Author: Satyakam NewsDesk

  • ಉತ್ತಮ ಆರೋಗ್ಯಕ್ಕೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿ: ಸಚಿವ ದರ್ಶನಾಪುರ

    ಉತ್ತಮ ಆರೋಗ್ಯಕ್ಕೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿ: ಸಚಿವ ದರ್ಶನಾಪುರ

    ಸತ್ಯಕಾಮ ವಾರ್ತೆ ಯಾದಗಿರಿ:

    ಪರಿಪೂರ್ಣ ವಿದ್ಯಾರ್ಥಿಯಾಗಲು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ದೈಹಿಕ-ಮಾನಸಿಕ ಉತ್ತಮ ಆರೋಗ್ಯಕ್ಕೆ ಕಡ್ಡಾಯ ರೂಡಿ‌ ಮಾಡಿಕೊಳ್ಳಬೇಕೇಂದು ಜಿಲ್ಲಾ ಉಸ್ತುವಾರಿ‌ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಕ್ರೀಡಾಪಟುಗಳಿಗೆ ಕರೆ ನೀಡಿದರು.

    ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ‌ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಸೋಮವಾರ ಆಯೋಜಿಸಿದ್ದ “ಕಲಬುರಗಿ ವಿಭಾಗ ಮಟ್ಟದ 14/17 ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಥ್ರೋಬಾಲ್ ಕ್ರೀಡಾಕೂಟ” ಉದ್ಘಾಟಿಸಿ ಅವರು ಮಾತನಾಡಿದರು.

    ಕ್ರೀಡೆಗಳಲ್ಲಿ ಸೋಲು,ಗೆಲುವು ಮುಖ್ಯವಲ್ಲ, ಭಾಗವಹಿಸಿ ಗುರಿ ಮುಟ್ಟುವ ಉದ್ದೇಶವಿರಬೇಕೆಂದರು. ಹಿಂದುಳಿದ‌ ಜಿಲ್ಲೆಯೆಂಬ ಹಣೆಪಟ್ಟಿ ಅಳಿಸಲು ವಿದ್ಯಾರ್ಥಿಗಳು ಓದು ಮತ್ತು ಕ್ರೀಡೆಗಳನ್ನು ಸಮನಾಗಿ ಸ್ವೀಕರಿಸಿದಾಗ ಮಾತ್ರ ಸಾಧ್ಯವಾಗುತ್ತದೆ.‌ ಇಂದು ಕ್ರೀಡಾಕ್ಷೇತ್ರ ವ್ಯಾಪಕವಾಗಿ ಬೆಳೆದಿದೆ. ಇಲ್ಲಿಯೂ ಸಾಧನೆ ಮಾಡುವ ಮೂಲಕ ತಮ್ಮ ಜೀವನ ರೂಪಿಸಿಕೊಂಡು ಜಿಲ್ಲೆಯ ಮತ್ತು ದೇಶದ ಕೀರ್ತಿ ವಿಶ್ವವ್ಯಾಪಿ ಪಸರಿಸಬಹುದೆಂದು ಸಚಿವರು ಬಹು ಮಾರ್ಮಿಕವಾಗಿ ಹೇಳಿದರು.

    ದೇಶಿ ಕ್ರೀಡೆಗಳಿಗೆ ಸರ್ಕಾರಗಳು ಈಗ ಹೆಚ್ಚು ಉತ್ತೇಜನ ನೀಡುತ್ತಿವೆ. ನಮ್ಮ ಭಾಗದ ಕ್ರೀಡೆಗಳಾದ ಕೋಕೋ, ಕಬ್ಬಡಿ, ಕುಸ್ತಿ, ಕೇರಂ, ಬಿಲ್ಲುಗಾರಿಗೆ, ವೇಗದ ಓಟ ಹೀಗೆ ಅನೇಕ ಕ್ರೀಡೆಗಳಲ್ಲಿ ಮಕ್ಕಳು ತಮ್ಮ ಸಾಧನೆ ಮೆರೆಯಬೇಕು.ಕ್ರೀಡಾ ಕ್ಷೇತ್ರದಲ್ಲಿ ಪರಿಪೂರ್ಣ ಪರಿಣತಿ ಹೊಂದಿದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಸಚಿವರು ಹೇಳಿದರು.

    ಜಿಲ್ಲಾ ಕ್ರೀಡಾಂಗಣದಲ್ಲಿ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಇಲ್ಲಿನ‌ ಅಧಿಕಾರಿ ಕ್ರಮ‌ ತೆಗೆದುಕೊಳ್ಳಬೇಕು, ಕ್ರೀಡಾಗಳುಗಳಿಗೆ ಯಾವುದೇ ತೊಂದರೆಯಾಗದಂತೆಯೇ ಅಚ್ಚು ಕಟ್ಟಾದ ವ್ಯವಸ್ಥೆ ಮಾಡಬೇಕೆಂದು ಸಚಿವರು ಸೂಚಿಸಿದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಸಾಧನೆ ಮೆರೆದಿದ್ದು ನಮಗೆಲ್ಲ ಹೆಮ್ಮೆ ಎಂದರು. ಆಟ ಆಡುವಾಗ ಸ್ಪರ್ಧಾ ಮನೋಭಾವನೆ ಇರಲಿ, ನಂತರ ಎಲ್ಲರೂ ಅಣ್ಣ,ತಮ್ಮ,ಅಕ್ಕ, ತಂಗಿಯರಂತೇ ಇರಬೇಕು, ಆಸಕ್ತಿ ಇರುವ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆ ಅನಾವರಣ ಮಾಡಬೇಕು.ಸೋಲು ಗೆಲುವಿಗೆ ಮಹತ್ವ ನೀಡದೇ ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಬೇಕು.ಸೋತಾಗ ಮನನೊಂದದೇ ಧೈರ್ಯದಿಂದ ಮುಂದಿನ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಶಾಸಕರು ಹೇಳಿದರು.

