Author: Satyakam NewsDesk

  • ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮವಹಿಸಿ: ಬಸವರಾಜ್ ಶರಬೈ

    ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮವಹಿಸಿ: ಬಸವರಾಜ್ ಶರಬೈ

    ಸತ್ಯಕಾಮ ವಾರ್ತೆ ಯಾದಗಿರಿ:

    ಮಳೆಗಾಲ ಪ್ರಾರಂಭವಾಗಿದ್ದು, ಸಾರ್ವಜನಿಕರ ಆರೋಗ್ಯದ ಹಿತದಷ್ಟಿಯಿಂದ ಸಾಂಕ್ರಾಮಿಕ ರೋಗಗಳನ್ನು ಎಲ್ಲ ರೀತಿಯಿಂದಲೂ ನಿಯಂತ್ರಿಸುವ ಅವಶ್ಯಕತೆ ಇದ್ದು, ತಾಲೂಕಿನ ಎಲ್ಲ ಪಂಚಾಯಿತಿ ಅಭಿವದ್ಧಿ ಅಧಿಕಾರಿಗಳು ಮುಂಜಾಗ್ರತೆ ಕ್ರಮ ವಹಿಸುವಂತೆ ಯಾದಗಿರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಶರಬೈ ಸೂಚಿಸಿದರು.

    ಸೋಮವಾರ ತಾಲೂಕ ಪಂಚಾಯತ ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ವಚ್ಛತೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು, ಯಾದಗಿರಿ ತಾಲೂಕಿನ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅವಶ್ಯಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಬೇಕು. ತೆರೆದ ಬಾವಿಗೆ ಪ್ರತಿದಿನ ಕ್ಲೋರಿನ್, ಬ್ಲಿಚಿಂಗ್ ಪೌಡರ್ ಹಾಕಬೇಕು. ಕುಡಿಯುವ ನೀರಿನ ಮೂಲಗಳ ಸುತ್ತಮುತ್ತಲು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹಾಗೂ ಸರಬರಾಜು ಮಾಡುವ ಕೊಳವೆಗಳಲ್ಲಿ ಸೋರಿಕೆಗಳಿದ್ದಲ್ಲಿ ದುರಸ್ಥಿ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದರು.

    ಚರಂಡಿಗಳನ್ನು ಸ್ವಚ್ಛ ಮಾಡುವುದರ ಜೊತೆಗೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮೊಹರಂ ಹಬ್ಬ ಇರುವುದರಿಂದ ಪಟ್ಟಣ ಪ್ರದೇಶಗಳಿಂದ ಜನರು ಬಂದಿರುತ್ತಾರೆ. ಮುಂಜಾಗ್ರತಾ ಕ್ರಮವಾಗಿ ಹೋಟೆಲ್‌ಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಸೂಚಿಸಬೇಕು, ಹಾಗೂ ಸಾರ್ವಜನಿಕರಿಗೆ ಜನಜಾಗೃತಿ ಮೂಡಿಸಬೇಕು ಎಂದರು.

    ಈ ವೇಳೆ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಬಸವರಾಜ ಹೈರಡ್ಡಿ ಸಭೆಯಲ್ಲಿ ಹಾಜರಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ಮಾಹಿತಿ ನೀಡಿದರು. ಮತ್ತು ಜೆ.ಜೆ.ಎಮ್ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.

    ಪೈಪ್ ಲೀಕೆಜ್ ಆದಲ್ಲಿ ಮತ್ತು ಕಾಮಗಾರಿ ಅಪೂರ್ಣ ಇದ್ದಲ್ಲಿ ತಕ್ಷಣವೇ ಪೂರ್ಣಗೊಳಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚಿಸಿದ್ದರು.

    ತಾಲೂಕು ವೈದ್ಯಧಿಕಾರಿಗಳಾದ ಡಾ.ಹಣವಂತ ರೆಡ್ಡಿ ಸಭೆಯಲ್ಲಿ ಮಾತನಾಡಿ, ಗ್ರಾಮದಲ್ಲಿ ಸ್ವಚ್ಚತೆ ಕಾಪಾಡುವುದರೊಂದಿಗೆ ಬ್ಲಿಚಿಂಗ್ ಪೌಡರ್ ಸಿಂಪಡಿಸಲು ಸೂಚಿಸಲಾಗಿದೆ, ಈಗಾಗಲೇ ಗ್ರಾಮದಲ್ಲಿ ನಮ್ಮ ಆಶಾ ಕಾರ್ಯಕರ್ತೆಯರು ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆಂದು ತಿಳಿಸಿದರು.

    ಈ ವೇಳೆ ಯಾದಗಿರಿ ಸಹಾಯಕ ನಿರ್ದೇಶಕರು, ತಾಲೂಕಿನ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಕನಕ ನೌಕರರ ಸಂಘದ ಸಂಘಟನೆ ಬಲಗೊಳಿಸಿ:ಬಸವರಾಜ್ ಪಾಟೀಲ್ ಕೊಂಕಲ್

    ಕನಕ ನೌಕರರ ಸಂಘದ ಸಂಘಟನೆ ಬಲಗೊಳಿಸಿ:ಬಸವರಾಜ್ ಪಾಟೀಲ್ ಕೊಂಕಲ್

    ಸತ್ಯಕಾಮ ವಾರ್ತೆ ಯಾದಗಿರಿ:

    ಕನಕ ನೌಕರರ ಸಂಘದ ಸಂಘಟನೆಯನ್ನು ಬಲಗೊಳಿಸಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಕಲಬುರ್ಗಿ ವಿಭಾಗೀಯ ಕನಕ ನೌಕರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಕೂಂಕಲ್ ಹೇಳಿದರು.

    ಭಾನುವಾರ ಯಾದಗಿರಿ ಪಟ್ಟಣದ ಕುರುಬ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಯಾದಗಿರಿ ಜಿಲ್ಲಾ ಕನಕ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಮಾತನಾಡಿದ ಅವರು ನಮ್ಮ ಸಮಾಜದ ನೌಕರ ಮೇಲಿನ ಕಿರುಕುಳ ಕಂಡುಬಂದಲ್ಲಿ ಒಗ್ಗಟ್ಟಿನಿಂದ ಎಲ್ಲರೂ ಹೋರಾಟ ಮಾಡುವಂತೆ ಸಲಹೆ ನೀಡಿದರು.

    ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಮಲ್ಲಣ್ಣ ಐಕೂರ ಮಾತನಾಡಿ ಕನಕ ನೌಕರರ ಸಂಘದ ಬೆಂಬಲಕ್ಕೆ ಜಿಲ್ಲಾ ಕುರುಬ ಸಂಘದಿಂದ ಸಂಪೂರ್ಣ ಬೆಂಬಲವಿರುತ್ತದೆ ಏನಾದರೂ ಸಮಸ್ಯೆಗಳು ಕಂಡುಬಂದಲ್ಲಿ ನಮ್ಮ ಗಮನಕ್ಕೆ ತರುವಂತೆ ಹೇಳಿದರು.

    • ನೂತನ ಪದಾಧಿಕಾರಿಗಳ ವಿವರ.
    • ಅಯಣ್ಣ ಇನಾಮದಾರ, ಜಿಲ್ಲಾಧ್ಯಕ್ಷ,
    • ಮಲ್ಲಿಕಾರ್ಜುನ್ ಪೂಜಾರಿ ಉಪಾಧ್ಯಕ್ಷ,
    • ಪ್ರಧಾನ ಕಾರ್ಯದರ್ಶಿ ಮನೋಹರ್ ಕಟ್ಟಿಮನಿ,
    • ಖಜಾಂಚಿ ದೇವೇಂದ್ರಪ್ಪ ಕರಿಕಳ್ಳಿ,

    ಸಂಘಟನಾ ಕಾರ್ಯದರ್ಶಿಗಳಾಗಿ ಚಂದ್ರಶೇಖರ್ ಧನವಾಡ, ಬನ್ನಪ್ಪ ಮೈಲಾಪುರ, ಬೀರಪ್ಪ ಸಂಕಿನ, ಸಹ ಕಾರ್ಯದರ್ಶಿಗಳಾಗಿ ದ್ಯಾಮಣ್ಣ ಹುಣಸಿಗಿ, ಸಿದ್ದು ಬಡಿಗೇರ್, ಹಾಗೂ ಪ್ರತಿ ತಾಲೂಕಿನಿಂದ ಐದು ಜನ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ಕುರುಬ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯ ಮಗ್ಗ, ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಜಿಲ್ಲಾ ಹಿರಿಯ ನಾಗರಿಕ ಮತ್ತು ಅಂಗವಿಕಲ ಕಲ್ಯಾಣ ಅಧಿಕಾರಿ ಶರಣಗೌಡ ಪಾಟೀಲ್ ಕ್ಯಾತನಾಳ, ಸರಕಾರಿ ನೌಕರರ ಸಂಘದ ವಡಗೇರಾ ತಾಲೂಕು ಅಧ್ಯಕ್ಷ ಶಂಕ್ರಪ್ಪ ಗೂಂದೆನೂರ, ಕುರುಬ ಸಂಘದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಅಲ್ಲಿಪೂರ ,ಚಂದ್ರಕಾಂತ ನಾಯ್ಕೋಡಿ, ಸಾಯಿಬಣ್ಣ ಕೆಂಗೂರಿ, ಮಲ್ಲಯ್ಯ ಕಸಬಿ, ಹಾಗೂ ಕನಕ ನೌಕರ ಸಂಘದ ನಿರ್ದೇಶಕರು ಪದಾಧಿಕಾರಿಗಳು ವಿವಿಧ ಇಲಾಖೆಯ ನೌಕರರು ಕುರುಬ ಸಮಾಜದ ಮುಖಂಡರು ಉಪಸ್ಥಿತರಿದ್ದರು.

