Author: Satyakam NewsDesk

  • Bigg Boss Season 12 controversy:ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

    Bigg Boss Season 12 controversy:ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

    ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ವಿವಾದದ ಕೇಂದ್ರಬಿಂದುವಾಗಿದೆ. ಮನರಂಜನೆ, ಡ್ರಾಮಾ ಮತ್ತು ಸಂವಾದಗಳೊಂದಿಗೆ ಪ್ರೇಕ್ಷಕರ ಮನ ಗೆಲ್ಲುತ್ತಿದ್ದ ಈ ಕಾರ್ಯಕ್ರಮ ಈಗ ಕಾನೂನು ಗೋಜಿಗೆ ಸಿಲುಕಿದೆ. ಸ್ಪರ್ಧಿಗಳ ನಡುವೆ ನಡೆದ ಒಂದು ಘಟನೆ, ಆಡಿದ ಮಾತು, ಬಳಸಿದ ಪದ ಬಳಕೆ ಮತ್ತು ಅದರ ಪರಿಣಾಮವಾಗಿ ಉಂಟಾದ ಸಾಮಾಜಿಕ ಪ್ರತಿಕ್ರಿಯೆ ಇವೆಲ್ಲದರ ಹಿನ್ನೆಲೆ ಈಗ ಚರ್ಚೆಗೆ ಗ್ರಾಸವಾಗಿದೆ.

    ಅಶ್ವಿನಿ ಗೌಡ ವಿರುದ್ಧ ದೂರು ದಾಖಲು:

    ಬಿಗ್‌ ಬಾಸ್‌ನ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಅವರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರಿನ ಪ್ರಕಾರ, ಬಿಗ್‌ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರು ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಬಗ್ಗೆ ಮಾತನಾಡುವಾಗ “She is S… ಆ ಕ್ಯಾಟೆಗರಿ‌ನವರು” ಎಂಬ ಪದಬಳಕೆ ಮಾಡಿರುವುದು ವ್ಯಕ್ತಿತ್ವ ನಿಂದನೆಯಾಗಿದೆ ಎಂದು ಆರೋಪಿಸಲಾಗಿದೆ.

    ದೂರಿನಲ್ಲಿ ಅಶ್ವಿನಿ ಗೌಡ ಅವರೊಂದಿಗೆ ಕಲರ್ಸ್ ಕನ್ನಡ ಚಾನೆಲ್‌ನ ವ್ಯವಹಾರ ಮುಖ್ಯಸ್ಥ ಪ್ರಶಾಂತ್ ನಾಯಕ್, ಕ್ಲಸ್ಟರ್ ಹೆಡ್ ಸುಷ್ಮಾ, ಹಾಗೂ ಡೈರೆಕ್ಟರ್ ಪ್ರಕಾಶ್ ಅವರ ಮೇಲೂ ಆರೋಪ ಹೊರಿಸಲಾಗಿದೆ. ಆರೋಪದಂತೆ, ಈ ರೀತಿಯ ನಿಂದನಾತ್ಮಕ ಪದಗಳನ್ನು ಸಂಪಾದನೆ ಮಾಡದೆ ಪ್ರಸಾರ ಮಾಡುವ ಮೂಲಕ ಚಾನೆಲ್ ಸಾಮಾಜಿಕ ಜವಾಬ್ದಾರಿಯನ್ನು ಉಲ್ಲಂಘಿಸಿದೆ. ಬಿಡದಿ ಪೊಲೀಸರು ಈ ಕುರಿತು ದೂರು ಸ್ವೀಕರಿಸಿ, ಎನ್‌ಸಿಆರ್ (Non-Cognizable Report) ದಾಖಲಿಸಿದ್ದಾರೆ ಅಂದರೆ ಇದು ಗಂಭೀರವಲ್ಲದ ಪ್ರಕರಣ ಎಂದು ಗುರುತಿಸಲಾಗಿದೆ.

    ದೂರಿನ ವಿಷಯವೇನು?: 

    ದೂರಿನಲ್ಲಿ ಉಲ್ಲೇಖಿಸಿರುವಂತೆ, ಬಿಗ್‌ ಬಾಸ್ ಕಾರ್ಯಕ್ರಮದಲ್ಲಿ ಅಶ್ವಿನಿ ಗೌಡ ಅವರು ಬಳಸಿದ “S Category” ಎಂಬ ಪದ ಜಾತಿ ನಿಂದನೆ ಹಾಗೂ ವ್ಯಕ್ತಿತ್ವ ಹಾನಿಗೆ ಕಾರಣವಾಗುವಂತದ್ದು. ಈ ಪದ ಬಳಕೆ ಕೇವಲ ವ್ಯಕ್ತಿಗಷ್ಟೇ ಅಲ್ಲ, ಸಮಾಜದ ಕೆಲವು ವರ್ಗಗಳಿಗೂ ನೋವುಂಟುಮಾಡುತ್ತದೆ ಎಂಬ ಆರೋಪ ಇದೆ.

    ದೂರುದಾರ ಪ್ರಶಾಂತ್ ಮೆತಾಲ್ ಅವರ ಪ್ರಕಾರ, “ಇಂತಹ ಪದಗಳು ಸಾರ್ವಜನಿಕವಾಗಿ ಪ್ರಸಾರವಾಗುವುದರಿಂದ ಸಮಾಜದಲ್ಲಿ ತಪ್ಪು ಸಂದೇಶ ಹರಡುತ್ತದೆ ಮತ್ತು ಕಾರ್ಯಕ್ರಮದ ಟಿಆರ್‌ಪಿ ಹೆಚ್ಚಿಸುವ ಉದ್ದೇಶದಿಂದ ಈ ಭಾಗವನ್ನು ತೆಗೆಯದೆ ಪ್ರಸಾರ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

    ರಕ್ಷಿತಾ ಶೆಟ್ಟಿ ಕ್ಯಾಮೆರಾ ಮುಂದೆ ಮಾತನಾಡುತ್ತಿದ್ದಾಗ, ಜಾಹ್ನವಿ ಮತ್ತು ಅಶ್ವಿನಿ ಗೌಡ ಫನ್ ಮಾಡಲು ಗೆಜ್ಜೆ (anklet) ಹಿಡಿದು ಅಲ್ಲಾಡಿಸಿದರೆಂದು ಹೇಳಲಾಗಿದೆ. ನಂತರ ಮನೆಯವರು ಯಾರು ಎಂದು ಕೇಳಿದಾಗ, ಇಬ್ಬರೂ ಅದು ರಕ್ಷಿತಾ ಮಾಡಿದ ಕೆಲಸ ಎಂದು ಸುಳ್ಳು ಹೇಳಿದ್ದಾರೆ.

    ಈ ವಿಷಯಕ್ಕೆ ಕೋಪಗೊಂಡ ರಕ್ಷಿತಾ ಇಬ್ಬರನ್ನೂ ಪ್ರಶ್ನಿಸಿದಾಗ ವಾಗ್ವಾದ ಉಂಟಾಯಿತು. ಅಶ್ವಿನಿ ಮತ್ತು ಜಾಹ್ನವಿ ತಮ್ಮ ತಪ್ಪನ್ನು ಒಪ್ಪದೆ ಗಲಾಟೆ ಮುಂದುವರಿಸಿದರು.

    ಮರುದಿನ ಬೆಳಗ್ಗೆ, ಅಶ್ವಿನಿ ಗೌಡ ಜಾಹ್ನವಿಯೊಂದಿಗೆ ಮಾತನಾಡುತ್ತಿದ್ದ ವೇಳೆ, ರಕ್ಷಿತಾಳ ಬಗ್ಗೆ “She is S… ಆ ಕ್ಯಾಟೆಗರಿಯವಳು” ಎಂದು ಹೇಳಿದ್ದು ಕ್ಯಾಮೆರಾದಲ್ಲಿ ಸೆರಿಯಾಗಿದೆ.

    ಸಾಮಾಜಿಕ ಪ್ರತಿಕ್ರಿಯೆ :

    ಈ ಘಟನೆ ಪ್ರಸಾರವಾದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಅಶ್ವಿನಿ ಗೌಡ ವಿರುದ್ಧ ಟೀಕೆಗಳ ಮಳೆ ಸುರಿಯುತ್ತಿದ್ದು, ಕೆಲವು ವೀಕ್ಷಕರು ಅವರ ಮಾತುಗಳನ್ನು ವೈಯಕ್ತಿಕ ಹಾಗೂ ಸಾಮಾಜಿಕ ನಿಂದನೆ ಎಂದು ಕರೆಯುತ್ತಿದ್ದರೆ, ಇನ್ನೂ ಕೆಲವರು ಬಿಗ್‌ ಬಾಸ್ ತಂಡದ ಸಂಪಾದನೆ ಮತ್ತು ಪ್ರಸಾರದ ನೀತಿಗಳನ್ನು ಪ್ರಶ್ನಿಸುತ್ತಿದ್ದಾರೆ.

