ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಎಂಎಸ್ ಧೋನಿ ಭವಿಷ್ಯಕ್ಕೆ ಸಂಬಂಧಿಸಿದ ಚರ್ಚೆಗೆ ಈಗ ಸ್ಪಷ್ಟ ದಿಕ್ಕು ಸಿಕ್ಕಂತಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಹಾಗೂ ಕರ್ನಾಟಕದ ರಾಬಿನ್ ಉತ್ತಪ್ಪ, ಧೋನಿ ನಿವೃತ್ತಿ ಕುರಿತು ಬಹಳ ಖಚಿತ ಮಾತುಗಳನ್ನು ಆಡಿದ್ದು, ಈ ಸೀಸನ್ ಅವರ ಐಪಿಎಲ್ ಬದುಕಿನ ಕೊನೆಯ ಅಧ್ಯಾಯವಾಗುವ ಸಾಧ್ಯತೆ ಗಟ್ಟಿಯಾಗಿದೆ.
2026ರ ಐಪಿಎಲ್ ಮಿನಿ ಹರಾಜಿನ ನಂತರ ಮಾತನಾಡಿದ ಉತ್ತಪ್ಪ, ಸಿಎಸ್ಕೆ ಇತ್ತೀಚೆಗೆ ಕೈಗೊಂಡಿರುವ ನಿರ್ಧಾರಗಳನ್ನು ಗಮನಿಸಿದರೆ ಎಲ್ಲವೂ ಗೋಡೆಯ ಮೇಲೆ ಬರೆಯಲ್ಪಟ್ಟಂತೆಯೇ ಇದೆ ಎಂದು ಹೇಳಿದ್ದಾರೆ. ಅನುಭವಿ ಆಟಗಾರರ ಬದಲಿಗೆ ಯುವ ಪ್ರತಿಭೆಗಳ ಮೇಲೆ ಫ್ರಾಂಚೈಸಿ ಹೆಚ್ಚು ನಂಬಿಕೆ ಇಡುತ್ತಿರುವುದು, ಧೋನಿ ನಿವೃತ್ತಿಯತ್ತ ಸಾಗುತ್ತಿರುವ ಸೂಚನೆಯೇ ಆಗಿದೆ ಎನ್ನುವುದು ಅವರ ಅಭಿಪ್ರಾಯ.
ಧೋನಿ ಇನ್ನೊಂದು ವರ್ಷ ಆಡ್ತಾರಾ, ಇಲ್ಲವಾ ಎಂಬ ಊಹಾಪೋಹಗಳಿಗೆ ಇನ್ನು ಜಾಗವೇ ಇಲ್ಲ. ಈ ಸೀಸನ್ ಮುಗಿದ ಬಳಿಕ ಅವರು ಕ್ರಿಕೆಟ್ಗೆ ಪೂರ್ಣ ವಿರಾಮ ಕೊಡುವುದು ಬಹುತೇಕ ಪಕ್ಕಾ ಎಂದು ಉತ್ತಪ್ಪ ಹೇಳಿದ್ದಾರೆ. ಆದರೆ ಮೈದಾನದಿಂದ ದೂರ ಸರಿದರೂ, ಸಿಎಸ್ಕೆ ಜೊತೆಗಿನ ಅವರ ಸಂಬಂಧ ಕಡಿದು ಹೋಗುವುದಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಆಟಗಾರನಾಗಿ ಅಲ್ಲದಿದ್ದರೂ, ತಂಡದ ಮೆಂಟರ್ ಅಥವಾ ಮಾರ್ಗದರ್ಶಕರಾಗಿ ಧೋನಿ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ ಎಂಬುದು ಉತ್ತಪ್ಪನ ಭವಿಷ್ಯ ನುಡಿ.
