Author: Satyakam NewsDesk

  • ನಿಯಮ ಮೀರಿ ಕಟ್ಟಿದ ಕಟ್ಟಡಗಳಿಗೆ ದೊಡ್ಡ ರಿಲೀಫ್

    ನಿಯಮ ಮೀರಿ ಕಟ್ಟಿದ ಕಟ್ಟಡಗಳಿಗೆ ದೊಡ್ಡ ರಿಲೀಫ್

    ರಾಜ್ಯದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ನಿಯಮ ಉಲ್ಲಂಘನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹೆಚ್ಚಿನ ನಾಗರಿಕರು ಪರವಾನಗಿ ಪಡೆದು ಕಟ್ಟಡ ನಿರ್ಮಾಣ ಮಾಡಿದರೂ, ಸ್ಥಳ ಅಭಾವ, ಹೆಚ್ಚುವರಿ ಜಾಗದ ಅವಶ್ಯಕತೆ ಅಥವಾ ತಾಂತ್ರಿಕ ಕಾರಣಗಳಿಂದಾಗಿ ನಿಗದಿತ ಮಾನದಂಡಗಳು ಪಾಲನೆಯಾಗದೆ ಹೋಗಿರುವ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತವೆ. ಈ ಹಿನ್ನೆಲೆಯಲ್ಲಿ ಅನಧಿಕೃತ ಅಥವಾ ನಿಯಮ ಮೀರಿ ನಿರ್ಮಿಸಲಾದ ಕಟ್ಟಡಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಡವಿರುವುದರ ಜೊತೆಗೆ, ಜನರಿಗೆ ತೊಂದರೆ ಆಗದ ರೀತಿಯಲ್ಲಿ ಪರಿಹಾರ ಕೊಡಬೇಕೆಂಬ ಅಭಿಪ್ರಾಯವೂ ಸರ್ಕಾರದ ಮುಂದೆ ಇತ್ತು.

    ಈ ಎರಡನ್ನೂ ಪರಿಗಣಿಸಿದ ರಾಜ್ಯ ಸರ್ಕಾರ ಈಗ ಮಹತ್ವದ ನಿರ್ಧಾರ ಕೈಗೊಂಡಿದೆ. ನಿಗದಿತ ಮಿತಿಯ ಒಳಗಿರುವ ಉಲ್ಲಂಘನೆಗಳಿಗೆ ದಂಡ ಪಾವತಿಸಿ ಪರಿಷ್ಕೃತ ನಕ್ಷೆ (Revised Plan) ಪಡೆಯಲು ಅವಕಾಶ ನೀಡುವುದು ಸರ್ಕಾರದ ಹೊಸ ಆದೇಶದ ಮುಖ್ಯ ಅಂಶವಾಗಿದೆ. ಇದರಿಂದ ಸಾವಿರಾರು ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳಿಗೆ ಕಾನೂನುಬದ್ಧ ಸ್ಥಾನ ಲಭಿಸುವ ಸಾಧ್ಯತೆ ಇದೆ.

    ಸರ್ಕಾರದ ಹೊಸ ಆದೇಶದ ಮುಖ್ಯ ಅಂಶಗಳು:

    • ಉಲ್ಲಂಘನೆ 15%ರ ಮಿತಿಯೊಳಗೆ ಇದ್ದರೆ ಮಾತ್ರ ಈ ವಿನಾಯಿತಿ ಅನ್ವಯ.
    • ಸೆಟ್‌ಬ್ಯಾಕ್ ಮತ್ತು ಕಾರ್ ಪಾರ್ಕಿಂಗ್ ಉಲ್ಲಂಘನೆಗಳಿಗೆ ದಂಡ ವಿಧಿಸಿ ಮಾನ್ಯತೆ ನೀಡಲಾಗುತ್ತದೆ.
    • ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ ಪಾರ್ಕಿಂಗ್ ಉಲ್ಲಂಘನೆಗೆ 5,000 ರೂ. ದಂಡ ಅನಿವಾರ್ಯ.
    • ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆ ಎಲ್ಲವೂ ಈ ಆದೇಶದ ವ್ಯಾಪ್ತಿಗೆ ಬರುತ್ತವೆ.

    ದಂಡದ ಪ್ರಮಾಣ (Local Body-wise)

    ಪಟ್ಟಣ ಪಂಚಾಯಿತಿ ವ್ಯಾಪ್ತಿ: 

    • ವಸತಿ/ಕೈಗಾರಿಕಾ ಕಟ್ಟಡ: ಪ್ರತಿ ಚ.ಮೀಗೆ 1,000 ರೂ.
    • ವಾಣಿಜ್ಯ ಕಟ್ಟಡ: ಪ್ರತಿ ಚ.ಮೀಗೆ 1,500 ರೂ.

    ಪುರಸಭೆ ವ್ಯಾಪ್ತಿ: 

    • ವಸತಿ/ಕೈಗಾರಿಕಾ ಕಟ್ಟಡ: ಪ್ರತಿ ಚ.ಮೀಗೆ 1,200 ರೂ.
    • ವಾಣಿಜ್ಯ ಕಟ್ಟಡ: ಪ್ರತಿ ಚ.ಮೀಗೆ 1,800 ರೂ.

    ನಗರಪಾಲಿಕೆ ವ್ಯಾಪ್ತಿ:

    • ವಸತಿ/ಕೈಗಾರಿಕಾ ಕಟ್ಟಡ: ಪ್ರತಿ ಚ.ಮೀಗೆ 1,500 ರೂ.
    • ವಾಣಿಜ್ಯ ಕಟ್ಟಡ: ಪ್ರತಿ ಚ.ಮೀಗೆ 2,250 ರೂ.

    ಮಹಾನಗರ ಪಾಲಿಕೆ ವ್ಯಾಪ್ತಿ: 

    • ವಸತಿ/ಕೈಗಾರಿಕಾ ಕಟ್ಟಡ: ಪ್ರತಿ ಚ.ಮೀಗೆ 2,000 ರೂ.
    • ವಾಣಿಜ್ಯ ಕಟ್ಟಡ: ಪ್ರತಿ ಚ.ಮೀಗೆ 3,000 ರೂ.

    ಈ ಹೊಸ ಆದೇಶದಿಂದ ನಿಯಮ ಮೀರಿ ನಿರ್ಮಿಸಲಾದ ಅನೇಕ ಕಟ್ಟಡಗಳಿಗೆ ಕಾನೂನುಬದ್ಧ ಸ್ಥಾನ ದೊರೆತು, ಜನರಿಗೆ ದೀರ್ಘಕಾಲದ ಸಮಸ್ಯೆಗೆ ಪರಿಹಾರ ದೊರಕಲಿದೆ. ಅದರೊಂದಿಗೆ ಕಟ್ಟಡ ನಿರ್ಮಾಣದಲ್ಲಿ ನಿಯಮ ಪಾಲನೆಯ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಿಸುವುದಕ್ಕೂ ಇದು ನೆರವಾಗಲಿದೆ.