    ಆರಂಭದಲ್ಲಿ ಕ್ರೀಡಾಮಕ್ಕಳಿಂದ ಕವಾಯಿತು ನಡೆಯಿತು, ಕ್ರೀಡಾಜ್ಯೋತಿಗೆ ಸಚಿವರು, ಶಾಸಕರು, ಅಧಿಕಾರಿಗಳು ಸ್ವಾಗತಿಸಿಕೊಂಡರು.

    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ, ಡಿಡಿಪಿಐ ಸಿ.ಎಸ್.ಮುದೋಳ್, ಯುವಜನ ಸೇವಾ ಮತ್ತು ಕ್ರೀಡಾ ಅಧಿಕಾರಿಗಳಾದ ರಾಜು ಬಾವಿಹಳ್ಳಿ, ಡಯಟ್ ಪ್ರಾಂಶುಪಾಲ ವೃಷಬೇಂದ್ರ, ಅನೀಲಕುಮಾರ ನಾಯಕ್, ಚಂದ್ರಶೇಖರಗೌಡ ಪಾಟೀಲ್, ಅಶೋಕ ಕೆಂಭಾವಿ, ಮುಖಂಡರಾದ ಬಸರೆಡ್ಡಿ ಅನಪೂರ, ಸಿದ್ದಲಿಂಗರಡ್ಡಿ, ಬಸವರಾಜ ಪಾಟೀಲ್ ಬಿಳ್ಹಾರ್ ಸೇರಿದಂತೆಯೆ ಇತರರಿದ್ದರು.

    ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು. ಕಲ್ಬುರ್ಗಿ ವಿಭಾಗದ
    ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಜಿಲ್ಲೆಗಳು ಸೇರಿದಂತೆಯೇ ಏಳು ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ಥ್ರೋಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟದ ತಂಡಕ್ಕೆ ಆಯ್ಕೆಯಾದ ಕೆ.ಹೊಸಳ್ಳಿ ಗ್ರಾಮ ದ ವಿದ್ಯಾರ್ಥಿ ಕೆ.ಸಿದ್ಧಾರ್ಥ ಅವರನ್ನು ಸಚಿವರು ಸನ್ಮಾನಿಸಿದರು.

  • ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ: ಪಿ.ರಾಜೀವ್

    ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ: ಪಿ.ರಾಜೀವ್

    ಸತ್ಯಕಾಮ ವಾರ್ತೆ ಯಾದಗಿರಿ:

    ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದ್ದು, ಗ್ಯಾರಂಟಿ ಯೋಜನೆಗಳಿಂದ ಬೀದಿಗೆ ಬಂದಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದರು.

    ಸರ್ಕಾರ ನಡೆಸುತ್ಯಿರುವ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆ ನೀಡುತ್ತಿದ್ದಾರೆ. ಆದರೆ, ಅದದರ ಸಾಲವನ್ನು ರಾಜ್ಯದ ಶ್ರೀಸಾಮಾನ್ಯ ತೆರಿಗೆ ಹಣದಿಂದಲೇ ಭರಿಸಬೇಕಿದೆ. ಪಡಿತರ ಅಕ್ಕಿಯನ್ನು ನೀಡಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಈ ಸರ್ಕಾರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

    ಮುಡಾದಲ್ಲಿ ಏನು ಅಕ್ರಮ ನಡೆದೇ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ, ವಕ್ಫ್ ಮಂಡಳಿಗೆ ಬಿಜೆಪಿ ಅವಧಿಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಹೊಸ ಕಥೆ ಕಟ್ಟಲಾಗುತ್ತಿದೆ. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಇಂಥ ಕೆಲಸ ನಾವು ಮಾಡಿಲ್ಲ. ಸಚಿವ ಜಮೀರ್ ಅಹ್ಮದ್ ಅವರು ವಕ್ಫ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸೂಚನೆ ಮೇರೆಗೆ ಈ ಸಭೆ ನಡೆಸಲಾಗಿದೆ ಎಂದು ನಡುವಳಿಯಲ್ಲಿ ಬರೆಸಿದ್ದಾರೆ. ಹೀಗಾಗಿ ಜಮೀರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.

    ವಕ್ಫ್ ಹಗರಣವನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದ್ದು, ನಮ್ಮ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೀದರ್ ನಿಂದ ಡಿ.04ರಂದು ಬೀದರ್ ಮತ್ತು ಕಲಬುರಗಿಯಲ್ಲಿ ಹೋರಾಟ ಮಾಡಲಿದ್ದಾರೆ. 5 ರಂದು ಬೆಳಗ್ಗೆ ಯಾದಗಿರಿಗೆ ಆಗಮಿಸಲಿದ್ದಾರೆ. ಸರ್ಕಾದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ನಾವು ಸದನದ ಹೊರಗೆ ಮತ್ತು ಒಳಗೆ ಹೋರಾಟ ನಡೆಸಲಿದ್ದೇವೆ ಎಂದರು.

