Category: Health

The human body has been designed to resist an infinite number of changes and attacks brought about by its environment. The secret of good health lies in successful adjustment to changing stresses on the body.

  • ಚಳಿಗಾಲದಲ್ಲಿ ಶುಂಠಿ: ಪ್ರತಿದಿನದ ಸಣ್ಣ ಅಭ್ಯಾಸ, ದೊಡ್ಡ ಆರೋಗ್ಯ ರಕ್ಷಣೆ

    ಚಳಿಗಾಲದಲ್ಲಿ ಶುಂಠಿ: ಪ್ರತಿದಿನದ ಸಣ್ಣ ಅಭ್ಯಾಸ, ದೊಡ್ಡ ಆರೋಗ್ಯ ರಕ್ಷಣೆ

    ಚಳಿಗಾಲ ಬಂದಾಗ ಮಾನವನ ದೇಹದಲ್ಲಿ ಹಲವು ಸಣ್ಣ ಪುಟ್ಟ ತೊಂದರೆಗಳು ಕಾಣಿಸಿಕೊಳ್ಳುವುದು ಸಹಜ. ಶೀತ, ಜ್ವರ, ಕೆಮ್ಮು, ಗಂಟಲು ನೋವು, ತಲೆನೋವು, ಕೈಕಾಲುಗಳು ಚಳಿಯಿಂದ ಕಟ್ಟಿ ಹೋಗುವುದು ಇವೆಲ್ಲವೂ ಈ ಚಳಿಯ ಋತುವಿನ ಸಾಮಾನ್ಯ ಸಂಗತಿಗಳು. ಹೀಗಿರುವಾಗ ದೇಹಕ್ಕೆ ಒಳಗಿನಿಂದ ಬಲ ಕೊಡುವಂತಹ ಆಹಾರಗಳ ಮೇಲೆ ಹೆಚ್ಚು ಗಮನವನ್ನು ಹರಿಸಬೇಕಾಗುತ್ತದೆ. ಇವುಗಳಲ್ಲಿ ಪ್ರಮುಖವಾಗಿ ಹೆಸರು ಕೇಳಿಸಿಕೊಳ್ಳುವುದು ಶುಂಠಿ. ಚಳಿಗಾಲದಲ್ಲಿ ಪ್ರತಿದಿನ ಸ್ವಲ್ಪ ಪ್ರಮಾಣದ ಶುಂಠಿ ಸೇವಿಸುವುದು ಆರೋಗ್ಯಕ್ಕೆ ವಿಶೇಷವಾದ ರಕ್ಷಣೆಯನ್ನು ಕೊಡುತ್ತದೆ ಎಂದು ಹೇಳಬಹುದು.

    ಶುಂಠಿಯ ಮೊದಲ ಪ್ರಯೋಜನವೆಂದರೆ ಇದು ದೇಹವನ್ನು ಬೆಚ್ಚಗೆ ಇಡುತ್ತದೆ. ಹೊರಗಿನ ತಾಪಮಾನ ಕಡಿಮೆಯಾಗುತ್ತಿದ್ದಂತೆ ರಕ್ತ ಸಂಚಾರ ನಿಧಾನಗೊಳ್ಳುತ್ತದೆ. ಇದು ಕೈ ಕಾಲುಗಳು ಚಳಿ ಹಿಡಿಯುವ ಪ್ರಮುಖ ಕಾರಣಕ್ಕೆ ಶುಂಠಿಯು ನೈಸರ್ಗಿಕ ಉಷ್ಣಸ್ವಭಾವ ದೇಹದ ಒಳಗಿನ ತಂಪನ್ನು ಕಡಿಮೆ ಮಾಡಿ ರಕ್ತದ ಹರಿವನ್ನು ಸುಧಾರಿಸುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಶುಂಠಿ ಚಹಾ ಅಥವಾ ಶುಂಠಿ ಕಷಾಯ ಕುಡಿಯುವ ಅಭ್ಯಾಸ ಬಹಳ ಉಪಯುಕ್ತ.

    ಶುಂಠಿಯ ಮತ್ತೊಂದು ಮಹತ್ವದ ಗುಣವೆಂದರೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ವೈರಲ್ ಸೋಂಕುಗಳು ವೇಗವಾಗಿ ವ್ಯಾಪಿಸುವ ಸಮಯ. ದೇಹದ ರೋಗನಿರೋಧಕ ವ್ಯವಸ್ಥೆ ಬಲವಾಗಿರದಿದ್ದರೆ ಜ್ವರ, ಶೀತ, ಕೆಮ್ಮು ಮತ್ತೆ ಮತ್ತೆ ಬರುತ್ತವೆ. ಶುಂಠಿಯಲ್ಲಿರುವ ಉತ್ಕರ್ಷಣ ವಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಕ ಗುಣಗಳು ದೇಹವನ್ನು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ದಿನವೂ ಸ್ವಲ್ಪ ಪ್ರಮಾಣದಲ್ಲಿ ಶುಂಠಿ ಸೇವಿಸಿದರೆ ದೇಹದ ಒಳಗಿನ ರಕ್ಷಣೆ ಸ್ವಾಭಾವಿಕವಾಗಿ ಬಲಪಡಿಸುತ್ತದೆ.

    ಚಳಿಗಾಲದಲ್ಲಿ ಹಲವರಿಗೆ ಕೀಲು ನೋವು ಮತ್ತು ಸ್ನಾಯು ಸೆಳೆತ ಹೆಚ್ಚಾಗುತ್ತದೆ. ತಂಪಿನ ಪರಿಣಾಮವಾಗಿ ದೇಹದ ಮೂಳೆ ಸ್ನಾಯುಗಳ ಚಟುವಟಿಕೆ ನಿಧಾನಗೊಳ್ಳುವುದೇ ಇದಕ್ಕೆ ಕಾರಣ. ಶುಂಠಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ಈ ರೀತಿಯ ನೋವುಗಳನ್ನು ಕಡಿಮೆ ಮಾಡುತ್ತವೆ. ಅತಿ ತೊಂದರೆ ಇಲ್ಲದ ಹಂತದಲ್ಲಿ ಶುಂಠಿ ನಿಯಮಿತವಾಗಿ ಸೇವಿಸಿದರೆ ದೀರ್ಘಕಾಲದ ನೋವಿಗೂ ಪರಿಹಾರ ದೊರೆಯುತ್ತದೆ.

    ಈ ಋತುವಿನಲ್ಲಿ ಗಂಟಲು ನೋವು ಮತ್ತು ಲೋಳೆಯು ಹೆಚ್ಚಾಗುವುದು ಸಾಮಾನ್ಯ. ಶುಂಠಿಯಲ್ಲಿರುವ ಉರಿಯೂತ ನಿವಾರಕ ಗುಣಗಳು ಗಂಟಲೆಲ್ಲೋ ಉಂಟಾಗುವ ರಂಧ್ರ ಮತ್ತು ನೋವನ್ನು ಶಮನಗೊಳಿಸುತ್ತವೆ. ಬೆಚ್ಚಗಿನ ನೀರಿಗೆ ತುಂಡು ಶುಂಠಿ ಸೇರಿಸಿ ಕುಡಿದರೂ ಅಥವಾ ಜೇನುತುಪ್ಪದೊಂದಿಗೆ ಸೇವಿಸಿದರೂ ಗಂಟಲು ತಣಿಯುತ್ತದೆ. ಇದರಿಂದ ಕೆಮ್ಮು ಕೂಡ ನಿಧಾನವಾಗಿ ಕಡಿಮೆಯಾಗುತ್ತದೆ.

    ಒಟ್ಟಾರೆ ನೋಡಿದರೆ ಚಳಿಗಾಲದ ಆರೋಗ್ಯಕ್ಕೆ ಶುಂಠಿ ಸಣ್ಣದಾಗಿದ್ದರೂ ಬಹಳ ಪರಿಣಾಮಕಾರಿ ಸಹಜ ಔಷಧ. ಇದು ದೇಹವನ್ನು ಬೆಚ್ಚಗಿಡುತ್ತದೆ, ಸೋಂಕುಗಳಿಂದ ರಕ್ಷಿಸುತ್ತದೆ, ಗಂಟಲು ತೊಂದರೆಗಳನ್ನು ಕಡಿಮೆ ಮಾಡುತ್ತದೆ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಶಕ್ತಿಯನ್ನು ಕಾಪಾಡುತ್ತದೆ. ದಿನನಿತ್ಯದ ಆಹಾರದಲ್ಲಿ ಸ್ವಲ್ಪ ಮಟ್ಟಿಗೆ ಶುಂಠಿಯನ್ನು ಸೇರಿಸಿಕೊಂಡರೆ ಚಳಿಗಾಲದ ಅನೇಕ ಸಮಸ್ಯೆಗಳನ್ನು ಸುಲಭವಾಗಿ ದೂರವಿಡಬಹುದು.

  • ಆರೋಗ್ಯಕರ ಜೀವನಶೈಲಿಯಿಂದ ಮಧುಮೇಹ ತಡೆಗಟ್ಟುವುದು ಹೇಗೆ?

    ಆರೋಗ್ಯಕರ ಜೀವನಶೈಲಿಯಿಂದ ಮಧುಮೇಹ ತಡೆಗಟ್ಟುವುದು ಹೇಗೆ?

    ಇಂದಿನ ವೇಗದ ಜೀವನಶೈಲಿ, ಒತ್ತಡ, ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳ ನಡುವೆ ಮಧುಮೇಹ (Diabetes) ಎಂಬ ಕಾಯಿಲೆ ನಮ್ಮ ದೇಶದಲ್ಲಿ ಭಯಾನಕ ಮಟ್ಟದಲ್ಲಿ ಹೆಚ್ಚುತ್ತಿದೆ. ಹಿಂದೆ ಈ ಕಾಯಿಲೆ ಹೆಚ್ಚಾಗಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತಾದರೂ, ಈಗ ಯುವಕರು ಮತ್ತು ಮಧ್ಯವಯಸ್ಕರೂ ಇದರ ಬಲಿಯಾಗುತ್ತಿದ್ದಾರೆ.

