ಜಗದ್ಗುರುಗಳ, ಸಮಾಜದ ಮುಖಂಡರ ನೇತೃತ್ವದಲ್ಲಿ ಶಕ್ತಿ ಪ್ರದರ್ಶನ ಮಾಡಿದ ಸಾವಿರಾರು ಜನರು.
ಯಾದಗಿರಿ: ನಕಲಿ ಜಾತಿ ಪ್ರಮಾಣಪತ್ರ ಮತ್ತು ಸಿಂದುತ್ವಗಳನ್ನು ರದ್ದು ಪಡಿಸುವುದು ಸೇರಿದಂತೆಯೇ ವಿವಿಧ ಪ್ರಮುಖ ಹತ್ತು ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘವು ಬುಧವಾರ ಕರೆ ನೀಡಿದ್ದ ಬೃಹತ್ ಪ್ರತಿಭಟನೆ ವಿರಾಟ ಸ್ವರೂಪ ಪಡೆದು ವಾಲ್ಮೀಕಿಗಳ ಕೂಗು ಸರ್ಕಾರದ ಕಿವಿ ಗಡಚುವಂತೆಯೇ ಮಾಡಿತು.
ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಜಿಲ್ಲೆಯ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಈ ಎಲ್ಲ ಬೇಡಿಕೆಗಳಿಗೆ ಒತ್ತಾಯಿಸಲು ನೂರಾರು ಊರುಗಳಿಂದ ಬಂದಿದ್ದ ಸಾವಿರಾರು ವಾಲ್ಮೀಕಿ ಸಮುದಾಯ ಜನರು ಇಲ್ಲಿನ ತಹಸಿಲ್ ಕಚೇರಿ ಬಳಿ ಜಮಾಗೊಂಡರು.
ಕೈ,ಕೊರಳಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಧ್ವಜ ಹಾಗೂ ಕರವಸ್ತ್ರ ಹಿಡಿದ ಅಪಾರ ಜನರು ಬೇಡಿಕೆಗಳಿಗೆ ಆಗ್ರಹಿಸಿ ನಿರಂತರ ಘೋಷಣೆ ಕೂಗಿ ಶಾಸ್ತ್ರಿ ಚೌಕ್ ಮೂಲಕ ಹಾದು ನೇತಾಜಿ ಸುಭಾಸಚಂದ್ರ ಬೋಸ್ ಸರ್ಕಲ್ ಗೆ ಆಗಮಿಸಿದಾಗ ಸಿಡಿದೆದ್ದ ವಾಲ್ಮಿಕಿಗರು ತಮಗಾದ ಅನ್ಯಾಯದ ವಿರುದ್ದ ಸರ್ಕಾರದ ವಿರುದ್ಧ ಭಾರಿ ಧ್ವನಿಯಲ್ಲಿ ಪ್ರತಿಭಟಿಸಿ ಹಕ್ಕುಗಳಿಗಾಗಿ ಒತ್ತಾಯಿಸಿದರು.ದಾವಣಗೇರಿ ಜಿಲ್ಲೆಯ ರಾಜನಳ್ಳಿಯ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಗಳ ಸಾನಿಧ್ಯದಲ್ಲಿ ಸಮಾಜದ ಉತ್ತರ ಕರ್ನಾಟಕ ಭಾಗದ ಅಧ್ಯಕ್ಷ ಮಾರೆಪ್ಪ ನಾಯಕ್ ಮಗ್ದಂಪುರ, ಜಿಲ್ಲಾಧ್ಯಕ್ಷ ಕೃಷ್ಣಪ್ಪಗೌಡ ಆಲ್ದಾಳ್, ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯಾಧ್ಯಕ್ಷ ಚಳುವಳಿ ರಾಜಣ್ಣ, ನಗರಸಭೆ ಸದಸ್ಯ ಹಣಮಂತ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಪ್ಪ ನಾಯಕ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸೇರಿದ್ದ ಸಾವಿರಾರು ಇಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಮೆರವಣಿಗೆ ಬಂದು ಡಿಸಿ ಕಚೇರಿ ದ್ವಾರದ ಬಳಿ ಸಮಾವೇಶಗೊಂಡರು.