    ಪಕ್ಷದಲ್ಲಿ ಯಾವುದೇ ಬಣ ರಾಜಕೀಯ ನಡೆದಿಲ್ಲ. ವಕ್ಫ್ ಹೋರಾಟಕ್ಕೆ ಬಿಜೆಪಿ ವರೀಷ್ಠರು ರಾಜ್ಯಾದ್ಯಂತ ಮೂರು ತಂಡ ರಚಿಸಿದ್ದಾರೆ. ಅದರಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ತಂಡವಿದೆ ಎಂದ ರಾಜೀವ್, ಬಿಜೆಪಿಯಲ್ಲಿ ಕೆಲ ಭಿನ್ನಮತ ನಡೆಯುತ್ತಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಸಿದೆ ಎಂದು ಒಪ್ಪಿಕೊಂಡರು.

    ಬೀದರ್ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಪಕ್ಷದ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ (ರಾಜುಗೌಡ),ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ,ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ ಮತ್ತು ಶರಣು ತಳ್ಳಿಕೇರಿ,ಪ್ರಮುಖರಾದ ನಾಗರತ್ನ ಕುಪ್ಪಿ, ರಾಚನಗೌಡ ಮುದ್ನಾಳ,ಮಹೇಶರಡ್ಡಿ ಮುದ್ನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಮೇಲಪ್ಪ ಗುಳಗಿ,ಜಿಲ್ಲಾ ವಕ್ತಾರ ಹಣಮಂತ ಇಟಗಿ,ಎಚ್.ಸಿ.ಪಾಟೀಲ್, ನಗರಸಭೆ ಉಪಾಧ್ಯಕ್ಷೆ ರುಕೀಯ ಬೇಗಂ ಇದ್ದರು…

  • ವಿದ್ಯಾಥಿಗಳಲ್ಲಿ ಏಕಾಗ್ರತೆ ಬಹುಮುಖ್ಯ ಪಾತ್ರ ವಹಿಸುತ್ತದೆ : ಶಾಸಕ ತುನ್ನೂರ್

    ವಿದ್ಯಾಥಿಗಳಲ್ಲಿ ಏಕಾಗ್ರತೆ ಬಹುಮುಖ್ಯ ಪಾತ್ರ ವಹಿಸುತ್ತದೆ : ಶಾಸಕ ತುನ್ನೂರ್

    ಸತ್ಯಕಾಮ ವಾರ್ತೆ ಯಾದಗಿರಿ:
    ವಿದ್ಯಾರ್ಥಿಗಳು ಶ್ರದ್ಧಾ ಭಕ್ತಿಯಿಂದ ತಮ್ಮ ನಿತ್ಯ ದಿನಚರಿಗಳಲ್ಲಿ ತೊಡಗಿಸಿಕೊಂಡು, ಧ್ಯಾನ ಹಾಗೂ ವ್ಯಾಯಾಮಗಳಂತಹ ಕ್ರಿಯೆಗಳ ಮೂಲಕ ಏಕಾಗ್ರತೆಯಿಂದ ವೃದ್ಧಿಯಾಗಬೇಕು. ಸರ್ಕಾರದ ವತಿಯಿಂದ ಆಯುಷ್ ಇಲಾಖೆಯ ವಿದ್ಯಾರ್ಥಿ ಚೇತನ ವಿಶೇಷ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು ಜಿಲ್ಲೆಯ ವಿದ್ಯಾರ್ಥಿಗಳು ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಬೇಕೆಂದು ನಗರ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ್ ಸಲಹೆ ನೀಡಿದರು.


    ತಾಲೂಕಿನ ಮುಂಡರಗಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಸಮಾಜದ ಕಲ್ಯಾಣ ಇಲಾಖೆ, ಎಸ್.ಸಿ.ಎಸ್.ಪಿ ಮತ್ತು ಟಿಎಸ್.ಪಿ ಯೋಜನೆಯಡಿಯಲ್ಲಿ ಆಯೋಜಿಸಿದ ವಿದ್ಯಾರ್ಥಿ ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಪರಿಶ್ರಮದ ದಾರಿಯೇ ಹೊರತು ಅಡ್ಡ ದಾರಿಯ ಮಾರ್ಗ ಎಂದಿಗೂ ಸಫಲವಾಗುವುದಿಲ್ಲ. ಸರ್ಕಾರದಿಂದ ಸಿಗುವ ಅನೇಕ ಯೋಜನೆಗಳನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಳಸಿಕೊಂಡು ವಿದ್ಯಾಭ್ಯಾಸವನ್ನು ಉತ್ತಮ ರೀತಿಯಿಂದ ನಡೆಸಿಕೊಂಡ ಸಾಗಬೇಕು ಎಂದು ಹೇಳಿದರು.