  • “ಕ್ಯಾಮೆರಾದಲ್ಲಿ ಸೆರೆ ಹಿಡಿದು ನಿಮ್ಮ ಮನೆ ಮುಂದೆ ಕಸ ತಂದು ಹಾಕ್ತೀನಿ” : ಡಿಕೆಶಿ ಕಠಿಣ ಎಚ್ಚರಿಕೆ

    “ಕ್ಯಾಮೆರಾದಲ್ಲಿ ಸೆರೆ ಹಿಡಿದು ನಿಮ್ಮ ಮನೆ ಮುಂದೆ ಕಸ ತಂದು ಹಾಕ್ತೀನಿ” : ಡಿಕೆಶಿ ಕಠಿಣ ಎಚ್ಚರಿಕೆ

    ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಠಿಣ ಎಚ್ಚರಿಕೆ ನೀಡಿದ್ದಾರೆ. “ರಸ್ತೆ, ಬೀದಿ ಎಲ್ಲ ಕಡೆ ಕ್ಯಾಮೆರಾ ಹಾಕ್ತಿದ್ದೇವೆ. ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದ್ರೆ, ಆ ದೃಶ್ಯ ನೋಡಿ ಅವರ ಮನೆ ಮುಂದೆ ಕಸ ತಂದು ಹಾಕ್ತೀನಿ!” ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಸದ ಬಗ್ಗೆ ನಿರಂತರ ಟೀಕೆ ಮಾಡುತ್ತಿರುವ ನಾಗರಿಕರು ಮತ್ತು ಮಾಧ್ಯಮಗಳನ್ನು ಗುರಿಯಾಗಿಸಿ ಮಾತನಾಡಿದರು. “ಈ ಸಮಸ್ಯೆ ಬೆಂಗಳೂರು ಮಾತ್ರದಲ್ಲ, ಇನ್ನೂ ಅನೇಕ ನಗರಗಳಲ್ಲಿ ಇದೆ. ಆದ್ರೆ ಮಾಧ್ಯಮಗಳು ಇಲ್ಲಿ ಮಾತ್ರ ಹೆಚ್ಚು ತೋರಿಸ್ತಾರೆ. ಈಗ ಇದಕ್ಕೆ ಸ್ಪಷ್ಟ ಪರಿಹಾರ ಕೊಡ್ತಿದ್ದೀವಿ ನಗರಪಾಲಿಕೆಯಿಂದ ಹೊಸ ಕ್ಯಾಮೆರಾ ಜಾಲ ಹಾಕಲಾಗುತ್ತದೆ. ಯಾರೂ ಸಹ ರಸ್ತೆ, ಬಸ್ ನಿಲ್ದಾಣ ಅಥವಾ ಸಾರ್ವಜನಿಕ ಸ್ಥಳಗಳಿಗೆ ಕಸ ಹಾಕಬಾರದು” ಎಂದು ಹೇಳಿದರು.

    ಅವರು ಮುಂಬೈಗೆ ಭೇಟಿ ನೀಡಿದ ಸಂದರ್ಭದ ಘಟನೆ ಒಂದನ್ನು ಹಂಚಿಕೊಂಡು, “ಅಲ್ಲೂ ಕೆಲವರು ರಸ್ತೆಗೆ ಕಸ ಹಾಕಿದ್ದರು, ನಾವು ಹಿಂಬಾಲಿಸಿ ಅವರ ಮನೆ ಮುಂದೆಯೇ ಕಸ ಬಿಟ್ಟು ಬಂದಿದ್ದೇವೆ” ಎಂದು ಉದಾಹರಣೆ ನೀಡಿದ್ದಾರೆ. “ಕಸವನ್ನು ವಾಹನಗಳಲ್ಲಿ ಹಾಕಿ ಬೇರೆಡೆ ಬಿಸಾಡುವ ಏಜೆಂಟರ ಮೇಲೂ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದರು.

    ಡಿಕೆಶಿ ನಾಗರಿಕರಿಗೆ ಕರೆ ನೀಡಿ, “ಪ್ರತಿ ಮನೆಯಲ್ಲೂ ಕಸದ ಡಬ್ಬಿ ಇಡಿ. ನಮ್ಮ ವಾಹನ ಮನೆ ಮನೆಗೆ ಬರುತ್ತದೆ, ಕಸವನ್ನು ಅದಕ್ಕೆ ನೀಡಿ. ಚಿತ್ರ ತೆಗೆದು ಟೀಕೆ ಮಾಡುವುದಕ್ಕಿಂತ ಸ್ವಚ್ಛತೆಗೆ ಸಹಕರಿಸಿ” ಎಂದು ಮನವಿ ಮಾಡಿದರು.

    ಕಾಂಟ್ರ್ಯಾಕ್ಟರ್‌ ಮಾದರಿ ನಿರ್ವಹಣೆ ನಗರದ ಮುಖ್ಯರಸ್ತೆಗಳು ಮತ್ತು ಪ್ರಮುಖ ಪ್ರದೇಶಗಳಲ್ಲಿ ಕಸದ ನಿರ್ವಹಣೆ ಕಾಂಟ್ರ್ಯಾಕ್ಟರ್‌ಗಳಿಗೆ ಹಸ್ತಾಂತರಿಸುವ ಆಲೋಚನೆಯೂ ನಡೆಯುತ್ತಿದೆ ಎಂದು ಅವರು ಹೇಳಿದ್ದಾರರೆ. ಸ್ವಚ್ಛ ನಗರ ನಿರ್ಮಾಣಕ್ಕಾಗಿ ಕಠಿಣ ಕ್ರಮ ಕೈಗೆತ್ತಿಕೊಳ್ಳಲಿರುವುದಾಗಿ ಡಿಕೆಶಿ ಹೇಳಿದ್ದು, “ನಿಯಮ ಉಲ್ಲಂಘನೆ ಮಾಡಿದರೆ ಯಾರನ್ನೂ ಬಿಡಲ್ಲ” ಎಂದು ಎಚ್ಚರಿಕೆ ನೀಡಿದರು.

  • Jio–Google Offer:Gemini Pro AI Plan ಉಚಿತ!

    Jio–Google Offer:Gemini Pro AI Plan ಉಚಿತ!

    ಇತ್ತೀಚಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ (AI) ಜಗತ್ತಿನ ಪ್ರತಿಯೊಂದು ಕ್ಷೇತ್ರಕ್ಕೂ ಪ್ರವೇಶಿಸಿ ಕ್ರಾಂತಿಯನ್ನೇ ತಂದಿದೆ. ಸ್ಮಾರ್ಟ್‌ಫೋನ್‌ ಬಳಕೆ, ಶಿಕ್ಷಣ, ಮನರಂಜನೆ, ವ್ಯವಹಾರ, ಸಂಶೋಧನೆ ಯಾವ ಕ್ಷೇತ್ರವನ್ನೇ ನೋಡಿದರೂ ಎಐನ ಪ್ರಭಾವ ಅಚ್ಚರಿಯಂತೆ ಹೆಚ್ಚುತ್ತಿದೆ. ಭಾರತದಲ್ಲಿ 5G ಇಂಟರ್ನೆಟ್ ವ್ಯಾಪಕವಾಗುತ್ತಿರುವುದರಿಂದ, ಹೊಸ ತಲೆಮಾರಿನ ಯುವಕರು ತಂತ್ರಜ್ಞಾನವನ್ನು ಮತ್ತಷ್ಟು ಆಳವಾಗಿ ಬಳಸುವ ಅವಕಾಶವನ್ನು ಹುಡುಕುತ್ತಿದ್ದಾರೆ. ಇಂತಹ ಸಮಯದಲ್ಲಿ, ಭಾರತದ ಅತ್ಯಂತ ದೊಡ್ಡ ಡಿಜಿಟಲ್ ದೈತ್ಯಗಳಲ್ಲಿ ಒಂದಾದ ರಿಲಯನ್ಸ್ Jio, ದೇಶದ ಯುವಕರಿಗಾಗಿ ತಂತ್ರಜ್ಞಾನ ಲೋಕದಲ್ಲಿ ತಿರುಗುಬಾಣದಂತಹ ಹೊಸ ಯೋಜನೆಯನ್ನು ಘೋಷಿಸಿದೆ.

