Category: Education

  • ಸುಪ್ರೀಂಕೋರ್ಟ್ ತೀರ್ಪಿಗೆ ಸವಾಲು: ಸಾವಿರಾರು ಶಿಕ್ಷಕರ ಭವಿಷ್ಯ ರಕ್ಷಿಸಲು ಸರ್ಕಾರದ ದೊಡ್ಡ ಹೆಜ್ಜೆ

    ಸುಪ್ರೀಂಕೋರ್ಟ್ ತೀರ್ಪಿಗೆ ಸವಾಲು: ಸಾವಿರಾರು ಶಿಕ್ಷಕರ ಭವಿಷ್ಯ ರಕ್ಷಿಸಲು ಸರ್ಕಾರದ ದೊಡ್ಡ ಹೆಜ್ಜೆ

    ರಾಜ್ಯದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಕಡ್ಡಾಯಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಕಳೆದ ಕೆಲವು ವಾರಗಳಿಂದ ಭಾರೀ ಚರ್ಚೆಗೆ ಕಾರಣವಾಗಿತ್ತು. ಸಾವಿರಾರು ಶಿಕ್ಷಕರ ಭವಿಷ್ಯಕ್ಕೆ ನೇರವಾಗಿ ಸಂಬಂಧ ಹೊಂದಿರುವ ಈ ತೀರ್ಪು, ಶಿಕ್ಷಣ ವಲಯದಲ್ಲೇ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು. ವಿಶೇಷವಾಗಿ, ಹಲವು ವರ್ಷಗಳಿಂದ ಸೇವೆ ನಿರತವಾಗಿರುವ ಶಿಕ್ಷಕರಿಗೆ ಈ ನಿಯಮವನ್ನು ಪೂರ್ವಾನ್ವಯವಾಗಿ (retrospective) ಜಾರಿ ಮಾಡಲು ಯತ್ನಿಸುವುದು ನ್ಯಾಯೋಚಿತವಾಗಿಲ್ಲ ಎಂಬ ಅಭಿಪ್ರಾಯಗಳು ರಾಜ್ಯದಾದ್ಯಂತ ಕೇಳಿಬರುತ್ತಿದ್ದವು.

    ಈ ನಡುವೆ, ಶಿಕ್ಷಕರು ಬಹಳ ನಿರೀಕ್ಷಿಸುತ್ತಿದ್ದ ಮಹತ್ವದ ಬೆಳವಣಿಗೆ ಇದೀಗ ನಡೆದಿದ್ದು ಕರ್ನಾಟಕ ಸರ್ಕಾರವೇ ಶಿಕ್ಷಕರ ಪರ ನಿಂತು ಸುಪ್ರೀಂಕೋರ್ಟ್ ತೀರ್ಪಿನ ಮರುಪರಿಶೀಲನೆಗಾಗಿ ಅರ್ಜಿ ಸಲ್ಲಿಸಲು ತೀರ್ಮಾನಿಸಿದೆ. ಇದರಿಂದ ಸೇವಾ ನಿರತ ಶಿಕ್ಷಕರಿಗೆ ದೊಡ್ಡ ಮಟ್ಟದ ಭದ್ರತೆ ಒದಗಿಸುವ ದಾರಿಯು ತೆರೆಯಲಾಗಿದೆ.

    ಸರ್ಕಾರದಿಂದ ಶಿಕ್ಷಕರಿಗೆ ಸಿಹಿ ಸುದ್ದಿ:

    ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು ಈ ಕುರಿತು ಮಾಹಿತಿ ನೀಡಿದ್ದು, ಮುಖ್ಯಮಂತ್ರಿಗಳು ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಎಚ್‌.ಕೆ. ಪಾಟೀಲ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಂಘ ಧನ್ಯವಾದಗಳನ್ನು ತಿಳಿಸಿದೆ.

    ಸಂಘದ ಪ್ರಕಾರ, 04-09-2025 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಪ್ರಕಾರ, ರಾಜ್ಯ ಸರ್ಕಾರವು ಟಿಇಟಿ ಕಡ್ಡಾಯಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮರುಪರಿಶೀಲನೆ ಅರ್ಜಿ (Review Petition) ಸಲ್ಲಿಸಲು ಕಾನೂನು ಇಲಾಖೆಯಿಂದ ಅಧಿಕೃತ ಅನುಮೋದನೆ ಪಡೆದಿದೆ.