    ಮಧುಮೇಹವನ್ನು ತಜ್ಞರು ಮೌನಹಂತಕ (Silent Killer) ಎಂದು ಕರೆಯುತ್ತಾರೆ, ಏಕೆಂದರೆ ಇದು ನಿಧಾನವಾಗಿ ದೇಹದೊಳಗೆ ಹಲವಾರು ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮೊದಲ ಹಂತಗಳಲ್ಲಿ ಅದರ ಲಕ್ಷಣಗಳು ಬಹುಮಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ. ಹಾಗಾದರೆ ಯಾವ ವಯಸ್ಸಿನಲ್ಲಿ ಮಧುಮೇಹದ ಅಪಾಯ ಹೆಚ್ಚಾಗುತ್ತದೆ? ಯಾವ ವಯಸ್ಸಿನಲ್ಲಿ ಜನರು ದುರ್ಬಲರಾಗುತ್ತಾರೆ? ಮತ್ತು ಈ ಕಾಯಿಲೆಯನ್ನು ತಡೆಗಟ್ಟಲು ಏನು ಮಾಡಬಹುದು? ನೋಡೋಣ.

    ಯಾವ ವಯಸ್ಸಿನಲ್ಲಿ ಮಧುಮೇಹ ಹೆಚ್ಚು ಕಾಣಿಸುತ್ತದೆ?

    ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನ ಅಧ್ಯಯನದ ಪ್ರಕಾರ, ಮಧುಮೇಹವು ಸಾಮಾನ್ಯವಾಗಿ 40 ರಿಂದ 45 ವರ್ಷ ವಯಸ್ಸಿನ ಮಧ್ಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಇದು “ಮಧ್ಯವಯಸ್ಕ” ಜನರಲ್ಲಿ ಆರಂಭವಾಗಿ ವೃದ್ಧಾಪ್ಯದಲ್ಲಿ ಗಂಭೀರ ಸಮಸ್ಯೆಯಾಗಿ ಬೆಳೆಯುತ್ತದೆ.
    ಆದರೆ ಇಂದಿನ ಕಾಲದಲ್ಲಿ ಪರಿಸ್ಥಿತಿ ಬದಲಾಗಿದೆ. ತಜ್ಞರ ಎಚ್ಚರಿಕೆಯ ಪ್ರಕಾರ 20 ರಿಂದ 30 ವರ್ಷ ವಯಸ್ಸಿನ ಯುವಕರಲ್ಲಿಯೂ ಮಧುಮೇಹದ ಪ್ರಮಾಣ ವೇಗವಾಗಿ ಹೆಚ್ಚುತ್ತಿದೆ.

    ಇದಕ್ಕೆ ಪ್ರಮುಖ ಕಾರಣಗಳು:
    ಕಳಪೆ ಆಹಾರ ಪದ್ಧತಿ (ಜಂಕ್ ಫುಡ್, ಸಿಹಿ ಪಾನೀಯಗಳು)
    ದೈಹಿಕ ಚಟುವಟಿಕೆಯ ಕೊರತೆ
    ಒತ್ತಡ
    ಅತಿಯಾಗಿ ಕುಳಿತಿರುವ ಜೀವನಶೈಲಿ

    ವಯಸ್ಸು ಮತ್ತು ಮಧುಮೇಹದ ಸಂಬಂಧ:
    ವಯಸ್ಸಾದಂತೆ ದೇಹದ ಇನ್ಸುಲಿನ್ ಉತ್ಪಾದನೆ ನಿಧಾನಗತಿಯಾಗುತ್ತದೆ. ಇನ್ಸುಲಿನ್‌ ಪ್ರತಿರೋಧ (Insulin Resistance) ಹೆಚ್ಚಾಗುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ದೇಹಕ್ಕೆ ಕಷ್ಟವಾಗುತ್ತದೆ.
    45 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಪ್ರಿಡಿಯಾಬಿಟಿಸ್ (Prediabetes) ಮತ್ತು ಟೈಪ್ 2 ಮಧುಮೇಹ ಹೆಚ್ಚಾಗಿ ಕಂಡುಬರುತ್ತದೆ. ವಯಸ್ಸಾದವರಲ್ಲಿ ಕಡಿಮೆ ದೈಹಿಕ ಚಟುವಟಿಕೆ, ದುರ್ಬಲ ಸ್ನಾಯುಗಳು, ಹಾಗೂ ಜೀರ್ಣಕ್ರಿಯೆಯ ನಿಧಾನಗತಿ. ಇವೆಲ್ಲವೂ ಸಕ್ಕರೆ ಚಯಾಪಚಯ ಕ್ರಿಯೆಯನ್ನು ಹಾನಿಗೊಳಿಸುತ್ತದೆ.

    ಯಾಕೆ 40 ನಂತರ ಅಪಾಯ ಹೆಚ್ಚಾಗುತ್ತದೆ?:
    ತಜ್ಞರ ಪ್ರಕಾರ, 40 ವರ್ಷ ನಂತರ ದೇಹದ ಮೆಟಾಬಾಲಿಸಂ ನಿಧಾನಗತಿಯಾಗುತ್ತದೆ.
    ತೂಕ ಹೆಚ್ಚಾಗುವುದು (ಬೊಜ್ಜು)
    ಹಾರ್ಮೋನಲ್ ಬದಲಾವಣೆಗಳು
    ಒತ್ತಡ ಮತ್ತು ನಿದ್ರೆ ಕೊರತೆ
    ಇವುಗಳೆಲ್ಲಾ ಮಧುಮೇಹಕ್ಕೆ ಪೂರಕವಾದ ಪರಿಸ್ಥಿತಿಯನ್ನು ನಿರ್ಮಿಸುತ್ತವೆ.
    ಯಾರಾದರೂ ಕುಟುಂಬದಲ್ಲಿ ಮಧುಮೇಹ ಇತಿಹಾಸ ಇದ್ದರೆ (Parents ಅಥವಾ Grandparents), ಅವರಿಗೆ ಮಧುಮೇಹ ಬರುವ ಅಪಾಯ ಇನ್ನೂ ಹೆಚ್ಚು.

    ಚಿಕ್ಕ ವಯಸ್ಸಿನಲ್ಲೇ ಮಧುಮೇಹಕ್ಕೆ ಕಾರಣಗಳು:

    ಇಂದಿನ ಪೀಳಿಗೆಯಲ್ಲಿ ಮಧುಮೇಹ ಕಡಿಮೆ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿದೆ. ಪ್ರಮುಖ ಕಾರಣಗಳು,
    ಫಾಸ್ಟ್ ಫುಡ್ ಸೇವನೆ
    ಮಲಗುವ ಸಮಯದ ಅಸಮಂಜಸತೆ
    ಮೊಬೈಲ್/ಲ್ಯಾಪ್‌ಟಾಪ್‌ನಲ್ಲಿ ಹೆಚ್ಚು ಸಮಯ
    ವ್ಯಾಯಾಮದ ಕೊರತೆ
    ನಿರಂತರ ಒತ್ತಡ ಮತ್ತು ನಿದ್ರಾಹೀನತೆ
    ಈ ಎಲ್ಲವು ದೇಹದ ಇನ್ಸುಲಿನ್ ಕಾರ್ಯವನ್ನು ಹಾನಿಗೊಳಿಸುತ್ತವೆ.

    ಮಧುಮೇಹವನ್ನು ತಡೆಗಟ್ಟಲು ಏನು ಮಾಡಬೇಕು?

    ತಜ್ಞರ ಸಲಹೆ ಪ್ರಕಾರ ಮಧುಮೇಹವನ್ನು ಜೀವನಶೈಲಿ ಬದಲಾವಣೆಗಳ ಮೂಲಕವೇ ತಡೆಗಟ್ಟಬಹುದು.
    ಆಹಾರ: ಹಸಿರು ತರಕಾರಿಗಳು, ಹಣ್ಣುಗಳು, ಸಂಪೂರ್ಣ ಧಾನ್ಯಗಳು ಮತ್ತು ಪ್ರೋಟೀನ್‌ಗಳನ್ನು ಒಳಗೊಂಡ ಆಹಾರ ಸೇವನೆ.
    ವ್ಯಾಯಾಮ: ಪ್ರತಿದಿನ ಕನಿಷ್ಠ 30 ನಿಮಿಷ ಚುರುಕಾದ ನಡೆ, ಯೋಗ ಅಥವಾ ಸೈಕ್ಲಿಂಗ್‌ ಮಾಡಿ.
    ತೂಕ ನಿಯಂತ್ರಣ: BMI ಸರಿಯಾದ ಮಟ್ಟದಲ್ಲಿ ಇರಲಿ.
    ನಿದ್ರೆ: ದಿನಕ್ಕೆ ಕನಿಷ್ಠ 7 ಗಂಟೆಗಳ ನಿದ್ರೆ.
    ಒತ್ತಡ ನಿಯಂತ್ರಣ: ಧ್ಯಾನ, ಪ್ರಾಣಾಯಾಮ, ಅಥವಾ ಹವ್ಯಾಸಗಳಿಂದ ಮನಸ್ಸು ಶಾಂತವಾಗಿಡಿ.
    ಪರೀಕ್ಷೆ: 35 ವರ್ಷವಾದ ನಂತರ ವರ್ಷಕ್ಕೊಮ್ಮೆ ರಕ್ತದ ಸಕ್ಕರೆ ಪರೀಕ್ಷೆ ಮಾಡಿಸಿಕೊಳ್ಳಿ.

    ವಯಸ್ಸಾದಂತೆ ಮಧುಮೇಹದ ಅಪಾಯ ಸಹಜವಾಗಿ ಹೆಚ್ಚಾದರೂ, ಇಂದಿನ ಯುವಜನರ ಜೀವನಶೈಲಿಯೇ ಅದನ್ನು ಮುಂಚಿತವಾಗಿ ಎಳೆಯುತ್ತಿದೆ. ಆದ್ದರಿಂದ, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ಈ ಮೌನಹಂತಕ ಕಾಯಿಲೆಯನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಡಲು ಸಾಧ್ಯ.

