Category: National

  • ₹11,718 ಕೋಟಿ ಬಜೆಟ್ — 2027ರಲ್ಲಿ ಭಾರತದ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿ

    ₹11,718 ಕೋಟಿ ಬಜೆಟ್ — 2027ರಲ್ಲಿ ಭಾರತದ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿ

    ಭಾರತದ ಆಡಳಿತ, ಯೋಜನಾ ರೂಪಣೆ ಮತ್ತು ಸಾಮಾಜಿಕ–ಆರ್ಥಿಕ ನೀತಿಗಳ ಆಧಾರಸ್ತಂಭವೆಂದೇ ಪರಿಗಣಿಸಲ್ಪಡುವ ಜನಗಣತಿ ಇದೀಗ ದೊಡ್ಡ ರೂಪಾಂತರಕ್ಕೆ ಸಜ್ಜಾಗಿದೆ. 150 ವರ್ಷಗಳ ಇತಿಹಾಸ ಹೊಂದಿರುವ ಭಾರತದ ಜನಗಣತಿ ಪ್ರಕ್ರಿಯೆ ಮೊದಲ ಬಾರಿಗೆ ಪೂರ್ಣಡಿಜಿಟಲ್ ಪದ್ದತಿಯಲ್ಲಿ ನಡೆಯಲಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರವು ₹11,718 ಕೋಟಿ ರೂಪಾಯಿ ಅನುದಾನವನ್ನು ಅನುಮೋದಿಸಿದೆ. ಕೋವಿಡ್‌ ನಂತರ ಅನೇಕ ವಿಳಂಬಗಳನ್ನು ಎದುರಿಸಿದ್ದ ರಾಷ್ಟ್ರೀಯ ಗಣತಿ ಪ್ರಕ್ರಿಯೆ ಇದೀಗ 2027ರಲ್ಲಿ ಪೂರ್ಣಗೊಳ್ಳಲಿದೆ.

    ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ದೇಶದ ಜನಸಂಖ್ಯೆ, ವಸತಿ ವ್ಯವಸ್ಥೆ ಮತ್ತು ಸಾಮಾಜಿಕ–ಆರ್ಥಿಕ ಸ್ಥಿತಿಯ ನಿಖರ ಚಿತ್ರಣ ನೀಡುವ ಈ ಸೆನ್ಸಸ್‌ ಭಾರತದಲ್ಲಿ ನೀತಿ–ಯೋಜನೆಗಳಿಗೆ ಮೂಲದಾಖಲೆಯಂತಿದೆ.

    ಎರಡು ಹಂತಗಳ ಡಿಜಿಟಲ್ ಜನಗಣತಿ:

    ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದಂತೆ, ಜನಗಣತಿ 2026–27 ರ ಅವಧಿಯಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ. ಈ ಬಾರಿ ಕಾಗದ–ಪೆನ್ ಪದ್ಧತಿಯ ಬದಲು ಸಂಪೂರ್ಣ ಡಿಜಿಟಲ್ ಆಧಾರಿತ ವ್ಯವಸ್ಥೆ ಅಳವಡಿಕೆಯಾಗುತ್ತಿದೆ.

    ಹಂತ I: ಮನೆ ಪಟ್ಟಿ ಮತ್ತು ವಸತಿ ಜನಗಣತಿ

    ಅವಧಿ: ಏಪ್ರಿಲ್–ಸೆಪ್ಟೆಂಬರ್ 2026

    ಪ್ರತಿಯೊಂದು ರಾಜ್ಯ/ಯುಟಿಗಳ ಅನುಕೂಲಕ್ಕೆ ಅನುಗುಣವಾಗಿ 30 ದಿನಗಳ ಅವಧಿಯಲ್ಲಿ ಕಾರ್ಯ.

    ದೇಶದ ಮನೆಗಳ ಸಂಖ್ಯೆ, ವಸತಿಯ ಗುಣಮಟ್ಟ, ಮೂಲಭೂತ ಸೌಲಭ್ಯಗಳ ಲಭ್ಯತೆ ಸೇರಿದಂತೆ ಪ್ರಮುಖ ಮಾಹಿತಿ ಸಂಗ್ರಹ.

    ಹಂತ II: ಜನಸಂಖ್ಯಾ ಗಣತಿ (Population Enumeration – PE)

    ಅವಧಿ: ಫೆಬ್ರವರಿ 2027

    ಆದರೆ ಹಿಮದಿಂದ ಆವೃತ ಪ್ರದೇಶಗಳಾದ ಜಮ್ಮು–ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿ PE ಸೆಪ್ಟೆಂಬರ್ 2026ರಲ್ಲಿ ನಡೆಯಲಿದೆ.

    ಮೊದಲ ಡಿಜಿಟಲ್ ಸೆನ್ಸಸ್ ರಿಯಲ್-ಟೈಮ್ ಮೇಲ್ವಿಚಾರಣೆ:

    ಈ ಬಾರಿ ಸಂಪೂರ್ಣ ಪ್ರಕ್ರಿಯೆ:

    ಹೊಸ Census Management and Monitoring System (CMMS) ಪೋರ್ಟಲ್ ಮೂಲಕ, ರಿಯಲ್–ಟೈಮ್ ಟ್ರ್ಯಾಕಿಂಗ್, ಉತ್ತಮ ದತ್ತಾಂಶ ಭದ್ರತಾ ವ್ಯವಸ್ಥೆ, ಕಡಿಮೆ ಮಾನವ ದೋಷಗಳು, ವೇಗವಾದ ಡೇಟಾ ಸಂಸ್ಕರಣೆ ಮತ್ತು ವರದಿ ಸಾದ್ಯವಾಗಲಿದೆ. ಈಗಾಗಲೇ ಮಾಹಿತಿ ಸುರಕ್ಷತೆ, ಡೇಟಾ ಸಂಗ್ರಹಣೆ ಮತ್ತು ಡೇಟಾ ವರ್ಗಾವಣೆ ಪ್ರಕ್ರಿಯೆ ಡಿಜಿಟಲ್ ವಿನ್ಯಾಸ ಸಿದ್ಧವಾಗಿದೆ ಎಂದು ಸಚಿವರು ತಿಳಿಸಿದರು.

    2021ರ ಜನಗಣತಿ ಮುಂದೂಡಿಕೆ ಈಗ 2027ಕ್ಕೆ:

    ಭಾರತದ ಕೊನೆಯ ಜನಗಣತಿ 2011ರಲ್ಲಿ ನಡೆದಿತ್ತು. 2021ರಲ್ಲಿ ನಡೆಯಬೇಕಿದ್ದ ಸೆನ್ಸಸ್‌ ಕೋವಿಡ್‌ ಮಹಾಮಾರಿಯಿಂದ ಮುಂದೂಡಲ್ಪಟ್ಟಿತ್ತು. ಕಳೆದ ದಶಕದಲ್ಲಿ ಜನಸಂಖ್ಯೆ, ವಲಸೆ, ನಗರೀಕರಣ ಹಾಗೂ ಸಾಮಾಜಿಕ ಬದಲಾವಣೆಗಳಲ್ಲಿ ಸಂಭವಿಸಿದ ದೊಡ್ಡ ಬದಲಾವಣೆಗಳನ್ನು ಗಮನಿಸಿದರೆ 2027ರ ಜನಗಣತಿ ಅತ್ಯಂತ ಮಹತ್ವದ್ದಾಗಿದೆ.

    ಅಧಿಕಾರಿಗಳ ನೇಮಕಾತಿ ಜನವರಿ 15ರ ಗಡುವು:

    ಜನಗಣತಿ ನಡೆಸಲು ಅಗತ್ಯವಿರುವ ಅಧಿಕಾರಿಗಳ ಮತ್ತು ಸಿಬ್ಬಂದಿಯ ನಿಯೋಜನೆ ಜನವರಿ 15, 2026ರೊಳಗೆ ಪೂರ್ಣಗೊಳಿಸಲು ಭಾರತೀಯ ನೋಂದಣಿಯ ಮಹಾನಿರ್ದೇಶನಾಲಯ (RGI) ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಮನೆ-ಮನೆಗೆ ತೆರಳಿ ಮಾಹಿತಿಯನ್ನು ದಾಖಲಿಸುವ ಈ ಅಧಿಕಾರಿಗಳೇ ಗಣತಿಯ ಮುಖ್ಯ ಅಸ್ತ್ರವಾಗಲಿದ್ದಾರೆ.

    ಬೃಹತ್ ಬಜೆಟ್, ಡಿಜಿಟಲ್ ತಂತ್ರಜ್ಞಾನ ಮತ್ತು ಸ್ಪಷ್ಟ ಹಂತಬದ್ಧ ಯೋಜನೆಯೊಂದಿಗೆ ನಡೆಯಲಿರುವ 2027ರ ಜನಗಣತಿ ಭಾರತಕ್ಕೆ ಹೊಸ ಯುಗದ ದಾರಿ.