    ಇನ್ನು, ಈ ಪ್ರಕರಣದಲ್ಲಿ ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದು, ಅಗತ್ಯ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಅಶ್ವಿನಿ ಗೌಡ ಅಥವಾ ಚಾನೆಲ್ ಪರವಾಗಿ ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲ. ಬಿಗ್‌ ಬಾಸ್ ಮನೆಯ ಮನರಂಜನೆ ಈಗ ವಿವಾದದ ಗೂಡಿನಲ್ಲಿ ಸಿಲುಕಿದೆ. ಶಿಸ್ತಿನ ಅಭಾವ ಕಾನೂನು ಗೊಂದಲಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪೊಲೀಸರು ಮತ್ತು ನ್ಯಾಯಾಲಯ ಯಾವ ಕ್ರಮ ಕೈಗೊಳ್ಳುತ್ತವೆ ಎಂಬುದು ಕಾದು ನೋಡಬೇಕಾಗಿದೆ.

  • ನವೆಂಬರ್ 1ರಿಂದ ಹಂಪಿ–ಬೆಂಗಳೂರು ವಿಮಾನ ಸೇವೆ ಪುನರಾರಂಭ:

    ನವೆಂಬರ್ 1ರಿಂದ ಹಂಪಿ–ಬೆಂಗಳೂರು ವಿಮಾನ ಸೇವೆ ಪುನರಾರಂಭ:

    ವಿಶ್ವ ವಿಖ್ಯಾತ ಹಂಪಿಯ ಅದ್ಭುತ ವೈಭವವನ್ನ ನೇರವಾಗಿ ಅನುಭವಿಸಲು ಬಯಸುವ ಪ್ರವಾಸಿಗರಿಗೆ ಇದೀಗ ಸುಗಮ ಪ್ರಯಾಣದ ದಾರಿ ತೆರೆದಿದೆ. ಕರ್ನಾಟಕದ ಇತಿಹಾಸ, ಕಲೆ ಮತ್ತು ಸಂಸ್ಕೃತಿಯ ಕಣಜವಾದ ವಿಜಯನಗರ ಸಾಮ್ರಾಜ್ಯದ ಪುರಾತನ ರಾಜಧಾನಿ ಹಂಪಿಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಪ್ರತಿವರ್ಷ ಸಾವಿರಾರು ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಇಲ್ಲಿ ಭೇಟಿ ನೀಡುತ್ತಾರೆ. ಆದರೆ, ಕಳೆದ ಕೆಲ ವರ್ಷಗಳಿಂದ ಹಂಪಿಗೆ ನೇರ ವಿಮಾನ ಸಂಪರ್ಕದ ಕೊರತೆ ಪ್ರವಾಸೋದ್ಯಮದ ಬೆಳವಣಿಗೆಗೆ ಅಡ್ಡಿಯಾಯಿತು. ಇದೀಗ ಆ ಅಡ್ಡಿ ದೂರವಾಗಲಿದೆ.

    ಒಂದು ತಿಂಗಳ ಕಾಲ ಸ್ಥಗಿತಗೊಂಡಿದ್ದ ಹಂಪಿ ಬೆಂಗಳೂರು ವಿಮಾನಯಾನ ಸೇವೆಗೆ ಮತ್ತೆ ಜೀವ ದೊರೆತಿದೆ. ಪ್ರಾದೇಶಿಕ ವಿಮಾನಯಾನ ಸಂಸ್ಥೆ ಸ್ಟಾರ್ ಏರ್ (Star Air) ನವೆಂಬರ್ 1ರಿಂದ ಬೆಂಗಳೂರು–ವಿದ್ಯಾನಗರ–ಬೆಂಗಳೂರು ಮಾರ್ಗದಲ್ಲಿ ದೈನಂದಿನ ವಿಮಾನ ಸೇವೆ ಆರಂಭಿಸುವುದಾಗಿ ಘೋಷಿಸಿದೆ. ಈ ಹೆಜ್ಜೆ ಕೇವಲ ಪ್ರವಾಸಿಗರಿಗಲ್ಲ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಕೈಗಾರಿಕಾ ವಲಯಕ್ಕೂ ಸಂಜೀವನಿಯಾಗಲಿದೆ.

    ವಿಮಾನ ಸೇವೆಯ ಸಂಪೂರ್ಣ ವೇಳಾಪಟ್ಟಿ:

    ಬೆಳಗ್ಗೆ 7:50 ಕ್ಕೆ: ವಿಮಾನವು ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡುತ್ತದೆ.

    ಬೆಳಗ್ಗೆ 8:40 ಕ್ಕೆ: ವಿದ್ಯಾನಗರ ವಿಮಾನ ನಿಲ್ದಾಣ (ಹಂಪಿಗೆ ಸಮೀಪ) ತಲುಪುತ್ತದೆ.

    ಕೇವಲ 30 ನಿಮಿಷಗಳ ವಿರಾಮದ ಬಳಿಕ,

    ಬೆಳಗ್ಗೆ 9:10 ಕ್ಕೆ: ವಿದ್ಯಾನಗರದಿಂದ ವಿಮಾನ ಮರಳಿ ಹೊರಡುತ್ತದೆ.

    ಬೆಳಗ್ಗೆ 10:00 ಕ್ಕೆ: ಬೆಂಗಳೂರು ತಲುಪುತ್ತದೆ.

    ಈ ವೇಗದ ಮತ್ತು ಅನುಕೂಲಕರ ವೇಳಾಪಟ್ಟಿ ಬೆಂಗಳೂರಿನಿಂದ ಒಂದು ದಿನದ ಪ್ರವಾಸ ಕೈಗೊಳ್ಳುವವರಿಗೆ ಹಾಗೂ ವ್ಯಾಪಾರ ವಹಿವಾಟುಗಳ ನಿಮಿತ್ತ ಆಗಮಿಸುವವರಿಗೆ ಅತ್ಯಂತ ಉಪಯುಕ್ತ.

    ಹಂಪಿಗೆ ತಲುಪುವ ಸುಗಮ ಮಾರ್ಗ:

    ವಿದ್ಯಾನಗರ ವಿಮಾನ ನಿಲ್ದಾಣ ಹಂಪಿಯಿಂದ ಕೇವಲ 35 ಕಿಲೋಮೀಟರ್ ದೂರದಲ್ಲಿದೆ. ಇದುವರೆಗೂ ಹಂಪಿಗೆ ಪ್ರಯಾಣಿಕರು 150 ಕಿಲೋಮೀಟರ್ ದೂರದ ಹುಬ್ಬಳ್ಳಿ ವಿಮಾನ ನಿಲ್ದಾಣ ಬಳಸಬೇಕಾಗುತ್ತಿತ್ತು. ಹೊಸ ವಿಮಾನ ಸೇವೆಯಿಂದ ಪ್ರಯಾಣದ ಸಮಯ ಮತ್ತು ವೆಚ್ಚ ಎರಡನ್ನೂ ಉಳಿತಾಯ ಮಾಡಬಹುದು.

    ಆರ್ಥಿಕತೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ:

    ಹಂಪಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸೋದ್ಯಮದ ಜೊತೆಗೆ ಕೈಗಾರಿಕಾ ವಲಯವೂ ವೇಗವಾಗಿ ಬೆಳೆಯುತ್ತಿದೆ. ವಿಶೇಷವಾಗಿ JSW ಉಕ್ಕು ಕಾರ್ಖಾನೆ ಹಾಗೂ ಅನೇಕ ಮಧ್ಯಮ ಮಟ್ಟದ ಉದ್ಯಮಗಳು ಇಲ್ಲಿವೆ. ಹೀಗಾಗಿ, ಸ್ಟಾರ್ ಏರ್‌ನ ಈ ಹೊಸ ವಿಮಾನ ಮಾರ್ಗವು ಉದ್ಯಮಿಗಳು, ತಂತ್ರಜ್ಞರು ಮತ್ತು ವ್ಯಾಪಾರಿಗಳಿಗೆ ವೇಗದ ಸಂಚಾರದ ಸೌಲಭ್ಯ ಒದಗಿಸಲಿದೆ.

    ಪ್ರವಾಸೋದ್ಯಮದ ದೃಷ್ಟಿಯಿಂದಲೂ ಈ ಸೇವೆ ಮಹತ್ವದ್ದಾಗಿದೆ. ಸ್ಥಳೀಯ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಟ್ಯಾಕ್ಸಿ ಸೇವೆಗಳು ಹಾಗೂ ಪ್ರವಾಸಿ ಮಾರ್ಗದರ್ಶಕರು ಇದರ ಪ್ರಯೋಜನವನ್ನು ಅನುಭವಿಸಲಿದ್ದಾರೆ.

    ಇನ್ನು, ಹಂಪಿ ಪ್ರವಾಸಿ ಮಾರ್ಗದರ್ಶಕರ ಸಂಘದ ಕಾರ್ಯದರ್ಶಿಯೊಬ್ಬರು ಹೇಳಿವ ಪ್ರಕಾರ ಈ ಅತ್ಯಂತ ಅಗತ್ಯವಾದ ವಿಮಾನ ಸೇವೆಯನ್ನ ಮರುಪ್ರಾರಂಭಿಸಿದಕ್ಕಾಗಿ ನಾವು ಸ್ಟಾರ್ ಏರ್‌ಗೆ ಕೃತಜ್ಞರಾಗಿದ್ದೇವೆ. ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದ ಮೇಲಿನ ಅವಲಂಬನೆ ತಪ್ಪಲಿದ್ದು, ಪ್ರವಾಸಿಗರಿಗೆ ಹಂಪಿ ಇನ್ನಷ್ಟು ಹತ್ತಿರವಾಗಲಿದೆ.