    ಕೃತಕ ಬುದ್ಧಿಮತ್ತೆಯನ್ನು ಸಾಮಾನ್ಯ ಜನರ ಕೈಗೆ ತಲುಪಿಸುವ ಗುರಿಯೊಂದಿಗೆ, ರಿಲಯನ್ಸ್ ಮತ್ತು ಗೂಗಲ್ ಜೊತೆಯಾಗಿದ್ದು, 18 ತಿಂಗಳ ಕಾಲ 35,100 ರೂಪಾಯಿ ಮೌಲ್ಯದ Google Gemini Pro AI Plan ಅನ್ನು ಜಿಯೋ ಗ್ರಾಹಕರಿಗೆ ಉಚಿತವಾಗಿ ನೀಡುವ ಮಹತ್ವದ ನಿರ್ಧಾರ ಪ್ರಕಟಿಸಲಾಗಿದೆ. ಇದೊಂದು ದೇಶದ ಯುವಕರಿಗೆ ಸಿಗಬಹುದಾದ ಅತ್ಯಂತ ದೊಡ್ಡ ಡಿಜಿಟಲ್ ಗಿಫ್ಟ್ ಎಂದು ಹೇಳಬಹುದು.

    ಭಾರೀ ಪಾಲುದಾರಿಕೆ, ರಿಲಯನ್ಸ್ + ಗೂಗಲ್:

    ಅಕ್ಟೋಬರ್ 30ರಂದು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಗೂಗಲ್ ದೊಡ್ಡ ಮಟ್ಟದ ಎಐ ಸಹಕಾರವನ್ನು ಘೋಷಿಸುತ್ತಾ, ಭಾರತದಲ್ಲಿ ಎಐ ಅಳವಡಿಕೆಯನ್ನು ವೇಗಗೊಳಿಸುವ ಗುರಿ ಹೊಂದಿವೆ. ಈ ಪಾಲುದಾರಿಕೆಯ ಮೂಲಕ Jio 5G ಬಳಕೆದಾರರಿಗೆ ಗೂಗಲ್‌ನ ಜೆಮಿನಿ ಪ್ರೊ ಸೇವೆಗಳನ್ನು ಉಚಿತ ಮಾಡಲು ನಿರ್ಧರಿಸಲಾಗಿದೆ.

    ಯಾರು ಈ ಆಫರ್ ಪಡೆಯಬಹುದು?:

    ಪ್ರಾರಂಭದಲ್ಲಿ 18 ರಿಂದ 25 ವರ್ಷದೊಳಗಿನ ಜಿಯೋ ಗ್ರಾಹಕರು.

    ನಂತರ ಎಲ್ಲಾ ಜಿಯೋ ಬಳಕೆದಾರರಿಗೆ ಹಂತ ಹಂತವಾಗಿ ವಿಸ್ತರಣೆ.

    5G ಅನ್ಲಿಮಿಟೆಡ್ ಪ್ಲಾನ್ ಹೊಂದಿರುವವರಿಗೆ ಮಾತ್ರ ಈ ಸದುಪಯೋಗ.

    18 ತಿಂಗಳು ಉಚಿತ, ಏನು ಸಿಗಲಿದೆ?:

    ಈ ಆಫರ್ ಮೌಲ್ಯ ಸುಮಾರು ₹35,100, ಮತ್ತು ಇದರಲ್ಲಿ ಒಳಗೊಂಡಿರುವವು,

    Google Gemini 2.5 Pro ಪ್ರವೇಶ.

    ಎಐ ಮೂಲಕ ಸಂಭ್ರಮದ ಮಟ್ಟದ ಚಿತ್ರಗಳು, ವಿಡಿಯೋಗಳು, ಕಂಟೆಂಟ್ ಕ್ರಿಯೇಷನ್, ಸಂಶೋಧನೆ, ಅಪ್ಲಿಕೇಶನ್ ಅಭಿವೃದ್ಧಿ.

    Nano, Banana, Vio 3.1 AI ಮಾದರಿಗಳಿಗೆ ಪ್ರವೇಶ.

    ಇವುಗಳ ಮೂಲಕ ಬಳಕೆದಾರರು ಹೆಚ್ಚು ನಿಖರವಾದ, ಸ್ಮಾರ್ಟ್ ಮತ್ತು ಸೃಜನಶೀಲ ಫಲಿತಾಂಶಗಳನ್ನು ಪಡೆಯಬಹುದು.

    Notebook LM – Advance Research Tools.

    ವಿದ್ಯಾರ್ಥಿಗಳು, ಸಂಶೋಧಕರು, ಸ್ಟಾರ್ಟ್‌ಅಪ್‌ಗಳಿಗೆ ಹೈ-ಎಂಡ್ ಎಐ ನೋಟ್‌ಬುಕ್ ವ್ಯವಸ್ಥೆ.

    2TB Google Cloud Storage

    ಭಾರೀ ಫೈಲ್‌ಗಳು, ಡೇಟಾ, ಫೋಟೋ ವೀಡಿಯೊಗಳಿಗೆ ಸಾಕಷ್ಟು ಸಂಗ್ರಹಣೆ.

    ಎಐ ಮೂಲಕ 145 ಕೋಟಿಯವರಿಗೂ ಸೇವೆ, Mukesh Ambani:

    ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿರುವಂತೆ,  ಭಾರತದ 145 ಕೋಟಿ ಜನರಿಗೆ ಎಐ ಸೇವೆಗಳನ್ನು ತಲುಪಿಸುವುದು ನಮ್ಮ ಗುರಿ. ಗೂಗಲ್‌ನೊಂದಿಗೆ ಕೈಜೋಡಿಸುವ ಮೂಲಕ, ಭಾರತ ಎಐ ಮೂಲಕ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಲಿದೆ.

    ಗೂಗಲ್ ಸಿಇಒ ಸುಂದರ್ ಪಿಚೈ ಮಾತನಾಡಿ, ರಿಲಯನ್ಸ್ ಜೊತೆಗಿನ ಈ ಹೊಸ ಎಐ ಸಹಯೋಗವು ಭಾರತದ ಡಿಜಿಟಲ್ ಭವಿಷ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ಜಿಯೋ ಬಳಕೆದಾರರಿಗೆ ಗೂಗಲ್‌ನ ಅತ್ಯಾಧುನಿಕ ಎಐ ಪರಿಕರಗಳನ್ನು ತಲುಪಿಸುವುದು ದೊಡ್ಡ ಹೆಜ್ಜೆ.

    ಭಾರತ ಎಐ ಕೇಂದ್ರವಾಗುವ ದಿಕ್ಕಿನಲ್ಲಿ ದೊಡ್ಡ ಹೆಜ್ಜೆ:

    ಭಾರತೀಯ ಕಂಪನಿಗಳಿಗೆ Tensor Processing Units (TPUs) ಪ್ರವೇಶ, ದೊಡ್ಡ ಎಐ ಮಾದರಿಗಳನ್ನು ರಚಿಸುವ ಮೂಲಸೌಕರ್ಯ, Gemini Enterprise ಬಳಕೆಯನ್ನು ಭಾರತೀಯ ವ್ಯವಹಾರಗಳಿಗೆ ವಿಸ್ತರಿಸುವ ಗುರಿಯಾಗಿದೆ.

    ರಿಲಯನ್ಸ್ ಇಂಟೆಲಿಜೆನ್ಸ್ ಈಗ Google Cloud Strategic Partner, ಆದ್ದರಿಂದ ಭಾರತದಲ್ಲಿ ಎಐ ಅಳವಡಿಕೆ ವೇಗವಾಗಿ ಹೆಚ್ಚಲಿದೆ.