    ವಿದ್ಯಾರ್ಥಿಗಳು ಬೆಳಿಗ್ಗೆ ಬ್ರಾಹ್ಮಿ ಮೂಹುರ್ಥದಲ್ಲಿ ಎದ್ದು ಸೂರ್ಯ ನಮಸ್ಕಾರದ ಮೂಲಕ ದೇಹ ದಂಡಿಸಿ, ಓದಲು ಕೂರಬೇಕು. ಏಕಾಗ್ರತೆಗಾಗಿ ಧ್ಯಾನವನ್ನು ರೂಢಿಸಿಕೊಂಡು ತಮ್ಮ ದಿನಚರಿಗಳನ್ನು ಆರಂಭಿಸುವುದು ಉತ್ತಮ ವಿದ್ಯಾರ್ಥಿಯ ಲಕ್ಷಣವೆಂದರು.

    ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಾದ ಚನ್ನಬಸವ ಅವರು ಮಾತನಾಡಿ, ಇಂತಹ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಏರ್ಪಡಿಸುತ್ತಿದ್ದು, ಆಯುಷ್ ಇಲಾಖೆಯ ವಿದ್ಯಾರ್ಥಿ ಚೇತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಇದರ ಮಹತ್ವ ಅರಿಯಬೇಕೆಂದು ತಿಳಿಸಿದರು.

    ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ವಂದನಾ.ಜೆ ಅವರು ಮಾತನಾಡಿ, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ, ವಸತಿ ಶಾಲಾ ಮಕ್ಕಳನ್ನು ಗಮನದಲಿಟ್ಟುಕೊಂಡ ವಿದ್ಯಾರ್ಥಿ ಚೇತನ ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ವಿದ್ಯಾರ್ಥಿ ಚೇತನ ಕಾರ್ಯಕ್ರಮ ಮಹತ್ವ ಪೂರ್ಣವಾದದ್ದು, ಯೋಗ ತರಬೇತಿ ಸೇರಿದಂತೆ ದೈಹಿಕ ಚಟುವಟಿಕೆ, ವ್ಯಾಯಮಗಳನ್ನು ಸಹ ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

    ವೈದ್ಯರಾದ ಡಾ.ಪ್ರಕಾಶ ಎಚ್.ರಾಜಾಪುರ ಅವರು ಪ್ರಾಸ್ತಾವಿಕ ಮಾತುಗಳಾಡಿದರು. ವಸತಿ ಶಾಲಾ ಮಕ್ಕಳಿಗೆ ದಿನಚರಿಯನ್ನು ವೈದ್ಯೆಧಿಕಾರಿಯಾದ ಡಾ.ಎಂ.ಬಿ.ಪಾಟೀಲ ನೀಡಿದರು. ಸಂಗಮೇಶ ಕೆಂಭಾವಿ ಅವರು ನಿರೂಪಿಸಿದರು.
     
    ವೇದಿಕೆ ಮೇಲೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಮಲ್ಲಣ್ಣ ಮಾಲೀಪಾಟೀಲ, ಡಾ.ರಮೇಶ ಸಜ್ಜನ್, ರವಿಕುಮಾರ ಪಾಟೀಲ, ಡಾ.ದೀಪಾ ರಾಠೋಡ, ಯೋಗ ತರಬೇತುದಾರ ಶಿವರೆಡ್ಡಿ, ಮಂಜುನಾಥ ಉಪಸ್ಥಿತರಿದ್ದರು.
  • ಬಿರನಕಲ್ ತಾಂಡಾ ಶಾಲೆಗೆ ನ್ಯಾಯಾಧೀಶ ಕೆ .ಮರಿಯಪ್ಪ ಭೇಟಿ

    ಬಿರನಕಲ್ ತಾಂಡಾ ಶಾಲೆಗೆ ನ್ಯಾಯಾಧೀಶ ಕೆ .ಮರಿಯಪ್ಪ ಭೇಟಿ

    ಸತ್ಯಕಾಮ ವಾರ್ತೆ ವಡಗೇರಾ:

    ತಾಲೂಕಿನ ಬೀರನಕಲ್ ತಾಂಡದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರದಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ನ್ಯಾಯಾಧೀಶರಾದ ಗೌರವಾನ್ವಿತ ಕೆ. ಮರಿಯಪ್ಪ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸಾಮಾಜಿಕ ಹೋರಾಟಗಾರ್ತಿ ರುದ್ರಾಂಬಿಕ ಆರ್ .ಪಾಟೀಲ್ .ಚಟ್ನಳ್ಳಿ ರವರು ಮೇಲ್ಚಾವಣಿ ದುರಸ್ತಿ ಹಾಗೂ ಮೂಲಭೂತ ಸೌಕರ್ಯಗಳು ಒದಗಿಸುವಂತೆ ಪತ್ರಿಕೆ ಹೇಳಿಕೆ ಮೂಲಕ ಮನವಿ ಮಾಡಿಕೊಂಡಿದ್ದರು. ಶುಕ್ರವಾರ ಭೇಟಿ ನೀಡಿದ ನ್ಯಾಯಾಧೀಶರು ಬಿಸಿ ಊಟದ ವ್ಯವಸ್ಥೆ ಶಾಲಾ ಕೊಣೆ ಶೌಚಾಲಯ ಹಾಗೂ ಕುಡಿಯುವ ನೀರಿನ ಪೂರೈಕೆ ಕುರಿತು ಮಾಹಿತಿ ಪಡೆದರು ಬಿಸಿ ಊಟಕ್ಕೆ ಸಂಬಂಧಿಸಿದಂತೆ ಸ್ವಚ್ಛತೆ ಕಾಪಾಡಿಕೊಳ್ಳಲು ಸಿಬ್ಬಂದಿಗಳಿಗೆ ಹೇಳಿದರು.

