Category: Crime

  • ಹಣ ಡಬಲ್ ಮಾಡುತ್ತೇನೆಂದು ನಂಬಿಸಿ ₹21.59 ಲಕ್ಷ ರೂ. ವಂಚನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

    ಹಣ ಡಬಲ್ ಮಾಡುತ್ತೇನೆಂದು ನಂಬಿಸಿ ₹21.59 ಲಕ್ಷ ರೂ. ವಂಚನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

    ಸತ್ಯಕಾಮ ವಾರ್ತೆ ಯಾದಗಿರಿ:

    ಐದು ವರ್ಷಗಳಲ್ಲಿ ಹೂಡಿಕೆ ಮಾಡಿದ ಹಣ ಡಬಲ್ ಆಗುತ್ತದೆ ಎಂದು ನಂಬಿಸಿ, ಗ್ರಾಮದ ಸುಮಾರು 50 ಮಂದಿಯಿಂದ ಒಟ್ಟು ₹21.59 ಲಕ್ಷ ರೂ. ವಂಚಿಸಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಯಣ್ಣಿವಡಗೇರಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಈ ಸಂಬಂಧ ಬಸವರಾಜ @ ಬಸಪ್ಪ ಯಮನಪ್ಪ ಆಶ್ಯಾಳ ಮತ್ತು ಅವನ ಅಣ್ಣ ಮುತ್ತಪ್ಪ ಯಮನಪ್ಪ ಆಶ್ಯಾಳ ಎಂಬವರ ವಿರುದ್ಧ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದೂರುದಾರ ನಿಂಗಪ್ಪ ದೂಳಪ್ಪ ಪೂಜಾರಿ ನೀಡಿರುವ ದೂರಿನ ಪ್ರಕಾರ, 2013ರಲ್ಲಿ ಆರೋಪಿ ಬಸವರಾಜ ಘರಿಮಾ ಹೋಮ್ ಅಂಡ್ ಫಾರಂ ಹೌಸ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಇನ್ಸುರೆನ್ಸ್ ಕಂಪನಿ ಪ್ರಾರಂಭಿಸಿ, ಪ್ರತಿ ವರ್ಷ ₹1,250ರಂತೆ ಐದು ವರ್ಷ ಹಣ ಕಟ್ಟಿದರೆ ಹೂಡಿಕೆ ಡಬಲ್ ಆಗುತ್ತದೆ ಎಂದು ಭರವಸೆ ನೀಡಿದ್ದನು.

    ಈ ಭರವಸೆ ನಂಬಿ ಗ್ರಾಮದ ಸುಮಾರು 50 ಮಂದಿ ಒಟ್ಟು ₹21.59 ಲಕ್ಷ ರೂ. ಹೂಡಿಕೆ ಮಾಡಿದರು. ಆದರೆ 2019ರಲ್ಲಿ ಅವಧಿ ಮುಗಿದರೂ ಹಣವನ್ನು ಹಿಂತಿರುಗಿಸದೆ ಕಾಲಹರಣ ಮಾಡಿದನು. 2020ರಲ್ಲಿ ಗ್ರಾಮ ಹಿರಿಯರ ಸಮ್ಮುಖದಲ್ಲಿ ನಡೆದ ನ್ಯಾಯಪಂಚಾಯಿತಿಯಲ್ಲೂ ಐದು ವರ್ಷಗಳ ಅವಧಿ ಕೇಳಿ ವಂಚನೆ ಮುಂದುವರಿಸಿದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಇತ್ತೀಚೆಗೆ ದೂರುದಾರರು ಹಣವನ್ನು ಕೇಳಿದಾಗ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಅಣ್ಣ ಮುತ್ತಪ್ಪ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

    ಈ ಕುರಿತು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ BNS ಕಲಂ 316(2), 318(3), 351(2), 352 ಹಾಗೂ 3(5) ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

  • ಆಯುರ್ವೇದ ಚಿಕಿತ್ಸೆ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಗೋಗಿ(ಕೆ) ಗ್ರಾಮದಲ್ಲಿ ಘಟನೆ — ಆರೋಪಿ ವಿರುದ್ಧ ಪ್ರಕರಣ ದಾಖಲು