  • ಸುಳ್ಳು ಪ್ರಕರಣ ದಾಖಲಿಸಿಕೊಂಡ ವಡಗೇರಾ ಪಿಎಸ್ಐ : ಉಮೇಶ್ ಮುದ್ನಾಳ ಆರೋಪ

    ಸುಳ್ಳು ಪ್ರಕರಣ ದಾಖಲಿಸಿಕೊಂಡ ವಡಗೇರಾ ಪಿಎಸ್ಐ : ಉಮೇಶ್ ಮುದ್ನಾಳ ಆರೋಪ

    • ಹದಗೆಟ್ಟ ಜಿಲ್ಲಾ ಪೊಲೀಸ್ ಕಾನೂನು ಸುವ್ಯವಸ್ಥೆ
    • ಸುಳ್ಳು ಪ್ರಕರಣ ದಾಖಲಿಸಿಕೊಂಡ ವಡಗೇರಾ ಪಿಎಸ್ಐ
    • ಬಡ ರೈತ ಕುಟುಂಬದ ಮೇಲೆ ಪ್ರಭಾವಿಗಳಿಂದ ಮಾರಣಾಂತಿಕ ಹಲ್ಲೆ
    • ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಬಡ ರೈತನ ಆರೋಗ್ಯ ವಿಚಾರಿಸಿದ ಉಮೇಶ್ ಮುದ್ನಾಳ್

    ಸತ್ಯಕಾಮ ವಾರ್ತೆ ಯಾದಗಿರಿ:

    ಜಮೀನಿನ ದಾರಿ ವಿಚಾರಕ್ಕಾಗಿ ಗ್ರಾಮದ ಪ್ರಭಾವಿ ಕುಟುಂಬಸ್ಥರು ಬಡ ರೈತನ ಮನೆಗೆ ನುಗ್ಗಿ‌ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದಲ್ಲಿ ನಡೆದಿದ್ದೂ, ವಡಗೇರಾ ಪೊಲೀಸ್ ಠಾಣೆಯ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸದೇ ಆರೋಪಿಗಳು ಹೇಳಿದಂತೆ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಆರೋಪಿಸಿದ್ದಾರೆ.

    ತಾಲೂಕಿನ ಜೋಳದಡಗಿ ಗ್ರಾಮದಲ್ಲಿ ಶರಣಪ್ಪ ಮಾಸ್ಟರ್, ಈಶಪ್ಪ ಈರಪ್ಪಣೋರ್ ಸೇರಿ 12 ರ ಜನರ ತಂಡ ಬಡ ರೈತ ಮಲ್ಲಪ್ಪ‌ ಗಂಗಣ್ಣೋರ ಹಾಗೂ ಆತನ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

    ಕೊಡಲಿ, ಬಡಿಗೆ, ಹಾಗೂ ದೊಣ್ಣೆಗಳಿಂದ ಹೊಡೆದಿರುವ ಪರಿಣಾಮ ರೈತರ ಹಲ್ಲುಗಳು ಮುರುದಿವೆ. ಗ್ರಾಮಸ್ಥರು ಜಗಳ ಬಿಡಿಸಲು ಮುಂದಾಗ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.‌ ಗಾಯಾಳು ಮಲ್ಲಪ್ಪನನ್ನ ಗ್ರಾಮಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಈ ವಿಚಾರ ಗೊತ್ತಾಗುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ ಮುದ್ನಾಳ್ ಭೇಟಿ ನೀಡಿ, ಗಾಯಾಳು ಆರೋಗ್ಯ ವಿಚಾರಿಸಿ, ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ರು.

    ಇದೇ ವೇಳೆ ಮಾತನಾಡಿದ ಉಮೇಶ್ ‌ಮುದ್ನಾಳ್ ಹಲ್ಲೆ, ದರೋಡೆ, ಕೊಲೆ ಪ್ರಕರಣಕ್ಕೆ ಜಿಲ್ಲಾ ಪೋಲಿಸ್ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ವಡಗೇರಾ ಪೊಲೀಸ್ ಠಾಣೆಯ ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸದೇ ಆರೋಪುಗಳು ಹೇಳಿದಂತೆ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಜೋಳದಡಗಿ ಗ್ರಾಮದಲ್ಲಿ ವಿವಿಧ ಸಮುದಾಯಗಳ ಮೇಲೆ ಇದೇ ರೀತಿ ದೌರ್ಜನ್ಯ, ದಬ್ಬಾಳಿಕೆ, ಹಲ್ಲೆ ‌ಮಾಡುತ್ತಾ ಬಂದಿರುವ ಚಾಳಿ‌ ಇದೆ. ಒಬ್ಬ ಹೆಡ್ ಮಾಸ್ಟರ್ ನಾಗಿ ಗ್ರಾಮದ ಎಲ್ಲರಿಗೂ ತಿಳಿಹೇಳಬೇಕಿದ್ದ ಶಿಕ್ಷಕ ಮುಂದೆ ನಿಂತು ಹಲ್ಲೆಗೆ ಪ್ರೇರಣೆ ನೀಡಿದ್ದಾನೆ. ಇವರಿಗೆ ಯಾವುದೇ ಕಾನೂನಿನ ಭಯವಿಲ್ಲ. ಗಾಯಾಳು ನೀಡಿದ ದೂರಿನಂತೆ ತಾವು ಸಹ ಅದೇ ಸೆಕ್ಷನ್ ನಲ್ಲಿ ಗಾಯಾಳು ಮಲ್ಲಪ್ಪ ಸೇರಿ 12 ಜನರ ಮೇಲೆ ಪ್ರಕರಣ ದಾಖಲಿಸಿ ಗ್ರಾಮದಿಂದ ಪರಾರಿಯಾಗಿದ್ದಾರೆ. ಆರೋಪಿಗಳು ನೀಡಿರುವ ಪ್ರಕ ಕೂಡಲೇ ಕೈ ಬೀಡಬೇಕು. ಇಲ್ಲದಿದ್ದರೆ ಪೊಲೀಸ್ ಇಲಾಖೆ ವಿರುದ್ದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಇದೇ ಸಂದರ್ಭದಲ್ಲಿ ರಫೀಕ್ ಪಟೇಲ್, ಆಂಜನೇಯ, ಬಾಬಾ ಖಾನ್, ಜೋಳದಡಗಿ ಗ್ರಾಮದ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.

  • 2000 ಲೈನ್‌ಮೆನ್‌ಗಳ ನೇಮಕಕ್ಕೆ 15 ದಿನಗಳಲ್ಲಿ ಅಧಿಸೂಚನೆ ಪ್ರಕಟ

    2000 ಲೈನ್‌ಮೆನ್‌ಗಳ ನೇಮಕಕ್ಕೆ 15 ದಿನಗಳಲ್ಲಿ ಅಧಿಸೂಚನೆ ಪ್ರಕಟ

    ಆರ್‌ಟಿಪಿಎಸ್, ವೈಟಿಪಿಎಸ್, ಬಿಟಿಪಿಎಸ್ ದಾಖಲೆ ವಿದ್ಯುತ್ ಉತ್ಪಾದನೆ

    ಸತ್ಯಕಾಮ ವಾರ್ತೆ ರಾಯಚೂರು:

    ಇಂಧನ ಇಲಾಖೆಗೆ ಸದ್ಯದಲ್ಲೇ 2000 ಲೈನ್‌ಮೆನ್‌ಗಳ ನೇಮಕ ಆಗಲಿದ್ದು, ಈ ಸಂಬಂಧ 15 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

    ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಇಂಧನ ಸಚಿವರು, “ಲೈನ್‌ಮೆನಗಳ ಹುದ್ದೆಗೆ ರಾಜ್ಯಾದ್ಯಂತ ಒಂದೇ ದಿನ ನೇಮಕ ಪ್ರಕ್ರಿಯೆ ನಡೆಯಲಿದ್ದು,ಪಾರದರ್ಶಕತೆಗೆ ಒತ್ತು ನೀಡಲಾಗುತ್ತದೆ,” ಎಂದರು.

