Category: Crime

  • ದೂರುದಾರರಿಂದ ಪೊನ್ ಪೇ ಮೂಲಕ ಹಣ ಸ್ವೀಕರಿಸಿದ್ದ ಇಬ್ಬರು ಪೊಲೀಸರು ಅಮಾನತು.

    ದೂರುದಾರರಿಂದ ಪೊನ್ ಪೇ ಮೂಲಕ ಹಣ ಸ್ವೀಕರಿಸಿದ್ದ ಇಬ್ಬರು ಪೊಲೀಸರು ಅಮಾನತು.

    ಯಾದಗಿರಿ : ದೂರುದಾರರಿಂದ ಹಣ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆಯೇ ಇಬ್ಬರು ಪೊಲೀಸ್ ರನ್ನು ಎಸ್ ಪಿ ಪ್ರಥ್ವಿಕ್ ಶಂಕರ್ ಅವರು ಸೇವೆಯಿಂದ ಅಮಾನತುಗೊಳಿಸಿದ ಪ್ರಕರಣ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ‌ ನಡೆದಿದೆ.

    ಪೊಲೀಸ್ ಪೇದೆಗಳಾದ ವಿಶ್ವನಾಥರಡ್ಡಿ ಮತ್ತು ಗೋಪಾಲರೆಡ್ಡಿ (ಯಾದಗಿರಿ ವಲಯ) ಎಂಬುವವರೇ ಅಮಾನತುಗೊಂಡಿದ್ದಾರೆ ಎಂದು ಡಿವೈಎಸ್ಪಿ ಸುರೇಶ್ ಎಂ ಅವರು ಸತ್ಯಕಾಮಗೆ ತಿಳಿಸಿದ್ದಾರೆ.

    ಘಟನೆ ವಿವರ : ಕಳೆದ ಜೂ.24 ರಂದು ಠಾಣಾ ವ್ಯಾಪ್ತಿಯ ಮಿನಾಸಪುರ ಗ್ರಾಮದ ವೆಂಕಟರಡ್ಡಿ ಮತ್ತು ಅವರ ಮಗ ಹಣಮಂತರಡ್ಡಿ ಎಂಬುವವರ ಮೇಲೆ ಯಾದಯ್ಯ, ಮಲ್ಲಯ್ಯ ಮತ್ತು ಗೋಪಿ ಎಂಬುವವರು ಸೇರಿದಂತೆಯೇ ಐವರು ಮಾರಣಾಂತಿಕ ಹೊಡೆದು ಕೈ,ಕಾಲು ಮುರಿದಿದ್ದಾರೆ ಮತ್ತು ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆಂದು ಅನುಸೂಯಾ ವೆಂಟಕರಡ್ಡಿ ಎಂಬುವವರು ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸುವ ಕುರಿತು ವಿಚಾರಿಸಿದಾಗ ಅವರನ್ನು ಬಂಧಿಸಬೇಕಾದರೇ ಒಂದು ಲಕ್ಷ ರೂ. ನೀಡಬೇಕೆಂಬ ಬೇಡಿಕೆ ಈ ಇಬ್ಬರು ಪೊಲೀಸರು ಇಟ್ಟಿದ್ದರು . ಆಗ ವಿಶ್ವನಾಥರಡ್ಡಿ ಎಂಬುವವರ ಮೊಬೈಲ್ ಗೆ 10 ಸಾವಿರ ರೂ. ಹಾಗೂ ರಾಜೇಂದ್ರಬಾಬು ಎಂಬುವವರ ನಂ.ಗೆ ಹತ್ತು ಸಾವಿರ ರೂ. ಪೊನ್ ಮಾಡಿದ್ದರ ಬಗ್ಗೆ ಎಸ್ ಪಿ ಅವರಿಗೆ ಸಲ್ಲಿಸಿದ್ದ ದೂರಿನಲ್ಲಿ ಅನುಸೂಯ ಎಂಬುವವರು ವಿವರಿಸಿದ್ದರು
    ಈ ದೂರಿನ್ವಯ ತನಿಖೆಗೆ ಆದೇಶಿಸಿದಾಗ ಇದನ್ನು ತನಿಖೆ‌ ಮಾಡಿದ ಡಿವೈಎಸ್ ಪಿ ಅವರು ನೀಡಿದ ವರದಿ ಆಧಾರದ‌ ಮೇಲೆ ಈ ಇಬ್ಬರನ್ನು ಎಸ್ ಪಿ ಅವರು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

  • ಬೆರಳಚ್ಚಿನ ಗುರುತಿನ ಮೂಲಕ ಕುಖ್ಯಾತ ಖಧೀಮನ ಸೆರೆ ಹಿಡಿದ ಪೊಲೀಸ್ ಪಡೆ

    ಬೆರಳಚ್ಚಿನ ಗುರುತಿನ ಮೂಲಕ ಕುಖ್ಯಾತ ಖಧೀಮನ ಸೆರೆ ಹಿಡಿದ ಪೊಲೀಸ್ ಪಡೆ

    • ಹನ್ನೊಂದು ತೊಲಿ ಬಂಗಾರ ಸೇರಿ ರೂ 4,15,500 ನಗದು ವಶ

    ಸತ್ಯಕಾಮ ವಾರ್ತೆ ಶಹಾಪುರ : 

    ತಾಲೂಕಿನ ಗೋಗಿ ಹಾಗೂ ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಗಲು ಹಾಗೂ ರಾತ್ರಿ ಮನೆಗಳ್ಳತನದ ವರದಿಗಳನ್ನು ಬೆನ್ನಟ್ಟಿ ಬೆರಳಚ್ಚು ಸೇರಿದಂತೆ ವಿವಿಧ ಆಯಾಮಗಳ ಮೂಲಕ ತನಿಖೆ ಕೈಗೊಂಡು ಪ್ರಕರಣ ಭೇದಿಸಿ ನಾಲ್ಕು ಲಕ್ಷ ಹದಿನೈದು ಸಾವಿರದ ಐದುನೂರು ರೂಪಾಯಿ ನಗದು ಸೇರಿ ಹನ್ನೊಂದು ತೊಲಿ ಬಂಗಾರದ ಆಭರಣ ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಉಪ ಅಧೀಕ್ಷಕ ಜಾವೇದ್ ಇನಾಮದಾರ ಹೇಳಿದರು.