    ಹಂಪಿ ಕೇವಲ ಪುರಾತನ ಅವಶೇಷಗಳ ತಾಣವಲ್ಲ, ಅದು ನಮ್ಮ ಸಂಸ್ಕೃತಿಯ ಜೀವಂತ ಚಿಹ್ನೆ. ಪ್ರವಾಸಿಗರು ಈಗ ವೇಗವಾಗಿ ಈ ಐತಿಹಾಸಿಕ ನಾಡಿಗೆ ತಲುಪುವ ಅವಕಾಶವನ್ನು ಪಡೆಯಲಿದ್ದಾರೆ. ಸ್ಟಾರ್ ಏರ್‌ನ ಈ ಹೊಸ ಸೇವೆ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಆರ್ಥಿಕ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ.

  • ಶ್ರೀನಗರಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಇಂಧನ ಸೋರಿಕೆ; ಪೈಲಟ್‌ ತುರ್ತು ಕ್ರಮದಿಂದ ತಪ್ಪಿದ ಅಪಾಯ

    ಶ್ರೀನಗರಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಇಂಧನ ಸೋರಿಕೆ; ಪೈಲಟ್‌ ತುರ್ತು ಕ್ರಮದಿಂದ ತಪ್ಪಿದ ಅಪಾಯ

    ಇತ್ತೀಚಿಗೆ ವಿಮಾನಯಾನದಲ್ಲಿ ಸುರಕ್ಷತೆ ಅತಿ ಮುಖ್ಯವಾದ ಅಂಶವಾಗಿದೆ. ಯಾವುದೇ ತಾಂತ್ರಿಕ ದೋಷ ಅಥವಾ ತುರ್ತು ಪರಿಸ್ಥಿತಿಯು ವಿಮಾನ ಪ್ರಯಾಣವನ್ನು ತಕ್ಷಣ ಅಪಾಯಕ್ಕೆ ತರುವ ಸಾಧ್ಯತೆ ಹೊಂದಿದೆ. ಇತ್ತೀಚೆಗೆ ಇದೇ ರೀತಿಯ ತುರ್ತು ಘಟನೆ ಉತ್ತರ ಭಾರತದ ವಾರಣಾಸಿಯಲ್ಲಿ ಸಂಭವಿಸಿದೆ. ಶ್ರೀನಗರಕ್ಕೆ ಹಾರುತ್ತಿರುವ ಇಂಡಿಗೋ ವಿಮಾನದಲ್ಲಿ ಇಂಧನ ಸೋರಿಕೆಯ ತೊಂದರೆ (Fuel Leak) ಕಾಣಿಸಿಕೊಂಡು, ಪೈಲಟ್‌ ತುರ್ತು ಕ್ರಮ ಕೈಗೊಂಡಿದ್ದಾರೆ.

    ಕೋಲ್ಕತ್ತಾದಿಂದ ಶ್ರೀನಗರಗೆ ಹೊರಟಿದ್ದ ಈ ವಿಮಾನವು, ಮಾರ್ಗದಲ್ಲಿ ಇಂಧನ ಸೋರಿಕೆ ಉಂಟಾಗುತ್ತಿರುವುದನ್ನು ಪೈಲಟ್ ಗಮನಿಸಿದ್ದಾರೆ. ತಕ್ಷಣವೇ ಪೈಲಟ್‌ ತುರ್ತು ನಿರ್ಧಾರ ಕೈಗೊಂಡು, ವಿಮಾನವನ್ನು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರವಾಗಿ ಭೂಸ್ಪರ್ಶ ಮಾಡಿಸಿದ್ದಾರೆ. ಈ ವೇಳೆ ವಿಮಾನದಲ್ಲಿ ಇದ್ದ 166 ಪ್ರಯಾಣಿಕರು ಮತ್ತು ಸಿಬ್ಬಂದಿಯವರೆಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಾರಣಾಸಿ ಪೊಲೀಸ್ ಇಲಾಖೆ ತಿಳಿಸಿದೆ.

    ವಿಮಾನ ನಿಲ್ದಾಣದ ಅಧಿಕಾರಿಗಳು ಘಟನೆಯ ಕುರಿತು ಸಂಪೂರ್ಣ ತನಿಖೆ ಆರಂಭಿಸಿದ್ದಾರೆ. ಅದರೊಂದಿಗೆ, ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣದಲ್ಲಿ ತಂದುಕೊಂಡಿದ್ದಾರೆ ಎಂದು ಪ್ರಕಟಿಸಿದ್ದಾರೆ. ಘಟನೆಯಿಂದ ವಾರಣಾಸಿ ವಿಮಾನ ನಿಲ್ದಾಣದಲ್ಲಿ ಉಳಿದ ವಿಮಾನಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.

    ಈ ಘಟನೆಯು ವಿಮಾನಯಾನದ ತಾಂತ್ರಿಕ ಸುರಕ್ಷತೆ, ತಕ್ಷಣ ನಿರ್ಧಾರ ಕೈಗೊಳ್ಳುವ ಪೈಲಟ್‌ ನೈಪುಣ್ಯ ಮತ್ತು ಸಹಜ ತುರ್ತು ಸಿದ್ಧತೆಗಳ ಮಹತ್ವವನ್ನು ಮತ್ತೊಮ್ಮೆ ಹೇಳುತ್ತಿದೆ. ಪ್ರಯಾಣಿಕರ ಸುರಕ್ಷತೆಯೆಂದರೆ ಯಾವತ್ತು ಎಚ್ಚರಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ.

  • Asia Cup trophy controversy: ಬಿಸಿಸಿಐನಿಂದ ಮೊಹ್ಸಿನ್ ನಖ್ವಿಗೆ ಕಠಿಣ ಎಚ್ಚರಿಕೆ!

    Asia Cup trophy controversy: ಬಿಸಿಸಿಐನಿಂದ ಮೊಹ್ಸಿನ್ ನಖ್ವಿಗೆ ಕಠಿಣ ಎಚ್ಚರಿಕೆ!

    ಏಷ್ಯಾ ಕಪ್ 2025 ಮುಗಿದು ತಿಂಗಳಾದರೂ, ಭಾರತ ಜಯಿಸಿದ ಟ್ರೋಫಿ ಇನ್ನೂ ಟೀಂ ಇಂಡಿಯಾ ಕೈಗೆ ತಲುಪಿಲ್ಲ! ಈ ಅಸಾಮಾನ್ಯ ಸ್ಥಿತಿಯು ಈಗ ಕ್ರಿಕೆಟ್ ವಲಯದ ಪ್ರಮುಖ ಚರ್ಚೆಯ ವಿಷಯವಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿರುವ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮುಖ್ಯಸ್ಥರಾಗಿರುವ ಮೊಹ್ಸಿನ್ ನಖ್ವಿ ಟ್ರೋಫಿಯನ್ನು ದುಬೈ ಕಚೇರಿಯಲ್ಲಿ ಇರಿಸಿಕೊಂಡಿರುವುದು ಬಿಸಿಸಿಐನ (BCCI) ಕೆಂಗಣ್ಣಿಗೆ ಗುರಿಯಾಗಿದೆ.

    ಸೆಪ್ಟೆಂಬರ್ 28ರಂದು ನಡೆದ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತವು ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿತ್ತು. ಆದರೆ ಪಂದ್ಯ ಅಂತ್ಯದ ವೇಳೆ ಟ್ರೋಫಿ ವಿತರಣಾ ಸಮಾರಂಭ ನಡೆಯಲಿಲ್ಲ. ಕಾರಣವೆಂದರೆ ಟೀಂ ಇಂಡಿಯಾ ಆಟಗಾರರು ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ್ದರು. ನಖ್ವಿ ಅವರು ಪಾಕಿಸ್ತಾನದ ಆಂತರಿಕ ಸಚಿವರಾಗಿರುವುದರ ಜೊತೆಗೆ, ಕಾಶ್ಮೀರದ ಪೆಹಲ್ಗಾಮ್ ಉಗ್ರ ದಾಳಿಯ ನಂತರ ರಾಜಕೀಯ ಹೇಳಿಕೆಗಳನ್ನು ನೀಡಿದ ಕಾರಣದಿಂದಾಗಿ ಭಾರತೀಯ ತಂಡ ಅವರು ನೀಡುವ ಟ್ರೋಫಿಯನ್ನು ಸ್ವೀಕರಿಸದ ಸ್ವೀಕರಿಸಿರಲಿಲ್ಲ.