    “ವೈಟಿಪಿಎಸ್ ಹುದ್ದೆಗಳನ್ನು ಭರ್ತಿ ಮಾಡುವಾವಾಗ ಸ್ಥಳಿಯರಿಗೆ ಆದ್ಯತೆ ನೀಡಬೇಕು ಮತ್ತು 371 ಜೆ ಅನ್ವಯ ಮೀಸಲು ನೀಡಬೇಕು. ಆದರೆ ನುರಿತ ಕೆಲಸಗಾರರು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸ್ಥಳೀಯರ ನೇಮಕ ಆಗುತ್ತಿಲ್ಲ ಎಂಬ ಮಾತು ಕೇಳಿಬಂದಿದೆ. ಆದ್ದರಿಂದ ಎಷ್ಟು ಜನ ಬೇಕು ಅಂತ ನಿರ್ಧರಿಸಿ, ಅವರಿಗೆ ಕೆಪಿಸಿಎಲ್‌ನಿಂದ ಅಗತ್ಯ ತರಬೇತಿ ಕೊಡಿಸಲು ಅಗತ್ಯ ಕ್ರಮ ವಹಿಸಲಾಗುವುದು. ನಮ್ಮ ರಾಜ್ಯದ ಯುವ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಜತೆಗೆ, ಆ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ತರಬೇತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ,” ಎಂದು ತಿಳಿಸಿದರು.

    “ಈಗಾಗಲೇ 1000 ಸಹಾಯಕ ಇಂಜಿನಿಯರ್‌ಗಳ (ಎಇ), ಕಿರಿಯ ಇಂಜಿನಿಯರ್‌ಗಳ (ಜೆಇ) ನೇಮಕ ಮಾಡಿ ಕಾರ್ಯಾದೇಶವನ್ನೂ ನೀಡಿದ್ದೇವೆ. ಇಂಧನ ಇಲಾಖೆಗೆ ಹೊಸದಾಗಿ ನೇಮಕಗೊಂಡಿರುವ 400 ಸಹಾಯಕ ಇಂಜಿನಿಯರ್‌ಗಳಿಗೆ ಇತ್ತೀಚೆಗೆ ಕಾರ್ಯಾನುಭವ ತರಬೇತಿ ನೀಡಲಾಗಿದೆ. ತ್ವರಿತ ನೇಮಕಾತಿಗಾಗಿ ಈ ಅಭ್ಯರ್ಥಿಗಳು ನನಗೆ ಮನವಿ ಸಲ್ಲಿಸಿದ್ದರು. ಇಲಾಖೆಯ ಹಿರಿಯ ಅಧಿಕಾರಳ ನಿರಂತರ ಪ್ರಯತ್ನದಿಂದ 6 ತಿಂಗಳೊಳಗೆ ನೇಮಕ ಆದೇಶ ನೀಡಲಾಗಿದೆ,” ಎಂದು ಅವರು ಹೇಳಿದರು.

    ದಾಖಲೆ ಉತ್ಪಾದನೆ

    “ಈ ಬಾರಿ ಆರ್‌ಟಿಪಿಎಸ್, ವೈಟಿಪಿಎಸ್, ಬಿಟಿಪಿಎಸ್ ಉಷ್ಣ ಸ್ಥಾವರದಲ್ಲಿ ದಾಖಲೆ ವಿದ್ಯುತ್‌ ಉತ್ಪಾದನೆ ಮಾಡಿದ್ದರಿಂದ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಾಧ್ಯವಾಯಿತು. ಅಧಿಕಾರಿಗಳ ಶ್ರಮವನ್ನು ಪ್ರಶಂಸನೀಯ. ಅವರೆಲ್ಲನ್ನೂ ಅಭಿನಂದಿಸಲೆಂದೇ ಇಲ್ಲಿಗೆ ಬಂದಿದ್ದೇನೆ,”ಎಂದರು.

    “ಕಳೆದ ಜನವರಿಯಿಂದ ಮೇ ಅಂತ್ಯದವರೆಗೆ ಪ್ರತಿನಿತ್ಯ ಸರಾಸರಿ 2000 ಮಿಲಿಯನ್ ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಅದರಲ್ಲೂ ಏಪ್ರಿಲ್ ನಲ್ಲಿ 2,400 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದ್ದು, ಇದು ದಾಖಲೆಯಾಗಿದೆ,”

    “ಅದರಲ್ಲೂ ಆರ್‌ಟಿಪಿಎಸ್‌ ವಿದ್ಯುತ್‌ ಘಟಕಗಳಿಂದ ನಿಗದಿತ ಗುರಿ ಮೀರಿ ಹೆಚ್ಚಿನ ವಿದ್ಯುತ್‌ ಉತ್ಪಾದನೆ ಆಗಿದೆ. ದಿನಕ್ಕೆ 210 ಮೆಗಾವ್ಯಾಟ್‌ ಸಾಮರ್ಥ್ಯದ 3ನೇ ವಿದ್ಯುತ್‌ ಘಟಕದಲ್ಲಿ ಏಪ್ರಿಲ್‌ 4ರಂದು 216 ಮೆಗಾವ್ಯಾಟ್‌ ಉತ್ಪಾದನೆ ಮಾಡಲಾಗಿದ್ದು, ಆ ಮೂಲಕ ಇತಿಹಾಸ ಬರೆಯಲಾಗಿದೆ. ತಾಂತ್ರಿಕ ಸಮಸ್ಯೆಗಳ ನಡುವೆಯೂ ಆರ್‌ಟಿಪಿಎಸ್‌ನ ಏಳು ವಿದ್ಯುತ್‌ ಘಟಕಗಳು ಸೇರಿ ಶೇ. 85ರಷ್ಟು ವಿದ್ಯುತ್‌ ಉತ್ಪಾದಿಸಿವೆ,”

    “ಅದೇರೀತಿ, ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ವೈಟಿಪಿಎಸ್‌) 2023-24 ಹಣಕಾಸು ವರ್ಷದಲ್ಲಿ 6229.250 ಮಿ.ಯೂ. ಉತ್ಪಾದಿಸಿದೆ. ಇದು ಈವರೆಗಿನ ಗರಿಷ್ಠ ಉತ್ಪಾದನೆ. ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ 6000 ಮಿ.ಯೂ. ಗುರಿಯನ್ನು ವೈಟಿಪಿಎಸ್‌ ಮೀರಿದೆ. ಇನ್ನು ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರ 8208.476 ಮಿ.ಯೂ ವಿದ್ಯುತ್‌ ಉತ್ಪಾದಿಸಿದೆ. ಸ್ಥಾವರ ಕಾರ್ಯಾರಂಭ ಮಾಡಿದ ನಂತರ ಸಾಧಿಸಿದ ಅತ್ಯಧಿಕ ಉತ್ಪಾದನೆಯ ದಾಖಲೆ ಇದಾಗಿದೆ,”

    “ಆರ್‌ಟಿಪಿಎಸ್, ಒಂದನೇ ಘಟಕ ತೀರಾ ಹಳೆಯದು ಎಂಬ ಕಾರಣಕ್ಕೆ ಮುಚ್ಚುವುದಿಲ್ಲ. ಈ ಕುರಿತು ಊಹಾಪೋಹ ಅಷ್ಟ. ಆದರೆ ನಾವು ಈಗಾಗಲೇ ಕೆಪಿಸಿ ಬೋರ್ಡ್ ಮೀಟಿಂಗಲ್ಲಿ ತೀರ್ಮಾನ ತಗೊಂಡಿದೀವಿ‌ ಅದನ್ನ ಸರಿ ಮಾಡಲು ಅಗತ್ಯಹಣ ಬಿಡುಗಡೆಗೂ ನಿರ್ಧರಿಸಲಾಗಿದೆ,”ಎಂದು ಹೇಳಿದರು.

    ಕಲ್ಲಿದ್ದಲು ಕೊರತೆ ಇಲ್ಲ

    “ನಮ್ಮ ಸರ್ಕಾರ ಬಂದ ಮೇಲೆ ಕಲ್ಲಿದ್ದಲು ಸಮಸ್ಯೆ ಇಲ್ಲದಂತೆ ನೋಡಕೊಂಡಿದ್ದೇವೆ. ಒಂದು ತಿಂಗಳಿಗೆ ಬೇಕಾದ ಕಲ್ಲಿದ್ದಲು ಸಂಗ್ರಹದಲ್ಲಿದೆ. ಕೇಂದ್ರ ಸರ್ಕಾರದ ಸಹಭಾಗಿತ್ವದ 3 ಕಲ್ಲಿದ್ದಲು ಘಟಕಗಳಿಂದ ಕಲ್ಲಿದ್ದಲು ಬರುತ್ತಿದೆ. ಕ್ಯಾಪ್ಟಿವ್ ಮೈನಿಂಗ್‌ನಿಂದಲೂ ಕಲ್ಲಿದ್ದಲು ಬರ್ತಿದೆ. ಪ್ರಸ್ತುತ 14 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಿದೆ,”ಎಂದು ಸಚಿವರು ವಿವರ ನೀಡಿದರು.