    ಇದು ಶಿಕ್ಷಕರ ಹಿತಾಸಕ್ತಿಯನ್ನು ಕಾಪಾಡುವ ಐತಿಹಾಸಿಕ ತೀರ್ಮಾನ ಎಂದು ಸಂಘ ಹೇಳಿದೆ.

    ಸರ್ಕಾರದ ಕಾನೂನು ಹೋರಾಟ:

    • ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ ಎಚ್ ಎಸ್ ಮತ್ತು ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಪ್ರಕಟಣೆಯಲ್ಲಿ ತಿಳಿಸಿದಂತೆ,
    • ಸುಪ್ರೀಂಕೋರ್ಟ್ ಟಿಇಟಿ ಕಡ್ಡಾಯ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರವೇ ಮರುಪರಿಶೀಲನೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.
    • ಈ ಕುರಿತು ಕಾನೂನು ಇಲಾಖೆಯಿಂದ ಅನುಮೋದನೆ ಪಡೆದು ಕಡತವನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದೆ.
    • ಪೂರ್ವಾನ್ವಯವಾಗಿ ಟಿಇಟಿಯನ್ನು ಜಾರಿಗೊಳಿಸುವುದು ಸಂವಿಧಾನಬದ್ಧವಾಗಿ ಸರಿಯಲ್ಲ ಎಂಬ ಅಭಿಪ್ರಾಯ ಸ್ವೀಕರಿಸಲಾಗಿದೆ.

    ಶಿಕ್ಷಕರ ಚಿಂತನೆ ಮತ್ತು ರಾಜ್ಯದ ವಾಸ್ತವ ಸ್ಥಿತಿ:

    ರಾಜ್ಯದಲ್ಲಿ ಈಗಾಗಲೇ 1.68 ಲಕ್ಷ ಶಿಕ್ಷಕರ ಮೇಲೆ ಈ ತೀರ್ಪಿನ ಪರಿಣಾಮ ಬೀರುವ ಸಾಧ್ಯತೆ ಬಗ್ಗೆ ದೊಡ್ಡ ಚರ್ಚೆಯಿತ್ತು.

    ನೂರಾರು ಶಿಕ್ಷಕರು ವರ್ಷಗಳ ಸೇವಾ ಅನುಭವದ ನಂತರ ಪದೋನ್ನತಿ ಪಡೆಯುವ ಹಂತದಲ್ಲಿದ್ದರು. ಇವರಿಗೆ ಈಗ ಮತ್ತೊಮ್ಮೆ ಟಿಇಟಿ ಕಡ್ಡಾಯ ಮಾಡುವುದು ಅನ್ಯಾಯಕರ ಎಂಬ ಅಭಿಪ್ರಾಯದೊಂದಿಗೆ, ಸೇವಾ ನಿರತ ಶಿಕ್ಷಕರಿಗೆ ಟಿಇಟಿ ಕಡ್ಡಾಯ ವಿಸ್ತರಿಸುವುದು ಸರಿಯಲ್ಲ. ಈಗಾಗಲೇ ತರಬೇತಿ ಪಡೆದು, ನೇಮಕಾತಿಯ ಸಮಯದಲ್ಲಿ ಅರ್ಹತೆ ಪಡೆದಿದ್ದಾರೆ. ರಾಜ್ಯದಲ್ಲಿ ಶಿಕ್ಷಕರ ಕೊರತೆ ಇನ್ನೂ ಮುಂದುವರಿದಿದೆ ಎಂಬ ಪ್ರಮುಖ ಅಂಶಗಳನ್ನು ಸರ್ಕಾರದ ಗಮನಕ್ಕೆ ತರಲಾಗಿತ್ತು.