    ನಗರದ ಆರಕ್ಷಕ ವೃತ್ತ ನೀರಿಕ್ಷಕ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಇತ್ತೀಚಿಗೆ  ಗೋಗಿ ಹಾಗೂ ಭೀ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಗಲು ಹಾಗೂ ರಾತ್ರಿ ಮನೆಗಳ್ಳತನ ನಡೆದ ಕುರಿತು ವರದಿಯಾಗಿದ್ದು. ಈ ಪ್ರಕರಣಗಳನ್ನು ಬೇಧಿಸಲು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳಾದ ಪೃತ್ವಿಕ್ ಶಂಕರ ಹಾಗೂ ಕೆ ಎಸ್ ಪಿ ಎಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರಣೆಶ ಹಾಗೂ ಉಪ ಅಧೀಕ್ಷಕ ಸುರಪುರ ವಿಭಾಗದ  ಜಾವೇದ್ ಇನಾಮದಾರ ಅವರ ಮಾರ್ಗದರ್ಶನದಲ್ಲಿ  ನಗರದ ಸಿಪಿಐ ಶರಣಗೌಡ ನ್ಯಾಮನ್ನವರ ಗೋಗಿ ಹಾಗೂ ಭೀ ಗುಡಿ ಪಿ ಎಸ್ ಐಗಳಾದ ದೇವಿಂದ್ರರೆಡ್ಡಿ ಹಾಗೂ ಚಂದ್ರನಾಥ ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ರಚಿಸಿ ವಿವಿಧ ಆಯಾಮಗಳ ಮೂಲಕ ತನಿಖೆ ಕೈಗೊಂಡು ಗೋಗಿ ಠಾಣೆಯ ಗುನ್ನ ಸಂಖ್ಯೆ 52/2024, 48/2025, 61/2025,ಭೀ ಗುಡಿ ಠಾಣೆಯ ಗುನ್ನ ಸಂಖ್ಯೆ 02/2025 ರಲ್ಲಿ ಒಟ್ಟು ನಾಲ್ಕು ಹಗಲು ಹಾಗೂ ರಾತ್ರಿ ವೇಳೆ ಮನೆ ಗಳ್ಳತನ ಪ್ರಕರಣಗಳನ್ನು  ಭೇದಿಸಿ  ವಿಜಾಪುರ ಜಿಲ್ಲೆಯ ಅದೇ ತಾಲೂಕಿನ ಹೊನ್ನಾಳಿ ಗ್ರಾಮದ ಸಂತೋಷ ತಂದೆ ಶಿವಣ್ಣ ನಂದ್ಯಾಳನನ್ನು ದಸ್ತಗಿರಿ ಮಾಡಿ ಹನ್ನೊಂದು ತೊಲಿ ಬಂಗಾರದ ಆಭರಣಗಳೊಂದಿಗೆ 4,15,500 ರೂ ನಗದು ವಶಪಡಿಸಿಕೊಂಡು ಕ್ರಮ ಜರುಗಿಸಲಾಗಿದೆ ಎಂದರು.

    ಆರೋಪಿಯ ಬೆರಳಚ್ಚು ಗುರುತಿನ ಸಹಾಯದಿಂದ ಬೆನ್ನಟ್ಟಿ ಆತನ ಚಲನವಲನಗಳನ್ನು ಹಿಂಬಾಲಿಸಿ ರಭಕವಿ ಬನಹಟ್ಟಿ, ಲಿಂಗಸೂರು,  ಸುರಪುರು ಸೇರಿದಂತೆ ಬಸ್ ನಿಲ್ದಾಣಗಳಲ್ಲಿ ಯಾರದೋ ಬಳಸಿಕೊಂಡು ತಮ್ಮ ಸಂಬಂಧಿಕರಿಗೆ ಕರೆ ಮಾಡಿ ಮಾತನಾಡಿದ ವಿವರ ಸಂಗ್ರಹಿಸಿ ಲಿಂಗಸೂರಿನಲ್ಲಿ ತನ್ನ ಪತ್ನಿಯ ಫೋನ್ ಕರೆಯಿಂದ ಬಾಡಿಗೆ ವಾಹನದಲ್ಲಿ ಶಾಪಿಂಗ್ ಮಹಲಿನಲ್ಲಿ ಸಂಚರಿಸಿದ್ದ ಸಿ ಸಿ ಟಿ ವಿಗಳಲ್ಲಿ ಸೆರೆ ಸಿಕ್ಕಿದ ಚಿತ್ರಣಗಳ ಸಹಾಯದಿಂದ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದರು.

    ಸದರಿ ಕಳ್ಳತನ ಅಪಾರಧ ಪ್ರಕರಣಗಳನ್ನು ಪತ್ತೆ  ಮಾಡಿದ ತಂಡದ ಸಿ ಪಿ ಐ, ಪಿ ಎಸ್ ಐ, ಹಾಗೂ ಸಿಬ್ಬಂದಿಗಳಾದ ಗೋಗಿ  ಶ್ರೀಶೈಲ್ ಸಜ್ಜನ, ದೇವಿಂದ್ರಪ್ಪ, ಭೀಮನಗೌಡ, ಬಸನಗೌಡ, ನಾಗಪ್ಪ, ಹಾಗೂ ಸೋಮಯ್ಯ ರವರನ್ನು ಜಿಲ್ಲಾ ಪೊಲೀಸ್ ಅಧಿಕ್ಷಕರು ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು.
  • ಹಿಟ್ & ರನ್ ಪ್ರಕರಣ: ಮರಣ ಹೊಂದಿದವರಿಗೆ 2 ಲಕ್ಷ ರೂ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಸೌಲಭ್ಯ

    ಹಿಟ್ & ರನ್ ಪ್ರಕರಣ: ಮರಣ ಹೊಂದಿದವರಿಗೆ 2 ಲಕ್ಷ ರೂ. ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಸೌಲಭ್ಯ

     

     

     

     

     

    ಕಲಬುರಗಿ- ಕೇಂದ್ರದ ಮೋಟಾರು ವಾಹನ ಕಾಯ್ದೆ-1988 ಮತ್ತು ತಿದ್ದುಪಡಿ ಕಾಯ್ದೆ-2019ರ ಪ್ರಕಾರ ಹಿಟ್ & ರನ್ ಮೋಟಾರು ಅಪಘಾತ ಯೋಜನೆ- 2022ರಡಿ ಹಿಟ್ & ರನ್ ಪ್ರಕರಣಗಳಲ್ಲಿ ವಿಮೆ ಮಾಡಿಸಿಕೊಳ್ಳದ ಪಾದಚಾರಿಗಳಿಗೆ ಮರಣ ಪ್ರಕರಣದಲ್ಲಿ 2 ಲಕ್ಷ‌ ರೂ. ಮತ್ತು ರಸ್ತೆ ಅಫಘಾತದಲ್ಲಿ ಗಾಯಾಳು ಪ್ರಕರಣಗಳಲ್ಲಿ 50 ಸಾವಿರ ರೂ. ಪರಿಹಾರ ಒದಗಿಸುವ ಸೌಲಭ್ಯವಿದ್ದು, ಸಂತ್ರಸ್ತರ ಅವಲಂಭಿತರು ಮತ್ತು ಗಾಯಾಳುಗಳು ಇದರ ಸೌಲಭ್ಯ ಪಡೆಯಬೇಕು ಎಂದು ಕಲಬುರಗಿ ಉಪ ವಿಭಾಗದ ಹಕ್ಕು ತನಿಖಾಧಿಕಾರಿಯಾಗಿರುವ ಸಹಾಯಕ ಆಯುಕ್ತೆ ಸಾಹಿತ್ಯ ತಿಳಿಸಿದ್ದಾರೆ.