  • ಸಕ್ಕರೆ ಹೆಚ್ಚಾದಾಗ ದೇಹ ನೀಡುವ ಎಚ್ಚರಿಕೆ ಲಕ್ಷಣಗಳು

    ಸಕ್ಕರೆ ಹೆಚ್ಚಾದಾಗ ದೇಹ ನೀಡುವ ಎಚ್ಚರಿಕೆ ಲಕ್ಷಣಗಳು

    ಇತ್ತೀಚಿನ ದಿನಗಳಲ್ಲಿ, ಫಾಸ್ಟ್‌ಫುಡ್, ಪ್ಯಾಕೇಜ್ಡ್ ಪದಾರ್ಥಗಳು ಮತ್ತು ಸಿಹಿತಿಂಡಿಗಳ ಸೇವನೆ ಹೆಚ್ಚುತ್ತಿರುವುದರಿಂದ ಜನರಲ್ಲಿ ಸಕ್ಕರೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗುತ್ತಿವೆ. ವೈದ್ಯಕೀಯ ತಜ್ಞರ ಪ್ರಕಾರ, ಭಾರತೀಯರ ದಿನನಿತ್ಯದ ಆಹಾರದಲ್ಲಿ ಲುಕಾಯಿತ ಸಕ್ಕರೆಯ ಪ್ರಮಾಣ (Hidden Sugar) ನಿರೀಕ್ಷೆಗಿಂತಲೂ ಹೆಚ್ಚಾಗಿದೆ. ಕೇವಲ ಚಹಾ-ಕಾಫಿಯಲ್ಲಿ ಹಾಕುವ ಸಕ್ಕರೆಯಷ್ಟೇ ಅಲ್ಲ, ನಾವು ತಿನ್ನುವ ಜ್ಯೂಸ್, ಬಿಸ್ಕತ್, ಬ್ರೆಡ್, ಸಾಸ್, ರೆಡಿ-ಟು-ಈಟ್ ಪದಾರ್ಥಗಳಲ್ಲಿ ಇರುವ ಸಕ್ಕರೆ ನಮ್ಮ ದೇಹಕ್ಕೆ ನೇರವಾಗಿ ಹಾನಿ ಮಾಡುತ್ತದೆ.

    ಹೆಚ್ಚುವರಿ ಸಕ್ಕರೆಯ ಸೇವನೆ ಯಕೃತ್‌ (Liver) ಮೇಲಿನ ಒತ್ತಡವನ್ನೇ ಹೆಚ್ಚು ಮಾಡದೇ, ಕೊಲೆಸ್ಟ್ರಾಲ್‌, ರಕ್ತದೊತ್ತಡ, ತೂಕ ಹೆಚ್ಚಳ, ಹಾರ್ಮೋನ್ ಅಸಮತೋಲನ ಸೇರಿದಂತೆ ಹಲವಾರು ಗಂಭೀರ ಸಮಸ್ಯೆಗಳ ಮೂಲವಾಗುತ್ತದೆ. ಮುಖ್ಯವಾಗಿ, ಸಕ್ಕರೆ ಅತಿಯಾಗಿ ಸೇವಿಸುವವರು ತಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ಸಣ್ಣ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವುದರಿಂದ, ಮುಂದೆ ಮಧುಮೇಹದ ಅಪಾಯದತ್ತ ತಳ್ಳಿಕೊಳ್ಳುತ್ತಾರೆ. ಹಾಗಾದರೆ ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚುತ್ತಿರುವುದನ್ನು ಹೇಗೆ ಗುರುತಿಸಬಹುದು? ಯಾವ ಲಕ್ಷಣಗಳು ಎಚ್ಚರಿಕೆಯ ಗಂಟೆ ಹೊಡೆಯುತ್ತವೆ? ಮತ್ತು ಸಿಹಿ ಅಂಶವನ್ನು ಸಂಪೂರ್ಣವಾಗಿ ತ್ಯಜಿಸಬೇಕೇ…? ಎಂಬ ಬಗ್ಗೆ ನೋಡೋಣ ಬನ್ನಿ.

    ಹಸಿವು ಕಡಿಮೆಯಾಗುವುದು:

    • ಸಕ್ಕರೆಯ ಅತಿಯಾದ ಸೇವನೆ ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಏರಿಸುತ್ತದೆ. ಇದರ ಪರಿಣಾಮ,
    • ಮುಖದಲ್ಲಿ ಮೊಡವೆಗಳು ಮೂಡುವುದು
    • ಹಸಿವು ಕಡಿಮೆಯಾಗುವುದು
    • ಜೀರ್ಣಕ್ರಿಯೆ ಅಸ್ತವ್ಯಸ್ತವಾಗುವುದು

    ದೆಹದಲ್ಲಿ ಕ್ಯಾಲೊರಿಗಳು ಒಂದೇ ತಟ್ಟಿನಲ್ಲಿ ಜಮೆಯಾಗುವುದರಿಂದ ಹೊಟ್ಟೆಗೆ ಸರಿಯಾದ ಹಸಿವೆ ಕಾಣದು. ದಿನದಿಂದ ದಿನಕ್ಕೆ ಹಸಿವು ಕಡಿಮೆಯಾಗುತ್ತಿದ್ದರೆ, ಇದು ನೀವು ಸಿಹಿತಿಂಡಿಗಳನ್ನು ಮಿತಿಗಿಂತ ಹೆಚ್ಚು ಸೇವಿಸುತ್ತಿದ್ದೀರಿ ಎಂಬ ಸೂಚನೆ. ಅದೇ ರೀತಿ ಯಾವುದೇ ಕಾರಣವಿಲ್ಲದೆ ತೂಕ ಏರಿಕೆ ಕಂಡುಬಂದರೂ ಅದು ಹೆಚ್ಚುವರಿ ಸಕ್ಕರೆಯ ಪರಿಣಾಮವಾಗಿರಬಹುದು.

    ಮೆಗ್ನೀಸಿಯಮ್ ಮಟ್ಟ ಕುಸಿತ:

    ಬಿಳಿ ಸಕ್ಕರೆ ದೇಹದಲ್ಲಿ ಸೈಟೊಕಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ಕಿರಿಕಿರಿ, ಖಿನ್ನತೆ, ಆಯಾಸಕ್ಕೆ ಕಾರಣವಾಗುತ್ತದೆ.

    ಅತಿಯಾದ ಸಕ್ಕರೆ ಸೇವನೆ, ಮೆಗ್ನೀಸಿಯಮ್ ಅನ್ನು ಕಡಿಮೆ ಮಾಡುತ್ತದೆ. ದೇಹದ ನಿದ್ರಾ ಚಕ್ರವನ್ನು ಅಸ್ತವ್ಯಸ್ತಗೊಳಿಸುತ್ತದೆ. ನಿದ್ರೆ ಕೆಡುತ್ತಿದೆ, ಮಧ್ಯರಾತ್ರಿ ಎಚ್ಚರವಾಗುತ್ತಿದೆ, ದೇಹ ಸದಾ ಬಲಹೀನವಾಗುತ್ತಿದೆ ಎಂದರೆ ಸಕ್ಕರೆಯ ಸೇವನೆ ಹೆಚ್ಚಾಗಿದೆ ಎನ್ನಬಹುದು.

    ಚರ್ಮ ಸಮಸ್ಯೆಗಳು:

    • ಅತಿಯಾದ ಸಕ್ಕರೆ ಸೇವನೆಯು,
    • ಮುಖದಲ್ಲಿ ಮೊಡವೆ (Acne)
    • ಚರ್ಮದಲ್ಲಿ ಒಣತನ
    • ತುರಿಕೆ

    ಹಾರ್ಮೋನಲ್ ಚೇಂಜಸ್ ಇವುಗಳನ್ನು ಉಂಟುಮಾಡಬಹುದು. ಈ ಲಕ್ಷಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡರೆ, ತಕ್ಷಣ ಸಿಹಿಯನ್ನೂ ಪ್ಯಾಕೇಜ್ಡ್ ಜಂಕ್ ಫುಡ್‌ನನ್ನೂ ಕಡಿಮೆ ಮಾಡುವುದು ಒಳಿತು.

    ಸಿಹಿ ಅಂಶವನ್ನು ಸಂಪೂರ್ಣ ತ್ಯಜಿಸಬೇಕೇ?

    ಇಲ್ಲ! ದೇಹಕ್ಕೆ ಸ್ವಲ್ಪ ಸಿಹಿಯ ಅಗತ್ಯವಿದೆ. ಆದರೆ ಬಿಳಿ ಸಕ್ಕರೆಯ ಬದಲು ನೈಸರ್ಗಿಕ ಸಕ್ಕರೆಯನ್ನು ಆಯ್ಕೆ ಮಾಡಬೇಕು ಉದಾಹರಣೆಗೆ,

    ಹಣ್ಣುಗಳು (Natural Fructose)

    • ಹಾಲು, ಮೊಸರು (Lactose)
    • ಜೇನು (Honey – ಮಿತ ಪ್ರಮಾಣದಲ್ಲಿ)
    • ಬೆಲ್ಲ (Jaggery – ಮಿತ ಪ್ರಮಾಣದಲ್ಲಿ)

    ಇವು ದೇಹಕ್ಕೆ ಅಗತ್ಯ ಇರುವ ನೈಸರ್ಗಿಕ ಸಕ್ಕರೆಯನ್ನು ನೀಡುತ್ತವೆ, ಹಾನಿ ಮಾಡೋದಿಲ್ಲ.

    ಗಮನಿಸಿ: 

    • ದಿನಕ್ಕೆ 25 ಗ್ರಾಂಕ್ಕಿಂತ ಹೆಚ್ಚು ಬಿಳಿ ಸಕ್ಕರೆ ಸೇವನೆ ಬೇಡ.
    • ಪ್ಯಾಕೇಜಡ್ ಫುಡ್ ಲೇಬಲ್ಸ್ ಓದಿ.
    • ನೀರು ಹೆಚ್ಚು ಕುಡಿಯಿರಿ.
    • ವ್ಯಾಯಾಮಕ್ಕೆ ಆದ್ಯತೆ ನೀಡಿ.
  • ಅನ್ನ ನಿಲ್ಲಿಸಿದರೆ ತೂಕ ಇಳಿಕೆ, ಸಕ್ಕರೆ ನಿಯಂತ್ರಣ.! ಆದರೆ ಪೌಷ್ಟಿಕಾಂಶ ಕೊರತೆಯಾಗುತ್ತೆ ಎಚ್ಚರ!

    ಅನ್ನ ನಿಲ್ಲಿಸಿದರೆ ತೂಕ ಇಳಿಕೆ, ಸಕ್ಕರೆ ನಿಯಂತ್ರಣ.! ಆದರೆ ಪೌಷ್ಟಿಕಾಂಶ ಕೊರತೆಯಾಗುತ್ತೆ ಎಚ್ಚರ!