    ಸಭೆಯಲ್ಲಿ ಶಾಸಕರಾದ ಡಾ.ಶಿವರಾಜ್ ಪಾಟೀಲ್, ಹಂಪಯ್ಯ‌ ನಾಯಕ್, ಮಾನಪ್ಪ ವಜ್ಜಲ್, ಬಸವರಾಜ್ ತುರುವಿನಹಾಳ್, ವಿಧಾನ ಪರಿಷತ್ ಸದಸ್ಯ ವಸಂತಕುಮಾರ್, ಇಂಧನ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ರಾಜಧಾನಿಯಲ್ಲಿ ಕುಂದಾಪ್ರ ಕನ್ನಡ ಹಬ್ಬ: ಆಗಸ್ಟ್ 17-18ರಂದು ಅರಮನೆ ಮೈದಾನದಲ್ಲಿ ಅದ್ಧೂರಿ ಆಯೋಜನೆ

    ರಾಜಧಾನಿಯಲ್ಲಿ ಕುಂದಾಪ್ರ ಕನ್ನಡ ಹಬ್ಬ: ಆಗಸ್ಟ್ 17-18ರಂದು ಅರಮನೆ ಮೈದಾನದಲ್ಲಿ ಅದ್ಧೂರಿ ಆಯೋಜನೆ

    • ಐದನೇ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ
      ಜೋಡಾಟ-ರಥೋತ್ಸವ ಸೇರಿ ಹಲವು ಆಕರ್ಷಣೆ
    ಸತ್ಯಕಾಮ ವಾರ್ತೆ ಬೆಂಗಳೂರು: 
    ಕರಾವಳಿಯ ಕುಂದಗನ್ನಡಿಗರು ತಮ್ಮ ಭಾಷೆ-ಬದುಕಿನ ಮೇಲಿನ ಅಭಿಮಾನದಿಂದ ಪ್ರತಿವರ್ಷ 'ವಿಶ್ವ ಕುಂದಾಪ್ರ/ಕುಂದಾಪುರ ಕನ್ನಡ ದಿನ'ವನ್ನು ಆಚರಣೆ ಮಾಡುತ್ತಿದ್ದು, ಈ ಸಲ ಬೆಂಗಳೂರಿನಲ್ಲಿ ಅದು ಎಂದಿಗಿಂತ ಅದ್ಧೂರಿಯಾಗಿ ನಡೆಯಲಿದೆ.

    ಈ ಬಾರಿ ಕುಂದಾಪುರ ಕನ್ನಡ ದಿನಾಚರಣೆಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನ ವಿಜೃಂಭಣೆಯಿಂದ ನೆರವೇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಕುಂದಗನ್ನಡ ಲೋಕವನ್ನು ಭರ್ಜರಿಯಾಗಿ ಅನಾವರಣಗೊಳಿಸುವ ಈ ಕಾರ್ಯಕ್ರಮ ಆಗಸ್ಟ್ 17 ಮತ್ತು 18ರಂದು ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ನಡೆಯಲಿದೆ.

    ‘ಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರು’ ಮೂಲಕ ಆಯೋಜನೆ ಆಗುತ್ತಿರುವ ಈ ಆಚರಣೆಯ ದಿನ-ಸ್ಥಳ ಘೋಷಣೆ ಕುರಿತು ಬೆಂಗಳೂರಿನ ಸುದೀಕ್ಷಾ ಕನ್ವೆನ್ಷನ್ ಹಾಲ್‌ನಲ್ಲಿ ಜು. 7ರಂದು ಹಮ್ಮಿಕೊಂಡಿದ್ದ ‘ವಾಲ್ಗ’ ಕಾರ್ಯಕ್ರಮದಲ್ಲಿ ವಿವರಗಳನ್ನು ನೀಡಲಾಯಿತು. ಆರು ವರ್ಷಗಳ ಹಿಂದೆ ಈ ಆಚರಣೆ ಆರಂಭವಾಗಿದ್ದು, ಇದು ಐದನೇ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಆಗಿದೆ.

    Video: ರಾಜಧಾನಿಯಲ್ಲಿ ಕುಂದಾಪ್ರ ಕನ್ನಡ ಹಬ್ಬ: ಆಗಸ್ಟ್ 17-18ರಂದು ಅರಮನೆ ಮೈದಾನದಲ್ಲಿ ಅದ್ಧೂರಿ ಆಯೋಜನೆ

    ಕಳೆದ ನಾಲ್ಕು ಕುಂದಾಪ್ರ ಕನ್ನಡ ಹಬ್ಬಗಳು ವಿಜಯನಗರದ ಬಂಟರ ಸಂಘದಲ್ಲಿ ಆಗಿದ್ದವು. ಆದರೆ ಅದಕ್ಕೆ ಬೃಹತ್ ಜನಸ್ತೋಮ ಹರಿದುಬಂದಿದ್ದು ಸುಮಾರು ಶೇ. 70 ಜನರಿಗೆ ಬಂಟರ ಸಂಘಕ್ಕೆ ಪ್ರವೇಶಿಸಲಿಕ್ಕೂ ಆಗಿರಲಿಲ್ಲ. ಹೀಗಾಗಿ ಈ ವರ್ಷ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ, ಈ ಬಾರಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಜನರು ಸೇರಲಿದ್ದಾರೆ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು ತಿಳಿಸಿದರು.

    ಬೃಹತ್ ಮೆರವಣಿಗೆ: ಎರಡು ದಿನಗಳ ಈ ಕಾರ್ಯಕ್ರಮ ‘ದಿಬ್ಣ’ದೊಂದಿಗೆ ಆರಂಭವಾಗಲಿದೆ. ಅದರಲ್ಲಿ ಬೆಂಗಳೂರಿನ ಕನಿಷ್ಠ 10 ಕಡೆಗಳಿಂದ ಜನರು ಮೆರವಣಿಗೆ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಲಿದ್ದಾರೆ. ‘ನಾಕ್ ಘನಾ ಸುರ್ಲ್’ ಎಂಬ ಕರಾವಳಿಯ ಅದ್ಭುತ ಗೀತೆಗಳ ಗಾಯನವಿರಲಿದೆ. ನಂತರ ‘ನುಡಿ ಚಾವಡಿ’ ಎಂಬ ಕಾರ್ಯಕ್ರಮದ ಮೂಲಕ ಉದ್ಘಾಟನಾ ಸಮಾರಂಭ ನಡೆಯಲಿದೆ. ಅ.17ರ ರಾತ್ರಿ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ‘ಜೋಡಾಟ’ ನಡೆಯಲಿದೆ. ರಾಜ್ಯದ ಯಕ್ಷರಂಗದ ಮೇರು ಕಲಾವಿದರು ಭಾಗವಹಿಸಲಿರುವ ಈ ಯಕ್ಷಗಾನಕ್ಕೇ 15-20 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ದೀಪಕ್ ಶೆಟ್ಟಿ ವಿವರಿಸಿದರು. ಮಾತ್ರವಲ್ಲದೆ, ಕನ್ನಡ ಚಿತ್ರರಂಗದ ಸ್ಟಾರ್ ನಟ-ನಿರ್ದೇಶಕರು ಸೇರಿದಂತೆ ಹಲವು ತಾರೆಯರು ಕೂಡ ಭಾಗಿ ಆಗಲಿರುವುದರಿಂದ ಈ ಸಂಭ್ರಮಕ್ಕೆ ತಾರಾ ಕಳೆ ಇರಲಿದೆ ಎಂದರು.

    ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ಖ್ಯಾತ ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯಕುಮಾರ್ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸಂಸ್ಥಾಪಕ ನಿರ್ದೇಶಕ ಆರ್.ಉಪೇಂದ್ರ ಶೆಟ್ಟಿ, ಹೋಟೆಲೋದ್ಯಮಿ ಸತೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಏನಿದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ?
    ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದ್ದು, ಈ ಸಲ ಆಗಸ್ಟ್ 04ರಂದು ಆಷಾಢ ಅಮಾವಾಸ್ಯೆ ಬಂದಿದೆ. ಅದು ವಾರದ ದಿನವಾದ್ದರಿಂದ, ಆಯೋಜನೆ ಹಾಗೂ ಆಗಮಿಸುವ ಅತಿಥಿ ಗಣ್ಯರ ಅನುಕೂಲದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಆಗಸ್ಟ್ 17, 18ರಂದು ವಿಶ್ವ ಕುಂದಾಪುರ ಕನ್ನಡ ದಿನವನ್ನು ಕುಂದಾಪ್ರ ಕನ್ನಡ ಹಬ್ಬವಾಗಿ ಆಚರಿಸಲಾಗುತ್ತಿದೆ. ಕುಂದಾಪ್ರ ಕನ್ನಡ ಹಬ್ಬವು ಹಲವು ಸಾಂಸ್ಕೃತಿಕ ಸಡಗರಗಳಿಗೆ ಇದು ವೇದಿಕೆ ಆಗಲಿದ್ದು, ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ಪಸರಿಸಲಿದೆ.

