಿಸದ ಸ್ವೀಕರಿಸಿರಲಿಲ್ಲ.

    ಈ ವಿವಾದದ ನಂತರ ಟ್ರೋಫಿಯನ್ನು ACC ಕಚೇರಿಯಲ್ಲಿ ಇರಿಸಲಾಗಿದೆ. ಇದರಿಂದ ಟ್ರೋಫಿ ಭಾರತಕ್ಕೆ ಹಸ್ತಾಂತರವಾಗದೆ, ಒಂದು ತಿಂಗಳಾದರೂ ದುಬೈಯಲ್ಲೇ ಉಳಿಯಿತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಇದೀಗ ಅಧಿಕೃತ ಇ-ಮೇಲ್ ಮೂಲಕ ಮೊಹ್ಸಿನ್ ನಖ್ವಿಗೆ ತೀವ್ರ ಎಚ್ಚರಿಕೆ ನೀಡಿದೆ. ಟ್ರೋಫಿಯನ್ನು ತಕ್ಷಣ ಭಾರತಕ್ಕೆ ಕಳುಹಿಸದಿದ್ದರೆ ವಿಷಯವನ್ನು ಐಸಿಸಿಗೆ (ICC) ಒಪ್ಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

    ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, “ಟೀಂ ಇಂಡಿಯಾ ಗೆದ್ದ ಟ್ರೋಫಿ ದುಬೈ ಕಚೇರಿಯಲ್ಲಿ ಉಳಿದಿರುವುದು ರಾಷ್ಟ್ರದ ಗೌರವಕ್ಕೆ ಧಕ್ಕೆ ಟ್ರೋಫಿಯನ್ನು ತಕ್ಷಣ ಹಸ್ತಾಂತರಿಸಬೇಕೆಂದು ನಾವು ನಖ್ವಿಗೆ ಸೂಚಿಸಿದ್ದೇವೆ, ಒಂದು ವೇಳೆ ಅವರು ನಿರ್ಲಕ್ಷಿಸಿದರೆ ನಾವು ಐಸಿಸಿಗೆ ದೂರು ನೀಡುತ್ತೇವೆ,” ಎಂದು ತಿಳಿಸಿದ್ದಾರೆ.

    ಆದರೆ ನಖ್ವಿಯ ಪ್ರತಿಕ್ರಿಯೆ ವಿವಾದವನ್ನು ಮತ್ತಷ್ಟು ಹುಟ್ಟುಹಕಿದೆ. ಅವರು “ಬಿಸಿಸಿಐ ಪ್ರತಿನಿಧಿಗಳು ದುಬೈಗೆ ಬಂದು ನನ್ನಿಂದಲೇ ಟ್ರೋಫಿಯನ್ನು ಪಡೆದುಕೊಳ್ಳಬೇಕು” ಎಂದು ಹೇಳಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಬಿಸಿಸಿಐ ಈ ನಿಲುವನ್ನು ತೀವ್ರವಾಗಿ ವಿರೋಧಿಸಿದ್ದು, “ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸುವ ಪ್ರಶ್ನೆಯೇ ಇಲ್ಲ” ಎಂದು ಎಲ್ಲರಿಗೂ ಸ್ಪಷ್ಟಪಡಿಸಿದೆ.

    ಟ್ರೋಫಿಯು ಪ್ರಸ್ತುತ ದುಬೈನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಚೇರಿಯಲ್ಲಿಯೇ ಇರಿಸಲಾಗಿದೆ. ನಖ್ವಿಯ ಅನುಮತಿಯಿಲ್ಲದೆ ಅದನ್ನು ಸ್ಥಳಾಂತರಿಸುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವಿದೆ. ಅವರು ಹೇಳಿರುವಂತೆ, “ಸೂಕ್ತ ಸಮಯದಲ್ಲಿ ನಾನು ಸ್ವತಃ ಟ್ರೋಫಿಯನ್ನು ಹಸ್ತಾಂತರಿಸುತ್ತೇನೆ.” ಆದರೆ ಬಿಸಿಸಿಐಗೆ ಕಾಯುವ ಮನಸ್ಥಿತಿಯಲ್ಲಿಲ್ಲ.

    ಕ್ರೀಡೆ ಮತ್ತು ರಾಜಕೀಯ ಬೇರೆ ಎಂಬ ತತ್ವವನ್ನು ಮರೆತು, ಈ ವಿವಾದವು ರಾಜಕೀಯ ಬಣ್ಣ ತಾಳಿರುವುದು ದುಃಖಕರ. ಪಾಕಿಸ್ತಾನದ ರಾಜಕೀಯ ನಾಯಕರಾದ ನಖ್ವಿ ಕ್ರಿಕೆಟ್ ವೇದಿಕೆಯನ್ನು ತಮ್ಮ ನಿಲುವು ಪ್ರದರ್ಶನದ ಸ್ಥಳವನ್ನಾಗಿ ಮಾಡಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತಂದಿದೆ.

    ಸೆಪ್ಟೆಂಬರ್‌ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಮಣಿಸಿ ಏಷ್ಯಾ ಕಪ್ ಗೆದ್ದರೂ, ಟ್ರೋಫಿ ಮಾತ್ರ ಇನ್ನೂ ಭಾರತಕ್ಕೆ ತಲುಪಿಲ್ಲ. ಇದು ಕೇವಲ ಕ್ರೀಡಾ ಪ್ರಶಸ್ತಿ ವಿಚಾರವಲ್ಲ ರಾಷ್ಟ್ರದ ಗೌರವದ ವಿಷಯವಾಗಿದೆ.