    ಈ ಯೋಜನೆಯಡಿ ಕ್ಲೇಮ್ ವಿಚಾರಣಾ ಅಧಿಕಾರಿಯು ಕ್ಲೇಮ್ ಸ್ವೀಕರಿಸಿದ ಒಂದು ತಿಂಗಳೊಳಗೆ ಪೊಲೀಸ್ ಮತ್ಥ ವೈದ್ಯಕೀಯ ವರದಿಯನ್ನು ಆಧಾರವಾಗಿಟ್ಟುಕೊಂಡು ತನ್ನ ನಿರ್ಧಾರವನ್ನು ತಿಳಿಸಬೇಕಾಗುತ್ತದೆ. ನಂತರ ಕ್ಲೇಮ್ ಇತ್ಯರ್ಥ ಅಧಿಕಾರಿಗೆ ಕ್ಲೇಮ್‌ಗಳನ್ನು ಮಂಜೂರು ಮಾಡಲು ಮತ್ತು ಮಂಜೂರಾತಿ ಆದೇಶವನ್ನು ಜನರಲ್ ಇನ್ಶುರೆನ್ಸ್ ಕೌನ್ಸಿಲ್‌ಗೆ ಕಳುಹಿಸಲು 15 ದಿನಗಳ ಕಾಲಾವಕಾಶ ಇರುತ್ತದೆ. ಈ ಸಂಬಂಧ ಮೋಟಾರ್ ಅಪಘಾತ ಕ್ಲೇಮ್ ನ್ಯಾಯಮಂಡಳಿ ಮತ್ತು ಸಾರಿಗೆ ಆಯುಕ್ತರಿಗೂ ಕ್ಲೇಮ್ ಇತ್ಯರ್ಥ ಅಧಿಕಾರಿ ಮಾಹಿತಿ ನೀಡುತ್ತಾರೆ. ತರುವಾಯ, ಜನರಲ್ ಇನ್ಶುರೆನ್ಸ್ ಕೌನ್ಸಿಲ್ 15 ದಿನಗಳ ಅವಧಿಯಲ್ಲಿ ಸಂತ್ರಸ್ತರಿಗೆ ಕ್ಲೇಮ್‌ಗೆ ಪರಿಹಾರದ ಮೊತ್ತದ ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ.

    ಇನ್ನು ಪ್ರತಿ ಜಿಲ್ಲೆಯಲ್ಲಿ ಈ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. ಈ ಸಮಿತಿ ಪ್ರತಿ ತ್ರೈಮಾಸಿಕ ಸಭೆ ಸೇರಿ ಹಿಟ್ & ರನ್ ಪ್ರಕರಣಗಳ ಪರಿಹಾರ ಪ್ರಕ್ರಿಯೆ ಪರಾಮರ್ಶಿಸಬೇಕು. ಅಲ್ಲದೆ ಪ್ರತಿ ತ್ರೈಮಾಸಿಕ ವರದಿ ಹಾಗೂ ಮಾಸಿಕವಾರು ಸ್ವೀಕೃತ ಅರ್ಜಿ, ಪರಿಹಾರ ಮಂಜೂರಾತಿ, ಬಾಕಿ ವಿವರ ಸ್ಥಾಯಿ ಸಮಿತಿಗೆ ಸಲ್ಲಿಸಬೇಕಾಗುತ್ತದೆ ಎಂದು ಯೋಜನೆ ಕುರಿತು ಸಹಾಯಕ ಆಯುಕ್ತೆ ಸಾಹಿತ್ಯ ಮಾಹಿತಿ ನೀಡಿದ್ದಾರೆ.

  • ಶಾರ್ಟ್ ಫಿಲ್ಮ್ ನೆಪದಲ್ಲಿ ಯುವತಿಯ ಶೋಷಣೆ..?: ಪುನೀತ್ ವಿರುದ್ಧ ಗಂಭೀರ ಆರೋಪ

    ಶಾರ್ಟ್ ಫಿಲ್ಮ್ ನೆಪದಲ್ಲಿ ಯುವತಿಯ ಶೋಷಣೆ..?: ಪುನೀತ್ ವಿರುದ್ಧ ಗಂಭೀರ ಆರೋಪ

     

    ಯಾದಗಿರಿ, ಜುಲೈ 3 (ಸತ್ಯಕಾಮ ವಾರ್ತೆ):

    ರಾಕ್ ಸ್ಟಾರ್ ಹಾಗೂ ನಿಮ್ಮ ಲೀಗಲ್ ಅಡ್ವೈಸರ್ ಎಂದು ಇನ್ಸ್ಟಾಗ್ರಾಂನಲ್ಲಿ ಪ್ರಸಿದ್ಧಿಯಾಗಿರುವ ಪುನೀತ್ ರಾಜ್ ವಿರುದ್ಧ ಯುವತಿಯೊಬ್ಬರು ಭಾರೀ ಆರೋಪ ಹೇರಿದ್ದು, ಯೂಟ್ಯೂಬ್ ಶಾರ್ಟ್ ಫಿಲ್ಮ್‌ ನೆಪದಲ್ಲಿ ಬಾದಾಮಿಗೆ ಕರೆದುಕೊಂಡು ಹೋಗಿ, ಮದುವೆ ಹೆಸರಿನಲ್ಲಿ ಲೈಂಗಿಕ ಶೋಷಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

