ಬೃಹನ್ಮಠದ ಆಶಯದಂತೆ ಶ್ರೀಗಳಿಂದ ಬಸವತತ್ವ ಪ್ರಚಾರ:ಶಿವಾನಂದ ಕಳಸದ.

ಸತ್ಯಕಾಮ ವಾರ್ತೆ ಗುರುಮಠಕಲ್:

ಚಿತ್ರದುರ್ಗದ ಶ್ರೀ ಬೃಹನ್ಮಠದ ಅಶಯದಂತೆ ಬಸವತತ್ವ ಪ್ರಚಾರ ಗಡಿನಾಡಿನಲ್ಲಿ ಖಾಸಾಮಠದ ಶ್ರೀಗಳು ಬಸವತತ್ವ ಪ್ರಚಾರಕಾರ್ಯ ಶ್ಲಾಘನೀಯವಾಗಿದೆ ಎಂದು ಚಿತ್ರದುರ್ಗ ಬೃಹನ್ಮಠ ವಿದ್ಯಾಪೀಠದ ಅಧ್ಯಕ್ಷ ಶಿವಯೋಗಿ.ಸಿ.ಕಳಸದ ಹೇಳಿದರು.

 

ಪಟ್ಟಣದ ಖಾಸಾಮಠ ಆವರಣದಲ್ಲಿ ಅನುಭಾವ ಶ್ರಾವಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ಯಾವುದೇ ಮಠ ಮಾನ್ಯಗಳು ಬೆಳೆಯಲು ಭಕ್ತರ ಸಹಕಾರ ಅತಿ ಮುಖ್ಯ,ಐತಿಹಾಸಿಕ ಮತ್ತು ಚಾರಿತ್ರಿಕ ಇತಿಹಾಸವುಳ್ಳ ಖಾಸಾಮಠವನ್ನು ಅಭಿವೃದ್ಧಿ ಗೊಳಿಸಲು ಶ್ರೀ ಮಠದ ಸದ್ಭಕ್ತರ ಸೇವೆ ಸಹಕಾರ ಅನನ್ಯವಾಗಿದೆ ಹೇಳಿದರು.

 

ಮಾನವನ ಜೀವನವು ವಚನ ಸಾಹಿತ್ಯ ಎಂಬ ದರ್ಶನಗಳ ಮೇಲೆ ಅವಲಂಬಿತವಾಗಿದೆ.ಬಸವಾದಿ ಶರಣರ ಜೀವನ ಇಂದಿಗೂ ಪ್ರೇರಕವಾಗಿವೆ. ಯಾವುದೇ ಜಾತಿ ಬೇಧವಿಲ್ಲದೆ ಬಸವಾದಿ ಶರಣರ ಶರಣತತ್ವಚಿಂತನೆ, ದಾಸೋಹ,ಅಕ್ಷರ,ಶಿಕ್ಷಣ ಸೇರಿದಂತೆ ಪ್ರತಿ ಶ್ರಾವಣಮಾಸದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ ಜೊತೆಗೆ ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ ತಮ್ಮದೇ ಆದ ವಿಶಿಷ್ಟ ಕಾಯಕ ಸೇವೆ ಸಲ್ಲಿಸುತ್ತಿರುವ ಖಾಸಾಮಠದ ಶ್ರೀ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮಿಗಳ ಕಾರ್ಯವೈಖರಿ ಬೃಹನ್ಮಠ ಆಡಳಿತ ಮಂಡಳಿಗೆ ತೃಪ್ತಿ ತಂದಿದೆ ಎಂದರು.

 

ರಾಯಷೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಹಾಂತಗೌಡ ಪಾಟೀಲ್ ಭಾಗೋಡಿ ಮಾತನಾಡಿ,ಬಸವಾದಿ ಶರಣರ ವಚನ ಸಾಹಿತ್ಯದ ಅನುಭಾವವನ್ನು ಜೀವನದಲ್ಲಿ ಆಚರಿಸಿ ನಡೆದರೆ ಜೀವನದ ಏರು ತೊಡರು,ಕಷ್ಟಗಳನ್ನು ಸಲೀಸಾಗಿ ದಾಟಬಹುದು.ನನ್ನ ಜೀವನದಲ್ಲಿ ನಡೆದ ಅನೇಕ ಘಟನೆಗಳು ಸನ್ನಿವೇಶಗಳೇ ಸಾಕ್ಷಿಯಾಗಿದೆ. ಖಾಸಾಮಠದ ಶ್ರೀಗಳ ಮಾರ್ಗದರ್ಶನ ನಮಗೆಲ್ಲಾ ತುಂಬ ಪ್ರೇರಣೆ ನೀಡಿದೆ ಎಂದರು.

 

೧೧ ದಿನಗಳ ಅನುಭಾವ ಶ್ರಾವಣ ಪ್ರವಚನ ಮಾಲಿಕೆ ಕಾರ್ಯಕ್ರಮಕ್ಕೆ ಸಹಕರಿಸಿದ ಭಕ್ತರನ್ನು ಸನ್ಮಾನಿಸಲಾಯಿತು.

 

ಕಾರ್ಯಕ್ರಮದಲ್ಲಿ ಅಖಿಲ ಭಾರತ ಚೀರಶೈವ ಮಹಾಸಭಾ ಯಾದಗಿರಿ ಜಿಲ್ಲಾ ಅಧ್ಯಕ್ಷ ಚನ್ನಪ್ಪಗೌಡ ಮೋಸಂಬಿ,ಎಸ್ ಎಲ್ ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಉದ್ಯಮಿ ನರೇಂದ್ರ ರಾಠೋಡ,ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ,ನಾಗಭೂಷಣ ಅವಂಟಿ,ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಸಂತೋಷ ಕುಮಾರ ನೀರಟ್ಟಿ,ಶ್ರಾವಣಮಾಸಾಚರಣೆ ಸಮೀತಿ ಅಧ್ಯಕ್ಷ ನರಸರೆಡ್ಡಿ ಪೊಲೀಸ್ ಪಾಟೀಲ್ ಗಡ್ಡೆಸೂಗೂರ,ಕಾರ್ಯಕ್ರಮ ನಿರೂಪಿಸಿದ ಶಿಕ್ಷಕ ಕರಿಬಸವರಾಜ ಸಜ್ಜನ್ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು,ಗಣ್ಯರು,ಮಹಿಳೆಯರು ಭಾಗವಹಿಸಿದ್ದರು.

apvc-iconPost Views: 20

Comments

Leave a Reply

Your email address will not be published. Required fields are marked *