    ಈ ವಿವಾದದ ನಂತರ ಟ್ರೋಫಿಯನ್ನು ACC ಕಚೇರಿಯಲ್ಲಿ ಇರಿಸಲಾಗಿದೆ. ಇದರಿಂದ ಟ್ರೋಫಿ ಭಾರತಕ್ಕೆ ಹಸ್ತಾಂತರವಾಗದೆ, ಒಂದು ತಿಂಗಳಾದರೂ ದುಬೈಯಲ್ಲೇ ಉಳಿಯಿತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಇದೀಗ ಅಧಿಕೃತ ಇ-ಮೇಲ್ ಮೂಲಕ ಮೊಹ್ಸಿನ್ ನಖ್ವಿಗೆ ತೀವ್ರ ಎಚ್ಚರಿಕೆ ನೀಡಿದೆ. ಟ್ರೋಫಿಯನ್ನು ತಕ್ಷಣ ಭಾರತಕ್ಕೆ ಕಳುಹಿಸದಿದ್ದರೆ ವಿಷಯವನ್ನು ಐಸಿಸಿಗೆ (ICC) ಒಪ್ಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

    ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, “ಟೀಂ ಇಂಡಿಯಾ ಗೆದ್ದ ಟ್ರೋಫಿ ದುಬೈ ಕಚೇರಿಯಲ್ಲಿ ಉಳಿದಿರುವುದು ರಾಷ್ಟ್ರದ ಗೌರವಕ್ಕೆ ಧಕ್ಕೆ ಟ್ರೋಫಿಯನ್ನು ತಕ್ಷಣ ಹಸ್ತಾಂತರಿಸಬೇಕೆಂದು ನಾವು ನಖ್ವಿಗೆ ಸೂಚಿಸಿದ್ದೇವೆ, ಒಂದು ವೇಳೆ ಅವರು ನಿರ್ಲಕ್ಷಿಸಿದರೆ ನಾವು ಐಸಿಸಿಗೆ ದೂರು ನೀಡುತ್ತೇವೆ,” ಎಂದು ತಿಳಿಸಿದ್ದಾರೆ.

    ಆದರೆ ನಖ್ವಿಯ ಪ್ರತಿಕ್ರಿಯೆ ವಿವಾದವನ್ನು ಮತ್ತಷ್ಟು ಹುಟ್ಟುಹಕಿದೆ. ಅವರು “ಬಿಸಿಸಿಐ ಪ್ರತಿನಿಧಿಗಳು ದುಬೈಗೆ ಬಂದು ನನ್ನಿಂದಲೇ ಟ್ರೋಫಿಯನ್ನು ಪಡೆದುಕೊಳ್ಳಬೇಕು” ಎಂದು ಹೇಳಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಬಿಸಿಸಿಐ ಈ ನಿಲುವನ್ನು ತೀವ್ರವಾಗಿ ವಿರೋಧಿಸಿದ್ದು, “ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸುವ ಪ್ರಶ್ನೆಯೇ ಇಲ್ಲ” ಎಂದು ಎಲ್ಲರಿಗೂ ಸ್ಪಷ್ಟಪಡಿಸಿದೆ.

    ಟ್ರೋಫಿಯು ಪ್ರಸ್ತುತ ದುಬೈನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಚೇರಿಯಲ್ಲಿಯೇ ಇರಿಸಲಾಗಿದೆ. ನಖ್ವಿಯ ಅನುಮತಿಯಿಲ್ಲದೆ ಅದನ್ನು ಸ್ಥಳಾಂತರಿಸುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವಿದೆ. ಅವರು ಹೇಳಿರುವಂತೆ, “ಸೂಕ್ತ ಸಮಯದಲ್ಲಿ ನಾನು ಸ್ವತಃ ಟ್ರೋಫಿಯನ್ನು ಹಸ್ತಾಂತರಿಸುತ್ತೇನೆ.” ಆದರೆ ಬಿಸಿಸಿಐಗೆ ಕಾಯುವ ಮನಸ್ಥಿತಿಯಲ್ಲಿಲ್ಲ.

    ಕ್ರೀಡೆ ಮತ್ತು ರಾಜಕೀಯ ಬೇರೆ ಎಂಬ ತತ್ವವನ್ನು ಮರೆತು, ಈ ವಿವಾದವು ರಾಜಕೀಯ ಬಣ್ಣ ತಾಳಿರುವುದು ದುಃಖಕರ. ಪಾಕಿಸ್ತಾನದ ರಾಜಕೀಯ ನಾಯಕರಾದ ನಖ್ವಿ ಕ್ರಿಕೆಟ್ ವೇದಿಕೆಯನ್ನು ತಮ್ಮ ನಿಲುವು ಪ್ರದರ್ಶನದ ಸ್ಥಳವನ್ನಾಗಿ ಮಾಡಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತಂದಿದೆ.

    ಸೆಪ್ಟೆಂಬರ್‌ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಮಣಿಸಿ ಏಷ್ಯಾ ಕಪ್ ಗೆದ್ದರೂ, ಟ್ರೋಫಿ ಮಾತ್ರ ಇನ್ನೂ ಭಾರತಕ್ಕೆ ತಲುಪಿಲ್ಲ. ಇದು ಕೇವಲ ಕ್ರೀಡಾ ಪ್ರಶಸ್ತಿ ವಿಚಾರವಲ್ಲ ರಾಷ್ಟ್ರದ ಗೌರವದ ವಿಷಯವಾಗಿದೆ.

  • Greater Bengaluru: 7.5 ಲಕ್ಷ ಬಿ ಖಾತಾ ಆಸ್ತಿಗಳಿಗೆ ನವೆಂಬರ್ 2ರಿಂದ ಎ ಖಾತಾ ಸೌಲಭ್ಯ

    Greater Bengaluru: 7.5 ಲಕ್ಷ ಬಿ ಖಾತಾ ಆಸ್ತಿಗಳಿಗೆ ನವೆಂಬರ್ 2ರಿಂದ ಎ ಖಾತಾ ಸೌಲಭ್ಯ

    ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ನಗರದಲ್ಲಿ 7.5 ಲಕ್ಷಕ್ಕೂ ಹೆಚ್ಚು ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಹಾಗೂ ದಾಖಲಾತಿ ಸೌಲಭ್ಯವನ್ನು ನೀಡಲು ನವೆಂಬರ್ 2ರಿಂದ ಅಧಿಕೃತ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ನಗರದಲ್ಲಿ ಬಿ ಖಾತಾ ಆಸ್ತಿಗಳ ಪ್ರಮಾಣ ಹಾಗೂ ಅವುಗಳಿಗೆ ಸಂಬಂಧಿಸಿದ ವಿವರಣೆಗಳ ಕೊರತೆಯನ್ನು ಪೂರೈಸಲು, ಈ ಹೊಸ ಅಭಿಯಾನವು ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ.

    ಈ ಅಭಿಯಾನವು ಜಿಬಿಎ ವೆಲ್ಸ್ಟ್ ಪೋರ್ಟಲ್ ಹಾಗೂ ವಿಶೇಷ ಆ್ಯಪ್ ಮೂಲಕ ಮಾತ್ರ ಪ್ರಾರಂಭವಾಗಿದ್ದು, ಆಸ್ತಿ ಮಾಲೀಕರು ತಮ್ಮ ದಾಖಲೆಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬಹುದಾಗಿದೆ. ಪ್ರಾಧಿಕಾರವು ಅರ್ಜಿ ಸಲ್ಲಿಕೆಗೆ 100 ದಿನಗಳ ಕಾಲಾವಧಿ ನೀಡಿದ್ದು, ಈ ಅವಧಿಯಲ್ಲಿ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಸೌಲಭ್ಯವನ್ನು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.

    ಅರ್ಜಿ ಸಲ್ಲಿಕೆ ಹಾಗೂ ಶುಲ್ಕದ ನಿಯಮಗಳು:

    ಅರ್ಜಿ ಸಲ್ಲಿಕೆ ವೇಳೆ ಮಾರ್ಗಸೂಚಿ ದರದ 5% ಮೊತ್ತವನ್ನು ಅನುಮೋದನೆ ಶುಲ್ಕವಾಗಿ ಪಾವತಿಸಬೇಕು.

    2000 ಚದರ ಮೀಟರ್ ವರೆಗೆ ವಿಸ್ತೀರ್ಣವಿರುವ ಆಸ್ತಿಗಳಿಗೆ ಮಾತ್ರ ಎ ಖಾತಾ ಸೌಲಭ್ಯ ಲಭ್ಯವಿರುತ್ತದೆ.

    ಮೊದಲು ನಿವೇಶನ ಮಟ್ಟದಲ್ಲಿ ಮಾತ್ರ ಎ ಖಾತಾ ನೀಡಲಾಗಿದ್ದು, ನಂತರ ಸರ್ಕಾರದ ಪ್ರತ್ಯೇಕ ನಿಯಮಾವಳಿಯ ಪ್ರಕಾರ, ಆ ನಿವೇಶನಗಳಲ್ಲಿ ನಿರ್ಮಾಣವಾಗುವ ಕಟ್ಟಡಗಳಿಗೆ ಎ ಖಾತಾ ಮಾನ್ಯತೆ ವಿತರಿಸಲಾಗುವುದು.