    ದೂರುದಾರೆಯು ನೀಡಿರುವ ದೂರಿನಂತೆ, ಇನ್‌ಸ್ಟಾಗ್ರಾಂ ಮೂಲಕ ಪುನೀತ್ ರಾಜ್ ಪರಿಚಿತನಾಗಿದ್ದ. ಇಬ್ಬರೂ ಒಂದೇ ಶಾಲೆಯ ವಿದ್ಯಾರ್ಥಿಗಳಾಗಿದ್ದರಿಂದ ಸ್ನೇಹ ಬೆಳೆದಿತ್ತು, ಪುನೀತ್ ರಾಜ್ ತನ್ನನ್ನು ನಿರ್ದೇಶಕ ಎಂದು ಪರಿಚಯಿಸಿಕೊಂಡು ಯುವತಿಗೆ ತನ್ನ ಶಾರ್ಟ್ ಫಿಲ್ಮ್‌ನಲ್ಲಿ ನಾಯಕಿಯಾಗಿ ನಟಿಸುವಂತೆ ಹೇಳಿದ್ದ ಇದಕ್ಕೆ ಮನೆಯವರು ಒಪ್ಪಿಕೊಳ್ಳುವುದಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ. ಆದರೂ ಪುನೀತ್, “ಇದು ಕೇವಲ ಒಂದು ದಿನದ ಚಿತ್ರೀಕರಣ,” “ನನ್ನ ಕುಟುಂಬಸ್ಥರು ಇರುತ್ತಾರೆ,” ಎಂದು ಭರವಸೆ ನೀಡಿ ಫೆಬ್ರವರಿ 16 ರಂದು ಪುನೀತ್ ರಾಜ್ ಹಾಗೂ ಆತನ ಕುಟುಂಬದವರು ಮತ್ತು ಯುವತಿ ಬಾದಾಮಿ ಮಹಾಕೂಟಕ್ಕೆ ತೆರಳಿದ್ದು, ಬಾಡಿಗೆ ರೂಮ್‌ನಲ್ಲಿ ಉಳಿದಿದ್ದರು. ಅಲ್ಲಿಯೇ ಫೆಬ್ರವರಿ 17 ಹಾಗೂ 18 ರಂದು ಮದುವೆ ನಾಟಕವಾಡಿ, ಹಿಂದೂ ಸಂಪ್ರದಾಯದಂತೆ ಪುನೀತ್ ಯುವತಿಗೆ ಮದುವೆ ಮಾಡಿಕೊಂಡಂತೆ ಕಾರ್ಯಕ್ರಮಗಳ ಎಲ್ಲಾ ದೃಶ್ಯಗಳನ್ನು ಚಿತ್ರಿಕರಿಸಿದ್ದಾನಂತೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಿಲಾಗಿದೆ.

    ದಿನಾಂಕ 18 ರಂದು ರಾತ್ರಿ ಯುವತಿಯ ವಿರೋಧದ ನಡುವೆಯೂ ಪುನೀತ್ ಬಲವಂತವಾಗಿ ಲೈಂಗಿಕ ಶೋಷಣೆ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಪುನೀತ್‌ ಪೋಷಕರಿಗೂ ತಿಳಿಸಿದಾಗ ಅವರು ಸಹ “ನಿನ್ನನ್ನು ನನ್ನ ಮಗನೊಂದಿಗೆ ಮದುವೆ ಮಾಡಲೆಂದು ಇದೆಲ್ಲಾ ಮಾಡಿದ್ದೇವೆ” ಎಂದು ಅವರ ಪೋಷಕರು ಉತ್ತರಿಸಿದ್ದಾರೆಂದು ಯುವತಿಯ ಆರೋಪವಾಗಿದೆ.

    ಬಳಿಕ ಯಾದಗಿರಿಗೆ ಬಂದ ಇವರು ಯುವತಿ ತನ್ನ ಮನೆಗೆ ಹೋಗುವುದಾಗಿ ತಿಳಿಸಿದಾಗ ನಿನಗೆ ಮದುವೆಯಾಗಿದೆ ನೀನು ಇಲ್ಲೇ ಇರಬೇಕು, ನಮ್ಮ ಮನೆ ಬಿಟ್ಟು ಹೋದರೆ ಪ್ರಾಣ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದರಿಂದ ಆತಂಕಗೊಂಡ ಯುವತಿ ಎರಡು ದಿನ ಅಲ್ಲೇ ಉಳಿದುಕೊಂಡು, ದಿನಾಂಕ 22.02.2025 ರಂದು ತನ್ನ ಮನೆಗೆ ಮರಳಿದ್ದಾಳೆ. ಬಳಿಕ ಏಪ್ರಿಲ್ 12 ರಂದು ಪುನೀತ್ ರಾಜ್ ಯುವತಿಯ ಮನೆಯ ಬಳಿ ಬಂದು ಅವರ ತಂದೆ-ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದಲ್ಲದೇ ನಮ್ಮ ಮದುವೆಯ ವಿಡಿಯೋಗಳು ನನ್ನ ಬಳಿ ಇವೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತೇನೆ ಎಂದು ಹೇಳಿರುತ್ತಾನೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಿಲಾಗಿದೆ.

    ಈ ಸಂಬಂಧ ಯುವತಿ ಹೇಳಿಕೆಯಂತೆ ಪುನೀತ್ ಹಾಗೂ ಆತನ ತಂದೆ – ತಾಯಿ ವಿರುದ್ಧ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿಲಾಗಿದೆ ಎಂದು ಮೂಲಗಳು ತಿಳಿಸಿವೆ.

     

  • ನಿವೃತ್ತಿಗೊಂಡ ಸಹಾಯಕ ಆಡಳಿತಾಧಿಕಾರಿಗೆ ಆರೋಗ್ಯ ಇಲಾಖೆ ಶಾಕ್: ದೂರು ದಾಖಲು

    ನಿವೃತ್ತಿಗೊಂಡ ಸಹಾಯಕ ಆಡಳಿತಾಧಿಕಾರಿಗೆ ಆರೋಗ್ಯ ಇಲಾಖೆ ಶಾಕ್: ದೂರು ದಾಖಲು

    ಸತ್ಯಕಾಮ ವಾರ್ತೆ ಶಹಾಪುರ:

    ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಏಪ್ರಿಲ್ ತಿಂಗಳಲ್ಲಿ ನಿವೃತ್ತಿ ಹೊಂದಿದ್ದ ರುಕ್ಮೀಣಿ ಎಂ. ಅವರಿಗೆ ಆರೋಗ್ಯ ಇಲಾಖೆ ಶಾಕ್ ನೀಡಿದ್ದೂ ಇದೀಗ ಆಕೆಯ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

     

    ಸಹಾಯಕ ಆಡಳಿತಾಧಿಕಾರಿಯಾಗಿ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರುಕ್ಮೀಣಿ ಎಂ. ಅವರು ಆರೋಗ್ಯ ಇಲಾಖೆಯ ನೇಮಕಾತಿಯ ಸಂದರ್ಭದಲ್ಲಿ ತಮ್ಮ ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿದ್ದ ದಿ;24/04/1961ರ ಜನ್ಮ ದಿನಾಂಕವನ್ನು ದಿ: 24/04/1964 ಅಂತ ತಿದ್ದುಪಡಿ ಮಾಡಿ 1985 ನೇ ಸಾಲಿನಲ್ಲಿ ಬೆಂಗಳೂರ ನೇಮಕಾತಿ ಪ್ರಾಧಿಕಾರಿ ಮುಖ್ಯ ಕಛೇರಿಯಲ್ಲಿ ತಿದ್ದುಪಡಿ ದಾಖಲೆ ಸಲ್ಲಿಸಿ ಕೆಲಸ ಗಿಟ್ಟಿಸಿಕೊಂಡಿದ್ದರು.