    ಇದು ಸಣ್ಣ ಆಲೋಚನೆ ಅಲ್ಲ‌. ಹಬ್ಬದ ಸಂಭ್ರಮ ಮಾತ್ರವಲ್ಲದೆ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಸೇರಿಸುವ ಬೃಹತ್ ಕಾರ್ಯಕ್ರಮ. ಇದು ಕುಂದಾಪುರದ ವೈಶಿಷ್ಟ್ಯ ಎಲ್ಲರಿಗೂ ತೋರಿಸಿ ಬೆಳೆಸುವ ಅದ್ಭುತ ಪ್ರಯತ್ನ.
    – ರವಿ ಬಸ್ರೂರು, ಖ್ಯಾತ ಸಂಗೀತ ನಿರ್ದೇಶಕ.

    2 ದಿನಗಳ ಕಾರ್ಯಕ್ರಮಗಳ ಪಟ್ಟಿ
    * ‘ಹಂದಾಡ್ತ ನೆಗ್ಯಾಡಿ’: ಕುಂದಾಪ್ರ ಕನ್ನಡದ ನಗೆ ರಾಯಭಾರಿ ಮನು ಹಂದಾಡಿ ಅವರಿಂದ ನಗೆ ಪ್ರಹಸನ.
    * ‘ಬಯಲಾಟ’: ಗ್ರಾಮೀಣ ಕ್ರೀಡೋತ್ಸವ
    * ‘ರಥೋತ್ಸವ’: ಹಬ್ಬದ ರೀತಿಯಲ್ಲೇ ಭಾವಬೀದಿಯಲ್ಲಿ ಭಾಷೆಯ ತೇರು.
    * ‘ಪೆಟ್ಟ್ ಒಂದೇ, ಸ್ವರ ಬೇರೆ’: ಆಫ್ರಿಕದ ಜಂಬೆ, ಕುಂದಾಪುರದ ಚೆಂಡೆ ಜುಗಲ್ ಬಂದಿ.
    * ‘ಭುಜಬಲದ ಪರಾಕ್ರಮ’ ಹಗ್ಗಜಗ್ಗಾಟ 8 ಊರಿನ ಹೆಸರಲ್ಲಿ ತಂಡ.
    * ‘ಯಬ್ಯಾ ಸೌಂಡೇ’: ರವಿ ಬಸ್ರೂರು ಅವರ ಶತಕುಂದ ಪದ್ಯಗಳ ಡಿಜೆ
    * ‘ಡ್ಯಾನ್ಸ್ ಕುಂದಾಪ್ರ ಡ್ಯಾನ್ಸ್’: ವಿಶೇಷ ನೃತ್ಯ‌ ಪ್ರದರ್ಶನ
    * ‘ಗಂಡಿನ್ ಪಿಚ್ಚರ್ ಬಿಡ್ತ್’: ವಿಶೇಷ ಕಿರುಚಿತ್ರ ಪ್ರದರ್ಶನ
    * ‘ನಮ್ ಊರ್ಮನಿ ಪಿಚ್ಚರ್ ಯಾಕ್ಟ್ರ್ಸ್’: ಊರಿನ ಸಿನಿತಾರೆಯರು, ಸೂಪರ್ ಸ್ಟಾರ್‌ಗಳ ಸಮಾಗಮ.
    * ‘ಕುಂದಾಪ್ರ ಸಂತಿ’: ಕುಂದಾಪುರದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಸಂತೆ.
    * ‘ಹೊಟ್ಟಿ ಕಂಡದ್ ನಾವೇ ಸೈ’: ಕರಾವಳಿಯ ವಿಶೇಷ ಖಾದ್ಯ ಮೇಳ.

  • ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಹೇಳಿದ್ದೇನು

    ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಹೇಳಿದ್ದೇನು

    ಸತ್ಯಕಾಮ ವಾರ್ತೆ ಕಲಬುರಗಿ:

    ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ ಸಾರ್ವಜನಿಕರು ಆತಂಕ ಪಡಬೇಕಿಲ್ಲ. ಇದು ಆಕ್ಸಿಜನ ಟ್ಯಾಂಕ್ ತುಂಬಿದ ನಂತರ ಅದರ ಒತ್ತಡವನ್ನು ಗ್ಯಾಸ್ ರೂಪದಲ್ಲಿ ಹೊರಹಾಕುವ ಸಾಮಾನ್ಯ ಪ್ರಕ್ರಿಯೆ ಇದಾಗಿದೆ ಎಂದು (DHO)ಡಿ.ಎಚ್.ಓ ಡಾ.ರತಿಕಾಂತ ಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.

    ರವಿವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿನ ಆಕ್ಸಿಜನ್ ಪ್ಲ್ಯಾಂಟ್ ನಲ್ಲಿ ಸೋರಿಕೆಯಾಗುತ್ತಿದ್ದೆ ಎಂದು ಪಟ್ಟಣದಾದ್ಯಂತ ಸುದ್ದಿ ಹಬ್ಬಿತ್ತು.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಶುಕ್ರವಾರವಷ್ಟೆ ಆಸ್ಪತ್ರೆಯಲ್ಲಿನ 6 ಕೆ.ಎಲ್. ಸಾಮರ್ಥ್ಯದ ಟ್ಯಾಂಕಿಗೆ ವೈದ್ಯಕೀಯ ದ್ರವ ಆಮ್ಲಜನಕ ಭರ್ತಿ ಮಾಡಿದೆ. ಟ್ಯಾಂಕ್ ಸಂಪೂರ್ಣ ಭರ್ತಿಯಾದ ನಂತರ ಅದರಲ್ಲಿನ ಆಂತರಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಎ,ಬಿ,ಸಿ ಎಂಬ ವಾಲ್ ಗಳ ಮುಖೇನ ಹಂತ ಹಂತವಾಗಿ ಗ್ಯಾಸ್ ಲೀಕ್ ಮಾಡುತ್ತದೆ. ಇದಕ್ಕೆ ಯಾರು ಆತಂಕ ಪಡಬೇಕಿಲ್ಲ‌. ಇದು ಎಲ್.ಎಂ.ಓ ಟ್ಯಾಂಕ್ ನಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ ಎಂದಿದ್ದಾರೆ.

  • ಸರ್ಕಾರಿ ನೌಕರರ ಗಮನಕ್ಕೆ

    ಸರ್ಕಾರಿ ನೌಕರರ ಗಮನಕ್ಕೆ

    ಅಪರಿಚಿತ ವ್ಯಕ್ತಿ ಸರ್ಕಾರಿ ಅಧಿಕಾರಿ, ನೌಕರರಿಗೆ ಹೆದರಿಸಿ ವಂಚನೆ:

     

    ಸತ್ಯಕಾಮ ವಾರ್ತೆ ಯಾದಗಿರಿ :

    ಅಪರಿಚಿತ ವ್ಯಕ್ತಿಗಳು ಸರ್ಕಾರಿ ಅಧಿಕಾರಿ, ನೌಕರರ ಹೆಸರು ಮೊಬೈಲ್ ಸಂಖ್ಯೆಗಳನ್ನು ತಿಳಿದುಕೊಂಡು, ಮೊ.ನಂ.9156540734 ಹಾಗೂ ಇತರೆ ನಂಬರಗಳಿಂದ ಕರೆ ಮಾಡಿ ವಂಚನೆ ಮಾಡುತ್ತಿದ್ದಾನೆ ಎಂದು ಯಾದಗಿರಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಆ್ಯಂಟನಿ ಜಾನ್ ಜೆ.ಕೆ ಅವರು ತಿಳಿಸಿದ್ದಾರೆ.

    ವಂಚನೆ ಮಾಡುವ ಅಪರಿಚಿತ ತಾನು ಡಿ.ಎಸ್.ಪಿ ಲೋಕಾಯುಕ್ತ ಬೆಂಗಳೂರು, ಕಲಬುರಗಿ, ಬೀದರ, ಅಥವಾ ಯಾದಗಿರಿ ಎಂದು ಬಿಂಬಿಸಿಕೊಂಡು ಸರ್ಕಾರಿ ಅಧಿಕಾರಿ, ನೌಕರರಿಗೆ ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ದೂರು ಇದೆ ಎಂದು ತಿಳಿಸಿ ತನ್ನನ್ನು ಕಾಣುವಂತೆ ನಿಗದಿತ ಸ್ಥಳಕ್ಕೆ ಬರಲು ತಿಳಿಸಿ ಅಲ್ಲದೆ ಗೂಗಲ್ ಪೇ ಅಥವಾ ಪೋನ್ ಪೇ ಅಥವಾ ಅಕೌಂಟ ನಂಬರಿಗೆ ಮೂಲಕ ಹಣ ಹಾಕಲು ಬೆದರಿಕೆ ಹಾಕುತ್ತಿರುವದು ಅಲ್ಲದೇ ಸರ್ಕಾರಿ ಅಧಿಕಾರಿಯವರಿಗೆ ಒಂದು ವೇಳೆ ತಾನು ತಿಳಿಸಿದ ಸ್ಥಳಕ್ಕೆ ಬರದೇ ಇದ್ದರೆ ನಿಮ್ಮ ಮೇಲೆ ಲೋಕಾಯುಕ್ತ ರೇಡ್ ಅಥವಾ ಟ್ಯಾಂಪ್ ಮಾಡುತ್ತೇವೆ ಅಂತಾ ಹೆದರಿಸುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ.