    ನಮ್ಮ ಭಾರತೀಯ ಆಹಾರ ಸಂಸ್ಕೃತಿಯಲ್ಲಿ ಅನ್ನ ಅಂದರೆ ಅಕ್ಕಿ, ಜೀವನದ ಅವಿಭಾಜ್ಯ ಭಾಗವಾಗಿದೆ. ದಿನದ ಮೂರು ಹೊತ್ತು ಊಟದ ಮಾತು ಬಂದಾಗ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಅಥವಾ ರಾತ್ರಿ ಭೋಜನ ಎಲ್ಲವೂ ಅನ್ನವಿಲ್ಲದೆ ಅಪೂರ್ಣವೆನಿಸುತ್ತದೆ. ಅನೇಕರು ಅನ್ನವನ್ನು ದಿನದ ಮೂರೂ ಹೊತ್ತು ಸೇವಿಸುತ್ತಾರೆ. ಕೆಲವರಿಗೆ ಅನ್ನವಿಲ್ಲದ ಊಟವೇ ಊಟವಲ್ಲ ಅನ್ನಿಸುವ ಮಟ್ಟಿಗೆ ಅನಿಸುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆರೋಗ್ಯ ಜಾಗೃತಿ ಹೆಚ್ಚಾದಂತೆ ಹಲವರು ಅನ್ನ ಸೇವನೆಯನ್ನು ಕಡಿಮೆ ಮಾಡುವುದಕ್ಕೋ ಅಥವಾ ಸಂಪೂರ್ಣ ನಿಲ್ಲಿಸುವುದಕ್ಕೋ ಮುಂದಾಗುತ್ತಿದ್ದಾರೆ.
    ಒಂದು ತಿಂಗಳು ಅನ್ನ ಸೇವನೆ ಮಾಡುವುದನ್ನು ನಿಲ್ಲಿಸಿದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ? ಇದರಿಂದ ನಿಜವಾಗಿಯೂ ಆರೋಗ್ಯ ಸುಧಾರಿಸುತ್ತದೆಯೇ ಅಥವಾ ಪೌಷ್ಟಿಕಾಂಶದ ಕೊರತೆಯುಂಟಾಗುತ್ತದೆಯೇ? ತಿಳಿದುಕೊಳ್ಳೋಣ ಬನ್ನಿ.

    ಹಸಿವು, ದುರ್ಬಲತೆ ಮತ್ತು ಕಿರಿಕಿರಿ:

    ಅನ್ನವು ಕಾರ್ಬೋಹೈಡ್ರೇಟ್‌ನ ಪ್ರಮುಖ ಮೂಲ. ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ. ಇದ್ದಕ್ಕಿದ್ದಂತೆ ಅನ್ನ ಸೇವನೆ ನಿಲ್ಲಿಸಿದರೆ, ದೇಹವು ಆ ಬದಲಾವಣೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮೊದಲ ಕೆಲವು ದಿನಗಳಲ್ಲಿ ಹಸಿವು ಹೆಚ್ಚಾಗುವುದು, ದುರ್ಬಲತೆ ಹಾಗೂ ಸ್ವಲ್ಪ ಕಿರಿಕಿರಿ ಅನುಭವವಾಗುವುದು ಸಹಜ. ಈ ಅವಧಿಯಲ್ಲಿ ರಾಗಿ, ಜೋಳ, ಬಾರ್ಲಿ, ಕ್ವಿನೋವಾ ಅಥವಾ ಕುಂಬಳಕಾಯಿ ಬೀಜಗಳಂತಹ ಪರ್ಯಾಯ ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

    ತೂಕ ಇಳಿಕೆ:

    ಅಕ್ಕಿಯಲ್ಲಿ ಇರುವ ಕಾರ್ಬೋಹೈಡ್ರೇಟ್‌ಗಳು ತ್ವರಿತವಾಗಿ ಜೀರ್ಣವಾಗುತ್ತವೆ ಮತ್ತು ಹೆಚ್ಚಿನ ಕ್ಯಾಲೊರಿಗಳನ್ನು ಒದಗಿಸುತ್ತವೆ. ಅನ್ನ ಸೇವನೆ ನಿಲ್ಲಿಸಿದರೆ ದೇಹಕ್ಕೆ ಬರುವ ಕ್ಯಾಲೊರಿಗಳ ಪ್ರಮಾಣ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ತೂಕ ಸ್ವಲ್ಪ ಮಟ್ಟಿಗೆ ಇಳಿಯಬಹುದು. ತೂಕ ಕಡಿಮೆ ಮಾಡಲು ಪ್ರಯತ್ನಿಸುತ್ತಿರುವವರಿಗೆ ಇದು ಸಹಾಯಕ.

    ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗುತ್ತದೆ:

    ಬಿಳಿ ಅಕ್ಕಿ ಬೇಗನೆ ಜೀರ್ಣವಾಗುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರಿಸುತ್ತದೆ. ಒಂದು ತಿಂಗಳು ಅನ್ನ ಸೇವನೆ ನಿಲ್ಲಿಸಿದರೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಸಮತೋಲನದಲ್ಲಿರುತ್ತದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿ.

    ಜೀರ್ಣಕ್ರಿಯೆಯಲ್ಲಿ ಬದಲಾವಣೆಗಳು:

    ಅಕ್ಕಿ ಕೆಲವರಲ್ಲಿ ಹೊಟ್ಟೆ ಉಬ್ಬುವುದು ಅಥವಾ ಮಲಬದ್ಧತೆ ಉಂಟುಮಾಡಬಹುದು. ಆದರೆ ಅನ್ನ ನಿಲ್ಲಿಸಿದ ನಂತರ ಆರಂಭದಲ್ಲಿ ದೇಹಕ್ಕೆ ಬದಲಾವಣೆ ಅಸಹಜವಾಗಿ ಕಾಣಬಹುದು — ಉದಾಹರಣೆಗೆ ಹೊಟ್ಟೆ ನೋವು ಅಥವಾ ಅಜೀರ್ಣ. ಆದರೆ ಹಣ್ಣು, ತರಕಾರಿ ಮತ್ತು ಧಾನ್ಯಗಳ ಪ್ರಮಾಣವನ್ನು ಹೆಚ್ಚಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ದೇಹವು ಹೊಸ ಆಹಾರ ಕ್ರಮಕ್ಕೆ ಹೊಂದಿಕೊಳ್ಳುತ್ತದೆ.

    ಪೌಷ್ಟಿಕಾಂಶ ಕೊರತೆಯ ಅಪಾಯ:

    ಅಕ್ಕಿಯಲ್ಲಿ ವಿಟಮಿನ್ ಬಿ (ವಿಶೇಷವಾಗಿ B1, B3, ಮತ್ತು B6)ಗಳು ಇದ್ದು, ದೇಹದ ಶಕ್ತಿ ಉತ್ಪಾದನೆಗೆ ಸಹಾಯಕವಾಗಿವೆ. ದೀರ್ಘಕಾಲ ಅನ್ನ ನಿಲ್ಲಿಸಿದರೆ ಈ ವಿಟಮಿನ್‌ಗಳ ಕೊರತೆಯಿಂದ ಆಯಾಸ, ಮಾನಸಿಕ ಒತ್ತಡ ಅಥವಾ ಶ್ರದ್ಧಾಭಾವದ ಕೊರತೆ ಉಂಟಾಗಬಹುದು. ಆದ್ದರಿಂದ ಅನ್ನ ಬಿಟ್ಟರೂ ಎಲೆ ತರಕಾರಿಗಳು, ಮೊಟ್ಟೆ, ಹಾಲು, ಬೇಳೆ ಹಾಗೂ ಇತರ ಧಾನ್ಯಗಳ ಮೂಲಕ ಪೌಷ್ಟಿಕಾಂಶವನ್ನು ಪೂರೈಸಿಕೊಳ್ಳಬೇಕು.

    ಒಂದು ತಿಂಗಳು ಅನ್ನ ಸೇವನೆ ನಿಲ್ಲಿಸುವುದು ದೇಹಕ್ಕೆ ತಾತ್ಕಾಲಿಕ ಬದಲಾವಣೆಗಳನ್ನು ತರಬಹುದು. ತೂಕ ಕಡಿಮೆಯಾಗುವುದು, ರಕ್ತದ ಸಕ್ಕರೆ ನಿಯಂತ್ರಣ, ಜೀರ್ಣಕ್ರಿಯೆ ಸುಧಾರಣೆ ಮುಂತಾದ ಪ್ರಯೋಜನಗಳಿದ್ದರೂ, ಪೌಷ್ಟಿಕಾಂಶ ಕೊರತೆಯ ಅಪಾಯವಿದೆ. ಆದ್ದರಿಂದ ಅನ್ನ ಸಂಪೂರ್ಣ ಬಿಟ್ಟುಬಿಡುವುದಕ್ಕಿಂತ, ಅದರ ಪ್ರಮಾಣವನ್ನು ನಿಯಂತ್ರಿಸಿ ಮತ್ತು ಪೌಷ್ಟಿಕ ಪರ್ಯಾಯ ಆಹಾರಗಳನ್ನು ಸೇರಿಸುವುದು ಹೆಚ್ಚು ಆರೋಗ್ಯಕರ ಮಾರ್ಗ.

  • ಹೃದಯದ ಆರೋಗ್ಯಕ್ಕಾಗಿ ದಿನನಿತ್ಯದ 7 ಪರಿಣಾಮಕಾರಿ ವ್ಯಾಯಾಮಗಳ ಪಟ್ಟಿ

    ಹೃದಯದ ಆರೋಗ್ಯಕ್ಕಾಗಿ ದಿನನಿತ್ಯದ 7 ಪರಿಣಾಮಕಾರಿ ವ್ಯಾಯಾಮಗಳ ಪಟ್ಟಿ

    ಇತ್ತೀಚಿನ ದಿನಗಳಲ್ಲಿ, ಅನಾರೋಗ್ಯಕರ ಜೀವನಶೈಲಿಯಿಂದಾಗಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹೃದಯಾಘಾತ, ಹೈಬಿಪಿ, ಹೈಕೋಲೆಸ್ಟ್ರಾಲ್, ಮತ್ತು ಡಯಾಬಿಟಿಸ್ ಮುಂತಾದ ಸಮಸ್ಯೆಗಳು ಯುವಕರಲ್ಲಿಯೂ ಹೆಚ್ಚಾಗುತ್ತಿವೆ. ಈ ಪರಿಸ್ಥಿತಿಯಲ್ಲಿ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಳವಾದ ಮತ್ತು ಪರಿಣಾಮಕಾರಿ ವ್ಯಾಯಾಮಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

    ಹೃದಯ ಆರೋಗ್ಯವನ್ನು ಸುಧಾರಿಸಲು 7 ಪರಿಣಾಮಕಾರಿ ವ್ಯಾಯಾಮಗಳು :

    1.ಚುರುಕಾದ ನಡಿಗೆ (Brisk Walking): 

    ಪ್ರತಿದಿನ 30 ನಿಮಿಷಗಳ ಕಾಲ ಚುರುಕಾದ ನಡಿಗೆ ಮಾಡುವುದರಿಂದ ರಕ್ತ ಸಂಚರಣೆ ಸುಧಾರಿಸುತ್ತದೆ, ರಕ್ತದೊತ್ತಡ ಕಡಿಮೆಯಾಗುತ್ತದೆ ಮತ್ತು ಹೃದಯದ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    2.ಈಜು (Swimming): 

    ಈಜು ಮಾಡುವುದರಿಂದ ಹೃದಯದ ಸ್ನಾಯುಗಳು ಬಲಪಡುತ್ತವೆ ಮತ್ತು ರಕ್ತ ಸಂಚರಣೆ ಸುಧಾರಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.