    ವಿದ್ಯಾರ್ಥಿಗಳೊಂದಿಗೆ ಅವರ ಸಮಸ್ಯೆಗಳ ಕುರಿತು ಚರ್ಚಿಸಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಿ ಕೊಡುವ ಭರವಸೆ ನೀಡಿದರು ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

  • ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳ ಥ್ರೋಬಾಲ್ ಕ್ರೀಡಾಕೂಟ ಕಾರ್ಯಕ್ರಮ

    ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳ ಥ್ರೋಬಾಲ್ ಕ್ರೀಡಾಕೂಟ ಕಾರ್ಯಕ್ರಮ


    ಸತ್ಯಕಾಮ ವಾರ್ತೆ ಯಾದಗಿರಿ:
    2024-25ನೇ ಸಾಲಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಯಾದಗಿರಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಕಲಬುರಗಿ ವಿಭಾಗ ಮಟ್ಟದ 14/17 ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಥ್ರೋಬಾಲ್ ಕ್ರೀಡಾಕೂಟವನ್ನು ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 2024ರ ಡಿಸೆಂಬರ್ 2ರ ಸೋಮವಾರ ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
    ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ  ಶರಣಬಸಪ್ಪ ದರ್ಶನಾಪೂರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ  ಎಸ್.ಮಧು ಬಂಗಾರಪ್ಪ, ಹಾಗೂ ಕರ್ನಾಟಕ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕಛಲವಾದಿ ಟಿ.ನಾರಾಯಣಸ್ವಾಮಿ ಅವರ ಘನ ಉಪಸ್ಥಿತಿಯಲ್ಲಿ ನೆರವೇರಿಸುವರು.
    ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ  ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅಧ್ಯಕ್ಷತೆ ವಹಿಸುವರು. ರಾಯಚೂರು ಲೋಕಸಭಾ ಸದಸ್ಯರು  ಜಿ.ಕುಮಾರ ನಾಯಕ, ಕಲಬುರಗಿ ಲೋಕಸಭಾ ಸದಸ್ಯರು  ರಾಧಾಕೃಷ್ಣ ದೊಡ್ಡಮನಿ, ವಿಧಾನ ಪರಿಷತ್ತು ಸದಸ್ಯರು ಬಿ.ಜಿ.ಪಾಟೀಲ್, ಡಾ.ಚಂದ್ರಶೇಖರ ಬಿ.ಪಾಟೀಲ್,  ಶಶೀಲ್ ಜಿ.ನಮೋಶಿ, ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ  ಶರಣಗೌಡ ಕಂದಕೂರ, ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ  ರಾಜಾ ವೇಣುಗೋಪಾಲ ನಾಯಕ, ಯಾದಗಿರಿ ನಗರಸಭೆ ಅಧ್ಯಕ್ಷರು ಕುಮಾರಿ ಲಲಿತಾ ಅನಪೂರ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು  ವಿನಾಯಕ ಮಾಲಿ ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.
    ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ, ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರು ಡಾ.ಆಕಾಶ ಎಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಗೌರವಾನ್ವಿತರಾಗಿ ಪಾಲ್ಗೊಳ್ಳುವರು.
  • ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನಾಚರಣೆ.

    ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನಾಚರಣೆ.

    ಸತ್ಯಕಾಮ ವಾರ್ತೆ ಯಾದಗಿರ:-
    ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಪ್ರಸ್ತಾವನೆ ಓದಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಈ ದೇಶದಲ್ಲಿ ಜಾರಿಗೊಳಿಸಿದ ದಿನವಾದ   ನ 26 ನ್ನು  ಇಡೀ ದೇಶ ಸಂಭ್ರಮದಿಂದ ಸಂವಿಧಾನ ದಿನ ಎಂದು ಆಚರಣೆ ಮಾಡುವಂತೆ ಸರಕಾರಿ ಕಾರ್ಯಕ್ರಮ ಆಗಿ ಆದೇಶ ಮಾಡಿದವರು ಪ್ರಧಾನಿ  ನರೇಂದ್ರ ಮೋದಿ,ಅವರು ಪ್ರಧಾನಿ ಯಾದ ನಂತರ 2015 ರಲ್ಲಿ ಮಾಡಿದ ಮೊದಲ ಕೆಲಸ ಇದಾಗಿದ್ದು. ಅಂದಿನಿಂದ ಪ್ರತಿವರ್ಷ ಸಂವಿಧಾನ ದಿನ ಎಂದು ಆಚರಿಸಿಕೊಂಡು ಬಂದಿದೆಯೆಂದು ಹೇಳಿದ್ದಾರೆ.