    ಕಾರಣ ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಅಧಿಕಾರಿ, ನೌಕರರಿಗೆ ಈ ಮೂಲಕ ಗಮನಕ್ಕೆ ಮೇಲ್ಕಂಡಂತೆ ಈ ರೀತಿಯಾಗಿ ಯಾವುದೇ ಫೋನ್ ಕರೆ ಮಾಡಿ ಲೋಕಾಯುಕ್ತ ಹೆಸರಿನಲ್ಲಿ ನಿಮ್ಮನ್ನು ಹೆದರಿಸುತ್ತಿದ್ದರೆ, ಅದನ್ನು ನಿಮ್ಮ ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡು ತಕ್ಷಣದಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ, ಈ ಬಗ್ಗೆ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಯಾದಗಿರಿ ಮೊ.ನಂ.9364062529, 08473 253802ಗೆ ಮಾಹಿತಿ ಸಲ್ಲಿಸಲು ತಿಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಮರೆಯಲಾಗದ ಮಣ್ಣೂರರಿಗೆ 76ನೇ ಹುಟ್ಟುಹಬ್ಬ

    ಮರೆಯಲಾಗದ ಮಣ್ಣೂರರಿಗೆ 76ನೇ ಹುಟ್ಟುಹಬ್ಬ

    ಪತ್ರಕರ್ತ ಪಿ ಎಂ ಮಣ್ಣೂರ್ ಈಗ ನೆನಪು ಮಾತ್ರ

    ವಿಶೇಷ ಲೇಖನ : ಸುರೇಶ ಕೊಟಗಿ.

    ಪತ್ರಿಕಾರಂಗದ ಅಪ್ರತಿಮ ವ್ಯಕ್ತಿತ್ವ, ಮಹಾನಚೇತನ ಶ್ರೀ ಪಿ ಎಂ ಮಣ್ಣೂರರವರು ಜುಲೈ 1 ಪತ್ರಿಕಾ ದಿನಾಚರಣೆಯಂದು ಜನಿಸಿದರು. ಅವರ ಬದುಕು ಎಲ್ಲರಿಗೂ ಆದರ್ಶಮಯವಾಗಿತ್ತು. 2023 ಜೂಲೈ 1 ಅವರ 79ನೇ ಹುಟ್ಟು ಹಬ್ಬದ ಪ್ರಯುಕ್ತ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ತುಂಬಾ ಅದ್ದೂರಿಯಾಗಿ ಕಾರ್ಯಕ್ರಮ ಆಚರಿಸಲಾಗಿತ್ತು, ಇಂದು ಅದು ಇತಿಹಾಸ ಮಾತ್ರ.ಅನೇಕ ಗಣ್ಯರು, ಪತ್ರಕರ್ತರು, ಆಪ್ತರು ಹಾಗೂ ಮಿತ್ರರು ಈ ಭವ್ಯ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಮಣ್ಣೂರ್ ರವರ ಮಾತುಗಳು ಯುವ ಜನಾಂಗಕ್ಕೆ ಪತ್ರಕರ್ತರಿಗೆ ಧೈರ್ಯ, ಸಾಮರ್ಥ್ಯ ಮತ್ತು ಸ್ಪೂರ್ತಿ ತುಂಬುವ ಅವರ ಮನದಾಳದ ಮಾತುಗಳು ಇಂದಿಗೂ ಎಲ್ಲರ ಹೃದಯದಲ್ಲಿ ಹಚ್ಚು ಹಸಿರಾಗಿದೆ. ಪತ್ರಿಕಾ ರಂಗದ ಮಹತ್ವವನ್ನು ಬಿಡಿಬಿಡಿಯಾಗಿ ಬಿಚ್ಚಿಟ್ಟಿದ್ದು ಪತ್ರಿಕಾ ಮಿತ್ರರಿಗೆ ಟಾನಿಕ್ ನೀಡಿದಂತೆ ಪರಿಣಮಿಸಿತು ಆ ದಿನ.

    ಆದರೆ ದುರಾದುಷ್ಟಕರ ಜುಲೈ 1, 2024ರ ಜನ್ಮದಿನಕ್ಕೆ ಅವರಿಲ್ಲ, ಅವರ ನೆನಪು ಮಾತ್ರ. ಯಾವುದೇ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅವನು ನಮ್ಮಿಂದ ದೂರ ಹೋದ ಮೇಲೆ ಅರ್ಥವಾಗುತ್ತದೆ. ಅವರು ತಮ್ಮ ಕೊನೆಯ ದಿನಗಳಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಪ್ರತಿದಿನ ತಾವೇ ಸ್ವತಃ ಕಾರು ಚಲಾಯಿಸಿಕೊಂಡು ಸತ್ಯಕಾಮ ಕಾರ್ಯಾಲಯಕ್ಕೆ ಬಂದು ಒಂದೆರಡು ಗಂಟೆ ಕಾರ್ಯಾಲಯದ ಕಾರ್ಯವನ್ನು ನೋಡಿಕೊಂಡು ಅವರ ಪುತ್ರ ಆನಂದರಿಗೆ ಪತ್ರಿಕೆಯತ್ತ ವಿಶೇಷ ಗಮನ ಹರಿಸಲು ಸೂಚಿಸುತ್ತಿದ್ದರು. ಅವರನ್ನು ಭೇಟಿಯಾಗಲು ಅವರ ಮಿತ್ರರು ಪತ್ರಕರ್ತರು ಬಂದು ಹೋಗುವ ವಾಡಿಕೆ, ಆ ಸಂದರ್ಭದಲ್ಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಎಂಥ ಮನುಷ್ಯರಿದ್ದರೆಂದರೆ, ಅವರ ಎದುರು ತಪ್ಪು ಮಾಡಿದ ಎಂತಹ ವ್ಯಕ್ತಿಯನ್ನು ಕ್ಷಮಿಸಿ ತಿಳಿ ಹೇಳುವ ದೊಡ್ಡ ಗುಣ ಅವರಲ್ಲಿತ್ತು. ಸತ್ಯಕಾಮ ಪತ್ರಿಕೆಯ ಸಿಬ್ಬಂದಿಗಳೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದರು. ಆದ ಕಾರಣ ಇಂದಿಗೂ ಸಿಬ್ಬಂದಿ ವರ್ಗ ಅವರೊಂದಿಗಿನ ಕಳೆದ ಕ್ಷಣಗಳನ್ನು ನೆನಪಿಸಿಕೊಂಡು ಕಳವಳ ಪಡುತ್ತಾರೆ.

    ಇದು ಪಿ ಎಂ ಮಣ್ಣೂರ್ ರವರು ನಡೆದು ಬಂದ ದಾರಿ. ಪತ್ರಿಕೆಯ ಜವಾಬ್ದಾರಿ ಹೊರೆ ಹೊತ್ತ ಅವರ ಪುತ್ರ ಶ್ರೀ ಆನಂದ ಮಣ್ಣೂರ ರವರು ತಂದೆಯವರ ಆಶೋತ್ತರ ಗಳ ಕಡೆಗೆ ಕಾಳಜಿ ವಹಿಸುತ್ತಾ ಅಪ್ಪಾಜಿಯವರು ಪತ್ರಿಕೆಯನ್ನು ರಾಜ್ಯಮಟ್ಟದ ಪತ್ರಿಕೆಯನ್ನಾಗಿ ಮಾಡುವ ಹಿರಿಯ ಗುರಿಯಾಗಿತ್ತು. ಇದು ಅನೇಕ ಸಲ ಚರ್ಚೆಗೂ ಬಂದಿದೆ. ಅವರ ಈ ಕನಸಿನ ಸಂಕಲ್ಪ, ಜವಾಬ್ದಾರಿಯಿಂದ ನಿಭಾಯಿಸಿ ನನಗೆ ಎಷ್ಟೇ ತೊಂದರೆ ಬಂದರೂ ನನಸಾಗಿ ಮಾಡುವ ಧ್ಯೇಯ ಹೊಂದಿದ್ದೇನೆ. ಅವರು ತೀರಿ ಹೋದಾಗಿನಿಂದ ಇಲ್ಲಿಯವರೆಗೆ ಅನೇಕ ಸಮಸ್ಯೆಗಳು ಎದುರಾಗಿವೆ ಕೆಲವು ಕಾಣದ ಕೈಗಳಿಂದ ತೊಂದರೆಗಳು ಎದುರಾಗುತ್ತಿವೆ. ಪರವಾಗಿಲ್ಲ, ಅಪ್ಪಾಜಿ ಅವರು ಭೌತಿಕವಾಗಿ ನನ್ನೊಂದಿಲ್ಲದಿದ್ದರೂ ಅವರ ಕೃಪಾಶೀರ್ವಾದ ದಿವ್ಯ ಚೇತನ ಶಕ್ತಿ ನನ್ನೊಂದಿಗೆ ಇದೆ ಬರುವ ಎಲ್ಲಾ ಸಮಸ್ಯೆಗಳಿಗೂ ಎದೆ ತಟ್ಟಿ ನಿಂತು ಪರಿಹಾರ ಕಂಡುಕೊಳ್ಳುವೆ. ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಾ ನನಗೆ ಬೆನ್ನೆಲುಬಾಗಿ ಸಮಾಜದ ಶಕ್ತಿ, ಸ್ವತಹ ಜನರೇ ಬೆಂಬಲಕ್ಕೆ ನಿಂತಿದ್ದಾರೆ.