    ದಾಖಲೆಗಳ ಅಗತ್ಯತೆ:

    ಮಾಲೀಕರು ಅರ್ಜಿ ಸಲ್ಲಿಸುವಾಗ ಕೆಳಕಂಡ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ,

    ಆಧಾರ್ ಕಾರ್ಡ್

    ಸ್ವತ್ತಿನ ನೋಂದಣಿ ಪತ್ರ

    ಇ-ಖಾತೆ ವಿವರ

    ವಾಸಸ್ಥಳದ ವಿಳಾಸ

    ಕಂದಾಯ ಮತ್ತು ಇತರೆ ಶುಲ್ಕ ಪಾವತಿಗಳ ಮಾಹಿತಿ

    ಪರಿಶೀಲನೆ ಪ್ರಕ್ರಿಯೆ:

    ಅರ್ಜಿ ಸಲ್ಲಿಸಿದ ಬಳಿಕ, ಜಿಬಿಎ ಸಿಬ್ಬಂದಿ ಕಾಲಮಿತಿಯೊಳಗೆ ದಾಖಲೆಗಳನ್ನು ಪರಿಶೀಲಿಸಿ ನಿಯಮಾನುಸಾರ ಎ ಖಾತಾ ನೀಡಲಾಗುತ್ತದೆ. ಅರ್ಜಿಗೆ 500 ರೂ. ನೋಟರಿ ಶುಲ್ಕ ಮಾತ್ರ ವಿಧಿಸಲಾಗಿದೆ. ಇತರೆ ಯಾವುದೇ ಶುಲ್ಕವನ್ನು ಮುನ್ನೆಚ್ಚರಿಕೆಯಾಗಿ ಪಾವತಿಸುವ ಅಗತ್ಯವಿಲ್ಲ. ಅಧಿಕಾರಿಗಳು ಪರಿಶೀಲನೆ ವೇಳೆ ಅಗತ್ಯವಾದ ಇತರ ಶುಲ್ಕಗಳನ್ನು ಲೆಕ್ಕ ಹಾಕಿ ಪಾವತಿಗೆ ಗಡುವು ನೀಡುತ್ತಾರೆ. ಸಂಪೂರ್ಣ ಹಣ ಪಾವತಿಸಿದ ಬಳಿಕ, ಎ ಖಾತಾ ದಾಖಲಾತಿಯನ್ನು ಅಧಿಕೃತವಾಗಿ ವಿತರಿಸಲಾಗುತ್ತದೆ.

    ಒಟ್ಟಾರೆಯಾಗಿ, ನಗರದ ಬಿ ಖಾತಾ ಆಸ್ತಿಗಳ ಸಮಸ್ಯೆ, ದಾಖಲೆ ಕೊರತೆ ಮತ್ತು ವೈಧಿಕತೆಗೆ ಸಂಬಂಧಿಸಿದ ಭರತೆಯನ್ನು ಕಡಿಮೆ ಮಾಡಬೇಕಾದ ಅಗತ್ಯದಿಂದ ಈ ಅಭಿಯಾನವನ್ನು ರೂಪಿಸಲಾಗಿದೆ. ಇದು ನಗರದಲ್ಲಿ ಆಸ್ತಿ ಮಾಲೀಕರಿಗೆ ಪಾರದರ್ಶಕತೆ ಮತ್ತು ಭದ್ರತೆಯನ್ನು ಒದಗಿಸುವ ಪ್ರಮುಖ ಪ್ರಯತ್ನವಾಗಿದೆ.

  • ವಿಶ್ವದಲ್ಲೇ ಮೊದಲು ಹೊಸ ಫೀಚರ್ಸ್‌ಗಳೊಂದಿಗೆ iQOO 15 ಲಾಂಚ್! 

    ವಿಶ್ವದಲ್ಲೇ ಮೊದಲು ಹೊಸ ಫೀಚರ್ಸ್‌ಗಳೊಂದಿಗೆ iQOO 15 ಲಾಂಚ್! 

    ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ತೀವ್ರ ಸ್ಪರ್ಧೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಪ್ರತಿ ಕಂಪನಿಯೂ ಹೊಸ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ತಮ್ಮ ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ. ಇದೇ ಪೈಕಿ, ಈಗ iQOO ಕಂಪನಿಯು ತನ್ನ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ iQOO 15 ಅನ್ನು ಲಾಂಚ್ ಮಾಡಿದೆ. ಈ ಫೋನ್‌ನಲ್ಲಿ ವಿಶ್ವದ ಮೊದಲ ಬಗೆಯ ಕೆಲವು ವಿಶಿಷ್ಟ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ, ಇದರಿಂದ ಸ್ಮಾರ್ಟ್‌ಫೋನ್ ಪ್ರಿಯರ ನಡುವೆ ಈಗಾಗಲೇ ಚರ್ಚೆ ಹುಟ್ಟಿದೆ.

    ಈ ಹೊಸ ಮಾದರಿ ಕೇವಲ ವೇಗ ಮತ್ತು ಕಾರ್ಯಕ್ಷಮತೆಯ ದೃಷ್ಟಿಯಿಂದಷ್ಟೇ ಅಲ್ಲದೆ, ವಿನ್ಯಾಸ, ಡಿಸ್ಪ್ಲೇ, ಕ್ಯಾಮೆರಾ ಮತ್ತು ಬ್ಯಾಟರಿ ವಿಭಾಗಗಳಲ್ಲಿಯೂ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. iQOO 15 ತನ್ನ ಹಿಂದಿನ ಮಾದರಿ iQOO 13 ಹೋಲಿಸಿದರೆ ಹಲವು ಪ್ರಮುಖ ಅಪ್‌ಗ್ರೇಡ್‌ಗಳನ್ನು ಪಡೆದಿದೆ.

    iQOO 15 ವಿಶೇಷಣಗಳು ಮತ್ತು ವೈಶಿಷ್ಟ್ಯಗಳು:

    ಡಿಸ್ಪ್ಲೇ:

    iQOO 15 ನಲ್ಲಿ ವಿಶ್ವದ ಮೊದಲ 6.85 ಇಂಚಿನ 2K+ ಕರ್ವ್ ಸ್ಯಾಮ್‌ಸಂಗ್ M14 8T LTPO AMOLED ಡಿಸ್ಪ್ಲೇ ಬಳಸಲಾಗಿದೆ. ಇದಕ್ಕೆ HDR10+ ಪ್ರಮಾಣೀಕರಣ ಮತ್ತು 144Hz ರಿಫ್ರೆಶ್ ರೇಟ್ ಇದೆ. ಈ ಡಿಸ್ಪ್ಲೇ ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಹೆಚ್ಚು ಹೊಳಪು, ಸ್ಪಷ್ಟತೆ ಮತ್ತು ಪರಿಸರ ಸ್ನೇಹಪರ ಅನುಭವ ನೀಡುತ್ತದೆ. ಗೇಮಿಂಗ್ ಹಾಗೂ ವೀಡಿಯೊ ವೀಕ್ಷಣೆಗೆ ಇದು ಅತ್ಯುತ್ತಮ ದೃಶ್ಯಾನುಭವ ನೀಡುತ್ತದೆ.

    ಪ್ರೊಸೆಸರ್ ಮತ್ತು ಪ್ರದರ್ಶನ:

    ಈ ಫೋನ್‌ನ್ನು Qualcomm Snapdragon 8 Elite Gen 5 ಪ್ರೊಸೆಸರ್ ಚಾಲಿತಗೊಳಿಸುತ್ತದೆ. ಇದರೊಂದಿಗೆ Adreno 840 GPU ಸಹ ಲಭ್ಯವಿದ್ದು, ಉನ್ನತ ಮಟ್ಟದ ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ಗೆ ಪವರ್‌ಫುಲ್ ಕಾರ್ಯಕ್ಷಮತೆ ನೀಡುತ್ತದೆ.

    ಮೆಮೊರಿ ಮತ್ತು ಸ್ಟೋರೇಜ್:

    iQOO 15 ನಲ್ಲಿ 12GB ಅಥವಾ 16GB LPDDR5X RAM ಮತ್ತು 256GB, 512GB ಅಥವಾ 1TB UFS 4.1 ಇಂಟರ್‌ನಲ್ ಸ್ಟೋರೇಜ್ ಆಯ್ಕೆಗಳು ಲಭ್ಯ. ಇದರ ವೇಗ ಮತ್ತು ಸ್ಟೋರೇಜ್ ಸಾಮರ್ಥ್ಯ ಇಬ್ಬರೂ ಅತ್ಯುನ್ನತ ಮಟ್ಟದಲ್ಲಿದೆ.

    ಬ್ಯಾಟರಿ ಮತ್ತು ಚಾರ್ಜಿಂಗ್:

    ಈ ಫೋನ್ 7,000mAh ಬ್ಯಾಟರಿಯನ್ನು ಹೊಂದಿದ್ದು, 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಹಾಗೂ 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ. ಅಂದರೆ ಕೆಲವೇ ನಿಮಿಷಗಳಲ್ಲಿ ಶೇಕಡಾ 50 ಚಾರ್ಜ್ ಆಗುವ ಸಾಮರ್ಥ್ಯವಿದೆ.