  • ಗ್ಯಾರಂಟಿ ಯೋಜನೆಗಳಿಂದ ಬೇರೆ ಅನುದಾನಗಳಿಗೆ ಅಡ್ಡಿಯಾಗುತ್ತಿದೆ- ಜಮೀರ್ ಅಹ್ಮದ್

    ಗ್ಯಾರಂಟಿ ಯೋಜನೆಗಳಿಂದ ಬೇರೆ ಅನುದಾನಗಳಿಗೆ ಅಡ್ಡಿಯಾಗುತ್ತಿದೆ- ಜಮೀರ್ ಅಹ್ಮದ್

    ಸತ್ಯಕಾಮ ವಾರ್ತೆ ವಿಜಯನಗರ:

    ವಿಜಯನಗರದ ಕೂಡ್ಲಿಗಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಸಾರಿಗೆ ಸಚಿವ ಜಮೀರ್ ಅಹಮದ್ ಖಾನ್ ಮಾಡಿದ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗುತ್ತಿದೆ. ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ಜನರಿಗೆ ನೇರ ಲಾಭವಾಗುತ್ತಿದ್ದರೂ, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಕಷ್ಟವಾಗುತ್ತಿದೆ ಎಂಬ ಮಾತುಗಳನ್ನು ಈಗ ಸಚಿವರೇ ಬಾಯ್ಬಿಟ್ಟಿದ್ದಾರೆ.

    ಸಭೆಯಲ್ಲಿ ಮಾತನಾಡಿದ ಜಮೀರ್‌ ಅಹಮದ್‌ ಖಾನ್ ಅವರು, ಪ್ರತಿ ವರ್ಷ ಗ್ಯಾರಂಟಿ ಯೋಜನೆಗಳಿಗೆ ಸುಮಾರು ₹55 ಸಾವಿರ ಕೋಟಿಯಿಂದ ₹60 ಸಾವಿರ ಕೋಟಿವರೆಗೆ ಅನುದಾನ ಬೇಕಾಗುತ್ತದೆ ಎಂದರು. ಈ ಮಹತ್ತರ ಮೊತ್ತವನ್ನು ಪೂರೈಸುವಲ್ಲಿ ಸರ್ಕಾರಕ್ಕೆ ಬರುವ ಒತ್ತಡವೇ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ತೊಂದರೆ ಉಂಟುಮಾಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

    ಇದೇ ಸಂದರ್ಭದಲ್ಲಿ, ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸರನ್ನು ಹೊಗಳಿದ ಸಚಿವರು, “ನಮ್ಮ ಶಾಸಕರು ತಮ್ಮ ಕ್ಷೇತ್ರದ ಜನರಿಗಾಗಿ ಯಾವ ಮಟ್ಟಕ್ಕೂ ಹೋಗ್ತಾರೆ. ಅನುದಾನಕ್ಕಾಗಿ ಕಾಲಿಗೆ ಬಿದ್ದು ಕೇಳ್ತಾರೆ. ಅಣ್ಣ, ನಮ್ಮ ಕ್ಷೇತ್ರದ ಸಮಸ್ಯೆ ಪರಿಹರಿಸ್ಬೇಕು ಅಂತ ಮನವಿ ಮಾಡ್ತಾರೆ” ಎಂದು ಹೇಳಿದರು. ಆದರೆ ಇದೇ ಮಾತಿನ ಮಧ್ಯೆ ಗ್ಯಾರಂಟಿ ಯೋಜನೆಗಳಿಂದ ಅನುದಾನ ತಡೆಯಾಗುತ್ತಿದೆ ಎಂಬ ಅಂಶವನ್ನೂ ಅವರು ಅನಿವಾರ್ಯವಾಗಿ ಒಪ್ಪಿಕೊಂಡರು.

    ಸಚಿವರ ಈ ಹೇಳಿಕೆ, ವಿಪಕ್ಷಗಳು ಹಲವು ದಿನಗಳಿಂದ ಮಾಡುತ್ತಿದ್ದ “ಗ್ಯಾರಂಟಿ ಯೋಜನೆಗಳ ಭಾರದಿಂದ ರಾಜ್ಯದ ಖಜಾನೆ ಬತ್ತಿದೆ, ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ” ಎಂಬ ಆರೋಪಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಪಟುತೆ ಕುರಿತು ನಡೆಯುತ್ತಿದ್ದ ವಾದ ವಿವಾದಕ್ಕೆ ಇದೀಗ ಸರ್ಕಾರದ ಮಂತ್ರಿಯೇ ಬಲಪಡೆಯುವಂತಹ ಹೇಳಿಕೆ ಕೊಟ್ಟಿರುವುದು ವಿಶೇಷ.

    ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಜನಸಾಮಾನ್ಯರಲ್ಲಿ ಯೋಜನೆಗಳು ಜನಪ್ರಿಯವಾದರೂ, ಆಡಳಿತಾತ್ಮಕವಾಗಿ ಹಾಗೂ ಹಣಕಾಸು ನಿರ್ವಹಣೆಯ ದೃಷ್ಟಿಯಿಂದ ಹೊಸ ಸವಾಲುಗಳು ಎದುರಾದಂತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗಳು ರಾಜ್ಯದ ಅಭಿವೃದ್ಧಿ ಗತಿಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಅನ್ನುವುದನ್ನು ಕಾದು ನೋಡಬೇಕಿದೆ.

  • ದರ್ಶನ್–ಪವಿತ್ರಾ: ಹತ್ತು ವರ್ಷ ಹಳೆಯ ಫೋಟೋ ಮತ್ತೆ ಸಂಚಲನ

    ದರ್ಶನ್–ಪವಿತ್ರಾ: ಹತ್ತು ವರ್ಷ ಹಳೆಯ ಫೋಟೋ ಮತ್ತೆ ಸಂಚಲನ

    ಸ್ಯಾಂಡಲ್‍ವುಡ್‌ ಚರ್ಚೆಯಲ್ಲಿ ಮತ್ತೆ ದರ್ಶನ್ ಮತ್ತು ಪವಿತ್ರಾ ಗೌಡರ ಹೆಸರು ಕೇಳಿಬರುತ್ತಿದೆ. ಇಬ್ಬರೂ ಒಟ್ಟಿಗೆ ಜೀವನ ನಡೆಸಿದ್ದರು ಎಂಬ ಮಾತು ಹಲವಾರು ಬಾರಿ ಕೇಳಿಬಂದಿದ್ದರೂ, “ಇವರು ಮದುವೆಯಾಗಿದ್ದಾರೆ” ಎಂಬ ವಿಷಯಕ್ಕೆ ಎಂದಿಗೂ ಅಧಿಕೃತ ದೃಢೀಕರಣ ಬಂದಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈಗ ತೆರೆದುಕೊಂಡಿರುವ ಹಳೆ ಫೋಟೋಗಳು, ಚರ್ಚೆಗೆ ಮತ್ತಷ್ಟು ಆಹಾರ ನೀಡಿದ್ದಾರೆ.