    ರಾಜಕೀಯ ಮತ್ತು ಆಡಳಿತಾತ್ಮಕ ಬೆಂಬಲ:

    ಸಂಘ ಸ್ಪಷ್ಟವಾಗಿ ಹೇಳಿರುವಂತೆ, ರಾಜ್ಯದ ಸಮಸ್ತ ಶಿಕ್ಷಕರ ಹಿತಾಸಕ್ತಿಯನ್ನು ಪರಿಗಣಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಎಚ್‌.ಕೆ. ಪಾಟೀಲ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಇವರ ಸಂಯುಕ್ತ ಪ್ರಯತ್ನದಿಂದಲೇ ಈ ಮರುಪರಿಶೀಲನೆ ಅರ್ಜಿಗೆ ದಾರಿ ಮಾಡಿಕೊಡಲಾಗಿದೆ.

    ಸುಪ್ರೀಂ ಕೋರ್ಟ್ ತೀರ್ಪಿನಿಂದ ಆತಂಕಗೊಂಡಿದ್ದ ಶಿಕ್ಷಕರಿಗೆ ಈಗ ಸರ್ಕಾರವೇ ಧೈರ್ಯ ತುಂಬುವ ನಿರ್ಧಾರ ಕೈಗೊಂಡಿದೆ. ಮರುಪರಿಶೀಲನೆ ಅರ್ಜಿ ಸಲ್ಲಿಸುವುದು, ರಾಜ್ಯದಲ್ಲಿ ಸಾವಿರಾರು ಶಿಕ್ಷಕರ ಉದ್ಯೋಗ ಮತ್ತು ಪದೋನ್ನತಿ ಭವಿಷ್ಯವನ್ನು ರಕ್ಷಿಸಬಹುದಾದ ಮಹತ್ವದ ಹೆಜ್ಜೆಯಾಗಬಹುದು. ಮುಂದಿನ ಹಂತದಲ್ಲಿ ಸುಪ್ರೀಂಕೋರ್ಟ್ ಈ ಅರ್ಜಿಯ ಮೇಲೆ ನೀಡುವ ತೀರ್ಮಾನವೇ ಶಿಕ್ಷಕರ ಭವಿಷ್ಯವನ್ನು ನಿರ್ಧರಿಸಲಿದೆ.

  • TET 2025 ಪರೀಕ್ಷೆಗೆ ಅಧಿಕೃತ ಅರ್ಜಿ ಆಹ್ವಾನ

    TET 2025 ಪರೀಕ್ಷೆಗೆ ಅಧಿಕೃತ ಅರ್ಜಿ ಆಹ್ವಾನ

    ರಾಜ್ಯದ ಸಾವಿರಾರು ಶಿಕ್ಷಕ ಹುದ್ದೆಗಳಿಗೆ ಬಾಗಿಲು ತೆಗೆಯುವ ಮಹತ್ವದ ಪರೀಕ್ಷೆಯಾದ ಶಿಕ್ಷಕರ ಅರ್ಹತಾ ಪರೀಕ್ಷೆ (TET) – 2025 ಗಾಗಿ ಕರ್ನಾಟಕ ಸರ್ಕಾರ ಅಧಿಕೃತವಾಗಿ ಅರ್ಜಿ ಆಹ್ವಾನಿಸಿದೆ. ಈ ಮೂಲಕ ಶಿಕ್ಷಕ ವೃತ್ತಿಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಮತ್ತೆ ಅವಕಾಶ ದೊರಕಿದೆ.

    ಪರೀಕ್ಷೆಯ ದಿನಾಂಕ ಹಾಗೂ ಅಧಿಕೃತ ಪ್ರಕಟಣೆ:

    ಶಿಕ್ಷಕರ ಅರ್ಹತಾ ಪರೀಕ್ಷೆ ಡಿಸೆಂಬರ್ 7 ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ. ಪರೀಕ್ಷೆ ಕುರಿತಂತೆ ಶಿಕ್ಷಣ ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು.