    ಕ್ಯಾಮೆರಾ ವಿಭಾಗ:

    iQOO 15 ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಇದೆ.

    50MP ಪ್ರಾಥಮಿಕ ಕ್ಯಾಮೆರಾ (OIS ಸಹಿತ)

    50MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್

    50MP 3x ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ (OIS ಸಹಿತ)

    ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ 32MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ.

    ನೀರಿನ ಮತ್ತು ಧೂಳಿನ ನಿರೋಧಕತೆ:

    ಫೋನ್‌ವು IP68/IP69 ರೇಟಿಂಗ್ ಪಡೆದಿದೆ. ಅಂದರೆ ಇದು ನೀರು, ಧೂಳು ಹಾಗೂ ಬಿಸಿನೀರು ಅಥವಾ ಶೀತದ ಜೆಟ್‌ಗಳಿಂದ ರಕ್ಷಿತವಾಗಿದೆ.

    ಸಾಫ್ಟ್‌ವೇರ್:

    ಹೊಸ ಫೋನ್ OriginOS 6 ಮೇಲೆ ಕಾರ್ಯನಿರ್ವಹಿಸುತ್ತದೆ. ಇದು ಹಿಂದಿನ Funtouch OSಗೆ ಬದಲಿ. ಸಾಫ್ಟ್‌ವೇರ್ ನವೀಕರಣಗಳು ವೇಗವಾಗಿ ದೊರಕುವ ಸಾಧ್ಯತೆ ಇದೆ.

    ಹೊಸ ತಂತ್ರಜ್ಞಾನ Eye Protection 2.0:

    iQOO 15 ವಿಶ್ವದ ಮೊದಲ Eye Protection 2.0 ತಂತ್ರಜ್ಞಾನವನ್ನು ಹೊಂದಿದೆ, ಇದು ಧ್ರುವೀಕರಿಸದ ನೈಸರ್ಗಿಕ ಬೆಳಕಿನ ಪ್ರದರ್ಶನ ನೀಡುತ್ತದೆ ಮತ್ತು ಗೇಮಿಂಗ್ ವೇಳೆ ಕಣ್ಣಿನ ಒತ್ತಡವನ್ನು ತಗ್ಗಿಸುತ್ತದೆ.

    ಬಣ್ಣಗಳ ಆಯ್ಕೆ:

    ಫೋನ್‌ವು Lingyun, Legendary Edition, Track Edition ಹಾಗೂ Wilderness Edition ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯ.

    iQOO 15 ಬೆಲೆ (ಚೀನಾ ಮಾರುಕಟ್ಟೆ ಬೆಲೆ ಆಧಾರವಾಗಿ):

    iQOO 15 ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಚೀನಾ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಲಾಂಚ್ ಆಗಿದೆ. ಈ ಫೋನ್ ವಿವಿಧ RAM ಮತ್ತು ಸ್ಟೋರೇಜ್ ಆಯ್ಕೆಗಳೊಂದಿಗೆ ಲಭ್ಯವಿದ್ದು, ಬೆಲೆ ಅದರ ಮಾದರಿಯ ಪ್ರಕಾರ ಬದಲಾಗುತ್ತದೆ. 12GB RAM + 256GB ಸ್ಟೋರೇಜ್ ಮಾದರಿಯ ಬೆಲೆ 4,199 ಯುವಾನ್ (ಸುಮಾರು ರೂ.51,900) ಆಗಿದೆ. 16GB RAM + 512GB ಮಾದರಿ 4,499 ಯುವಾನ್ (ರೂ.55,500) ಕ್ಕೆ, 12GB RAM + 512GB ಆವೃತ್ತಿ 4,699 ಯುವಾನ್ (ರೂ.58,000) ಕ್ಕೆ ಲಭ್ಯ. ಅದೇ ರೀತಿ 16GB RAM + 512GB ಮಾದರಿ 4,999 ಯುವಾನ್ (ರೂ.61,700) ಕ್ಕೆ ದೊರೆಯುತ್ತದೆ. ಅತೀ ಪ್ರೀಮಿಯಂ 16GB RAM + 1TB ಸ್ಟೋರೇಜ್ ಆವೃತ್ತಿಯ ಬೆಲೆ 4,399 ಯುವಾನ್ (ಸುಮಾರು ರೂ.54,300) ಆಗಿದೆ. ವಿವಿಧ ಕಾಂಫಿಗರೇಷನ್‌ಗಳೊಂದಿಗೆ, iQOO 15 ವಿಭಿನ್ನ ಬಳಕೆದಾರರ ಅಗತ್ಯ ಹಾಗೂ ಬಜೆಟ್‌ಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.

    ಭಾರತ ಬಿಡುಗಡೆ ದಿನಾಂಕ:

    ಕಂಪನಿಯು ಅಧಿಕೃತವಾಗಿ ಘೋಷಿಸಿರುವಂತೆ, iQOO 15 ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿಯೂ ಇದರ ಬೆಲೆ ಅಂದಾಜು ರೂ.50,000 ರಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ.

    iQOO 15 ವಿಶ್ವದ ಮೊದಲ ಹಲವು ಕ್ರಾಂತಿಕಾರಿ ವೈಶಿಷ್ಟ್ಯಗಳೊಂದಿಗೆ ಬಂದಿರುವ ಫೋನ್. ಡಿಸ್ಪ್ಲೇ ಗುಣಮಟ್ಟ, ವೇಗದ ಚಾರ್ಜಿಂಗ್, ಶಕ್ತಿಯುತ ಪ್ರೊಸೆಸರ್ ಮತ್ತು ಅತ್ಯಾಧುನಿಕ Eye Protection ತಂತ್ರಜ್ಞಾನದಿಂದ ಇದು 2025ರ ಅತ್ಯಂತ ಗಮನ ಸೆಳೆಯುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಲಿದೆ.

  • ಅಡಿಲೇಡ್‌ನಲ್ಲಿ ಇತಿಹಾಸ ಬರೆಯಲು ಸಜ್ಜಾಗಿರುವ ಕಿಂಗ್ ಕೊಹ್ಲಿ!

    ಅಡಿಲೇಡ್‌ನಲ್ಲಿ ಇತಿಹಾಸ ಬರೆಯಲು ಸಜ್ಜಾಗಿರುವ ಕಿಂಗ್ ಕೊಹ್ಲಿ!

    ಕ್ರಿಕೆಟ್ ಪ್ರಪಂಚದ ಗಮನ ಈಗ ಅಡಿಲೇಡ್‌ನತ್ತ ನೆಟ್ಟಿದೆ.  ಭಾರತೀಯ ಅಭಿಮಾನಿಗಳಿಗೆ ಹೆಮ್ಮೆಯ ಕ್ಷಣ ತರುವಂತ ವಿರಾಟ್ ಕೊಹ್ಲಿ ಮತ್ತೊಂದು ಚರಿತ್ರೆ ಬರೆಯಲು ಸಜ್ಜಾಗಿದ್ದಾರೆ. ಅಕ್ಟೋಬರ್ 23ರಂದು ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯದಲ್ಲಿ ಕಿಂಗ್ ಕೊಹ್ಲಿ ತಮ್ಮ ಬ್ಯಾಟ್‌ನಿಂದ ದಾಖಲೆಗಳ ಮಳೆ ಸುರಿಸುವ ಸಾಧ್ಯತೆ ಇದೆ.

    ಅಡಿಲೇಡ್ ಮೈದಾನ ಕೊಹ್ಲಿಗೆ ಅತಿ ಪ್ರಿಯವಾದ ಮೈದಾನಗಳಲ್ಲಿ ಒಂದು. ಇಲ್ಲಿಯ ಪಿಚ್, ವಾತಾವರಣ ಮತ್ತು ಅಭಿಮಾನಿಗಳ ಉತ್ಸಾಹ ಈ ಎಲ್ಲವೂ ಅವರ ಆಟಕ್ಕೆ ಜೀವ ತುಂಬುತ್ತವೆ. ಈ ಮೈದಾನದಲ್ಲಿ ಅವರು ಈಗಾಗಲೇ 5 ಶತಕಗಳನ್ನು ಬಾರಿಸಿದ್ದಾರೆ. ಅದರಲ್ಲಿ 2 ಏಕದಿನಗಳು ಮತ್ತು 3 ಟೆಸ್ಟ್‌ಗಳು ಸೇರಿವೆ. ಈ ಮೂಲಕ ಅವರು ಇಂಗ್ಲೆಂಡ್‌ನ ದಾಂಡಿಗ ಜ್ಯಾಕ್ ಹಾಬ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಹಾಬ್ಸ್ ಅವರು ಮೆಲ್ಬೋರ್ನ್ ಮೈದಾನದಲ್ಲಿ 5 ಶತಕಗಳನ್ನು ಬಾರಿಸಿದ್ದರು. ಈಗ ವಿರಾಟ್ ಕೊಹ್ಲಿ ಅಡಿಲೇಡ್‌ನಲ್ಲಿ ಮತ್ತೊಂದು ಶತಕ ಬಾರಿಸಿದರೆ, ಆಸ್ಟ್ರೇಲಿಯಾದ ಒಂದೇ ಮೈದಾನದಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ವಿದೇಶಿ ಆಟಗಾರ ಎಂಬ ಹೊಸ ದಾಖಲೆಯು ಅವರ ಹೆಸರಿಗಿರಲಿದೆ.