    ಇತ್ತೀಚೆಗಷ್ಟೇ ವೈರಲ್ ಆದ ರೀಲ್ ವಿಡಿಯೋದಲ್ಲಿ ದರ್ಶನ್ ಮತ್ತು ಪವಿತ್ರಾ ಮದುವೆಯ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಫೋಟೋದಲ್ಲಿ ಪವಿತ್ರಾ ಅವರ ಕತ್ತಿನಲ್ಲಿರುವ ಅರಿಶಿಣದ ದಾರ, ದರ್ಶನ್ ಅವರ ಉಡುಗೆ ಹಾಗೂ ಇಬ್ಬರ ಭಾವಭಂಗಿ, ಅಭಿಮಾನಿಗಳಲ್ಲಿ “ಇದು ಅವರ ಮದುವೆಯ ಫೋಟೋವೇ?” ಎಂಬ ಪ್ರಶ್ನೆಯನ್ನು ಹುಟ್ಟಿಸಿದೆ. ಸುಮಾರು ಹತ್ತು ವರ್ಷಗಳ ಹಿಂದೆ ತೆಗೆಯಲ್ಪಟ್ಟಿದೆ ಎನ್ನಲಾಗಿರುವ ಈ ಫೋಟೋಗಳು ಈಗ ಮತ್ತೆ ವೈರಲ್ ಆಗುತ್ತಿದ್ದು, ಅನೇಕ ವಾದ ಪ್ರತಿವಾದಗಳಿಗೆ ಕಾರಣವಾಗಿವೆ.

    ಆ ಸಮಯದಲ್ಲೇ ದರ್ಶನ್ ಅವರಿಗೆ ಅಪಘಾತವಾಗಿ ಕೈಗೆ ಗಾಯವಾಗಿದ್ದ ಸಂದರ್ಭದಲ್ಲಿ, ಪವಿತ್ರಾ ಅವರು ಅವರಿಗೆ ಊಟ ಮಾಡಿಸುತ್ತಿರುವ ಕ್ಷಣಗಳೂ ಫೋಟೋಗಳಲ್ಲಿ ಕಾಣಿಸುತ್ತಿವೆ. ಈ ಅನೌಪಚಾರಿಕ ದೃಶ್ಯಗಳು ಇಬ್ಬರ ನಡುವಿನ ಆತ್ಮೀಯತೆಯನ್ನು ಮತ್ತೊಮ್ಮೆ ನೆನಪಿಗೆ ತರುತ್ತಿವೆ.

    ಆದರೆ, ಗಮನಿಸಬೇಕಾದ ಸಂಗತಿ ಏನೆಂದರೆ ಈವರೆಗೆ ಇವರು ಮದುವೆಯಾಗಿರುವುದಕ್ಕೆ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ಈ ಹಳೆಯ ಫೋಟೋಗಳ ಮೇಲಿನ ಚರ್ಚೆ ಹೆಚ್ಚುತ್ತಿದ್ದಂತೆಯೇ, ಅಭಿಮಾನಿಗಳಲ್ಲಿ ಕುತೂಹಲ ತಾರಕ್ಕೇರಿದೆ.

    ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು “ಇದು ನಿಜವಾದ ಮದುವೆಯೇ? ಇಲ್ಲಾ ಫೋಟೋಶೂಟ್‌ನಾ?” ಎಂದು ಅಚ್ಚರಿಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ

    ಫೋಟೋಗಳು ವೈರಲ್ ಆದರೂ, ನಿಜ ಏನು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟತೆ ಸಿಗಬೇಕಿದೆ. ಇಷ್ಟರಲ್ಲೇ, ದರ್ಶನ್ ಪವಿತ್ರಾ ಜೋಡಿ ಕುರಿತು ಊಹಾಪೋಹಗಳು ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದು ಆಗಿವೆ.

  • ನ. 2ರಂದು ಜಿಲ್ಲಾ ಕಸಾಪ ಸಭಾಂಗಣದಲ್ಲಿ ಅದ್ಧೂರಿ ಸಮಾರಂಭ ಆಯೋಜನೆ

    ನ. 2ರಂದು ಜಿಲ್ಲಾ ಕಸಾಪ ಸಭಾಂಗಣದಲ್ಲಿ ಅದ್ಧೂರಿ ಸಮಾರಂಭ ಆಯೋಜನೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾವಾಗಿ ನ.2 ರಂದು ಬೆಳಗ್ಗೆ 10.30 ಕ್ಕೆ ಜಿಲ್ಲಾ ಕಸಾಪ ಸಭಾಂಗಣದಲ್ಲಿ 70 ನೇ ಕರ್ನಾಟಕ ರಾಜ್ಯೋತ್ಸವ ಮತ್ತು 2025 ನೇ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಷ್ಕತ ಶಿಕ್ಷಕರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ತಿಳಿಸಿದ್ದಾರೆ.

    ಶುಕ್ರವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವಕರ್ಮ ಏಕದಂಡಿಗಿ ಮಠದ ಕುಮಾರ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯುವ ಈ ಜೋಡು ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ ಎಸ್. ಮುದೋಳ್ ಉದ್ಘಾಟಿಸುವರು,ನಿವೃತ್ತ ಶಿಕ್ಷಕರಾದ ಸಕ್ರಪ್ಪ ಮಾಮನಿ, ಬಸವರಾಜ ಸಾಹು ಗೊಂದಡಗಿ, ಶಿವಪ್ಪ ದಾಸನಕೇರಿ, ಹಸನ್ ಸಾಬ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರೆಂದು ಹೊಟ್ಟಿ ಹೇಳಿದರು.

    ತಮ್ಮ ಅಧ್ಯಕ್ಷತೆಯಲ್ಲಿ ಸಾಗಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ವೆಂಕಟರಾವ್ ಕುಲಕರ್ಣಿ ಅವರು ಕರ್ನಾಟಕ ಏಕಿಕರಣ ಚಳುವಳಿ‌ ಕುರಿತು ಹಾಗೂ ಕನ್ನಡ ಅಧ್ಯಾಪಕ ಡಾ. ಡಿ.ಎನ್. ಪಾಟೀಲ್ ಕರಡಕಲ್ ಅವರು ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಕುರಿತು ಉಪನ್ಯಾಸ ನೀಡಲಿದ್ದಾರೆಂದರು.
    ಶಹಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ.ರವಿಂದ್ರ ಹೊಸಮನಿ, ಯಾದಗಿರಿ ತಾಲೂಕು ಕಸಾಪ ಅಧ್ಯಕ್ಷ ವೆಂಕಟೇಶ ಕಲಕಂಭ ಅವರು ಗೌರವ ಅತಿಥಿಗಳಾಗಿ ಭಾಗವಹಿಸುವರೆಂದು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಭೀಮರಾಯ ಲಿಂಗೇರಿ, ಗೌರವ ಕೋಶಾಧ್ಯಕ್ಷ ಬಸವರಾಜ ಅರಳಿ ಮೊಟನಳ್ಳಿ, ತಾಲೂಕು ಗೌರವ ಕಾರ್ಯದರ್ಶಿ ಮಹೇಶ ಪಾಟೀಲ್ ಕಿಲ್ಲನಕೇರಾ, ದೇವರಾಜಗೌಡ ಬೆಳಗೆರಿ, ಗೌರವ ಕೋಶಾಧ್ಯಕ್ಷ ವೀರಭದ್ರಪ್ಪ ಸ್ವಾಮಿ ಜಾಕಾ ಮಠ, ನಾಗಪ್ಪ ಸಜ್ಜನ್‌,  ವೆಂಕಟೇಶ ಕಲಕಂಬ,  ಸ್ವಾಮಿದೇವ ದಾಸನಕೇರಿ  ಸೇರಿದಂತೆಯೇ ಇತರರಿದ್ದರು.