    ಪ್ರಿಂಟ್ ಮೀಡಿಯಾದಲ್ಲಿ ಸಾಕಷ್ಟು ಸಾಧನೆ ಮಾಡಿದ ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲೂ, ಸಾಮಾಜಿಕ ರಾಜಕೀಯ ಸಮಸ್ಯೆಗಳ ಬಗ್ಗೆ ಸಾಕಷ್ಟು ಸತ್ಯ ಸುದ್ದಿಗಳನ್ನು ಬಯಲಿಗೆಳೆದು ಗುಣಮಟ್ಟದ ಲೇಖನಗಳು ಹಾಗೂ ಸುದ್ದಿಗಳನ್ನು ಪ್ರಕಟಗೊಳಿಸುತ್ತಿರುವುದು ವಿಸ್ಮಯ. ರಾಜಕೀಯ ಮತ್ತು ಆಡಳಿತದ ಅವ್ಯವಸ್ಥೆಯಾಗರಕ್ಕೆ ಕನ್ನಡಿ ಹಿಡಿದಂತಾಗಿದೆ. ಸಮಾಜದ ಜಾಗೃತಿಗೆ ಪತ್ರಿಕೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಶ್ರಮಿಸುವೆ, ಇದೇ ನನ್ನ ದೃಢ ವಿಶ್ವಾಸ ವೀರ ಸಂಕಲ್ಪ ಎಂದು ಹೇಳಿದರು.

  • ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ ಆರ್ ಐ ಕೋಟಾ ಕೋರಿ ಕೇಂದ್ರಕ್ಕೆ ಪತ್ರ ಬರೆದ ಸಚಿವ ಶರಣಪ್ರಕಾಶ್ ಪಾಟೀಲ್

    ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್ ಆರ್ ಐ ಕೋಟಾ ಕೋರಿ ಕೇಂದ್ರಕ್ಕೆ ಪತ್ರ ಬರೆದ ಸಚಿವ ಶರಣಪ್ರಕಾಶ್ ಪಾಟೀಲ್

    • >ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರಿಗೆ ಪತ್ರ 
    • >ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.15ರಷ್ಟು ಎನ್ ಆರ್ ಐ ಕೋಟಾ ಕೊಡಿ
    • >508 ಸೂಪರ್ ನ್ಯೂಮೆರರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರುಮಾಡುವಂತೆ ಕೇಂದ್ರಕ್ಕೆ ಒತ್ತಾಯ

    ಸತ್ಯಕಾಮ ವಾರ್ತೆ ಬೆಂಗಳೂರು:

    ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ 2025-26ನೇ ಶೈಕ್ಷಣಿಕ ವರ್ಷದಿಂದ ಅನಿವಾಸಿ ಭಾರತೀಯ (ಎನ್ ಆರ್ಐ) ಕೋಟಾ ಆರಂಭಿಸಲು ಸೂಪರ್ ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆ ಪತ್ರ ಬರೆದಿದೆ.

    ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‍ಎಂಸಿ) ಅಧ್ಯಕ್ಷರಿಗೆ ಈಕುರಿತು ಪತ್ರ ಬರೆದಿದ್ದು, ರಾಜ್ಯದಲ್ಲಿರುವ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ 508 ಹೆಚ್ಚುವರಿ ಸೂಪರ್ ನ್ಯೂಮರರಿ (supernumerary) ಎಂಬಿಬಿಎಸ್ ಸೀಟುಗಳನ್ನು ಸೃಷ್ಟಿಸುವ ಮೂಲಕ ಶೇ 15ರಷ್ಟು ಎನ್ಆರ್ ಐ ಕೋಟಾ ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.

    ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಯುಜಿ-ಎಂಬಿಬಿಎಸ್ ವಾರ್ಷಿಕ ಮಂಜೂರಾದ ಸೀಟುಗಳ ಮೇಲೆ ಹೆಚ್ಚುವರಿ ಸೀಟುಗಳನ್ನು ರಚಿಸುವುದು ಸೂಪರ್ ನ್ಯೂಮರರಿ ಉದ್ದೇಶವಾಗಿದೆ. ಪ್ರಸ್ತಕ ವೈದ್ಯಕೀಯ ಶಿಕ್ಷಣ ಇಲಾಖೆಯಡಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳು 2023-24ನೇ ಸಾಲಿನಲ್ಲಿ 3,450 ಸೀಟುಗಳ ಸಾಮಥ್ರ್ಯವನ್ನು ಹೊಂದಿದ್ದು ಅದರಲ್ಲಿ 85% (2929 ಸೀಟುಗಳು) ಕರ್ನಾಟಕ ಕೋಟಾ ಮತ್ತು 521 ಅಂದರೆ15% ಅಖಿಲ ಭಾರತ ಕೋಟಾ ಆಗಿದೆ.

    ಈಗಾಗಲೇ ರಾಜಸ್ಥಾನ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಪುದುಚೇರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.7-15ರಷ್ಟು ಎನ್ ಆರ್ ಐ ಕೋಟಾವನ್ನು ನೀಡಿರುವ, ನಿದರ್ಶನಗಳನ್ನು ಹಾಗು ಈ ರಾಜ್ಯಗಳು ಎನ್ ಆರ್ ಐ ವಿದ್ಯಾರ್ಥಿಗಳಿಗೆ ವಾರ್ಷಿಕ 75,000 ಡಾಲರ್ ದಿಂದ 100,000 ಡಾಲರ್ ಗಿಂತ ಹೆಚ್ಚು ಶುಲ್ಕ ವಿಧಿಸಿರುವುದ್ದನು ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಬಜೆಟ್ ಹಂಚಿಕೆ, ವಿದ್ಯಾರ್ಥಿಗಳ ಶುಲ್ಕ, ಕೇಂದ್ರ ಮತ್ತು ರಾಜ್ಯಅನುದಾನಗಳು ಮತ್ತು ಇತರ ದೇಣಿಗೆಗಳ ಹೊರತಾಗಿಯೂ ರಾಜ್ಯದ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು ಹಣದ ಕೊರತೆಯನ್ನು ಎದುರಿಸುತ್ತಿವೆ ಎಂದು ಪಾಟೀಲ್ ಪತ್ರದಲ್ಲಿ ಹೇಳಿದ್ದಾರೆ.

    ಕರ್ನಾಟಕದಲ್ಲಿ ಎನ್ ಆರ್ ಐ ಕೋಟಾ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಮಾತ್ರ ಅನುಮತಿಯಿದ್ದು, ಪ್ರತಿ ವಿದ್ಯಾರ್ಥಿ ವಾರ್ಷಿಕ 1 ಕೋಟಿ ರೂ ಯಿಂದ 2.5 ಕೋಟಿ ರೂ. ಕೋರ್ಸ್ ಶುಲ್ಕ ಪಾವತಿಸಬೇಕಾಗುತ್ತದೆ. ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ ಎನ್ ಆರ್ ಐ ಕೋಟಾ ಜಾರಿಯಾದಲ್ಲಿ ವಿದ್ಯಾರ್ಥಿಗೆ ವಾರ್ಷಿಕ ರೂ. 25 ಲಕ್ಷ ಶುಲ್ಕ ನಿಗದಿಪಡಿಸಬಹುದು, ಇದು ವೈದ್ಯಕೀಯ ಶಿಕ್ಷಣ ಇಲಾಖೆಗೆ ಮೊದಲ ವರ್ಷಕ್ಕೆ 127 ಕೋಟಿ ರೂ ಮತ್ತು 5ನೇ ವರ್ಷಕ್ಕೆ 571.5 ಕೋಟಿ ರೂ. ಸಂದಾಯವಾಗುತ್ತದೆ. ಈ ಸಂಸ್ಥೆಗಳನ್ನು ಶ್ರೇಷ್ಠತೆಯ ಕೇಂದ್ರವನ್ನಾಗಿ ಮಾಡಲು, ಗುಣಮಟ್ಟದ ಶಿಕ್ಷಣ, ತರಬೇತಿ, ನಿರ್ವಹಣೆ, ವೈದ್ಯಕೀಯ ಉಪಕರಣಗಳು, ಔಷಧಗಳ ಖರೀದಿ, ರೋಗಿಗಳ ಹೊರೆ ನಿರ್ವಹಣೆ, ಮೂಲಸೌಕರ್ಯ ಸುಧಾರಣೆ, ಅಧ್ಯಾಪಕರ ಸಾಮರ್ಥ್ಯ ಮತ್ತು ಸಂಶೋಧನೆಗೆ ಎನ್‌ಆರ್‌ಐ ಕೋಟಾದ ಮೂಲಕ ಹೆಚ್ಚುವರಿ ಹಣದ ಅಗತ್ಯವಿದೆ ಎಂದು ಸಚಿವರು ಪ್ರತಿಪಾದಿಸಿದ್ದಾರೆ.