    ಇಷ್ಟೇ ಅಲ್ಲದೆ ಕೊಹ್ಲಿ ಇನ್ನೂ ಕೇವಲ 25 ರನ್ ಗಳಿಸಿದರೆ, ಅಡಿಲೇಡ್ ಓವಲ್ ಮೈದಾನದಲ್ಲಿ 1000 ರನ್ ಪೂರೈಸಿದ ಮೊದಲ ವಿದೇಶಿ ಬ್ಯಾಟರ್ ಎಂಬ ಗೌರವವೂ ಅವರಿಗೆ ದೊರೆಯಲಿದೆ. ಈಗಾಗಲೇ ಅವರು ಈ ಮೈದಾನದಲ್ಲಿ 17 ಇನಿಂಗ್ಸ್‌ಗಳಲ್ಲಿ 975 ರನ್‌ಗಳನ್ನು ಕಲೆಹಾಕಿದ್ದಾರೆ. ಅಂದರೆ ನಾಳೆಯ ಪಂದ್ಯದಲ್ಲಿ ಕೇವಲ ಒಂದು ಸಣ್ಣ ಇನಿಂಗ್ಸ್ ಅವರ ಹೆಸರನ್ನು ಮತ್ತೊಂದು ಮೈಲುಗಲ್ಲಿನತ್ತ ಕರೆದೊಯ್ಯಲಿದೆ.

    ಅಡಿಲೇಡ್ ಮೈದಾನದಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಎಂದರೆ ಕಣ್ಣಿಗೆ ಹಬ್ಬ. ಪಿಚ್‌ನಲ್ಲಿ ಬೌನ್ಸ್ ಮತ್ತು ಸ್ವಿಂಗ್ ಇದ್ದರೂ ಅವರು ಅದನ್ನು ತಾಳ್ಮೆಯಿಂದ ಎದುರಿಸಿ, ಅಚ್ಚುಕಟ್ಟಾದ ಶಾಟ್‌ಗಳ ಮೂಲಕ ರನ್ ಕಲೆಹಾಕುತ್ತಾರೆ. ಅವರ ಸ್ಮರಣೀಯ ಇನಿಂಗ್ಸ್‌ಗಳು, ಗೆಲುವಿಗೆ ದಾರಿ ಮಾಡಿದ ಶತಕಗಳು  ಇವೆಲ್ಲವೂ ಈ ಮೈದಾನದ ನೆನಪನ್ನು ಅಭಿಮಾನಿಗಳ ಮನದಲ್ಲಿ ಶಾಶ್ವತಗೊಳಿಸಿವೆ.

    ಕ್ರಿಕೆಟ್ ಅಭಿಮಾನಿಗಳಿಗೆ ಕೊಹ್ಲಿಯ ಹೆಸರು ಎಂದರೆ ನಂಬಿಕೆ, ಹೋರಾಟ, ಹಾಗೂ ಪ್ರೇರಣೆ. ಅವರು ಕೇವಲ ಬ್ಯಾಟ್ಸ್‌ಮನ್ ಅಲ್ಲ, ಭಾರತದ ಕ್ರಿಕೆಟ್ ಗೌರವದ ಪ್ರತೀಕ. ಈ ಸರಣಿಯಲ್ಲೂ ಅವರು ಅದೇ ಶಕ್ತಿ ಮತ್ತು ಆತ್ಮವಿಶ್ವಾಸದೊಂದಿಗೆ ಮೈದಾನಕ್ಕಿಳಿಯುತ್ತಿದ್ದಾರೆ.

    ಅಭಿಮಾನಿಗಳೆಲ್ಲರೂ ಈಗ ಕಾತರದಿಂದ ಕಾಯುತ್ತಿರುವುದು ಒಂದೇ ವಿಷಯಕ್ಕೆ ಅಡಿಲೇಡ್ ಮೈದಾನದಲ್ಲಿ ಮತ್ತೆ ಒಮ್ಮೆ ಕಿಂಗ್ ಕೊಹ್ಲಿಯ ಬ್ಯಾಟ್ ಮಿಂಚಲಿ, ಮತ್ತೊಂದು ಶತಕ ಭಾರಿಸಿ ಇತಿಹಾಸ ಬರೆಯಲಿ!

  • ಬೆಂಗಳೂರಿನ ಪಿಜಿಯ ತಿಗಣೆ ಔಷಧಿ ವಾಸನೆಗೆ ವಿದ್ಯಾರ್ಥಿ ಬಲಿ

    ಬೆಂಗಳೂರಿನ ಪಿಜಿಯ ತಿಗಣೆ ಔಷಧಿ ವಾಸನೆಗೆ ವಿದ್ಯಾರ್ಥಿ ಬಲಿ

    ಬೆಂಗಳೂರು: ನಗರದ ಹೆಚ್‌ಎಎಲ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ದುರ್ಘಟನೆ ಒಂದು ವಿದ್ಯಾರ್ಥಿ ಕುಟುಂಬವನ್ನು ಕಂಗಾಲಾಗುವಂತೆ ಮಾಡಿದೆ. ತಿರುಪತಿ ಮೂಲದ ಬಿಟೆಕ್ ವಿದ್ಯಾರ್ಥಿ ಪವನ್, ತಾನು ವಾಸವಾಗಿದ್ದ ಪಿಜಿಯಲ್ಲೇ ಸಿಂಪಡಿಸಿದ್ದ ತಿಗಣೆ (ಪೆಸ್ಟಿಸೈಡ್) ಔಷಧಿಯ ವಾಸನೆಗೆ ಬಲಿಯಾದ ಘಟನೆ ನಗರದಲ್ಲಿ ದೊಡ್ಡ ಆತಂಕ ಮೂಡಿಸಿದೆ.

    ಪವನ್ ವಾಸವಾಗಿದ್ದ ಅಶ್ವಥ್ ನಗರದಲ್ಲಿನ ಬಿಎಸ್‌ಆರ್ ಪಿಜಿಯಲ್ಲಿ ಕೆಲವು ದಿನಗಳಿಂದ ತಿಗಣೆಗಳ ತೊಂದರೆ ಇತ್ತು ಎಂದು ತಿಳಿದುಬಂದಿದೆ. ಇದಕ್ಕಾಗಿ ಪಿಜಿ ನಿರ್ವಾಹಕರು ಔಷಧ ಸಿಂಪಡಿಸಿದ್ದರು. ಆದರೆ ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ. ಪವನ್ ಔಷಧ ಸಿಂಪಡಿಸಿದ ಬಳಿಕ ಕೊಠಡಿಗೆ ಹೋದಾಗ, ವಿಷಕಾರಿ ವಾಸನೆಯಿಂದ ಉಸಿರಾಟ ತೊಂದರೆ ಅನುಭವಿಸಿದ್ದಾನೆಂಬ ಶಂಕೆ ವ್ಯಕ್ತವಾಗಿದೆ.

    ಅಸ್ವಸ್ಥನಾದ ಪವನ್‌ನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಆಗಲೇ ಪವನ್ ಮೃತಪಟ್ಟಿದ್ದಾನೆಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಪವನ್ ತಂದೆ ದೇವರಾಜಲು ಮತ್ತು ತಾಯಿ ರಮ್ಯಾ ಘಟನೆ ಕುರಿತು ಮಾತನಾಡುತ್ತಾ, “ಬೆಳಗ್ಗೆ 7 ಗಂಟೆಗೆ ಪವನ್ ಕರೆ ಮಾಡಿದ್ದ. ಉಸಿರಾಟಕ್ಕೆ ತೊಂದರೆ ಆಗುತ್ತಿದೆ ಅಂದ. ಅದಾದ ಬಳಿಕ ಸಂಪರ್ಕಕ್ಕೆ ಸಿಗಲಿಲ್ಲ. ನಂತರ ಪಿಜಿ ನಿರ್ವಾಹಕರಿಂದ ಮಗ ಮೃತಪಟ್ಟಿದ್ದಾನೆಂಬ ದುಃಖಕರ ಸುದ್ದಿ ಬಂದಿತು,” ಎಂದು ಕಣ್ಣೀರಿನೊಂದಿಗೆ ಹೇಳಿದರು.

    ಪೋಷಕರು ಪಿಜಿ ನಿರ್ವಾಹಕರ ನಿರ್ಲಕ್ಷ್ಯವೇ ಮಗನ ಸಾವಿಗೆ ಕಾರಣವೆಂದು ಆರೋಪಿಸಿ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ. “ಔಷಧ ಸಿಂಪಡಣೆ ಮಾಡುವ ಮುನ್ನ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಬೇಕಿತ್ತು. ಆದರೆ ಅಂಥ ಮಾಹಿತಿ ನೀಡದೆ ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ,” ಎಂದು ಆರೋಪಿಸಿದ್ದಾರೆ.