  • ಭಾರತದ ಮಹಿಳಾ ತಂಡ ಫೈನಲ್‌ಗೆ; ಆಸ್ಟ್ರೇಲಿಯಾ ಮಣಿಸಿ ಇತಿಹಾಸಿಕ ಗೆಲುವು

    ಭಾರತದ ಮಹಿಳಾ ತಂಡ ಫೈನಲ್‌ಗೆ; ಆಸ್ಟ್ರೇಲಿಯಾ ಮಣಿಸಿ ಇತಿಹಾಸಿಕ ಗೆಲುವು

    ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಐತಿಹಾಸಿಕ ಸಾಧನೆಯನ್ನು ಗೈದು ಫೈನಲ್‌ಗೆ ಪ್ರವೇಶಿಸಿದೆ. ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ ಹಾಲಿ ವಿಶ್ವಚಾಂಪಿಯನ್ ಆದ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಮಣಿಸಿ ವಿಶ್ವದಾಖಲೆಯ ಗುರಿ ಬೆನ್ನತ್ತುವುದರ ಮೂಲಕ ಸಾಧನೆ ಮಾಡಿತು. 338 ರನ್‌ಗಳ ಗುರಿ ಎದುರಿಸಿದ ಭಾರತ, ಒತ್ತಡದ ಸಂದರ್ಭದಲ್ಲೂ ಶಾಂತಿ ಕಳೆದುಕೊಳ್ಳದೇ, ನಿರ್ಧಾರಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿತು.

    ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮಹಿಳಾ ತಂಡ 49.5 ಓವರ್‌ಗಳಲ್ಲಿ 338 ರನ್ ಗಳಿಸಿತು. ಆಸ್ಟ್ರೇಲಿಯಾಗೆ ಉತ್ತಮ ಆರಂಭ ಸಿಕ್ಕಿದ್ದರೂ, ಮಧ್ಯ ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ಆಸ್ಟ್ರೇಲಿಯಾ ನಿರೀಕ್ಷಿತ ಅಂತ್ಯ ಪಡೆಯುವಲ್ಲಿ ವಿಫಲವಾಯಿತು. ಭಾರತೀಯ ಬೌಲರ್‌ಗಳು ಪ್ರಮುಖ ಕ್ಷಣಗಳಲ್ಲಿ ವಿಕೆಟ್‌ ತೆಗೆಯುವ ಮೂಲಕ ಪಂದ್ಯವನ್ನು ಹಿಡಿತದಲ್ಲಿಟ್ಟರು.

    ಭಾರತದ ಇನ್ನಿಂಗ್ಸ್‌ಗೆ ಚಾಲನೆ ಸಿಕ್ಕ ತಕ್ಷಣವೇ, ಆರಂಭಿಕ ಆಟಗಾರ್ತಿಯರು ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಬೇಗನೆ ಪೆವಿಲಿಯನ್ ಸೇರುವ ಮೂಲಕ ತಂಡವನ್ನು ಒತ್ತಡಕ್ಕೆ ಸಿಲುಕಿಸಿದ್ದರು. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಥಳೀಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಪಂದ್ಯದ ಭವಿಷ್ಯವನ್ನು ಬದಲಾಯಿಸಿ ಜತೆಯಾಟ ಪ್ರದರ್ಶಿಸಿದರು. ಇಬ್ಬರು ತಾಳ್ಮೆಯ ಜೊತೆಗೆ ಆಕ್ರಮಣಾತ್ಮಕ ಆಟ ತೋರಿಸಿ 165 ರನ್‌ಗಳ ಅಮೂಲ್ಯ ಜೊತೆಯಾಟ ಆಡಿದರು.

    ಹರ್ಮನ್‌ಪ್ರೀತ್ ಕೌರ್ 89 ರನ್ ಗಳಿಸಿ ಔಟಾದರೂ, ಜೆಮಿಮಾ ರೋಡ್ರಿಗಸ್ ಕ್ರೀಸ್‌ ಕಚ್ಚಿ ನಿಂತಿದ್ದು ತಂಡಕ್ಕೆ ದೊಡ್ಡ ಸಹಾಯವಾಯ್ತು. ಒತ್ತಡದ ಸಂದರ್ಭದಲ್ಲೂ ಶಾಂತ ಮನೋಭಾವದಿಂದ ಆಡಿದ ಜೆಮಿಮಾ 127 ರನ್‌ಗಳ ಅಜೇಯ ಇನ್ನಿಂಗ್ಸ್ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ಅಂತಿಮ ಹಂತದಲ್ಲಿ ದೀಪ್ತಿ ಶರ್ಮಾ, ರಿಚಾ ಘೋಷ್ ಹಾಗೂ ಅಮನ್‌ಜೋತ್ ಕೌರ್ ಅಗತ್ಯ ರನ್‌ಗಳನ್ನು ಸೇರಿಸಿ ಭಾರತ ಗುರಿ ತಲುಪುವಲ್ಲಿ ಯಶಸ್ವಿಯಾದರು.

    ಈ ಮೂಲಕ ವಿಶ್ವಕಪ್ ನಾಕೌಟ್ ಹಂತದಲ್ಲಿ ಅತಿ ದೊಡ್ಡ ಗುರಿ ಬೆನ್ನತ್ತಿದ ತಂಡ ಎಂಬ ಗೌರವ ಭಾರತಕ್ಕೆ ದೊರಕಿದೆ. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ ಸೋಲಿಗೆ ಭಾರತ ಈ ಪಂದ್ಯದಲ್ಲಿ ಸಮರ್ಪಕ ತಿರುಗೇಟು ನೀಡಿದೆ.

    ನವೆಂಬರ್ 2ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದೆ. ಪ್ರಸ್ತುತ ಆಟದ ಶೈಲಿ, ತಂಡದ ಆತ್ಮವಿಶ್ವಾಸ ಹಾಗೂ ಪ್ರದರ್ಶನವನ್ನು ಗಮನಿಸಿದರೆ ಭಾರತ ಈ ಬಾರಿ ಟ್ರೋಫಿ ಗೆಲ್ಲಲು ಹಾಟ್ ಫೆವರೇಟ್ ತಂಡವಾಗಿದೆ.

  • ಅನ್ನ ನಿಲ್ಲಿಸಿದರೆ ತೂಕ ಇಳಿಕೆ, ಸಕ್ಕರೆ ನಿಯಂತ್ರಣ.! ಆದರೆ ಪೌಷ್ಟಿಕಾಂಶ ಕೊರತೆಯಾಗುತ್ತೆ ಎಚ್ಚರ!

    ಅನ್ನ ನಿಲ್ಲಿಸಿದರೆ ತೂಕ ಇಳಿಕೆ, ಸಕ್ಕರೆ ನಿಯಂತ್ರಣ.! ಆದರೆ ಪೌಷ್ಟಿಕಾಂಶ ಕೊರತೆಯಾಗುತ್ತೆ ಎಚ್ಚರ!