    ಸಂವಿಧಾನವನ್ನು ಆಡಳಿತದ ಧರ್ಮ ಗ್ರಂಥವಾಗಿದೆ ಇದನ್ನು ರಚಿಸಿ ಭಾರತ ಸರ್ಕಾರಕ್ಕೆ ಸಮರ್ಪಿಸಿದ ಅತ್ಯಂತ ಸ್ಮರಣೀಯ ದಿನವಾಗಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ಮಾತನಾಡಿದ ಅವರು ಇತ್ತೀಚಿಗೆ ಸಂವಿಧಾನದ ತಿದ್ದುಪಡಿ ಬಗ್ಗೆ ಅಥವಾ ಬದಲಾಯಿಸುವ ಬಗ್ಗೆ ಸಾಕಷ್ಟು ಚರ್ಚೆಗಳು ರಾಜಕೀಯ ವಲಯ ಹಾಗೂ ಸಾಮಾಜಿಕ ವಲಯಗಳಲ್ಲಿ ನಡೆಯುತ್ತಿದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಶೇಷವಾಗಿ ಕಾಂಗ್ರೆಸ್ ಪಕ್ಷ ಎಲ್ಲಾ  ಪ್ರಚಾರ ಸಭೆಗಳಲ್ಲಿ ಭಾರತ ಸಂವಿಧಾನದ ಸಣ್ಣ ಪುಸ್ತಕವನ್ನು ಕೈಯಲ್ಲಿ ಹಿಡಿದು ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತದೆ ಹಾಗೂ ಈಗ ಇರುವ ರಿಸರ್ವೇಶನ್  ತೆಗೆಯುತ್ತಾರೆ ಎಂದು ವಿಷ ಬೀಜ ಬಿತ್ತಿದರು ಎಂದರು.

    ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಮಾತನಾಡಿದ ಅವರು ಕಾಂಗ್ರೆಸ್ ಪಾರ್ಟಿ ತನ್ನ ಸ್ವಾರ್ಥ ಹಿತಾಸಕ್ತಿಗಾಗಿ  ಸಂವಿಧಾನದ ತಿದ್ದುಪಡಿ ಮಾಡಿರುವುದನ್ನು, ಸಂವಿಧಾನದ ಮೂಲ ಆಶಯಗಳಿಗೆ ವಿರೋಧವಾಗಿ ನಡೆದುಕೊಂಡಿರುವುದನ್ನು  ಜನರಿಗೆ ತಿಳಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

    ಈ ಸಂದರ್ಭದಲ್ಲಿ ನಿಗಮದ ಮಾಜಿ ಅಧ್ಯಕ್ಷ ದೇವಿಂದ್ರನಾಥ ನಾದ,ವೆಂಕಟರೆಡ್ಡಿ ಅಬ್ಬೆತುಮಕೂಮಕೂರಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ,ಬಸವರಾಜ್ ಚಂಡರಕಿ,ಜಿಲ್ಲಾ ಬಿಜೆಪಿ ವಕ್ತಾರರಾದ ಹಣಮಂತ ಇಟಗಿ,ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ಸೊನ್ನದ ಮತ್ತು ಮಾರುತಿ ಕಲಾಲ್ ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಗೇರಿ,ಮೌನೇಶ್ ಬೆಳಗೆರೆ,ಸ್ನೇಹ ರಾಸಳಕರ,ರಾಜಶೇಖರ ಕಾಡಮನೋರ, ಗೋಪಾಲ ದಾಸನಕೇರಿ,ಮಲ್ಲಿಕಾರ್ಜುನ ಜಲ್ಲಪ್ಪನೂರ,ಚಂದ್ರಶೇಖರ ಕಡೆಸೂರ,ಭೀಮಬಾಯಿ,ನಾಗಪ್ಪ ಗಚ್ಚಿನಮನಿ,ಶ್ರೀಕಾಂತ್ ಸುಂಗಲ್ಕರ,ನಾಗರೆಡ್ಡಿ ಸೇರಿದಂತೆ ಅನೇಕಕಾರ್ಯಕರ್ತರು  ಪಕ್ಷದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
  • ಮುಖ್ಯಮಂತ್ರಿಗಳ ಜೊತೆ ಸಂವಾದ ಕಾರ್ಯಕ್ರಮಕ್ಕೆ ಗ್ರಾಮೀಣ ವಿದ್ಯಾರ್ಥಿಗಳ ಆಯ್ಕೆಗೆ ಹರ್ಷ 

    ಮುಖ್ಯಮಂತ್ರಿಗಳ ಜೊತೆ ಸಂವಾದ ಕಾರ್ಯಕ್ರಮಕ್ಕೆ ಗ್ರಾಮೀಣ ವಿದ್ಯಾರ್ಥಿಗಳ ಆಯ್ಕೆಗೆ ಹರ್ಷ 

    ಸತ್ಯಕಾಮ ವಾರ್ತೆ ಗುರುಮಠಕಲ್ :

    ತಾಲೂಕಿನ ಯಲೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿಯ ಸಣ್ಣಾಮೀರ ತಂ. ಸಾಬಣ್ಣಾ ಕಟಗಿ ಶಾಪುರ ವಿದ್ಯಾರ್ಥಿ ಹಾಗೂ ಸರ್ಕಾರಿ ಪ್ರೌಢ ಶಾಲೆ ಹತ್ತೀಗೂಡುರನ ಭಾಗ್ಯ ಶ್ರೀ ತಂ. ಭೀಮರಾಯ ಯಕ್ಷಂತೀ ಗ್ರಾಮದ 10ನೇ ತರಗತಿಯ ವಿದ್ಯಾರ್ಥಿನಿ ಯಾದಗೀರ ಜಿಲ್ಲಾಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಸಭೆಯಿಂದ ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಗೆ ಆಯ್ಕೆಯಾಗಿದ್ದಾರೆ.