    3.ಯೋಗ (Yoga): 

    ಯೋಗವು ದೇಹ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಪ್ರಾಣಾಯಾಮ ಮತ್ತು ಧ್ಯಾನದಂತಹ ಯೋಗ ಅಭ್ಯಾಸಗಳು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ.

    4.ಸೈಕ್ಲಿಂಗ್ (Cycling): 

    ಸೈಕ್ಲಿಂಗ್ ಮಾಡುವುದರಿಂದ ಹೃದಯದ ಸ್ನಾಯುಗಳು ಬಲಪಡುತ್ತವೆ, ರಕ್ತ ಸಂಚರಣೆ ಸುಧಾರಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ 20 ನಿಮಿಷಗಳ ಕಾಲ ಸೈಕ್ಲಿಂಗ್ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

    5.ನೃತ್ಯ (Dance): 

    ನೃತ್ಯ ಮಾಡುವುದರಿಂದ ಹೃದಯದ ಕಾರ್ಯಕ್ಷಮತೆ ಸುಧಾರಿಸುತ್ತದೆ, ಒತ್ತಡ ಕಡಿಮೆಯಾಗುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಕೈಗಳನ್ನು ಮೇಲಕ್ಕೆತ್ತಿ ನೃತ್ಯ ಮಾಡುವುದರಿಂದ ಹೃದಯಕ್ಕೆ ಉತ್ತಮ ವ್ಯಾಯಾಮ ದೊರೆಯುತ್ತದೆ.

    6.ವ್ಯಾಯಾಮಗಳು (Home Workouts): 

    ಜಿಮ್‌ಗೆ ಹೋಗದೇ ಮನೆಯಲ್ಲಿ ಸರಳ ವ್ಯಾಯಾಮಗಳನ್ನು ಮಾಡುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸಬಹುದು. ಉದಾಹರಣೆಗೆ, ಸ್ಕ್ವಾಟ್, ಪುಷ್-ಅಪ್, ಸ್ಟೆಪ್ ಟಚ್, ಗ್ಲೂಟ್ ಬ್ರಿಡ್ಜ್ ಮುಂತಾದ ವ್ಯಾಯಾಮಗಳನ್ನು ಮನೆಯಲ್ಲಿ ಮಾಡಬಹುದು.

    7.ತೈ ಚಿ (Tai Chi): 

    ತೈ ಚಿ ಒಂದು ಚೀನೀ ಯೋಚನೆಯ ಪ್ರಕಾರದ ವ್ಯಾಯಾಮವಾಗಿದೆ. ಇದು ಶಾಂತ ಚಲನೆಗಳು ಮತ್ತು ಉಸಿರಾಟ ನಿಯಂತ್ರಣವನ್ನು ಒಳಗೊಂಡಿದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

    ಹೃದಯ ಆರೋಗ್ಯಕ್ಕೆ ಇನ್ನಷ್ಟು ಸಲಹೆಗಳು: 

    ಪ್ರತಿದಿನ 150 ನಿಮಿಷಗಳ ಕಾಲ ಮಧ್ಯಮ ತೀವ್ರತೆಯ ವ್ಯಾಯಾಮಗಳನ್ನು ಮಾಡುವುದನ್ನು American Heart Association ಶಿಫಾರಸು ಮಾಡುತ್ತದೆ.

    ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರ ಸೇವನೆ, ಧೂಮಪಾನದಿಂದ ದೂರವಿರುವುದು, ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಮುಖ್ಯ.

    ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು, ಪ್ರತಿದಿನವೂ ಚುರುಕಾದ ನಡಿಗೆ ಅಥವಾ ಇತರ ವ್ಯಾಯಾಮಗಳನ್ನು ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

    ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು, ಮೇಲಿನ ವ್ಯಾಯಾಮಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ತಪ್ಪಿಸಬಹುದು ಮತ್ತು ದೀರ್ಘಕಾಲಿಕ ಆರೋಗ್ಯವನ್ನು ಸಾಧಿಸಬಹುದು.

  • ಕರುಳಿನ ಆರೋಗ್ಯವನ್ನು ಕಾಪಾಡುವ ಕೆಲವು ಅತ್ಯುತ್ತಮ ಆಹಾರಗಳು ಇಲ್ಲಿವೆ!

    ಕರುಳಿನ ಆರೋಗ್ಯವನ್ನು ಕಾಪಾಡುವ ಕೆಲವು ಅತ್ಯುತ್ತಮ ಆಹಾರಗಳು ಇಲ್ಲಿವೆ!

    ನಮ್ಮ ದೇಹದ ಶ್ರೇಯಸ್ಸು ಕರುಳಿನ ಆರೋಗ್ಯದಿಂದಲೇ ಆರಂಭವಾಗುತ್ತದೆ ಎನ್ನುವುದು ಅತಿಶಯೋಕ್ತಿ ಅಲ್ಲ. ಸರಿಯಾದ ಜೀರ್ಣಕ್ರಿಯೆ ನಮ್ಮ ದೇಹದ ಸಮತೋಲನವನ್ನು ಕಾಪಾಡಿ ಶಕ್ತಿ, ಚೈತನ್ಯ ಮತ್ತು ರೋಗನಿರೋಧಕ ಶಕ್ತಿಗೆ ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವ ಕೆಲವು ಆಹಾರಗಳ ಕುರಿತು ತಿಳಿದುಕೊಳ್ಳೋಣ.

    ಫೈಬರ್ – ಕರುಳಿನ ಆರೋಗ್ಯದ ಹೀರೋ

    ನಾವು ತಿನ್ನುವ ಆಹಾರದಲ್ಲಿ ಫೈಬರ್ ಅಂಶ ತುಂಬಾ ಮುಖ್ಯ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಕರುಳಿನ ಚಲನವಲನ ಸರಾಗವಾಗಿರಲು ಇದು ನೆರವಾಗುತ್ತದೆ. ದಿನನಿತ್ಯದ ಆಹಾರದಲ್ಲಿ ಫೈಬರ್ ಸಮೃದ್ಧ ಪದಾರ್ಥಗಳನ್ನು ಸೇರಿಸುವುದು ಕರುಳಿನ ಆರೋಗ್ಯಕ್ಕೆ ಬಹಳ ಸಹಕಾರಿಯಾಗಿದೆ.

     ಹುರಿದ ಕಡಲೆ – ಚಿಕ್ಕದಾದರೂ ದೊಡ್ಡ ಲಾಭ

    ಹುರಿದ ಕಡಲೆ ನಮ್ಮ ಊಟದ ನಂತರ ತಿನ್ನಲು ಅತ್ಯುತ್ತಮವಾದ ಸ್ನ್ಯಾಕ್‌ ಆಗಿದೆ. ಇದರಲ್ಲಿ ಫೈಬರ್ ಹಾಗೂ ಪ್ರೋಟೀನ್ ಎರಡೂ ದೊರೆಯುತ್ತವೆ. ಕಡಲೆಯಲ್ಲಿರುವ ಕರಗದ ನಾರು ಮಲದ ಪ್ರಮಾಣವನ್ನು ಹೆಚ್ಚಿಸಿ ಮಲಬದ್ಧತೆಯನ್ನು ತಡೆಗಟ್ಟುವಂತೆ ಮಾಡುತ್ತದೆ. ಕರುಳಿನ ಚಲನೆಯನ್ನು ವೇಗಗೊಳಿಸಿ ಸುಲಭವಾಗಿ ತ್ಯಾಜ್ಯ ವಿಸರ್ಜನೆಗೆ ಸಹಾಯ ಮಾಡುತ್ತದೆ.

    ಕಪ್ಪು ಉದ್ದಿನ ಬೇಳೆ – ನೈಸರ್ಗಿಕ ಜೀರ್ಣಶಕ್ತಿ ವರ್ಧಕ

    ಕಪ್ಪು ಉದ್ದಿನ ಬೇಳೆ ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಹಿತಕರವಾಗಿದೆ. ಇದು ಫೈಬರ್‌ಗಳಿಂದ ಸಮೃದ್ಧವಾಗಿದ್ದು ಕರುಳಿನ ಚಲನಶೀಲತೆಯನ್ನು ಸುಧಾರಿಸುತ್ತದೆ. ಉದ್ದಿನ ಬೇಳೆಯಲ್ಲಿರುವ ನಾರು ಅಂಶ ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

     ಪೇರಳೆ – ಸರಳ ಹಣ್ಣು, ಶ್ರೇಷ್ಠ ಪ್ರಯೋಜನ

    ಪೇರಳೆ ಎಲ್ಲರಿಗೂ ಲಭ್ಯವಾಗುವ ಹಣ್ಣು. ಇದರಲ್ಲಿ ಕರಗುವ ಮತ್ತು ಕರಗದ ಎರಡೂ ರೀತಿಯ ಫೈಬರ್ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ದಿನಕ್ಕೆ ಒಂದು ಪೇರಳೆ ತಿಂದರೆ ಮಲಬದ್ಧತೆಯ ಸಮಸ್ಯೆ ದೂರವಾಗುತ್ತದೆ.