    ನಮ್ಮ ಭಾರತೀಯ ಆಹಾರ ಸಂಸ್ಕೃತಿಯಲ್ಲಿ ಅನ್ನ ಅಂದರೆ ಅಕ್ಕಿ, ಜೀವನದ ಅವಿಭಾಜ್ಯ ಭಾಗವಾಗಿದೆ. ದಿನದ ಮೂರು ಹೊತ್ತು ಊಟದ ಮಾತು ಬಂದಾಗ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಅಥವಾ ರಾತ್ರಿ ಭೋಜನ ಎಲ್ಲವೂ ಅನ್ನವಿಲ್ಲದೆ ಅಪೂರ್ಣವೆನಿಸುತ್ತದೆ. ಅನೇಕರು ಅನ್ನವನ್ನು ದಿನದ ಮೂರೂ ಹೊತ್ತು ಸೇವಿಸುತ್ತಾರೆ. ಕೆಲವರಿಗೆ ಅನ್ನವಿಲ್ಲದ ಊಟವೇ ಊಟವಲ್ಲ ಅನ್ನಿಸುವ ಮಟ್ಟಿಗೆ ಅನಿಸುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆರೋಗ್ಯ ಜಾಗೃತಿ ಹೆಚ್ಚಾದಂತೆ ಹಲವರು ಅನ್ನ ಸೇವನೆಯನ್ನು ಕಡಿಮೆ ಮಾಡುವುದಕ್ಕೋ ಅಥವಾ ಸಂಪೂರ್ಣ ನಿಲ್ಲಿಸುವುದಕ್ಕೋ ಮುಂದಾಗುತ್ತಿದ್ದಾರೆ.
    ಒಂದು ತಿಂಗಳು ಅನ್ನ ಸೇವನೆ ಮಾಡುವುದನ್ನು ನಿಲ್ಲಿಸಿದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ? ಇದರಿಂದ ನಿಜವಾಗಿಯೂ ಆರೋಗ್ಯ ಸುಧಾರಿಸುತ್ತದೆಯೇ ಅಥವಾ ಪೌಷ್ಟಿಕಾಂಶದ ಕೊರತೆಯುಂಟಾಗುತ್ತದೆಯೇ? ತಿಳಿದುಕೊಳ್ಳೋಣ ಬನ್ನಿ.

    ಹಸಿವು, ದುರ್ಬಲತೆ ಮತ್ತು ಕಿರಿಕಿರಿ:

    ಅನ್ನವು ಕಾರ್ಬೋಹೈಡ್ರೇಟ್‌ನ ಪ್ರಮುಖ ಮೂಲ. ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ. ಇದ್ದಕ್ಕಿದ್ದಂತೆ ಅನ್ನ ಸೇವನೆ ನಿಲ್ಲಿಸಿದರೆ, ದೇಹವು ಆ ಬದಲಾವಣೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮೊದಲ ಕೆಲವು ದಿನಗಳಲ್ಲಿ ಹಸಿವು ಹೆಚ್ಚಾಗುವುದು, ದುರ್ಬಲತೆ ಹಾಗೂ ಸ್ವಲ್ಪ ಕಿರಿಕಿರಿ ಅನುಭವವಾಗುವುದು ಸಹಜ. ಈ ಅವಧಿಯಲ್ಲಿ ರಾಗಿ, ಜೋಳ, ಬಾರ್ಲಿ, ಕ್ವಿನೋವಾ ಅಥವಾ ಕುಂಬಳಕಾಯಿ ಬೀಜಗಳಂತಹ ಪರ್ಯಾಯ ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

    ತೂಕ ಇಳಿಕೆ:

    ಅಕ್ಕಿಯಲ್ಲಿ ಇರುವ ಕಾರ್ಬೋಹೈಡ್ರೇಟ್‌ಗಳು ತ್ವರಿತವಾಗಿ ಜೀರ್ಣವಾಗುತ್ತವೆ ಮತ್ತು ಹೆಚ್ಚಿನ ಕ್ಯಾಲೊರಿಗಳನ್ನು ಒದಗಿಸುತ್ತವೆ. ಅನ್ನ ಸೇವನೆ ನಿಲ್ಲಿಸಿದರೆ ದೇಹಕ್ಕೆ ಬರುವ ಕ್ಯಾಲೊರಿಗಳ ಪ್ರಮಾಣ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ತೂಕ ಸ್ವಲ್ಪ ಮಟ್ಟಿಗೆ ಇಳಿಯಬಹುದು. ತೂಕ ಕಡಿಮೆ ಮಾಡಲು ಪ್ರಯತ್ನಿಸುತ್ತಿರುವವರಿಗೆ ಇದು ಸಹಾಯಕ.

    ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರವಾಗುತ್ತದೆ:

    ಬಿಳಿ ಅಕ್ಕಿ ಬೇಗನೆ ಜೀರ್ಣವಾಗುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರಿಸುತ್ತದೆ. ಒಂದು ತಿಂಗಳು ಅನ್ನ ಸೇವನೆ ನಿಲ್ಲಿಸಿದರೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಸಮತೋಲನದಲ್ಲಿರುತ್ತದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿ.

    ಜೀರ್ಣಕ್ರಿಯೆಯಲ್ಲಿ ಬದಲಾವಣೆಗಳು:

    ಅಕ್ಕಿ ಕೆಲವರಲ್ಲಿ ಹೊಟ್ಟೆ ಉಬ್ಬುವುದು ಅಥವಾ ಮಲಬದ್ಧತೆ ಉಂಟುಮಾಡಬಹುದು. ಆದರೆ ಅನ್ನ ನಿಲ್ಲಿಸಿದ ನಂತರ ಆರಂಭದಲ್ಲಿ ದೇಹಕ್ಕೆ ಬದಲಾವಣೆ ಅಸಹಜವಾಗಿ ಕಾಣಬಹುದು — ಉದಾಹರಣೆಗೆ ಹೊಟ್ಟೆ ನೋವು ಅಥವಾ ಅಜೀರ್ಣ. ಆದರೆ ಹಣ್ಣು, ತರಕಾರಿ ಮತ್ತು ಧಾನ್ಯಗಳ ಪ್ರಮಾಣವನ್ನು ಹೆಚ್ಚಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ದೇಹವು ಹೊಸ ಆಹಾರ ಕ್ರಮಕ್ಕೆ ಹೊಂದಿಕೊಳ್ಳುತ್ತದೆ.

    ಪೌಷ್ಟಿಕಾಂಶ ಕೊರತೆಯ ಅಪಾಯ:

    ಅಕ್ಕಿಯಲ್ಲಿ ವಿಟಮಿನ್ ಬಿ (ವಿಶೇಷವಾಗಿ B1, B3, ಮತ್ತು B6)ಗಳು ಇದ್ದು, ದೇಹದ ಶಕ್ತಿ ಉತ್ಪಾದನೆಗೆ ಸಹಾಯಕವಾಗಿವೆ. ದೀರ್ಘಕಾಲ ಅನ್ನ ನಿಲ್ಲಿಸಿದರೆ ಈ ವಿಟಮಿನ್‌ಗಳ ಕೊರತೆಯಿಂದ ಆಯಾಸ, ಮಾನಸಿಕ ಒತ್ತಡ ಅಥವಾ ಶ್ರದ್ಧಾಭಾವದ ಕೊರತೆ ಉಂಟಾಗಬಹುದು. ಆದ್ದರಿಂದ ಅನ್ನ ಬಿಟ್ಟರೂ ಎಲೆ ತರಕಾರಿಗಳು, ಮೊಟ್ಟೆ, ಹಾಲು, ಬೇಳೆ ಹಾಗೂ ಇತರ ಧಾನ್ಯಗಳ ಮೂಲಕ ಪೌಷ್ಟಿಕಾಂಶವನ್ನು ಪೂರೈಸಿಕೊಳ್ಳಬೇಕು.

