ಗುರುಮಠಕಲ್ : ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಸೋಮವಾರ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಬೈಕ್ ರ್ಯಾಲಿ ಜರುಗಿತು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬೈಕ್ ರ್ಯಾಲಿಗೆ ಚಾಲನೆ ನೀಡಿ ಸುದ್ದಿಗರರೊಂದಿಗೆ ಮಾತನಾಡಿದ ಯಾದಗಿರಿ ನಗರಸಭೆಯ ಅಧ್ಯಕ್ಷೆಯೂ ಆಗಿರುವ ಪಕ್ಷ ಮುಖಂಡೆ ಲಲಿತಾ ಅನಪುರ ಅವರು, ಆಗಸ್ಟ್ 15ರಂದು ಸ್ವಾತಂತ್ರ್ಯ ದಿನೋತ್ಸವದ ಹಿನ್ನಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿರುವ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿ ಆಯೋಜಿಸಿರುವುದಾಗಿ ಅವರು ತಿಳಿಸಿದರು.
ಅಭಿಯಾನದಲ್ಲಿ ಪ್ರತಿ ಮನೆಯಲ್ಲೂ ಆಗಸ್ಟ್ 15ರಂದು ಬೆಳಿಗ್ಗೆ ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜಾರೋಹಣ ಮಾಡುವುದು ಮತ್ತು ಗೌರವ ಪೂರ್ವಕವಾಗಿ ಸಂಜೆ ವೇಳೆ ಅವರೋಹಣವನ್ನೂ ಮಾಡಬೇಕು. ಜತೆಗೆ ಧ್ವಜವನ್ನು ಅತ್ಯಂತ ಗೌರವದಿಂದ ಮನೆಯಲ್ಲಿ ಸಂರಕ್ಷಿಸಿಡಬೇಕು. ರಾಷ್ಟ್ರ ಧ್ವಜಕ್ಕೆ ಅವಮಾನವಾಗುವಂತೆ ಎಲ್ಲೆಂದರಲ್ಲಿ ಬಿಸುಡದಿರಿ ಎಂದು ಕೋರಿದರು.
ಬಸವೇಶ್ವರ ವೃತ್ತದಲ್ಲಿ (ಹಳೇ ತಹಶೀಲ್ದಾರ್ ಕಚೇರಿ) ನಿಜಶರಣ ಅಂಬಿಗರ ಚೌಡಯ್ಯ ವೃತ್ತ, ಗಂಗಾಪರಮೇಶ್ವರ ವೃತ್ತ, ನಗರೇಶ್ವರ ದೇವಸ್ಥಾನ, ನಾರಾಯಣಪುರ ಬಡಾವಣೆ, ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆಯಲ್ಲಿ ಬಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಡಾ.ಬಾಬೂಜೀ ಮೂರ್ತಿಗಳಿಗೆ ಹೂಮಾಲೆ ಹಾಕುವ ಮೂಲಕ ಬೈಕ್ ರ್ಯಾಲಿ ಪೂರ್ಣಗೊಂಡಿತು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗುರು ಕಾಮಾ, ನೀಲಪ್ಪ ಗುಳಿಗಿ, ಯುವ ಮೋರ್ಚಾ ಅಧ್ಯಕ್ಷ ಶ್ರೀಧರ, ಮಂಡಲ ಘಟಕದ ಅಧ್ಯಕ್ಷ ನರಸಿಂಹುಲು ನಿರೇಟಿ, ಕೆ.ದೇವದಾಸ, ವೆಂಕಟಪ್ಪ ಅವಾಂಗಪುರ, ಮಲ್ಲಿಕಾರ್ಜುನ ಹೊನಗೇರಾ, ಚಂದುಲಾಲ್ ಚೌದರಿ, ಜಗದೀಶ ಮೇಂಗಜಿ, ಮೌನೇಶ ಬೆಳಗೇರಾ, ವಿನಾಯಕರಾವ ಜನಾರ್ಧನ, ರಾಜೇಂದ್ರ ಕಲಾಲ್, ಮಲ್ಲೇಶಪ್ಪ ಬೇಲಿ, ರವೀಂದ್ರರೆಡ್ಡಿ ಪೋತುಲ್, ರಾಮುಲು, ಮರಿಲಿಂಗ, ಲಕ್ಷ್ಮಣ ಆಶನಾಳ, ಬಾಲಪ್ಪ, ಸುನೀಲ್ ಕಡೇಚೂರ ಚನ್ನಪ್ಪ ಕಾಕಲವಾರ. ರಮೇಶ್ ಕಾಕಲವಾರ ಉಪಸ್ಥಿತರಿದ್ದರು.