    ಇದೇ ದಿ 25.11.2024 ರಂದು ಕರ್ನಾಟಕ ರಾಜ್ಯ ದ ಸನ್ಮಾನ್ಯ ಮುಖ್ಯ ಮಂತ್ರಿಗಳ ಜೊತೆ ನಡೆಯುವ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದು ಯಾದಗಿರಿ ಜಿಲ್ಲಾ ಸಂಘಟಕರು ಹಾಗೂ ಅನಂತ ಸೇವಾ ಟ್ರಸ್ಟ ನ ನಿರ್ದೇಶಕರಾದ ಶರಣಪ್ಪ. ಎಸ್. ಕಂದಕೂರ ತಿಳಿಸಿದರು.

    ಯಾದಗಿರಿ ಜಿಲ್ಲೆಯ ಮಕ್ಕಳ ಸಮಸ್ಯೆಗಳು ಹಾಗೂ ಅವರ ಅಭಿಪ್ರಾಯಗಳನ್ನು ಹೊತ್ತು ಜಿಲ್ಲೆಯ ಪ್ರತಿನಿದಿಗಳಾಗಿ ಭಾಗವಹಿಸಲಿದ್ದು ಈ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರು ಸರ್ವ ಸಿಬ್ಬಂದಿ, ಎಸ್ ಡಿ ಎಮ್ ಸಿ ಅಧ್ಯಕ್ಷರು, ಹಾಗೂ ಎಲ್ಹೇರಿ, ಕಟ್ಟಿಗೆ ಶಾಪುರ್ ಹಾಗೂ ಯಕ್ಷಿಂತೀ, ಹತ್ತಿಗೂಡುರ್ ಗ್ರಾಮಸ್ಥರು ಅಭಿನಂದಿಸಿದ್ದಾರೆ.

    ——-

    ಗ್ರಾಮೀಣ ಪ್ರದೇಶದ ಬಡ ಮತ್ತು ಪ್ರತಿಭಾವಂತ ಮಕ್ಕಳು ಇರುವದನ್ನು ಅನಂತ ಸೇವಾ ಟ್ರಸ್ಟ ಗುರುತಿಸುತ್ತಿದ್ದು ಇದೇ ತರಹ ಹೆಚ್ಚಿನ ಅವಕಾಶಗಳು ಬಡ ವಿದ್ಯಾರ್ಥಿಗಳಿಗೆ ಸಿಗಲಿ ಎಂದು ಸಂಯೋಜಕ ಆನಂದಕುಮಾರ ಬೂದಿ ಅನಂತ ಟ್ರಸ್ಟ್ ಆಶಿಸಿದ್ದಾರೆ.

  • ನಳಗಳಿಗೆ ನಿಯಮ ಮೀರಿ ಮೋಟಾರು ಅಳವಡಿಸಿದರೆ ಕ್ರಮಕ್ಕೆ ಸೂಚನೆ

    ನಳಗಳಿಗೆ ನಿಯಮ ಮೀರಿ ಮೋಟಾರು ಅಳವಡಿಸಿದರೆ ಕ್ರಮಕ್ಕೆ ಸೂಚನೆ

    ಸತ್ಯಕಾಮ ವಾರ್ತೆ ಯಾದಗಿರಿ :

    ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ನಳಗಳಿಗೆ ಮೋಟಾರ ಅಳವಡಿಸಬಾರದು ಎಂದು ಯಾದಗಿರಿ ನಗರಸಭೆ ಪೌರಾಯುಕ್ತರು ರಜನಿಕಾಂತ ಶೃಂಗೇರಿ ಅವರು ತಿಳಿಸಿದ್ದಾರೆ.

     

    ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ನಳಗಳಿಗೆ ನಿಯಮ ಮೀರಿ ಮೋಟಾರುಗಳನ್ನು ಅಳವಡಿಸುತ್ತಿರುವುದರಿಂದ ಬಡಾವಣೆಯ ಕೊನೆಯ ಭಾಗದ ಮನೆಗಳಿಗೆ ಪೈಪಿನಲ್ಲಿ ನೀರು ತಲುಪದೇ ಇರುವುದರಿಂದ ಇದರಿಂದ ಅನೇಕ ಮನೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರು ಬರದೇ ತೊಂದರೆಯಾಗುತ್ತಿದ್ದು, ಕುಡಿಯುವ ನೀರಿನ ಕೊರತೆ ಉಂಟಾಗುತ್ತಿದೆ ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಮೋಟಾರು ಬಳಸುವುದನ್ನು ನಿಲ್ಲಿಸಿದಲ್ಲಿ ಎಲ್ಲಾ ಮನೆಗಳಿಗೆ ನೀರು ಸಿಗುವ ಸಾಧ್ಯತೆ ಇರುತ್ತದೆ. ಯಾದಗಿರಿ ನಗರದ ಸಾರ್ವಜನಿಕರಲ್ಲಿ ನಗರಸಭೆದಿಂದ ಮನವಿ ತಾವುಗಳು ತಮ್ಮ ನಳಗಳಿಗೆ ಮೋಟಾರ ಅಳವಡಿಸುವುದನ್ನು ನಿಲ್ಲಿಸಬೇಕು, ತಪ್ಪಿದಲ್ಲಿ ನಗರಸಭೆದಿಂದ ದಂಡ ವಿಧಿಸಲಾಗುವುದು ಮತ್ತು ನಗರದಲ್ಲಿರುವ ಅಕ್ರಮ ಸಂಪರ್ಕಗಳನ್ನು 2024ರ ಡಿಸೆಂಬರ್ 15ರ ಒಳಗೆ ನಗರಸಭೆದಿಂದ ನಿಗಧಿಪಡಿಸಲಾದ ಶುಲ್ಕವನ್ನು ಪಾವತಿಸಿ ಸಕ್ರಮ ಮಾಡಿಕೊಳ್ಳಲು ಸಾರ್ವಜನಿಕ ಗಮನಕ್ಕೆ ತಿಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಜೆಜೆಎಂ ಕಾಮಗಾರಿಯಲ್ಲಿ ಗೋಲ್ ಮಾಲ್: ಎಇಇ ವಿರುದ್ದ ಎಫ್ಐಆರ್ 