    ಈ ಪ್ರಕರಣದ ಹಿನ್ನೆಲೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ (Unnatural Death Report) ದಾಖಲಾಗಿದೆ. ಪೊಲೀಸರು ಪಿಜಿ ನಿರ್ವಾಹಕರು ಮತ್ತು ಔಷಧ ಸಿಂಪಡಣೆ ನಡೆಸಿದವರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

    ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪಿಜಿಗಳ ಸಂಖ್ಯೆ ಮತ್ತು ಸುರಕ್ಷತಾ ಕ್ರಮಗಳ ಕೊರತೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿವೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ನಡೆಯಬಾರದು ಎಂಬ ಬೇಡಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಮೊಳಗುತ್ತಿದೆ.

  • ಕಲ್ಯಾಣ ಕರ್ನಾಟಕ ಸಂಪಾದಕರ ಸಂಘದಿಂದ ನೂತನ ಆಯುಕ್ತರಿಗೆ ಸನ್ಮಾನ

    ಕಲ್ಯಾಣ ಕರ್ನಾಟಕ ಸಂಪಾದಕರ ಸಂಘದಿಂದ ನೂತನ ಆಯುಕ್ತರಿಗೆ ಸನ್ಮಾನ

    ಕಲಬುರಗಿ: ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ನೂತನ ಆಯುಕ್ತರಾಗಿ ಬಿ. ವೆಂಕಟಸಿಂಗ್ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಗರದ ರೈಲು ನಿಲ್ದಾಣ ಹತ್ತಿರದ ಮಹಲ್-ಎ-ಶಾಹಿ ಅತಿಥಿಗೃಹ ಆವರಣದಲ್ಲಿರುವ ಆಯೋಗದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

    ಈ ವೇಳೆ ಕಲ್ಯಾಣ ಕರ್ನಾಟಕ ಸಂಪಾದಕರ ಸಂಘದ ವತಿಯಿಂದ ಆಯುಕ್ತರನ್ನು ಸನ್ಮಾನಿಸಿ ಶುಭಕೋರಲಾಯಿತು.

    ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗುರುರಾಜ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಹನುಮಂತ ಬೋಧಾನ್, ಸಹ ಕಾರ್ಯದರ್ಶಿ ರುಕ್ಮಿಶ್ ಭಂಡಾರಿ, ಸದಸ್ಯ ವಿಟ್ಟಲ್ ಚಿಕಣಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ ಹಾಗೂ ವಾರ್ತಾ ಇಲಾಖೆಯ ಗ್ರಂಥಪಾಲಕ ರವಿ ಮಿರಾಸ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  • TET 2025 ಪರೀಕ್ಷೆಗೆ ಅಧಿಕೃತ ಅರ್ಜಿ ಆಹ್ವಾನ

    TET 2025 ಪರೀಕ್ಷೆಗೆ ಅಧಿಕೃತ ಅರ್ಜಿ ಆಹ್ವಾನ

    ರಾಜ್ಯದ ಸಾವಿರಾರು ಶಿಕ್ಷಕ ಹುದ್ದೆಗಳಿಗೆ ಬಾಗಿಲು ತೆಗೆಯುವ ಮಹತ್ವದ ಪರೀಕ್ಷೆಯಾದ ಶಿಕ್ಷಕರ ಅರ್ಹತಾ ಪರೀಕ್ಷೆ (TET) – 2025 ಗಾಗಿ ಕರ್ನಾಟಕ ಸರ್ಕಾರ ಅಧಿಕೃತವಾಗಿ ಅರ್ಜಿ ಆಹ್ವಾನಿಸಿದೆ. ಈ ಮೂಲಕ ಶಿಕ್ಷಕ ವೃತ್ತಿಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಮತ್ತೆ ಅವಕಾಶ ದೊರಕಿದೆ.

    ಪರೀಕ್ಷೆಯ ದಿನಾಂಕ ಹಾಗೂ ಅಧಿಕೃತ ಪ್ರಕಟಣೆ:

    ಶಿಕ್ಷಕರ ಅರ್ಹತಾ ಪರೀಕ್ಷೆ ಡಿಸೆಂಬರ್ 7 ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ. ಪರೀಕ್ಷೆ ಕುರಿತಂತೆ ಶಿಕ್ಷಣ ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು.

    TET ಪರೀಕ್ಷೆಯ ಹಿನ್ನೆಲೆ ಮತ್ತು ಉದ್ದೇಶ:

    Right to Education” (RTE) ಕಾಯ್ದೆಯ ಸೆಕ್ಷನ್ 23 ಉಪವಿಭಾಗ (1) ರ ಪ್ರಕಾರ, ಶಿಕ್ಷಕರಾಗಿ ನೇಮಕಾತಿಗೆ ಅಗತ್ಯವಾದ ಕನಿಷ್ಠ ಅರ್ಹತೆಯನ್ನು ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಪರಿಷತ್‌ (NCTE) ನಿಗದಿಪಡಿಸಿದೆ. ಈ ಕಾಯ್ದೆಯಡಿ, 2010ರ ಆಗಸ್ಟ್ 23, 2011ರ ಜುಲೈ 29 ಮತ್ತು 2018ರ ಜೂನ್ 28 ರಂದು ಹೊರಡಿಸಲಾದ ಅಧಿಸೂಚನೆಗಳ ಪ್ರಕಾರ, ಪ್ರಾಥಮಿಕ (1 ರಿಂದ 5ನೇ ತರಗತಿ) ಹಾಗೂ ಪ್ರೌಢ ಪ್ರಾಥಮಿಕ (6ರಿಂದ 8ನೇ ತರಗತಿ) ಮಟ್ಟದ ಶಿಕ್ಷಕರಾಗಿ ನೇಮಕಾತಿ ಪಡೆಯಲು TET ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.

    ಶಿಕ್ಷಕರ ಅರ್ಹತಾ ಪರೀಕ್ಷೆಯ ಮಹತ್ವ:

    ಆರ್‌.ಟಿ.ಇ ಕಾಯ್ದೆಯ ಸೆಕ್ಷನ್ 2ರ ಉಪವಿಭಾಗ (ಎನ್) ಪ್ರಕಾರ, ಯಾವುದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅಭ್ಯರ್ಥಿಯು ಸರ್ಕಾರದಿಂದ ನಡೆಸಲಾಗುವ TET ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಈ ಪರೀಕ್ಷೆಯ ಉದ್ದೇಶವು ಬೋಧನಾ ವೃತ್ತಿಗೆ ಅಗತ್ಯವಾದ ಶೈಕ್ಷಣಿಕ ಕೌಶಲ್ಯ, ಪಾಠಮಾಲೆ ತಯಾರಿ, ವಿದ್ಯಾರ್ಥಿ ಮನೋವಿಜ್ಞಾನ ಹಾಗೂ ಪಠ್ಯಕ್ರಮದ ಅರಿವು ಹೊಂದಿರುವ ಅಭ್ಯರ್ಥಿಗಳನ್ನು ಗುರುತಿಸುವುದು.

    ಅರ್ಹತಾ ಮಾನದಂಡಗಳು:

    ಪೇಪರ್-I (1 ರಿಂದ 5ನೇ ತರಗತಿಗಳಿಗೆ): ಪ್ರಾಥಮಿಕ ಶಿಕ್ಷಕರಾಗಿ ಬಯಸುವ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಪದವಿ ಅಥವಾ ಡಿಪ್ಲೋಮಾ ಹೊಂದಿರಬೇಕು.

    ಪೇಪರ್-II (6 ರಿಂದ 8ನೇ ತರಗತಿಗಳಿಗೆ): ಹಿರಿಯ ಪ್ರಾಥಮಿಕ ಶಿಕ್ಷಕರಾಗಿ ಬಯಸುವ ಅಭ್ಯರ್ಥಿಗಳು ಸಂಬಂಧಿತ ವಿಷಯದಲ್ಲಿ ಪದವಿ ಮತ್ತು B.Ed. ಪದವಿ ಹೊಂದಿರಬೇಕು.

    ಮುಖ್ಯ ಅಂಶಗಳು:

    ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಕಡ್ಡಾಯ.

    ಪರೀಕ್ಷಾ ದಿನಾಂಕ: ಡಿಸೆಂಬರ್ 7, 2025

    ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಹಾಗೂ ಹಾಲ್‌ಟಿಕೆಟ್‌ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

    ಅಧಿಕೃತ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಅಧಿಕೃತ ವೆಬ್‌ಸೈಟ್‌ನ್ನು ಸಂಪರ್ಕಿಸಬೇಕು.

    ಶಿಕ್ಷಕರಾಗಿ ಸೇವೆ ಸಲ್ಲಿಸಲು ಕನಸು ಕಾಣುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶವಾಗಿದೆ. TET ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮಾತ್ರವಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ನಿರ್ಮಿಸಲು ಇದು ಪ್ರಮುಖ ಹಂತ. ಆದ್ದರಿಂದ, ಅಭ್ಯರ್ಥಿಗಳು ಸಮಯ ವ್ಯರ್ಥ ಮಾಡದೇ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ, ತಯಾರಿ ಆರಂಭಿಸುವುದು ಸೂಕ್ತ.