    ಆಯುರ್ವೇದ ಚಿಕಿತ್ಸೆ ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಗೋಗಿ(ಕೆ) ಗ್ರಾಮದಲ್ಲಿ ಘಟನೆ — ಆರೋಪಿ ವಿರುದ್ಧ ಪ್ರಕರಣ ದಾಖಲು

    ಸತ್ಯಕಾಮ ವಾರ್ತೆ ಯಾದಗಿರಿ:

    ಆಯುರ್ವೇದ ಚಿಕಿತ್ಸೆ  ಕೊಡುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ(ಕೆ) ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಮಹಿಳೆಯೊಬ್ಬರು ಗೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಮಹಿಳೆ ನೀಡಿದ ದೂರಿನ ಪ್ರಕಾರ ಹೊಟ್ಟೆನೋವಿನ ಚಿಕಿತ್ಸೆಗಾಗಿ ತಾಯಿ ಹಾಗೂ ಅತ್ತೆಯೊಂದಿಗೆ ಗೋಗಿ(ಕೆ) ಗ್ರಾಮದ ಮುರ್ಸಿದ್ ಮುತ್ಯಾ ಅಲಿಯಾಸ್ ಸಯ್ಯದ ಮುರಾನ್ ಹುಸೇನಿ ಎಂಬಾತನ ಮನೆಗೆ ಅಕ್ಟೋಬರ್ 8ರಂದು  ಮಹಿಳೆ ತೆರಳಿದ್ದಳು. ಈ ವೇಳೆ  ಚಿಕಿತ್ಸೆ ನೆಪದಲ್ಲಿ ಆರೋಪಿ ಯುವತಿಯನ್ನು ಪಕ್ಕದ ಕೋಣೆಗೆ ಕರೆದುಕೊಂಡು ಹೋಗಿ ಬಾಗಿಲು ಒಳಗಿನಿಂದ ಹಾಕಿಕೊಂಡು, ಮೂಗಿಗೆ ಏನೋ ಔಷಧಿ ಹಚ್ಚಿ ಸುಂದಾಗುವಂತೆ ಮಾಡಿ, ಚಿಕಿತ್ಸೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಈ ಸಂದರ್ಭದಲ್ಲಿ ಮಹಿಳೆ ಚೀರಿದಾಗ ಆಕೆಯ ತಾಯಿ ಬಾಗಿಲು ಬಡಿದು ಒಳಗೆ ಬಂದಿದ್ದು, ಆರೋಪಿ ತನ್ನ ತಪ್ಪನ್ನು ಮುಚ್ಚಿಹಾಕಲು ಆಕೆಗೆ ಚಿಕಿತ್ಸೆ ಮುಗಿದಿದೆ ಎಂದು ಹೇಳಿದನೆಂದು ದೂರಿನಲ್ಲಿ ತಿಳಿಸಲಾಗಿದೆ.

    ಘಟನೆಯ ಬಳಿಕ ಮಹಿಳೆ ಮನೆಗೆ ಹೋದ ನಂತರ ತಾಯಿ ಮತ್ತು ಅತ್ತೆಗೆ ವಿಷಯ ತಿಳಿಸಿದ್ದು, ನಂತರ ಗೋಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲಾಗಿದೆ. ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆಂದು ಮೂಲಗಳು ತಿಳಿಸಿವೆ.

  • ಭೂ ದಾಖಲೆಗಳ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ : ಬಾಕಿ ಉಳಿದ ಕಡತಗಳ ಪರಿಶೀಲನೆ 

    ಭೂ ದಾಖಲೆಗಳ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ : ಬಾಕಿ ಉಳಿದ ಕಡತಗಳ ಪರಿಶೀಲನೆ 

    ಸತ್ಯಕಾಮ ವಾರ್ತೆ ಯಾದಗಿರಿ:

    ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿರುವ ಭೂ ದಾಖಲೆಗಳ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಬೆಳಿಗ್ಗೆ ದಿಢೀರ್ ಭೇಟಿ ನೀಡಿ,  ಕಚೇರಿಯ ಕೆಲಸಕಾರ್ಯಗಳು ಸರಿಯಾಗಿ ನಡೆಯುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಲೋಕಾಯುಕ್ತ ಪಿಐ ರಾಜಶೇಖರ್ ಹಳಿಗೋಧಿ ಅವರ ನೇತೃತ್ವದಲ್ಲಿ ಈ ಪರಿಶೀಲನೆ ನಡೆದಿದೆ.