    ಚಿಯಾ ಬೀಜಗಳು – ಚಿಕ್ಕದಾದರೂ ಅದ್ಭುತ

    ಚಿಯಾ ಬೀಜಗಳಲ್ಲಿ ಕರಗುವ ಫೈಬರ್ ಅಧಿಕವಾಗಿ ದೊರೆಯುತ್ತದೆ. ನೀರಿನೊಂದಿಗೆ ಸೇರಿ ಹೊಟ್ಟೆಯೊಳಗೆ ಜೆಲ್ ರಚನೆ ಮಾಡುತ್ತದೆ, ಇದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ ಮತ್ತು ಆಹಾರ ಸರಿಯಾಗಿ ಹಜಮಾಗುತ್ತದೆ. ಈ ಬೀಜಗಳು ಮಲವನ್ನು ಮೃದುವಾಗಿ ಮತ್ತು ಸುಲಭವಾಗಿ ಹೊರಬರುವಂತೆ ಮಾಡುತ್ತವೆ.

     ರಾಸ್ಪೆರಿ – ಕರುಳಿನ ಸ್ನೇಹಿತ ಹಣ್ಣು

    ರಾಸ್ಪೆರಿ ಹಣ್ಣಿನಲ್ಲಿರುವ ಫೈಬರ್ ಕರುಳಿನ ಒಳಗಿನ ಉಪಕಾರಿ ಬ್ಯಾಕ್ಟೀರಿಯಾಗಳಿಗೆ ಆಹಾರವಾಗುತ್ತದೆ. ಈ ಸೂಕ್ಷ್ಮಜೀವಿಗಳು ದೇಹದೊಳಗೆ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಇದರ ಪರಿಣಾಮವಾಗಿ ದೇಹದಲ್ಲಿ ಪೋಷಕಾಂಶಗಳ ಶೋಷಣೆ ಸುಧಾರಿಸುತ್ತದೆ.

    ಕರುಳಿನ ಆರೋಗ್ಯ ಕಾಪಾಡುವುದು ದೀರ್ಘಕಾಲದ ಶಕ್ತಿಯ, ಸಂತೋಷದ ಮತ್ತು ಸಮತೋಲನದ ಗುಟ್ಟು. ಹೀಗಾಗಿ ದಿನನಿತ್ಯದ ಆಹಾರದಲ್ಲಿ ಇಂತಹ ನೈಸರ್ಗಿಕ, ಫೈಬರ್‌ಯುಕ್ತ ಪದಾರ್ಥಗಳನ್ನು ಸೇರಿಸಿ, ಕರುಳಿನ ಆರೈಕೆಗೆ ವಿಶೇಷ ಗಮನ ನೀಡಿದರೆ ಉತ್ತಮ.

  • ರುಚಿಗಿಂತ ಆರೋಗ್ಯ ಮುಖ್ಯ! ಚಿಕನ್‌ನ ಈ ಭಾಗಗಳು ನಿಮ್ಮ ದೇಹಕ್ಕೆ ಹಾನಿಕಾರಕ

    ರುಚಿಗಿಂತ ಆರೋಗ್ಯ ಮುಖ್ಯ! ಚಿಕನ್‌ನ ಈ ಭಾಗಗಳು ನಿಮ್ಮ ದೇಹಕ್ಕೆ ಹಾನಿಕಾರಕ

    ಇಂದಿನ ದಿನಮಾನದಲ್ಲಿ ಚಿಕನ್‌ ಮಾಂಸವು ಭಾರತೀಯರ ಅಡುಗೆಮನೆಯಲ್ಲಿ ಅಷ್ಟೇನೂ ಹೊಸ ಪದಾರ್ಥವಲ್ಲ. ನಗರಗಳಲ್ಲಿಯೂ ಗ್ರಾಮಾಂತರ ಪ್ರದೇಶಗಳಲ್ಲಿಯೂ ಜನರು ಚಿಕನ್‌ನ ರುಚಿಯನ್ನು ಸವಿಯುವುದು ದೈನಂದಿನ ಜೀವನದ ಒಂದು ಭಾಗವಾಗಿಬಿಟ್ಟಿದೆ. ಹೋಟೆಲ್‌ಗಳು, ಕುಟುಂಬ ಸಮಾರಂಭಗಳು, ಹಬ್ಬ-ಹರಿದಿನಗಳು ಅಥವಾ ಸರಳ ಊಟ ಯಾವ ಸಂದರ್ಭವಾಗಿದ್ದರೂ ಚಿಕನ್‌ ಬಟ್ಟಲು ಹಾಜರಿರುವುದು ಸಾಮಾನ್ಯ. ರುಚಿ, ಪೌಷ್ಟಿಕಾಂಶ ಹಾಗೂ ಇತರೆ ಮಾಂಸಗಳಿಗಿಂತ ಹೋಲಿಕೆ ಮಾಡಿದಾಗ ಕಡಿಮೆ ಬೆಲೆಯು ಇದರ ಜನಪ್ರಿಯತೆಯ ಪ್ರಮುಖ ಕಾರಣಗಳಾಗಿವೆ.

    ಚಿಕನ್‌ನಲ್ಲಿ ವಿಟಮಿನ್ ಬಿ, ನಿಯಾಸಿನ್‌, ಪ್ರೋಟೀನ್ ಹಾಗೂ ಅಗತ್ಯ ಖನಿಜಾಂಶಗಳು ತುಂಬಿರುತ್ತವೆ. ಇವು ದೇಹಕ್ಕೆ ಶಕ್ತಿ ನೀಡುವುದಲ್ಲದೆ ರೋಗನಿರೋಧಕ ಶಕ್ತಿ, ಮೂಳೆಗಳ ದೃಢತೆ ಮತ್ತು ನರಮಂಡಲದ ಸರಿಯಾದ ಕಾರ್ಯನಿರ್ವಹಣೆಗೆ ಸಹಕಾರಿಯಾಗುತ್ತವೆ. ಸರಿಯಾಗಿ ಬೇಯಿಸಿದ ಚಿಕನ್ ಸುಲಭವಾಗಿ ಜೀರ್ಣವಾಗುವುದರಿಂದ ಎಲ್ಲ ವಯಸ್ಸಿನವರಿಗೂ ಸೂಕ್ತವಾದ ಆಹಾರವಾಗಿದೆ.

    ಆದರೆ, ಈ ಎಲ್ಲಾ ಪ್ರಯೋಜನಗಳ ನಡುವೆಯೇ ಒಂದು ಪ್ರಮುಖ ವಿಷಯವನ್ನು ಬಹುತೇಕ ಜನರು ಕಡೆಗಣಿಸುತ್ತಾರೆ ಕೋಳಿಯ ಎಲ್ಲಾ ಭಾಗಗಳೂ ಆರೋಗ್ಯಕರವಲ್ಲ. ಕೆಲವು ಭಾಗಗಳಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ, ಕೀಟಾಣುಗಳು, ಹಾರ್ಮೋನುಗಳು ಹಾಗೂ ಹೆಚ್ಚುವರಿ ಕೊಬ್ಬು ಅಂಶಗಳು ತುಂಬಿರುತ್ತವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದು ದೀರ್ಘಾವಧಿಯಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಹೀಗಾಗಿ, ಯಾವ ಭಾಗಗಳನ್ನು ತಿನ್ನುವುದನ್ನು ತಪ್ಪಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

    ಕೋಳಿಯ ಕುತ್ತಿಗೆ (Neck):

    ಕೋಳಿಯ ಕುತ್ತಿಗೆಯ ಭಾಗದಲ್ಲಿ ವಿಷಕಾರಿ ಸೂಕ್ಷ್ಮಜೀವಿಗಳು ಹಾಗೂ ದುಗ್ಧರಸ ಗ್ರಂಥಿಗಳು ಅಡಗಿರುತ್ತವೆ. ಇವು ಬೇಯಿಸಿದರೂ ಸಂಪೂರ್ಣ ನಾಶವಾಗದೇ, ದೀರ್ಘಾವಧಿಯಲ್ಲಿ ದೇಹದಲ್ಲಿ ಸಂಗ್ರಹವಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಎಂದು ತಜ್ಞರ ಎಚ್ಚರಿಕೆ. ಹೀಗಾಗಿ ಚಿಕನ್ ಖರೀದಿಸುವಾಗ ಕುತ್ತಿಗೆಯ ಭಾಗವನ್ನು ತೆಗೆದುಹಾಕುವುದು ಅತ್ಯವಶ್ಯಕ.

    ಶ್ವಾಸಕೋಶ, ತಲೆ ಮತ್ತು ಕರುಳು:

    ಈ ಭಾಗಗಳಲ್ಲಿ ಅನೇಕ ಹಾನಿಕಾರಕ ಬ್ಯಾಕ್ಟೀರಿಯಾ ಹಾಗೂ ಕೀಟಾಣುಗಳು ತುಂಬಿರುತ್ತವೆ. ಅವುಗಳ ಸೇವನೆ ದೇಹದ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಮೂತ್ರನಾಳದ ಸೋಂಕು, ಹೊಟ್ಟೆ ಉಬ್ಬರ ಹಾಗೂ ಕೊಬ್ಬಿನ ಪ್ರಮಾಣದ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

    ಕೋಳಿ ಕಾಲುಗಳು (Chicken Legs):

    ಕೋಳಿ ಕಾಲುಗಳಲ್ಲಿ ಹೆಚ್ಚುವರಿ ಹಾರ್ಮೋನುಗಳು ಸಂಗ್ರಹವಾಗಿರುತ್ತವೆ. ಇವು ದೀರ್ಘಾವಧಿಯಲ್ಲಿ ಹಾರ್ಮೋನಲ್ ಅಸಮತೋಲನ, ತೂಕದ ಹೆಚ್ಚಳ ಹಾಗೂ ಮೆಟಾಬಾಲಿಕ್ (Metabolic) ಸಮಸ್ಯೆಗಳಿಗೆ ಕಾರಣವಾಗಬಹುದು. ಮಕ್ಕಳ ಹಾಗೂ ಯುವಕರಲ್ಲಿ ಬೆಳವಣಿಗೆಗೆ ಸಂಬಂಧಿಸಿದ ಅಸಮತೋಲನಗಳೂ ಉಂಟಾಗುವ ಅಪಾಯವಿದೆ.