    ಈ ಬಗ್ಗೆ ವಿಚಾರಣೆ ನಡೆಸಿದ ಆರೋಗ್ಯ ಇಲಾಖೆಗೆ ರುಕ್ಮಿಣಿ ಅವರು ತಮ್ಮ ಎಸ್.ಎಸ್.ಎಲ್.ಸಿ ಅಂಕಪಟ್ಟಿ ತಿದ್ದುಪಡಿ ಮಾಡಿ ತನ್ನ ಸ್ವಂತ ಲಾಭಕ್ಕಾಗಿ ಇಲಾಖೆಯಲ್ಲಿ ಮೂರು ವರ್ಷಗಳ ಕಾಲ ಹೆಚ್ಚಿಗೆ ಕರ್ತವ್ಯ ಮಾಡಿರುತ್ತಾರೆ ಎಂಬ ಅಂಶಗಳು ಬೆಳಕಿಗೆ ಬಂದಿದ್ದೂ, ವರದಿ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಯಾದಗಿರಿ ರವರ ಸೂಚನೆ ಮೇರೆಗೆ ಪ್ರಭಾರ ಮುಖ್ಯ ವೈದ್ಯಾಧಿಕಾರಿ ಡಾ:ಯಲ್ಲಪ್ಪ ಅವರು ನಿವೃತ್ತಿ ಹೊಂದಿರುವ ರುಕ್ಮೀಣಿ ಎಂ. ಅವರ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

     

    ಕಲಂ:409, 420, 465, 468, 471 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಶಹಾಪುರ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ ಎಂದು ಸತ್ಯಕಾಮ ಪತ್ರಿಕೆಗೆ ಪೊಲೀಸ್ ಮೂಲಗಳು ತಿಳಿಸಿವೆ.

  • ಸಿನಿಮಯ ರೀತಿಯಲ್ಲಿ ಕೊಲೆ ಆರೋಪಿಯ ಬಂಧನ

    ಸಿನಿಮಯ ರೀತಿಯಲ್ಲಿ ಕೊಲೆ ಆರೋಪಿಯ ಬಂಧನ

    ಬೀದರ :—– ನಗರದ ನೂತನ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಬರುವ ಗಣೇಶ್ ಮೈದಾನದ ಫೂಟ್ ಪಾತ್ ಮೇಲೆ ಗಟ್ಟಿಯಾದ ವಸ್ತುವಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ ಪ್ರಕರಣವೊಂದು ದಾಖಲಾದ 24 ಗಂಟೆ ಒಳಗಾಗಿ ಬೀದರ್ ಪೊಲೀಸರು ಸಿನಿಮಯ ರೀತಿಯಲ್ಲಿ ಪ್ರಕರಣದ ಬೆನ್ನುಹತ್ತಿ ಆರೋಪಿಯನ್ನು ಬಂಧಿಸಿದ್ದಾರೆಂದು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿಯವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

    ಪ್ರದೀಪ್ ಗುಂಟಿಯವರ ಮಾರ್ಗದರ್ಶನದಲ್ಲಿ ಮಹೇಶ್ ಮೇಘಣ್ಣನವರ್ ಹೆಚ್ಚುವರಿ ಎಸ್ಪಿ, ಚಂದ್ರ್ಕಾಂತ್ ಪೂಜಾರಿ ಹೆಚ್ಚುವರಿ ಅಧೀಕ್ಷಕರು, ಶಿವಾನಂದ ಗೌಡ ಪಾಟೀಲ್ ಉಪಾಧೀಕ್ಷಕರು, ಇವರ ಮುಂದಾಳತ್ವದಲ್ಲಿ ನೂತನ ನಗರ ಪೊಲೀಸ್ ಠಾಣೆಯ ಪಿಎಸ್ಐ ವಿಜಯ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಕಾಶ್, ನಿಂಗಪ್ಪ, ಭರತ್, ಗಾಂಧಿ ಗಂಜ್ ಠಾಣೆ ಸಿಬ್ಬಂದಿ ನವೀನ್, ಗಂಗಾಧರ್, ಸುಧಾಕರ್ ರವರನ್ನೊಳಗೊಂಡ ತಂಡವೊಂದನ್ನು ರಚಿಸಿ ಕಾರ್ಯ ಪ್ರವೃತ್ತರಾಗಿ ಅತ್ಯಂತ ಚಾಣಾಕ್ಷತನದಿಂದ ವೈಜ್ಞಾನಿಕ ಸಾಕ್ಷಿಗಳ ನೆರವು ಮತ್ತು ಪೊಲೀಸ್ ಬಾತ್ಮಿದ್ದಾರರಿಂದ ಮಾಹಿತಿ ಸಂಗ್ರಹಿಸಿ ಕೇವಲ 24 ಗಂಟೆ ಒಳಗಾಗಿ ಇಬ್ಬರು ಆರೋಪಿತರನ್ನು ಬೀದರ್ ವಿದ್ಯಾನಗರ ಕಾಲೋನಿ ಯಿಂದ ದಸ್ತಗಿರ್ ಮಾಡಿ ನ್ಯಾಯಾಂಗ ಬಂಧನ ಕೊಪ್ಪಿಸಲಾಗಿದೆ. ಪೊಲೀಸರ ಈ ಕಾರ್ಯಕ್ಷಮತೆಗೆ ಸಾರ್ವಜನಿಕರ ಪ್ರಶಂಸನೆಗಳು ಹರಿದು ಬಂದಿದ್ದು, ಈ ಪ್ರಯುಕ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಹುಮಾನ ನೀಡಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳಿಂದ ವರದಿಯಾಗಿದೆ.

  • ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್

    ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್

    ಯಲಹಂಕ: ಕನ್ನಡ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮನದ ಕಡಲು ಚಿತ್ರದ ಚಿತ್ರೀಕರಣದ ವೇಳೆ ಅವಗಡ ಒಂದು ಸಂಭವಿಸಿದ್ದು ಲೈಟ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೋಹನ್ ಕುಮಾರ್ (24) 30 ಅಡಿ ಎತ್ತರದ ಏಣಿಯಿಂದ ಬಿದ್ದು ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಗೊರಗುಂಟೆ ಪಾಳ್ಯದ ಸ್ಪರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಿರ್ದೇಶಕ ಯೋಗರಾಜ ಭಟ್, ನಿರ್ಮಾಪಕ ಈ ಕೃಷ್ಣಪ್ಪ, ಮ್ಯಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

    ಘಟನೆಯ ವಿವರ: ಇದೇ ತಿಂಗಳ 3ನೇ ತಾರೀಕು ಮಂಗಳವಾರ ಅಡಕಮಾರನಹಳ್ಳಿ ಬಳಿಯ ವಿ ಆರ್ ಎಲ್ ಗೋಡೌನ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಸಂಜೆ ಸುಮಾರು 5 ಗಂಟೆಯ ಸಮಯದಲ್ಲಿ ಮೃತ ಮೋಹನ್ ಕುಮಾರ್ ಮತ್ತು ಆತನ ಸಹೋದರರು 30 ಅಡಿಯ ಏಣಿಯನ್ನು ಬಳಸಿ ಮೇಲೆ ಕಟ್ಟಿದ್ದ ಲೈಟನ್ನು ಬಿಚ್ಚಲು ಮುಂದಾಗಿದ್ದು ಏಣಿಯು ಜಾರಿ ಮೇಲಿದ್ದ ಮೋಹನ್ ಕುಮಾರ್ ಕೆಳಗೆ ಬಿದ್ದಿದ್ದಾನೆ ಬಿದ್ದ ರಭಸಕ್ಕೆ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು ರಕ್ತಸ್ರಾವ ಉಂಟಾಗಿದೆ ಕೂಡಲೆ ಆತನನ್ನು ಸಹೋದರರು ಮತ್ತು ಇತರರು ನೆಲಮಂಗಲ ಬಳಿಯ ವಿಪಿ ಮ್ಯಾಗ್ನೆಸ್ ಆಸ್ಪತ್ರೆಗೆ ಸಾಗಿಸಿದ್ದು ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿರುತ್ತಾರೆ ಅದರಂತೆ ಗೊರಗುಂಟೆಪಾಳ್ಯ ಬಳಿಯ ಸ್ಪರ್ಶ ಆಸ್ಪತ್ರೆಗೆ ಗಾಯಾಳುವನ್ನು ಸೇರಿಸಿದ್ದು ತಲೆಯಲ್ಲಿ ತೀವ್ರ ರಕ್ತಸ್ರಾವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಸಂಬಂಧಿಕರ ಆರೋಪ:
    ವಿ ಆರ್ ಎಲ್ ಗೋಡನ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದು ಶೂಟಿಂಗ್ ಸಂದರ್ಭದಲ್ಲಿ ಯಾವುದೇ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿಲ್ಲ ಜೊತೆಗೆ ಕೆಲಸಕ್ಕೆ ಬೇಕಾಗುವಂತ ಸುಸಜ್ಜಿತ ಉಪಕರಣಗಳನ್ನು ನೀಡಿಲ್ಲ ಇದರಿಂದಾಗಿ ತಮ್ಮ ಮೃತಪಟ್ಟಿದ್ದಾನೆ ಆದ್ದರಿಂದ ಮನದ ಕಡಲು ಚಿತ್ರದ ಮ್ಯಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್, ಚಿತ್ರದ ನಿರ್ಮಾಪಕ ಈ.ಕೃಷ್ಣಪ್ಪ, ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತನ ಅಣ್ಣ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

  • ಸುಳ್ಳು ಪ್ರಕರಣ ದಾಖಲಿಸಿಕೊಂಡ ವಡಗೇರಾ ಪಿಎಸ್ಐ : ಉಮೇಶ್ ಮುದ್ನಾಳ ಆರೋಪ

    ಸುಳ್ಳು ಪ್ರಕರಣ ದಾಖಲಿಸಿಕೊಂಡ ವಡಗೇರಾ ಪಿಎಸ್ಐ : ಉಮೇಶ್ ಮುದ್ನಾಳ ಆರೋಪ

    • ಹದಗೆಟ್ಟ ಜಿಲ್ಲಾ ಪೊಲೀಸ್ ಕಾನೂನು ಸುವ್ಯವಸ್ಥೆ
    • ಸುಳ್ಳು ಪ್ರಕರಣ ದಾಖಲಿಸಿಕೊಂಡ ವಡಗೇರಾ ಪಿಎಸ್ಐ
    • ಬಡ ರೈತ ಕುಟುಂಬದ ಮೇಲೆ ಪ್ರಭಾವಿಗಳಿಂದ ಮಾರಣಾಂತಿಕ ಹಲ್ಲೆ
    • ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಬಡ ರೈತನ ಆರೋಗ್ಯ ವಿಚಾರಿಸಿದ ಉಮೇಶ್ ಮುದ್ನಾಳ್

    ಸತ್ಯಕಾಮ ವಾರ್ತೆ ಯಾದಗಿರಿ:

    ಜಮೀನಿನ ದಾರಿ ವಿಚಾರಕ್ಕಾಗಿ ಗ್ರಾಮದ ಪ್ರಭಾವಿ ಕುಟುಂಬಸ್ಥರು ಬಡ ರೈತನ ಮನೆಗೆ ನುಗ್ಗಿ‌ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದಲ್ಲಿ ನಡೆದಿದ್ದೂ, ವಡಗೇರಾ ಪೊಲೀಸ್ ಠಾಣೆಯ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸದೇ ಆರೋಪಿಗಳು ಹೇಳಿದಂತೆ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಆರೋಪಿಸಿದ್ದಾರೆ.

    ತಾಲೂಕಿನ ಜೋಳದಡಗಿ ಗ್ರಾಮದಲ್ಲಿ ಶರಣಪ್ಪ ಮಾಸ್ಟರ್, ಈಶಪ್ಪ ಈರಪ್ಪಣೋರ್ ಸೇರಿ 12 ರ ಜನರ ತಂಡ ಬಡ ರೈತ ಮಲ್ಲಪ್ಪ‌ ಗಂಗಣ್ಣೋರ ಹಾಗೂ ಆತನ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

    ಕೊಡಲಿ, ಬಡಿಗೆ, ಹಾಗೂ ದೊಣ್ಣೆಗಳಿಂದ ಹೊಡೆದಿರುವ ಪರಿಣಾಮ ರೈತರ ಹಲ್ಲುಗಳು ಮುರುದಿವೆ. ಗ್ರಾಮಸ್ಥರು ಜಗಳ ಬಿಡಿಸಲು ಮುಂದಾಗ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.‌ ಗಾಯಾಳು ಮಲ್ಲಪ್ಪನನ್ನ ಗ್ರಾಮಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಈ ವಿಚಾರ ಗೊತ್ತಾಗುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ ಮುದ್ನಾಳ್ ಭೇಟಿ ನೀಡಿ, ಗಾಯಾಳು ಆರೋಗ್ಯ ವಿಚಾರಿಸಿ, ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ರು.