    ಆ ಸಮಯದಲ್ಲಿ ಕಚೇರಿಯಲ್ಲಿದ್ದ ಬಾಕಿ ಉಳಿದ ಕಡತಗಳ ಪರಿಶೀಲನೆ ಕೈಗೊಳ್ಳಲಾಯಿತು. ಕೆಲ ದಾಖಲೆಗಳಲ್ಲಿ ವಿಳಂಬ ಹಾಗೂ ಅಪೂರ್ಣ ಮಾಹಿತಿಯಿರುವ ಕುರಿತು ಅಧಿಕಾರಿಗಳು ಗಮನಹರಿಸಿದರು ಎಂದು ಮೂಲಗಳು ತಿಳಿಸಿವೆ.

    ಪರಿಶೀಲನೆ ವೇಳೆ ಸಿಬ್ಬಂದಿಗಳಾದ ಅಮರನಾಥ್, ಸಂತೋಷಮ್ಮ ಸೇರಿದಂತೆ ಇತರರು ಹಾಜರಿದ್ದರು.

  • ಯಾದಗಿರಿ: ಇ–ಖಾತಾ ಮಾಡಲು ₹5 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತರ ವಶಕ್ಕೆ

    ಯಾದಗಿರಿ: ಇ–ಖಾತಾ ಮಾಡಲು ₹5 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತರ ವಶಕ್ಕೆ

    ಯಾದಗಿರಿ: ಇಲ್ಲಿನ ನಗರಸಭೆಯ ಬಿಲ್ ಕಲೆಕ್ಟರ್ ನರಸಪ್ಪ ಮಾಣಿಕಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಲಂಚ ಸ್ವೀಕರಿಸುತ್ತಿದ್ದ ವೇಳೆ ವಶಕ್ಕೆ ಪಡೆದಿದ್ದಾರೆ.

    ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ನಿವಾಸಿ ಶಶಿಕುಮಾರ್ ಜ್ಞಾನಮಿತ್ರ ಅವರ ದೂರು ಆಧರಿಸಿ ದಾಳಿ ನಡೆಸಲಾಗಿದೆ. ದೂರುದಾರರಿಗೆ ಇ–ಖಾತಾ ಮಾಡಿಕೊಡಲು ನರಸಪ್ಪ ಅವರು ಹಲವಾರು ಬಾರಿ ಕಚೇರಿಗೆ ಅಲೆದಾಡಿಸಿದರು ಮತ್ತು ₹8 ಸಾವಿರ ಲಂಚ ಬೇಡಿಕೆ ಇಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.

    ಶುಕ್ರವಾರ ಕೋರ್ಟ್ ಮುಂಭಾಗದ ರಸ್ತೆಯ ಬದಿಯಲ್ಲಿ ₹5 ಸಾವಿರ ಲಂಚದ ಹಣವನ್ನು ಫೋನ್‌ಪೇ ಮೂಲಕ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಿಲ್ ಕಲೆಕ್ಟರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