  • ಇಂಡಿಗೋ ವಿಮಾನ ಸಮಸ್ಯೆ ರೈಲ್ವೆಯಿಂದ ಹೆಚ್ಚುವರಿ ಕೋಚ್‌ಗಳ ವ್ಯವಸ್ಥೆ

    ಇಂಡಿಗೋ ವಿಮಾನ ಸಮಸ್ಯೆ ರೈಲ್ವೆಯಿಂದ ಹೆಚ್ಚುವರಿ ಕೋಚ್‌ಗಳ ವ್ಯವಸ್ಥೆ

    ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಕಳೆದ ಕೆಲವು ದಿನಗಳಿಂದ ಏರ್ಪಟ್ಟ ಗೊಂದಲವು ಸಾವಿರಾರು ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವಿಶೇಷವಾಗಿ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋಯಲ್ಲಿ ಪೈಲಟ್‌ಗಳ ಕೊರತೆ ಉಲ್ಬಣಗೊಂಡಿದ್ದರಿಂದ ನೂರಾರು ವಿಮಾನಗಳು ರದ್ದುಗೊಂಡಿದ್ದು, ಪ್ರಯಾಣದ ಯೋಜನೆ ಮಾಡಿಕೊಂಡಿದ್ದ ಅನೇಕ ಜನರು ತಲೆಬಿಸಿಗೆ ಒಳಗಾಗಿದ್ದಾರೆ. ಹಬ್ಬ-ಜಾತ್ರೆ, ಪ್ರವಾಸ, ಉದ್ಯೋಗ ಸಂಬಂಧಿತ ಪ್ರಯಾಣಗಳ ಗರಿಷ್ಠ ಸಮಯದಲ್ಲಿ ಬಂದಿರುವ ಈ ತೊಂದರೆ ದೇಶದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ.

    ಈ ಸಂದರ್ಭದಲ್ಲಿ, ಪ್ರಯಾಣಿಕರ ಅನುಕೂಲವನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿರುವ ಭಾರತೀಯ ರೈಲ್ವೆ ಮಹತ್ವದ ಹೆಜ್ಜೆ ಇಟ್ಟಿದೆ. ವಿಮಾನ ರದ್ದುಗಳಿಂದ ಬಾಧಿತರಾಗಿರುವವರಿಗೆ ತಕ್ಷಣದ ಪರ್ಯಾಯ ಪ್ರಯಾಣ ಅವಕಾಶ ಕಲ್ಪಿಸಲು ಹಲವಾರು ಪ್ರೀಮಿಯಂ ರೈಲುಗಳಿಗೆ ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಿ ಪ್ರಯಾಣ ವ್ಯವಸ್ಥೆಯನ್ನು ಸುಧಾರಿಸಿದೆ.

    ರೈಲ್ವೆಯ ಅಧಿಕೃತ ಮಾಹಿತಿ ಪ್ರಕಾರ, ಹೆಚ್ಚಿನ ಗರಿಷ್ಠ ಬೇಡಿಕೆ ಎದುರಿಸುತ್ತಿರುವ ದೇಶದ ಪ್ರಮುಖ ನಗರಗಳಿಂದ ಪ್ರಯಾಣಿಸುವ ಒಟ್ಟು 37 ರೈಲುಗಳಿಗೆ ತಾತ್ಕಾಲಿಕ ಹೆಚ್ಚುವರಿ ಕೋಚ್‌ಗಳು ಮತ್ತು ಹೆಚ್ಚುವರಿ ಟ್ರಿಪ್‌ಗಳನ್ನು ಸೇರಿಸಲಾಗಿದೆ. ಇದರಲ್ಲಿ ಸ್ಲೀಪರ್, ಚೇರ್ ಕಾರ್, ಸೆಕೆಂಡ್ ಎಸಿ, ಮತ್ತು ಥರ್ಡ್ ಎಸಿ ಸೇರಿದಂತೆ ವಿವಿಧ ಶ್ರೇಣಿಗಳ 116 ಹೆಚ್ಚುವರಿ ಕೋಚ್‌ಗಳನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಸುಲಭವಾಗಿ ಕಾಯ್ದಿರಿಸಿದ ಟಿಕೆಟ್‌ ಸಿಗುವಂತಾಗಿದೆ.

    ಬೆಂಗಳೂರು ಮೂಲದ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಬೋಗಿಗಳು:

    ಬೆಂಗಳೂರು ನಗರದಿಂದ ದೇಶದ ವಿವಿಧ ಭಾಗಗಳಿಗೆ ಸಂಚರಿಸುವ ಕೆಲವು ಪ್ರಮುಖ ರೈಲುಗಳಲ್ಲಿ ಹೆಚ್ಚುವರಿ ಕೋಚ್‌ಗಳನ್ನು ಸೇರಿಸಲಾಗಿದೆ.

    • ಬೆಂಗಳೂರು – ಅಗರ್ತಲಾ ಹಂಸಫರ್ ಎಕ್ಸ್‌ಪ್ರೆಸ್
    • ಬೆಂಗಳೂರು – ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್
    • ಬೆಂಗಳೂರು – ಎಂಜಿಆರ್ ಚೆನ್ನೈ ಎಕ್ಸ್‌ಪ್ರೆಸ್
    • ಬೆಂಗಳೂರು – ಮಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್
    • ಬೆಂಗಳೂರು – ಮುಂಬೈ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್
    • ಬೆಂಗಳೂರು – ಚೆನ್ನೈ ಬೀಚ್ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್

    ಇಂಡಿಗೋದ ಸಂಕಷ್ಟಕ್ಕೆ ಕಾರಣವೇನು?:

    ಭಾರತದ ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ. 60 ಕ್ಕಿಂತ ಹೆಚ್ಚು ಪಾಲು ಹೊಂದಿರುವ ಇಂಡಿಗೋ, ಪೈಲಟ್‌ಗಳ ತೀವ್ರ ಕೊರತೆಯಿಂದಾಗಿ ಕಾರ್ಯಾಚರಣೆಯಲ್ಲಿ ಅಡಚಣೆ ಅನುಭವಿಸುತ್ತಿದೆ. ಇದರಿಂದ ನಿರಂತರವಾಗಿ ವಿಮಾನಗಳು ರದ್ದುಗೊಳ್ಳುತ್ತಿದ್ದು, ಪ್ರಯಾಣಿಕರ ಬೇಸರ ಹೆಚ್ಚುತ್ತಿದೆ. ವಿಮಾನ ನಿಲ್ದಾಣಗಳಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದು, ಬದಲಿ ವ್ಯವಸ್ಥೆಗಾಗಿ ಜನರು ಹಾತೊರೆಯುತ್ತಿದ್ದಾರೆ.

    ಪ್ರಯಾಣಿಕರ ಕಷ್ಟವನ್ನು ಮನಗಂಡ ಭಾರತೀಯ ರೈಲ್ವೆ, ತ್ವರಿತ ನೆರವಿನೊಂದಿಗೆ ಸುಧಾರಿತ ಮತ್ತು ಸುರಕ್ಷಿತ ಪ್ರಯಾಣ ಮಾರ್ಗವನ್ನು ಒದಗಿಸಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ದೊಡ್ಡ ಪರಿಹಾರವಾಗಿದೆ. ಇನ್ನೊಂದು ಕಡೆ, ಇಂಡಿಗೋ ತನ್ನ ಕಾರ್ಯಾಚರಣೆಯನ್ನು ಶೀಘ್ರ ಸುಧಾರಿಸುವ ನಿರೀಕ್ಷೆಯಿದೆ.

  • ಕೆಲಸದ ನಂತರ ಸಂಪರ್ಕ ಕಡಿತಗೊಳಿಸುವ ಹಕ್ಕು ಮಂಡನೆ!

    ಕೆಲಸದ ನಂತರ ಸಂಪರ್ಕ ಕಡಿತಗೊಳಿಸುವ ಹಕ್ಕು ಮಂಡನೆ!

    ಆಧುನಿಕ ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮತ್ತು ವೈಯಕ್ತಿಕ ಜೀವನದ ಗಡಿಗಳು ನಿಧಾನವಾಗಿ ಬಗೆಹರಿಯುತ್ತಿವೆ. ಡಿಜಿಟಲ್ ತಂತ್ರಜ್ಞಾನಗಳ ಬಳಕೆ ಹೆಚ್ಚಾಗುತ್ತಿದ್ದಂತೆ, ಉದ್ಯೋಗಿಗಳು ಅಧಿಕೃತ ಕೆಲಸದ ಅವಧಿ ಮುಗಿದರೂ ಕೆಲಸಕ್ಕೆ ಸಂಬಂಧಿಸಿದ ಕರೆಗಳು, ಇಮೇಲ್‌ಗಳು ಹಾಗೂ ಆನ್‌ಲೈನ್‌ ಸಭೆಗಳ ಮೂಲಕ ನಿರಂತರವಾಗಿ ಸಂಪರ್ಕದಲ್ಲಿರಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಉದ್ಯೋಗಿಗಳ ಆರೋಗ್ಯ, ಕುಟುಂಬ-ಸಮಾಜ ಜೀವನ ಹಾಗೂ ಮಾನಸಿಕ ಸಮತೋಲನಕ್ಕೆ ಹಾನಿಯಾಗುತ್ತಿರುವುದು ಹಲವು ಅಧ್ಯಯನಗಳಿಂದ ದೃಢವಾಗಿದೆ.