    ಇದೇ ವೇಳೆ ಮಾತನಾಡಿದ ಉಮೇಶ್ ‌ಮುದ್ನಾಳ್ ಹಲ್ಲೆ, ದರೋಡೆ, ಕೊಲೆ ಪ್ರಕರಣಕ್ಕೆ ಜಿಲ್ಲಾ ಪೋಲಿಸ್ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ವಡಗೇರಾ ಪೊಲೀಸ್ ಠಾಣೆಯ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸದೇ ಆರೋಪುಗಳು ಹೇಳಿದಂತೆ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಜೋಳದಡಗಿ ಗ್ರಾಮದಲ್ಲಿ ವಿವಿಧ ಸಮುದಾಯಗಳ ಮೇಲೆ ಇದೇ ರೀತಿ ದೌರ್ಜನ್ಯ, ದಬ್ಬಾಳಿಕೆ, ಹಲ್ಲೆ ‌ಮಾಡುತ್ತಾ ಬಂದಿರುವ ಚಾಳಿ‌ ಇದೆ. ಒಬ್ಬ ಹೆಡ್ ಮಾಸ್ಟರ್ ನಾಗಿ ಗ್ರಾಮದ ಎಲ್ಲರಿಗೂ ತಿಳಿಹೇಳಬೇಕಿದ್ದ ಶಿಕ್ಷಕ ಮುಂದೆ ನಿಂತು ಹಲ್ಲೆಗೆ ಪ್ರೇರಣೆ ನೀಡಿದ್ದಾನೆ. ಇವರಿಗೆ ಯಾವುದೇ ಕಾನೂನಿನ ಭಯವಿಲ್ಲ. ಗಾಯಾಳು ನೀಡಿದ ದೂರಿನಂತೆ ತಾವು ಸಹ ಅದೇ ಸೆಕ್ಷನ್ ನಲ್ಲಿ ಗಾಯಾಳು ಮಲ್ಲಪ್ಪ ಸೇರಿ 12 ಜನರ ಮೇಲೆ ಪ್ರಕರಣ ದಾಖಲಿಸಿ ಗ್ರಾಮದಿಂದ ಪರಾರಿಯಾಗಿದ್ದಾರೆ. ಆರೋಪಿಗಳು ನೀಡಿರುವ ಪ್ರಕ ಕೂಡಲೇ ಕೈ ಬೀಡಬೇಕು. ಇಲ್ಲದಿದ್ದರೆ ಪೊಲೀಸ್ ಇಲಾಖೆ ವಿರುದ್ದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಇದೇ ಸಂದರ್ಭದಲ್ಲಿ ರಫೀಕ್ ಪಟೇಲ್, ಆಂಜನೇಯ, ಬಾಬಾ ಖಾನ್, ಜೋಳದಡಗಿ ಗ್ರಾಮದ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.

  • ಸುಕ್ಷೇತ್ರ ಅಬ್ದುಲ್ ಭಾಷಾ ದೇವಸ್ಥಾನದ ಬಳಿ ಜೂಜಾಟ ಜೋರು

    ಸುಕ್ಷೇತ್ರ ಅಬ್ದುಲ್ ಭಾಷಾ ದೇವಸ್ಥಾನದ ಬಳಿ ಜೂಜಾಟ ಜೋರು

    ಸತ್ಯಕಾಮ ವಾರ್ತೆ ಯಾದಗಿರಿ:
    ಜಿಲ್ಲೆಯ ಶಹಾಪುರ ತಾಲೂಕಿನ ಇಬ್ರಾಹಿಂಪುರದ ಸುಕ್ಷೇತ್ರ ಅಬ್ದುಲ್ ಭಾಷ ದೇವಾಲಯದ ಬಳಿ ಗುರುವಾರ ಮದ್ಯಾಹ್ನ ಜೂಜುಕೋರರು ಯಾರ ಭಯವಿಲ್ಲದೆ ರಾಜಾರೋಷವಾಗಿ ಜೂಜಾಟದಲ್ಲಿ ತೊಡಗಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹೌದು ಇಬ್ರಾಹಿಂಪುರದ ಸುಕ್ಷೇತ್ರ ಅಬ್ದುಲ್ ಭಾಷ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬರುತ್ತದೆ. ಭಕ್ತಿ ಭಾವದಿಂದ ದೇವರ ಮೊರೆ ಹೋಗುತ್ತಾರೆ. ಕಷ್ಟಗಳನ್ನು ನಿಭಾಯಿಸುವ ಶಕ್ತಿ ನೀಡೆಂದು ಭಕ್ತರು ದೇವರ ಬಳಿ ಅಂಗಲಾಚುತ್ತಾರೆ. ಆದರೆ ಇತ್ತೀಚಿಗೆ ಇಂತಹ ಪುಣ್ಯಕ್ಷೇತ್ರದ ಬಳಿ ಜೂಜಾಕೋರರು ಯಾರ ಭಯವಿಲ್ಲದೆ ಜೂಜಾಟವಾಡುತ್ತಿದ್ದೂ, ದೇವಸ್ಥಾನದ ಸುತ್ತಮುತ್ತಲಿನ ಜಾಗವನ್ನು ಜೂಜುಕೋರರು ಇಸ್ಪೀಟ್ ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದರೆ ಎಂದು ಭಕ್ತರು ಆರೋಪಿಸುತ್ತಿದ್ದಾರೆ.

    ಭಗವಂತನ ಸನ್ನಿಧಿ ಅಕ್ರಮ ಚಟುವಟಿಕೆ ತಾಣವಾಗಿರುವುದು ಸರಿಯಲ್ಲ. ಈ ತಾಣಗಳು ವಿಶೇಷವಾಗಿ ದೇವಾಲಯಕ್ಕೆ ಬರುವ ಭಕ್ತರನ್ನು ಕೈಬೀಸಿ ಕರೆಯುತ್ತಿವೆ, ಇದ್ದರಿಂದ ದೇವಾಲಯಕ್ಕೆ ಬಂದ ಭಕ್ತರು ಜೂಜಾಟದಲ್ಲಿ ತೊಡಗಿಕೊಂಡು ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ, ಆದ್ದರಿಂದ ಇಂತಹ ಚಟುವಟಿಕೆ ನಡೆಸುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಒಂದು ವೇಳೆ ಪೊಲೀಸರು ಜೂಜಾಟ ತಡೆಯದಿದ್ದರೆ ದೇವಸ್ಥಾನದ ಸ್ಥಳಗಳು ಮುಂದಿನ ದಿನಗಳಲ್ಲಿ ನಾನಾ ಅಕ್ರಮಗಳ ತಾಣವಾಗಿ ಮಾರ್ಪಡುತ್ತವೆ ಎಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.