  • ಬಾಲ್ಯ ವಿವಾಹ: ಪೋಕ್ಸೋ ಕೇಸ್‌ ದಾಖಲು

    ಬಾಲ್ಯ ವಿವಾಹ: ಪೋಕ್ಸೋ ಕೇಸ್‌ ದಾಖಲು

    ಸತ್ಯಕಾಮ ವಾರ್ತೆ ಯಾದಗಿರಿ:
    ಜಿಲ್ಲೆಯ ಕೊಡೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರ ಜೂನ್ 21ರಂದು ನಡೆದ ಬಾಲ್ಯ ವಿವಾಹ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಐದು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
    ಈ ಕುರಿತು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ ಮಲ್ಲೇಶಿ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿ, ಈಗಾಗಲೇ ಮಗುವಿಗೂ ಜನ್ಮ ನೀಡಿದ್ದಾಳೆ ಎಂದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
    ಈ ಹಿನ್ನೆಲೆಯಲ್ಲಿ, ವರ ಹಾಗೂ ಅವರ ಪೋಷಕರು ಮತ್ತು ವಧುವಿನ ತಂದೆ-ತಾಯಿಯನ್ನು ಸೇರಿ ಒಟ್ಟು ಐವರು ವಿರುದ್ಧ ಐಪಿಸಿ ಕಲಂ 376(2)(ಎನ್), ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕಲಂ 9, 10, 11, ಮತ್ತು ಪೋಕ್ಸೋ ಕಾಯ್ದೆ 2012/2013 ಅಡಿಯಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
  • ನಾಯ್ಕಲ್ : ಜಲ ಜೀವನ ಮಿಷನ್ ಕಾಮಗಾರಿಯಲ್ಲಿ ಅವ್ಯವಹಾರ : ಐವರ ವಿರುದ್ಧ ಪ್ರಕರಣ ದಾಖಲು

    ನಾಯ್ಕಲ್ : ಜಲ ಜೀವನ ಮಿಷನ್ ಕಾಮಗಾರಿಯಲ್ಲಿ ಅವ್ಯವಹಾರ : ಐವರ ವಿರುದ್ಧ ಪ್ರಕರಣ ದಾಖಲು

    ಸತ್ಯಕಾಮ ವಾರ್ತೆ ಯಾದಗಿರಿ:

    ನಾಯ್ಕಲ್ ಗ್ರಾಮದ ಜಲ ಜೀವನ ಮಿಷನ್ ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದೂ, ಈ ಬಗ್ಗೆ ಜಿಲ್ಲಾ ಪಂಚಾಯಿತಿ ಕಚೇರಿಯ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ್ ಅವರು ಐವರ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

     

    ನಾಯ್ಕಲ್ ಗ್ರಾಮದ 1500 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ (FHTC) ನೀಡುವ ಕಾಮಗಾರಿಗೆ ₹411 ಲಕ್ಷ ವೆಚ್ಚ ನಿಗದಿಯಾಗಿತ್ತು. ಆದರೆ, ವಾಸ್ತವಿಕವಾಗಿ ಕೇವಲ 529 ಮನೆಗಳಲ್ಲಿ (35%) ಮಾತ್ರ ಕಾಮಗಾರಿ ಪೂರ್ಣಗೊಂಡಿದ್ದರೂ, ದಾಖಲೆಗಳಲ್ಲಿ 1257 ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ ಎಂದು ತೋರಿಸಿ ₹330.39 ಲಕ್ಷ (82.5%) ಬಿಲ್‌ ಪಾವತಿ ಮಾಡಲಾಗಿದ್ದೂ, ಅಲ್ಲದೇ ಇದಕ್ಕೆ ಹೆಚ್ಚುವರಿಯಾಗಿ ₹190 ಲಕ್ಷ ಮೊತ್ತವನ್ನು ಕೆಲಸ ಪೂರ್ಣಗೊಳ್ಳದೇ ಇರುವ ಪರಿಸ್ಥಿತಿಯಲ್ಲೇ ಪಾವತಿಸಿ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

     

    ತಪಾಸಣೆಯಲ್ಲಿ, MDPE ಪೈಪುಗಳನ್ನು ಸರಿಯಾಗಿ ಅಳವಡಿಸದೇ GI ಪೈಪುಗಳಿಂದ ಮುಚ್ಚಿಲ್ಲ, ನೆಲದಡಿಯಲ್ಲಿ ಹಾಕಬೇಕಾದ ಪೈಪುಗಳನ್ನು ಮೇಲ್ಮೈಯಲ್ಲಿ ಅಳವಡಿಸಲಾಗಿದೆ, ಸುಳ್ಳು ದೃಢೀಕರಣ ಪತ್ರಗಳು ಮತ್ತು ನಕಲಿ ವರದಿಗಳ ಆಧಾರದಲ್ಲಿ ಬಿಲ್‌ಗಳು ಅನುಮೋದನೆಗೊಂಡಿರುವುದು ಪತ್ತೆಯಾಗಿದ್ದು, ಇದು ತುರ್ತು ಕ್ರಮಕ್ಕೆ ಕಾರಣವಾಗಿದೆ.