    ಈ ಹಿನ್ನೆಲೆಯಲ್ಲಿ, ಕೆಲಸದ ಸಮಯದ ಹೊರಗೆ ಉದ್ಯೋಗಿಗಳಿಗೆ ಸಂಪರ್ಕ ಕಡಿತಗೊಳಿಸುವ ಹಕ್ಕು(Right to Disconnect) ನೀಡುವ ಉದ್ದೇಶದಿಂದ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಸಂಸತ್ತಿನಲ್ಲಿ ಒಂದು ಮಹತ್ವದ ಖಾಸಗಿ ಮಸೂದೆ (Private Bill) ಮಂಡಿಸಿದ್ದಾರೆ.

    ಮಸೂದೆಯ ಮುಖ್ಯ ಅಂಶಗಳು:

    ಅಧಿಕೃತ ಕೆಲಸದ ಅವಧಿ ಮುಗಿದ ನಂತರ ಹಾಗೂ ರಜೆಗಳ ವೇಳೆ ಕಂಪನಿ ಕರೆಗಳು ಮತ್ತು ಇಮೇಲ್‌ಗಳಿಗೆ ಪ್ರತಿಕ್ರಿಯಿಸದಿರುವ ಹಕ್ಕು ಉದ್ಯೋಗಿಗಳಿಗೆ ದೊರೆಯಬೇಕು.

    ಉದ್ಯೋಗಿಗಳ ಅಭ್ಯುದಯ, ಕೆಲಸದ ಒತ್ತಡ ನಿಯಂತ್ರಣ ಹಾಗೂ ಆರೈಕೆಗೆ ನೌಕರರ ಕಲ್ಯಾಣ ಪ್ರಾಧಿಕಾರ (Employee Welfare Authority) ರಚನೆ.

    ಕೆಲಸದ ಅನುಕೂಲತೆ ಮತ್ತು ಮಾನಸಿಕ ಆರೋಗ್ಯವನ್ನು ರಕ್ಷಿಸುವ ಪ್ರಾಥಮಿಕ ಗುರಿ.

    ಖಾಸಗಿ ಮಸೂದೆ ಎಂದರೇನು?:

    ಸಚಿವರಲ್ಲದ ಸಂಸತ್ ಸದಸ್ಯರು ಮಂಡಿಸುವ ಮಸೂದೆಗೆ ಖಾಸಗಿ ಮಸೂದೆ ಎಂದು ಕರೆಯಲಾಗುತ್ತದೆ.

    • ಇವು ಸರ್ಕಾರಿ ಮಸೂದೆಗಳಿಗಿಂತ ಭಿನ್ನವಾಗಿದ್ದು,
    • ಸರ್ಕಾರದಿಂದ ನೇರವಾಗಿ ಪ್ರಸ್ತಾಪವಾಗುವುದಿಲ್ಲ.

    ಸಾಮಾನ್ಯವಾಗಿ ನಿರ್ದಿಷ್ಟ ಸಮಸ್ಯೆ, ಗುಂಪು ಅಥವಾ ಪ್ರದೇಶಕ್ಕೆ ಸಂಬಂಧಿತ ಕಾನೂನು ಬದಲಾವಣೆ ಅಥವಾ ಹೊಸ ಕಾನೂನು ಪ್ರಸ್ತಾಪವಾಗಿರುತ್ತದೆ.

    ಇದನ್ನು ಅಂಗೀಕರಿಸುವ ವಿಧಾನವು ಸರ್ಕಾರಿ ಮಸೂದೆಗಳ ಹಾಗೆಯೇ ಕಠಿಣ ಮತ್ತು ದೀರ್ಘ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ.

    ಮಾನ್ಯತೆ ದೊರೆಯುವ ಸಾಧ್ಯತೆ?:

    ಭಾರತೀಯ ಸಂಸತ್ತಿನ ಅನುಭವ ಹೇಳುವು ಪ್ರಕಾರ, ಬಹುಪಾಲು ಖಾಸಗಿ ಮಸೂದೆಗಳು ಚರ್ಚೆಯ ಮಟ್ಟದಲ್ಲೇ ನಿಲ್ಲುತ್ತವೆ. ಸರ್ಕಾರ ತನ್ನ ಅಭಿಪ್ರಾಯವನ್ನು ನೀಡಿದ ನಂತರ

    ಸದಸ್ಯರು ಸ್ವಯಂ ಮಸೂದೆಯನ್ನು ಹಿಂತೆಗೆದುಕೊಳ್ಳುವ ಸಂದರ್ಭಗಳು ಸಾಮಾನ್ಯ. ಆದ್ದರಿಂದ, ಈ ಮಸೂದೆಯೂ ಅಂಗೀಕರಿಸಿಕೊಳ್ಳುವ ಅವಕಾಶ ಬಹಳ ಕಡಿಮೆ ಎಂಬುದು ತಜ್ಞರ ಅಂದಾಜು.

  • ಜೈಪುರದಲ್ಲಿ ಕುಡಿದ ಟ್ರಕ್ ಚಾಲಕನ ಅಬ್ಬರಕ್ಕೆ 19 ಮಂದಿ ಬಲಿ!

    ಜೈಪುರದಲ್ಲಿ ಕುಡಿದ ಟ್ರಕ್ ಚಾಲಕನ ಅಬ್ಬರಕ್ಕೆ 19 ಮಂದಿ ಬಲಿ!

    ಜೈಪುರ : ರಾಜಸ್ಥಾನದ ಹೃದಯಭಾಗವಾದ ಜೈಪುರದಲ್ಲಿ ಸೋಮವಾರ ರಾತ್ರಿ ನಡೆದ ಘಟನೆಯೊಂದು ನೂರಾರು ಕಣ್ಣೀರನ್ನು ತರಿಸಿದೆ. ಮದ್ಯದ ಮತ್ತಿನಲ್ಲಿ ನಿಯಂತ್ರಣ ಕಳೆದುಕೊಂಡ ಡಂಪರ್ ಟ್ರಕ್ ಚಾಲಕನೊಬ್ಬ, ಬರೋಬ್ಬರಿ ಐದು ಕಿಲೋಮೀಟರ್ ದೂರವರೆಗೆ ಅಬ್ಬರಿಸಿದ ಪರಿಣಾಮ, 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಂದು ಕಡೆ ಐವತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಜೀವ–ಮರಣ ಹೋರಾಟ ನಡೆಸುತ್ತಿದ್ದಾರೆ.

    ಲೋಹಮಂಡಿ ರಸ್ತೆಯೆಂಬ ಜೈಪುರದ ಬ್ಯುಸಿ ಮಾರ್ಗದಲ್ಲಿ ಈ ಭೀಕರ ಸರಣಿ ಅಪಘಾತ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಟ್ರಕ್ ಚಾಲಕ ಕುಡಿದ ಮತ್ತಿನಲ್ಲಿ ಅಡ್ಡಾಡಿದ್ದಿ ಬಂದಿದ್ದ. ಒಂದು ವಾಹನಕ್ಕೆ ಡಿಕ್ಕಿ ಹೊಡೆದು ನಿಲ್ಲುವ ಬದಲು, ನೇರವಾಗಿ ಇನ್ನೊಂದು ಗಾಡಿಗೆ ಅಪ್ಪಳಿಸುತ್ತಾ ಮುಂದುವರಿದ. ಕೆಲವೇ ಕ್ಷಣಗಳಲ್ಲಿ ರಸ್ತೆ ನರಮೇಧಕ್ಕೆ ಕಣವಾಗಿತ್ತು, ಕಾರುಗಳ ಅವಶೇಷಗಳು, ಬೈಕ್‌ಗಳ ತುಂಡುಗಳು, ಚೂರುಚೂರು ಗಾಜುಗಳು, ರಕ್ತದ ಗುರುತುಗಳು ಎಲ್ಲೆಡೆ ಅಳಲು ಮತ್ತು ಆಕ್ರಂದನದ ವಾತಾವರಣ ಸೃಷ್ಟಿಯಾಯಿತು.

    ಆಘಾತಕಾರಿ ದೃಶ್ಯವನ್ನು ಕಂಡ ಜನರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಕೆಲವು ನಿಮಿಷಗಳಲ್ಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕಾಗಮಿಸಿ, ನಜ್ಜುಗುಜ್ಜಾದ ವಾಹನಗಳಡಿ ಸಿಲುಕಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಿ ಅನೇಕರ ಜೀವ ಉಳಿಯಲಿಲ್ಲ. “ಆ ಟ್ರಕ್ ನಿಲ್ಲುತ್ತಿಲ್ಲವೆಂದು ಎಲ್ಲರೂ ಕಿರುಚುತ್ತಿದ್ದೆವು. ಆದರೆ ಚಾಲಕನಿಗೆ ಬುದ್ಧಿಯೇ ಇರಲಿಲ್ಲ” ಎಂದು ಒಬ್ಬ ಪ್ರತ್ಯಕ್ಷದರ್ಶಿ ಕಣ್ಣೀರು ತಡೆದುಕೊಂಡು ಹೇಳಿದ್ದಾನೆ.

    ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿದ್ದು, ಅವನು ತೀವ್ರ ಮದ್ಯಪಾನ ಮಾಡಿದ್ದನೆಂಬುದು ದೃಢಪಟ್ಟಿದೆ. ವೈದ್ಯಕೀಯ ವರದಿ ಕೂಡ ಅದನ್ನೇ ದೃಢಪಡಿಸುತ್ತಿದೆ. ಈ ಘಟನೆಯ ನಂತರ ಜೈಪುರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, “ಕುಡಿದ ಚಾಲಕರಿಗೆ ಕಟ್ಟುನಿಟ್ಟಿನ ಶಿಕ್ಷೆ ಕೊಡಬೇಕು” ಎಂಬ ಬೇಡಿಕೆ ಕೇಳಿ ಬಂದಿದೆ.

    ಈ ದುರ್ಘಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ. “ಜೈಪುರದಲ್ಲಿ ಸಂಭವಿಸಿದ ಈ ದುರಂತದಿಂದ ನನಗೆ ತೀವ್ರ ನೋವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪ, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ” ಎಂದು ತಿಳಿಸಿದ್ದಾರೆ. ಜೊತೆಗೆ ಪ್ರಧಾನಿ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಮತ್ತು ಗಾಯಾಳುಗಳಿಗೆ ₹50,000 ಪರಿಹಾರವನ್ನು ಘೋಷಿಸಲಾಗಿದೆ.

    ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಸಹ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿ, ಅಧಿಕಾರಿಗಳಿಗೆ ಸಂತ್ರಸ್ತರಿಗೆ ತಕ್ಷಣದ ನೆರವು ನೀಡಲು ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಬಲಪಡಿಸಲು ಸೂಚನೆ ನೀಡಿದ್ದಾರೆ.

  • ನ. 28ರಂದು ಪ್ರಧಾನಿ ಮೋದಿ ಉಡುಪಿಗೆ ಭೇಟಿ ಮತ್ತು ಶ್ರೀಕೃಷ್ಣನ ದರ್ಶನ

    ನ. 28ರಂದು ಪ್ರಧಾನಿ ಮೋದಿ ಉಡುಪಿಗೆ ಭೇಟಿ ಮತ್ತು ಶ್ರೀಕೃಷ್ಣನ ದರ್ಶನ

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 28ರಂದು ಉಡುಪಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ ವೇಳೆಗೆ ಅವರು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದು, ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.

    ಗೀತಾ ಜಯಂತಿಯ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಆಯೋಜಿಸಲಾದ “ಲಕ್ಷ ಕಂಠ ಗೀತಾ ಪಾರಾಯಣ ಬೃಹತ್ ಗೀತೋತ್ಸವ” ಎಂಬ ಮಹಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮೋದಿಯವರು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಮತ್ತು ವಿದ್ಯಾರ್ಥಿಗಳು ಗೀತೆಯ ಶ್ಲೋಕಗಳನ್ನು ಸಮೂಹವಾಗಿ ಪಠಿಸಲಿದ್ದಾರೆ.

    ಪ್ರಧಾನಮಂತ್ರಿಯವರ ಈ ಭೇಟಿಯ ಹಿನ್ನೆಲೆ ಉಡುಪಿಯ ಶ್ರೀಕೃಷ್ಣ ಮಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಕಠಿಣಗೊಳಿಸಲಾಗಿದೆ. ಪೊಲೀಸ್ ಇಲಾಖೆ ಮತ್ತು ಕೇಂದ್ರ ಭದ್ರತಾ ಪಡೆಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು, ವಿಶೇಷ ಸುರಕ್ಷತಾ ಕ್ರಮಗಳನ್ನು ಕೈಗೊಂಡಿವೆ.

    ಮಠದ ಮೂಲಗಳ ಪ್ರಕಾರ, ಪ್ರಧಾನಿ ಮೋದಿ ಅವರು ಮಧ್ಯಾಹ್ನ ಸುಮಾರು 12 ಗಂಟೆ ಸುಮಾರಿಗೆ ಉಡುಪಿಗೆ ಆಗಮಿಸಲಿದ್ದಾರೆ. ದೇವರ ದರ್ಶನದ ನಂತರ ಅವರು ಪ್ರಸಾದ ಸ್ವೀಕರಿಸಿ, ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಹಲವು ಧಾರ್ಮಿಕ ಮತ್ತು ಸಾಮಾಜಿಕ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.

    ಈ ಭೇಟಿ ಪ್ರಧಾನಿಯಾಗಿದ್ದ ಬಳಿಕ ಮೋದಿಯವರ ಮೊದಲ ಉಡುಪಿ ಪ್ರವಾಸವಾಗಿದ್ದು, ಇದರಿಂದ ಶ್ರೀಕೃಷ್ಣ ಮಠದಲ್ಲಿ ವಿಶೇಷ ಚೈತನ್ಯ ಮೂಡಿದೆ. 2013ರಲ್ಲಿ ಅವರು ಗುಜರಾತ್ ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದಾಗ ಪುತ್ತಿಗೆ ಪರ್ಯಾಯದ ಸಂದರ್ಭದಲ್ಲಿ ಮಠಕ್ಕೆ ಭೇಟಿ ನೀಡಿದ್ದರು. ಈಗ ಸುಮಾರು ಒಂದು ದಶಕದ ಬಳಿಕ ಅವರು ಮತ್ತೆ ಶ್ರೀಕೃಷ್ಣನ ನಾಡಿಗೆ ಕಾಲಿಡಲಿದ್ದಾರೆ.

    ವಿಶ್ವ ಗೀತಾ ಪರ್ಯಾಯದ ಅಂಗವಾಗಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೈಗೊಂಡಿದ್ದ “ಕೋಟಿ ಗೀತಾ ಲೇಖನ ಯಜ್ಞ” ಮತ್ತು ಗೀತಾ ಪ್ರಚಾರ ಕಾರ್ಯವನ್ನು ಪ್ರಧಾನಿ ಮೋದಿ ಮೆಚ್ಚಿಕೊಂಡು, ಮೊದಲು ಅಭಿನಂದನಾ ಪತ್ರ ಕಳಿಸಿದ್ದರು. ಇದೀಗ ಅವರು ಸ್ವತಃ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮಠದ ಪರಂಪರೆಯ ಗೌರವವನ್ನು ಮತ್ತಷ್ಟು ಹೆಚ್ಚಿಸುವಂತಾಗಿದೆ.

    ಪ್ರಧಾನಮಂತ್ರಿಯವರ ಆಗಮನಕ್ಕೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತ, ಮಠದ ಅಧಿಕಾರಿಗಳು ಮತ್ತು ಭಕ್ತವೃಂದ ಈಗಾಗಲೇ ಸಜ್ಜಾಗಿದ್ದು, ಉಡುಪಿಯು ಧಾರ್ಮಿಕ ಉತ್ಸವದ ನೋಟ ಪಡೆದುಕೊಂಡಿದೆ. ಭದ್ರತಾ ಕ್ರಮಗಳು, ಸಂಚಾರ ನಿಯಂತ್ರಣ ಮತ್ತು ಅತಿಥಿಗಳ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡಲು ಅಧಿಕಾರಿಗಳು ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ.

    ನವೆಂಬರ್ 28ರ ಈ ಭೇಟಿಯು ಕೇವಲ ರಾಜಕೀಯ ಅಥವಾ ಅಧಿಕೃತ ಪ್ರಯಾಣವಲ್ಲ, ಆತ್ಮೀಯ ಮತ್ತು ಧಾರ್ಮಿಕ ಭಾವನೆಯನ್ನು ಹೊತ್ತಿರುವ ವಿಶೇಷ ದಿನವಾಗಲಿದೆ ಎಂದು ಮಠದ ವೃತ್ತಪತ್ರಿಕೆಗಳು ತಿಳಿಸಿವೆ.

  • ಕೋಟ್ಯಂತರ ಭಕ್ತರ ಕನಸಾಗಿರುವ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣ

    ಕೋಟ್ಯಂತರ ಭಕ್ತರ ಕನಸಾಗಿರುವ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣ

    ಶತಮಾನಗಳಿಂದ ಕೋಟ್ಯಂತರ ಭಕ್ತರ ಕನಸಾಗಿದ್ದ ಅಯೋಧ್ಯೆಯ ಶ್ರೀರಾಮ ಮಂದಿರ ಇದೀಗ ಸಂಪೂರ್ಣ ರೂಪ ಪಡೆದುಕೊಂಡಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಟಿಸಿದ ಅಧಿಕೃತ ಮಾಹಿತಿಯ ಪ್ರಕಾರ, ಮುಖ್ಯ ಮಂದಿರ ಸೇರಿದಂತೆ ಆರು ಉಪಮಂದಿರಗಳ ನಿರ್ಮಾಣ ಕಾರ್ಯವೂ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ತಿಳಿಸಿದೆ.