ಈ ವೇಳೆ ಮಾತನಾಡಿದ ಸಾನಿಧ್ಯ ವಹಿಸಿದ್ದ ಗುರುಗಳು ಮತ್ತು ನೇತೃತ್ವ ವಹಿಸಿದ್ದ ಮುಖಂಡರು ಮಾತನಾಡಿ, ಹಿಂದುಳಿದ ಪ್ರವರ್ಗ 1ರಲ್ಲಿ ಬರುವ ಅಂಬಿಗಾ, ಬೆಸ್ತಾ, ಕಬ್ಬಲಿಗಾ, ಮತ್ತು ಕೋಲಿ ಜನಾಂಗದ ವೃತ್ತಿ ಸೂಚಕ ತಳವಾರರನ್ನು ಹಿಂದುಳಿದ ಪ್ರವರ್ಗ 1ರ ಕ್ರಮ ಸಂಖ್ಯೆ 6 ರ ಬೆಸ್ತಾರ 38 ನೇ ಪದವಾಗಿ ಸೇರಿಸಬೇಕು, ಪರಿಶಿಷ್ಟ ಪಂಗಡದ ನಾಯಕ ತಳವಾರ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ, ಸಿಂದುತ್ವಗಳು ಪಡೆದುಕೊಳ್ಳುತ್ತಿರುವುದನ್ನು ತಡೆಯಬೇಕು ಮತ್ತು ಉಚ್ಛ ನ್ಯಾಯಾಲಯದ ಆದೇಶದಂತೆಯೇ ನಕಲಿ ಜಾತಿ ಪ್ರಮಾಣ ಪತ್ರ ನೀಡುತ್ತಿರುವ ತಹಸಿಲ್ದಾರ, ಸಿಬ್ಬಂದಿಗಳ ಹಾಗೂ ಪಡೆದುಕೊಳ್ಳುತ್ತಿರುವವರ ಮೇಲೂ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಅವರು ಒತ್ತಾಯಿಸಿದರು.
ಈ ಸಮಾಜದ ಕಾಲೇಜು,ಉನ್ನತ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ವಿದ್ಯಾರ್ಥಿವೇತನ,ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಈ ಇಲಾಖೆಗೆ ಕೂಡಲೇ ಸಚಿವರನ್ನು ನೇಮಿಸಬೇಕು, ಬುಡಕಟ್ಟು ವಿವಿ ಸ್ಥಾಪಿಸಿ ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದರು.
ಈ ಜನಾಂಗದ ಜನರ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿತಿ,ಗತಿ ಅಧ್ಯಯನಕ್ಕೆ ಅನುದಾನ ನೀಡಬೇಕು, ದೌರ್ಜನ್ಯ, ದಬ್ಬಾಳಿಕೆ, ಕೊಲೆ,ಅತ್ಯಾಚಾರ ಹೀಗೆ ವಿವಿಧ ಅಹಿತಕರ ಘಟನೆಗಳು ಈ ಸಮಾಜದ ಮೇಲೆ ನಿರಂತರವಾಗಿ ನಡೆಯುತ್ತಿದ್ದು, ಇದನ್ನು ಕೂಡಲೇ ತಡೆಯಬೇಕೆಂದು ಅವರು ಆಗ್ರಹಿಸಿದರು.
ನಿಖರ ಕಾರಣವಿಲ್ಲದೇ ಏಕಾಏಕಿ ಸಚಿವ ಸ್ಥಾನದಿಂದ ಕೆ.ಎನ್ ರಾಜಣ್ಣ ಅವರನ್ನು ತೆಗೆಯುವ ಮೂಲಕ ಸಮಸ್ತ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದ್ದು, ಕೂಡಲೇ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಮತ್ತು ಕೆಕೆ ಭಾಗದ ಕಲಬುರಗಿ,ಯಾದಗಿರಿ ಮತ್ತು ಬೀದರ ಜಿಲ್ಲೆಗಳಲ್ಲಿ ಟಿಎಸ್ ಪಿ ಅನುದಾನವನ್ನು ಪರಿಶಿಷ್ಟ ಪಂಗಡದ ಕಾಲೋನಿಗಳಿಗೆ ಬಳಸದೇ ಬೇರೆ ಕಡೆ ಬಳಕೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿವಿಧ ತಾಲೂಕುಗಳ ಅಧ್ಯಕ್ಷ ಮತ್ತು ಪದಾಧಿಕಾರಿಗಳಾದ ಸಾಹೇಬಗೌಡ ಗೌಡಗೇರಾ,ಶ್ರವಣಕುಮಾರ ನಾಯಕ, ಮರೆಪ್ಪ ಪ್ಯಾಟಿ, ಭೀಮಣ್ಣಗೌಡ ಯಮನೂರು, ಬಸಣ್ಣಗೌಡ ಕಡದ್ರಾಳ, ಕಾಶಪ್ಪ ನಾಯಕ, ತಿಮ್ಮಣ್ಣ ನಾಯಕ್ ಸೇರಿದಂತೆಯೇ ಸಾವಿರಾರು ಜನರು ಭಾಗವಹಿಸಿದ್ದರು. ಡಿಸಿ ಹರ್ಷಲ್ ಭೋಯರ್ ಅವರಿಗೆ ಶ್ರೀ ಸದ್ಗುರು ರಂಗಲಿಂಗೇಶ್ವರ ಮಠದ ಪೀಠಾಧಿಪತಿ ಶ್ರೀ ತ್ರಿಶೂಲಪ್ಪ ಶರಣರು ಮುಡಬೂಳ ಶ್ರೀಗಳು ಸೇರಿದಂತೆಯೇ ಮುಖಂಡರು ಮನವಿ ಸಲ್ಲಿಸಿದರು.