     

    ಈ ಅವ್ಯವಹಾರದಲ್ಲಿ ಭಾಗಿಯಾದ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಉಪ ವಿಭಾಗ ಅಧಿಕಾರಿ (ಪ್ರ) ಸಹಾಯಕ ಇಂಜಿನಿಯರ್-2 ಎನ್. ಶ್ರೀನಿವಾಸ, ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಉಪ ವಿಭಾಗ ಶಹಾಪೂರ ಪ್ರಸಕ್ತ ದೇವದುರ್ಗ ಲೋಕೋಪಯೋಗಿ ಇಲಾಖೆ, ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿರುವ ಬನ್ನಪ್ಪ, ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಯಾದಗಿರಿ ವಿಭಾಗದ ಕಾರ್ಯಪಾಲಕ ಅಭಿಯಂತರ ಆನಂದ, ಗುತ್ತಿಗೆದಾರ ವೆಂಕಟೇಶ್ ಜಿ. ಗುರಸಣಗಿ,Transportech Consultants, ಬೆಂಗಳೂರು (ಮೂರನೇ ತನಿಖಾ ತಂಡ) ಇವರ ವಿರುದ್ಧ ಇದೀಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    ಈ ಕುರಿತು ಗುನ್ನೆ ನಂ.153/2025 ಕಲಂ 318(2), 418(4), 336(3) BNS-2023 ಅಡಿ ಕ್ರಿಮಿನಲ್ ಪ್ರಕರಣ ದಾಖಲಾಗಿ ತನಿಖೆ ಆರಂಭವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • ಸೈಬರ್ ವಂಚನೆ ಕೇಸ್: ವಕೀಲರ ಖಾತೆಯಿಂದ 3.37 ಲಕ್ಷ ರೂ. ಗುಳುಂ

    ಸೈಬರ್ ವಂಚನೆ ಕೇಸ್: ವಕೀಲರ ಖಾತೆಯಿಂದ 3.37 ಲಕ್ಷ ರೂ. ಗುಳುಂ

    ಸತ್ಯಕಾಮ ವಾರ್ತೆ ಯಾದಗಿರಿ:

    ನಗರದ ವಕೀಲರೊಬ್ಬರ ಬ್ಯಾಂಕ್ ಖಾತೆಯಿಂದ ದುಷ್ಕರ್ಮಿಗಳು ಅಂತರಜಾಲದ ಮೂಲಕ ರೂ. 3.37 ಲಕ್ಷ ಮೊತ್ತವನ್ನು ವಂಚಿಸಿರುವ ಪ್ರಕರಣ ಯಾದಗಿರಿ ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ ಅಪರಾಧ (ಸಿ.ಇ.ಎನ್) ಠಾಣೆಯಲ್ಲಿ ದಾಖಲಾಗಿದೆ.

    ಮಾತಾ ಮಾಣಿಕೇಶ್ವರಿ ನಗರದ ನಿವಾಸಿ, ವೃತ್ತಿಯಲ್ಲಿ ವಕೀಲರಾದ ಬಸವರಾಜ ಆರ್. ಹಾಲಗೇರ್ (48) ಅವರು ಸಲ್ಲಿಸಿದ ದೂರಿನ ಪ್ರಕಾರ ಆಗಸ್ಟ್‌ 04 ರಂದು ಅವರ ಮೊಬೈಲ್ ನಂಬರ ಇದ್ದಕ್ಕಿದ್ದಂತೆ ನಿಷ್ಕ್ರಿಯಗೊಂಡಿತು. ನಂತರ ಆಧಾರ್ OTP ಬರದೆ ಸಮಸ್ಯೆ ಎದುರಾದ್ದರಿಂದ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ, ಆ. 06 ಮತ್ತು 07 ರಂದು ಅನಾಮಿಕರು ಅವರ ಕೆನರಾ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 2 ಲಕ್ಷ ರೂ., 1.17 ಲಕ್ಷ ರೂ., 19,500 ರೂ. ಹಾಗೂ 700 ರೂ. ಮೊತ್ತವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಘಟನೆಯ ನಂತರ ಬಸವರಾಜ ಅವರು ತಕ್ಷಣವೇ ಸೈಬರ್ ಸಹಾಯವಾಣಿ 1930 ಗೆ ಕರೆ ಮಾಡಿ ದೂರು ದಾಖಲಿಸಿದ್ದು, ನಂತರ ಬ್ಯಾಂಕ್‌ಗೆ ಲಿಖಿತ ಅರ್ಜಿ ಸಲ್ಲಿಸಿ ತಮ್ಮ ಖಾತೆ ಬಂದ್ ಮಾಡಿಕೊಂಡಿದ್ದಾರೆ.