    ಟ್ರಸ್ಟ್ ತನ್ನ ಎಕ್ಸ್ ಖಾತೆಯ ಮೂಲಕ ಪ್ರಕಟಣೆ ನೀಡಿದ್ದು, “ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಪೂರ್ಣಗೊಂಡಿದೆ ಎಂದು ಪ್ರಭು ಶ್ರೀರಾಮನ ಭಕ್ತರಿಗೆ ತಿಳಿಸಲು ನಮಗೆ ಅಪಾರ ಸಂತೋಷವಾಗುತ್ತಿದೆ” ಎಂದು ಹೇಳಿದೆ. ಭಗವಾನ್ ಶ್ರೀರಾಮನ ಮುಖ್ಯ ಮಂದಿರದ ಜೊತೆಗೆ ಮಹಾದೇವ, ಗಣೇಶ, ಹನುಮಾನ್, ಸೂರ್ಯದೇವ, ಮಾ ಭಗವತಿ, ಮಾ ಅನ್ನಪೂರ್ಣ ಮತ್ತು ಶೇಷಾವತಾರ ಮಂದಿರಗಳಿಗೂ ಕಲಶ ಹಾಗೂ ಧ್ವಜಾರೋಹಣ ಕಾರ್ಯಗಳು ಯಶಸ್ವಿಯಾಗಿ ಮುಗಿದಿವೆ.

     

    ಇದಷ್ಟೇ ಅಲ್ಲದೆ, ಋಷಿ ವಾಲ್ಮೀಕಿ, ಋಷಿ ವಶಿಷ್ಠ, ಋಷಿ ವಿಶ್ವಾಮಿತ್ರ, ಋಷಿ ಅಗಸ್ತ್ಯ, ನಿಷಾದರಾಜ, ಶಬರಿ ಮತ್ತು ದೇವಿ ಅಹಲ್ಯಾ ಅವರಿಗೆ ಸಮರ್ಪಿತವಾದ ಏಳು ಮಂಟಪಗಳೂ ಕೂಡ ನಿರ್ಮಾಣಗೊಂಡಿವೆ. ಭಕ್ತಕವಿ ತುಳಸಿದಾಸರ ಸ್ಮರಣಾರ್ಥ ನಿರ್ಮಿಸಲಾದ ಸಂತ ತುಳಸಿದಾಸ ಮಂದಿರವೂ ಅದ್ಧೂರಿಯಾಗಿ ಸಿದ್ಧವಾಗಿದೆ. ಅಲ್ಲದೆ ರಾಮಾಯಣದ ಅಮರ ಪಾತ್ರಗಳಾದ ಜಟಾಯು ಮತ್ತು ಅಳಿಲಿನ ಪ್ರತಿಮೆಗಳನ್ನು ಅಲಂಕರಿಸಲಾಗಿದ್ದು, ಸ್ಥಳದ ಆಧ್ಯಾತ್ಮಿಕ ಭಾವನೆಗೆ ಮತ್ತಷ್ಟು ತೇಜಸ್ಸು ನೀಡಿದೆ.

    ಭಕ್ತರ ಸೌಲಭ್ಯಕ್ಕಾಗಿ ಟ್ರಸ್ಟ್ ಅನೇಕ ವ್ಯವಸ್ಥೆಗಳನ್ನು ಪೂರ್ಣಗೊಳಿಸಿದೆ. ರಸ್ತೆ ನಿರ್ಮಾಣ, ಕಲ್ಲಿನ ನೆಲಹಾಸು ಹಾಗೂ ಸುಸಜ್ಜಿತ ಸೌಕರ್ಯಗಳನ್ನು ಎಲ್ & ಟಿ ಕಂಪನಿ ನಿರ್ವಹಿಸುತ್ತಿದೆ. ಮಂದಿರದ ಸುತ್ತಮುತ್ತ ಹಸಿರುಮಯ ವಾತಾವರಣ ನಿರ್ಮಿಸಲು 10 ಎಕರೆ ವಿಸ್ತೀರ್ಣದ “ಪಂಚವಟಿ”ಯ ಅಭಿವೃದ್ಧಿ ಕಾರ್ಯವೂ ವೇಗವಾಗಿ ಸಾಗುತ್ತಿದೆ. ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರು ವನವಾಸದ ಸಮಯದಲ್ಲಿ ನೆಲೆಸಿದ್ದ ಪವಿತ್ರ ಸ್ಥಳದ ಸ್ಮರಣಾರ್ಥ ಈ ಪಂಚವಟಿ ಅಭಿವೃದ್ಧಿಗೊಳಿಸಲಾಗಿದೆ.

    ಇನ್ನು 3.5 ಕಿಲೋಮೀಟರ್ ಉದ್ದದ ತಡೆಗೋಡೆ, ಟ್ರಸ್ಟ್ ಕಚೇರಿ, ಅತಿಥಿಗೃಹ ಮತ್ತು ಸಭಾಂಗಣಗಳ ನಿರ್ಮಾಣ ಕಾರ್ಯ ಮಾತ್ರ ಇನ್ನೂ ಮುಂದುವರಿದಿದೆ.

    ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಆಗಮಿಸಿ, ಶ್ರೀರಾಮ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಮಹತ್ವದ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ವರ್ಗಗಳಿಂದ ಸುಮಾರು 6,000 ರಿಂದ 8,000 ಮಂದಿ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಪ್ರಧಾನಿಯವರು ಮಂದಿರದ ಮೊದಲ ಮಹಡಿಯಲ್ಲಿ ನಿರ್ಮಿಸಲಾದ ರಾಮ ಪರಿವಾರದಲ್ಲಿ ಆರತಿ ನೆರವೇರಿಸಿ ದೇವಾಲಯದ ಧ್ವಜಾರೋಹಣ ಮಾಡುವರು ಎಂದು ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.

  • ಗಲ್ಲು ಶಿಕ್ಷೆಗೆ ಪರ್ಯಾಯ ಚರ್ಚೆ: ಸುಪ್ರೀಂ ಕೋರ್ಟ್‌ನಲ್ಲಿ ವಿಷದ ಚುಚ್ಚುಮದ್ದು ವಿಧಾನ ವಿಚಾರಣೆ

    ಗಲ್ಲು ಶಿಕ್ಷೆಗೆ ಪರ್ಯಾಯ ಚರ್ಚೆ: ಸುಪ್ರೀಂ ಕೋರ್ಟ್‌ನಲ್ಲಿ ವಿಷದ ಚುಚ್ಚುಮದ್ದು ವಿಧಾನ ವಿಚಾರಣೆ

    ಭಾರತದಲ್ಲಿ ಮರಣದಂಡನೆ ಎಂದರೆ ಸಾಮಾನ್ಯವಾಗಿ ಮನಸ್ಸಿಗೆ ಬರುವ ಚಿತ್ರ ಗಲ್ಲಿಗೇರಿಸುವುದು. ಈ ದೃಶ್ಯವು ಕೇವಲ ನ್ಯಾಯದ ಬಲವಾದ ಹಂತವಲ್ಲ, ಮಾನವೀಯ ಮೌಲ್ಯಗಳ ಪರೀಕ್ಷೆಯೂ ಹೌದು. ಕೊಲೆ, ಅತ್ಯಾಚಾರ, ಭಯೋತ್ಪಾದನೆ, ಸಾಮೂಹಿಕ ದೌರ್ಜನ್ಯ ಮುಂತಾದ ಭೀಕರ ಅಪರಾಧಗಳಿಗೆ ಮರಣದಂಡನೆ ವಿಧಿಸುವುದು ನ್ಯಾಯಾಂಗದ ಭಾಗವಾಗಿದ್ದರೂ, ಅಪರಾಧಿಯ ಜೀವವನ್ನು ಕೊನೆಗಾಣಿಸುವ ವಿಧಾನದಲ್ಲಿ ಮಾನವೀಯತೆ ಇರಬೇಕೇ? ಎಂಬ ಪ್ರಶ್ನೆ ಇತ್ತೀಚೆಗೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

    ಭಾರತದ ಸುಪ್ರೀಂ ಕೋರ್ಟ್ ಇದೀಗ ಇದೇ ವಿಷಯದ ಕುರಿತು ಗಂಭೀರವಾಗಿ ಚಿಂತನೆ ಆರಂಭಿಸಿದೆ, ಗಲ್ಲು ಶಿಕ್ಷೆಯ ಬದಲು ವಿಷದ ಚುಚ್ಚುಮದ್ದು (lethal injection) ಅಥವಾ ನೋವಿಲ್ಲದ ಇತರ ವಿಧಾನಗಳನ್ನು ಅಳವಡಿಸಬೇಕೇ ಎಂಬ ವಿಚಾರದಲ್ಲಿ ನ್ಯಾಯಾಂಗದ ನಿಲುವು ಚರ್ಚೆಗೆ ಗ್ರಾಸವಾಗಿದೆ.