    TET ಪರೀಕ್ಷೆಯ ಹಿನ್ನೆಲೆ ಮತ್ತು ಉದ್ದೇಶ:

    Right to Education” (RTE) ಕಾಯ್ದೆಯ ಸೆಕ್ಷನ್ 23 ಉಪವಿಭಾಗ (1) ರ ಪ್ರಕಾರ, ಶಿಕ್ಷಕರಾಗಿ ನೇಮಕಾತಿಗೆ ಅಗತ್ಯವಾದ ಕನಿಷ್ಠ ಅರ್ಹತೆಯನ್ನು ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಪರಿಷತ್‌ (NCTE) ನಿಗದಿಪಡಿಸಿದೆ. ಈ ಕಾಯ್ದೆಯಡಿ, 2010ರ ಆಗಸ್ಟ್ 23, 2011ರ ಜುಲೈ 29 ಮತ್ತು 2018ರ ಜೂನ್ 28 ರಂದು ಹೊರಡಿಸಲಾದ ಅಧಿಸೂಚನೆಗಳ ಪ್ರಕಾರ, ಪ್ರಾಥಮಿಕ (1 ರಿಂದ 5ನೇ ತರಗತಿ) ಹಾಗೂ ಪ್ರೌಢ ಪ್ರಾಥಮಿಕ (6ರಿಂದ 8ನೇ ತರಗತಿ) ಮಟ್ಟದ ಶಿಕ್ಷಕರಾಗಿ ನೇಮಕಾತಿ ಪಡೆಯಲು TET ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.

    ಶಿಕ್ಷಕರ ಅರ್ಹತಾ ಪರೀಕ್ಷೆಯ ಮಹತ್ವ:

    ಆರ್‌.ಟಿ.ಇ ಕಾಯ್ದೆಯ ಸೆಕ್ಷನ್ 2ರ ಉಪವಿಭಾಗ (ಎನ್) ಪ್ರಕಾರ, ಯಾವುದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅಭ್ಯರ್ಥಿಯು ಸರ್ಕಾರದಿಂದ ನಡೆಸಲಾಗುವ TET ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಈ ಪರೀಕ್ಷೆಯ ಉದ್ದೇಶವು ಬೋಧನಾ ವೃತ್ತಿಗೆ ಅಗತ್ಯವಾದ ಶೈಕ್ಷಣಿಕ ಕೌಶಲ್ಯ, ಪಾಠಮಾಲೆ ತಯಾರಿ, ವಿದ್ಯಾರ್ಥಿ ಮನೋವಿಜ್ಞಾನ ಹಾಗೂ ಪಠ್ಯಕ್ರಮದ ಅರಿವು ಹೊಂದಿರುವ ಅಭ್ಯರ್ಥಿಗಳನ್ನು ಗುರುತಿಸುವುದು.

    ಅರ್ಹತಾ ಮಾನದಂಡಗಳು:

    ಪೇಪರ್-I (1 ರಿಂದ 5ನೇ ತರಗತಿಗಳಿಗೆ): ಪ್ರಾಥಮಿಕ ಶಿಕ್ಷಕರಾಗಿ ಬಯಸುವ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಪದವಿ ಅಥವಾ ಡಿಪ್ಲೋಮಾ ಹೊಂದಿರಬೇಕು.

    ಪೇಪರ್-II (6 ರಿಂದ 8ನೇ ತರಗತಿಗಳಿಗೆ): ಹಿರಿಯ ಪ್ರಾಥಮಿಕ ಶಿಕ್ಷಕರಾಗಿ ಬಯಸುವ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಪದವಿ ಮತ್ತು B.Ed. ಪದವಿ ಹೊಂದಿರಬೇಕು.

    ಮುಖ್ಯ ಅಂಶಗಳು:

    ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಕಡ್ಡಾಯ.

    ಪರೀಕ್ಷಾ ದಿನಾಂಕ: ಡಿಸೆಂಬರ್ 7, 2025

    ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಹಾಗೂ ಹಾಲ್‌ಟಿಕೆಟ್‌ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

    ಅಧಿಕೃತ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಅಧಿಕೃತ ವೆಬ್‌ಸೈಟ್‌ನ್ನು ಸಂಪರ್ಕಿಸಬೇಕು.