    ಜೆಜೆಎಂ ಕಾಮಗಾರಿಯಲ್ಲಿ ಗೋಲ್ ಮಾಲ್: ಎಇಇ ವಿರುದ್ದ ಎಫ್ಐಆರ್ 

    ಸತ್ಯಕಾಮ ವಾರ್ತೆ ಯಾದಗಿರಿ: 

    ಜಲಜೀವನ ಯೋಜನೆಯ ಕಾಮಗಾರಿಯಲ್ಲಿ ಸುರಪುರ ಎಇಇ ಹಣಮಂತರಾಯ ಪಾಟೀಲ್ ಅವರು ನಕಲಿ ಬಿಲ್ ಸೃಷ್ಟಿಸಿ ಗೋಲ್ ಮಾಲ್ ಮಾಡಿದ್ದಾರೆಂದು ಆರೋಪಿಸಿ ಆರ್‌ಡಬ್ಲೂಎಸ್ ಇಲಾಖೆಯ ಇಇ ಆನಂದ್ ಅವರು ಬುಧವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

     

    ಸುರಪುರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರಾರದ ಎಇಇ ಹನುಮಂತ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡದೇ ಕಾಮಗಾರಿಯ ಛಾಯಾಚಿತ್ರಗಳು ಕಂಪ್ಯೂಟರ್ ಮಿಕ್ಸಿಂಗ್ ಪೋಟೋ ಸೃಷ್ಠಿಸಿ, ಸರ್ಕಾರದ ಅನುದಾನ ದುರುಪಯೋಗ ಮಾಡಲು ನಕಲಿ ದಾಖಲೆಗಳನ್ನು ತಯಾರಿಸಿರುವದು ಕಂಡು ಬಂದಿದ್ದೂ, ಸಾರ್ವಜನಿಕ ಅಧಿಕಾರಿಯು ದಾಖಲೆಗಳನ್ನು ನಕಲಿಯಾಗಿ ಸೃಷ್ಠಿಸುವುದು ಅಪರಾಧ ಆಗಿರುವದರಿಂದ ಮತ್ತು ಸರ್ಕಾರದ ಅನುದಾನ ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಿರುವದು ಕಂಡು ಬಂದಿರುವ ಹಿನ್ನಲೆ ಎಇಇ ಹಣಮಂತರಾಯ ವಿರುದ್ದ ಬಿ.ಎನ್.ಎಸ್-2023 ಆಕ್ಟ್ ಕಲಂ 336, 340 ನೇದ್ದರಡಿಯಲ್ಲಿ ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಡಾ.ಮಹೇಶ್ ಬಿರಾದಾರ ಅಧಿಕಾರ ಸ್ವೀಕಾರ

    ಡಾ.ಮಹೇಶ್ ಬಿರಾದಾರ ಅಧಿಕಾರ ಸ್ವೀಕಾರ

    ಸತ್ಯಕಾಮ ವಾರ್ತೆ ಯಾದಗಿರಿ:

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ಮಹೇಶ್ ಬಿರಾದಾರ ಅವರು ಅಧಿಕಾರ ಸ್ವೀಕರಿಸಿದರು.

    ಬೀದರ್ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಿಕರಾಗಿ ಸೇವೆ ಸಲ್ಲಿಸಿ ಈಗ ಯಾದಗಿರಿ ಡಿಎಚ್ ಓ ಹುದ್ದೆಗೆ ಆರೋಗ್ಯ ಇಲಾಖೆಯು ವರ್ಗಾವಣೆ ಮಾಡಿದ್ದು,ಹೀಗಾಗಿ ಡಿಎಚ್ ಓ ಆಗಿ ಡಾ.ಮಹೇಶ್ ಬಿರಾದಾರ ಅವರು ಅಧಿಕಾರ ಸ್ವೀಕರಿಸಿದರು.

    ಆರೋಗ್ಯ ಇಲಾಖೆಯಲ್ಲಿ ಸುದೀರ್ಘವಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. ಬೀದರ್ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಿಕರಾಗಿ ಎರಡುವರೆ ಸೇವೆ ಸಲ್ಲಿಸಿ ಈಗ ವರ್ಗಾವಣೆಗೊಂಡಿದ್ದಾರೆ.