    ಮರಣದಂಡನೆ ಎಂದರೇನು?
    ಮರಣದಂಡನೆ ಎಂದರೆ ನ್ಯಾಯಾಲಯವು ಒಬ್ಬ ಅಪರಾಧಿಗೆ ವಿಧಿಸುವ ಅಂತಿಮ ಶಿಕ್ಷೆ. ಭಾರತದಲ್ಲಿ ಇದು ಸಾಮಾನ್ಯವಾಗಿ ಗಲ್ಲು ಶಿಕ್ಷೆಯ ರೂಪದಲ್ಲಿ ಜಾರಿಯಲ್ಲಿದೆ. ಕೊಲೆ, ಅತ್ಯಾಚಾರ, ಭಯೋತ್ಪಾದನೆ, ಮಕ್ಕಳ ಮೇಲಿನ ಕ್ರೂರ ದೌರ್ಜನ್ಯ, ಸರಕಾರದ ವಿರುದ್ಧ ದಂಗೆ, ಮಾದಕ ವಸ್ತು ಕಳ್ಳಸಾಗಣೆ ಮತ್ತು ಸೇನಾ ದ್ರೋಹ ಮುಂತಾದ ಅಪರಾಧಗಳಿಗೆ ಮರಣದಂಡನೆ ವಿಧಿಸಬಹುದು. ಅಲ್ಲದೆ, ಸುಳ್ಳು ಸಾಕ್ಷಿಯಿಂದ ನಿರಪರಾಧಿಯು ಮರಣದಂಡನೆಗೆ ಗುರಿಯಾದರೆ, ಆ ಸುಳ್ಳು ಸಾಕ್ಷಿ ನೀಡಿದ ವ್ಯಕ್ತಿಗೂ ಇದೇ ಶಿಕ್ಷೆ ವಿಧಿಸಬಹುದು.

    ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಚರ್ಚೆ:
    ಬ್ರಿಟಿಷರ ಕಾಲದಿಂದಲೂ ಭಾರತದಲ್ಲಿ ಗಲ್ಲು ಶಿಕ್ಷೆ ಸಾಂಪ್ರದಾಯಿಕವಾಗಿ ಮುಂದುವರಿದಿದೆ. ಆದರೆ ಈಗ ವಿಶ್ವದ ಅನೇಕ ರಾಷ್ಟ್ರಗಳು ಮರಣದಂಡನೆಗೆ ಮಾನವೀಯ ಪರ್ಯಾಯ ಮಾರ್ಗಗಳನ್ನು ಹುಡುಕಿವೆ. ಈ ಹಿನ್ನೆಲೆಯಲ್ಲಿ ಕೆಲ ಸಾರ್ವಜನಿಕರು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ, ಗಲ್ಲು ಶಿಕ್ಷೆಯ ಬದಲಿಗೆ ವಿಷದ ಚುಚ್ಚುಮದ್ದು, ಗುಂಡು ಹಾರಿಸುವುದು, ವಿಷ ಅನಿಲ ಅಥವಾ ವಿದ್ಯುತ್ ಪ್ರಹಾರದಿಂದ ಶಿಕ್ಷೆ ನೀಡುವ ಆಯ್ಕೆಯನ್ನು ನೀಡಬಹುದು ಎಂದು ಮನವಿ ಮಾಡಿದ್ದಾರೆ.

    ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ವಿಚಾರದಲ್ಲಿ ತಾತ್ವಿಕ ಸತ್ಯವಿದೆ ಎಂದು ಗಮನಿಸಿದೆ. ನೇಣು ಹಾಕುವ ವಿಧಾನದಲ್ಲಿ ವ್ಯಕ್ತಿಯ ತೂಕ, ಎತ್ತರ ಅಥವಾ ದೇಹದ ಸ್ಥಿತಿಯನ್ನು ಪರಿಗಣಿಸದೆ ಒಂದೇ ರೀತಿಯ ಕ್ರಮ ಅನುಸರಿಸಲಾಗುತ್ತದೆ. ಇದರಿಂದ ಕೆಲವು ಕೈದಿಗಳು ನಾಲ್ವತ್ತು ನಿಮಿಷಗಳವರೆಗೆ ನರಕಯಾತನೆ ಅನುಭವಿಸುತ್ತಾರೆ ಎಂಬುದನ್ನು ಕೋರ್ಟ್ ಉಲ್ಲೇಖಿಸಿದೆ. ಆದಾಗ್ಯೂ, ಕೇಂದ್ರ ಸರ್ಕಾರ ಈ ಬದಲಾವಣೆಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಕೋರ್ಟ್ ಹೇಳಿದೆ.

    ಗಲ್ಲು ಶಿಕ್ಷೆಯ ವಿಧಾನ:
    ಅಪರಾಧಿಯನ್ನು ಗಲ್ಲಿಗೆ ಏರಿಸುವ ಮುನ್ನಾ ದಿನ ಅಧಿಕಾರಿಗಳು ಪರೀಕ್ಷೆ ನಡೆಸುತ್ತಾರೆ. ಕೈದಿಯ ತೂಕದಷ್ಟೇ ಮರಳು ತುಂಬಿದ ಚೀಲವನ್ನು ನೇತು ಹಾಕಿ ಹಗ್ಗದ ಬಲ ಪರೀಕ್ಷಿಸುತ್ತಾರೆ. ಬಳಿಕ ಕೈದಿಯ ಎತ್ತರಕ್ಕೆ ತಕ್ಕಂತೆ ಹಗ್ಗದ ಉದ್ದವನ್ನು ನಿಗದಿಪಡಿಸಲಾಗುತ್ತದೆ. ಆದರೆ ನೇಣು ಹಾಕಿದ ಕ್ಷಣದಲ್ಲೇ ಪ್ರಾಣ ಹೋಗುವುದಿಲ್ಲ, ಉಸಿರಾಟ ನಿಲ್ಲಲು ಸುಮಾರು 30–40 ನಿಮಿಷ ಬೇಕಾಗುತ್ತದೆ. ಇದರಿಂದಲೇ ಈ ಕ್ರಮವನ್ನು ಅಮಾನವೀಯ ಎಂದು ವಿಮರ್ಶಿಸಲಾಗಿದೆ.

    ವಿಷದ ಚುಚ್ಚುಮದ್ದು ವಿಧಾನ:
    ವಿಷದ ಚುಚ್ಚುಮದ್ದು ವಿಧಾನದಲ್ಲಿ ಮರಣದಂಡನೆ ಅತಿ ಕಡಿಮೆ ಯಾತನೆಯೊಂದಿಗೆ ಜಾರಿಗೊಳ್ಳುತ್ತದೆ. ಅಪರಾಧಿಯನ್ನು ಮಂಚದ ಮೇಲೆ ಮಲಗಿಸಿ ಹಗ್ಗಗಳಿಂದ ಕಟ್ಟಲಾಗುತ್ತದೆ. ಬಳಿಕ ಅಧಿಕಾರಿಗಳ ಸಮಕ್ಷಮದಲ್ಲಿ ಮೂರು ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ,
    ಅರಿವಳಿಕೆ ಮದ್ದು – ಅಪರಾಧಿಯನ್ನು ನಿದ್ರೆಗೆ ಜಾರಿಸುತ್ತದೆ.
    ಪ್ಯಾನ್‌ಕುರೋನಿಯಮ್ ಬೋಮೈಡ್ – ನರಗಳು ಮತ್ತು ಸ್ನಾಯುಗಳನ್ನು ಅಚಲಗೊಳಿಸುತ್ತದೆ.
    ಪೊಟ್ಯಾಸಿಯಮ್ ಕ್ಲೋರೈಡ್ – ಹೃದಯ ಬಡಿತವನ್ನು ನಿಲ್ಲಿಸುತ್ತದೆ.
    ಈ ಪ್ರಕ್ರಿಯೆ ಸುಮಾರು 10–15 ನಿಮಿಷಗಳಲ್ಲಿ ನೋವಿಲ್ಲದೆ ಜೀವಹರಣ ಮಾಡುತ್ತದೆ. ಅಮೆರಿಕಾ, ಚೀನಾ, ತೈವಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಇದೇ ವಿಧಾನ ಅಳವಡಿಸಲಾಗಿದೆ.

    ಗಲ್ಲು ಶಿಕ್ಷೆಯ ಅಂಕಿಅಂಶ:
    ಸ್ವಾತಂತ್ರ್ಯಕ್ಕೂ ಮುನ್ನ ಬ್ರಿಟಿಷರು ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸುತ್ತಿದ್ದರು.
    ಸ್ವಾತಂತ್ರ್ಯಾನಂತರ ಈ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ.
    2023ರ ವರೆಗೆ ಭಾರತದಲ್ಲಿ ಒಟ್ಟು 561 ಮಂದಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ.

    ಗಲ್ಲು ಶಿಕ್ಷೆಗೆ ವಿರೋಧದ ಕಾರಣ ಏನು?
    ಇದು ಅಮಾನವೀಯ ಮತ್ತು ಹಿಂಸಾತ್ಮಕ ಎಂದು ಅನೇಕರು ಪರಿಗಣಿಸುತ್ತಾರೆ.
    ಪ್ರಾಣ ಒಂದೇ ಬಾರಿಗೆ ಹೋಗದೆ ದೀರ್ಘಕಾಲದ ನೋವುಂಟಾಗುತ್ತದೆ.
    ಮರಣದಂಡನೆ ಅಪರಾಧವನ್ನು ತಡೆಯುತ್ತದೆ ಎಂಬ ದೃಢವಾದ ಸಾಬೀತುಗಳಿಲ್ಲ.
    ಈ ಕಾರಣಗಳಿಂದ ಹಲವಾರು ರಾಷ್ಟ್ರಗಳು ಈ ಶಿಕ್ಷೆಯನ್ನು ನಿಷೇಧಿಸಿವೆ ಅಥವಾ ಬದಲಾವಣೆ ಮಾಡಿದ್ದಾರೆ.