    ಕೋಳಿ ಚರ್ಮ (Chicken Skin):

    ಕೋಳಿ ಚರ್ಮವು ಕೊಬ್ಬಿನ ಅಂಶದಿಂದ ಸಮೃದ್ಧವಾಗಿದೆ. 100 ಗ್ರಾಂ ಚರ್ಮದಲ್ಲಿ ಸರಾಸರಿ 32 ಗ್ರಾಂ ಕೊಬ್ಬು ಇರುತ್ತದೆ. ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ (LDL) ಪ್ರಮಾಣ ಹೆಚ್ಚಾಗಿ, ಹೃದ್ರೋಗ, ಅಧಿಕ ರಕ್ತದೊತ್ತಡ ಹಾಗೂ ಸ್ಥೂಲತೆ ಸಮಸ್ಯೆಗಳು ತಲೆದೋರುತ್ತವೆ.

    ಯುಎಸ್ಟಿಎ (USDA) ಅಧ್ಯಯನ ಪ್ರಕಾರ, ಚರ್ಮವಿಲ್ಲದೆ ಬೇಯಿಸಿದ ಒಂದು ಕಪ್ ಚಿಕನ್‌ನಲ್ಲಿ 231 ಕ್ಯಾಲೊರಿಗಳು ಇದ್ದರೆ, ಚರ್ಮದೊಂದಿಗೆ ಅದೇ ಪ್ರಮಾಣದ ಚಿಕನ್‌ನಲ್ಲಿ 276 ಕ್ಯಾಲೊರಿಗಳು ಇರುತ್ತವೆ ಅಂದರೆ ಹೆಚ್ಚುವರಿ ಕ್ಯಾಲೊರಿಗಳೂ ಸೇರಿ ಅನಗತ್ಯ ಕೊಬ್ಬು ದೇಹಕ್ಕೆ ಸೇರುತ್ತದೆ.

    ಚಿಕನ್‌ ಅನ್ನು ಆರೋಗ್ಯಕರವಾಗಿ ಸೇವಿಸುವ ಸರಿಯಾದ ವಿಧಾನ:

    ಚಿಕನ್ ಖರೀದಿಸುವಾಗ ಕುತ್ತಿಗೆ, ತಲೆ, ಶ್ವಾಸಕೋಶ ಮತ್ತು ಕರುಳು ಭಾಗಗಳನ್ನು ತೆಗೆದುಹಾಕಿ.

    ಚರ್ಮವಿಲ್ಲದ ಚಿಕನ್ ಆಯ್ಕೆ ಮಾಡಿ ಬೇಯಿಸಿ ತಿನ್ನುವುದು ಒಳಿತು. ಎಣ್ಣೆಯಲ್ಲಿ ಕರಿಯುವ ಬದಲು ಬೇಯಿಸುವುದು ಅಥವಾ ಉಪ್ಪಿನ ನೀರಿನಲ್ಲಿ ಬೇಯಿಸುವುದು ಉತ್ತಮ.

    ಅತಿಯಾಗಿ ಸೇವಿಸುವುದನ್ನು ತಪ್ಪಿಸಿ, ಸಮತೋಲನದ ಆಹಾರ ಪದ್ಧತಿಯನ್ನು ಅನುಸರಿಸಿ.

    ಚಿಕನ್ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದರೂ ಅದರ ಕೆಲವು ಭಾಗಗಳು ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು ಎಂಬುದನ್ನು ನಿರ್ಲಕ್ಷ್ಯ ಮಾಡಬಾರದು. ಸರಿಯಾದ ಆಯ್ಕೆ, ಸ್ವಚ್ಛ ಸಿದ್ಧತೆ ಹಾಗೂ ನಿಯಂತ್ರಿತ ಸೇವನೆಯ ಮೂಲಕ ಚಿಕನ್‌ನ ಪೌಷ್ಟಿಕ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡು, ಅನಾರೋಗ್ಯದ ಅಪಾಯವನ್ನು ತಪ್ಪಿಸಬಹುದು.

  • ಬೆಳಗ್ಗೆ ಖಾಲಿ ಹೊಟ್ಟೆಗೆ ಮೆಂತ್ಯ ನೀರು ಕುಡಿದರೇ, ದೇಹದಲ್ಲಿ ಹಲವಾರು ಪ್ರಯೋಜನಗಳ ಲಾಭ ಪಡೆಯಬಹುದು!

    ಬೆಳಗ್ಗೆ ಖಾಲಿ ಹೊಟ್ಟೆಗೆ ಮೆಂತ್ಯ ನೀರು ಕುಡಿದರೇ, ದೇಹದಲ್ಲಿ ಹಲವಾರು ಪ್ರಯೋಜನಗಳ ಲಾಭ ಪಡೆಯಬಹುದು!

    ಭಾರತೀಯ ಅಡುಗೆಮನೆಯಲ್ಲಿ ಮೆಂತ್ಯ (Fenugreek) ಒಂದು ಸಾಮಾನ್ಯ ಮತ್ತು ಅಗತ್ಯ ಪದಾರ್ಥ. ಇದು ಕೇವಲ ಅಡುಗೆಯ ರುಚಿಯನ್ನು ಹೆಚ್ಚಿಸುವುದಲ್ಲದೆ, ಅನೇಕ ಆರೋಗ್ಯಕರ ಗುಣಗಳಿಂದ ಕೂಡಿದೆ. ಪಾರಂಪರಿಕ ಆಯುರ್ವೇದದಲ್ಲೂ ಮೆಂತ್ಯ ಬೀಜಗಳಿಗೆ ಮಹತ್ತರ ಸ್ಥಾನವಿದೆ. ಇತ್ತೀಚಿನ ದಿನಗಳಲ್ಲಿ, ನೈಸರ್ಗಿಕ ಹಾಗೂ ಸರಳ ಗೃಹೌಷಧಿಗಳತ್ತ ಜನರು ಮತ್ತೆ ಮುಖಮಾಡುತ್ತಿರುವ ಹಿನ್ನೆಲೆಯಲ್ಲಿ ಮೆಂತ್ಯ ನೀರು ಕುಡಿಯುವ ಅಭ್ಯಾಸ ಒಂದು ಟ್ರೆಂಡ್ ಆಗಿದೆ.

    ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೆನೆಸಿದ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಿಂದ ಹಿಡಿದು ತೂಕ ಇಳಿಕೆವರೆಗೆ ಹಲವು ಲಾಭಗಳು ದೊರೆಯುತ್ತವೆ. ಕೇವಲ ಒಂದೇ ವಾರದಲ್ಲಿ ಈ ನೈಸರ್ಗಿಕ ಪಾನೀಯವು ದೇಹದಲ್ಲಿ ಹಿತಕರ ಬದಲಾವಣೆಗಳನ್ನು ತರುವ ಸಾಮರ್ಥ್ಯವಿದೆ. ಇದೀಗ ಮೆಂತ್ಯ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ದೊರೆಯುವ ಪ್ರಮುಖ ಆರೋಗ್ಯ ಲಾಭಗಳನ್ನು ಬಗ್ಗೆ ತಿಳಿದುಕೊಳ್ಳೋಣ.

    ರಕ್ತದಲ್ಲಿನ ಸಕ್ಕರೆ ನಿಯಂತ್ರಣ:

    ಮೆಂತ್ಯ ಬೀಜಗಳಲ್ಲಿ ಫೈಬರ್ (ನಾರಿನಾಂಶ) ಅಧಿಕ ಪ್ರಮಾಣದಲ್ಲಿದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ, ರಕ್ತದಲ್ಲಿ ಸಕ್ಕರೆಯ ಹಠಾತ್ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಡಯಾಬಿಟೀಸ್ ನಿಯಂತ್ರಣಕ್ಕೆ ಮೆಂತ್ಯ ನೀರು ಸಹಾಯಕ ಎಂದು ಹಲವು ಅಧ್ಯಯನಗಳು ಸೂಚಿಸುತ್ತವೆ.

    ಜೀರ್ಣಕ್ರಿಯೆ ಸುಧಾರಣೆ ಮತ್ತು ಮಲಬದ್ಧತೆ ನಿವಾರಣೆ:

    ಮೆಂತ್ಯ ನೆನೆಸಿದ ನೀರು ನಾರಿನಾಂಶದಿಂದ ಸಮೃದ್ಧವಾಗಿರುವುದರಿಂದ, ಅಜೀರ್ಣ, ಮಲಬದ್ಧತೆ ಹಾಗೂ ಕರುಳಿನ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ನಿಯಮಿತ ಸೇವನೆ ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸಲು ಸಹಕಾರಿ.

    ಹೃದಯದ ಆರೋಗ್ಯಕ್ಕೆ ಪೋಷಕ:

    ಮೆಂತ್ಯ ಹಾಕಿ ಕುದಿಸಿದ ನೀರು ‘ಕೆಟ್ಟ’ ಕೊಲೆಸ್ಟ್ರಾಲ್ (LDL) ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ತಗ್ಗುತ್ತದೆ ಮತ್ತು ಹೃದಯದ ಆರೋಗ್ಯ ಸುಧಾರಿಸುತ್ತದೆ.

    ರೋಗನಿರೋಧಕ ಶಕ್ತಿ ಹೆಚ್ಚಳ:

    ಮೆಂತ್ಯ ಬೀಜಗಳಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತವೆ. ನಿಯಮಿತವಾಗಿ ಮೆಂತ್ಯ ನೀರು ಕುಡಿಯುವುದು ವೈರಲ್ ಅಥವಾ ಸೀಸನಲ್ ಸೋಂಕುಗಳ ವಿರುದ್ಧ ದೇಹವನ್ನು ಬಲಪಡಿಸಲು ಸಹಾಯಕ.

    ತೂಕ ನಿಯಂತ್ರಣ ಮತ್ತು ಹೊಟ್ಟೆ ಕೊಬ್ಬು ಕರಗಿಸಲು ಸಹಾಯಕ:

    ಫೈಬರ್ ಅಧಿಕ ಪ್ರಮಾಣದಲ್ಲಿರುವುದರಿಂದ ಮೆಂತ್ಯ ನೀರು ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ, ಅತಿಯಾಗಿ ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡುತ್ತದೆ. ಇದು ಮೆಟಾಬಾಲಿಸಂ ಅನ್ನು ಸುಧಾರಿಸಿ ಕೊಬ್ಬು ಕರಗಿಸಲು ಸಹಕಾರಿ.

    ಚರ್ಮದ ಆರೋಗ್ಯದಲ್ಲಿ ಸುಧಾರಣೆ:

    ಮೆಂತ್ಯ ನೀರಿನ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ–ಇನ್‌ಫ್ಲಮೇಟರಿ ಗುಣಗಳು ಚರ್ಮದ ಸೋಂಕುಗಳು, ಮೊಡವೆ, ಹಾಗೂ ಉರಿಯೂತಗಳನ್ನು ತಗ್ಗಿಸಲು ಸಹಾಯ ಮಾಡುತ್ತವೆ. ನಿಯಮಿತ ಸೇವನೆ ಚರ್ಮವನ್ನು ಒಳಗಿನಿಂದಲೇ ತೇಜೋಮಯಗೊಳಿಸುತ್ತದೆ.