    ಶಿಕ್ಷಕರಾಗಿ ಸೇವೆ ಸಲ್ಲಿಸಲು ಕನಸು ಕಾಣುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶವಾಗಿದೆ. TET ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮಾತ್ರವಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ನಿರ್ಮಿಸಲು ಇದು ಪ್ರಮುಖ ಹಂತ. ಆದ್ದರಿಂದ, ಅಭ್ಯರ್ಥಿಗಳು ಸಮಯ ವ್ಯರ್ಥ ಮಾಡದೇ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ, ತಯಾರಿ ಆರಂಭಿಸುವುದು ಸೂಕ್ತ.

  • ಎಸ್‌ಬಿಐ ಆಶಾ ವಿದ್ಯಾರ್ಥಿವೇತನ 2025–26 : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೊಸ ಭರವಸೆ

    ಎಸ್‌ಬಿಐ ಆಶಾ ವಿದ್ಯಾರ್ಥಿವೇತನ 2025–26 : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೊಸ ಭರವಸೆ

    ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್‌ಗಳಲ್ಲಿ ಒಂದಾದ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ 75ನೇ ವರ್ಷದ ಸಂಭ್ರಮದ ಅಂಗವಾಗಿ ಒಂದು ಮಹತ್ವದ ಸಾಮಾಜಿಕ ಯೋಜನೆಯನ್ನು ಆರಂಭಿಸಿದೆ. ಎಸ್‌ಬಿಐ ಫೌಂಡೇಶನ್ ಮೂಲಕ “ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ” ಎಂಬ ಹೊಸ ವಿದ್ಯಾರ್ಥಿವೇತನ ಯೋಜನೆ ಘೋಷಿಸಲಾಗಿದ್ದು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಹೊಸ ಬೆಳಕಾಗಲಿದೆ.

    ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವು 

    ಶಿಕ್ಷಣದ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ, ಅನೇಕ  ವಿದ್ಯಾರ್ಥಿಗಳು ಹಣದ ಕೊರತೆಯಿಂದ ತಮ್ಮ ವಿದ್ಯಾಭ್ಯಾಸ ನಿಲ್ಲಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಎಸ್‌ಬಿಐ ಆಶಾ ವಿದ್ಯಾರ್ಥಿವೇತನದ ಯೋಜನೆ ರೂಪಗೊಂಡಿದೆ. ಶಾಲಾ ಹಂತದಿಂದ ಪದವಿ, ಸ್ನಾತ್ತಕೋತ್ತರ ಹಾಗೂ ವೃತ್ತಿಪರ ಕೋರ್ಸ್ ಗಳ ವರೆಗೆ ವ್ಯಾಪಿಸಿದೆ.

    ಐಐಟಿ, ಐಐಎಂ, ವೈದ್ಯಕೀಯ ಸಂಸ್ಥೆಗಳು ಸೇರಿದಂತೆ ದೊಡ್ಡ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇದರ ಅಡಿಯಲ್ಲಿ ನೆರವನ್ನು ಪಡೆಯಬಹುದು, ಇದಲ್ಲದೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೂ ಇದು ಸಹಾಯವಾಗಲಿದೆ.

    ಆರ್ಥಿಕ ನೆರವು 15 ಸಾವಿರದಿಂದ  20 ಲಕ್ಷದವರೆಗೆ:

    ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ವಾರ್ಷಿಕ ಕನಿಷ್ಠ ₹15,000ರಿಂದ ಗರಿಷ್ಠ ₹20 ಲಕ್ಷ ರೂ.ವರೆಗೆ ಆರ್ಥಿಕ ನೆರವು ದೊರೆಯಲಿದೆ. ಈ ಮೊತ್ತವನ್ನು  ಕಾಲೇಜು ಶುಲ್ಕ, ಪುಸ್ತಕಗಳು, ವಸತಿ, ಹಾಗೂ ಇತರ ಶಿಕ್ಷಣ ಸಂಬಂಧಿತ ವೆಚ್ಚಗಳಿಗೆ ಬಳಸಬಹುದಾಗಿದೆ.

    ಈ ವರ್ಷವೇ ದೇಶದಾದ್ಯಂತ 23,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಎಸ್ ಬಿಐ (SBI) ತಿಳಿಸಿದೆ.

    ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇರುವ ನಿಬಂಧನೆಗಳು

    • ಅರ್ಜಿ ಸಲ್ಲಿಸುವವರು ಭಾರತೀಯ ನಾಗರಿಕರಾಗಿರಬೇಕು.
    • ಶಾಲಾ ಹಂತದ ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ ಕನಿಷ್ಠ 75% ಅಂಕಗಳು ಪಡೆದಿರಬೇಕು.
    • SC/ST ವಿದ್ಯಾರ್ಥಿಗಳಿಗೆ ಅಂಕಗಳಲ್ಲಿ 10% ರಷ್ಟು ಸಡಿಲಿಕೆ ನೀಡಲಾಗಿದೆ.
    • ಶಾಲಾ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂ. ಮೀರಬಾರದು, ಕಾಲೇಜು ಅಥವಾ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳ ಆದಾಯ 6 ಲಕ್ಷ ರೂ. ಮೀರಬಾರದು.
    • ವಿದೇಶದಲ್ಲಿ ಓದುವ SC/ST ವಿದ್ಯಾರ್ಥಿಗಳು ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರಬೇಕು.

    ಅರ್ಜಿ ಮತ್ತು ಪ್ರಕ್ರಿಯೆ

    ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲ್ಲಿದ್ದೂ,  ವಿದ್ಯಾರ್ಥಿಗಳು SBI Foundation ಅಥವಾ Buddy4Study ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.

    ಅರ್ಜಿ ಸಲ್ಲಿಸುವ ವೇಳೆ ಅಂಕಪಟ್ಟಿ, ಗುರುತಿನ ಚೀಟಿ, ಮತ್ತು ಆದಾಯ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

    ಆಯ್ಕೆ ಪ್ರಕ್ರಿಯೆ ಅಂಕ, ಆದಾಯ ಮತ್ತು ಶೈಕ್ಷಣಿಕ ಸಾಮರ್ಥ್ಯದ ಆಧಾರದ ಮೇಲೆ ನಡೆಯಲಿದೆ.

    ಎಸ್‌ಬಿಐ ಆಶಾ ವಿದ್ಯಾರ್ಥಿವೇತನವು ಶಿಕ್ಷಣ ಕ್ಷೇತ್ರದಲ್ಲಿ ಸಮಾನತೆ ತರಲು ಮಹತ್ವದ ಹೆಜ್ಜೆಯಾಗಲಿದೆ. ಇದು ಕೇವಲ ಹಣಕಾಸು ನೆರವಲ್ಲ ಹಲವು ವಿದ್ಯಾರ್ಥಿಗಳಿಗೆ ಭರವಸೆ ಮತ್ತು ಪ್ರೇರಣೆ ನೀಡುವ ಯೋಜನೆಯಾಗಿದೆ. ಹಣದ ಕೊರತೆಯಿಂದ ವಿದ್ಯಾಭ್ಯಾಸ ಕಳೆದುಕೊಳ್ಳುತ್ತಿದ್ದ ಅನೇಕ ಕನಸುಗಳಿಗೆ ಈ ಯೋಜನೆ ಹೊಸ ಬೆಳಕಾಗಲಿದೆ.

  • ಜಿಲ್ಲೆಯ ಶಿಕ್ಷಣ ವ್ಯವಸ್ಥೆಯ ವಿಫಲತೆಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ– ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆಕ್ರೋಶ

    ಜಿಲ್ಲೆಯ ಶಿಕ್ಷಣ ವ್ಯವಸ್ಥೆಯ ವಿಫಲತೆಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ– ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆಕ್ರೋಶ