    ವಿವಿಧ ದೇಶಗಳಲ್ಲಿ ಮರಣದಂಡನೆ ವಿಧಾನಗಳು:
    ಗುಂಡು ಹಾರಿಸುವುದು – ರಷ್ಯಾ, ಇಂಡೋನೇಷ್ಯಾ, ಬಾಂಗ್ಲಾ, ಕೊರಿಯಾ ಮುಂತಾದ ದೇಶಗಳಲ್ಲಿ.
    ತಲೆ ಕತ್ತರಿಸುವುದು – ಸೌದಿ ಅರೇಬಿಯಾ, ಇರಾನ್, ಯೆಮೆನ್.
    ವಿಷದ ಚುಚ್ಚುಮದ್ದು – ಚೀನಾ, ಅಮೆರಿಕಾ, ಥಾಯ್ಲೆಂಡ್.
    ಕಲ್ಲು ಹೊಡೆದು ಕೊಲ್ಲುವುದು – ನೈಜೀರಿಯಾ, ಪಾಕಿಸ್ಥಾನ, ಸುಡಾನ್.
    ವಿದ್ಯುತ್ ಕುರ್ಚಿ ಅಥವಾ ವಿಷ ಅನಿಲ ಕೊಠಡಿ – ಅಮೆರಿಕಾ.

    ವಿಶ್ವದ ನಿಲುವು ಏನು?
    2ನೇ ಮಹಾಯುದ್ಧದ ಬಳಿಕ ವಿಶ್ವಾದ್ಯಂತ ಮರಣದಂಡನೆ ವಿರೋಧ ಚಳವಳಿ ಬಲವತ್ತಾಯಿತು.
    1977ರಲ್ಲಿ ಕೇವಲ 16 ರಾಷ್ಟ್ರಗಳು ಮರಣದಂಡನೆಯನ್ನು ನಿಷೇಧಿಸಿದ್ದರೆ, ಇಂದಿಗೆ 95 ರಾಷ್ಟ್ರಗಳು ಸಂಪೂರ್ಣವಾಗಿ ರದ್ದುಮಾಡಿವೆ.
    ಭಾರತ ಸೇರಿದಂತೆ 58 ರಾಷ್ಟ್ರಗಳಲ್ಲಿ ಮಾತ್ರ ಈ ಶಿಕ್ಷೆ ಇನ್ನೂ ಅಸ್ತಿತ್ವದಲ್ಲಿದೆ.

    ಇನ್ನು, ಮರಣದಂಡನೆ ಕುರಿತು ಚರ್ಚೆ ಕೇವಲ ಕಾನೂನಿನ ವಿಷಯವಲ್ಲ, ಅದು ಮಾನವೀಯತೆಯ ಮತ್ತು ನ್ಯಾಯದ ಮಧ್ಯದ ಸೂಕ್ಷ್ಮ ಸಮತೋಲನ. ಅಪರಾಧವನ್ನು ತಡೆಯುವ ಹೆಸರಿನಲ್ಲಿ ಅಪರಾಧಿಯನ್ನೇ ಕ್ರೂರವಾಗಿ ಕೊಲ್ಲುವುದು ಸರಿಯೇ ಎಂಬ ಪ್ರಶ್ನೆ ಸಮಾಜದ ಅಂತರಾಳವನ್ನು ತಟ್ಟುತ್ತಿದೆ.

  • ಬಿಹಾರ ಚುನಾವಣೆಗೆ ಹಣ ಕಲೆಕ್ಷನ್‌ ಮಾಡಿರೋದು ಬಿಜೆಪಿ : ಸಿದ್ದರಾಮಯ್ಯ ತಿರುಗೇಟು

    ಬಿಹಾರ ಚುನಾವಣೆಗೆ ಹಣ ಕಲೆಕ್ಷನ್‌ ಮಾಡಿರೋದು ಬಿಜೆಪಿ : ಸಿದ್ದರಾಮಯ್ಯ ತಿರುಗೇಟು

    ಬಿಹಾರ ವಿಧಾನಸಭೆ ಚುನಾವಣೆ (Bihar Election 2025) ಸಮೀಪಿಸುತ್ತಿರುವಂತೆ, ರಾಜಕೀಯ ವಾತಾವರಣ ದಿನೇದಿನೇ ಚುರುಕಾಗುತ್ತಿದೆ. ಚುನಾವಣಾ ಚಟುವಟಿಕೆಗಳು ತೀವ್ರಗೊಂಡಿರುವ ಈ ವೇಳೆಯಲ್ಲಿ ಕರ್ನಾಟಕ ಮತ್ತು ಬಿಹಾರ ರಾಜಕೀಯದ ನಡುವೆ ಹೊಸ ವಾಗ್ವಾದ ಉಂಟಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಆರೋಪ–ಪ್ರತ್ಯಾರೋಪಗಳು ಜೋರಾಗಿವೆ. ಈ ಪೈಕಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ತಿರುಗೇಟು ನೀಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಪುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, “ಬಿಹಾರ ಚುನಾವಣೆಗೆ ಹಣ ಕಲೆಕ್ಷನ್‌ ಮಾಡಿರೋದು ನಾವು ಅಲ್ಲ, ಬಿಜೆಪಿ. ಅವರು ಮಾಡುವ ಕೆಲಸವನ್ನು ನಮ್ಮ ಮೇಲೆ ಹಾಕ್ತಿದ್ದಾರೆ,” ಎಂದು ಕಟುವಾಗಿ ಪ್ರತಿಕ್ರಿಯಿಸಿದರು. ಬಿಜೆಪಿ ನಾಯಕರು ಕರ್ನಾಟಕವನ್ನು ‘ಎಟಿಎಂ ರಾಜ್ಯದಂತೆ ಬಳಸಲಾಗುತ್ತಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

    ಇನ್ನು, ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧ (RSS Activities Ban) ಕುರಿತ ವಿವಾದಕ್ಕೂ ಅವರು ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ಹೊರಡಿಸಿದ ಸುತ್ತೋಲೆ ಹೊಸದೇನಲ್ಲ. ಇದೇ ರೀತಿಯ ಸುತ್ತೋಲೆ 2013ರಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶಿಕ್ಷಣ ಇಲಾಖೆಯ ಮೂಲಕ ಹೊರಡಿಸಿದ್ದರು, ಅದೇ ಸುತ್ತೋಲೆ ಈಗಲೂ ಅನ್ವಯವಾಗುತ್ತದೆ ಎಂದು ತಿಳಿಸಿದರು.

    ಯಾವ ಸಂಸ್ಥೆ ಚಟುವಟಿಕೆ ನಡೆಸಬೇಕು ಎಂಬುದು ಸರ್ಕಾರದ ಪರಿಗಣನೆಗೆ ಒಳಪಟ್ಟ ವಿಷಯ. ಪರ್ಮಿಷನ್ ಬೇಕು ಎಂದರೆ ಅದು ಕಡ್ಡಾಯವಲ್ಲ. ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದಲೇ ಅನುಮತಿ ನೀಡಲಾಗುತ್ತದೆ,” ಎಂದು ಹೇಳಿದರು.

    ಈ ಹೇಳಿಕೆಗಳ ಮೂಲಕ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದು, ಬಿಹಾರ ಚುನಾವಣೆಗೂ ಮುನ್ನ ರಾಜಕೀಯ ಕೆಸರೆರರಾಚಾಟಕ್ಕೆ ಪುಷ್ಟಿ ತುಂಬಿದ್ದಾರೆ.

  • ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪತ್ನಿ ರಿವಾಬಾಗೆ ಪತಿ ಜಡೇಜಾರಿಂದ ಹೃದಯಸ್ಪರ್ಶಿ ಸಂದೇಶ

    ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪತ್ನಿ ರಿವಾಬಾಗೆ ಪತಿ ಜಡೇಜಾರಿಂದ ಹೃದಯಸ್ಪರ್ಶಿ ಸಂದೇಶ

    ಕ್ರೀಡಾಂಗಣದಲ್ಲಿ ರನ್‌ಗಳು ಮತ್ತು ವಿಕೆಟ್‌ಗಳ ಮೂಲಕ ಭಾರತದ ಹೆಮ್ಮೆ ಹೆಚ್ಚಿಸಿರುವ ರವೀಂದ್ರ ಜಡೇಜಾ, ಈ ಬಾರಿ ತಮ್ಮ ಪತ್ನಿಯ ಸಾಧನೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಗುಜರಾತ್‌ನ ರಾಜಕೀಯ ವೇದಿಕೆಯಲ್ಲಿ ಹೊಸ ಹೆಜ್ಜೆ ಇಟ್ಟಿರುವ ರಿವಾಬಾ ಜಡೇಜಾ ಈಗ ಗುಜರಾತ್ ರಾಜ್ಯದ ಸಚಿವರಾಗಿದ್ದು, ಈ ಸಂದರ್ಭದಲ್ಲಿ ಪತಿ ಜಡೇಜಾ ನೀಡಿದ ಸಂದೇಶ ಎಲ್ಲೆಡೆ ವೈರಲ್ ಆಗಿದೆ.