    ಮೆಂತ್ಯ ನೀರು ನೈಸರ್ಗಿಕವಾಗಿದ್ದರೂ, ಪ್ರತಿಯೊಬ್ಬರ ದೇಹದ ಪ್ರತಿಕ್ರಿಯೆ ವಿಭಿನ್ನವಾಗಿರಬಹುದು. ಯಾವುದೇ ಹೊಸ ಪೌಷ್ಟಿಕ ಅಥವಾ ಆರೋಗ್ಯ ಕ್ರಮವನ್ನು ಆರಂಭಿಸುವ ಮೊದಲು ವೈದ್ಯರು ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆಯುವುದು ಅತ್ಯಾವಶ್ಯಕ. ವಿಶೇಷವಾಗಿ ಗರ್ಭಿಣಿಯರು, ಶಿಶುವಿಗೆ ಹಾಲುಣಿಸುವ ತಾಯಂದಿರು ಮತ್ತು ಡಯಾಬಿಟೀಸ್ ಔಷಧಿಗಳನ್ನು ಸೇವಿಸುತ್ತಿರುವವರು ತಜ್ಞರ ಮಾರ್ಗದರ್ಶನ ಪಡೆಯುವುದು ಸೂಕ್ತ.

    ಮೆಂತ್ಯ ನೀರು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಸುಲಭವಾಗಿದ್ದು, ಅದರ ಲಾಭಗಳು ಅಪಾರ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಗೆ ಒಂದು ಗ್ಲಾಸ್ ಮೆಂತ್ಯ ನೀರು ನಿಮ್ಮ ದೇಹದ ಆರೋಗ್ಯದಲ್ಲಿ ನೈಸರ್ಗಿಕ ಬದಲಾವಣೆ ತರಬಲ್ಲ ಚಿಕ್ಕ ಹೆಜ್ಜೆ.

  • ಯುವಕರು ನಶೆ ಮುಕ್ತರಾಗಿ ದೇಶಾಭಿಮಾನ ಬೆಳೆಸಿಕೊಳ್ಳಿ- ಸಿದ್ದರಾಮ 

    ಯುವಕರು ನಶೆ ಮುಕ್ತರಾಗಿ ದೇಶಾಭಿಮಾನ ಬೆಳೆಸಿಕೊಳ್ಳಿ- ಸಿದ್ದರಾಮ 

    ಸಿರವಾರ: ಹಲವು ಯುವಕರು ನಶೆ ಅಥವಾ ಮತ್ತು ಭರಿಸುವ ಅಪಾಯಕಾರಿ ಪದಾರ್ಥಗಳನ್ನು ಸೇವಿಸುವ ವ್ಯಸನಗಳಿಗೆ ಬಲಿಯಾಗಿದ್ದಾರೆ. ಇದರಿಂದ ಅವರ ಆರೋಗ್ಯ ಹಾಳಾಗುವುದಷ್ಟೇ ಅಲ್ಲ ದೇಶದ ಅಭಿವೃದ್ಧಿಯೂ ಕುಂಠಿತವಾಗುತ್ತಿದೆ. ಆದ್ದರಿಂದ ಯುವಕರು ನಶೆ ಮುಕ್ತರಾಗಿ ದೇಶಭಕ್ತಿ ಮತ್ತು ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಶಾಲಾ ಮುಖ್ಯ ಗುರು ಸಿದ್ಧರಾಮ ಹೇಳಿದರು.

    ತಾಲೂಕಿನ ತುಪ್ಪದೂರು ಕೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಲೆಯಲ್ಲಿ ನಶಾ ಮುಕ್ತ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತಿ ಹೆಚ್ಚು ಜನರು ಮಾದಕ ವ್ಯಸನಕ್ಕೆ ಬಲಿಯಾಗುತಿದ್ದು, ಇದನ್ನು ತಡೆಗಟ್ಟಲು ಪ್ರತಿಯೊಬ್ಬ ಯುವಕರು ನಶಾಮುಕ್ತ  ಜಿಲ್ಲೆಗೆ ಕೈಜೋಡಿಸಿದಾಗ ಮಾತ್ರ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

    ಯುವಕರು ಚಿಕ್ಕ ವಯಸ್ಸಿನಲ್ಲಿ ನಶೆ ತರಿಸುವ ಚಟಗಳಿಗೆ ದಾಸರಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಪಂಜಾಬ ಮತ್ತಿತರ ರಾಜ್ಯಗಳಲ್ಲಿ ಇದು ಮಿತಿಮೀರುತ್ತಿದೆ. ಇದರಿಂದ ಸಮಾಜ ಮತ್ತು ದೇಶದ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ. ಯುವಕರೇ ದೇಶದ ಶಕ್ತಿಯಾಗಿದ್ದಾರೆ.

    ಈ ಸಂದರ್ಭದಲ್ಲಿ ಶಾಲೆಯ ಅತಿಥಿ ಶಿಕ್ಷಕರಾದ ನಾಗೇಶ ಭೋವಿ ಕುರುಡಿ, ಶಿವಪ್ಪ ನಾಯಕ ಕಲ್ಲೂರು, ಅಂಗನವಾಡಿ ಶಿಕ್ಷಕಿ ಸುಜಾತ ಮಾಚನೂರು, ಅಡುಗೆ ಸಿಬ್ಬಂದಿ ದೇವಮ್ಮ, ಬಸ್ಸಮ್ಮ, ಹುಲಿಗೆಮ್ಮ ಗ್ರಾಮದ ಯುವಕರಾದ ಹನುಮಂತ ನಾಯಕ, ರವಿ ನಾಯಕ, ಉರುಕುಂದ ನಾಯಕ, ಚೆನ್ನಯ, ಮಾರೆಪ್ಪ ನಾಯಕ, ಯಂಕಪ್ಪ ನಾಯಕ, ಯಲ್ಲಾಲಿಂಗ ನಾಯಕ, ಹುಲಿಗೇಶ ನಾಯಕ, ನಾಗರಾಜ, ಯಂಕಪ್ಪ , ದೇವಯ್ಯ ನಾಯಕ, ಯಲ್ಲಾಲಿಂಗ, ಮಹೇಶ್ ನಾಯಕ ಸೇರಿದಂತೆ ಇತರರಿದ್ದರು.

  • ಆಸ್ಪತ್ರೆಯ ಸುತ್ತ ಸ್ವಚ್ಛತೆ ಕಾಪಾಡಿ

    ಆಸ್ಪತ್ರೆಯ ಸುತ್ತ ಸ್ವಚ್ಛತೆ ಕಾಪಾಡಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಆಸ್ಪತ್ರೆಯ ಸುತ್ತ ಸ್ವಚ್ಛತೆ ಕಾಪಾಡಿ ಜನತೆಗೆ ಉತ್ತಮ ಸೇವೆ ಒದಗಿಸಬೇಕಿದೆ. ಆಸ್ಪತ್ರೆಯ ಸುತ್ತಲಿನ ಪರಿಸರದ ಸ್ವಚ್ಛತೆಯ ಕಡೆಗೆ ಪ್ರತಿಯೊಬ್ಬರೂ ಗಮನಹರಿಸಬೇಕು, ಆಸ್ಪತ್ರೆಯ ಬಳಿ ನಾಗರೀಕರು ಕೂಡ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಗರಸಭೆ ಅಧ್ಯಕ್ಷೆ ಕು.ಲಲಿತಾ ಮೌಲಾಲಿ ಅನಪೂರ ಹೇಳಿದರು.

    ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಸ್ವಚ್ಚತೆ ಕುರಿತು ಆಸ್ಪತ್ರೆ ಸಿಬ್ಬಂದಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಎಲ್ಲೆಂದರಲ್ಲಿ ಮನೆಯಿಂದ ತಂದ ಊಟ ಮಾಡಿ ಅಲ್ಲೇ ಉಳಿದ ಅನ್ನವನ್ನು ಬಿಸಾಡುವುದು, ಬಿಡಿ, ಸಿಗರೇಟ್ ಸೇದುವುದು, ತಂಬಾಕು ಗುಟಕಾ ತಿಂದು ಉಗುಳುವುದು ಯಾರೂ ಮಾಡಬಾರದು ನಮ್ಮ ಆಸ್ಪತ್ರೆ ಸ್ವಚ್ಚತೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲದೆ ಎಂದು ಹೇಳಿದರು.
    ಆಸ್ಪತ್ರೆ ಆವರಣದಲ್ಲಿ ಕಸ ಇದ್ದರೆ ಪ್ರತಿಯೊಬ್ಬರೂ ಮೂಗು ಮುಚ್ಚಿಕೊಂಡೇ ತಿರುಗುವಂತಹ ಪರಿಸ್ಥಿತಿ ಬರುತ್ತದೆ. ನಾಗರೀಕರ ನಿಷ್ಕಾಳಜಿಯೂ ಕೂಡ ಪರಿಸರ ಸ್ವಚ್ಚತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಪರಿಸರ ಅಭಿಯಂತ ಪ್ರಶಾಂತ, ಡಾ.ಅಂಗಡಿ, ಡಾ.ರಿಜ್ವಾನಾ, ಎಸ್.ಎ.ಶಿವಪುತ್ರ, ಮಾಜಿ ಸದಸ್ಯ ಅಬ್ದುಲ್ ಖರೀಂ ಸೇರಿದಂತೆ ಇತರರಿದ್ದರು.

    ಸರಕಾರಿ ಆಸ್ಪತ್ರೆಯ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಕಸದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಯಶಸ್ವಿ ಆಗ್ತೇವೆ. ಸಿಬ್ಬಂದಿಗೆ ಕಸವನ್ನು ಸರಿಯಾಗಿ ವಿಂಗಡಿಸುವ ಮಹತ್ವ ಹಾಗೂ ಪರಿಸರದ ಮೇಲೆ ಅದರ ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.

    ಕು.ಲಲಿತಾ ಮೌಲಾಲಿ ಅನಪೂರ, ನಗರಸಭೆ ಅಧ್ಯಕ್ಷರು, ಯಾದಗಿರಿ