    ಒಂದು ತಿಂಗಳು ಅನ್ನ ಸೇವನೆ ನಿಲ್ಲಿಸುವುದು ದೇಹಕ್ಕೆ ತಾತ್ಕಾಲಿಕ ಬದಲಾವಣೆಗಳನ್ನು ತರಬಹುದು. ತೂಕ ಕಡಿಮೆಯಾಗುವುದು, ರಕ್ತದ ಸಕ್ಕರೆ ನಿಯಂತ್ರಣ, ಜೀರ್ಣಕ್ರಿಯೆ ಸುಧಾರಣೆ ಮುಂತಾದ ಪ್ರಯೋಜನಗಳಿದ್ದರೂ, ಪೌಷ್ಟಿಕಾಂಶ ಕೊರತೆಯ ಅಪಾಯವಿದೆ. ಆದ್ದರಿಂದ ಅನ್ನ ಸಂಪೂರ್ಣ ಬಿಟ್ಟುಬಿಡುವುದಕ್ಕಿಂತ, ಅದರ ಪ್ರಮಾಣವನ್ನು ನಿಯಂತ್ರಿಸಿ ಮತ್ತು ಪೌಷ್ಟಿಕ ಪರ್ಯಾಯ ಆಹಾರಗಳನ್ನು ಸೇರಿಸುವುದು ಹೆಚ್ಚು ಆರೋಗ್ಯಕರ ಮಾರ್ಗ.

  • ಮುದ್ದೇಬಿಹಾಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ

    ಮುದ್ದೇಬಿಹಾಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ. ಆರ್ . ಗವಾಯಿ ಮೇಲೆ ಶೂ ಎಸೆದ ಪ್ರಕರಣ ಹಾಗೂ ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಮುದ್ದೇಬಿಹಾಳ ಬಂದ್ ಗೆ ಬೆಳಗ್ಗೆ ಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಮುದ್ದೇಬಿಹಾಳ ಬಸ್ ನಿಲ್ದಾಣ
    ಮುದ್ದೇಬಿಹಾಳ ಬಸ್ ನಿಲ್ದಾಣ

    ಹೌದು.. ಮುದ್ದೇಬಿಹಾಳ ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ನೂರಕ್ಕೆ ನೂರರಷ್ಟು ಬಂದ್ ಮಾಡಲಾಗಿದೆ. ಬಸವೇಶ್ವರ ವೃತ್ತದಲ್ಲಿ ಕೂಲಿ ಕಾರ್ಮಿಕರು ತಮ್ಮ ದೈನಿಂದಿನ ಕೆಲಸಕ್ಕಾಗಿ ಬಂದಿದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ಜನದಟ್ಟಣೆ ಕಂಡು ಬಂದರೆ, ಶಾಲೆ-ಕಾಲೇಜು ಎಂದಿನಂತೆ ಆರಂಭ ಗೊಂಡಿದ್ದರಿಂದ ವಿದ್ಯಾರ್ಥಿಗಳು ಪರದಾಡಬೇಕಾದ ಸನ್ನಿವೇಶಗಳು ಎದುರಾದವು.

    ಅಂಬೇಡ್ಕರ್ ವೃತ್ತ
    ಅಂಬೇಡ್ಕರ್ ವೃತ್ತ

    ಸರಕಾರಿ, ಖಾಸಗಿ ಶಾಲೆ, ಕಾಲೇಜುಗಳು ಕೆಲವೊತ್ತು ತೆಗೆದು ಮುಚ್ಚಿದರೆ. ಪೆಟ್ರೋಲ್ ಬಂಕ್ , ಔಷಧ ಅಂಗಡಿ, ಆಸ್ಪತ್ರೆ, ಬ್ಯಾಂಕ್ ವ್ಯವಹಾರ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆ ಸ್ಥಗಿತಗೊಂಡಿತ್ತು. ಸಾರಿಗೆ ಬಸ್ ಗಳು ರಸ್ತೆಗೆ ಇಳಿಯಲಿಲ್ಲ. ಹೋರಾಟ ಕೇಂದ್ರ ಸ್ಥಳವಾದ ಬಸವೇಶ್ವರ ಸರ್ಕಲ್ ಬಳಿ ಪ್ರತಿಭಟನಾಕಾರರು ಜಮಾಯಿಸಿದ ಬಳಿಕ ಪ್ರತಿಭಟನೆ ಕಾವು ಜೋರಾಯಿತು.

    ಕಿತ್ತೂರ ರಾಣಿ ಚೆನ್ನಮ್ಮ ವೃತ್ತ
    ಕಿತ್ತೂರ ರಾಣಿ ಚೆನ್ನಮ್ಮ ವೃತ್ತ
    ಇಂದಿರಾ ಸರ್ಕಲ್
    ಇಂದಿರಾ ಸರ್ಕಲ್

    ಇಂದಿರಾ ಸರ್ಕಲ್, ಅಂಬೇಡ್ಕರ್ ಸರ್ಕಲ್, ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚೆನ್ನಮ್ಮ ವೃತ್ತ, ದ್ಯಾಮವ್ವಣ ಕಟ್ಟೆ, ಬಜಾರ ರಸ್ತೆ ಯಲ್ಲಿ ಯಾವುದೇ ಅಂಗಡಿಗಳನ್ನು ತೆಗೆಯದೇ ಮುದ್ದೇಬಿಹಾಳ ಬಂದ್ ಗೆ ಬೆಂಬಲವನ್ನು ಭಾಗಶಃ ಸೂಚಿಸಿದವು.

    ಗ್ರಾಮದೇವತೆ(ದ್ಯಾಮವನ) ಕಟ್ಟೆ
    ಗ್ರಾಮದೇವತೆ(ದ್ಯಾಮವನ) ಕಟ್ಟೆ

    ಕರೆ ಸ್ವೀಕರಿಸದ ತಹಶಿಲ್ದಾರ ಕೀರ್ತಿ ಚಾಲಕ್

    ಇನ್ನು ಮುದ್ದೇಬಿಹಾಳ ಬಂದ್ ಗೆ ಬಗ್ಗೆ ತಹಶಿಲ್ದಾರರನ್ನು ಸಂಪರ್ಕಿಸಿದರೆ ಕರೆ ಸ್ವೀಕರಿಸದೇ ಶಾಲಾ-ಕಾಲೇಜುಗಳ ರಜೆ ಬಗ್ಗೆ ಪ್ರತಿಕ್ರಿಯೆ ನೀಡದೆ ಕೈ ತೊಳೆದುಕೊಂಡರು. ಶಾಲೆಗಳು ಆರಂಭ ಬಗ್ಗೆ ಬಿಇಒ ಬಿ ಎಸ್ ಸಾವಳಗಿ ಅವರಿಗೆ ಸಂಪರ್ಕಿಸಿದಾಗ ಶಾಲೆಗಳನ್ನು ರಜೆ ನೀಡಲು ನಮಗೆ ಯಾವುದೇ ಅನುಮತಿ ಇರುವುದಿಲ್ಲ. ಹೀಗಾಗಿ ತಾಲೂಕಿಗೆ ತಹಶಿಲ್ದಾರರೇ ಅಂತಿಮ ನಿರ್ಧಾರ ಕೈಗೊಳ್ಳುವರು. ಶಾಲಾ ರಜೆ ನೀಡಲು ಅವರೇ ಜವಬ್ದಾರರು. ಈಗಾಗಲೇ ಮುದ್ದೇಬಿಹಾಳ ಬಂದ್ ಬಗ್ಗೆ ಶಿಕ್ಷಣ ಇಲಾಖೆಯಿಂದ ತಹಶಿಲ್ದಾರರಿಗೆ ಪತ್ರ ಬರೆದು ಈ ಬಗ್ಗೆ ಮಾಹಿತಿ ನೀಡಲಾಗಿದೆ. ತಹಶಿಲ್ದಾರರಿಂದ ಶಾಲಾ ಬಂದ್ ಬಗ್ಗೆ ನಮಗೆ ಯಾವುದೇ ಪ್ರತಿಕ್ರಿಯೇ ಬಂದಿಲ್ಲ. ಹೀಗಾಗಿ ಶಾಲೆಗಳನ್ನು ರಜೆ ಘೋಷಣೆ ಮಾಡಿಲ್ಲ ಎಂದರು.