    ಪೊಲೀಸರು ಇತ್ತ ಗಮನಹರಿಸಿ ಜೂಜಾಟ ನಿಯಂತ್ರಣಕ್ಕೆ ಬ್ರೇಕ್ ಹಾಕುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

  • *ತಿಂಥಣಿ ಮೌನೇಶ್ವರ ದೇವಸ್ಥಾನದ ಬಳಿ ಹುಲಿ ಚರ್ಮ ಪತ್ತೆ*

    *ತಿಂಥಣಿ ಮೌನೇಶ್ವರ ದೇವಸ್ಥಾನದ ಬಳಿ ಹುಲಿ ಚರ್ಮ ಪತ್ತೆ*

    *ಸತ್ಯಕಾಮ ವಾರ್ತೆ ಸುರಪುರ:*
    ತಾಲೂಕಿನ ತಿಂಥಣಿ ಗ್ರಾಮದಲ್ಲಿನ ಜಗದ್ಗುರು ಮೌನೇಶ್ವರ ದೇವಸ್ಥಾನದ ಬಳಿಯಲ್ಲಿನ ಈಶ್ವರ ದೇವಸ್ಥಾನದ ಮುಂಭಾಗದಲ್ಲಿನ ಪಾನ್ ಡಬ್ಬಿಯ ಮೇಲೆ ಹುಲಿ ಚರ್ಮ ಪತ್ತೆಯಾಗಿದ್ದು,ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ.

    ಶನಿವಾರ ರಾತ್ರಿ ಈಶ್ವರ ದೇವಸ್ಥಾನದ ಬಳಿಯಲ್ಲಿನ ಪಾನ್ ಡಬ್ಬಾದ ಮೇಲೆ ಪ್ಲಾಸ್ಟಿಕ್ ಇರುವುದನ್ನು ನೋಡಿದ ಸ್ಥಳಿಯರು ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿಯನ್ನು ನೀಡಿದ್ದಾರೆ,ನಂತರ ತಡರಾತ್ರಿ 1 ಗಂಟೆಯ ವೇಳೆಗೆ ಸುರಪುರ ಠಾಣೆಯ ಪಿಎಸ್‌ಐ ಕೃಷ್ಣಾ ಸುಬೇದಾರ ಮತ್ತು ತಂಡ ಆಗಮಿಸಿ ನೋಡಿದಾಗ, ಪ್ಲಾಸ್ಟಿಕ್‌ನಲ್ಲಿ ಹುಲಿ ಚರ್ಮ ಇರುವುದು ಗೊತ್ತಾಗಿದೆ.ನಂತರ ಅದನ್ನು ಠಾಣೆಗೆ ತರಲಾಗಿದೆ.ನಂತರ ರವಿವಾರ ಮುಂಜಾನೆ ತಿಂಥಣಿ ಗ್ರಾಮದಲ್ಲಿ ಹುಲಿ ಚರ್ಮ ದೊರೆತ ಸ್ಥಳಕ್ಕೆ ತೆರಳಿ ಪಂಚನಾಮೆ ಮಾಡಲಾಗಿದೆ.

    ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹುಲಿ ಚರ್ಮವನ್ನು ಒಪ್ಪಿಸಲಾಗಿದೆ.ಈ ಸಂದರ್ಭದಲ್ಲಿ ಭಾಗವಹಿಸಿದ್ದ ತಿಂಥಣಿ ಗ್ರಾಮ ಪಂಚಾಯತಿ ಸದಸ್ಯ ಬೈರಣ್ಣ ಅಂಬಿಗೇರ ಮಾತನಾಡಿ, ಈಶ್ವರ ದೇವಸ್ಥಾನದಲ್ಲಿ ಸಂಗಯ್ಯ ಎನ್ನುವಂತೆ ಸಾಧು ಒಬ್ಬರು ಇರುತ್ತಿದ್ದರು,ಅವರು ಇತ್ತೀಚೆಗೆ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದಾರೆ,ಅವರ ಕೊಠಡಿಯ ಬೀಗವನ್ನು ತೆಗೆಯಲಾಗಿದೆ, ಈ ಹುಲಿ ಚರ್ಮ ಅವರ ಕೊಠಡಿಯಲ್ಲೆ ಇರುವುದಾಗಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ.

    ಅಲ್ಲದೆ ದಲಿತ ಸೇನೆ ತಾಲೂಕು ಅಧ್ಯಕ್ಷ ಮರಿಲಿಂಗಪ್ಪ ಗುಡಿಮನಿ ಹುಣಸಿಹೊಳೆ ಮಾತನಾಡಿ, ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ತನಿಖೆ ಮಾಡಿ ಹುಲಿ ಚರ್ಮ ಯಾರಿಗೆ ಸೇರಿದ್ದು,ಇದು ಎಲ್ಲಿಂದ ಬಂತು ಮತ್ತು ಇದರ ಹಿಂದೆ ಯಾರಿದ್ದಾರೆ ಎನ್ನುವುದು ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    1)
    ಹುಲಿ ಚರ್ಮದಂತೆ ಕಾಣಿಸುತ್ತದೆ ಆದರೆ ಇದು ಅಸಲಿಯೋ ನಕಲಿಯೋ ಎನ್ನುವುದು ಪ್ರಯೋಗಾಲಯದಿಂದ ತಿಳಿದು ಬರಲಿದೆ,ಇದು ಎಲ್ಲಿಂದ ಬಂತು ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡಬೇಕಿದೆ-

    *ಕೃಷ್ಣಾ ಸುಬೇದಾರ, ಪಿಎಸ್‌ಐ*
    ——————–

    2)
    ಹುಲಿಯ ಚರ್ಮ ಈಶ್ವರ ದೇವಸ್ಥಾನದಲ್ಲಿದ್ದ ಸಂಗಯ್ಯ ಎನ್ನುವ ಸಾಧುವಿಗೆ ಸೇರಿದ್ದು ಎನ್ನುವ ಅನುಮಾನವಿದೆ ಸರಿಯಾದ ತನಿಖೆ ನಡೆಸಿ ಆರೋಪಿಗಳ ಪತ್ತೆ ಮಾಡಿ ಕಠಿಣ ಶಿಕ್ಷೆ ನೀಡಬೇಕು

    *ಬೈರಣ್ಣ ಅಂಬಿಗೇರ,*
    *ಗ್ರಾ.ಪಂ ಸದಸ್ಯ ತಿಂಥಣಿ*
    —————–

    3)
    ರಾಷ್ಟ್ರ ಪ್ರಾಣಿ ಹುಲಿಯ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಹುಲಿಯನ್ನು ಕೊಂದಿರುವುದು ಮಹಾ ಅಪರಾಧವಾಗಿದ್ದು, ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ನಮ್ಮ ಸಂಘಟನೆ ಹೋರಾಟ ನಡೆಸಲಿದೆ

    *ಮರಿಲಿಂಗಪ್ಪ ಗುಡಿಮನಿ*
    *ದಲಿತ ಸೇನೆ ತಾ.ಅಧ್ಯಕ್ಷ*