ಸಿಎಸ್ಕೆ ಈಗಾಗಲೇ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೊಸ ಲೆಕ್ಕಾಚಾರ ಆರಂಭಿಸಿದೆ. ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ತಂಡವನ್ನು ಮುಂದಕ್ಕೆ ಕೊಂಡೊಯ್ಯುವ ಯೋಜನೆ ನಡೆಯುತ್ತಿದ್ದು, ಧೋನಿ ಅವರ ಅನುಭವ ಮತ್ತು ಮಾರ್ಗದರ್ಶನ ಇದಕ್ಕೆ ಬಲ ನೀಡಲಿದೆ ಎಂಬ ವಿಶ್ವಾಸವೂ ವ್ಯಕ್ತವಾಗಿದೆ. ಮತ್ತೊಬ್ಬ ಜಡೇಜಾ ತರಹದ ಆಲ್ರೌಂಡರ್ಗಳನ್ನು ಬೆಳೆಸಬೇಕಾದರೆ, ಈಗಲೇ ಈ ಬದಲಾವಣೆ ಅಗತ್ಯ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ಯುವ ಆಟಗಾರರಿಗೆ ನೀಡಿದ ಅವಕಾಶಗಳು ಸಿಎಸ್ಕೆ ಪಾಲಿಗೆ ಲಾಭವಾಗಿದ್ದವು. ಡಿವಾಲ್ಡ್ ಬ್ರೆವಿಸ್, ಆಯುಷ್ ಮಹಾತ್ರೆ, ಉರ್ವಿಲ್ ಪಟೇಲ್ಗಳಂತಹ ಯುವಕರು ತಂಡಕ್ಕೆ ಹೊಸ ಉತ್ಸಾಹ ತುಂಬಿದ್ದರು. ಇದೇ ದಾರಿಯಲ್ಲಿ ಮುಂದುವರಿದಿರುವ ಸಿಎಸ್ಕೆ, 2026ರ ಮಿನಿ ಹರಾಜಿನಲ್ಲಿ ಇನ್ನೂ ದೊಡ್ಡ ಹೆಜ್ಜೆ ಇಟ್ಟಿದೆ.
ಉತ್ತರ ಪ್ರದೇಶದ 19 ವರ್ಷದ ಯುವ ಪ್ರತಿಭೆ ಪ್ರಶಾಂತ್ ವೀರ್ ಹಾಗೂ 20 ವರ್ಷದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಕಾರ್ತಿಕ್ ಶರ್ಮಾ ಅವರನ್ನು ಭಾರೀ ಮೊತ್ತಕ್ಕೆ ತಂಡಕ್ಕೆ ಸೇರಿಸಿಕೊಂಡಿರುವುದು ಎಲ್ಲರ ಗಮನ ಸೆಳೆದಿದೆ. ಇವರು ಇಬ್ಬರೂ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಖರೀದಿಸಲ್ಪಟ್ಟ ಅನ್ಕ್ಯಾಪ್ಡ್ ಭಾರತೀಯ ಆಟಗಾರರು ಎಂಬುದು ವಿಶೇಷ.
ಒಟ್ಟಿನಲ್ಲಿ ನೋಡಿದರೆ, ಸಿಎಸ್ಕೆ ಒಂದು ಹೊಸ ಯುಗಕ್ಕೆ ಕಾಲಿಟ್ಟಂತಾಗಿದೆ. ಮೈದಾನದಲ್ಲಿ ಧೋನಿ ಆಟಗಾರನಾಗಿ ಕಾಣಿಸಿಕೊಳ್ಳದ ದಿನಗಳು ಹತ್ತಿರವಾಗುತ್ತಿದ್ದರೂ, ತಂಡದ ಹೃದಯವಾಗಿರುವ ಅವರ ಪಾತ್ರ ಮಾತ್ರ ಮುಂದುವರಿಯುವ ಲಕ್ಷಣಗಳು ಸ್ಪಷ್ಟವಾಗಿವೆ. ಕ್ಯಾಪ್ಟನ್ ಕೂಲ್ ನಿವೃತ್ತಿಯಾದರೂ, ಚೆನ್ನೈ ಸೂಪರ್ ಕಿಂಗ್ಸ್ ಮೇಲೆ ಅವರ ನೆರಳು ಇನ್ನೂ ಬಹುಕಾಲ ಬೀಳುತ್ತಲೇ ಇರಲಿದೆ.