    2022ರ ವಿಧಾನಸಭೆ ಚುನಾವಣೆಯಲ್ಲಿ ಜಾಮನಗರ ಉತ್ತರ ಕ್ಷೇತ್ರದಿಂದ ಬಿಜೆಪಿ ಪರವಾಗಿ ಸ್ಪರ್ಧಿಸಿ ಜಯಗಳಿಸಿದ ರಿವಾಬಾ, ಇದೀಗ ಗುಜರಾತ್ ಸರ್ಕಾರದ ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಈ ಯಶಸ್ಸು ಕೇವಲ ರಾಜಕೀಯ ವಿಜಯವಲ್ಲ, ಅದು ಮಹಿಳಾ ನಾಯಕತ್ವದ ಶಕ್ತಿಗೆ ಮತ್ತೊಂದು ಉದಾಹರಣೆ ಎಂದೂ ಹೇಳಬಹುದು.

    ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ, ಪತಿಯಾದ ಭಾರತದ ಅಲ್‌ರೌಂಡರ್ ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಸಂದೇಶ ಹಂಚಿಕೊಂಡರು. ಅವರು ತಮ್ಮ X ನಲ್ಲಿ ಬರೆದಿದ್ದು ಹೀಗೆ

    “ನಿನ್ನ ಸಾಧನೆಗಳ ಬಗ್ಗೆ ನನಗೆ ತುಂಬಾ ಹೆಮ್ಮೆ. ನೀನು ಯಾವ ಕ್ಷೇತ್ರದಲ್ಲಾದರೂ ಅದ್ಭುತ ಕೆಲಸ ಮಾಡುತ್ತೀಯ ಎಂಬುದು ನನ್ನ ನಂಬಿಕೆ, ನೀವು ಅನೇಕ ಜನರಿಗೆ ಪ್ರೇರಣೆಯಾಗುವಿರಿ ಎಂಬ ವಿಶ್ವಾಸ ನನಗೆ ಇದೆ. ಗುಜರಾತ್ ಸರ್ಕಾರದ ಸಚಿವೆಯಾಗಿರುವ ನಿಮಗೆ ಹಾರ್ದಿಕ ಶುಭಾಶಯಗಳು. ಜಯ ಹಿಂದ್!” ಎಂದು ಬರೆದಿದ್ದಾರೆ.

    ಈ ಸಂದೇಶಕ್ಕೆ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರೇಮಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದರು. ಹಲವರು “ಈ ಜೋಡಿ ನಿಜಕ್ಕೂ ಪ್ರೇರಣೆಯಾದ ದಂಪತಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಒಟ್ಟಿನಲ್ಲಿ, ಕ್ರಿಕೆಟ್ ಮೈದಾನದಲ್ಲಿ ದೇಶಕ್ಕೆ ಗೌರವ ತಂದ ಜಾಡೇಜಾ, ತಮ್ಮ ಪತ್ನಿಯ ರಾಜಕೀಯ ಸಾಧನೆಗೆ ಹೆಮ್ಮೆ ಪಟ್ಟು ಅಭಿನಂದಿಸಿರುವುದು ಒಳ್ಳೆಯ ವಿಚಾರ. ಪರಸ್ಪರ ಪ್ರೋತ್ಸಾಹ ಮತ್ತು ಗೌರವದಿಂದ ಕೂಡಿದ ಈ ಕ್ಷಣ, ಕ್ರೀಡೆ ಮತ್ತು ರಾಜಕೀಯದ ನಡುವಿನ ಹೃದಯಸ್ಪರ್ಶಿ ಸೇತುವೆಯಂತೆ ಕಂಡುಬಂದಿದೆ.

  • ತಾಲಿಬಾನ್ ದಾಳಿಗಳಿಗೆ ಭಾರತವೇ ಹೊಣೆ? ಪಾಕಿಸ್ತಾನದ ಪ್ರಧಾನಿ ಹೊಸ ಆರೋಪ! 

    ತಾಲಿಬಾನ್ ದಾಳಿಗಳಿಗೆ ಭಾರತವೇ ಹೊಣೆ? ಪಾಕಿಸ್ತಾನದ ಪ್ರಧಾನಿ ಹೊಸ ಆರೋಪ! 

    ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಭಾಗದ ಉದ್ವಿಗ್ನತೆ ಮತ್ತೆ ಚರ್ಚೆಯ ಕೇಂದ್ರವಾಗಿದೆ. ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ನೀಡಿದ ಹೇಳಿಕೆ ದಕ್ಷಿಣ ಏಷ್ಯಾದ ರಾಜಕೀಯ ವಾತಾವರಣವನ್ನು ಮತ್ತೊಮ್ಮೆ ಕದಡಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನಡೆಸುತ್ತಿರುವ ಉಗ್ರ ದಾಳಿಗಳಿಗೆ ಭಾರತವೇ ಮೂಲ ಕಾರಣ ಎಂದು ಅವರು ಆರೋಪಿಸಿದ್ದಾರೆ.

    ಈ ಆರೋಪ ಕೇವಲ ಮಾತಿನ ಮಟ್ಟದಲ್ಲೇ ಇರದೇ, ರಾಜತಾಂತ್ರಿಕ ತೀವ್ರತೆಯನ್ನು ಹೆಚ್ಚಿಸಿರುವುದು ಖಚಿತ. ಷರೀಫ್ ಅವರ ಪ್ರಕಾರ, “ಅಫ್ಘಾನಿಸ್ತಾನದಲ್ಲಿ ನಡೆದ ಇತ್ತೀಚಿನ ದಾಳಿಗಳ ಹಿಂದೆ ಭಾರತನ ಕೈವಾಡವಿದೆ. ನಮ್ಮ ಭದ್ರತೆ ಮತ್ತು ಗಡಿಯಲ್ಲಿ ಅಶಾಂತಿ ಉಂಟುಮಾಡಲು ಭಾರತ ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಅವರು ಯಾವುದೇ ದೃಢವಾದ ಸಾಕ್ಷಿ ನೀಡದಿದ್ದರೂ ಕೂಡ ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಈ ಒಂದು ಹೇಳಿಕೆ ದೊಡ್ಡ ವಿಷಯವಾಗಿ ಪರಿಣಮಿಸಿದೆ.

    ಇತ್ತ ಭಾರತದ ವಿದೇಶಾಂಗ ಇಲಾಖೆ ಈ ಆರೋಪವನ್ನು ಸಂಪೂರ್ಣವಾಗಿ ಪಕ್ಕಕ್ಕೆ ತಳ್ಳಿಹಾಕಿದೆ. “ಭಾರತವು ಯಾವ ಉಗ್ರ ಚಟುವಟಿಕೆಗೂ ಬೆಂಬಲ ನೀಡುವುದಿಲ್ಲ. ಪಾಕಿಸ್ತಾನವು ತನ್ನ ಆಂತರಿಕ ವೈಫಲ್ಯವನ್ನು ಮುಚ್ಚಲು ಹೊಸ ಆರೋಪಗಳ ಮೂಲಕ ಜನರ ಗಮನ ಬೇರೆಡೆ ತಿರುಗಿಸುತ್ತಿದೆ” ಎಂದು ಸ್ಪಷ್ಟನೆ ನೀಡಿದೆ.

    ವಿಶ್ಲೇಷಕರ ಪ್ರಕಾರ, ಪಾಕಿಸ್ತಾನದ ಆರ್ಥಿಕ ಹಿನ್ನಡೆ, ರಾಜಕೀಯ ಅಸ್ಥಿರತೆ ಮತ್ತು ತಾಲಿಬಾನ್‌ನಿಂದ ಉಂಟಾಗುತ್ತಿರುವ ಆಂತರಿಕ ಭದ್ರತಾ ಸಮಸ್ಯೆಗಳು ಪಾಕಿಸ್ತಾನ ಸರ್ಕಾರದ ಮೇಲೆ ಹೆಚ್ಚು ಒತ್ತಡ ತಂದಿವೆ. ಈ ಸಂದರ್ಭದಲ್ಲಿ ಷರೀಫ್ ಅವರ ಹೇಳಿಕೆ ಜನರ ಅಸಮಾಧಾನವನ್ನು ತಣ್ಣಗಾಗಿಸಲು ಪ್ರಯತ್ನವಾಗಿರಬಹುದು ಎಂಬ ಅಭಿಪ್ರಾಯಗಳು ಎಲ್ಲೆಡೆ ಕೇಳಿಬರುತ್ತಿದೆ.

    ಅಮೆರಿಕಾ ಮತ್ತು ಇತರ ರಾಷ್ಟ್ರಗಳು ಈ ವಿವಾದದ ಕುರಿತು ತಟಸ್ಥ ನಿಲುವು ಹಿಡಿದಿದ್ದರೂ, ಯಾವುದೇ ಉಗ್ರ ಚಟುವಟಿಕೆಗೆ ಬೆಂಬಲ ನೀಡುವುದು ತಪ್ಪು ಎಂಬ ಸಂದೇಶ ನೀಡಿವೆ. ಆದರೆ ಈ ಹೊಸ ಆರೋಪದ ಪರಿಣಾಮವಾಗಿ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಸಂಬಂಧ ಮತ್ತಷ್ಟು ಶೀತವಾಗುವ ಸಾಧ್ಯತೆ ಇದೆ ಎನ್ನಬಹುದು.