    ಆ. 27 ರಂದು ವಕೀಲ ಬಸವರಾಜ ಅವರು ಸ್ವತಃ ಸಿ.ಇ.ಎನ್ ಠಾಣೆಗೆ ತೆರಳಿ ಗಣಕೀಕೃತ ದೂರು ಸಲ್ಲಿಸಿದ್ದು, ಪೊಲೀಸರು ಗುನ್ನೆ ನಂ. 21/2025ರಲ್ಲಿ ಐಟಿ ಕಾಯ್ದೆ ಸೆಕ್ಷನ್ 66(D) ಹಾಗೂ ಬಿಎನ್‌ಎಸ್ ಕಾಯ್ದೆ ಸೆಕ್ಷನ್ 318(4), 319 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • ಬಾವಿಯಲ್ಲಿ ಬಿದ್ದು ಮೃತಪಟ್ಟ ಬಾಲಕನ ಶವ ಪರೀಕ್ಷೆ

    ಬಾವಿಯಲ್ಲಿ ಬಿದ್ದು ಮೃತಪಟ್ಟ ಬಾಲಕನ ಶವ ಪರೀಕ್ಷೆ

    ಹುಣಸಗಿ: ತಾಲೂಕಿನ ಜೋಗುಂಡಬಾವಿ ಗ್ರಾಮದಲ್ಲಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ 17 ವರ್ಷದ ಜಗದೀಶ ಎಂಬ ಬಾಲಕನ ಶವವನ್ನು ಹೊರತೆಗೆಸಿ ಮರು ಶವಪರೀಕ್ಷೆ ನಡೆಸಲಾಯಿತು.

    ಜಗದೀಶ, ಯಮನಪ್ಪ ಇಂಗಳಗಿ ಮತ್ತು ದುರ್ಗವ್ವ ದಂಪತಿ ಪುತ್ರ. ಏಪ್ರಿಲ್ 23ರಂದು ಗ್ರಾಮದ ಹಣಮಂತ ಅವರ ಜಮೀನಿನ ಬಾವಿಗೆ ಈಜಾಡಲು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ನಂತರ ಪೋಷಕರು ಹೊಲದಲ್ಲೇ ಅಂತ್ಯಸಂಸ್ಕಾರ ನೆರವೇರಿಸಿದ್ದರು.

    ಆದರೆ ಜುಲೈ 12ರಂದು ಮಗನ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ ತಂದೆ ಯಮನಪ್ಪ ಅವರು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಪ್ರಕಾರ ಪೋಷಕರ ಸಮ್ಮುಖದಲ್ಲಿ ತಹಶೀಲ್ದಾರ್ ಎಂ. ಬಸವರಾಜ ಅವರ ನೇತೃತ್ವದಲ್ಲಿ ಶವವನ್ನು ಹೊರತೆಗೆಸಿ ಶವಪರೀಕ್ಷೆ ನಡೆಸಲಾಯಿತು. ಈ ವೇಳೆ ಪಿಎಸ್‌ಐ ರಾಜಶೇಖರ ಹಾಗೂ ವೈದ್ಯರು ಉಪಸ್ಥಿತರಿದ್ದರು.

  • ಬಲವಂತದ ದೇಣಿಗೆ ಬೇಡ: ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ

    ಬಲವಂತದ ದೇಣಿಗೆ ಬೇಡ: ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಮುಂಬರುವ ಗೌರಿ–ಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ರಸ್ತೆಯಲ್ಲಿ ಗುಂಪುಕಟ್ಟಿಕೊಂಡು ವಾಹನಗಳನ್ನು ತಡೆದು ಬಲವಂತವಾಗಿ ದೇಣಿಗೆ ಸಂಗ್ರಹಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಸಿದೆ.

    ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಪೊಲೀಸ್ ಇಲಾಖೆ, ಹಬ್ಬದ ಸಂದರ್ಭಗಳಲ್ಲಿ ಕೆಲವು ಸಮಿತಿಗಳ ಸದಸ್ಯರು ರಸ್ತೆಗಳಲ್ಲಿ ಗುಂಪು ಸೇರಿ, ವಾಹನ ಸವಾರರಿಗೆ ಅಡಚಣೆ ಉಂಟುಮಾಡಿ ಬಲವಂತವಾಗಿ ಹಣ ಬೇಡುವ ಘಟನೆಗಳು ನಡೆಯುತ್ತಿರುವುದಾಗಿ ತಿಳಿಸಿದೆ. ಇಂತಹ ಕೃತ್ಯಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುವುದರೊಂದಿಗೆ ರಸ್ತೆ ಅಪಘಾತಗಳ ಸಂಭವ ಹೆಚ್ಚಾಗುತ್ತದೆ ಎಂದು ಎಚ್ಚರಿಸಲಾಗಿದೆ.

    ಸಾರ್ವಜನಿಕರು ಸ್ವಯಂಪ್ರೇರಿತವಾಗಿ ನೀಡಿದರೆ ಮಾತ್ರ ದೇಣಿಗೆಯನ್ನು ಸ್ವೀಕರಿಸಲು ಸೂಚನೆ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ರಸ್ತೆ ತಡೆದು ಹಣ ಸಂಗ್ರಹಿಸುವಂತಿಲ್ಲ ಎಂದು ತಿಳಿಸಿದೆ.

    ಗೌರಿ–ಗಣೇಶ ಹಬ್ಬವನ್ನು ಶ್ರದ್ದೆ ಹಾಗೂ ಭಕ್ತಿಯಿಂದ ಆಚರಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಶಾಂತಿಯುತವಾಗಿ ಹಬ್ಬವನ್ನು ನೆರವೇರಿಸಲು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ತಮ್ಮ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

  • ಎರಡು ಗುಂಪುಗಳ ನಡುವೆ ಹೊಡೆದಾಟ: 25 ಮಂದಿ ವಿರುದ್ಧ ಪ್ರಕರಣ

    ಎರಡು ಗುಂಪುಗಳ ನಡುವೆ ಹೊಡೆದಾಟ: 25 ಮಂದಿ ವಿರುದ್ಧ ಪ್ರಕರಣ

    ಯಾದಗಿರಿ: ಗಾಂಧಿ ನಗರ ತಾಂಡಾದಲ್ಲಿ ಎರಡು ಗುಂಪುಗಳ ನಡುವೆ ಮಾರಕಾಸ್ತ್ರಗಳು ಹಿಡಿದು ಹೊಡೆದಾಟ ನಡಿಸಿದ ಸಂಬಂಧ ಇಬ್ಬರನ್ನು ಬಂಧಿಸಿ, 25 ಆರೋಪಿಗಳ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕೈಯಲ್ಲಿ ತಲ್ವಾರ್, ಚಾಕು, ಕಲ್ಲು, ಇಟ್ಟಿಗೆ, ಕಟ್ಟಿಗೆಗಳನ್ನು ಹಿಡಿದು ಎರಡೂ ಗುಂಪಿನವರು ಪರಸ್ಪರ ಹೊಡೆದಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಎರಡೂ ಕಡೆಯವರು ದೂರು– ಪ್ರತಿದೂರು ದಾಖಲಿಸಿದ್ದಾರೆ. ತೇಜರಾಜ್ ರಾಠೋಡ (46) ಹಾಗೂ ರಮೇಶ ದೇವುಜಿ ರಾಠೋಡನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ರಮೇಶ ದೇವುಜಿ ನೀಡಿದ ದೂರಿನ ಅನ್ವಯ ತೇಜರಾಜ್, ಶಶಿ, ಮೋನು, ಮಿಥುನ್, ಬಾಬು ಸೇರಿ 11 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಶಿಕುಮಾರ ತೇಜರಾಜ್ ನೀಡಿದ ಪ್ರತಿ ದೂರಿನ ಪ್ರಕಾರ ರಮೇಶ, ಕಲಾವತಿ, ಲಕ್ಷ್ಮಿಬಾಯಿ, ಅಂಬರೇಶ, ಅರ್ಜುನ್ ಸೇರಿ 14 ಮಂದಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.