    ಲಭ್ಯವಿರುವ ವಾರ್ಷಿಕ ಸೀಟುಗಳ ಒಳಗೆ ಎನ್ ಆರ್ ಐ ಕೋಟಾವನ್ನು ರಚಿಸುವುದು ಕಾರ್ಯಸಾಧ್ಯವಲ್ಲ. ಹಾಗೆ ಮಾಡಿದರೆ ಬಡವರು ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಕಡಿಮೆ ಸೀಟು ಸೃಷ್ಟಿಯಾಗುತ್ತವೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ನಾವು ವಿರೋಧ ಎದುರಿಸಬೇಕಾಗುತ್ತದೆ ಎಂದು ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ರಾಜ್ಯದಲ್ಲಿರುವ ಸರ್ಕಾರಿ ಪಶು ವೈದ್ಯಕೀಯ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳು 15% ಎನ್ ಆರ್ ಐ ಕೋಟಾವನ್ನು ಹೊಂದಿವೆ. ಎನ್ ಆರ್ ಐ ಕೋಟಾದಿಂದ ಈ ವಿಶ್ವವಿದ್ಯಾಲಯಗಳು ಉತ್ತಮ ಸೌಲಭ್ಯಗಳು ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಹಾಯ ಮಾಡುತ್ತವೆ ಎಂದು ಯುಜಿಸಿ ಅಧ್ಯಕ್ಷರಿಗೆ ಸಚಿವರು ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

    2025-26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 15% ಎನ್ ಆರ್ ಐ ಕೋಟಾವನ್ನು ಪ್ರಾರಂಭಿಸಲು ರಾಜ್ಯದ ಪ್ರಸ್ತಾವನೆಗೆ ಅನುಮತಿ ಸಿಗುತ್ತದೆ ಎಂಬ ಭರವಸೆಯನ್ನು ಶರಣಪ್ರಕಾಶ್ ಪಾಟೀಲ್ ವ್ಯಕ್ತಪಡಿಸಿದ್ದಾರೆ.

     

  • ಬಡಜನರ ಸಮಸ್ಯೆ ಅಂತಃಕರಣದಿಂದ ಪರಿಹರಿಸಿ: ಜಿಲ್ಲಾಡಳಿತಕ್ಕೆ ಒತ್ತಾಯಿಸಿದ ನಟ

    ಬಡಜನರ ಸಮಸ್ಯೆ ಅಂತಃಕರಣದಿಂದ ಪರಿಹರಿಸಿ: ಜಿಲ್ಲಾಡಳಿತಕ್ಕೆ ಒತ್ತಾಯಿಸಿದ ನಟ

    • ಶಾಸ್ತಿçನಗರ ಮದನಪುರ ಸ್ಲಂ ನಿವಾಸಿಗಳ ಹೋರಾಟದ 220ನೇ ದಿನಕ್ಕೆ ಚಿತ್ರನಟ ಚೇತನ ಅಹಿಂಸಾ ಭೇಟಿ; ಬೆಂಬಲ

    ಯಾದಗಿರಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಕಳೆದ 7 ತಿಂಗಳಿನಿAದ ನಡೆಸುತ್ತಿರುವ ಹೋರಾಟದ 220ನೇ ದಿನವಾದ ಶನಿವಾರ ಸಾಮಾಜಿಕ ಚಿಂತಕ, ಚಿತ್ರನಟ ಚೇತನ ಅಹಿಂಸಾ ಭೇಟಿ ನೀಡಿ ಸಮಸ್ಯೆ ಆಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ವೀರಭಾರತಿ [ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ ಶಾಸ್ತಿçನಗರದಲ್ಲಿ ವಾಸಿಸುತ್ತಿರುವ ಬಡವರು ಕೂಲಿಕಾರರು ಕಳೆದ 70 ವರ್ಷಕ್ಕೂ ಹಿಂದಿನಿAದ ಸರ್ಕಾರಿ ಜಾಗೆಯಲ್ಲಿಯೇ ವಾಸಿಸುತ್ತಿದ್ದು ಹಕ್ಕು ಪತ್ರ ನೀಡುವಂತೆ ಮಾಡಿದ ಹೋರಾಟ ನಿರಂತರವಾಗಿ ನಡೆಯುತ್ತಿದೆ ಆದರೆ ಭೂಮಾಫಿಯಾದವರ ಕಪಿಮುಷ್ಟಿಯಿಂದ ಸತ್ಯ ಹೊರಬರದೆ ಜನತೆಗೆ ಅನ್ಯಾಯವಾಗುತ್ತಿದೆ.

    ಬಡ ಜನತೆಯ ಬಳಿ ಭೂಮಾಫಿಯಾದವರು ಷಡ್ಯಂತ್ರ ಮಾಡಿ ನಗರಸಭೆಗೆ ಎಸ್.ಎ.ಎಸ್ ತೆರಿಗೆ ಪಾವತಿಸುವ ವೇಳೆ ಪಕ್ಕದ ಖಾಸಗಿ ಜಮೀನು ಸರ್ವೇ ನಂ.ನ್ನು ಬರೆÀದು ತುಂಬಿಸಿಕೊAಡು ವಂಚಿಸಲಾಗಿದೆ ಇದರಲ್ಲಿ ಭೂ ಮಾಫಿಯಾಗಳ ಕೈವಾಡವಿದೆ ಎಂದು ಹೇಳಿ ಸಮಸ್ಯೆಯನ್ನು ವಿವರಿಸಿದರು.

    ನಟ ಚೇತನ ಅಹಿಂಸಾ ಅವರು ಮಾತನಾಡಿ, ಬಡಜನರು ಮಳೆ, ಚಳಿ, ಬಿಸಿಲು ಎನ್ನದೆ ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲಾಡಳಿತ ಮಾನವೀಯತೆಯ ನೆಲೆಯಲ್ಲಿ ಸ್ಪಂದಿಸಬೇಕು ಎಂದು ಹೇಳಿದರು.

    ಸುಮಾರು 50 ವರ್ಷಗಳಿಂದ ಸ್ಥಳದಲ್ಲಿ ವಾಸಿಸುತ್ತಿರುವ ಬಡ ಕೂಲಿಕಾರ ಜನಗಳಿಗೆ ಅವರ ಬೇಡಿಕೆ ಈಡೇರಿಸಲು ಹಿಂದೇಟು ಹಾಕಬಾರದು ಎಂದು ಒತ್ತಾಯಿಸಿದ ಅವರು ಜಿಲ್ಲಾಧಿಕಾರಿಗಳು ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು ಬಡಜನತೆಯ ಗೋಳು ಪರಿಹರಿಸಲು ಮುಂದಾಗಬೇಕೆAದು ನುಡಿದರು.

    ಸುದೀರ್ಘ ಕಾಲದಿಂದ ವಾಸವಾಗಿರುವ ಸ್ಥಳದ ಬಗ್ಗೆ ಒಂದು ನಿರ್ಣಯಕ್ಕೆ ಬರಲು ಆಗುವುದಿಲ್ಲ ಎಂದರೆ ಸ್ಥಳೀಯ ಆಡಳಿತ ಹಾಗೂ ಸಂಬAಧಪಟ್ಟವರು ಜನತೆಯ ಅಹವಾಲು ಆಲಿಸಿ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಅವರು ನುಡಿದರು.

    ತದನಂತರ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಅವರನ್ನು ಭೇಟಿ ಮಾಡಿ ಬಡ ಜನತೆಯ 220 ದಿನಗಳ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

    ಈ ಕುರಿತು ಜಿಲ್ಲಾಧಿಕಾರಿಗಳಿಗೂ ಮಾತನಾಡುವುದಾಗಿ ತಿಳಿಸಿದ ಅವರು ಜನಪ್ರತಿನಿಧಿಗಳು ಜಿಲ್ಲಾಡಳಿತ ನಗರಾಡಳಿತಗಳು ಶಾಸ್ತಿçನಗರ ಜನಗಳ ನೋವಿಗೆ ಸ್ಪಂದಿಸಬೇಕೆAದು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ರಂಗನಾಥ ಬಾಗ್ಲಿ, ಸೈದಪ್ಪ ಕೂಲೂರು, ಗಿರೀಶ ಚಟ್ಟೇರಕರ್, ರಮೇಶ ಕಟ್ಟಿಮನಿ ಸೇರಿದಂತೆ ಶಾಸ್ತಿçನಗರ ನಿವಾಸಿಗಳಾದ ಗೌರಮ್ಮ, ವಿಜಯಲಕ್ಷಿö್ಮÃ, ಗಂಗಮ್ಮ, ಮಹೆಬೂಬಿ, ಖಾಜಾಬಿ ಇನ್ನಿತರರು ಉಪಸ್ಥಿತರಿದ್ದರು.