    ಸತ್ಯಕಾಮ ವಾರ್ತೆ ಯಾದಗಿರಿ:
    ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರ ಹಿನ್ನಡೆ ಅನುಭವಿಸುತ್ತಿದ್ದು, ಇದರ ಪ್ರಮುಖ ಕಾರಣ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪತ್ರಿಕಾ ಹೇಳಿಕೆ ನೀಡಿರುವ ಅವರು, “ಜಿಲ್ಲೆಯ ನೂರಾರು ಸರ್ಕಾರಿ ಶಾಲೆಗಳಲ್ಲಿ ಇನ್ನೂ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಮಕ್ಕಳಿಗೆ ಸೂಕ್ತ ತರಗತಿ ಕೋಣೆಗಳು ಇಲ್ಲ, ಶೌಚಾಲಯಗಳಿಲ್ಲ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ – ಈ ಎಲ್ಲಾ ಸಮಸ್ಯೆಗಳು ಇನ್ನೂ ದೂರವಾಗಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಇನ್ನು ಕೆಲವು ಶಾಲೆಗಳ ಮೇಲ್ಛಾವಣಿಗಳು ಕುಸಿಯುವ ಸ್ಥಿತಿಯಲ್ಲಿವೆ. ಜಿಲ್ಲೆಯ ಹಲವಾರು ಸರ್ಕಾರಿ ಶಾಲೆಗಳ ಶಿಕ್ಷಕರು ಹಾಗೂ ಗ್ರಾಮಸ್ಥರು ಶಾಲೆಗಳ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ತಲೆಕೆಡಿಸಿಕೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯ ಮಕ್ಕಳ ಭವಿಷ್ಯಕ್ಕೆ ನೇರ ಧಕ್ಕೆಯಾಗಿದೆ, ಎಂದು ಗುಡುಗಿದ್ದಾರೆ.

    ಮಾಧ್ಯಮಗಳಲ್ಲಿ ಸುದ್ದಿ ಬರುವ ತನಕ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಬರುವುದಿಲ್ಲ. ಮಕ್ಕಳಿಗಾಗಿ ಪೋಷಕರ ಆತಂಕ, ಕಣ್ಣೀರು, ಇದ್ಯಾವುದೂ ಇವರಿಗೆ ಕಾಣುವುದಿಲ್ಲ, ನೆಪ ಮಾತ್ರಕ್ಕೆ ಸುದ್ದಿಯಾದಾಗ ಮಾತ್ರ ವೀಕ್ಷಣಾ ಭೇಟಿ – ಇದು ಕೇವಲ ನಾಟಕ ಮಾತ್ರ? ಎಂದು ಬೇಸರ ವ್ಯಕ್ತಪಡಿಸಿದರು. ಇದರಿಂದಾಗಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ.

    ಅದರಲ್ಲೂ ಪ್ರಮುಖವಾಗಿ ಹಲವಾರು ಶಾಲೆಗಳಲ್ಲಿ ವಿಷಯ ಶಿಕ್ಷಕರ ಕೊರತೆಯಿಂದ ಪಾಠಪ್ರಕ್ರಿಯೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ವಿಷಯ ಶಿಕ್ಷಕರಿಲ್ಲದೆ ಶಾಲೆ ಹೋದ ಮಕ್ಕಳು ಏನು ಕಲಿತು ಬರುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಪ್ರಾಥಮಿಕ ಶಿಕ್ಷಣವೇ ಭವಿಷ್ಯದ ಅಡಿಪಾಯ. ಅದು ಬಲವಾಗಿಲ್ಲದಿದ್ದರೆ, ವಿದ್ಯಾರ್ಥಿಗಳು ಮುಂದಿನ ಹಂತ ತಲುಪುವುದು ಹೇಗೆ?  ಎಂದಿದ್ದಾರೆ, ಇದು ರಾಜ್ಯದ ಶಿಕ್ಷಣ ಇಲಾಖೆಯ ಸಂಪೂರ್ಣ ವೈಫಲ್ಯ. ಶಿಕ್ಷಕರ ನೇಮಕಾತಿ ವಿಳಂಬವಾಗುತ್ತಿರುವುದು ಜಿಲ್ಲೆಯ ಮಕ್ಕಳ ಭವಿಷ್ಯವೇ ಅಪಾಯದಲ್ಲಿ ಸಿಲುಕಿದೆ ಎಂದರು.

    ಚುನಾವಣೆಯ ವೇಳೆ ಮನೆ ಮನೆಗೆ ಭೇಟಿ ನೀಡಿ ಮತ ಕೇಳಿದವರು, ಶಾಲೆಗಳ ದುಸ್ಥಿತಿಯ ಕುರಿತಾಗಿ ಎಷ್ಟು ಬಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ?,ಎಂದು ಪ್ರಶ್ನಿಸಿದ್ದಾರೆ.